Sunday, August 27, 2006

ಗಣಪ ಬಂದ..


ಆನೆ ಮುಖ,ಡೊಳ್ಳು ಹೊಟ್ಟೆ,ಇಲಿಯಂತ ವಾಹನ,ವಿದ್ಯಾ-ಬುದ್ದಿಗೆ ಅಧಿಪತಿ,ಅದರ ಮೇಲೆ ಎಲ್ಲಕ್ಕಿಂತ ಮೊದಲು ಪೂಜೆಗೊಳ್ಳುವವ..

ಹೀಗೆ ಗಣಪನ ಬಗ್ಗೆ ನಮ್ಮ ಕಲ್ವನೆ ಒಂದು ವಿಭಿನ್ನತೆ, ಎನೋ ಕುತೂಹಲ,ಭಯ-ಭಕ್ತಿಯಿಂದ ಕೂಡಿದೆ.ಹಾಗೆಯೇ ನಮ್ಮ ಗಣಪ ಅತ್ಯಂತ designed ದೇವರು.ಗಣಪ ಎಂದರೆ ಕಲಾವಿದರಿಗೆ ಹಬ್ಬ.ಕಲಾವಿದರ ಕಲ್ಪನೆಯ ಪ್ರಕಾರ ಅವನು ಧರಿಸಿರೋ ರೂಪಗಳು-ತೊಟ್ಟ ವೇಷಗಳು ಅನೇಕ. ಇಂತಹ ಎಲ್ಲರಿಗೂ ಪ್ರಿಯನಾದ ಗಣಪನ ಹಬ್ಬ ಕೂಡ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಆಚರಿಸಲ್ಪಡುತ್ತಿದ್ದೆ.

ನಾವು ಹರಿಹರದಲ್ಲಿ ಇರೋವರೆಗೆ ಅಲ್ಲಿನ ಗಣಪನ ಹಬ್ಬದ್ದು ಒಂದು ವಿಶಿಷ್ಟತೆ ಇತ್ತು.ಅಲ್ಲಿ ನಾವು ಇದದ್ದು ಒಂದು ವಟಾರದ ತರದ ಮನೆ.ಅಕ್ಕಪಕ್ಕದ ಮನೆಯವರೆಲ್ಲ ಸಂಬಂಧಿಗಳೇ..ಚಿಕ್ಕಪ್ಪ-ದೊಡ್ಡಪ್ಪಗಳ ಕುಟುಂಬಗಳು.ಅದೇನು ಆಗುತಿತ್ತೋ ಆ ವಟಾರದಲ್ಲಿ ಯಾವಾಗಲೂ ಸೋದರ ಕುಟುಂಬಗಳ ನಡುವೆ ನಿಲ್ಲದ ಜಗಳಗಳು.ಆದರೆ ಗಣಪನ ಹಬ್ಬ ಬರುತ್ತಿದಂತೆ ಒಂದು ಕದನವಿರಾಮ! ಎಲ್ಲರೂ ಸೇರುತ್ತಿದದ್ದು ಒಟ್ಟಿಗೆ ಆಚರಿಸುತ್ತಿದದ್ದು ಗಣಪತಿ ಹಬ್ಬವೊಂದೇ.

ಹಬ್ಬಕ್ಕೆ ವಾರ ಇದ್ದಂತೆ ನಮ್ಮ ವಟಾರದಲ್ಲಿದ್ದ 'ನಡುಮನೆ' ಅಂತಾ ಕರೆಯುತ್ತಿದ್ದ ಒಂದು ದೊಡ್ಡ ಮನೆಯಲ್ಲಿ ನೆಲಕ್ಕೆ ಸೆಗಣಿ ಬಳಿದು ಸಾರಿಸಿ,ಗೋಡೆಗೆ ಸುಣ್ಣ-ಬಣ್ಣಗಳ ಅಲಂಕಾರ.ಹಬ್ಬಕ್ಕೆ ೧-೨ ದಿವಸ ಇದ್ದಂತೆ ಪೇಟೆಯಿಂದ ಬಣ್ಣದ ಪೇಪರ್ ತಂದು ಅದನ್ನು ವಿವಿಧ ಆಕೃತಿಯ ಸರಪಳಿಯಲ್ಲಿ ಕತ್ತರಿಸುತ್ತಿದ್ದೆವು. ಆ ಬಣ್ಣದ ಕಟ್ಟಿಂಗ್ಸ್ ಅಂಟಿಸಲು ವಿಶೇಷ ತರದ ಅಂಟು ಮನೆಯಲ್ಲಿ ತಯಾರಯಾಗುತಿತ್ತು.ಅ ಬಣ್ಣದ ಕಟ್ಟಿಂಗ್ಸ್ ನ್ನು ಆ ನಡುಮನೆಯ ಜಂತಿಗೆ ರಾತಿಯಿಡೀ ಅಂಟಿಸುತ್ತಿದ್ದೆವು.

ಬಣ್ಣದ ಕಟ್ಟಿಂಗ್ ಅಂಟಿಸಿದ ಮೇಲೆ ಮುಂದಿನ ಕಾರ್ಯ ನಡುಮನೆಯ ಗೋಡೆ ಮೇಲೆ ಒಂದು ಇಂಚು ಬಿಡದೆ ವಿವಿಧ ಕ್ಯಾಲೆಂಡರ್-ಚಿತ್ರಪಟಗಳನ್ನು ಬಡಿಯೋದು.ಅದರಲ್ಲಿ ಬಹುತೇಕ ಕ್ಯಾಲೆಂಡರ್‍ಗಳು ಗಣಪತಿ-ದೇವಾನುದೇವತೆಗಳದು.ಆ ಕ್ಯಾಲೆಂಡರ್ ಎಷ್ಟು ವರ್ಷದ ಕಲೆಕ್ಷೆನ್ನೋ ನಾ ಕಾಣೇ.

ಗಣಪನನ್ನು ಕೂಡಿಸಲು ಗೋಡೆಯಲ್ಲಿ ಒಂದು ದೊಡ್ಡ ಕಿಟಕಿಯಂತ ಗೂಡು.ಅದಕ್ಕೆ 'ಗಣಪನ ಗೂಡು' ಅಂತಾ ಹೆಸರು.ಆ ಗಣಪನ ಗೂಡಿಗೆ ವಿಶೇಷ ಅಲಂಕಾರ.ಗಣಪ ಕೂಡುವ ಪೀಠದ ಹಿಂದೆ ಒಂದು ಬ್ಯಾಟರಿ-ಚಾಲಿತ ಬಣ್ಣದ ಚಿಕ್ಕ ಫ್ಯಾನ್.ಅದು ಸರಿಯಾಗಿ ಗಣಪನ ಕಿರೀಟದ ಹಿಂದೆ ಇದ್ದು ಗಣಪನಿಗೆ ಸ್ಪೆಷಲ್ ಎಪೆಕ್ಟ್! ಇನ್ನು ಗಣಪನ ಗೂಡಿನ ಮುಂದೆ ಮರದ ಹಲಗೆಯನ್ನು ಹಂತ ಹಂತವಾಗಿ ಜೋಡಿಸಿ ಒಂದು ಮೆಟ್ಟಿಲಿನಾಕೃತಿ. ಒಂದು ಮೆಟ್ಟಿಲ ಮೇಲೆ ನಮ್ಮ ಚಿಕ್ಕಪ್ಪ ಮಣ್ಣಿನಿಂದ ಮಾಡಿದ ವಿವಿಧ ಆಕೃತಿಗಳು- ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ, ಹಾವನ್ನು ಬೇಟ ಆಡುತ್ತಿರುವ ಹದ್ದು,ಹೆಡೆ ಬಿಚ್ಚಿದ ನಾಗರ ಹಾವು ...ಎಲ್ಲವೂ ಲೈಪ್ ಸೈಜ್ ಆಕೃತಿಗಳು.

ಕೊನೆಯ ಸುತ್ತಿನ ಆಲಂಕಾರದಲ್ಲಿ ನಡುಮನೆಯಲ್ಲಿ ವಿವಿಧ ಹೂವಿನ ಗಿಡದ ಕುಂಡಗಳನ್ನು ಇಟ್ಟು, ಕಲರ್ ಬಲ್ಬ್ ಗಳನ್ನು ಹಾಕಿದರೆ ಆಲಂಕಾರ ಒಂದು ಹಂತಕ್ಕೆ ಬಂದಂತೆ!

ಇಷ್ಟೆಲ್ಲ ನಡುಮನೆಯಲ್ಲಿ ಆಗುತ್ತಿದ್ದಂತೆ ಇನ್ನು ಆ ಕಡೆ ಆಡುಗೆ ಮನೆಯಲ್ಲಿ ಗಣಪನ ಮುಂದೆ ಇಡಲು ವಿವಿಧ ತಿಂಡಿಗಳ ತಯಾರಿ.ಚಕ್ಕಲಿ,ಕೋಡುಬಳೆ,ಕರ್ಚಿಕಾಯಿ,ಕಡುಬು,ಶಂಕರಪೊಳ್ಯ..ಒಂದೇ ಎರಡೇ ತಿನಿಸುಗಳು !

ಹಬ್ಬದ ದಿನ ಬೇಗ ಎದ್ದು ತಯಾರಾಗಿ ಗಣಪತಿ ತರಲು 'ಗಣಪತಿ ಮಾಡೋರ' ಮನೆ ಕಡೆ ಪಯಣ.ಅಲ್ಲಿಂದ ಗಣಪನ ಹಿಡಕೊಂಡು ನಮ್ಮ ತಂದೆ ಬರುತ್ತಿದ್ದರೆ , ಅವರ ಮುಂದೆ ಸೋದರ ಸಂಬಂಧಿಗಳಾದ ನನ್ನ ಓರಗೆಯ ಹುಡುಗರದು ಒಂದು ಚಿಕ್ಕ ಸೈನ್ಯ. ದಾರಿಯುದ್ದಕ್ಕೂ 'ವಿಘ್ನೇಶ್ವರ್ ಮಹಾರಾಜ್ ಕೀ ಜೈ' ಅಂತಾ ಕೂಗೋದು. ನಡುನಡುವೆ 'ಬಂದನಪ್ಪ ಬಂದನಪ್ಪ' ಅಂತಾ ಒಬ್ಬರು ಕೂಗಿದರೆ ಉಳಿದವರೆಲ್ಲ ಕೋರಸ್‍ನಲ್ಲಿ 'ಗಣೇಶ ಬಂದ' ಅಂತಾ ಕೂಗೋದು .ಇನ್ನೊಂದು ಪಾಪುಲರ್ ಕೂಗು 'ಗಣಪ ಬಂದ..ಕಾಯಿಕಡುಬು ತಿಂದ' !!

ಗಣೇಶನನ್ನು 'ಗೂಡಿ'ನಲ್ಲಿ ಕುಳ್ಳಿರಿಸಿ, ಎಲ್ಲ ಕುಟುಂಬದವರ ಸಮ್ಮುಖದಲ್ಲಿ ನನ್ನ ತಂದೆಯಿಂದ ಮೊದಲು ಪೂಜೆ-ಮಂಗಳಾರತಿ.ಪೂಜೆ ಕೊನೆಯಲ್ಲಿ ನನ್ನಪ್ಪ 'ಜಯಂನವ ಪಾರ್ವತಿ ಪತಿಹರ' ಅನ್ನುತ್ತಿದ್ದಂತೆ ನಾವೆಲ್ಲ ದ್ವನಿ ಕೂಡಿಸಿ ''ಜಯಂನವ ಪಾರ್ವತಿ ಪತಿಹರ ಮಹಾದೇವ್' ಅಂದು ಕೈಲ್ಲಿದ್ದ ಅಕ್ಷತೆಯನ್ನು ಗಣಪನ ಮೇಲೆ ಹಾಕುತ್ತಿದ್ದೆವು.

ಆಮೇಲೆ ಅಲ್ಲಿ ಪ್ರಸಾದ ವಿನಯೋಗ.ಗಣಪನ ಮುಂದೆ ಕೂತು ಸ್ಪಲ್ಪ ಹೊತ್ತು ಎಲ್ಲರ ಹರಟೆ. ನಂತರ ಅವರವರ ಮನೆಗೆ ಊಟಕ್ಕೆ ತೆರಳುವುದು. ಕೆಲವೊಮ್ಮೆ ಪ್ರೀತಿ ಜಾಸ್ತಿಯಾಗಿ ಒಬ್ಬರನ್ನು ಇನ್ನೊಬ್ಬರ ಮನೆಗೆ ಊಟಕ್ಕೆ ಕರೆದೊಯ್ಯುವುದು ನಡೆಯುತಿತ್ತು !! ಈ ಭಾಂದವ್ಯ ಬೇರೆ ದಿನ ಎಲ್ಲಿ ಮಾಯವಾಗುತಿತ್ತೋ ಅಂದು ಅನಿಸದಿರಲಿಲ್ಲ..

ಈ ನಡುವೆ ಕೆಲವು ವರ್ಷಗಳ ಕಾಲ ನನ್ನ ಸೋದರ ಸಂಬಂಧಿಯೊಬ್ಬ ನಮ್ಮ ವಟಾರದಲ್ಲಿ ತಾನೇ ಗಣಪನ ವಿಗ್ರಹವನ್ನು ಮಾಡತೊಡಗಿದ.ಅವನಿಗೆ ಸಹಾಯ ಮಾಡೋಕೆ ಕುಂಚ ಹಿಡಿದು ಗಣಪನ ವಿಗ್ರಹಕ್ಕೆ ನಾನು ಬಣ್ಣ ಹಚ್ಚಿದ್ದು ಉಂಟು.ಕೆಲವೊಮ್ಮೆ ವಿಭಿನ್ನ ಆರ್ಡರ್‍ಗಳು ಬರುತ್ತಿದ್ದವು.ಒಮ್ಮೆ ಒಬ್ಬರು ಎರಡು ಹಸ್ತಗಳ ಮಧ್ಯೆ ಇರುವ ಗಣಪನಿಗೆ ಆರ್ಡರ್ ಮಾಡಿದ್ದರು.

ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಕಡಿಮೆ ಬೆಲೆಯ ಮಾಸ್ ಗಣಪಗಳು ಬಂದ ಮೇಲೆ ಈ ರೀತಿ ಮಣ್ಣಿನ ಗಣಪಗಳಿಗೆ ಬೇಡಿಕೆ ಇಳಯತೊಡಗಿತು.

ಇನ್ನು ಹಬ್ಬದ ಸಂಜೆ ಊರಿನ ಸಾರ್ವಜನಿಕ ಗಣಪನ ನೋಡೋಕೆ ಹೋಗೋದು. ಹರಿಹರದ ಸಾರ್ವಜನಿಕ ಗಣಪ ಅಲ್ಲಿನ 'ಗಾಂಧೀ ಮೈದಾನ'ದಲ್ಲಿ ಕೂಡಿಸುತ್ತಿದ್ದರು. ಮೈದಾನದಲ್ಲಿ ಗಣಪನ ನೋಡಿಕೊಂಡು ಅಲ್ಲಿ ಎರ್ಪಡಿಸಿದ ರಸಮಂಜರಿ-ನಾಟಕ ನೋಡಿಕೊಂಡು ಮನೆಗೆ ತೆರಳಿ ಹೋಳಿಗೆ-ತುಪ್ಪ ಊಟ !!

ಗಣಪ ಇದ್ದ ೩ ಅಥವಾ ೫ ದಿವಸಗಳವರೆಗೆ ನಡುಮನೆಯಲ್ಲಿ ಗಣಪನಿಗೆ ವಿಶೇಷ ಪೂಜೆ. ಪ್ರತಿದಿನ ಸಂಜೆ ವಿವಿಧೆಡೆ ಇರೋ ಗಣಪನ ನೋಡೋಕೆ ಹೋಗೋದು.ಈ ಗಣಪನ ಮಂಡಳಿಗಳಲ್ಲಿ ತೀವ್ರ ಸ್ಪರ್ಧೆ.ಯಾರು ವಿಭಿನ್ನ ಅಲಂಕಾರ ಮಾಡುತ್ತಾರೆ,ಯಾರದೂ ಎಷ್ಟು ಎತ್ತರದ ಗಣಪ ಇತ್ಯಾದಿ..

ಕಾಲ ಕಳೆದಂತೆ ಈ ಮಂಡಳಿಗಳ ಗಣಪನಲ್ಲಿ ತಂತ್ರಜ್ಞಾನದ ಪ್ರವೇಶವಾಯಿತು.ಗಣಪ ಕೇವಲ ಒಂದು ವಿಗ್ರಹವಾಗಿ ಉಳಿಯಲಿಲ್ಲ.ಗಣಪ ಮುಖ್ಯಪಾತ್ರದಲ್ಲಿರುವ ಪುರಾಣ ಪ್ರಸಂಗಗಳು ಜೀವ ಪಡೆಯಲಾರಂಭಿಸಿದವು.ಉದಾಹರಣೆಗೆ ರಾವಣ ಕೈಲಾಸದಿಂದ ಅತ್ಮಲಿಂಗ ತಂದು ದನಗಾಹಿ ವೇಶದಲ್ಲಿರುವ ಗಣಪನಿಗೆ ಕೊಡೋದು,ಅದನ್ನು ಗಣಪ ನೆಲದ ಮೇಲೆ ಇಡೋದು,ರಾವಣ ಅದನ್ನು ಎತ್ತೋಕೋ ಯತ್ನಿಸುವುದು.ಕಡೆಗೆ ಗಣೇಶ ಸ್ತುತಿ.ಈ ಪ್ರಸಂಗದಲ್ಲಿ ಎಲ್ಲವೂ ಚಲಿಸುವ ವಿಗ್ರಹಗಳು, ಜೊತೆಗೆ sound-lights effect ಕೂಡಿ ಅದು ಒಂದು ಮಯಾಲೋಕ ಸೃಷ್ಟಿಸುತಿತ್ತು. ಕೆಲವೊಮ್ಮೆ ಬೇರೆ ದೇವರುಗಳ ಪಾತ್ರವನ್ನು ಗಣಪನಿಗೆ ಕೊಟ್ಟ ಪ್ರಸಂಗಗಳು ಊಂಟು.ಉದಾಹರಣೆಗೆ ಕಾಳಿಂಗ ಮರ್ದನದ ಪ್ರಸಂಗದಲ್ಲಿ ಕೃಷ್ಣನನ್ನು substitue ಮಾಡಿ ಗಣಪನನ್ನು ಕಾಳಿಂಗ ಮರ್ದನಕ್ಕೆ ಕಳುಹಿಸಿದ್ದು ಉಂಟು !!

ಬರುಬರುತ್ತಾ ಈ ಪ್ರಸಂಗಗಳು 'ಶೋ'ಗಳಾಗತೊಡಗಿದವು.ಮಂಡಳಿಗಳು ವಿಶೇಷ ಆಹ್ವಾನಿತರಿಗೆ,ದಾನಿಗಳಿಗೆ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಉಳಿದೆಲ್ಲರನ್ನೂ ನಿಲ್ಲಿಸಿ ಶೋ ನಡೆಸುವ 'ಅ-ಸಮಾನತೆ' ಸಂಪ್ರದಾಯವೂ ಶುರುವಾಯಿತು.

ಮಂಡಳಿಗಳ ಇನ್ನೊಂದ ವಿಶೇಷವೆಂದರೆ ಗಣಪನಿಗೂ ಪ್ರಸ್ತುತ ವಿಷಯಗಳಿಗೂ ಲಿಂಕ್ ಮಾಡುತ್ತಿದ್ದ ರೀತಿ.ಕಾರ್ಗಿಲ್ ಯುದ್ದದ ವರ್ಷದಲ್ಲಿ ಗಣಪ ಸೈನಿಕನ ವೇಷ ತೊಟ್ಟು ದೇಶದ ಗಡಿಯಲ್ಲಿ ನಿಂತ ಅವತಾರದಲ್ಲಿದ್ದರೆ, ವಿಶ್ವಕಪ್ ಸಮಯದಲ್ಲಿ ಗಣಪ ಭಾರತದ ಟೀ ಶರ್ಟ್ ತೊಟ್ಟು ಬ್ಯಾಟ್ ಹಿಡಿದು ನಿಂತದ್ದು ಉಂಟು.ಕೆಲವೊಮ್ಮೆ ಮಂಡಳಿಯವರು ವಿಪರೀತ ಬುದ್ದಿ ಖರ್ಚು ಮಾಡಿದ ಪ್ರಸಂಗಗಳು ಉಂಟು.ಒಮ್ಮೆ ಗಣಪನನ್ನು ವೀರಪ್ಪನ್ ತರ ವೇಷದಲ್ಲಿ ಒಂದು ಮಂಡಳಿಯವರು ಅವತರಿಸಿದ್ದರು !

೩-೫ ದಿವಸದ ನಂತರ ಇನ್ನು ಗಣಪನ ವಿರ್ಸಜಿಸುವ ಕಾರ್ಯಕ್ರಮ ದುಃಖದಿಂದ ಕೂಡಿದ ಸಮಯ.ಗಣಪನಿಗೆ ಇಷ್ಟವಾದ ಕಡುಬು ಮಾಡಿ ಅದನ್ನು ಪಾರ್ಸಲ್ ಕಟ್ಟಿ ಮನೆಯಿಂದ ಹೊರಟರೆ, ಮತ್ತದೆ ನಮ್ಮ ಸೈನ್ಯದ ಮೆರವಣಿಗೆ.'ಮೋರ್‍ಗಯಾ ರೇ ಮೋರ್‍ಗಯಾ' ಅಂತಾ ಒಬ್ಬ ಕೂಗಿದರೆ ಉಳಿದವರೆಲ್ಲ 'ಗಣೇಶ ಮೋರ್‍ಗಯಾ' ಅಂತಾ ಕೋರಸ್ ನೀಡುತ್ತಿದ್ದೆವು.ತುಂಗಾಭದ್ರ ನದಿ ಮುಟ್ಟಿ ಅಲ್ಲಿ ಇನ್ನೊಂದು ಸುತ್ತಿನ ಪೂಜೆ ಮಾಡಿ ಭಾರದ ಮನದಿಂದ ಗಣಪನ ನೀರಿನಲ್ಲಿ ಮೂರು ಸಲ ಮುಳುಗಿಸಿ ಕೈ ಬಿಟ್ಟಾಗ ಎನೋ ಖಾಲಿಯಾದ ಭಾವನೆ..

ಈ ಮಧ್ಯೆ ಮಂಡಳಿಗಳ ಗಣಪನ ವಿಸರ್ಜನೆಗೆ ಹೊರಡುತಿದ್ದ ಗುಂಪು ಆಮೆವೇಗದಲ್ಲಿ ಸಾಗುತ್ತ ದಾರಿಯುದ್ದಕ್ಕೂ ಕೂಗು ಹಾಕುವುದೇನೋ, ಮೆರವಣಿಗೆಯಲ್ಲಿ ಆರ್ಕೆಸ್ಟ್ರಾದವರ ಗಣಪನಿಗೆ ಸ್ಪಲ್ಪವೂ ಸಂಬಂಧವೇ ಇಲ್ಲದ ಹಾಡಿಗೆ ಹೈಕಳು ಕುಣಿದು ಕುಪ್ಪಳಿಸಿವುದೇನೋ. ಅತ್ಯಂತ ಉತ್ಸಾಹಭರಿತ ವಾತಾವರಣ. ಮೆರವಣಿಗೆಯಲ್ಲಿ ನಿಜಕ್ಕೂ ಜೋಶ್ ಉಂಟು ಮಾಡುತ್ತಿದದ್ದು 'ಡೊಳ್ಳು ಕುಣಿತ'.ಅದು ಮಾಡುವ ರುದ್ರನಾದಕ್ಕೆ ಉತ್ಸಾಹ ಬರದಿದ್ದರೆ ಹೇಳಿ.ಆದರೆ ಮೆರವಣಿಗೆಯಲ್ಲಿ ಕೆಲವೊಬ್ಬರು ಹೊಟ್ಟೆಗೆ 'ದ್ರವ'ಗಳನ್ನು ಇಳಿಸಿಕೊಂಡು ಬಂದು ಮಾಡುತ್ತಿದ್ದ ವರಸೆಗಳು ಮೆರವಣಿಗೆಯ ಸಡಗರಕ್ಕೆ ನೀಡುತ್ತಿದ್ದವು ಇನ್ನೊಂದು ಮಜಲು.

ಒಂದು ವರ್ಷ ವಿಸರ್ಜನೆ ವೇಳೆಯಲ್ಲಿ ನಡೆದ ಕೋಮು ಗಲಭೆಯ ನಂತರ ಮೆರವಣಿಗೆ ಸಂಜೆ ಬೇಗನೆ ಶುರು ಮಾಡತೊಡಗಿದರು.ಇಲ್ಲದಿದ್ದರೆ ಮೆರವಣಿಗೆಗಳೂ ಶುರುವಾಗುತಿದ್ದೆ ೮-೯ ಗಂಟೆಗೆ, ತುಂಗಾಭದ್ರ ಮುಟ್ಟೋವಷ್ಟರಲ್ಲಿ ರಾತ್ರಿ ೧೨-೧ ಗಂಟೆಯಾಗುತಿತ್ತು.

ವಿಸರ್ಜನೆಯ ನಂತರ ಮನೆಗೆ ಬಂದು ನೋಡಿದರೆ ಅದೇ ನಡುಮನೆ,ಅದೇ ಅಲಂಕಾರ,ಎಲ್ಲಾ ಇದೇ..ಆದರೆ ಇರಬೇಕಾದದ್ದು ಇಲ್ಲ. ಬಹುಷಃ ಇದಕ್ಕೆ ಹೇಳುತ್ತಾರೆ 'ಆತ್ಮವಿಲ್ಲದ ದೇಹ'.ಮುಂದಿನ ವರ್ಷ ಮತ್ತೆ ಗಣಪ ಬರ್ತಾನೆ ಅನ್ನೋ ಸಮಾಧಾನ..

ಆದರೆ ನಮ್ಮ ಅಜ್ಜ ಗತರಾದ ನಂತರ ಆ ಸಾಮೂಹಿಕ ಗಣಪನ ಆಚರಣೆಯೂ ನಿಂತಿತು.ಆದಾದ ಮೇಲೆ ಒಂದೇ ವಟಾರದಲ್ಲಿ ಮನೆಗೊಂದರಂತೆ ಗಣಪಗಳು.ಸ್ಪಲ್ಪ ವರ್ಷಗಳ ನಂತರ ನಮ್ಮ ಹರಿಹರದ ಋಣ ಮುಗಿದ ಮೇಲೆ ಅಲ್ಲಿನ ಗಣಪನ ಪೂಜೆಗೂ ವಿದಾಯ.

ಮತ್ತೊಂದು ಊರು..ಮತ್ತೊಂದು ದೇಶ....

ನಮ್ಮ ಗಣಪ ಮಾತ್ರ ಅವನೇ..ಅದೇ ವಕ್ರತುಂಡ,ಅದೇ ಮಹಾಕಾಯ..
ಅದಕ್ಕೆ ಅಲ್ವೇ ಗಣಪ ಸಮಯಾತೀತ !

Saturday, August 12, 2006

ಪೋಟೋ ಪ್ಲ್ಯಾಶ್ ಬ್ಯಾಕ್


ಹೀಗೆ ಸುಮ್ಮನೆ ಹಳೇ ಪೋಟೋಗಳನ್ನು ಆನ್ ಲೈನ್ ಅಲ್ಬಮ್‍ನಲ್ಲಿ ನೋಡ್ತಾ ಇದ್ದೆ. ಮಿತ್ರರೊಂದಿಗೆ ಹೋದ ಪಿಕನಿಕ್-ಪ್ರವಾಸ ಪೋಟೋಗಳು, ಟ್ರೆಕಿಂಗ್ ಪೋಟೋಗಳು. ಸುನಾಮಿ ಸಂತ್ರಸ್ತ ಪ್ರದೇಶದಲ್ಲಿ ಕಳೆದ ಆ ದಿನಗಳ ಪೋಟೋಗಳು, ಆಫೀಸ್ ಪೋಟೋಗಳು,ಸ್ನೇಹಿತರ ಮದುವೆ ಪೋಟೋ..

ಈ ಪೋಟೋ-ಕ್ಯಾಮರಗಳಲ್ಲಿದ್ದರೆ ಬಹುಷಃ ನಮ್ಮ ನೆನಪುಗಳನ್ನು ಮತ್ತೆ ಮತ್ತೆ ಹೆಕ್ಕಿ ತೆಗೆದು ಆ ನೆನಪುಗಳಲ್ಲಿ ಕಳೆದುಹೋಗೋದು ಕಷ್ಟವಾಗತಿತ್ತೋ ಎನೋ..

ಹಂಗೆ ಯೋಚನೆ ಮಾಡ್ತಾ ಇದ್ದಾಗ ನೆನಪಾದದ್ದು ಶಾಲೆಯ ಆ ಪೋಟೋ ಸೆಷನ್‍ಗಳು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ತರಗತಿಯ ಗ್ರೂಪ್ ಪೋಟೋ ತೆಗೆತಿದ್ದರು.ಆಮೇಲೆ ಪೋಟೋ ಬೇಕಾದವರೆಲ್ಲ ಟೀಚರ್‍ಗೆ ಹೆಸರು ಕೊಡ್ತಾ ಇದ್ದಿವಿ.ಒಂದು ವಾರ ನಂತರ ಕವರ್‍ನಲ್ಲಿ ಒಂದೊಂದು ಪೋಟೋ ಸಿಗ್ತಾ ಇತ್ತು.ಆವಾಗ ಆ ಪೋಟೋಗಳು ಅಂತ ವಿಶೇಷ ಅನಿಸಿರಲಿಲ್ಲ.ಈಗ ಆ ಫೋಟೋಗಳಲ್ಲಿ ಸ್ನೇಹಿತರನ್ನು ಗುರ್ತಿಸಿ ಅವರ ಅವಾಗೀನ ಅವತಾರವನ್ನು ಈಗೀನ ಅವತಾರಕ್ಕೆ ಹೋಲಿಸಿ ನೋಡುವದರಲ್ಲಿ ಮಜಾ ಇರುತ್ತೆ!

ಮನೆಯಲ್ಲಿ ನಾನು ೬ ತಿಂಗಳು ಆಗಿದ್ದಾಗ ತೆಗೆದ ಕಪ್ಪು-ಬಿಳುಪು ಪೋಟೋ ಒಂದು ಇದೆ.ಅದರಲ್ಲಿ ಅಳುತ್ತಿರುವ ನನ್ನ ನೋಡಿದಾಗ ಈಗ ಮಂದಹಾಸ ಮೂಡದಿದ್ದರೆ ಕೇಳಿ! ಹಾಗೆ ಅಪ್ಪ-ಅಮ್ಮ ಮದುವೆಯ ನಂತರ ಸ್ಟುಡಿಯೋದಲ್ಲಿ ತೆಗೆಸಿಕೊಂಡ ಪೋಟೋ. ಆ ಪೋಟೋಗಳಿಗೆ ಹಾಕಿದ ಆ ಕಪ್ಪು ಫ್ರೇಮ್.

ನಮ್ಮ ಊರು ಕಡೆ ಅದಕ್ಕೆ 'ಪೋಟೋಕ್ಕೆ ಕಟ್ಟು ಹಾಕಿಸೋದು' ಅಂತಿದ್ದರು.ಅದಕ್ಕೆ ಅಂತಾ ಒಂದು ಅಂಗಡಿ ಇತ್ತು.ಅಲ್ಲಿ ಪೋಟೋ ಕೊಟ್ಟರೆ ,ಒಂದು ತೆಳು ಹಲಗೆ ಮೇಲೆ ಅದನ್ನು ಇಟ್ಟು, ಅದಕ್ಕೆ ಹೊಂದುವಷ್ಟು ಗಾಜು ಕೊರೆದು ಅದನ್ನು ಪೋಟೋ ಮೇಲೆ ಇಟ್ಟು ಅದಕ್ಕೆ ನಾಲ್ಕು ಕಡೆ ಫ್ರೇಮ್ ಹಾಕಿ ಕೊಡ್ತಾ ಇದ್ದರು.ಅದನ್ನು ತಂದು ಮನೆ ಗೋಡೆ ಮೇಲೆ ತೂಗಿ ಹಾಕೋದರಲ್ಲಿ ಒಂದು ಸಂಭ್ರಮ!

ಕ್ರಮೇಣ ಪೋಟೋಗೆ ಕಟ್ಟು ಹಾಕಿಸೋದು ಕಡಿಮೆಯಾಗ್ತ ಬಂತು.ಅದರ ಜಾಗದಲ್ಲಿ ಬಂತು ಅಲ್ಬಮ್‍ಗಳು.ಅದು ಒಂದು ತರ ಮಜದ ಕೆಲಸ, ಸ್ಟುಡಿಯೋದಿಂದ ಪೋಟೋ ಪ್ರಿಂಟ್ ಹಾಕಿಸಿಕೊಂಡು ಬಂದು ಒಂದೊಂದೇ ಪೋಟೋ ಮೊದಲ ಸಲ ನೋಡಿ ಅದನ್ನು ಅಲ್ಬಮ್‍ಗೆ ಹಾಕೋದರಲ್ಲಿ ಎನೋ ಖುಷಿಯಾಗ್ತಿತ್ತು.

ಕ್ಯಾಮರ ಬಗ್ಗೆ ಆವಾಗಿಂದ ಒಂದು ಪ್ರೀತಿಭರಿತ ಕುತೂಹಲವಿದ್ದೆ ಇತ್ತು.ಮೊದಲ ಸಲ ನನ್ನ ಕೈಗೆ ಕ್ಯಾಮರ ಸಿಕ್ಕಿದು ನಾನು ಇಂಜಿನಿಯರಿಂಗ್ ಸೇರಿದ ಮೇಲೆನೇ. ೬ನೇಯ ಸೆಮಿಸ್ಟರ್ ಇದ್ದಾಗ ಈಡೀ ಕ್ಲಾಸ್ ೧೯ ದಿನಗಳ ಒಂದು ಮಹಾ ಪ್ರವಾಸ ಹೋಗಿದ್ದೆವು .ಅವಾಗ ಅಣ್ಣನಿಂದ ಕ್ಯಾಮರ ಪಡೆದು ತೆಗೆದುಕೊಂಡು ಹೋಗಿದ್ದೆ.ಆ ಪ್ರವಾಸದ್ದು ಒಂದು ದೊಡ್ಡ ಕತೆಗಳ ಕಂತೆಯಾದರೆ ಆ ಸಮಯದಲ್ಲಿ ತೆಗೆದ ಪೋಟೋಗಳದ್ದು ಇನ್ನೊಂದು ಕತೆ.

ಪ್ರವಾಸದ ಸಮಯದಲ್ಲಿ ಆದ ಒಂದು ಪೋಟೋ ಕತೆ...ನನ್ನ ಸ್ನೇಹಿತೆಯೊಬ್ಬಳು ಕ್ಯಾಮರದಲ್ಲಿ ಕ್ಲಿಕ್‍ಸಿದ ಪೋಟೋ ರೋಲನ್ನು ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟಿದ್ದಳು.ಪ್ರವಾಸವೆಲ್ಲ ಮುಗಿಸಿ ಬಂದು ಪೋಟೋ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ನಮಗೆ ಅಘಾತ.ಸ್ನೇಹಿತೆ ನನ್ನ ಬಳಿ ಕೊಟ್ಟಿದ್ದ ಪೋಟೋ ರೋಲ್ ಡೆವಲಪ್ ಮಾಡಿದಾಗ ಪೂರ್ತಿ ಬ್ಲ್ಯಾಂಕ್ ಆಗಿಬಂದಿತ್ತು.ನನ್ನ ರೋಲ್ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ಇನ್ನೊಂದು ಅಘಾತ.ಒಂದು ರೋಲ್‍ನಲ್ಲಿ ಒಂದರ ಮೇಲೆ ಒಂದರಂತೆ ಎರಡೆರಡು ಪೋಟೋಗಳು ಇದ್ದವು! ಆಗಿದ್ದೆನೆಂದರೆ ನನ್ನ ಖಾಲಿ ರೋಲ್ ಮತ್ತು ಸ್ನೇಹಿತೆಯ ರೋಲ್ ಅದಲು ಬದಲಾಗಿ, ನನ್ನ ಕ್ಯಾಮರಕ್ಕೆ ಖಾಲಿ ರೋಲ್ ಬದಲು ಸ್ನೇಹಿತೆಯ ರೋಲ್ ಹಾಕಿ ಕ್ಲಿಕ್‍ಸಿದ್ದೆ!!

ಕೆಲಸಕ್ಕೆ ಸೇರಿ ಸ್ಪಲ್ಪ ದಿನದಲ್ಲೇ ನನ್ನದೇ ಒಂದು ಸ್ವಂತ ಕ್ಯಾಮರ ಖರೀದಿಸಿದ್ದೆ. ಆ ಕ್ಯಾಮರ ನನ್ನ ಅನೇಕ ನೆನಪುಗಳಿಗೆ ಜೊತೆ ನೀಡಿತು.ನನ್ನ ಎಲ್ಲ ಪ್ರವಾಸ,ಪಿಕ್‍ನಿಕ್,ಟ್ರೇಕಿಂಗ್‍ಗಳ ಅವಿಭಾಜ್ಯ ಅಂಗವಾಯಿತು.ಹಾಗೆಯೇ ಸುನಾಮಿಯ ಪ್ರಳಯದ ನಂತರದ ಘೋರ ಘಟನೆಗಳನ್ನು ನೋಡಿದ್ದು ಈ ಕ್ಯಾಮರ ಕಣ್ಣುಗಳಿಂದ.

ಕೆಲ ವರ್ಷಗಳ ನಂತರ ವೀಸಾ ಸಂದರ್ಶನಕ್ಕೆ ಹೋಗುವ ಸಮಯ ಬಂತು.ಆ ವೇಳೆಯಲ್ಲಿ ನಡೆದದ್ದು ಈ ಪೋಟೋ ತೆಗೆಸುವ ಪ್ರಸಂಗ.ನನ್ನ ಎಲ್ಲ ವೀಸಾ ಪೇಪರ್ ತೆಗೊಂಡು ಹೋಗಿ ನಮ್ಮ ಕಛೇರಿಯ ವೀಸಾ ಸೆಲ್‍ನವರಿಗೆ ಕೊಟ್ಟರೆ, ಅವರು ಪೋಟೋ ಸಂಪೂರ್ಣ ಬಿಳಿ ಬ್ಯಾಕ್‍ಗ್ರೌಂಡ್ ಇರಬೇಕು,ಆದರೆ ಇದರಲ್ಲಿ ಅಷ್ಟು ಬಿಳಿ ಕಾಣಿಸುತ್ತಿಲ್ಲ, ಇನ್ನೊಮ್ಮ ತೆಗೆಸಿಕೊಳ್ಳಿ ಅಂದಾಗ ಪೂರ್ತಿ ತಲೆಕೆಟ್ಟು ಹೋಗಿತ್ತು.ನಂತರ ನಮ್ಮ ವೀಸಾ ಸೆಲ್‍ನವರು ಹೇಳಿದರು 'ಇಲ್ಲೇ ಸರಿ ಮಾಡಿಕೊಂಡು ಹೋಗುವುದು ಒಳ್ಳೆದು, ಇಲ್ಲಾ ಅಂದರೆ ಅಲ್ಲಿ ವೀಸಾ ಸಂದರ್ಶನದಲ್ಲಿ ಹೆಂಗಿದ್ದರೂ ಅದನ್ನು ನೋಡಿ ತಿರಸ್ಕರಿಸಬಹುದು'.ಇದು ಒಳ್ಳೆ ಸರ್ಪ್ ಎಕ್ಸಲ್ ಬಿಳುಪಿನ ಕತೆ ಆಯಿತಲ್ಲ ಅಂತಾ ಗೊಣಿಗಿಕೊಂಡು ಮತ್ತೊಮ್ಮೆ ಹಾಲಿನಂತ ಬಿಳುಪಿನ ಬ್ಯಾಕ್‍ಗ್ರೌಂಡ್ ಪೋಟೋ ತೆಗೆಸಿಕೊಂಡಾಯಿತು.

ಅಲ್ಲಿಂದ ಇಲ್ಲಿಗೆ ನೆಗೆದ ಮೇಲೆ ನಾನು ಮಾಡಿದ ಮೊದಲ ಕೆಲಸ ಡಿಜಿಟಲ್ ಕ್ಯಾಮರ ಕೊಂಡಿದ್ದು. ಡಿಜಿಟಲ್ ಕ್ಯಾಮರದಲ್ಲಿ ಖುಷಿಯಾಗುವ ವಿಚಾರವೆಂದರೆ ತೆಗೆದ ಪೋಟೋ ಅಲ್ಲೇ ನೋಡಬಹುದು, ಬೇಡದಿದ್ದರೆ ಇನ್ನೊಮ್ಮೆ ಕ್ಲಿಕ್‍ಸಿಬಹುದು.ಪೋಟೋ ರೋಲ್ ಹಾಕುವ ಆಗಿಲ್ಲ, ಕ್ಲಿಕ್‍ಸಿದ ಅ ಪೋಟೋ ಹೇಗೆ ಬಂದಿರಬಹುದು ಅಂತಾ ಕಾಯುವ ಆಗಿಲ್ಲ.ಎಲ್ಲ ಅಲ್ಲೇ ಗೊತ್ತಾಗಿ ಬಿಡುತ್ತೆ. ಈಗ ಎನಿದ್ದರೂ ಪೋಟೋ ಕ್ಲಿಕ್‍ಸಿ, ಅದನ್ನು ಕ್ಯಾಮರದಿಂದ ಕಂಪ್ಯೂಟರ್‍ಗೆ ವರ್ಗಾಯಿಸಿದರೆ ಆಯಿತು.ಅಲ್ಲಿಂದ ಬೇಕಾದವರಿಗೆ ಇ-ಮೇಲ್‍ನಲ್ಲಿ ಪೋಟೋ ಕಳಿಸಬಹುದು.ಇಲ್ಲ ಅಂದರೆ ಎಲ್ಲ ಪೋಟೋ ಆನ್‍ಲೈನ್ ಅಲ್ಬಮ್‍ಗೆ ಹಾಕಿ, ಆ ಆಲ್ಬಮ್ ಲಿಂಕ್ ಕಳುಹಿಸಿದರಾಯಿತು.

ಫಿಲ್ಮ್ ರೋಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರಕ್ಕೆ,ಅಲ್ಬಮ್‍ನಿಂದ ಆನ್‍ಲೈನ್ ಅಲ್ಬಮ್‍ಗೆ ಬಂದಾಯಿತು.ಮುಂದಿನ ಅವಿಷ್ಕಾರಗಳು ಪೋಟೋ-ಕ್ಯಾಮರವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾವೋ ನೋಡಬೇಕು.

ಇಷ್ಟೆಲ್ಲ ಆದರೂ ಆ ಕಪ್ಪು-ಬಿಳುಪು ಪೋಟೋಗಳು,ಆ ಕಟ್ಟು ಹಾಕಿದ ಪೋಟೋಗಳನ್ನು ನೋಡುತ್ತಿದ್ದರೆ ನಾಸ್ಟಾಲಿಜಿಯಾ ಆಗದಿದ್ದರೆ ಹೇಳಿ..