Sunday, February 04, 2007

ಕಾರ್ಮೋಡ ಚದುರಿದಾಗ..

ಕಾರ್ಮೋಡವೊಂದು
ಸೂರ್ಯನ ಒಂದು ಕ್ಷಣ
ಮಂಕಾಗಿಸಿತ್ತೆ
ಉಕ್ಕಿ ಹರಿಯುತ್ತಿದ್ದ
ಶರಧಿ ಒಂದು ಕ್ಷಣ
ತೀರದಿಂದ ದೂರಹೋಗಿತ್ತೆ

ಆ ರಾತ್ರಿ
ಕಣ್ಣಿಗೆ ನಿದ್ದೆಯಿಲ್ಲ
ಹೊಟ್ಟೆಗೆ ಹಸಿವಿರಲಿಲ್ಲ
ಮನದಲೆಲ್ಲೋ ಆಳವಾಗಿ
ನಾಟಿದ್ದ ತೀಕ್ಷ್ಣವಾದ ವಾಗ್ಬಾಣ

ಒಂದೊಂದು ಕ್ಷಣ
ಒಂದೊಂದು ಯುಗದಂತೆ
ಕೊನೆಗೂ ಕತ್ತಲ ರಾತ್ರಿ ಕಳೆದಿತ್ತು..

ಮುಂಜಾವಿನ ಪ್ರಖರ ಸೂರ್ಯ
ಕವಿದಿದ್ದ ಕಾರ್ಮೋಡವನ್ನು ಓಡಿಸಿದ್ದ
ಶರಧಿ ರಭಸವಾಗಿ ತೀರದೆಡೆ
ಉಕ್ಕಿ ಹರಿಯ ತೊಡಗಿತ್ತು
ಒಲವು ನಾಟಿದ್ದ ಬಾಣವನ್ನು ಕಿತ್ತು
ಅಲ್ಲಿಗೆ ಪ್ರೀತಿಯ ಮದ್ದು ಹಚ್ಚಿತ್ತು

ಶರಧಿಯ ಮತ್ತದೇ
ನಿಷ್ಕಂಳಕ ಪ್ರೀತಿ
ಸೂರ್ಯನ ಮತ್ತದೇ
ಬೆಚ್ಚಗಿನ ಅಪ್ಪುಗೆ
ಅದೇ ಜೇನಿನ ಮಾತು
ಅದೇ ಒಲವಿನ ಹಾಡು

ಎನೂ ಬದಲಾಗಿಲ್ಲ

ಮೊದಲಿಗಿಂತ ಇನ್ನೂ ಹೆಚ್ಚು
ತುಡಿವ ಮನಗಳು
ಮೊದಲಿಗಿಂತ ಇನ್ನೂ ಹೆಚ್ಚು
ಬಯಸುವ ಹೃದಯಗಳು
ಮೊದಲಿಗಿಂತ ಇನ್ನೂ ಹೆಚ್ಚು
ಪ್ರೀತಿಸುವ ಜೀವಗಳು

ಎನೂ ಬದಲಾಗುವುದಿಲ್ಲ

17 comments:

Sushrutha Dodderi said...

ಶಿವ್, ಸುಂದರ ಕವಿತೆ. ಗಾಯವಾದಾಗಲೆಲ್ಲ ಪ್ರೀತಿಯ ಮದ್ದನ್ನು ಹಚ್ಚುವ ಜೀವವಿರುವ ವರೆಗೆ, ಪ್ರತಿ ದಿನವೂ ತಪ್ಪಿಸದೇ ಪ್ರಖರ ಸೂರ್ಯ ಬರುತ್ತಿರುತ್ತಾನೆ; ಶರಧಿ ಉಕ್ಕಿ ಹರಿಯುತ್ತಿರುತ್ತದೆ. ಬದಲಾಗುವುದಿಲ್ಲ ಏನೂ. At least, ಅಂಥದ್ದೊಂದು ಆಶಾವಾದವನ್ನು ಹೊಂದಿರೋಣ.

Shiv said...

ಹೌದು ಸುಶ್ರುತ,

ಅಂಥದ್ದೊಂದು ಆಶಾವಾದವಿದ್ದರೆ ಜೀವನದ ಪಯಾಣ ಸುಲಲಿತವಾಗಿ ಸಾಗುತ್ತದೆ.

VENU VINOD said...

ಶಿವ,
ನೀವಂದಿದ್ದು ಅಕ್ಷರಶಃ ಸತ್ಯ.
ಸಮುದ್ರದಷ್ಟೇ ನಿಷ್ಕಳಂಕ ಪ್ರೀತಿ ನಮ್ಮಲ್ಲಿ ಅಸಾಧ್ಯವಾದರೂ ಪ್ರಾಮಾಣಿಕ ಪ್ರಯತ್ನವಿದ್ದರೂ ಸಾಕು
ಏನಂತೀರಾ

Shiv said...

ವೇಣು,

ಸಮುದ್ರದ್ದು ಒಂದು ರೀತಿ ಹುಚ್ಚು ಪ್ರೀತಿ..
ತೀರವನ್ನು ಬಿಟ್ಟಿರಲಾರದೆ ಮತ್ತೆ ಮತ್ತೆ ಬಂದು ತೀರವನ್ನು ಮುತ್ತಿಸುವ ಪ್ರೀತಿ ಅದು..

ಪ್ರಾಮಾಣಿಕ ಪ್ರಯತ್ನ..ಹೌದು

mouna said...

ashavadhana nija, something that keeps us persuading our aspirations! kaLedhukonDare, yaavudukku arthaviruvudilla.

Shiv said...

ಮೌನ,

ಅದು ಸರಿ..ಅದೊಂದು +ve ಮನೋಭಾವ ಬೇಕು.

Unknown said...

Boss,
ಒ೦ದೇ word - "ಸಕ್ಕತ್ತಾಗಿದೆ..."
There is no one particular ಸಾಲು that I liked... I liked the whole verse man.
ತು೦ಬಾ ದಿನಗಳ ನ೦ತರ ಒ೦ದ್ ಒಳ್ಳೆ verse ಓದಿದೆ ಅನ್ನಿಸ್ತಿದೆ.
ಹಾಗೆ ಬರ್ತಿರ್ಲಿ...

~ಹರ್ಷ

Shiv said...

ಹರ್ಷ,
ನಿನ್ನ ಮೆಚ್ಚುಗೆಗೆ ಧನ್ಯವಾದಗಳು !

Anveshi said...

ಶಿವ್ ಅವರೆ,
ಸರಸ-ವಿರಸ ಚೆನ್ನಾಗಿದೆ.

ನಿಮ್ಮ ಜನ್ಮದಿನಕ್ಕೆ ಶುಭಾಶಯಗಳು

Shiv said...

ಅಸತ್ಯಿಗಳೇ,

ನಿಮ್ಮ ಹಾರೈಕೆಗೆ ವಂದನೆಗಳು

Anonymous said...

'sharadhi', huh ? Beautiful....

Shiv said...

ಡಿಸೆಂಬರ್ ಸ್ಟಡ್,

ಮರಳಿ ಸ್ವಾಗತ..

Shiv said...

ತವಿಶ್ರೀ,

ನಿಮ್ಮ ಹಾರೈಕೆಯಂತೆ ಆಗಲಿ..

Shree said...

ತು೦ಬ ಚೆನ್ನಾಗಿದೆ... "ಏನೂ ಬದಲಾಗುವುದಿಲ್ಲ.." ಇಲ್ಲಿರುವ ಖಚಿತತೆ, ವಿಶ್ವಾಸ, ಇಷ್ಟ ಅಯ್ತು. ಅದು ಬೇಕು ಬದುಕಿಗೆ.
ಮತ್ತೆ ಮತ್ತೆ ಬರ್ತಿರ್ತೀನಿ...!!!

Shiv said...

ಶ್ರೀ ಅವರೇ,

ಪಾತರಗಿತ್ತಿಗೆ ಆತ್ಮೀಯ ಸ್ವಾಗತ !
ಆ ವಿಶ್ವಾಸ-ಖಚಿತತೆ ಬರೋದು ನಂಬುಗೆಯಿಂದ ಅಲ್ವಾ..

Sree said...

suuuuuuuuuper! ಉಊ ಅಂತ ಕನ್ನಡದಲ್ಲಿ ಎಳಿಯೋಕೆ ಆಗಲ್ಲ ಅಂತ ಇಂಗ್ಲಿಷ್ ಗೆ ಶರಣಾದೆ:) ಪಾತರಗಿತ್ತಿ ಪ್ರೇಮಲೋಕದಲ್ಲಿ ಹಾರೋಕೆ ಷುರು ಮಾಡ್ದಾಗಿಂದ ಇದು ಬೆಸ್ಟ್ ಕವನ ರೀ, ತುಂಬಾ ಅಂದ್ರೆ ತುಂಬಾ ಚೆನ್ನಾಗಿ ಬರೆದಿದ್ದೀರ:) ನಿಮ್ಮವ್ರು ಏನಂದ್ರು? ಈ ಥರ ಕವನ ಬರಿಯೋ ಹಾಗಿದ್ರೆ ಜಗಳ ಜಾಸ್ತಿ ಕಾಯ್ತೀನಿ ಅನ್ನಲಿಲ್ಲ ತಾನೆ?;p

Shiv said...

ಶ್ರೀಮಾತಾ,

ತುಂಬಾ ವಂದನೆಗಳು !
ನನ್ನಾಕೆ ಕವನ ಓದಿ ಸದ್ಯ ನೀವು ಹೇಳಿದ ಹಾಗೇ ಎನೂ ಹೇಳಲಿಲ್ಲ..ನಿಮ್ಮ ಕಾಮೆಂಟ್ ಓದಿ ಹಾಗೆ ಮಾಡಬೇಕು ಅಂದುಕೊಂಡರೆ ಕಷ್ಟ ರೀ..:)