Sunday, February 22, 2009

ಡೆಲ್ಲಿ-6 ಎಂಬ Metaphor

ಜ್ವಲಂತ ಸಮಸ್ಯೆಗಳನ್ನು ಸಿನಿಮಾಗಳು ನೋಡುವ ಬಗೆ ಎರಡು.

೧. ಸಮಸ್ಯೆಗಳನ್ನು ಹಸಿಹಸಿಯಾಗಿ ಪ್ರದರ್ಶಿಸಿ ಮಾರಾಟದ ಸರಕಾಗಿಸುವುದು
೨. ಸಮಸ್ಯೆಗಳನ್ನು ಅತಿರಂಜಿತವಾಗಿಸದೆ,ಸುಪ್ತ-ಸೂಕ್ಷ್ಮವಾಗಿರಿಸಿ, ಅದಕ್ಕೊಂದು ಪರಿಹಾರ ತೋರಿಸುವುದು

ಸ್ಲಂ ಡಾಗ್‍ನಂತವು ಮೊದಲನೆಯ ಗುಂಪಿನಲ್ಲಿ ಸೇರುವಂತಹ ಚಿತ್ರಗಳು.

ಎರಡನೆಯ ಗುಂಪಿನಲ್ಲಿ ಸೇರುವ ಚಿತ್ರ ’ರಂಗ್ ದೇ ಬಸಂತಿ’.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ’ರಂಗ್ ದೇ’ಯಲ್ಲಿ ಭ್ರಷ್ಟಾಚಾರ, ದೇಶದ ’ಚಲ್ತಾ ಹೈ’ ಮನಸ್ಥಿತಿ, ಅದಕ್ಕೆ ಸೂಚಿಸಿದ ’ಡೈರೆಕ್ಟ್ ಆಕ್ಷ್ಯನ್’(Direct Action) ದೊಡ್ಡ ಸಂಚಲನವುಂಟು ಮಾಡಿದ್ದವು. ಅದು ಶುರು ಮಾಡಿದ ಚರ್ಚೆ-ಜಾಗೃತಿ ಇನ್ನೂ ಎಲ್ಲರ ನೆನಪಿನಲ್ಲಿದೆ.

’ರಂಗ್ ದೇ ಬಸಂತಿ’ ತರದ ಬಡಿದೆಬ್ಬಿಸುವ ಸಿನಿಮಾದ ನಂತರ ಮುಂದೇನು ಅನ್ನುವ ಪ್ರಶ್ನೆಗೆ ಉತ್ತರ ದೊರಕಿದಂತಿದೆ.
ರಾಕೇಶ್ ಹೊಸ ಸಿನಿಮಾ ’ಡೆಲ್ಲಿ-೬’, ಮೇಲೆ ಹೇಳಿದ ಎರಡನೆಯ ಗುಂಪಿಗೆ ಮತ್ತೊಂದು ಸೇರ್ಪಡೆ.

ರಂಗ್ ದೇಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದ ರಾಕೇಶ್, ’ಡೆಲ್ಲಿ’ಯಲ್ಲಿ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತಡವಿಕೊಂಡಿದ್ದಾರೆ. ಕೋಮುವಾದ, ಮಂದಿರ-ಮಸೀದಿಯ ಬಗ್ಗೆ ಪ್ರಮುಖವಾಗಿ ಹೇಳುತ್ತಾ, ಅಸ್ಪಶತೆ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಅದಕ್ಕೆ ಅನಿವಾಸಿ ಭಾರತೀಯರ ತೊಳಲಾಟ, ಅಶಕ್ತ ಮಹಿಳೆಯರ ಅಸಹಾಯಕತೆ, ಸ್ವಲ್ಪ ಭಗ್ನ ಪ್ರೇಮದ ಸ್ಪರ್ಶ ನೀಡಿದ್ದಾರೆ.

ರಂಗ್ ದೇ ತರನೇ ಇದರಲ್ಲೂ ಭಾರತವನ್ನು ಹೊರಗಿನವರ ಕಣ್ಣಿನಿಂದ ತೋರಿಸುವ ಶೈಲಿಯಿದೆ. ಆದರೆ ಡೆಲ್ಲಿಯ ತಾಕತ್ತಿರುವುದು ಅದರಲ್ಲಿ ಉಪಯೋಗಿಸಿದ ’ಮೆಟಾಫೆರ್’ಗಳಲ್ಲಿ ಮತ್ತು ಸೃಷ್ಟಿ ಮಾಡಿರುವ ಪಾತ್ರಗಳಲ್ಲಿ.

ತನಗೆ ಸಂಬಂಧಿಸಿದ ಆದರೂ ತಾನು ಹುಟ್ಟಿ-ಬೆಳಯದಿರುವ ದೇಶದಲ್ಲಿನ ರೋಷನ್ ಪಾತ್ರ ಕತೆಯ ಬಿಂದು. ಹಿಂದು-ಮುಸ್ಲಿಮ್-ಭಾರತೀಯ-ಅಮೇರಿಕನ್ ಹೀಗೆ ವಿಭಿನ್ನ ಎಳೆಗಳಲ್ಲಿ ತೊಳಲಾಡುವ ಪಾತ್ರ.

ಭಗ್ನ ಪ್ರೇಮಿ ಅಲಿ ಅಂಕಲ್, ಜಿಲೇಬಿ ಅಂಗಡಿಯ ಮಮ್ಡು, ಅಕ್ಕ-ಪಕ್ಕ ಮನೆಯ ಸಹೋದರರು, ವಿಧವೆ ತಂಗಿ, ಬಾಯಿ ಬಿಟ್ಟರೆ ಕಪಾಳಕ್ಕೆ ಬಾರಿಸುವ ಪೋಲಿಸ್ ಆಫೀಸರ್, ಕಸ ಹೆಕ್ಕುವ ಅಸೃಶ್ಯ ಹೆಂಗಸು, ಶನಿ ಬಾಬಾ, ಭಾರತದಲ್ಲಿ ಕಡೆಯ ದಿನಗಳನ್ನು ಕಳೆಯಬಯಸುವ ಅಜ್ಜಿ..ಹೀಗೆ ಅನೇಕ ವಿಶಿಷ್ಟ ಪಾತ್ರಗಳು, ಕತೆಯ ಓಟಕ್ಕೆ ಎಲ್ಲೂ ತಡೆ ತರುವುದಿಲ್ಲ.

ಈಡೀ ಚಿತ್ರದಲ್ಲಿ ಹಾಸುಹೊಕ್ಕಾಗಿರುವುದು ’ಮೆಟಾಫರ್’(Metaphor).

ಸಾಂಪ್ರದಾಯಿಕ ಹಿನ್ನಲೆಯ, ಹೊಸ ಕನಸುಗಳನ್ನು ಕಾಣುವ ’ಬಿಟ್ಟು’ ಎನ್ನುವ ಹುಡುಗಿಯ ಪಾತ್ರ. ಇದು ಒಂಥರ ಇಡೀ ಭಾರತದ ಪ್ರತಿನಿಧಿ.

ಹಾಗೆಯೇ ಎಲ್ಲರ ಮುಂದೆ ಕನ್ನಡಿ ಹಿಡಿದು ತಿರುಗುವ ಹುಚ್ಚ, ಎಲ್ಲಿಂದಲೋ ಬಂದು ಎಲ್ಲರ ಸ್ವಾಸ್ಥ್ಯ ಕೆಡಿಸುವ ಶನಿ ಬಾಬಾ, ಪಾಳು ಬಿದ್ದ ಮನೆ, ಮಸಕಲಿ ಅನ್ನುವ ಆ ರೆಕ್ಕೆ ಕಟ್ಟಿದ ಪಾರಿವಾಳ, ಸಂದರ್ಭಕ್ಕೆ ತಕ್ಕುದಾಗಿ ಉಪಯೋಗಿಸಿರುವ ರಾಮಲೀಲಾ ಸನ್ನಿವೇಶಗಳು.

ಎಲ್ಲಕ್ಕೂ ಕಳಶವಿಟ್ಟಂತೆ, ’ಕಾಲಾ ಬಂದರ್’ !

ಅದರೆ ತುಂಬಾ ಕಾಡುವ ಪಾತ್ರ ’ಗೋಬರ್’. ಪೆದ್ದನಾಗಿ-ಮುಗ್ಢವಾಗಿ ಮೂಡಿ ಬಂದಿರುವ ಈ ಪಾತ್ರದ ಬಗ್ಗೆ ಮತ್ತೆ ನಗಬೇಕೆನಿಸುವಾಗ, ಕೊನೆಗೆ ನಿಜವಾದ ಗೋಬರ್ ಯಾರು ಎನ್ನುವ ಪ್ರಶ್ನೆ ದುತ್ತನೆ ಎದುರಾಗುತ್ತೆ.

ಡೆಲ್ಲಿಯಲ್ಲಿ ಅನೇಕ ಕಡೆ ಪ್ರಭಾವಿ ದೃಶ್ಯಗಳಿವೆ..
ರಾಮಲೀಲಾದಲ್ಲಿ ಮುಸ್ಲಿಮ್ ಮಮ್ಡು, ರಾಮಲೀಲಾ ಮಂಡಳಿಯ ಬ್ಯಾಡ್ಜ್ ಧರಿಸಿ ಸಂಭ್ರಮದಿಂದ ಭಾಗವಹಿಸುವ ದೃಶ್ಯ ಬಂದು ಹೋಗುತ್ತೆ. ಮುಂದೆ ಅದೇ ಮಮ್ಡುವಿನ ಅಂಗಡಿಯಿಂದ ಹನುಮಾನ್ ಪೋಟೋವನ್ನು ಕಿತ್ತುಕೊಂಡು ಹೋಗುವ ಗಲಭೆಕೋರರು, ನಂತರ ಹತ್ತುವ ಮತಾಂಧತೆ, ಅದರ ಕಿಚ್ಚಿನ ಉರಿಯಲ್ಲಿ ನರಳುವ ಮಮ್ಡುವನ್ನು ನಿಯಂತ್ರಿಸಲು ರೋಷನ್ ಪಡುವ ಶ್ರಮ. ಒಂದು ಸರಳ ಮನಸ್ಸು ಮತಾಂಧತೆಗೆ ಹೊರಳುವುದನ್ನು ತೋರಿಸಿದ ಪರಿ ಅದ್ಭುತ!

ಹಾಗೇ ನ್ಯೂಯಾರ್ಕ್-ಡೆಲ್ಲಿಗಳೆರಡನ್ನೂ ಒಂದೆಡೆ ಒಟ್ಟಿಗೆ ಕಾಣುವ ಕನಸು. ನ್ಯೂಯಾರ್ಕ್ ಬೀದಿಗಳಲ್ಲಿ ಭಾರತದ ದಿನ ನಿತ್ಯದ ಜನ ಜೀವನದ ಕಲ್ಪನೆ ಸೊಗಸಾಗಿದೆ.

ಅಭಿನಯದ ದೃಷ್ಟಿಯಿಂದ ಎಲ್ಲಾ ಪಾತ್ರಗಳಲ್ಲಿ ಸಮತೂಕದ ಅಭಿನಯವಿದೆ. ಮಾತಿಗಿಂತ ಹಾವಭಾವಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನಿಸುತ್ತೆ. ರೆಹಮಾನ್ ಹಿನ್ನಲೆ ಸಂಗೀತ ಕತೆಯ ಇನ್ನೊಂದು ಪಾತ್ರವೇ ಆಗಿದೆ.

ರಂಗ್ ದೇ ತರನೇ ಇಲ್ಲೂ ರಾಕೇಶ್, ಭಾರತದ ಜ್ವಲಂತ ಸಮಸ್ಯೆಗಳ ಎಳೆಯೊಂದಿಗೆ ಚಿತ್ರ ಮಾಡಿದ್ದಾರೆ. ಆದರೆ ರಂಗ್ ದೇ ತರ ಇಲ್ಲಿ ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಇಲ್ಲಿ ಎಲ್ಲಾ ಮೆಟಾಪರ್‌ಗೆ ಬಿಡಲಾಗಿದೆ. ಹಾಗೆಯೇ ಹಿಂದಿನ ತರ ಸಮಸ್ಯೆಗಳಿಗೆ ಉತ್ತರವನ್ನು ಗನ್‍ನಿಂದ ಕೊಟ್ಟಿಲ್ಲ, ಬದಲಾಗಿ ಸಮಸ್ಯೆಗಳಿಗೆ ಉತ್ತರ ನಮ್ಮಲ್ಲೇ ಅಡಗಿದೆ ಎನ್ನುವ ಆಶಾವಾದವಿದೆ.

’ರಂಗ್ ದೇ ಬಸಂತಿ’ ಯೊಂದಿಗೆ ಹೋಲಿಸುವುದನ್ನು ಬಿಟ್ಟು, ಡೆಲ್ಲಿಯನ್ನು ನೋಡಿದರೆ ಅದು ವಿಭಿನ್ನವೆನಿಸಬಹುದು. ಆದರೆ ಆ ತರದ ’ಕಲ್ಟ್’ (Cult) ಸಿನಿಮಾಗಳ ನಂತರ ಅದರ ನಿರ್ದೇಶಕರಿಗೆ, ಹಿಂದಿನ ಚಿತ್ರದ ಭಾರ ಹೇಗೆ ಯಾವಾಗಲೂ ಅವರ ಮೇಲಿರುತ್ತೆ ಕೇಳಿ ನೋಡಿ. ಇವೆಲ್ಲದರ ಮಧ್ಯೆ ’ಡೆಲ್ಲಿ’ ಒಂದು ಉತ್ತಮ ಪ್ರಯತ್ನ.

Sunday, February 08, 2009

ಜಯ್ ಹೋ...

ಆಸ್ಕರ್‌ನವರು ಇದಕ್ಕೆ ಒಂದು ಪ್ರಶಸ್ತಿ ಕೊಟ್ಟು, ಡ್ಯಾನಿ ಬಾಯಿಲ್ ಪ್ರಶಸ್ತಿ ಸ್ವೀಕರಿಸಿ ’ಈ ಪ್ರಶಸ್ತಿ ಜಮಾಲ್‍ನಂತಹ ಎಲ್ಲಾ ಮುಂಬೈ ಸ್ಲಂ ಹುಡುಗರಿಗೆ’ ಅಂತಾ ಹೇಳಿ, ಆಮೇಲೆ ಅದರ ಬಗ್ಗೆ ಮತ್ತೆ ಚರ್ಚೆಯಾಗಿ, ಸಾಕಪ್ಪ ಇದರ ಬಗ್ಗೆ ಓದಿದ್ದು ಅನ್ನುವರೆಗೆ ಬಹುಷಃ ಇದು ನಡೀತಾ ಇರುತ್ತೆ.

ಇಲ್ಲಿ ನಮ್ಮ ಗೆಳೆಯರ ಬಾಯಿಯಲ್ಲಿ ಮೊದಲು ಕೇಳಿದಾಗ , ಮತ್ತೆ ಇದು ಯಾವುದೋ ’ರಿಯಲ್’ ಭಾರತವನ್ನು ತೋರಿಸುವ ಮತ್ತೊಂದು ಚಿತ್ರವಿರಬಹುದೇ ಅನಿಸಿತು. ಅಷ್ಟರಲ್ಲಿ ಶುರುವಾಯ್ತು ನೋಡಿ ಇಲ್ಲಿ ಪ್ರಶಸ್ತಿಗಳ ಸುಗ್ಗಿ, ಮೊದಲಿಗೆ ಹಾಲಿವುಡ್ ವಿಮರ್ಶಕರು ನೀಡುವ ಪ್ರಶಸ್ತಿಗಳಲ್ಲಿ ಮಿಂಚುವಿಕೆ, ನಂತರ ಆಕ್ಟರ್ ಗಿಲ್ಡ್ ನಲ್ಲಿ ಮುಂದುವರಿಯಿತು ಹಬ್ಬ. ಅಷ್ಟರಲ್ಲಿ ಎಲ್ಲಡೆ ಅದರ ಮಾತು.

ಅದೊಂದು ದಿವಸ ಕೆಲಸದಿಂದ ಬಂದಾಗ ನನ್ನಾಕೆ ಗರಮ್ ಆಗಿದ್ದಳು . ಆಗಿದ್ದೇನೆಂದರೆ ಅಲ್ಲಿ ಇವಳ ಜೊತೆ ಕೆಲಸ ಮಾಡುವ ಪ್ರೆಡ್ ಅನ್ನೋ ಅಮೇರಿಕನ್‍ನೊಬ್ಬ ’ಸ್ಲಂ ಡಾಗ್ ಅದ್ಬುತ ಸಿನಿಮಾ, ನಿಜವಾದ ಭಾರತ ಏನು ಅಂತಾ ಅದರಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಜನ ಇನ್ನೂ ಪಾಪ ಹಾಗೇ ಇದ್ದಾರೆ’, ಭಾರತ ಅಂದರೆ ಒಂದು ಸ್ಲಂ ಅನ್ನುವ ಹಾಗೇ ಹೇಳಿದ್ದ.

ಒಬ್ಬ ಪ್ರೆಡ್ ಗೆ ಆದಂತೆ ಈ ’ರಿಯಲ್’ ಭಾರತದ ದರ್ಶನ ಪ್ರಪಂಚದ ಬೇರೆಡೆ ಇನ್ನೂ ಅದೆಷ್ಟು ಜನರಿಗೆ ಆಗಿರಬಹುದು. ಅದೆಷ್ಟು ಜನ ಈ ’ಸ್ಲಂ ಡಾಗ್’ ಅನ್ನೋ ಮಹಾನ್ ಬೋಧಿ ವೃಕ್ಷದ ಕೆಳಗೆ ಕುಳಿತು , ೨ ತಾಸಿನ ನಂತರ ಬುದ್ಧನ ತರ ಫೋಸ್ ನೀಡುತ್ತಾ ’ಭಾರತ ಅಂದರೆ ಇಷ್ಟೇ ರೀ, ಅವರು ಐಟಿ-ಬಿಟಿ-ಚಂದ್ರ ಅಂತಾ ನಮ್ಮ ಕಣ್ಣಿಗೆ ಚಮಕ್ ತೋರಿಸ್ತಾ ಇದ್ದರು, ನೋಡಿದರೆ ಅವರು ಎಲ್ಲಿ ಶುರುಮಾಡಿದ್ದರೋ ಇನ್ನು ಅಲ್ಲೇ ಇದಾರೆ’ ಅಂತ ಮಾತಾಡಿಕೊಂಡರೇನೊ.

ಬೇರೆಯವರು ಬೇಡ, ನಮ್ಮದೇ ಬಾಲಿವುಡ್‍ನ ಪ್ರೀತಿ ಜಿಂಟಾ, ’ನಮ್ಮ ಮುಂಬೈನಲ್ಲಿ ಇಷ್ಟು ಕೊಳಚೆ-ಸ್ಲಂ ಇದೆ ಅಂತಾ ಈ ಸಿನಿಮಾ ನೋಡಿದ ಮೇಲೆ ನನಗೆ ತಿಳಿಯಿತು’ ಅಂದರೆ..

ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳೇನು ಇರಲಿಲ್ಲ. ನಿಜ ಹೇಳಬೇಕೆಂದರೆ ಚಿತ್ರ ವೀಕ್ಷಿಸುವಾಗ ಪಕ್ಕಾ ಮನೋರಂಜನಾತ್ಮಕ ಅನಿಸಿತ್ತು. ಚಿತ್ರದ ನಿರೂಪಣೆ ಮತ್ತೆ ಛಾಯಾಗ್ರಹಣ ಹಿಡಿದಿಟ್ಟಿದ್ದು ನಿಜ. ಆಶಾದಾಯಕವಾದ ಅಂತ್ಯವಾದ್ದರಿಂದ ಒಂದು ತರಹ ಫೀಲ್ ಗುಡ್.

ಅದು ನೋಡಿ ಸ್ಪಲ್ಪ ದಿವಸಕ್ಕೆ ಇಲ್ಲಿ ಓಬಾಮನ ಅಧಿಕಾರ ಸ್ವೀಕಾರ ನಡೆದಿದ್ದು ಆಯ್ತು. ನಿಜಕ್ಕೂ ಪ್ರತಿಭೆಯುಳ್ಳ ’ಅಂಡರ್ ಡಾಗ್’ನನ್ನು ಜನ ಹೇಗೆ ಕೈ ಹಿಡಿದು ಮೇಲೆ ಎತ್ತುತ್ತಾರೆಂದು ಅನಿಸಿತು. ಹಾಗೆ ಕೆಳವರ್ಗದ, ತುಳಿತಕ್ಕೆ ಒಳಗಾದವರಿಂದ ಒಬ್ಬ ಮೇಲೆ ಬಂದರೆ ಆ ಕತೆಯನ್ನು ಜನ-ಮಾಧ್ಯಮ ಹೇಗೆ ಇಷ್ಟಪಡುತ್ತಾರೆಂದು ಗೊತ್ತಾಗಿದ್ದು ಆವಾಗಲೇ. ಬಹುಷಃ ಅದೇ ಕಾರಣಕ್ಕೇ ಜಮಾಲ್‍ನ ಕತೆ ನಮಗೂ ಇಷ್ಟವಾಗಿರಬಹುದು ಅನಿಸಿತ್ತು.

ಆದರೆ ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಕತೆಯಲ್ಲಿ ಎಷ್ಟೊಂದು ಕಂದಕಗಳಿದ್ದವು.

’ಅಂಡರ್ ಡಾಗ್’ ವಿಷಯದಲ್ಲಿ ಭಾರತೀಯರು ತೋರಿಸುವ ಮೆಚ್ಚುಗೆ-ಕುತೂಹಲ ಗೊತ್ತಿದ್ದದ್ದೆ. ಅಲ್ಲಿ ಒಬ್ಬ ’ಗೋವಿಂದ್ ಜಸ್ವಾಲ್’ ಐಎ‍ಎಸ್ ಪರೀಕ್ಷೆಯಲ್ಲಿ ರಾಂಕ್ ಬಂದಾಗ, ಆತ ಬಡ ಕಾರ್ಮಿಕನ ಮಗನೆಂದು-ಎಷ್ಟು ಶ್ರಮಪಟ್ಟಿದ್ದನೆಂದು , ಮಾಧ್ಯಮದವರು ಅದರ ಬಗ್ಗೆ ಪ್ರಶಂಸಿ ಬರೆದಿದ್ದು ನೆನಪಿರಬಹುದು. ಅದೇ ರೀತಿ ಅದನ್ನು ಕೇಳಿದ-ಓದಿದ ನಾವೆಲ್ಲಾ ಮೆಚ್ಚುಗೆ ಸೂಚಿಸಿದ್ದೆವು. ತುಂಬಾ ಕಷ್ಟ ಪಟ್ಟು ಮೇಲೆ ಬಂದವರ ಬಗ್ಗೆ ನಮ್ಮ ಮೆಚ್ಚುಗೆ ಇದ್ದೇ ಇರುತಿತ್ತು.
ಹೀಗಿರುವಾಗ ಜಮಾಲ್‍ನನ್ನು ’ಚಾಯ್‍ವಾಲ’ ಅಂತಾ ಗೇಮ್ ಶೋ ದಲ್ಲಿ ಹಾಸ್ಯ ಮಾಡಿದ್ದು, ಅವನನ್ನು ಪೋಲಿಸ್‍ಗೆ ಒಪ್ಪಿಸಿದ್ದು...ಭಾರತದಲ್ಲಿ ಎಲ್ಲಿ ಮಾಡ್ತಾರೆ?

ಹಾಗೇ ಇನ್ನೊಂದೆಡೆ ಇರುವ ’ರಿಯಲ್ ಅಮೇರಿಕನ್’ ಸನ್ನಿವೇಶ. ಇದು ನನಗೆ ತುಂಬಾ ನಗು ತರಿಸಿದ ವಿಷಯ. ಈ ಚಿತ್ರವಿರೋದು ಭಾರತದ ಬಗ್ಗೆ, ಚಿತ್ರ ಮಾಡುತ್ತಾ ಇರೋದು ಒಬ್ಬ ಬ್ರಿಟಿಷ್, ಅದರ ಅಲ್ಲಿ ನೂರು ಡಾಲರ್ ಕೊಡಿಸಿ ’ರಿಯಲ್ ಅಮೇರಿಕ’ ತೋರಿಸುವ ಅವಶ್ಯಕತೆ ಎಲ್ಲಿತ್ತು? ಬಹುಷಃ ಅಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿನ ಅಮೇರಿಕನ್‌ರನ್ನು ಪಟಾಯಿಸಲಿಕ್ಕೆ ಇರಬಹುದೇ ಈ ಡೈಲಾಗು !

ಮತ್ತೊಂದು ಅತೀ ಅನಿಸುವಷ್ಟು ಇದ್ದ ಆ ಅಮಿತಾಭ್ ಆಟೋಗ್ರಾಫ್ ಸನ್ನಿವೇಶ. ನಿಜ, ಅಲ್ಲಿ ಹಾಗೇ ಇರಬಹುದು. ಆದರೆ ಅದನ್ನು ವೈಭವೀಕರಿಸಿ ಅಷ್ಟು ತೋರಿಸುವ ಅವಶ್ಯಕತೆ ಇತ್ತೇ?

ಅವಶ್ಯಕತೆ ಇತ್ತು..ಇಲ್ಲದಿದ್ದರೆ ನಮ್ಮ-ನಿಮ್ಮಂತಹವರು ಇದರ ಬಗ್ಗೆ ಮಾತಾಡುತ್ತಿದ್ದವೆ? ಗೊತ್ತಿಲ್ಲದ ಹಾಗೆ ಪುಗಸಟ್ಟೆ ಪಬ್ಲಿಸಿಟಿ ನೀಡುತ್ತಿದ್ದವೆ? ಆಸ್ಕರ್ ಅನ್ನೋ ಆ ಮಹಾನ್ ಶಂಖದಿಂದ ಬರುವ ತೀರ್ಥದ ಹತ್ತಿರ ಇದಕ್ಕೆ ಹೋಗಲಿಕ್ಕೆ ಆಗುತಿತ್ತೆ?

ಇದೇನೂ ಸಾಮಾಜಿಕ ಕಾಳಜಿ ಇಟ್ಟುಕೊಂಡು ಮಾಡಿದ ಚಿತ್ರವಲ್ಲ.’ಪಥೇರ್ ಪಂಚಲಿ’ಯ ಹಾಗೆ ಬಡತನದ ಬಗ್ಗೆ ಮರುಗುವಂತೆ ಮಾಡುವುದಿಲ್ಲ, ಹಾಗೇ ಸ್ಲಂ‍ನ ಕ್ರೂರತೆ-ಆಪರಾಧದ ತೆರೆದಿಡುವ ’ಸಿಟಿ ಆಫ್ ಗಾಡ್’ ಕೂಡ ಅಲ್ಲ. ಇದು ಕೇವಲ ಮನೋರಂಜನಾತ್ಮಕ ಚಿತ್ರ !

ಆದರೆ ಜಿಗುಪ್ಸೆ ತರಿಸಿದ್ದು ಪಾಶ್ಚಾತ್ಯರ ನಿಲುವುಗಳು. ಯಾವುದೋ ಒಂದು ೨ ಗಂಟೆ ಸಿನಿಮಾ ನೋಡಿ, ಭಾರತವನ್ನು ಆಳೆಯುವುದು. ಏನೇ ಮಾಡಿದರೂ ಇವರಿನ್ನು ಅಲ್ಲಿಂದ ಮುಂದೆ ಬೆಳೆದೇ ಇಲ್ಲಾ ಅನ್ನುವ ಅದೇ ಗತಕಾಲದ ಗತ್ತಿನ ನಡವಳಿಕೆ.

ಹಾಗಂತ ಭಾರತದಲ್ಲಿ ಅಲ್ಲಿ ತೋರಿಸಿದ್ದು ಯಾವುದು ಇಲ್ಲವೇ ಇಲ್ಲಾ ಅಂತಲ್ಲ. ಅದೇ ರೀತಿ ಕರಣ್ ಜೋಹರ್-ಸೂರಜ್ ಭಾರತ್ಯಾಜ ಚಿತ್ರಗಳಲ್ಲಿದ್ದಂತೆ ಜನ ಚಮಕ್ ಶೆರ್ವಾನಿ-ಗಾಗ್ರ-ಚೋಲಿಗಳಲ್ಲಿ ಯಾವಾಗಲೂ ಮಿಂಚುತ್ತಾ ಇರುತ್ತಾರೆಂಬುದು ಸುಳ್ಳು.

ಭಾರತ ಇವೆರಡು ಅಲ್ಲಾ. ಅದು ಇವುಗಳ ಮಧ್ಯೆದಲ್ಲೆಲೋ ಇದೆ.

ನೂರು ಕೋಟಿ ಜನಸಂಖ್ಯೆಯಿಟ್ಟುಕೊಂಡೂ, ಭಾಷೆ-ಜಾತಿ-ಪ್ರಾಂತ್ಯ ಅಂತೆಲ್ಲಾ ಭಿನ್ನಾಭಿಪ್ರಾಯಗಳಿದ್ದೂ, ನಾವು ಮುನ್ನಡೆಯುತ್ತಿದ್ದೇವೆ. ಹೌದು, ಈಗಲೂ ನಮ್ಮಲ್ಲಿ ಸ್ಮಂ ಗಳಿವೆ, ಜನ ಮೂಲಭೂತ ಸೌಕರ್ಯಗಳಿಗೆ ಪರದಾಡುತ್ತಿದ್ದಾರೆ. ಆದರೂ ನಾವು ಕನಸು ಕಾಣುವುದು ನಿಲ್ಲಿಸಿಲ್ಲ. ಅದು ನಿಜವಾದ ಭಾರತ.

ಹೊಸ ಗಾದೆ: ಸಿನಿಮಾಗೆ ಆಸ್ಕರ್ ಬೇಕು ಅಂತಾ ಕೇಳಿದರೆ, ಅದರಲ್ಲಿ ಭಾರತದ ಸ್ಲಂ ಇದೆಯಾ ಅಂದರಂತೆ !

ಜಯ್ ಹೋ !