ಪಾತರಗಿತ್ತಿ ಪಕ್ಕ (paataragitti pakka)

Sunday, August 03, 2008

ಒಂದು ವೈಪರ್‍ನ ಕತೆ..

ಆ ವ್ಯಕ್ತಿಯ ಹೆಸರು ರಾಬರ್ಟ್ ಬಾಬ್ ಕಿಯಾರ್ನ್.

ಕೆಲವೊಮ್ಮೆ ಯಾವಾಗಲೋ ತಲೆಯಲ್ಲಿ ಮಿಂಚಿನಂತೆ ಸುಳಿದುಹೋಗುವ ಯೋಚನೆಗಳು ಹೇಗೆ ಜೀವನವನ್ನು ಬದಲಾಯಿಸಬಹುದು ಎನ್ನುವುದಕ್ಕೆ ರಾಬರ್ಟ್ ಜೀವನವೇ ಸಾಕ್ಷಿ.

ನೀವು ಕಾರ್ ಡ್ರೈವ್ ಮಾಡುವಾಗ ಅಥವಾ ಬಸ್ ಅಥವಾ ಆಟೋದಲ್ಲಿ ಹೋಗುವಾಗ, ಮಳೆ ಶುರುವಾದಾಗ, ವಾಹನದ ವಿಂಡ್‍ಶೀಲ್ಡ್‌‍ನ ಮೇಲಿನ ನೀರನ್ನು ಒರೆಸಿ ಚಾಲಕರಿಗೆ ರಸ್ತೆ ಕಾಣುವಂತೆ ಮಾಡುವ ಚಿಕ್ಕ ಕೋಲಿನಂತಹದದ್ದನ್ನು ನೋಡಿರಬಹುದು. ಮೊದಲೆಲ್ಲ ಕಾರ್‍ಗಳಲ್ಲಿ ಇದ್ದ ವೈಪರ್‌ಗಳು ಸ್ವಯಂಚಾಲಿತವಾಗಿರಲಿಲ್ಲ.

ಈ ರಾಬರ್ಟ್‍ನ ಜೀವನ ಈ ವೈಪರ್ ಸುತ್ತ ತಿರುಗಿದ್ದೆ ಒಂದು ಕಥನ.

ಅದು ಐವತ್ತರ ದಶಕ. ಆವಾಗೆಲ್ಲ ಮಳೆ ಬರುವಾಗ ಕಾರಿನ ಗಾಜಿನ ಮೇಲೆನ ನೀರು ಒರೆಸಲು ಚಾಲಕರು ಆ ವೈಪರ್‌ನ್ನು ನೀರು ಹೋಗುವವರೆಗೆ ತಾವೇ ತಿರುಗಿಸಬೇಕಿತ್ತು.

ಆ ದಿನಗಳಲ್ಲಿ ಈ ರಾಬರ್ಟ್‍ನ ಮದುವೆ ನಡೆಯಿತು. ಮದುವೆ ದಿನದ ಪಾರ್ಟಿಯಲ್ಲಿ, ಆಕಸ್ಮಿಕವಾಗಿ ಚಿಮ್ಮಿದ ಶಾಂಪೇನ್‍ನ ಮುಚ್ಚಳ ರಾಬರ್ಟ್‍ನ ಎಡಗಣ್ಣಿಗೆ ಹೊಡೆಯಿತು.ಕಣ್ಣಿಗೆ ಏನಾದರೂ ಬಡಿದಾಗ, ಕಣ್ಣು ರೆಪ್ಪೆ ಪಟಪಟ ಅಂತಾ ಮುಚ್ಚಿ ತೆಗೆಯುವುದು ಮಾಡುತ್ತಿರುತ್ತೆ ಅಲ್ವಾ. ರಾಬರ್ಟ್‍ಗೆ ಹೊಳೆದಿದ್ದು ,ಕಣ್ಣು ರೆಪ್ಪೆ ಹೇಗೆ ನಿಯಿಮಿತವಾಗಿ ಹೊಡೆದುಕೊಳ್ಳುತ್ತೋ, ಹಾಗೇ ಈ ವೈಪರ್ ನಿಯಮಿತವಾಗಿ ತಿರುಗುವಂತೆ ಮಾಡಿದರೆ ಹೇಗೆ?

ಆದಾಗಿ ಬಹು ವರ್ಷದ ಶ್ರಮದ ನಂತರ ಕೊನೆಗೂ ರಾಬರ್ಟ್ ಹೊಸ ವೈಪರ್ ಸಿದ್ದಮಾಡುತ್ತಾನೆ. ಕಾರ್ ತಯಾರಿಸುವ ಬೃಹತ್ ಕಂಪನಿಗಳೆಲ್ಲಾ ಇನ್ನೂ ಈ ಸಂಶೋದನೆಯಲ್ಲಿ ತೊಡಗಿರುವಾಗ, ರಾಬರ್ಟನ ಕೈಯಲ್ಲಿ ಆ ಹೊಸ ವೈಪರ್. ಇದರಲ್ಲಿ ಚಾಲಕರು ವೈಪರ್ ಬಟನ್ ತಿರುಗಿಸಿದರಾಯ್ತು, ನಿಯಮಿತ ವೇಗದಲ್ಲಿ ವೈಪರ್ ಕಡ್ಡಿ ತಿರುಗಿ ನೀರನ್ನು ಒರೆಸುತ್ತಿರುತ್ತೆ.

ಡಾಕ್ಟರೇಟ್ ಮಾಡಿ ಯುನಿವರ್ಸಿಟಿಯೊಂದರಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದ ರಾಬರ್ಟ್,ಈ ವೈಪರ್ ಸಂಶಧನೆಯ ಪೇಟೆಂಟ್‍ಗೆ ಅರ್ಜಿ ಸಲ್ಲಿಸುತ್ತಾನೆ. ನಂತರ ತನ್ನ ಸಂಶೋಧನೆಯನ್ನು ತೋರಿಸಲು, ತನ್ನ ಫೋರ್ಡ್ ಕಾರಿಗೆ ವೈಪರ್‌ನ್ನು ಅಳವಡಿಸಿಕೊಂಡು, ಫೋರ್ಡ್ ಕಂಪೆನಿಯ ಮುಖ್ಯಾಲಯಕ್ಕೆ ಬರುತ್ತಾನೆ. ಆಗಿನ್ನು ಫೋರ್ಡ್‍ ಇಂಜಿನೀಯರ್‌ಗಳು-ಅವರ ರಿಸರ್ಚ್ ಲ್ಯಾಬ್‍ಗಳು ಇಂತಹ ಒಂದು ವೈಪರ್‌ಗೋಸ್ಕರ ತಿಣುಕುತ್ತಿರುತ್ತವೆ. ರಾಬರ್ಟ್‌‍ನ ಸಂಶೋಧನೆ ನೋಡಲು ಅಲ್ಲಿನ ಇಂಜಿನೀಯರ್‌ಗಳು ಮುಗಿಬೀಳುತ್ತಾರೆ.

ರಾಬರ್ಟ್‌ನ ತನ್ನ ಸಂ‍ಶೋಧನೆ ಫೋರ್ಡ್‌ನ ವರಿಗೆ ಬೇಕಾಗಿದೆ ಎನ್ನುವ ನಂಬುಗೆ. ಫೋರ್ಡ್ ಕಾರುಗಳಿಗೆ ವೈಪರ್ ತಯಾರಿಸಿಕೊಡುವ ಕಾಂಟ್ರಕ್ಟ್ ತನಗೆ ಸಿಗಲಿದೆಂಬ ವಿಶ್ವಾಸವಿರುತ್ತದೆ. ಆದರೆ ಅದಕ್ಕೆ ವಿರುದ್ದವಾಗಿ ಫೋರ್ಡ್, ರಾಬರ್ಟ್‌ನ ಕರೆಗಳನ್ನು ನಿರಾಕರಿಸತೊಡಗುತ್ತದೆ.

ಇದಾಗಿ ಕೆಲವು ವರ್ಷಗಳಿಗೆ ರಾಬರ್ಟ್‌ನ ಪೇಟೆಂಟ್ ಅಂಗೀಕೃತವಾಗುತ್ತದೆ. ಸರಿಸುಮಾರು ಅದೇ ಸಮಯದಲ್ಲಿ ಫೋರ್ಡ್ ಮಾರುಕಟ್ಟೆಗೆ ತನ್ನ ಹೊಸ ಕಾರು ಬಿಡುಗಡೆ ಮಾಡುತ್ತದೆ. ಕಾರಿನ ವಿಶೇಷ - ಹೊಸ ನಮೂನೆಯ ವೈಪರ್ !!

ಆದಾಗಿ ಎಷ್ಟೋ ವರ್ಷಗಳ ನಂತರ ರಾಬರ್ಟ್‌‌ಗೆ ಈ ವಿಷಯ ತಿಳಿದಾಗ, ೧೯೭೮ರಲ್ಲಿ ರಾಬರ್ಟ್, ಫೋರ್ಡ್‌ನ ಮೇಲೆ ತನ್ನ ಪೇಟೆಂಟ್ ಕದ್ದ ಕೇಸ್ ಹಾಕುತ್ತಾನೆ.ಹಾಗೆಯೇ ತನ್ನ ವೈಪರ್ ಪೇಟೆಂಟ್ ಉಪಯೋಗಿಸಿದ ಇತರ ೨೮ ಕಾರು ತಯಾರಿಕ ಕಂಪೆನಿಗಳ ಮೇಲೂ ಕೇಸ್ ಹಾಕುತ್ತಾನೆ.

ಮುಂದಿನ ಸುಮಾರು ೧೦-೧೨ ವರ್ಷ, ಫೋರ್ಡ್ ಕೇಸನಲ್ಲೇ ತನ್ನ ಜೀವನವನ್ನು ಕಳೆಯುತ್ತಾನೆ. ಕೊನೆಗೂ ೧೯೯೦ರಲ್ಲಿ ರಾಬರ್ಟ್ ಕೇಸ್ ಗೆದ್ದಾಗ, ಪೋರ್ಡ್ ರಾಬರ್ಟ್‌‌ಗೆ ೧೦ ಮಿಲಿಯನ್ ಡಾಲರ್ ಕೊಡುತ್ತೆ. ಫೋರ್ಡ್ ಕೇಸಿನ ವಿಜಯದ ನಂತರ ರಾಬರ್ಟ್, ಕ್ರೈಸಲರ್‍ ಎನ್ನುವ ಇನ್ನೊಂದು ಕಾರು ಕಂಪೆನಿಯ ವಿರುದ್ದ ಕೇಸು ನಡೆಸುತ್ತಾನೆ. ಅದರಲ್ಲೂ ಸಹ ೨೦ ಮಿಲಿಯನ್ ಡಾಲರ್ ಸಿಗುತ್ತೆ. ಈ ಕೇಸುಗಳ ಮಧ್ಯೆದಲ್ಲಿ ಉಳಿದ ಕಂಪೆನಿಗಳ ಮೇಲಿನ ಕೇಸುಗಳನ್ನು ಸಂಭಾಳಿಸಲಿಕ್ಕೆ ಆಗದೆ ಆ ಕೇಸುಗಳು ವಜಾವಾಗುತ್ತವೆ.

ಈ ಕಡೆ ಈ ಕೇಸುಗಳ ಓಡಾಟದಿಂದ ರಾಬರ್ಟ್‌ನ ವೈಯುಕ್ತಿಕ ಜೀವನ ಹದೆಗೆಡುತ್ತದೆ. ಅವನ ಪತ್ನಿ ವಿಚ್ಚೇದನ ತೆಗೆದುಕೊಳ್ಳುತ್ತಾಳೆ. ರಾಬರ್ಟ್ ಕೇಸುಗಳನ್ನು ಗೆದ್ದರೂ, ಬಂದ ದುಡ್ಡಲ್ಲಿ ಹತ್ತು ಪರ್ಸೆಂಟ್ ತನ್ನ ವಿಚ್ಚೇದನಕ್ಕೆ ಕೊಡಬೇಕಾಗುತ್ತದೆ. ಇನ್ನೂ ಹೆಚ್ಚು ಹಣ ತನ್ನ ಕೇಸುಗಳನ್ನು ನೋಡಿಕೊಂಡ ಲಾಯರ್‌ಗಳ ಪಾಲಾಗುತ್ತದೆ.

ಕೊನೆಗಾಲದಲ್ಲಿ ಇದೆಲ್ಲವುಗಳಿಂದ ದೂರ ಸರಿದು ಯಾವುದೋ ನದಿದಂಡೆ ಮೇಲೆ ಮನೆಮಾಡಿಕೊಂಡು ರಾಬರ್ಟ್ ದಿನಕಳೆಯುತ್ತಾನೆ. ಆದರೆ ಆಗಾಗ ತನ್ನ ಮಕ್ಕಳಿಗೆ ಮತ್ತು ಲಾಯರ್‌ಗಳಿಗೆ ತನ್ನ ಪೇಟೆಂಟ್‍ಗಳ ಬಗ್ಗೆ ಮಾತಾಡಲು ಪೋನ್ ಮಾಡುತ್ತಿರುತ್ತಾನೆ. ಇಂತಹ ರಾಬರ್ಟ್ ೨೦೦೫ರಲ್ಲಿ ಕೊನೆಯುಸಿರೆಳೆಯುತ್ತಾನೆ.

ಫೋರ್ಡ್ ಮತ್ತು ಇತರೆ ಶಕ್ತಿಶಾಲಿ ಕಾರ್ಪೋರೆಟ್‍ಗಳ ವಿರುದ್ಧ ಸಮರ ಸಾರಿ, ಅದರಲ್ಲಿ ಗೆದ್ದ ಈ ಸಂಶೋಧಕ, ತನ್ನ ಜೀವನದಲ್ಲಿ ಆ ಗೆಲುವಿಗಾಗಿ ಸಂದ ಬೆಲೆ ಮಾತ್ರ ಆಪಾರ. ತನ್ನ ಸಂಶೋಧನೆ ಜಗತ್ತಿನ ಪ್ರತಿ ಕಾರಿನಲ್ಲೂ ಇದ್ದರೂ, ಇದು ತನ್ನದೇ ಸಂಶೋಧನೆ ಎನ್ನುವ ಸತ್ಯ ಜಗತ್ತಿಗೆ ಹೇಳಲು ತನ್ನ ಜೀವವನ್ನು ತೇಯ್ದವನ ದುರಂತ ಕತೆ..

ಯಾವಾಗಲೋ ಎಲ್ಲೋ ಓದಿದ್ದ ಈ ವೈಪರ್ ಕತೆ ಮತ್ತೆ ನೆನಪಾಗಿದ್ದು, ಮೊನ್ನೆ ಹೊಸ ಸಿನಿಮಾವೊಂದರ ಟ್ರೈಲರ್ ನೋಡಿದಾಗ. ರಾಬರ್ಟ್ ಕಿಯಾರ್ನ್‍ನ ಈ ನಿಜ ಜೀವನದ ಕತೆಯನ್ನು ಆಧಾರಿಸಿ ಆಕ್ಟೋಬರ್‌ನಲ್ಲಿ ಬರುತ್ತಿರುವ ಚಿತ್ರದ ಹೆಸರು ' ಪ್ಲಾಶ್ ಆಫ್ ಜೀನಿಯಸ್'.

ಆ ಚಿತ್ರದ ಟ್ಯಾಗ್ ಲೈನ್ ಬಹುಷಃ ರಾಬರ್ಟ್‌ನ ಹೋರಾಟ ಜೀವನದ ಒಟ್ಟು ಸಾರ
"Corporations have time, money and power on their side. All Bob Kearns had on his side was the truth".

Labels: , , , , , , ,

Monday, April 07, 2008

ಪ್ರಿಯ ಸಖಿಗೆ...

ಮನಸು ಮಾತುಗಳಲ್ಲಿ
ಮುದ ಮೂಡಿಸಿ ಪ್ರೀತಿ
ಸೋಸಿ ಪ್ರಣಯದೋಟದಲ್ಲಿ
ಕೈಹಿಡಿದು ವಿಹರಿಸಿದ
ರತಿಯಂತಾಕೆಯೇ

ಕಳೆದಿದ್ದು ನನ್ನೊಂದಿಗೆ
ತಿಂಗಳುಗಳು ಹತ್ತು
ಸವಿದಿದ್ದು ಬೇವು-ಬೆಲ್ಲವೆರಡೂ
ಹೆಚ್ಚಾಗಿದ್ದು ಬೇವೇ-ಬೆಲ್ಲವೇ?

ಜಗಳ ಹಟಗಳಲ್ಲಿ
ಮಾತು ಮರೆತು ಮೌನ ಬಿರಿದು
ದಿಂಬು ಎಸೆದು ಕೋಪಗೊಂಡು
ಶಾಂತಳಾಗಿ ಮಾತಿಲ್ಲದೆ
ಬಂದು ಅಪ್ಪಿದಾಕೆಯೇ

ನೆನ್ನೆಗಳು ಮಾತು ಮಧುರ
ಅದರಲ್ಲಿ ಬೇವಿನ ಒಗರು
ಇರುವುದು ಸಹಜ
ಆದರೆ ಒಗರಿನ ಜೊತೆ
ಬೆಲ್ಲವ ಮರೆವುದೇ?

ಕತ್ತಲೆ ಕೋಣೆಯಲ್ಲಿ ನನ್ನೆಡೆಗೆ
ಭಯಾನಕ ಆಕೃತಿಗಳು
ಬಾಗಿಲು ಒದ್ದು ಒಳಬಂದಾಗ
ಭಯದಿಂದ ಸಣ್ಣಗೆ ಕಿರುಚಿಕೊಂಡ
ನನ್ನ ಅಪ್ಪಿ ತಲೆ ನೇವರಿಸಿದ ಅಮ್ಮನಂತಾಕೆಯೇ

ಆಟ ತುಂಟಾಟಗಳಲ್ಲಿ
ಕಾಡಿಸಿ ಪೀಡಿಸಿ
ಪ್ರೀತಿಸಿ ಪ್ರೀತಿ ಹಂಚಿಕೊಂಡು
ನವವರ್ಷವ ಕಳೆಯೋಣವೇ
ಪ್ರಿಯಸಖಿಯೇ?

ಬರಲಿರುವ ದಿನಗಳಲ್ಲಿ
ನನ್ನ ಹಾರೈಕೆ ಇಷ್ಟೇ
ಇರಲಿ ನಮ್ಮ ಬಾಳಿನಲ್ಲಿ
ಬೆಲ್ಲದ ಸವಿ ಯಶದ ಸವಿ
ಮರೆಯುವುದ ಬೇಡ ಬೇವಿನ ಕಹಿ

Labels: , , , , ,

Thursday, February 21, 2008

ನಾಳೆಗಳ ಭರವಸೆಯಲ್ಲಿ...

ಗಾಢ ಅಂಧಕಾರದಲ್ಲಿನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ

ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ

ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ

ಯಾಕೇ ಗೆಳತಿ ಈ ಹತಾಶೆ

ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ

ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ

ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ

ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ

ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ

Labels: , , ,

Tuesday, January 29, 2008

ಮಾಯನಗರಿಯ ಸೆರಗಿನಲ್ಲಿ...

ಕಣ್ಣು ಕೊರೈಸುವ ಬಣ್ಣದ ಲೈಟ್‍ಗಳು
ಜಗಮಗಿಸುವ ಹೋಟೆಲ್‍-ಕ್ಯಾಸಿನೋಗಳು
ಇಜೀಪ್ಟಿಯನ್, ರೋಮನ್,ಫ್ರೆಂಚ್
ಒಂದೊಂದು ಕಟ್ಟಡವು ಒಂದೊಂದು ವಾಸ್ತುಶೈಲಿ

ಆ ಮಾಯನಗರಿಯ ಮುಖ್ಯರಸ್ತೆಯಲ್ಲಿ
ಓಡಾಡುವುದೇ ಒಂದು ಸೊಬಗು
ಎಲ್ಲಿಂದೆಲ್ಲಿಂದಲೋ ಬಂದ ಪ್ರವಾಸಿಗರು
ವಿಸ್ಮಯ ತುಂಬಿದ ಕಣ್ಣುಗಳು

ಅಲ್ಲೆಲ್ಲೋ ಆಕಾಶದೆತ್ತರಕ್ಕೆ ಚಿಮ್ಮಿ
ಮೋಹಕ ನೃತ್ಯ ಮಾಡುತ್ತಿರುವ ಸಂಗೀತ ಕಾರಂಜಿ
ಅದರ ಎದುರಿಗೆ ಪ್ಯಾರಿಸ್‍ನ ಒಂದು ತುಂಡು
ಇಲ್ಲಿ ತೇಲಿಬಂದಿದೆಯೇ ಎಂಬಂತಿರುವ ಚಿಕ್ಕ ಐಫಿಲ್

ಹೋಟೆಲ್‍ಗಳ ಕ್ಯಾಸಿನೋದಲ್ಲಿನ
ಜೂಜು ಯಂತ್ರಗಳ ಸದ್ದು
ಅದಕ್ಕೆ ಹಿಮ್ಮೇಳವಾಗಿ ಕಾಂಚಣದ
ಜಣಜಣದ ಸದ್ದು

ಕ್ಯಾಸಿನೋದ ಟೇಬಲ್‍ಗಳ ಮುಂದೆ
ದುಡ್ಡು ಪಣಕ್ಕಿಟ್ಟು ಕುಳಿತ ಪಂಟರ್‍ಗಳು
ಅವರಿಗೆಲ್ಲಾ ಮದ್ಯ ನೀಡುತ್ತಾ ಎಳಲಾಗದಂತೆ ಮಾಡುವ
ಆ ತುಂಡು ಲಂಗದ ಕ್ಯಾಸಿನೋದ ಹುಡುಗಿಯರು

ಜೂಜು ಗೆದ್ದವರ ಸಂಭ್ರಮದ ಕೇಕೆ
ಸೋತವರ ಹತಾಶೆ
ಇಬ್ಬರದು ಇನ್ನೊಮ್ಮೆ ಅದೃಷ್ಟ ಹುಡುಕುವ
ಹಣ ಗೆಲ್ಲುವ ಆಸೆ

ಇತ್ತ ನಡುಬೀದಿಯಲ್ಲಿ ಕಾಮವನ್ನು
ಸರಕಿನಂತೆ ಮಾರುತ್ತಿರುವ ಜನ
ಡಾಲರ್‍ ಯಾರನ್ನು ಯಾಕೇ ಯಾವ ಯಾವ
ದಂಧೆಗೆ ಇಳಿಸುತ್ತೋ ಯಾರಬಲ್ಲರು

ರಸ್ತೆಯಲ್ಲಿ ಚೆಲ್ಲಿದ ಬೆತ್ತಲೆ
ಕಾರ್ಡ್‍ಗಳನ್ನು ನೋಡುತ್ತಲ್ಲೇ
ಬೇರೆಡೆ ಮುಖ ತಿರುಗಿಸಿ ನಡೆವ ಸಭ್ಯರು
ಕುತೂಹಲದಿಂದ ಅದನ್ನೇ ನೋಡುವ ಪಡ್ಡೆಗಳು

ಮಧ್ಯ ರಾತ್ರಿ ಆಗಿ ಕತ್ತಲೆಗೆ ವಯಸ್ಸಾದರೂ
ಇನ್ನೂ ಜಗಮಗಿಸುತ್ತಿರುವ ಬೀದಿಗಳು
ಜಣಜಣಿಸುತ್ತಿರುವ ಕ್ಯಾಸಿನೋಗಳು
ಹರಿಯುತ್ತಲೇ ಇರುವ ಮಧ್ಯ ದ್ರವಗಳು

ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯನಗರಿ !

Labels: , ,

Monday, December 10, 2007

ಸಾವಿನ ಹೊಸ್ತಿಲಲ್ಲಿ ನಿಂತವನ ಮಾತು...

ನೀವು ಬಹಳ ಅಂದರೆ ಇನ್ನು ೩-೬ ತಿಂಗಳು ಬದುಕಬಹುದೆಂದು ಗೊತ್ತಾದಾಗ, ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಹೇಗಿರುತ್ತೆ. ದೇಹದ ಒಳಗಿದ್ದುಕೊಂಡು ದಿನ ದಿನವು ಜೀವ ತಿನ್ನುತ್ತಿರುವ ಕ್ಯಾನ್ಸರ್ ಎನ್ನುವ ಆ ಹೃದಯಹೀನ ಹಂತಕನಿಗೆ ಶರಣಾಗಿ, ಉಳಿದಿರುವ ಅಲ್ಪ ಸಮಯವನ್ನು ಅದಕ್ಕೆ ಒಪ್ಪಿಸಬೇಕೇ? ಅಥವ ಇರುವ ದಿನಗಳನ್ನೇ ಅರ್ಥಪೂರ್ಣವಾಗಿ ಬದುಕಿ, ಸಾವಿನಲ್ಲೂ ಒಂದು ಸಂದೇಶ ಕಳಿಸುವಂತೆ ಬಾಳುವುದೋ?

ಅವರ ಹೆಸರು ರಾಂಡಿ ಪೌಸ್ಚ್.

ಕಳೆದ ೨-೩ ತಿಂಗಳಿನಿಂದ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. ಆತ ಸುಮಾರು ೪೦೦ ಜನ ವಿದ್ಯಾರ್ಥಿಗಳು-ಪ್ರೊಪೆಸರ್‌ಗಳ ಮುಂದೆ ಕಳೆದ ಸೆಪ್ಟಂಬರ್‌ನಲ್ಲಿ 'ಲಾಸ್ಟ್ ಲೆಕ್ಚರ್' ಅನ್ನುವ ಮನೋಜ್ಞ ಉಪನ್ಯಾಸ ನೀಡಿದ. ಅಂತರ್ಜಾಲದಲ್ಲೂ ಲಭ್ಯವಿದ್ದ ಆ ಉಪನ್ಯಾಸ, ಎಲ್ಲಡೆ ಹರಡತೊಡಗಿತು. ಮೊದಲ ತಿಂಗಳಲಲ್ಲೇ ಅಂತರ್ಜಾಲದಲ್ಲಿ ಸುಮಾರು ಒಂದು ಮಿಲಿಯನ್ ಜನ ನೋಡಿದರು. ನೋಡಿ ತಮಗೆ ಬೇಕಾದವರಿಗೂ ಹೇಳಿದರು. ನೋಡುನೋಡುತ್ತಿದ್ದಂತೆ ರಾಂಡಿ ಪೌಸ್ಚ್ ಎಷ್ಟು ಪ್ರಸಿದ್ಧನಾದನೆಂದರೆ ಅಮೇರಿಕೆಯ ಟಿವಿ ಚಾನಲ್‍ಗಳು ಅವನ ಬಗ್ಗೆ, ಅವನ ಸಂದರ್ಶನಗಳನ್ನು ಪ್ರಸಾರಮಾಡಲಿಕ್ಕೇ ಪೈಪೋಟಿಗಿಳಿದವು.

ಅಂದಾಗೆ ಯಾರು ಈ ರಾಂಡಿ ಪೌಸ್ಚ್? ಅವನ 'ಲಾಸ್ಟ್ ಲೆಕ್ಚರ್' ಯಾಕೇ ಅಷ್ಟು ಜನಮನ ಮುಟ್ಟಿತು?

ರಾಂಡಿ ಪೌಸ್ಚ್ ಪ್ರಸಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನ ವಿಭಾಗದ ಮೇಧಾವಿ ಪ್ರೊಫೆಸರ್. ವರ್ಚುಲ್ ರಿಯಾಲಿಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪತ್ನಿ-ಮೂರು ಚಿಕ್ಕ ಮಕ್ಕಳ ಸಂಸಾರ. ಅದರೆ ಕಳೆದ ವರ್ಷ ರಾಂಡಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು. ಚಿಕಿತ್ಸೆಗಳು ಶುರುವಾದವು. ಕ್ಯಾನ್ಸರ್ ಯಾವುದಕ್ಕೂ ಜಗ್ಗದೇ ಬೆಳಯಿತು. ಅಗಸ್ಟ್ ಹೊತ್ತಿನಲ್ಲಿ ರಾಂಡಿಗೆ ಇನ್ನು ೩-೬ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದರು.

ಅದೇ ಸಮಯದಲ್ಲಿ ರಾಂಡಿ ಕೆಲಸ ಮಾಡುತ್ತಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದೆ ಈ 'ಲಾಸ್ಟ್ ಲೆಕ್ಚರ್'. ರಾಂಡಿ ಸುಮಾರು ಒಂದುವರೆ ಗಂಟೆ ನೀಡಿದ ಉಪನ್ಯಾಸದಲ್ಲಿ ಯಾವುದೇ ದೊಡ್ಡ ತತ್ವಜ್ಞಾನವಿರಲಿಲ್ಲ, ಅದರಲ್ಲಿ ಸಾವಿನೊಂದಿಗಿನ ಹೋರಾಟದ ಬಗ್ಗೆಯೂ ಇರಲಿಲ್ಲ. ಆ ಉಪನ್ಯಾಸದಲ್ಲಿ ಇದದ್ದು ಹಾಸ್ಯಭರಿತ ಶೈಲಿಯಲ್ಲಿ ಅವನ ಬಾಲ್ಯದ ಕನಸುಗಳ ಬಗ್ಗೆ, ನನಸಾದ-ನನಸಾಗದ ಕನಸುಗಳ ಬಗ್ಗೆ. ಆ ಉಪನ್ಯಾಸ ನೀಡಿದ ಒಂದು ತಿಂಗಳಲ್ಲೇ ಅದು ಅಂತರ್ಜಾಲದಲ್ಲಿ ಎಲ್ಲೆಡೇ ಹರಡಿ,ಸುಮಾರು ೬ ಮಿಲಿಯನ್ ಜನ ಅದನ್ನು ನೋಡಿ, ಜಗತ್ತಿನ ಮೂಲೆ ಮೂಲೆಗೂ ತಲುಪಿ, ರಾಂಡಿ ಒಬ್ಬ ಪ್ರವರ್ತಕನ ತರ ಕಾಣತೊಡಗಿದ.

'ಲಾಸ್ಟ್ ಲೆಕ್ಚರ್' ನೋಡಿ ಅನೇಕ ಜನ ತಮ್ಮ ಜೀವನ ಶೈಲಿ ಬದಲಿಸಿಕೊಂಡವರಿದ್ದಾರೆ.

ಟಿವಿ ಚಾನೆಲ್‍ಗಳ ರಾಂಡಿಯ ಸಂದರ್ಶನ ಮುಗಿಬಿದ್ದವು.ಲಾಸ್ಟ್ ಲೆಕ್ಚರ್ ರಾಂಡಿ ತನ್ನ ಮೂರು ಮಕ್ಕಳಿಗೊಸ್ಕರ ನೀಡಿದ್ದಂತೆ, ಅದು ಎಲ್ಲರಿಗೂ ಇಷ್ಟವಾದದ್ದು ರಾಂಡಿಗೆ ಸಂತಸ ಮತ್ತು ಆಶ್ಚರ್ಯ ತಂದಿವೆಯಂತೆ. ಸದ್ಯಕ್ಕೆ ಉಳಿದ ಕೆಲವೇ ತಿಂಗಳುಗಳಲ್ಲಿ ತನ್ನ ಮೂರು ಮಕ್ಕಳು-ಹೆಂಡತಿಯೊಂದಿಗೆ ಅದಷ್ಟು ಸಮಯ ಕಳೆಯುತ್ತಿದ್ದಾನೆ ರಾಂಡ್. ಈ ಮಧ್ಯೆ 'ಲಾಸ್ಟ್ ಲೆಕ್ಚರ್' ಪುಸ್ತಕ ರೂಪದಲ್ಲೂ ಬರಲಿದೆ.

ಅಂದಾಗೆ ರಾಂಡಿಯ ಈಡೇರದ ಕನಸುಗಳ ಪಟ್ಟಿಯಲ್ಲಿ 'ಸ್ಟಾರ್ ಟ್ರೆಕ್'‍ನ ಕಾಪ್ಟನ್ ಆಗಬೇಕು ಎನ್ನುವ ಕನಸು ನನಸಾಗದಿದ್ದರೂ , ಸ್ಟಾರ್ ಟ್ರೆಕ್‍ನ ಮುಂದಿನ ಚಿತ್ರದಲ್ಲಿ ಒಂದು ಗೌರವ ಪಾತ್ರ ರಾಂಡಿಗೆ ಕೊಟ್ಟಿದ್ದಾರಂತೆ. ಹಾಗೇ ಚಿಕ್ಕಂದಿನಲ್ಲಿದ್ದಾಗ ರಾಷ್ಟ್ರೀಯ ಪುಟ್ಬಾಲ್ ತಂಡದಲ್ಲಿ ಸ್ಥಾನಗಳಿಸಬೇಕೆಂಬ ಕನಸು ನನಸಾಗದಿದ್ದರೂ, ಆ ತಂಡವೇ ರಾಂಡಿಯನ್ನು ತಮ್ಮೊಂದಿಗೆ ಅಭ್ಯಾಸಮಾಡಲ್ಲಿಕ್ಕೇ ಕರೆಸಿಕೊಂಡಿವೆ.

ನೀವು ಇದನ್ನು ಹೊತ್ತಿಗೆ ರಾಂಡಿಯ ಕ್ಯಾನ್ಸರ್ ಕಿಮೋ ತೆರಪಿಯಲ್ಲಿ ಹಾಗೂ ಹೀಗೂ ಒಂದೆರಡು ವಾರಗಳಷ್ಟು ಮೃತ್ಯುವನ್ನು ಮುಂದಕ್ಕೆ ಹಾಕುವಲ್ಲಿ ಯಶ್ವಸಿಯಾಗಿದ್ದಾನೆ. ಆದರೆ ಅದು ಕ್ಷಣಿಕ ಜಯವಷ್ಟೇ, ಸಾವಿನ ಒಳ ಬಾಗಿಲಲ್ಲಿ ನಿಂತವನಿಗೆ ಮರಳಿ ಬರಲು ಆಗುವುದು ಅಸಾಧ್ಯ.


ರಾಂಡಿಯ 'ಲಾಸ್ಟ್ ಲೆಕ್ಚರ್' ನೀವು ನೋಡಿರದಿದ್ದರೆ ಇಲ್ಲಿದೆ ಅದರ ಲಿಂಕ್

http://video.google.com/videoplay?docid=-5700431505846055184

ಹಾಗೆಯೇ ರಾಂಡಿಯ ಬ್ಲಾಗ್ ಇಲ್ಲಿದೆ

http://www.cs.cmu.edu/~pausch/


ಆ 'ಲಾಸ್ಟ್ ಲೆಕ್ಚರ್' ನೋಡಿದ ಮೇಲೆ, ಮನಸಿನ ಆಳದಲ್ಲಿ, ನಮ್ಮ ಜೀವನಗಳ ಬಗ್ಗೆ, ಜೀವನ ಶೈಲಿಯ ಬಗ್ಗೆ, ಜೀವನದಲ್ಲಿ ನಾವು ವಿವಿಧ ವಿಷಯಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸದಿದ್ದರೆ ಕೇಳಿ..

Labels: , , , , , ,

Tuesday, November 13, 2007

ಮೊದಲ ದೀಪಾವಳಿ !!

ಮೊದಲ ದೀಪಾವಳಿಯಂತೆ
ಅತ್ತೆ ಮನೆಯಲ್ಲಿ ಹಬ್ಬವಂತೆ
ಒಂದೂ ಅರಿಯೆ ನಾ !

ಎಣ್ಣೆ ಮಜ್ಜನವಂತೆ
ನಂತರ ಶಾವಿಗೆ ಊಟವಂತೆ
ಒಂದೂ ಅರಿಯೆ ನಾ!

ಮರುದಿನ ಲಕ್ಷ್ಮಿಪೂಜೆಯಂತೆ
ಅಡುಗೆಮನೆಯಲ್ಲಿ ಹೋಳಿಗೆ ಜೋರಂತೆ
ಒಂದೂ ಅರಿಯೆ ನಾ!

ನಾದಿನಿಗೆ ಪಟಾಕಿ ಕೇಳುತ್ತಿದ್ದಳಂತೆ
ನಾನು ಕೊಡಿಸುತ್ತಿದ್ದೆನಂತೆ
ಒಂದೂ ಅರಿಯೆ ನಾ !

ಮನೆತುಂಬಾ ನನ್ನಾಕೆಯ ಓಡಾಟವಂತೆ
ಮನೆಮಂದಿಗೆಲ್ಲಾ ಸಂಭ್ರಮವಂತೆ
ಒಂದೂ ಅರಿಯೆ ನಾ !

ಮದುವೆಯಾಗಿ ತಿಂಗಳಿಗೆ
ಪರದೇಶಕ್ಕೆ ಹಾರಿದೆನಂತೆ
ಅದು ಹೇಗೆ ಅತ್ತೆ ಮನೆಯ
ಮೊದಲ ದೀಪಾವಳಿ ತಿಳಿಯುವದಂತೆ !?

Labels: , , ,

Thursday, August 09, 2007

ಜೋಡಿ ಹಕ್ಕಿ ಮಾತಾಡಿವೆ..

ಎಲ್ಲರಿಗೂ ನಮಸ್ಕಾರ !

'ಕಾಣದಂತೆ ಮಾಯವಾದನು ನಮ್ಮ ಶಿವ' ಅಂತಾ ನೀವು ಹಾಡು ಹೇಳೋಕೇ ಮುಂಚೆನೇ ನಿಮ್ಮ ಮುಂದೆ ಬಂದು ನಿಂತಿದೀನಿ !

ನೀವು ಶುಭ ಕೋರಿ ಕಳುಹಿಸಿದ ಮೇಲ್‍ಗಳು, ನೀವು ಪಾತರಗಿತ್ತಿಯಲ್ಲಿ ಬರೆದ ಕಾಮೆಂಟ್‍ಗಳು, ನನ್ನ ಸಂಭ್ರಮದಲ್ಲಿ ಬಂದು ಭಾಗವಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಒಲವಿನ ವಂದನೆಗಳು.ನಿಮ್ಮ ಪ್ರೀತಿಯ ಹಾರೈಕೆಗೆ, ನನ್ನ ಮತ್ತು ನನ್ನಾಕೆಯ ನಮನಗಳು.

ಕಳೆದ ಸಲ ಪಾತರಗಿತ್ತಿಯಲ್ಲಿ ಬರೆದಿದ್ದು ನಿಮ್ಮನ್ನು ನನ್ನ ವಿವಾಹಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ. ಆದಾದ ನಂತರ ಏನೇಲ್ಲಾ ಆಯ್ತು..

ಇಷ್ಟು ದಿವಸ ಕನಸು-ಕವನ-ಕನವರಿಕೆಗಳಲ್ಲಿ ಕಾಡುತಿದ್ದ ನನ್ನ ಹುಡುಗಿ ಕೊನೆಗೂ ನನ್ನ ವರಿಸಿದ್ದು ಅದೇ ಜೂನ್ ೨೪ ರಂದು. ಮದುವೆಯೆಂಬ ಆ ವಿಶಿಷ್ಟ ಅನುಭವ..ಸಂಬಂಧ, ಸಂಭ್ರಮ, ಸಲ್ಲಾಪ, ಸಡಗರಗಳ ಒಂದು ಹೊಸ ಲೋಕವದು.

ಇಷ್ಟು ದಿವಸ ಕೇವಲ ಪೋನು-ಮೇಲ್-ಕವನಗಳಲ್ಲಿ ಹರಿಯುತ್ತಿದ್ದ ಭಾವನಾ ಲಹರಿಗೆ , ಮನದಲ್ಲಿದ್ದವರು ಎದುರಿಗೆ ಬಂದಾಗ ಆದ ಸಂಭ್ರಮ...ಅವಿಸ್ಮರಣೀಯ. ಪ್ರೀತಿಯ ತೊರೆಯಲ್ಲಿ ಬೊಗಸೆಯಲ್ಲಿ ಕುಡಿದ ಅಮೃತವೂ ಅವಿಸ್ಮರಣೀಯ..

ಮದುವೆಯ ಹಿಂದಿನ ದಿವಸ ನನ್ನ ಹುಡುಗಿಯ ಶಿವಮೊಗ್ಗೆಯಲ್ಲಿ ನಡೆದಿತ್ತು ನನ್ನ ಪುಸ್ತಕ್ 'ಸ್ವೀಟ್ ಡ್ರೀಮ್ಸ್ ಅಂದ್ರೇನು !'ಬಿಡುಗಡೆ. ಅದಾಗಿ ಮರುದಿನವೇ ನನ್ನ ಜೀವನದ ಅತೀ ಮಧುರ ಸ್ವೀಟ್ ಡ್ರೀಮ್ ನನ್ನ ಭಾಳಸಂಗಾತಿಯಾಗಿದ್ದು....

ಅಲ್ಲಿ ಸ್ಪಲ್ಪ ಕಾಲ ಇದ್ದು ನಾವು ಮರಳಿದೆವು ದೂರದ ಅಮೇರಿಕೆಗೆ...

ಇಲ್ಲಿ ನಮ್ಮ ಪುಟ್ಟ ಗೂಡಿನಲ್ಲಿ ನಮ್ಮ ಬಾಳಪಯಣ ಸುಂದರವಾಗಿ ಸಾಗುತಿದೆ...

ಮತ್ತೆ ಸಿಗುವೇ..ಅಲ್ಲಿಯವರಿಗೆ ಪ್ರೀತಿಯಿರಲಿ

Labels: , ,