Tuesday, March 20, 2007

ಸ್ವೀಟ್ ಡ್ರೀಮ್ಸ್ ಅಂದರೇನು?

ನೀನು ನನಗೆ ಕಳಿಸಿದ್ದ ಮೊದಲ ಇ-ಮೇಲ್‍ ನೋಡ್ತಾ ಇದ್ದೆ.

ಅದರಲ್ಲಿ ಇದ್ದ ಆ ಕೊನೆ ಸಾಲು 'ಸ್ವೀಟ್ ಡ್ರೀಮ್ಸ್ ಅಂದ್ರೇನು?' ನೋಡುತ್ತಿದ್ದಂತೆ ನನ್ನ ಮುಖದ ಮೇಲೆ ಒಂದು ನಗೆ ಮೋಡ ಹಾಗೇ ತೇಲಿಹೋಯಿತು. ಅದು ಬೇರೆ 'ಫಾರ್ ಎಕ್ಸೆಂಪಲ್' ಅಂತಾ ಉದಾಹರಣೆ ಕೇಳಿದ್ದೆ. ನೀನು ಸುಮ್ಮನೆ ಕೀಟಲೆ ಮಾಡಿದ್ದ ಅಥವಾ ನಿಜಕ್ಕೂ ಹಂಗದೆರೇನು ಅಂತಾ ಕೇಳ್ತಾ ಇದ್ದೋ?

ಹೌದಲ್ಲವಾ..ಕನಸುಗಳು ಕಣೋದು ಇರಲಿ..ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೊತ್ತಿದ್ದಾರೂ ಎನು? ಇಬ್ಬರಲ್ಲಿ ಇದ್ದ ಒಂದೇ ಸಮಾನತೆ ಅಂದ್ರೆ..ಇಬ್ಬರೂ ಅಜ್‍ನಬಿಗಳೇ ! ಆದಾದ ನಂತರ ಎನೆಲ್ಲಾ ಆಯಿತು..

ಎಕ್ ಅಜ್‍ನಬಿ ಹಸೀನಾಸೇ ಹ್ಯೂ ಮುಲಾಕಾತ್ ಹೋಗಯ
ಫಿರ್ ಕ್ಯಾ ಹುವಾ ಏ ನಾ ಪೂಚೋ ಕುಚ್ ಐಸೆ ಬಾತ್ ಹೋಗಯ

ಅಜ್‍ನಬಿಗಳಾಗಿದ್ದ ನಾವು ಅದಾವುದೋ ಕ್ಷಣದಲ್ಲಿ ಒಂದು ಮಧುರ ಸಂಬಂಧದಲ್ಲಿ ಬೆಸೆಯಲ್ಪಟ್ಟಿದ್ದೆವು. ನಮ್ಮ ನಡುವಿದ್ದ ಸಂಬಂಧಕ್ಕೊಂದು ಹೆಸರಿತ್ತು, ಮನೆಯವರ ಆರ್ಶಿವಾದವಿತ್ತು.ಆಗಬೇಕಾಗಿದ್ದು ನನ್ನ-ನಿನ್ನ ಹೃದಯದ ಮಿಲನ..

ದಿನಗಳು ಹೇಗೆ ಹೋದವಲ್ಲವಾ...
ಮುಂಜಾನೆಯ ಚುಮುಚುಮು ಮಂದ ಬೆಳಕಿನಂತೆ ಆರಂಭವಾದ ನಮ್ಮ ನಡುವಿನ ಸಂಬಂಧ, ನೋಡುನೋಡುತ್ತಲೇ ಬೆಳ್ಳನೇ ಬೆಳಕಾಗಿ ಎಲ್ಲೆಡೇ ಹರಡಿ, ಆ ಬೆಳಕಿನಲ್ಲಿ 'ನಾನು-ನೀನು' ಅನ್ನೋದು ದೂರಾಗಿತ್ತು.ಅದು ನನ್ನ ಜೀವನ, ಇದು ನಿನ್ನ ಜೀವನ ಅಂತಿದ್ದ ಎರಡು ಬೇರೆ ಲೋಕಗಳು ಮಾಯವಾಗಿ, ಅಲ್ಲಿ ನಗುತ್ತಾ ನಿಂತಿತ್ತು 'ನಮ್ಮಿಬ್ಬರ' ಜೀವನ. ಬಾಳಿಗೊಂದು ಸಂಬಂಧ, ಆ ಸಂಬಂಧಕ್ಕೊಂದು ಅರ್ಥ ಬರತೊಡಗಿತ್ತು.

ಆ ಸಂಬಂಧ ತಳಹದಿಯ ಮೇಲೆ ನಿಧಾನವಾಗಿ ನಮ್ಮ ಪ್ರೀತಿಯ ಸೌಧ ಬೆಳಿತು ಅಲ್ವಾ..

ಇಬ್ಬರು ಅಜ್‍ನಬಿಗಳ ನಡುವೆ ಅದು ಯಾವಾಗ ಚಿಗುರಿತು ಆ ಪ್ರೀತಿ ? ಅದು ಯಾವಾಗ ವಿಶ್ವಾಸ ಮೂಡಿದ್ದು ಹೃದಯಗಳಲ್ಲಿ? ಕಣ್ಮುಂದೆ ಮೊಳಕೆಯೊಡೆದ ನಮ್ಮ ಮಧುರ ಸಂಬಂಧ ಕೆಲವೇ ದಿನಗಳಲ್ಲಿ ಬ್ಯಾಂಬೂ ಗಳದಂತೆ ಬಹುಬೇಗನೆ ಎತ್ತರಕ್ಕೆ ಬೆಳಯಿತಲ್ಲವಾ..ಆಮೇಲೆ ನಾವಿಬ್ಬರು ಅ ಸಂಬಂಧದ ಚೌಕಟ್ಟಿನಲ್ಲಿ ನಮ್ಮದೇ ಆದ 'ಸುಂದರ ಲೋಕ'ವೊಂದನ್ನು ಸೃಷ್ಟಿಸಿಕೊಂಡೆವಲ್ಲವಾ.

ಅಲ್ಲಿ ಏನೇಲ್ಲಾ ಇದೆ..
ಆಸರೆ, ಭರವಸೆ, ಕನಸು, ನಿರ್‍ಈಕ್ಷೆ, ಪ್ರೀತಿಯ ಸೆಳೆತ, ತುಂಟತನದ ಸೊಗಸು, ವಿರಹದ ವೇದನೆ..ಸಾಂತ್ವನಕ್ಕೆ ಹೆಗಲು, ಬೆಚ್ಚನೆ ಅಪ್ಪುಗೆ, ಮುತ್ತಿನಹಾರ, ಎಲ್ಲಾ ಮರೆತು ವಿಶ್ರಮಿಸುವದಕ್ಕೆ ಎದೆ ಎಂಬ ದಿಂಬು..

ಆದರೆ ಕೆಲವೊಮ್ಮೆ ಈ ಸುಂದರಲೋಕದಲ್ಲಿ ನಮ್ಮ ಸ್ಟುಪಿಡ್‍ತನದಿಂದ ಇನ್ನೊಬ್ಬರ ಮನಕ್ಕೆ ನೋವುಂಟು ಆಗುತ್ತೆ ಅಲ್ವಾ, ಸುಮ್ಮನೆ ಬೇಡದ ವಿಚಾರಗಳು ಬರುತ್ತೆ ಅಲ್ವಾ.ನಮ್ಮಿಬ್ಬರಲ್ಲಿ ಯಾರಿಗೆ ನೋವಾದರೂ ಅದು ಇನ್ನೊಬ್ಬರಿಗೆ ನೋವು ಉಂಟು ಮಾಡೇ ಮಾಡುತ್ತೆ.ಎನೂ ಕೆಲಸಕ್ಕೆ ಬಾರದ ವಿಚಾರಗಳಿಂದ ನಮ್ಮ ಸುಂದರಲೋಕ ಹಾಳು ಮಾಡಿಕೊಳ್ಳದೋ ಬೇಡಾ ಕಣೇ. ನಮ್ಮಬ್ಬಿರಲ್ಲಿ ಇನ್ನೊಬ್ಬರ ಬಗ್ಗೆ ಎಷ್ಟು ಪ್ರೀತಿ-ವಿಶ್ವಾಸ ಇದೆ ಅಂತಾ ನಮಗೆ ಚೆನ್ನಾಗಿ ಗೊತ್ತಿದೆ.ಯಾವುದೋ ಒಂದು ಒರಟು ಮಾತು-ಇನ್ನಾವುದೋ ಒಂದು ಹುಚ್ಚು ವಿಚಾರ ಅ ಸುಂದರ ಸಂಬಂಧದಲ್ಲಿ ಪ್ರಶ್ನೆಗಳನ್ನು-ಸಂಶಯಗಳನ್ನು ಹುಟ್ಟುಹಾಕುವುದು ಬೇಡ.

ಆದರೆ ಒಂದು ವಿಷಯ ಗಮನಿಸಿದಿಯಾ?
ಈ ತರದ ಸ್ಟುಪಿಡ್ ವಿರಸದ ನಂತರ, ನಾವು ಒಬ್ಬರನ್ನೊಬ್ಬರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಅನಿಸುತ್ತೆ.ನಾವು ಹಿಂದಿಗಿಂತ ಇನ್ನೂ ಹತ್ತಿರಕ್ಕೆ ಬಂದಿದೀವಿ ಅನಿಸುತ್ತೆ.ಇರಲಿ ವಿರಸದ ವಿಷಯ. ನಾವು ಅದನ್ನು ನಮ್ಮ ಮನಗಳಲ್ಲಿ ಬಿಟ್ಟಕೊಳ್ಳೋದೇ ಬೇಡ.

ನಮ್ಮ ಈ ಸುಂದರ ಲೋಕಕ್ಕೆ ತಳಕುಹಾಕೊಂಡಿರೋದೇ ಆ ಸುಂದರ ಸ್ವಪ್ನಗಳು...
ಸುಮ್ಮನೆ ನಿನ್ನ ಕೈ ಹಿಡಕೊಂಡಿರೋದು, ಕೈ ಹಿಡಕೊಂಡು ಹಾಗೇ ತಿರುಗಾಡೋದು..ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಗುವುದು, ನೀನು ನನ್ನ ತಲೆಗೂದಲಲ್ಲಿ ಬೆರಳಾಡಿಸುತ್ತಿದಂತೆ ಹಾಗೇ ನಿದ್ದೆಗೆ ಜಾರುವುದು, ನಿನಗೆ ನಿದ್ದೆ ಬರದಿದ್ದರೆ ಎದೆಗೆ ಒರಗಿಸಿಕೊಂಡು ಬಿಸಿ ಅಪ್ಪುಗೆಯಲ್ಲಿ ಮಲಗಿಸಿಕೊಳ್ಳುವುದು,ಬೆಳಗೆದ್ದು ಕಣ್ಣು ಬಿಟ್ಟಾಗ ನಿನ್ನ ಮುದ್ದು ಮುಖ ನೋಡುವುದು, ನಂತರ ಈಡೀ ಹಗಲು ನಿನ್ನ ಬಾಹುಗಳಲ್ಲಿ ಕಳೆಯುವುದು, ಸಂಜೆ ನಿನ್ನ ತುಟಿಗೆ ಹಾಲ್ಜೇನಾಗುವುದು, ರಾತ್ರಿಗೆ ನಿನ್ನ ಒಡಲಲ್ಲಿ ಕರಗಿ ಪ್ರೀತಿಯ ಧಾರೆಯಾಗುವುದು..

ಹೀಗೆ ಅದೊಂದು ಸ್ವಪ್ನಗಳ ಮೂಟೆಯೇ ಇದೆ..

ಎಕ್ ದಿನ್ ಆಪ್ ಹಮ್ ಕೋ ಮಿಲ್‍ಜಾಯೇಗಾ
ದೇಖತೇಯೀ ಫೂಲ್ ಕಿಲ್ ಜಾಯೇಗಾ

ಸ್ವೀಟ್ ಡ್ರೀಮ್ಸ್ ಗಳ ಬಗ್ಗೆ ಈಗ ನೀನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯಾ ಅಂತಾ ನನಗೆ ಗೊತ್ತು.

ಈಗ ಹೇಳು ನನ್ನ ಒಲವೇ, ಸ್ವೀಟ್ ಡ್ರೀಮ್ಸ್ ಅಂದರೇನು ಅಂತಾ ..

************************************************
ವಿಕ್ರಾಂತ ಕರ್ನಾಟಕದ ಯುಗಾದಿ ವಿಶೇಷಾಂಕದಲ್ಲಿ ಈ ಲೇಖನ ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ನನ್ನ ಧನ್ಯವಾದಗಳು
************************************************

Wednesday, March 14, 2007

ಯಾಕೋ ಗೊತ್ತಿಲ್ಲಾ..

ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ನೋಡಬೇಕೆಂದು
ಯಾಕೊ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ನಿನ್ನ ಧ್ವನಿ ಕೇಳಬೇಕೆಂದು
ಯಾಕೋ ಗೊತ್ತಿಲ್ಲಾ..
ಮನಸು ಹಟ ಹಿಡಿದಿದೆ
ನಿನ್ನ ಮುದ್ದಿಸಬೇಕೆಂದು
ಯಾಕೋ ಗೊತ್ತಿಲ್ಲಾ
ಮನಸು ಮಾತು ಕೇಳುತ್ತಿಲ್ಲ
ಎದೆಗೆ ಒರಗಿ ಮಲಗಬೇಕೆಂದು

ನಿನ್ನ ಒಂದು ನೋಟ
ನಿನ್ನ ಒಂದು ಮಾತು
ನಿನ್ನ ಒಂದು ಮುತ್ತು
ನಿನ್ನ ಒಂದು ಅಪ್ಪುಗೆ
ಸಾಕು ಜೀವವೇ ಈ ಜೀವಕ್ಕೆ
ನಾನು ಜೀವಿಸೋಕೆ
ಎಂದಿದೆ ಮನಸು

ಎನು ಹೇಳಲಿ ಗೆಳತಿ
ಈ ಹುಚ್ಚು ಮನಕ್ಕೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಾಗರಗಳ ಬಗ್ಗೆ
ಹೇಗೆ ತಿಳಿಹೇಳಲಿ
ನಮ್ಮನ್ನು ದೂರವಿಟ್ಟಿರುವ
ಈ ಸಮಯದ ಸಂಕೋಲೆಯ ಬಗ್ಗೆ

ಮನಸು ಎಷ್ಟು ಹೇಳಿದರೂ
ಮತ್ತೆ ನಿನ್ನ ಹಂಬಲಿಸುತ್ತಿದೆ
ಮತ್ತೆ ನಿನ್ನ ನೆನಯುತಿದೆ
ಹೇಗೆ ರಮಿಸಲಿ ಗೆಳತಿ
ನನ್ನ ಕಾಡುವ ನಿನ್ನ ಹಂಬಲಿಸುವ
ಈ ಹುಚ್ಚು ಮನಕ್ಕೆ

Monday, March 05, 2007

ಅಲ್‍ಕಟ್ರಾಸ್

ನೀವು 'ದಿ ರಾಕ್' ಅನ್ನೋ ಸಿನಿಮಾ ನೋಡಿರಬಹುದು. ಸೀನ್ ಕಾನೇರಿ ಮತ್ತು ನಿಕೋಲಸ್ ಕೇಜ್ ಇರುವ ಈ ಸಿನಿಮಾ ಬಂದಿದ್ದು ೧೯೯೬ರಲ್ಲಿ.ಸ್ಯಾನ್ ಪ್ರಾನಿಸ್‍ಸ್ಕೋದ ಹತ್ತಿರವಿರುವ ದ್ವೀಪವೊಂದಕ್ಕೆ ಹೋದ ಪ್ರವಾಸಿಗರನ್ನು ಸೆರೆಯಾಳಾಗಿ ಮಾಡಿಕೊಂಡು, ಆ ದ್ವೀಪದಿಂದ ಸ್ಯಾನ್ ಪ್ರಾನಿಸ್‍ಸ್ಕೋದ ಮೇಲೆ ರಾಸಾಯನಿಕ ದಾಳಿಯ ಯೋಜನೆ ಬಗ್ಗೆ ಇರುವ ಕತೆ.ಇತ್ತೀಚಿಗೆ 'ಅಲ್‍ಕಟ್ರಾಸ್' ಅನ್ನೋ ಆ ದ್ವೀಪವನ್ನೂ, ಅಲ್ಲಿನ ಆ ಕುಖ್ಯಾತ ಸೆರಮನೆಯ ಪ್ರವಾಸ ಮಾಡಿದಾಗ ಮತ್ತೆ ನೆನಪಾಗಿದ್ದು ಆ ಸಿನಿಮಾ.

ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಎರಿಯಾದಿಂದ ಜಿನಿಗುಡುತ್ತಿದ್ದ ಮಳೆ ಮತ್ತು ನಡುಗುವ ಚಳಿಯ ಜೊತೆ ದೋಣಿಯಲ್ಲಿ ಹೊರಟ ನಾವು ಆ ದ್ವೀಪವನ್ನು ೨೦-೨೫ ನಿಮಿಷದಲ್ಲಿ ಮುಟ್ಟಿದ್ದೆವು. ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಮಧ್ಯೆ ಇರುವ ಆ ದ್ವೀಪ, ಅದರಲ್ಲಿ ಕೋಟೆಯಂತ ಕಟ್ಟಡ....ತೀರಾ ಸಾಮಾನ್ಯವಾಗಿ ಕಾಣುತಿತ್ತು, ಅದರ ಇತಿಹಾಸ ತಿಳಿಯುವವರೆಗೆ. ಅಲ್ಲಿ ಹೋಗುತ್ತಿರುವಂತೆ ಗೈಡ್ ಒಬ್ಬ ಪ್ರವಾಸಿಗರನ್ನು ಉದ್ದೇಶಿಸಿ ಮಾತಾಡಿದ.ನಂತರ ಅಲ್ಲಿಂದ ನಾವು 'ಅಲ್‍ಕಟ್ರಾಸ್' ಬಗ್ಗೆ ಡಿಸ್ಕವೇರಿ ಚಾನಲ್‍ರವರ ಕಿರುಚಿತ್ರ ವೀಕ್ಷಿಸಿ, ಆ ಕುಖ್ಯಾತ ಸೆರೆಮನೆಯ ಪ್ರವಾಸಕ್ಕೆ ತೆರಳಿದೆವು.ಮೊದಲು ರಕ್ಷಣಾ ತಾಣವಾಗಿದ್ದು ನಂತರ ಸೆರಮನೆಯಾಗಿ ಮಾರ್ಪಾಟ್ಟು, ಈಗ ರಾಷ್ಟ್ರೀಯ ಸ್ಮಾರಕವಾಗಿದೆ 'ಅಲ್‍ಕಟ್ರಾಸ್'. ಆ ಸೆರಮನೆ ಪ್ರವೇಶಿಸುತ್ತಿದ್ದಂತೆ ಹೆಡ್‍ಪೋನ್ ಜೊತೆ ಮೊಬೈಲ್‍ನಂತ ಸಾಧನವೊಂದು ಪ್ರವಾಸಿಗರಿಗೆ ಕೊಡಲಾಯಿತು. ಆ ಸಾಧನ ನಾವು ಸೆರಮನೆಯಲಿ ಹೋಗುವ ಪ್ರತಿ ಜಾಗದ ಬಗ್ಗೆ ವಿವರಣೆ ನೀಡತೊಡಗಿತು.

೧೯೩೩ರಲ್ಲಿ ಶುರುವಾದ ಸೆರಮನೆ ತಾನಿದ್ದ ಭೌಗೋಳಿಕ ಸ್ಥಾನ, ಅಲ್ಲಿನ ವಿಪರೀತ ಹವಾಮಾನದಿಂದ ಅದು ಒಂದು ಅತ್ಯಂತ ಕಠಿಣ ಸೆರಮನೆಯ ಸ್ಥಾನಗಳಿಸಿತು.ಬೇರೆ ಜೈಲುಗಳಲ್ಲಿ ಹಿಡಿದಿಡಲಾಗದ ಆಗಿನ ಕಾಲದ ಅತ್ಯಂತ ಕುಖ್ಯಾತ ಕ್ರಿಮಿನಲ್‍ಗಳನ್ನು ಅಮೇರಿಕಾ ಸರ್ಕಾರ ಅಲ್ಲಿ ಇಡತೊಡಗಿತು. ಹೊರಗಿನ ಪ್ರಪಂಚದವರಿಗೆ ಅಲ್ಲಿ ಪ್ರವೇಶ ಇಲ್ಲದಿದ್ದರಿಂದ ಮೊದಲೇ ಕುತೂಹಲದ ಬೀಡಾಗಿದ್ದ 'ಅಲ್‍ಕಟ್ರಾಸ್' ಈ ಕುಖ್ಯಾತರ ಆಗಮನದಿಂದ ಇನ್ನೂ ಕುತೂಹಲ ಹೆಚ್ಚಿಸಿತು. ಅದಕ್ಕೂ ಹೆಚ್ಚು ರೋಚಕ ಮೂಡಿಸಿದ್ದು ಅಲ್ಲಿನ ಕೈದಿಗಳ ಜೀವನ ಮತ್ತು ಅವರ ಜೈಲಿಂದ ಪರಾರಿಯಾಗುವ ಪ್ರಯತ್ನಗಳು.ಅದು ಕಾರ್ಯನಿರ್ವಹಿಸಿದ ೨೯ ವರ್ಷ ಅನೇಕ ದಂತಕತೆಗಳಿಗೆ-ಹಾಲಿವುಡ್ ಸಿನಿಮಾಗಳಿಗೆ ಸ್ಪೂರ್ತಿ ಆಯಿತು.

ಇದನೆಲ್ಲಾ ಕೇಳುತ್ತಿದ್ದಂತೆ ನಾವು ಆ ಸೆರಮನೆಯೊಳಗೆ ಒಂದು ನೇರವಾದ ಪ್ಯಾಸೇಜ್‍ಗೆ ಬಂದಿದ್ದೆವು. ಅದರ ಅಕ್ಕಪಕ್ಕ ಸಾಲು ಸಾಲು ಕೈದಿಗಳ ಕೋಣೆಗಳು. ತೀರಾ ಚಿಕ್ಕದಾದ ಕೋಣೆ, ಅದರಲ್ಲಿ ಒಂದು ಹಾಸಿಗೆ, ಒಂದು ಕಮೋಡ್ ಬಿಟ್ಟರೆ ಎನೂ ಇರ್ತಿರಲಿಲ್ಲ. ಪ್ರತಿಕೋಣೆಗೂ ಎರಡು ಸುತ್ತು ಕಬ್ಬಿಣದ ಸರಳುಗಳ ಬಾಗಿಲು.ಆ ಕೋಣೆಗಳನು ನೋಡುತ್ತಾ ಮುಂದೆ ಸಾಗುತ್ತಿದ್ದಂತೆ ಒಂದು ತಿರುವು. ಅಲ್ಲಿ ಇತ್ತು 'ಬ್ಲ್ಯಾಕ್ ಹೋಲ್'. ತೀರಾ ಎಗರಾಡುವ ಕೈದಿಗಳನ್ನು ಇದರಲ್ಲಿ ೨-೩ ದಿವಸ ಹಾಕುತ್ತಿದ್ದರಂತೆ. ಬ್ಲ್ಯಾಕ್ ಹೋಲ್ ಹೆಸರಿಗೆ ತಕ್ಕಂತೆ ಒಂದು ಬೆಳಕಿನ ಕಿರಣವು ಬರದ ಕೋಣೆ..ಅದರಲ್ಲಿ ಮಂಚವಾಗಲಿ, ಕಮೋಡ್ ಆಗಲಿ ಯಾವುದೂ ಇರಲಿಲ್ಲ. ಅದರಲ್ಲಿ ಇದದ್ದು ನೆಲದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ತೂತು. ಅಲ್ಲಿರುವರೆಗೆ ಅತ್ಯಂತ ಕಡಿಮೆ ಊಟ. ಕೈದಿಗಳ ಮನೋಬಲ ಮುರಿಯುವಲ್ಲಿ ಇದು ಸಾಕಷ್ಟು ಯಶಸ್ವಿಯಾಗಿತ್ತಂತೆ.

ಅಲ್ಲೇ ಗೋಡೆಯಲ್ಲಿ ಮೇಲೆ ಇದ್ದವು ಆ ಮಹಾನುಭಾವರ ಚಿತ್ರಗಳು.. ಆ ಸೆರಮನೆಯಲ್ಲಿ ಇದ್ದು ಅತ್ಯಂತ ಕುಖ್ಯಾತರಾದ ಕ್ರಿಮಿನಲ್‍ಗಳು.

ಅಲ್ ಕೆಪೋನಿ- ಆಗಿನ ಮಾಫಿಯ ದೊರೆ.ಬೇರೆ ಯಾವುದೇ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ದಂಧೆ ನಡೆಸುತ್ತಿದ್ದನಂತೆ. ಈ ಸೆರಮನೆಗೆ ಬಂದ ಮೊದಲ ಬ್ಯಾಚ್‍ನಲ್ಲಿದ್ದವನು. ಜೈಲಿನ ಆರಂಭಕ್ಕಿಂತಲೂ ಅವನು ಅಲ್ಲಿ ಬಂದದ್ದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತಂತೆ. ಅಲ್‍ಕಟ್ರಾಸ್‍ಗೆ ಬಂದ ಮೇಲೆ ಅವನನ್ನು ಸಾಮಾನ್ಯ ಕೆಲಸಕ್ಕೆ ಬಾರದ ಕೈದಿಯಾಗಿ ಮಾಡಿದರಂತೆ ! ಜೈಲಿನಲ್ಲಿ ಇದದ್ದು ೬ ವರ್ಷ.

ಜಾರ್ಜ್ ಕೆಲ್ಲಿ-ಇವನು ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ವರ್ಗವಾಗಿ ಬಂದವನು. ಜೈಲಿನಲ್ಲಿ ಇದದ್ದು ೧೭ ವರ್ಷ.

ಅಲ್ವಿನ್ ಕರ್ಪಿಸ್-ಇವನು ಸಹ ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ಬಂದವನು.ಇಲ್ಲಿ ಇದದ್ದು ೨೬ ವರ್ಷ

ರಾಬರ್ಟ್ ಸ್ಟೌರ್ಡ್ - ಅಲ್‍ಕಟ್ರಾಸ್‍ನ ಅತ್ಯಂತ ಕುಖ್ಯಾತ-ಅತೀ ಹೆಚ್ಚು ಮಿಡಿಯಾ ಕವರೇಜ್ ಪಡೆದವನು. ಇಲ್ಲಿಗೆ ಬರುವ ಮುಂಚೆಯಿದ್ದ ಜೈಲಿನಲ್ಲಿ ತನ್ನ ಕೋಣೆಯಲ್ಲಿ ಹಕ್ಕಿಗಳನ್ನು ಇಟ್ಟುಕೊಂಡು ಅವುಗಳನ್ನು ಅಭ್ಯಾಸಮಾಡುತ್ತಿದ್ದನಂತೆ.ಅವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದನಂತೆ. ಅದೇ ಕಾರಣಕ್ಕೆ 'ಬರ್ಡ್ ಮ್ಯಾನ್' ಅನ್ನೋ ಅಡ್ಡಹೆಸರಿನಿಂದ ಎಲ್ಲೆಡೆಗೆ ಪ್ರಸಿದ್ದನಾದವನು.ಆದರೆ ಇಲ್ಲಿಗೆ ಬರಲು ಕಾರಣ ಹಿಂದಿದ್ದ ಜೈಲಿನ ಅಧಿಕಾರಿಯೊಬ್ಬನನ್ನು ಸುಮಾರು ೨೦೦೦ ಕೈದಿಗಳ ಎದುರು ನಿರ್ಧಯವಾಗಿ ಹತ್ಯೆ ಮಾಡಿದ್ದಕ್ಕೆ.ಇದದ್ದು ೧೭ ವರ್ಷ.

ಮಾರ್ಟನ್ ಸೊಬೆಲ್-ಜೈಲಿಗೆ ಬರಲು ಕಾರಣ ಅಮೇರಿಕಾದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಪ್ರಯತ್ನಪಟ್ಟಿದ್ದು ! ಇದದ್ದು ೫ ವರ್ಷ.
ಹೀಗೆ ಇನ್ನೂ ಅನೇಕ ವಿಶಿಷ್ಟ ವ್ಯಕ್ತಿಗಳ ಬೀಡಾಗಿದ್ದ ಈ ಜೈಲಿನಿಂದ ತಪ್ಪಿಸಿಕೊಳ್ಳುವದಕ್ಕೆ ಪ್ರಯತ್ನಪಟ್ಟವರು ಅನೇಕರು. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು ಪ್ರಯತ್ನಗಳು - ೩೬. ಅದರಲ್ಲಿ ಏಳು ಕೈದಿಗಳು ಪ್ರಯತ್ನದಲ್ಲಿದ್ದಾಗ ಶಾಟ್ ಡೆಡ್, ಇಬ್ಬರು ಜೈಲಿನಿಂದ ಹೊರಬಂದರು ಅಲ್ಲಿನ ಸಮುದ್ರದಲ್ಲಿ ಮುಳುಗಿ ಸತ್ತವರು, ಇಬ್ಬರು ಜೈಲು-ದ್ವೀಪದಿಂದ ತಪ್ಪಿಸಿಕೊಂಡರು ಮರಳಿ ಹಿಡಿಯಲ್ಪಟ್ಟವರು, ೫ ಜನ ನಾಪತ್ತೆ ಆದವರು, ಇನ್ನು ಉಳಿದವರು ಪರಾರಿಯಾಗುವಾಗ ಸಿಕ್ಕು ಮರಳಿದವರು. ಆ ೫ ಜನ ನಾಪತ್ತೆಯದವರಲ್ಲಿರುವ ಹೆಸರುಗಳೇ - ಮೌರಿಸ್ ಮತ್ತು ಎಂಜಿಲಿನ್ ಸಹೋದರರು.

ಈ ಇಬ್ಬರು ಸೋದರರು ಇಲ್ಲಿಂದ ಪರಾರಿಯಾದ ಬಗ್ಗೆ ಅನೇಕ ಕತೆಗಳಿವೆ. ಆದರೆ ಅವರು ಉಪಯೋಗಿಸಿದ ವಿಧಾನ, ಅವರು ತಮ್ಮ ಡಮ್ಮಿಗಳನ್ನು ತಮ್ಮ ಕೋಣೆಯಲ್ಲಿ ಮಲಗಿಸಿ ಪರಾರಿಯಾದ ಬಗ್ಗೆ ತೀರಾ ಸಿನಿಮೀಯಾ. ಅವರು ತಪ್ಪಿಸಿಕೊಂಡು ಹೋಗಿಲ್ಲ ಅನ್ನುತ್ತದೆ ಅಧಿಕೃತ ವರದಿ, ಅದರ ಪ್ರಕಾರ ಅವರು ಪರಾರಿ ಪ್ರಯತ್ನದಲ್ಲಿದ್ದಾಗ ಆ ಕೊರೆಯುವ ಸಮುದ್ರದಲೆಲ್ಲೋ ಮುಳುಗಿ ಸತ್ತಿರಬಹುದೆಂದು. ಆದರೆ ಇನ್ನೂ ಅನೇಕರ ಪ್ರಕಾರ ಅಲ್ಲಿಂದ ಅವರು ಯಶಸ್ವಿಯಾಗಿ ಪರಾರಿಯಾದವರು.ಇವರ ಕತೆಯನ್ನು ಆಧಾರಿಸಿ ಬಂದಿದ್ದೆ ಹಾಲಿವುಡ್ ಚಿತ್ರ -'ಎಸ್ಕೇಪ್ ಫ್ರಾಮ್ ಅಲ್‍ಕಟ್ರಾಸ್'.

ಸೆರಮನೆಯ ಕುಖ್ಯಾತರ ಬಗ್ಗೆ ಕೇಳುತ್ತಾ ಕೇಳುತ್ತಾ ಈಗ ನಾವು ಈ ಸೋದರರಿದ್ದ ಸೆಲ್‍ನ ಮುಂದೆ ನಿಂತಿದ್ದೆವು. ಅವರ ಕೋಣೆಯಲ್ಲಿ ಆ ಡಮ್ಮಿಗಳ ಪ್ರತಿಕೃತಿಗಳು ಹಾಗೇ ಇಟ್ಟಿದ್ದರು. ಅಲ್ಲಿದ್ದ ಗ್ರಂಥಾಲಯದಲ್ಲಿ ತಿರುಗಾಡಿ, ಕೈದಿಗಳ ಭೇಟಿಗೆ ಇದ್ದ ಕಿಟಕಿಯಲ್ಲಿ ಕುಳಿತು,ಜೈಲಿನ ಅಧಿಕಾರಿಗಳ ಕಚೇರಿಯನ್ನು ನೋಡಿ, ಕೊನೆಗೆ ಕೈದಿಗಳ ಊಟದ ಮನೆಗೆ ಹೊಕ್ಕೆವು. ಅಲ್ಲಿ ಯಾವುದೇ ಕುರ್ಚಿ-ಟೇಬಲ್-ಪೋರ್ಕ್-ಚಾಕುಗಳನ್ನು ಇಟ್ಟಿರಲಿಲ್ಲವಂತೆ. ದಿನವೂ ಅದೇ ಮೆನು.

ಇಂತಹ ಸೆರಮನೆಯ ನಿರ್ವಹಿಸುವ ವೆಚ್ಚ ದಿನವೊಂದಕ್ಕೆ ಕೈದಿಯೊಬ್ಬನಿಗೆ ಆ ದಿನಗಳಲ್ಲೇ ೧೦೦ ಡಾಲರ್ ಆಗಿತ್ತಂತೆ. ಹೆಚ್ಚುತ್ತಿದ್ದ ಈ ನಿರ್ವಹಿಸುವ ವೆಚ್ಚ ನೋಡಿ ಕೊನೆಗೂ ೨೯ ವರ್ಷದ ನಂತರ ಈ ಸೆರಮನೆಯನ್ನು ಮುಚ್ಚಲಾಯಿತು.ನಂತರ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಾಡಿಸಲಾಯಿತು.

ನಂತರ ಬಂತು ೧೯೬೯..ಸ್ಠಳೀಯ ರೆಡ್ ಇಂಡಿಯನ್ ಮತ್ತು ಇತರ ಬುಡಕಟ್ಟು ಜನರಿಂದ ಬಲವಂತವಾಗಿ ಕಸಿದುಕೊಂಡ ನೆಲವನ್ನು ವಾಪಾಸ್ ಮಾಡುವಂತೆ ಆಗ್ರಹಿಸಿ ಕೆಲವು ವಿದ್ಯಾರ್ಥಿ ಗುಂಪುಗಳು - ಕೆಲವು ಇಂಡಿಯನ್ ಜನ ಅಲ್‍ಕಟ್ರಾಸ್‍ಗೆ ಮುತ್ತಿಗೆ ಹಾಕಿದರು. ಸಂಕೇತವಾಗಿದ್ದ ಈ ಪ್ರತಿಭಟನೆ ನೋಡುನೋಡುತ್ತಿದ್ದಂತೆ ಪೂರ್ಣಪ್ರಮಾಣವಾಗಿ ಈಡೀ ದ್ವೀಪವನ್ನು ಈ ಗುಂಪು ಆಕ್ರಮಿಸಿಕೊಂಡಿತು. ಅವರ ಬೇಡಿಕೆಗಳು - ಆ ದ್ವೀಪದ ಮೇಲೆ ಇಂಡಿಯನ್ ಸಂಸ್ಕೃತಿ ಬಿಂಬಿಸುವ ಒಂದು ಕಲ್ಚರಲ್ ಕೇಂದ್ರ, ಒಂದು ಶೈಕ್ಷಣಿಕ ಕೇಂದ್ರ ಮತ್ತು ಒಂದು ನಿಸರ್ಗ-ಅಧ್ಯಯನ ಕೇಂದ್ರ. ಸ್ಥಾಪಿಸುವುದು. ಸುಮಾರು ಒಂದು ವರ್ಷದವರೆಗೆ ದ್ವೀಪದ ಮೇಲಿದ್ದ ಈ ಇಂಡಿಯನ್ ಹಿಡಿತ ಕೊನೆಗೂ ಕಮಾಂಡೊಗಳ ಕ್ಷಿಪ್ರಕಾರ್ಯಾಚರಣೆಯಲ್ಲಿ ಕೊನೆಗೊಂಡಿತ್ತು.ಆದರೆ ಅದು ಉಂಟುಮಾಡಿದ ಜನಜಾಗೃತಿಗೆ ಶರಣಾಗಿ ಸರಕಾರ ಆಕ್ರಮಿಸಿದ್ದ ಅನೇಕ ಪ್ರದೇಶಗಳನು ಮರಳಿ ಕೊಟ್ಟಿತಂತೆ.

ಇಷ್ಟೆಲ್ಲಾ ಇತಿಹಾಸವಿರುವ ಸೆರಮನೆ-ದ್ವೀಪ ನೋಡಿ ಮರಳುತ್ತಿದ್ದಂತೆ ಗತಕಾಲಕ್ಕೆ ಹೋಗಿಬಂದಂತೆ ಭಾಸವಾಗುತಿತ್ತು.

ಕೈದಿಗಳ ಧ್ವನಿ, ಗಾರ್ಡ್‍ನ ಸೀಟಿಯ ಶಬ್ದ, ಗುಂಡಿನ ಸದ್ದು, ಇಂಡಿಯನ್ ಜನರ ಕೂಗು ಇನ್ನೂ ಅಲ್ಲಿ ಪ್ರತಿಧ್ವನಿಸುತ್ತಿದೆ ಅನಿಸಿತು..