Sunday, June 04, 2006

ಮಾಮರವೆಲ್ಲೋ..ಮೇಕೆ ಹಾಲೆಲ್ಲೋ


ಮನೆ ಹತ್ತಿರ ಇರುವ ಅಂಗಡಿಗೆ ಹೊಕ್ಕು ವಾರಕ್ಕೆ ಬೇಕುವಾಗ ದಿನಸಿ,ತರಕಾರಿ,ಹಣ್ಣು,ಹಾಲು ಇತ್ಯಾದಿಗಳನ್ನು ಖರೀದಿಸುತ್ತಿರುವಾಗಲೇ ಕಣ್ಣಿಗೆ ಬಿದ್ದದ್ದು 'ಪ್ರೋಸನ್ ಮ್ಯಾಂಗೋ'.ಮಾವಿನಕಾಯಿಯನ್ನು ತುಂಡು ತುಂಡಾಗಿಸಿ ಅದನ್ನು ಒಂದು ಬಾಟಲಿನಲ್ಲಿ ಸಂಸ್ಕರಿಸಿದ್ದು.

ಆ ಮಾವಿನಕಾಯಿಯನ್ನು ನೋಡಿದ್ದೆ ನನ್ನ ಮನ ಶರವೇಗದಲ್ಲಿ ಪ್ಲಾಶ್‍ಬ್ಯಾಕ್‍ನಲ್ಲಿ ಹೋಗಿಬಿಟ್ಟಿತು.

ಆಗ ನಾನು ಪ್ರಾಥಮಿಕ ಶಾಲೆಯಲ್ಲಿದ್ದೆ.ವಾರ್ಷಿಕ ಪರೀಕ್ಷೆಯ ಫಲಿತಾಂಶ ನೋಡಿಕೊಂಡು ಮನೆಗೆ ಬಂದರೆ ಅಮ್ಮನ ಕೈಯಲ್ಲಿ ಬ್ಯಾಗು.ಎಲ್ಲಿಗೆ ಹೋಗ್ತಿದಿವಿ ಅಂತಾ ಕೇಳುವಷ್ಟರಲ್ಲಿ ನಮ್ಮ ಚಿಕ್ಕಪ್ಪ 'ಬೇಸಿಗೆ ರಜಕ್ಕೆ ನಿಮ್ಮನ್ನು ನಮ್ಮ ಹಳ್ಳಿಗೆ ಕರಕೊಂಡು ಹೋಗುತ್ತಿದ್ದಿನಿ'.

ದಾವಣಗೆರೆಗೆ ಹೋಗಿ ಅಲ್ಲಿಂದ ಖಾಸಗಿ ಬಸ್ಸೊಂದನ್ನೇರಿ, ಅದರಲ್ಲಿದ್ದ ಎರಡು ಬಸ್ಸಿಗೆ ಆಗುವಷ್ಟಿದ್ದ ಜನರ ಮಧ್ಯ ಸೀಟೊಂದನ್ನು ಗಿಟ್ಟಿಸಿ,ಶ್ಯಾಗಲೆ ಅನ್ನುವ ಆ ಹಳ್ಳಿಯನ್ನು ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು. ಮರುದಿನ ಚಿಕ್ಕಪ್ಪ ಹೊಲಕ್ಕೆ ಹೊರಟು ನಿಂತಾಗ ಚಿಕ್ಕಮ್ಮ 'ಇವ್ನು ಯಾಕೆ ಕರಕೊಂಡು ಹೋಗಬಾರದು'ಅಂತಾ ತಾಕೀತು.ಸರಿ, ಚಿಕ್ಕಪ್ಪನ ಜೊತೆ ಹೊಲಕ್ಕೆ ಹೆಜ್ಜೆ ಹಾಕಿದ್ದಾಯಿತು. ಅಲ್ಲಿ ತಲುಪಿದಾಗಲೇ ತಿಳಿದದ್ದು ಅದು ಹೊಲ ಅಲ್ಲ ಅದು ಮಾವಿನ ತೋಪು.

ಮೊದಲ ದಿನ ಕೆಲಸಕ್ಕೆ ಸೇರಿಕೊಂಡ ಉದ್ಯೋಗಿಯನ್ನು ಮೆನೇಜರ್ ಕರೆದು ಕೆಲಸದ ಬಗ್ಗೆ ತಿಳಿಹೇಳುವಂತೆ, ಚಿಕ್ಕಪ್ಪನಿಂದ ಮಾವಿನ ತೋಪಿನಲ್ಲಿ ನಾನು ಮಾಡಬೇಕಿರುವ ಕೆಲಸದ ಬಗ್ಗೆ ಬ್ರೀಫಿಂಗ್ ! ನನ್ನ ಕೆಲಸ ತೋಪಿನಲ್ಲಿರುವ ಮಾವಿನಕಾಯಿಗಳನ್ನು ಕಾಯುವುದು.ನಾನು ಕಣ್ಣಿಟ್ಟು ಮಾವಿನಕಾಯಿಗಳನ್ನು ಕಾಯಬೇಕಿರುವುದು ದನ-ಎಮ್ಮೆ-ಮೇಕೆ ಕಾಯುವ ಹುಡುಗರಿಂದ.ಆ ದನಗಾಹಿಗಳು ತೋಟದಲ್ಲಿ ಕಂಡ ತಕ್ಷಣ ಒಂದು ಕೂಗು ಹಾಕುವುದು ನನ್ನ ಕೆಲಸ. ಹತ್ತಿರವೇ ಇರುವ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿಕ್ಕಪ್ಪನಿಗೆ ನನ್ನ ಕೂಗು ಒಂದು ಅಲರ್ಟ್ ಸಿಗ್ನಲ್.

ಚಿಕ್ಕಮ್ಮ ಮಧ್ಯಾಹ್ನ ಊಟ ತಗೊಂಡು ಬಂದಾಗಲೇ ಗೊತ್ತಾಗಿದ್ದು ಮಧ್ಯಾಹ್ನ ಆಗಿದೆಯಂತ.ಮಾವಿನ ಮರದ ತಂಪಿನಲ್ಲಿ ಕುಳಿತು ರೊಟ್ಟಿ-ಚಟ್ನಿ-ಬುತ್ತಿ ತಿನ್ನುವಾಗ ಅದುವೇ ಅಮೃತ.ಊಟದ ನಂತರ ಪಕ್ಕದಲ್ಲಿಯೇ ಹರಿಯುತ್ತಿದ್ದ ತೊರೆಯಲ್ಲಿ ಕುಡಿಯಲು ನೀರು.ಊಟದ ನಂತರ ಮತ್ತೆ ಶುರು ಕಾವಲು ಕಾರ್ಯ.ಆಗಾಗ ಮಾವಿನಕಾಯಿ ರುಚಿ ನೋಡಲು ಅವಕಾಶ.ಮಧ್ಯಾಹ್ನ ವಿಪರೀತ ಬಿಸಿಲು ಜಾಸ್ತಿಯಾಗುತ್ತಿದಂತೆ ತೊರೆಯಲ್ಲಿ ಸ್ನಾನ-ನೀರಾಟ-ದೋಣಿ ಆಟ.

ಸಂಜೆ ಆಗುತ್ತಿದಂತೆ ಮನೆಗೆ ವಾಪಸಾಗುವ ತಯಾರಿ. ಆ ಸಮಯಕ್ಕೆ ಸರಿಯಾಗಿ ಎಲ್ಲ ಎಮ್ಮೆ-ದನದ ಹಿಂಡುಗಳು ಮನೆ ಕಡೆಗೆ.ಆ ರೀತಿ ಸಂಜೆ ದೂಳೆಬ್ಬಿಸುತ್ತ ಹೊರಟ ದನದ ಹಿಂಡಿನ ಹಿಂದೆ ನಮ್ಮ ಸವಾರಿ.'ಗೋದೂಳಿ' ಪದದ ಅರ್ಥವಾಗಿದ್ದು ಆಗ.ಮನೆಗೆ ಬಂದೊಡನೆ ತೋಟದಿಂದ ತಂದ ಮಾವಿನಕಾಯಿ ಅಮ್ಮ-ಚಿಕ್ಕಮ್ಮನಿಗೆ ಅರ್ಪಣೆ.ರಾತ್ರಿ ಊಟದಲ್ಲಿ ಮಾವಿನಕಾಯಿ ಚಟ್ನಿ ಹಾಜರ್!

ಈ ದಿನಚರಿ ಹೀಗೆ ನಡೆಯಿತು ಕೆಲವು ದಿನ.ಅದೊಂದು ದಿನ ಕಾವಲು ಮಾಡುವಾಗ ನೋಡಿದರೆ ದನಗಾಹಿಯೊಬ್ಬ ತೋಟದಲ್ಲಿ ಕಾಣಬೇಕೇ.ಇನ್ನೇನು ಕೂಗು ಹಾಕಬೇಕುವೆನ್ನುವಷ್ಟರಲ್ಲಿ ಅವನ ಜೊತೆ ಚಿಕ್ಕಪ್ಪ..ಬಹುಷಃ ಮಾವಿನಕಾಯಿ ಕದಿಯಲು ಬಂದಾಗ ಸಿಕ್ಕಿಬಿದ್ದಿರಬೇಕು ಅಂದುಕೊಂಡು ಅಲ್ಲಿಗೆ ಹೋದರೆ, ಆಶ್ಚರ್ಯ ಕಾದಿತ್ತು.ಚಿಕ್ಕಪ್ಪ ಅವನಿಗೆ ಸಾಕಷ್ಟು ಮಾವಿನಕಾಯಿ ಕೊಡಬೇಕೇ ! ಆ ದನಗಾಹಿ ಮಾವಿನಕಾಯಿ ತಗೊಂಡು ನಂತರ ಚಿಕ್ಕಪ್ಪನ ಜೊತೆ ಹೊರಟ.ನೀನು ಬಾ ಎಂಬಂತೆ ನನಗೆ ಸನ್ನೆ.

ಆ ಹುಡುಗ ಕರೆದುಕೊಂಡು ಹೋಗಿದ್ದು ಅವನ ಮೇಕೆ ಹಿಂಡಿನ ಹತ್ತಿರ. ಒಂದು ಮೇಕೆಯನ್ನು ಕರೆದುಕೊಂಡು ಬಂದು ಚಿಕ್ಕಪ್ಪನ ಹತ್ತಿರವಿದ್ದ ಚೊಂಬಿನಲ್ಲಿ ಸರಸರ ಅಂತ ಹಾಲು ಕರೆದುಬಿಟ್ಟ. ನಂತರ ನನ್ನೆಡೆಗೆ ನೋಡಿ 'ಮೇಕೆ ಹಸಿ ಹಾಲು ಕುಡಿದಿಯಾ ಯಾವಾಗಲದರೂ' ಎಂದಾಗ ನಾನು ಕಕ್ಕಾಬಿಕ್ಕಿ. ಚಿಕ್ಕಪ್ಪ 'ಪಟ್ಟಣದ ಹುಡುಗ ಬಹುಷಃ ಮೇಕೆನೇ ನೋಡಿಲ್ಲ, ಹಾಲು ಎಲ್ಲಿಂದ ಬರಬೇಕು' ಅನ್ನುತ್ತ ನಕ್ಕಿದ್ದೆ ನಕ್ಕಿದ್ದು.

ಚಿಕ್ಕಪ್ಪ ಹಾಲಿನ ಚೊಂಬು ನನಗೆ ಕೊಡುತ್ತ ರುಚಿ ನೋಡು ಅಂದಾಗೆ, ಆ ಮೇಕೆ ಹುಡುಗ 'ಆ ಚೊಂಬಿನಲ್ಲಿ ಆಮೇಲೆ ಕುಡಿ, ಈಗ ಇಲ್ಲಿ ಬಾ' ಅಂದ.ನನ್ನನ್ನು ನೆಲದ ಮೇಲೆ ಬಾಗಿ ಕುಳಿತುಕೊಳ್ಳುವಂತೆ ಹೇಳಿ, ಆ ಮೇಕೆ ಕೆಚ್ಚಲಿನಿಂದ ನೇರವಾಗಿ ನನ್ನ ಬಾಯಿಗೆ ಹಾಲು ಬೀಳುವಂತೆ ಕರೆಯತೊಡಗಿದ.ನಮ್ಮ ಹಾಲಿನವ ಕೊಡುತ್ತಿದ್ದ ನೀರಿನಂತ ಹಾಲಿಗಿಂತ ಗಟ್ಟಿ ಮತ್ತು ರುಚಿ. ಹಾಲು ಆಗಾಗ ಬಾಯಿಗೆ ಬೀಳದೆ ಮುಖದ ಮೇಲೆ ಬಿದ್ದಾಗ ಹಾಲಿನ ಅಭಿಷೇಕ!

ಈ ಮಾವು ಕಾಯುವ ಕಾಯಕ ನನ್ನ ಬೇಸಿಗೆ ರಜೆ ಮುಗಿಯುವರೆಗೆ ನಡೆಯಿತು...ಆ ನಡುವೆ ಆ ದನಗಾಹಿಗಳೊಂದಿಗೆ ಬೆಳೆದ ಸ್ನೇಹ,ಸಂಜೆ ಮನೆಗೆ ಮರುಳುವಾಗ ಅವರ ಎಮ್ಮೆಯ ಮೇಲೆ ಕುಳಿತು ಮಾವಿನಕಾಯಿ ತಿನ್ನುತ್ತಾ ಸವಾರಿ. ಎಷ್ಟೊಂದು ಸುಮಧುರ ಆ ನೆನಪುಗಳು..

ಶ್ಯಾಪಿಂಗ್ ಮಳಿಗೆಯಲ್ಲಿ '2% fat milk' ಡಬ್ಬಿಯನ್ನು ಮತ್ತು 'frozen cut mango' ನೋಡಿ ಮುಖದ ಮೇಲೆ ಮಂದಹಾಸ.

ನೊರೆಭರಿತ ಮೇಕೆ ಹಾಲಿನ ನೆನಪು...

ತೋಟದಲ್ಲಿ ಉಪ್ಪಿನ ಜೊತೆ ತಿಂದ ಮಾವಿನಕಾಯಿಯ ನೆನಪು..

7 comments:

bhadra said...

ಸಿಂಹಾವಲೋಕನವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಆ ದಿನಗಳು ಮತ್ತೆ ಬರುವುವೇ? ಬಾರದು. ನಮ್ಮ ಮುಂದಿನ ಪೀಳಿಗೆಗೆ ಅಂತಹ ನಿಸರ್ಗದ ಸೊಬಗು ನೋಡಲು ಸಿಗದು. ಹಳ್ಳಿಗಳಲ್ಲಿ ಬೆಳೆಯುವ ಮುಗ್ಧ ಮೇಕೆಗಳು ಇನ್ನೆಲ್ಲಿ, ಎಲ್ಲರಿಗೂ ನಾಗರಿಕ ಜೀವನ ಬೇಕಂತೆ. ಜೀವಿತ ಮಾಡಲು, ನಗರ ಪ್ರದೇಶಗಳಲ್ಲಿ ಬೆಳೆಯುವ ಕಾಂಕ್ರೀಟ್ ಕಾಡುಗಳಲ್ಲಿ ಮೇಯುವ ಗುಳ್ಳೆನರಿಗಳಾಗಬೇಕಾದೀತಷ್ಟೆ. ಲೇಖನದ ಜೊತೆ ಇರುವ ಗಿಣಿಮೂತಿ ಮಾವಿನಕಾಯಿ ನೋಡಿ ಬಾಯಲ್ಲಿ ನೀರೂರುತ್ತಿದೆ. ಇನ್ನು ಮೇಕೆ ಹಾಲು ಬೇರೆ ನೆನಪಿಸಿಬಿಟ್ರಿ. ವಾರಂತ್ಯಕ್ಕೊಂದು ಒಳ್ಳೆಯ ಲೇಖನದ ಕೊಡುಗೆ.

Anveshi said...

ಶಿವಶಂಕರ್ ಅವರೆ,
ಹೊಸ ಬ್ಲಾಗ್ ನೋಡಿ ಉರಿದುಹೋಯಿತು! ಏನಂತ ಕೇಳ್ತೀರಾ?
ಅದೇ ಸ್ವಾಮಿ, ಹೊಟ್ಟೆ ಅಲ್ಲಾ... ಕನ್ನಡದ ಬ್ಲಾಗ್ ಜಗತ್ತಿನಲ್ಲಿ ಮತ್ತೊಂದು ಹಣತೆ ಉರಿಯಿತು ಅಂತ! ತಪ್ಯಾಕೆ ತಿಳಕೋತೀರಿ?

ಆಮೇಲೊಂದು ಮಾತು. ಪಾತರಗಿತ್ತಿ ಪಕ್ಕ ಶೀರ್ಷಿಕೆ ಚೆನ್ನಾಗಿದೆ. ನನಗೂ ಬಣ್ಣ ಬಣ್ಣದ ಚಿಟ್ಟೆಗಳನ್ನು ಕಂಡ್ರೆ ತುಂಬಾ ಇಷ್ಟರೀ...!

Vishwanath said...

ಶಿವಶಂಕರ್ ಅವರೇ,
ಬಣ್ಣದ ಚಿಟ್ಟೆ ಪಾತರಗಿತ್ತಿ- ಬ್ಲಾಗ್ ವನಕ್ಕೆ ಹಾರಿ ಬಂದಿದ್ದು ಸಂತೋಷ.

ಮಾವಿನ ಕಾಯಿ-ಹಣ್ಣಿನ ಈ ಸುಗ್ಗಿಯಲ್ಲಿ ಮಾವಿನ ತೋಪಿನ ವಿವರಣೆ ನಿಜಕ್ಕೂ ಬಾಯಲ್ಲಿ ನಿರೂರಿಸಿತು. ಚಿಟ್ಟೆ ಇನ್ನೂ ನೂರಾರು ವನಗಳಿಗೆ ಹಾರಿ ಬಂದು ಅದರ ಮಕರಂದವನ್ನು ಬ್ಲಾಗ್ ಎಂಬ ಜೇನುಗೂಡಿನಲ್ಲಿ ಕಟ್ಟಲಿ. ಗೂಡು ದೊಡ್ಡದಾಗಲಿ, ಸಿಹಿಯಾಗಲಿ...

ಈ ಬ್ಲಾಗಿನ ಹಿಂದೆ ಸಹೃದಯಿ ಶ್ರೀನಿವಾಸರ ಕೈಯೂ ಇದೆ ಎಂದು ಕೇಳಿ ತುಂಬಾ ಸಂತಸವಾಯಿತು. ಬಹುಪಾಲು ಕನ್ನಡ ಬ್ಲಾಗುಗಳಿಗೆ ಶ್ರೀನಿವಾಸರ ಸಲಹೆ, ಸೂಚನೆ, ಮೆಚ್ಚುಗೆ ನಿಜಕ್ಕೂ ಶ್ಲಾಘನೀಯ.

ಶ್ರೀನಿವಾಸರ ಸಂತತಿ ಹೆಚ್ಚಾಗಲಿ.

ನಮಸ್ಕಾರ.

-ವಿಶ್ವನಾಥ

Sree said...

ನನಗೆ ಮಾವಿನ ತೋಪಿನಲ್ಲಿ ಆಡೊ ಭಾಗ್ಯ ಇರ್ಲಿಲ್ಲವಾದ್ರೂ ಸ್ಕೂಲ್ ದಿನಗಳ ಮಾವಿನಕಾಯಿ ಪ್ರೀತಿ ನೆನಪಾಯ್ತು! ಕಥೆ ಚೆನ್ನಾಗಿ ಹೇಳ್ತೀರ:)

Shiv said...

ಶ್ರೀನಿವಾಸ್ ಅವರೇ,
ಮರಳಿ ಬಾರದು ಆ ದಿನಗಳು. ಈಗ ಎಲ್ಲಿ ಸಿಗುತ್ತೆ ಆ ತೋಪುಗಳು..ಎಲ್ಲಿಂದ ತರೋದು ಆ ತೊರೆಗಳನ್ನು ..

ಅಸತ್ಯಾನ್ವೇಷಿಗಳೇ,
ಧನ್ಯವಾದಗಳು..ನಿಮಗೆ ಬಣ್ಣ ಬಣ್ಣದ ಚಿಟ್ಟೆ ಇಷ್ಟ ಅಂದ್ರಿ..ಅದರಲ್ಲಿ ಎನಾದರೂ ಗೂಢಾರ್ಥವಿದೆಯೇ :)

ವಿಶ್ವನಾಥ,
ನಿಮ್ಮ ಹಾರೈಕೆಗೆ ನನ್ನ ಧನ್ಯವಾದಗಳು..
ನೀವು ಹೇಳೋದು ಸರಿ..ಶ್ರೀನಿವಾಸ್‍ ಅವರು ನಮ್ಮಂತ ಅನೇಕ ಕನ್ನಡಿಗರಿಗೆ ಅಣ್ಣ..

ಶ್ರೀ,
ಶಾಲೆ ಹೊರಗಡೆ ಮಾರುತ್ತಿದ್ದ ಮಾವಿನಕಾಯಿ ನೆನಪಾಯಿತೆ..
ಕಥೆ ಚೆನ್ನಾಗಿ ಹೇಳ್ತೀನಾ...ಥ್ಯಾಂಕ್ಸ್ ರೀ :))

Susheel Sandeep said...

ಆಹಾ!
ಮಾವಿನ ಹಣ್ಣು - ಅದು ರಸಪೂರಿಯಾಗಲಿ, ತೋತಾಪುರಿಯಾಗಲಿ,ಬಾದಾಮಿ-ಮಲ್ಗೋಬಾ - ಹಣ್ಣುಗಳ ರಾಜನನ್ನು ನೆನಪಿಸಿದ್ದಕ್ಕೆ dv'ಗಳು!
ಮೇಕೆಯ ಹಾಲಿನ ರುಚಿ ನನಗೆ ತಿಳಿದಿಲ್ಲವಾದರೂ ನಿಮ್ಮ ಬ್ಲಾಗಿನಿಂದ ಒಂದು ಕಲ್ಪನೆ ಬಂದಿದೇ!
ನಿಮ್ಮ ಪಾತರಗಿತ್ತಿಯ ಹಾರಾಟ ಹೀಗೇ ಸುಗಮವಾಗಿ ಸಾಗಲಿ.

@ತ.ವಿ.ಶ್ರೀ - ಈ ಲಿಂಕು ಕೋಟ್ಟಿದ್ದಕ್ಕೆ ಬಹಳ ಥ್ಯಾಂಕ್ಸು!

Shiv said...

ಸುಸಂಕೃತರೇ,
ನಿಮ್ಮ ಭೇಟಿಗೆ ವಂದನೆಗಳು..
ಬಹು ಸೊಗಸಾಗಿದೆ ನಿಮ್ಮ ಹೆಸರು..
ಹೀಗೆ ನಿಮ್ಮ ಅಭಿಪ್ರಾಯಗಳನ್ನು ನೀಡುತ್ತಿರಿ..