Tuesday, September 06, 2022

ಯಾವ ಮೋಹನ ಮುರಳಿ ...

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, September 16, 2021

ಯಾ ಯಾಯಾ ಕೋಕೋ ಜಂಬೋ…

 

ಅವಧಿಯಲ್ಲಿ ನನ್ನ ಈ ಲೇಖನ ಪ್ರಕಟಿಸಿದ ಟೀಮ್ ಅವಧಿಗೆ ವಂದನೆಗಳು 


ಲೇಖನದ ಅವಧಿಯ ಲಿಂಕ್ ಇಲ್ಲಿದೆ 


Thursday, February 09, 2017

ಗೋಲಕದಿಂದ ...


ಮಗಳು ಬೆಳಗ್ಗೆಯೇ ಗೋಲಕ ಮುಂದಿಟ್ಟುಕೊಂಡು ಕುಳಿತು ಕೊಂಡಿದ್ದಳು...

ಅದರಲ್ಲಿ ಅವಳು ಬಹು ದಿನಗಳಿಂದ ಕೂಡಿಟ್ಟಿದ್ದ ನಾಣ್ಯ-ನೋಟುಗಳು.  ಮಗಳಿಗೆ ಆ ದುಡ್ಡಿನಿಂದ ತನ್ನ ಇಷ್ಟದ ಯಾವುದೋ ಒಂದು ಗೊಂಬೆ ಕೊಂಡುಕೊಳ್ಳುವ ಮಹತ್ ಯೋಜನೆ. ಅದರ ಬಗ್ಗೆ ಬಹಳ ಸಲ ಹೇಳಿದ್ದೇ ಹೇಳಿದ್ದು. ಗೋಲಕದಲ್ಲಿದ್ದ ಆ ಹಣದ ಬಗ್ಗೆ ಸ್ವಲ್ಪ ಜಾಸ್ತಿ ಪ್ರೀತಿ !

ಇಂತಪ್ಪ ಗೋಲಕದಿಂದ ಬೆಳ್ಳಂಬೆಳ್ಳಿಗ್ಗೆಯೇ ದುಡ್ಡು ಹೊರಬಂದಿತ್ತು. ಮಗಳು ನೋಟುಗಳನ್ನು ಮತ್ತು ನಾಣ್ಯಗಳನ್ನು ಗುಂಪೆ ಹಾಕಿಕೊಂಡು ಎಣಿಸುತ್ತಿದ್ದಳು.

ಮಗಳಿಗೆ ಕಾರಣ ಕೇಳಿದಾಗ ತಿಳಿದಿದ್ದು...
ಮಗು ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ತರಲಿಕ್ಕೆ , ತಾನು ಕೂಡಿಟ್ಟಿದ್ದ ಹಣ ಹೊರತೆಗೆಯುತಿತ್ತು.

ನನ್ನ ಮಗಳ ಪ್ರೀತಿಗೆ ಅದರ ನಿಷ್ಕಳಂಕ ರೀತಿಗೆ, ಕಣ್ಣ ಅಂಚಿನಲಿ ಹನಿ....



**********************

ನನ್ನ ಕಾಲೇಜಿನ ಕೊನೆಯ ಸೆಮಿಸ್ಟರ್ ಹೊತ್ತಿಗೆ ಮನೆಯಲ್ಲಿ ಸ್ವಲ್ಪ ಕಷ್ಟದ ಸಮಯ.

ನನ್ನ ಅಮ್ಮ ಗೋಲಕ ಒಡೆದು, ತಾನು ಕೂಡಿಟ್ಟಿದ್ದ ಹಣ ತೆಗೆದು ನನ್ನ ಕೈಗಿಟ್ಟಿದ್ದಳು.
ಆ ಕಷ್ಟದ ಕಾಲದಲ್ಲಿ ಆ ದುಡ್ಡು ಮತ್ತು ಆ ಸಾಂತ್ವನದ ಮಾತುಗಳು ನೀಡಿದ್ದವು ಧೈರ್ಯ..

*******************

ಧೈರ್ಯಕ್ಕೆ ಇನ್ನೊಂದು ಹೆಸರು ಬಹುಷಃ ಇವಳಿರಬಹುದು !

ಕಾಲೇಜಿನ ತನ್ನ ಓದು, ಮನೆಯ ಕೆಲಸ, ಮಗಳ ಕಾಳಜಿ ..
ಇವೆಲ್ಲವುಗಳನ್ನು ಅದು ಎಷ್ಟು ಸಮವಾಗಿ ತೂಗಿಸಿಕೊಂಡು ಹೋಗುತ್ತಿದ್ದಾಳೆ .

ಇಡೀ ದಿನ ಆಫೀಸಿನ ಕೆಲಸ ಮುಗಿಸಿಕೊಂಡು ಬಂದು, ಮತ್ತೆ ಅಡುಗೆಮನೆಯಲ್ಲಿ ಒಂದು ಗಂಟೆ ನಿಂತು ಏನೋ ಮಾಡುತ್ತಿದ್ದಳು.
ಆ ಶ್ರಮದ ಫಲ ನನ್ನ ನೆಚ್ಚಿನ ಹಾಲಿನ ಕೋವಾ !

ಜಿ.ಎಸ್.ಎಸ್ ಹೇಳಿದ್ದಂತೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ

*******************

ಆಫೀಸಿನಿಂದ ಮನೆಗೆ ಬಂದರೆ ಮನೆಯಲ್ಲಿ ಚೆಂದದ ಅಲಂಕಾರ !

ಮಗಳು ಅಮ್ಮನೊಂದಿಗೆ ಹೋಗಿ ಪುಟ್ಬಾಲ್ ತರದ ಕೇಕ್ ತಂದಿಟ್ಟಿದ್ದಳು..

ಈ ಪ್ರೀತಿಯ ಧಾರೆ..

ಆ ಧಾರೆಗೆ ನಾನು ಅರ್ಹನೇ ?
ಬಹು ಧನ್ಯತೆ, ಚಿಕ್ಕ ಭಯ

*******************

ಮತ್ತೆ ಜಿ.ಎಸ್.ಎಸ್ ಪದಗಳ ನೆರವು ಪಡೆದು...

ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

Saturday, June 04, 2016

ಗಿರಿಯಪ್ಪ ಗೌಡರ ಮಗಳು


ನನ್ನಿಷ್ಟದ ದಂಪತಿಗಳು ತಮ್ಮ ಅರವತ್ತನೇ ವಿವಾಹ ವಾರ್ಷಿಕ ಅಚರಿಸಿಕೊಳ್ಳುತ್ತಿದ್ದಾರೆ.
ಈ ಸಾಲುಗಳು ಆ ದಂಪತಿಗಳಿಗೆ ಮತ್ತು ಅವರ ದೀರ್ಘ ಸಹಬಾಳ್ವೆಗೆ..

ಇಲ್ಲಿನ ಕೆಲವು ಸಾಲುಗಳು ನೆಚ್ಚಿನ ಕೆ.ಎಸ್.ನ ಅವರಿಂದ ಸ್ಪೂರ್ತಿ!

****************************************

ಗಿರಿಯಪ್ಪ ಗೌಡರ ಮಗಳು ರತ್ನದಂತಹ ಹುಡುಗಿ ಊರಿಗೆಲ್ಲಾ
ಬಲುಜಾಣೆ ಗಂಭೀರೆ ಹೆಸರು ಕಮಲ
ಹತ್ತಿರದ ಹೊಳೆಯಿಂದ ನೀರ ತರುವಾಗವಳ ನೋಡಬೇಕು
ಕರುವನಾಡಿಸುವಾಗ ಅಡಿಕೆಯ ತೋಟದಲಿ ಅವಳ ಗಂಡನ ಹೆಸರು ಕೇಳಬೇಕು

ಮೊನ್ನೆ ಚಿಕ್ಕಬಸೂರು ಹಾಲಪ್ಪನವರ ಮಗನು ಹೆಣ್ಣ ನೋಡಲು ಬಂದ ಹೊಳೆಹೊನ್ನಿರಿಗೆ
ಅವರ ಮನೆಯಲಿ ಹೇಗೋ ಏನೋ ಎಂದಳು ಕಮಲ ಕೋಣೆಯೊಳಗೆ
ಚಿಕ್ಕ ಮಗಳ ಮಾತನು ಕೇಳಿ ನಕ್ಕುಬಿಟ್ಟರು ತಂದೆ
ಚಿಕ್ಕಬಸೂರಿನಿಂದ ಬಂದಿದ್ದ ಗಂಡು ಬಲು ಸೊಗಸುಗಾರ

ಹೆಸರು ಚಂದ್ರಶೇಖರ ಶಾಲೆಯ ಮಾಸ್ತರನಂತೆ
ಪ್ಯಾಂಟನಲಿ ಹೊಳೆಯುತಿಹ ಮಾಸ್ತರ ನೋಡಿ
ಹೊನಲಾಗಿಬಿಟ್ಟರು  ಹೊಳೆಹೊನ್ನೂರ ಜನತೆ
ಮುಂದೆ ಶುಭ ಮುಹೂರ್ತದಿ ಮದುವೆ ನಡೆಯಿತು ಮನೆಯಂಗಳದಿ

ಗೌಡರಿಗೆ ಚಿಂತೆ ಮಗಳ ಹೊಸಬದುಕ ಬಗ್ಗೆ
ಚಂದ್ರಶೇಖರ ಚಂದ್ರದಂತ ತಂಪನೆ ಮನಸಿನವನು
ಅದರ ಕಂಪಿನಲಿ ಅರಳಿತು ಬಲು ಬೇಗ ಪ್ರೀತಿ ಕಮಲ
ಬದುಕು ಬೆಳೆಯಿತು ಬಾಳು ಬೆಳಗಿತು

ಕಷ್ಟದಲಿ ಕೈಹಿಡಿದು ಸುಖದಲಿ ಸವಿನುಡಿದು
ಸವೆಸಿದರು ದಂಪತಿಗಳು ಬಾಳ ದಾರಿ
ಕಾಲ ಚಕ್ರ ಉರುಳಿ ವೇಗವಾಗಿ
ಅರಳಿ ನಿಂತವು ಐದು ಪ್ರೇಮ ಕುಸುಮಗಳು

ಶಶಿಧರನೆಂದರು ಸತೀಶನೆಂದರೂ  ಓಗೊಡುವ ಪರಶಿವನು
ಜೋಡಿಯ ಹರಸಿದನು ಸವಿ-ತಾ ತಂದು ಬಾಳನಲಿ
ಜೀವನ ಗೀತಾ ಸುಗುಮವಾಗಿ ಬದುಕು ಸುನಂದ-ನವಾಗಿ
ನೋಡು ನೋಡುತ್ತಾಲೇ ಕಳೆದು ಹೋದವು ದಶಕಗಳು ಆರು

ಚಂದ್ರಕಮಲವೀಗ  ಮೊಮ್ಮಕ್ಕಳು-ಮರಿಮಗಳ  ಕಲರವದ ಗೂಡು
ಮರಳಿ ನೋಡಲು ಗೌಡರ ಅದೇ ರತ್ನದಂತ ಹುಡುಗಿ
ಅದೇ  ಪ್ಯಾಂಟಿನ ತಂಪನೆ ಹುಡುಗ
ನಮ್ಮದೊಂದು ಶರಣು ಈ ಜೋಡಿ ಜೀವಕೆ ಹರಕೆ ಆಯುವಿಗೆ

****************************************

Thursday, February 18, 2016

ಅವಳು, ಮಗಳು, ನೆನಪು, ನಲಿವು

ಅದು ಯಾವುದೋ ನಗರಿ
ರಸ್ತೆ ರಸ್ತೆಯಲ್ಲ ಅಲ್ಲಿ
ಊರ ತುಂಬ ಕಾಲುವೆ
ಪಯಣ ಒಂದು ದೋಣಿಯಾನ
ಕಾಲುವೆಗೊಂದು ಕೆಂಪುಹಸಿರು ದೀಪ
ಹಸಿರುದೀಪದಿ ತೆರೆವ ಬಾಗಿಲು
ಮತ್ತೆ ಸಾಗುವ ದೋಣಿ
ದೋಣಿ ನಡೆಸುವ ಅವಳು
ಅವಳ ನಗು ಬೆಳದಿಂಗಳು

ಮತ್ತೆ ಯಾನ ನಿಲ್ಲಿಸುವ
ಕೆಂಪುದೀಪ ಆ ಬಾಗಿಲುಗಳು
ದೋಣಿ ನಿಂತಾಗ ನೋಡುವ
ಅವಳ ನಿಷ್ಕಳಂಕ ನಯನ
ಅದು ಸೋಸುವ ಪ್ರೀತಿ
ಆ ಪ್ರೀತಿಯ ರೀತಿ
ಮತ್ತೆ ಹಸಿರು ದೀಪ
ತೆರೆಯುವ ಬಾಗಿಲುಗಳು ಮನಸ್ಸು
ಹೊರಟಾಗ ಮತ್ತದೇ ಸಡಗರ

ದೂರ ತೀರದ ಪಯಾಣ
ದಣಿವು ಬಾಯರಿಕೆ ಕ್ರಮೇಣ
ಪ್ರಶ್ನೆಗಳು ಪ್ರಜ್ಞೆಗಳು
ಬಂದ ದಾರಿ ನೋಡಲು
ಹಿಂದೆ ಜಲ ಸಾಗರ
ಮುಂದೆ ದಾರಿ ಹುಡುಕಲು
ಮುಂದೆ ಜಲ ಸಾಗರ
ಅವಳದೊಂದು ಸ್ನಿಗ್ಧ ಮನ
ಅಲ್ಲೊಂದು ದಿಕ್ಸೂಚಿ

ದೂರ ಕಂಡ ತೀರದಂಚು
ದೋಣಿ ತುಂಬ ತುಂಬು ನಗು
ನಕ್ಕು ಕಣ್ಣು ಬಿಡಲು
ಪಕ್ಕ ಕನಸ ಮಲ್ಲಿಗೆ
ಅದೇ ನಯನ ತಾವರೆ
ಸೇರಿ ಸವಿದ ಮಧುರ ನೆನಪು
ಸಕ್ಕರೆ ಗೊಂಬೆ ಮುದ್ಧು ಮಗಳು
ಅವಳು, ಮಗಳು, ನೆನಪು, ನಲಿವು
ಪಯಣದಲ್ಲಿ ಇನ್ನೇನು ಆಯಾಸ !

Wednesday, November 11, 2015

ಆಕಾಶಬುಟ್ಟಿ

ದೀಪಾವಳಿಗೆ ಮನೆ ಮುಂದೆ ಆಕಾಶಬುಟ್ಟಿ ಕಟ್ಟಿದರೆ ಎಷ್ಟು ಚೆಂದ ...

ಇವಳ ತಲೆಯಲ್ಲಿ ಇಂತದೊಂದು ಯೋಚನೆ ಬಂದರೆ ಮುಗಿಯಿತು..
ಇಲ್ಲಿರುವ ಅಂಗಡಿಗಳಲ್ಲಿ ಎಲ್ಲಿ ಅಲೆದರೂ ಎಲ್ಲೂ ಆಕಾಶಬುಟ್ಟಿ ಸಿಗಲಿಲ್ಲ.

ಇವಳದೋ ತಲೆಯಲ್ಲಿ ಅಕಾಶಬುಟ್ಟಿಯೇ ತಿರುಗುತಿತ್ತು....

ಸರಿ.. ಕಾನೂನನ್ನು ಕೈಗೆ ತೆಗೆದುಕೊಂಡು ಆಕಾಶಬುಟ್ಟಿ ಮನೆಯಲ್ಲೇ ಮಾಡುವ ಯೋಜನೆಯಾಯಿತು.

**********************************

ಹಬ್ಬದ ದಿನ ಊರ ಮಾರುಕಟ್ಟೆಯಲ್ಲಿ ಬರೀ ಚೆಂಡಿ ಹೂವಿನದ್ದೇ ಕಂಪು ..
ಎಲ್ಲಿ ನೋಡಿದರೂ ಕೇಸರಿ-ಹಳದಿ ವರ್ಣದಲ್ಲಿ ನಳನಳಿಸುತ್ತ , ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸುವ ಸಮಗ್ರ ಭಾರವನ್ನು ತಾನೇ ಹೊತ್ತಂತೆ ತೋರುತಿತ್ತು.
ಅದೊಂದು ದಿವಸ ಅದೆಲ್ಲಿಂದ ತರುತ್ತಿದ್ದರೋ , ತಾವರೆ ಪಿರಕಿ ಎನ್ನುವ ಆ ಹಳದಿ ಚಿಕ್ಕ ಹೂವುಗಳು.

ಹೆಸರು ನೆನಪಾಗುತ್ತಿಲ್ಲ..ಉದ್ದನೇ ಹುಲ್ಲಿನಂತಹ ಗಿಡದ ತೊನೆ ತೊನೆ ಎಲ್ಲೆಡೇ ...

ಇಷ್ಟು ಖರೀದಿಸಿ ಅಪ್ಪನ ಜೊತೆ ಸಾಗುತ್ತಿರುವಾಗ , ಹೆಜ್ಜೆಗಳು ಗಕ್ಕನೆ ನಿಲ್ಲುತ್ತಿದ್ದವು ಶೆಟ್ಟಿ ಅಂಗಡಿ ಮುಂದೆ..
ಪಟಾಕಿ ಸರ, ರಾಕೆಟ್, ಲಕ್ಷ್ಮೀ ಪಟಾಕಿ , ಭೂ ಚಕ್ರ , ಹನುಮಂತನ ಬಾಲ, ಸುರಸುರ ಬತ್ತಿ, ಹಾವಿನ ಗುಳಿಗೆ, ಹೂವಿನ ಕುಂಡಕ್ಕಾಗಿ !

ಮನೆಗೆ ಬಂದ ಕೂಡಲೇ ಅಟ್ಟಿ ಲಕ್ಕವ್ವ ಮಾಡುವ ಕೆಲಸ ಶುರು.

ಸೆಗಣಿಯಲ್ಲಿ ಚಿಕ್ಕ ಗುಂಡಿನಾಕೃತಿಗಳನ್ನು  ಮಾಡಿ, ಅದಕ್ಕೆ  ಚೆಂಡಿ, ತಾವರೆ ಪಿರಕಿ ಸಿಗಿಸಿ ಅಲಂಕರಿಸಿದರೆ ಅದುವೇ ಅಟ್ಟಿ ಲಕ್ಕವ್ವ .
ಮನೆಯ ಬಾಗಿಲ ಹೊಸ್ತಿಲನ ಎರಡು ಕಡೆ , ಬೀಸುವ ಕಲ್ಲಿನ ಹತ್ತಿರ, ಒನಕೆ ಕುಟ್ಟುವ ಕಲ್ಲಿನ ಹತ್ತಿರ ಒಂದೊಂದು ಲಕ್ಕವ್ವ ಇಟ್ಟು, ಅದರ ಪಕ್ಕ ಒಂದು ಹುಲ್ಲಿನ ದಂಟು.
ಇಷ್ಟು ಮಾಡುವಷ್ಟರಲ್ಲೇ ಕತ್ತಲು ಕದ ತಟ್ಟುತಿತ್ತು.

ಮಣ್ಣಿನ ಚಿಕ್ಕ ಹಣತೆಗಳನ್ನು  ಲಕ್ಕವ್ವ ಇದ್ದ ಕಡೆ ಇಟ್ಟು ದೀಪ ಹಚ್ಚಿದರೆ... ಮನೆಯ ಮುಂದೆ ಕಟ್ಟಿದ ಆಕಾಶಬುಟ್ಟಿಯ ಚುಮು ಚುಮು ಬೆಳಕಿನೊಂದಿಗೆ ಅದೊಂದು ಬೇರೆಯದೇ ಲೋಕ !

**********************************

ಆಕಾಶಬುಟ್ಟಿ = Diwali Lantern ಎಂದು ಸರಳವಾಗಿ ಸಮೀಕರಿಸಿ, ಮಗಳಿಗೆ ಆಕಾಶಬುಟ್ಟಿ ಮಾಡುವ ಮಹತ್ ಯೋಜನೆಯ ಬಗ್ಗೆ ಹೇಳಿದ್ದಾಯಿತು. ಮಗಳು ಸಂಭ್ರಮದಲ್ಲೇ ಸಹಾಯಕ್ಕೆ ನಿಂತಳು. ಬಣ್ಣದ ಕಾಗದ ಕತ್ತರಿಸಿ , ಅವುಗಳನ್ನು ಸೇರಿಸಿ ಆಕೃತಿ ಮಾಡಿ , ಚಮಕ್ ಗೆ ಪಳಪಳವೆನ್ನುವ ಕಾಗದ ಹಚ್ಚಿ , ಉದ್ದನೆ ಬಾಲ ಗುಚ್ಚವನ್ನು  ಇಳಿಬಿಟ್ಟು , ಮೇಲೆ ದಾರ ಪೋಣಿಸಿದರೆ ಆಕಾಶಬುಟ್ಟಿ  ತಯಾರು !



ಆಕಾಶಬುಟ್ಟಿ ತೋರಿಸಿಲು ನೋಡಿದರೆ ಇವಳೂ ನಿದ್ದೆ , ಮಗಳೂ ನಿದ್ದೆ.

ಬೆಳಿಗ್ಗೆ ಎಚ್ಚರವಾಗಿದ್ದೇ ಇವರಿಬ್ಬರ ಸಂಭ್ರಮದ ಕಿಳಕಿಲದಿಂದ.. ಆಕಾಶಬುಟ್ಟಿ ಹಿಡಿದು ಸಂಭ್ರಮಿಸುತ್ತಿದ್ದರು.  ನಮ್ಮತ್ತೆಯವರು ಆಕಾಶಬುಟ್ಟಿಯ ಬಾಲ ಹಿಂಗೆ ಇರುತ್ತೆ ಎನ್ನುವ ದೃಡೀಕರಣ ಕೊಡುವಲ್ಲಿಗೆ ಆಕಾಶಬುಟ್ಟಿಗೆ ಒಂದು ಅಧಿಕೃತ ಮೊಹರು ದೊರೆಯಿತು !

ಇನ್ನೇನೂ ಹೋಗಿ ಮನೆ ಹೊರಗೆ ಕಟ್ಟಬೇಕು ಅನ್ನುವಷ್ಟರಲ್ಲಿ , ಮಗಳು ಐಪೋನ್ನ ಸಿರಿಗೆ 'Is it going to rain today ' ಎಂದು ಕೇಳಿದಳು. ಸಿರಿಯಿಂದ  'Its going to rain today , please carry umbrella ' ಎಂದು ತಾಕೀತು.  ಮಳೆಯ ಕಾರಣ ಆಕಾಶಬುಟ್ಟಿ ಹಾಕುವ ಕಾರ್ಯಕ್ರಮ ಮುಂದೂಡಲಾಯಿತು.

**********************************

ಲಕ್ಷ್ಮಿ ಪೂಜೆ ಮುಗಿಸುತ್ತಿದಂತೆ  ಪಟಾಕಿ ಹೊಡೆಯುವುದು ಶುರುವಾಗುತಿತ್ತು.

ಕಮಲದಲ್ಲಿ ನಿಂತ ಲಕ್ಷ್ಮಿ ಚಿತ್ರವಿದ್ದ, ನೀಲಿ ಬಣ್ಣದ, ದಪ್ಪನೆ , ಉದ್ದನೆ ಪಟಾಕಿ ಅಬ್ಬರಿಸಿ ಬೊಬ್ಬಿಡುವ ಸದ್ದು ಮಾಡುತಿತ್ತು. ಕೆಂಪನೆ ಸರ ಪಟಾಕಿ ನಿಮಿಷದಲ್ಲಿ ಉರಿದು ಸಿಡಿದಾಗ ಮತ್ತೆ ಬರಿಗೈ. ರಾಕೆಟ್ಗಳು ಬಹುತೇಕ ಆಕಾಶಕ್ಕೆ ಹೋದರೆ ಇನ್ನು ಕೆಲವು ಬಾಟಲಿ ಉರುಳಿ ನೆಲಕ್ಕೆ ಸಮವಾಗಿ ಹಾರಿ ನಷ್ಟದ ಲೆಕ್ಕಕ್ಕೆ ಸೇರುತ್ತಿದ್ದವು. ಎತ್ತರಕ್ಕೆ ಹೂ ಸುರಿಸುತ್ತಿದ್ದ ಹೂವಿನ ಕುಂಡ ಕೆಲವೊಮ್ಮೆ ಏನು ಮಾಡದೆ ಸುಮ್ಮನಾಗುತಿತ್ತು. ಆಗೆಲ್ಲಾ ಅದರ ಮೂತಿ ಹರಿದು ಕಲ್ಲಿಗೆ ಅದನ್ನು ಉಜ್ಜಿ ಮರಳಿ ಪ್ರಯತ್ನ ನಡೆಯುತ್ತಿತ್ತು.

 ಭೂ ಚಕ್ರ ತಿರುಗುವಾಗ ಮಹಾಭಾರತದ ಕೃಷ್ಣನ ಚಕ್ರ ನೆನಪಾಗಿದ್ದು, ಕೈಯಲ್ಲಿ ಇದು ತಿರುಗಿದರೆ ಎಷ್ಟು ಚೆನ್ನ ಎಂದು ತರಲೆ ಯೋಚನೆಗೆ ಬರವಿರುತ್ತಿರಲಿಲ್ಲ ..   ಇನ್ನು ಸುರಸುರ ಬತ್ತಿ, ಹಾವಿನ ಗುಳಿಗೆಗಳು ಕಾರ್ಯಕ್ರಮದ ನಡುವೆ ಬರುವ ಜಾಹಿರಾತಿನಂತೆ ಬಂದು ಸುಟ್ಟು ಹೋಗುತ್ತಿದ್ದವು.

ಇವೆಲ್ಲದರ ನಡುವೆ ಒಂದು ಸಲ ಕೈ ಸುಟ್ಟುಕೊಂಡು  ಬರ್ನಲ್ ಹಚ್ಚಿಕೊಳ್ಳದಿದ್ದರೆ ಹೇಗೆ !

ಪಟಾಕಿ ಕಾರ್ಯಕ್ರಮದ ಕೊನೆಯ ಅಂಕ.. ಪಟಾಕಿ ರೈಲು

ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಉದ್ದದ ದಾರ ಬಿಗಿದು , ಆ ದಾರದಲ್ಲಿ ಪಟಾಕಿ ರೈಲು ಪೋಣಿಸಿ , ಊದುಬತ್ತಿಯ ತುದಿಯಲ್ಲಿನ ಕಿಡಿಯನ್ನು ರೈಲಿನ ಬಿಳಿ ತುದಿಗೆ ಹತ್ತಿಸಿದಾಗ ಓಡುತಿತ್ತು ಆ ರೈಲು. ಕಟ್ಟಿದ ದಾರದ ಉದ್ದಕ್ಕೂ ಬೆಳಕು ಚೆಲ್ಲುತ್ತಾ ವೇಗವಾಗಿ ಸಾಗಿ ಕೊನೆಗೆ ಮದ್ದು ಮುಗಿಯುದ್ದಿಂತೆ ದಾರದಲ್ಲೇ ಗಿರಕಿ ಹೊಡೆಯುತಿತ್ತು.

**********************************

ಅಂತು ಮಳೆ ನಿಂತು , ಸಿರಿ 'Its not going to rain in next few days' ಎಂದು ಅಪ್ಪಣೆ ಕೊಟ್ಟಾಗ , ಆಕಾಶಬುಟ್ಟಿ ಮನೆಯ ಮುಂದೆ ಕಟ್ಟಲ್ಪಟ್ಟಿತು.
ಈ ಆಕಾಶಬುಟ್ಟಿಯ ಕೆಳಗೆ ಪಟಾಕಿ ರೈಲು,  ಅಟ್ಟಿ ಲಕ್ಕವ್ವ , ಬರ್ನಲ್ ವಾಸನೆ  ಯಾಕೋ ನೆನಪಾದವು..



**********************************

ಪಾತರಗಿತ್ತಿ ಶುರು ಮಾಡಿ ಮುಂದಿನ ವರ್ಷಕ್ಕೆ ಒಂದು ದಶಕ. ತೋಚಿದ್ದು - ಬಯಸಿದ್ದು ಬರಿಯಲ್ಲಿಕ್ಕೆ ನನಗೆ ಇದ್ದ ಒಂದು ಚಿಕ್ಕ ಪ್ರಪಂಚ ಇದು.
'ಜ್ಹಿಂದಗಿ ಏಕ್ ಸಫರ ಸುಹಾನ..' ಎನ್ನುತ್ತಾ ಕಾಲಿಗೆ ಚಕ್ರ ಕಟ್ಟಿಕೊಂಡು ಬದುಕು ಕಟ್ಟಿ ಕೊಳ್ಳುವ ಇರಾದೆಯಲ್ಲಿ , ಕಳೆದು ಕೆಲವು ವರ್ಷ ಪಾತರಗಿತ್ತಿ ಎಲ್ಲೂ ಹಾರಿದ್ದೇ ಇಲ್ಲ..

ಈ ಆಕಾಶಬುಟ್ಟಿ ಮೂಲಕ ಕನಸು-ನನಸು-ನೆನಪುಗಳಿಗೆ  ಪದ ಕಟ್ಟುವ ಪ್ರಯತ್ನಕ್ಕೆ ಮರಳುತ್ತಿದ್ದೇನೆ . ..

ಎಲ್ಲರಿಗೂ ದೀಪಾವಳಿಯ  ಶುಭಾಶಯಗಳು !

Monday, January 10, 2011

ಕೂಪರ್‍, ಹೈಜ್ಯಾಕ್ ಮತ್ತು ದಂತಕತೆ

೧೯೭೧ರ ನವೆಂಬರ್ ತಿಂಗಳ ಆ ತಣ್ಣನೆ ಸಂಜೆಯಲ್ಲಿ ಬೋಯಿಂಗ್ ೭೨೭ ವಿಮಾನ ಪೋರ್ಟ್‍ಲೆಂಡ್‍ನಿಂದ ಸಿಯಾಟಲ್-ಟೆಕೋಮಾಕ್ಕೆ ಹೊರಡುವ ಸಿದ್ಧತೆಯಲ್ಲಿತ್ತು. ವಿಮಾನ ಹೊರಡುವ ಅರ್ಧ ಘಂಟೆ ಮುಂಚೆ, ನಾರ್ಥ್‍ವೆಸ್ಟ್ ವಿಮಾನಯಾನ ಕಂಪೆನಿಯ ಟಿಕೆಟ್ ಕೌಂಟರ್‍ನಲ್ಲಿ ಡ್ಯಾನ್ ಕೂಪರ್ ಹೆಸರಿನ ವ್ಯಕ್ತಿ ೨೦ ಡಾಲರ್ ಕೊಟ್ಟು ಟಿಕೆಟ್ ಕೊಂಡು ವಿಮಾನವೇರಿದ್ದ. ಸುಮಾರು ೯೦ ಜನ ಹಿಡಿಸುವ ಆ ವಿಮಾನದಲ್ಲಿ, ಅಂದು ೩೭ ಜನ ಅಷ್ಟೇ ಪ್ರಯಾಣಿಕರಿದ್ದರು.

ನಿಗದಿತ ಸಮಯಕ್ಕೆ ವಿಮಾನ ನೆಲ ಬಿಟ್ಟು ಆಕಾಶಕ್ಕೆ ನೆಗೆದು ಕೆಲವೇ ನಿಮಿಷಗಳಾಗಿತ್ತು. ಹತ್ತಿರದಲ್ಲಿಯೇ ಇದ್ದ ಗಗನ ಪರಿಚಾರಕಿಗೆ , ಆ ಕೂಪರ್ ಕಾಗದದ ತುಂಡನ್ನು ನೀಡಿದ್ದ. ಆ ಕಾಗದವನ್ನು ಆಕೆ ತನ್ನ ಕಿಸೆಗೆ ಸೇರಿಸುವಷ್ಟರಲ್ಲಿ, ಕೂಪರ್ ಅವಳೆಡೆ ಬಾಗಿ,ತನ್ನ ಬ್ರೀಫ್ ಕೇಸ್ ಕಡೆ ತೋರಿಸಿ, ತನ್ನ ಬಳಿ ಬಾಂಬ್ ಇರುವುದೆಂದು ಕೂಡಲೇ ಆ ಪತ್ರವನ್ನು ಓದಬೇಕೆಂದು ಕೇಳಿದ್ದ. ಗಾಭರಿಗೊಂಡ ಪರಿಚಾರಕಿ ಆ ಕಾಗದವನ್ನು ವಿಮಾನದ ಪೈಲಟ್ ಬಳಿ ಒಯ್ದಳು. ಪೈಲಟ್ ತಕ್ಷಣವೇ ನಿಲ್ದಾಣವನ್ನು ಸಂಪರ್ಕಿಸಿ ಬಾಂಬ್ ಬೆದರಿಕೆಯ ಬಗ್ಗೆ ತಿಳಿಸಿದ್ದ. ಕೆಲವೇ ಕ್ಷಣಗಳಲ್ಲಿ ಸಿಯಾಟೆಲ್ ಪೋಲಿಸ್ ಮತ್ತು ಎಫ್.ಬಿ.ಐ ಕಾರ್ಯನಿರತವಾಗಿದ್ದವು.

ನಾರ್ಥ್‍ವೆಸ್ಟ್‍ ಕಂಪೆನಿಗೆ ಕೂಪರ್‌ನ ಬೇಡಿಕೆಗಳು - ಸಿಯಟಲ್‍ನಲ್ಲಿ ವಿಮಾನ ಇಳಿದಾಗ ೨ ಮಿಲಿಯನ್ ಡಾಲರ್ ನಗದು ಮತ್ತು ಎರಡು ಜೊತೆ ಪ್ಯಾರಾಚೂಟ್‍ಗಳು. ನಗದು ಹಣ ಇಪ್ಪತ್ತು ಡಾಲರ್‌ಗಳ ಕಟ್ಟುಗಳಲ್ಲಿ ಇರಬೇಕೆಂದು, ಆ ನೋಟುಗಳು ಒಂದೇ ಕ್ರಮಾಂಕದಲ್ಲಿ ಇರಬಾರದೆಂದು ಸೂಚನೆಗಳಿದ್ದವು. ಇಷ್ಟು ಸೂಚನೆಗಳನ್ನು ನಿಯಂತ್ರಣ ಕೊಠಡಿಗೆ ರವಾನಿಸಿದ ಪೈಲಟ್. ಹಣ ಮತ್ತು ಪ್ಯಾರಾಚೂಟ್ ಸಿದ್ಧವಾಗುವವರೆಗೆ ಆಕಾಶದಲ್ಲೇ ಹಾರಬೇಕೆಂದು ಕೂಪರ್ ಪೈಲೆಟ್‍ಗೆ ಮತ್ತೊಂದು ಆದೇಶ ನೀಡಿದ್ದ. ತಾನು ಪೊಳ್ಳು ಬೆದರಿಕೆ ಹಾಕುತ್ತಿಲ್ಲವೆಂದು ತೋರಿಸಲು, ಪರಿಚಾರಿಕೆಗೆ ತನ್ನ ಬ್ರೀಫ್ ಕೇಸ್ ತೆರೆದು ಅದರಲ್ಲಿದ್ದ ಎರಡು ಕೆಂಪು ಸಿಲಂಡರ್‌ಗಳು ಮತ್ತು ಅವಕ್ಕೆ ಜೋಡಿಸಿದ್ದ ವೈರ್‌‍ಗಳನ್ನು ತೋರಿಸಿದ್ದ.

ಇತ್ತ ಕೂಪರ್ ಕೇಳಿದ್ದ ೨ ಮಿಲಿಯನ್ ಡಾಲರ್ ಹಣವನ್ನು ಹೊಂದಿಸುವ ಕಾರ್ಯ ಶುರುವಾಯ್ತು. ಕೂಪರ್ ಬೇಡಿಕೆಯಂತೆ ಒಂದೇ ಕ್ರಮಾಂಕದ ನೋಟುಗಳನ್ನು ಎಫ್.ಬಿ.ಐ ಕೊಡಲಿಲ್ಲ. ಆದರೆ ಆ ಎಲ್ಲಾ ನೋಟುಗಳು ಒಂದೇ ಕೋಡ್ ಅಕ್ಷರದಿಂದ ಶುರುವಾಗುವ ಹಾಗೇ ನೋಡಿಕೊಂಡಿದ್ದರು. ಅದರ ಜೊತೆಗೆ ಅಲ್ಪ ಸಮಯದಲ್ಲೇ ಆ ಎಲ್ಲಾ ೧೦ ಸಾವಿರ ಸಂಖ್ಯೆಯಲ್ಲಿದ್ದ ೨೦ ಡಾಲರ್ ನೋಟುಗಳ ಮೈಕ್ರೋಫಿಲಂ ಸಹ ತೆಗೆದುಕೊಳ್ಳಲಾಗಿತ್ತು !

ಹಣ ಮತ್ತು ಪ್ಯಾರಾಚೂಟ್ ಸಿದ್ಧವಾದ ತಕ್ಷಣ, ಪೈಲೆಟ್‍ಗೆ ಸಂದೇಶ ರವಾನೆಯಾಯ್ತು. ಸಿಯಟಲ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ಕೂಪರ್ ವಿಮಾನವನ್ನು ನಿಲ್ದಾಣದಿಂದ ದೂರವಿರುವ ಆದರೆ ತುಂಬಾ ಬೆಳಕಿರುವ ಪ್ರದೇಶದಲ್ಲಿ ನಿಲ್ಲಿಸಲು ಹೇಳಿದ್ದ. ಹಾಗೇ ವಿಮಾನದ ಒಳಗಿದ್ದ ದೀಪಗಳೆಲ್ಲವನ್ನು ಆರಿಸಲು ಹೇಳಿದ್ದ. ಹೊರಗಿನಿಂದ ವಿಮಾನದ ಮೇಲೆ ಶಾರ್ಪ್ ಶ್ಯೂಟರ್ಸ್ ಸಹಾಯದಿಂದ ದಾಳಿ ಮಾಡಬಹುದಾದ ಯೋಚನೆಯನ್ನು ಕೂಪರ್ ಈ ಮೂಲಕ ಮೊದಲೇ ಗ್ರಹಿಸಿದ್ದ.

ನಂತರ ವಿಮಾನಯಾನ ಕಂಪೆನಿಯ ನೌಕರನೊಬ್ಬನೇ ಬಂದು, ಎರಡು ಜೊತೆ ಪ್ಯಾರಾಚೂಟ್ ಮತ್ತು ಹಣವನ್ನು ವಿಮಾನದ ಹತ್ತಿರಕ್ಕೆ ತರಬೇಕೆಂದು ಮುಂದಿನ ಆದೇಶವಾಗಿತ್ತು. ಅದರಂತೆ ಹಣ ಮತ್ತು ಪ್ಯಾರಾಚೂಟ್ ಬಂದಾಗ, ವಿಮಾನದ ಪರಿಚಾರಿಕೆಯಿಂದ ಅವನ್ನು ವಿಮಾನದೊಳಗೆ ತರಿಸಿದ್ದ. ತನ್ನ ಬೇಡಿಕೆ ಈಡೇರಿದ ನಂತರ, ವಿಮಾನದ ಸಿಬ್ಬಂದಿಯೊಂದನ್ನು ಬಿಟ್ಟು ವಿಮಾನದಲ್ಲಿದ್ದ ಇತರ ೩೬ ಪ್ರಯಾಣಿಕರನ್ನು ಬಿಡುಗಡೆ ಮಾಡಿದ್ದ. ಅಲ್ಲಿಂದ ಬಿಡುವ ಮುಂಚೆ ವಿಮಾನಕ್ಕೆ ಇಂಧನ ತುಂಬಿಸುವ ಆದೇಶ ನೀಡಿದ್ದ.

ವಿಮಾನ ಸಿಯಟಲ್ ಬಿಟ್ಟ ನಂತರ, ಪೈಲೆಟ್‍ಗೆ ವಿಮಾನವನ್ನು ೧೦ ಸಾವಿರ ಅಡಿ ಎತ್ತರದಲ್ಲಿ, ೧೫೦ ನಾಟ್(ಸುಮಾರು ಗಂಟೆಗೆ ೨೦೦ ಮೈಲಿ) ವೇಗದಲ್ಲಿ ಮತ್ತು ರೆಕ್ಕೆಗಳು ೧೫ ಡಿಗ್ರಿ ಕೋನದಲ್ಲಿ ಹಾರಿಸಬೇಕೆಂದು ನಿರ್ದೇಶಿಸಿದ್ದ. ನಂತರ ಮೆಕ್ಸಿಕೋ ದೇಶಕ್ಕೆ ವಿಮಾನ ತಿರುಗಿಸಲು ಹೇಳಿದ್ದ. ಆದರೆ ವಿಮಾನದಲ್ಲಿರುವ ವಿಮಾನ ಅಲ್ಲಿಯವರೆಗೆ ಸಾಕಾಗುವುದಿಲ್ಲವೆಂದು ಪೈಲೆಟ್ ಹೇಳಿದ ನಂತರ, ಬೇರೊಂದು ನಿಲ್ದಾಣದಲ್ಲಿ ಇನ್ನೊಂದು ನಿಲುಗಡೆ ಮಾಡಿ ಇಂಧನ ತುಂಬಿಸಿಕೊಳ್ಳುವ ನಿರ್ಧಾರವಾಯ್ತು.


ಸಿಯಟಲ್‍ನಿಂದ ಹಾರಿದ ಸ್ಪಲ್ಪ ಸಮಯದಲ್ಲೇ ವಿಮಾನದ ಸಿಬ್ಬಂದಿಯೆಲ್ಲವೂ ಕಾಕ್‍ಪಿಟ್ ಒಳಗೆ ಸೇರಬೇಕೆಂದು ಆದೇಶ ನೀಡಿದ್ದ ಕೂಪರ್. ಆದಾಗಿ ಸ್ಪಲ್ಪ ಸಮಯದಲ್ಲೇ, ವಿಮಾನದ ಹಿಂಬದಿಯ ಬಾಗಿಲು ತೆರೆದ ಶಬ್ದ ಕೇಳಿಸಿತ್ತು. ಕೂಪರ್ ಹಣವನ್ನು ಕಟ್ಟಿಕೊಂಡು ವಿಮಾನದಿಂದ ಪ್ಯಾರಾಚೂಟ್‍ನಲ್ಲಿ ಕತ್ತಲೆಯ ರಾತ್ರಿಗೆ ಜಿಗಿದಿದ್ದ. ಹೊರಗಡೆ ಸುಮಾರು ಮೈನಸ್ ೭ ಡಿಗ್ರಿ ಚಳಿಯಿತ್ತು.

ಬಾಂಬ್ ಬೆದರಿಕೆಯಲ್ಲಿದ್ದ ವಿಮಾನ ಸಿಬ್ಬಂದಿ ಮುಂದಿನ ನಿಲ್ದಾಣ ಬರುವವರೆಗೆ ಕಾಕ್‍ಪಿಟ್‍ನಿಂದ ಹೊರಬರಲಾಗಲಿಲ್ಲ. ವಿಮಾನ ನೆಲಕ್ಕೆ ಮುಟ್ಟಿದ ನಂತರ ನೋಡಿದಾಗ, ವಿಮಾನದ ಬಾಗಿಲು ತೆರೆದಿತ್ತು. ಹಣ, ಪ್ಯಾರಾಚೂಟ್ ಮತ್ತು ಕೂಪರ್ ಮಾಯವಾಗಿದ್ದ.

ತಕ್ಷಣವೇ ಶುರುವಾಯ್ತು ತನಿಖೆ. ಆದರೆ ವಿಪರೀತ ಮಳೆಯ ಕಾರಣ ಕೂಪರ್ ಹಾರಿದ್ದ ಪ್ರದೇಶವನ್ನು ಜಾಲಾಡುವುದು ಮರುದಿನ ಬೆಳಿಗ್ಗೆಯವರೆಗೆ ಮುಂದೂಡಲಾಯಿತು. ವಿಮಾನ ಸಿಬ್ಬಂದಿಯನ್ನು ಮಾತಾಡಿಸಿದ ಎಫ್.ಬಿ.ಐ, ಡಿಬಿ ಕೂಪರ್‌ನ ಒಂದು ರೇಖಾಚಿತ್ರ ನಿರ್ಮಿಸಿದರು. ಕೂಪರ್ ವಿಮಾನದಲ್ಲಿ ಬಿಟ್ಟು ಹೋಗಿದ್ದು ತನ್ನ ಟೈ ಮತ್ತು ಸೇದಿ ಎಸೆದಿದ್ದ ಸಿಗರೇಟ್ ತುಂಡುಗಳು.

ಕೂಪರ್ ಹಾರಿದ ಪ್ರದೇಶದ ಶೋಧನೆ ಕಾರ್ಯ ಪ್ರಾರಂಭವಾಯ್ತು. ನೆಲ ಮತ್ತು ವಾಯು ಮಾರ್ಗದಲ್ಲಿ ತೀವ್ರ ಶೋಧನೆಯ ನಂತರವೂ ಕೂಪರ್ ಅಥವಾ ಅವನ ಅವಶೇಷಗಳಾಗಲಿ, ಹಣ ಅಥವಾ ಪ್ಯಾರಾಚೂಟ್ ಯಾವುದೂ ಸಿಗಲಿಲ್ಲ.

ಈಡೀ ಹೈಜಾಕ್ ಯೋಜನೆಯನ್ನು ತುಂಬಾ ಯೋಚಿಸಿ ಮಾಡಲಾಗಿತ್ತು. ೨೦ ಡಾಲರ್‌ಗಳ ಕಂತುಗಳಲ್ಲಿ ೨೦ ಮಿಲಿಯನ್ ಡಾಲರ್ ಸುಮಾರು ೨೦ ಪೌಂಡ್(ಸುಮಾರು ೧೦ ಕೆಜಿ) ತೂಕವಾಗುತಿತ್ತು. ಕಡಿಮೆ ಮೊತ್ತದ ಕಂತುಗಳಾದರೆ ತೂಕ ಹೆಚ್ಚಾಗುತ್ತೆಂದು , ಹೆಚ್ಚಿನ ಮೊತ್ತದ ನೋಟುಗಳು ಸುಮ್ಮನೆ ಸಂಶಯವುಂಟು ಮಾಡುವುದು ಎಂಬ ಮುಂದಾಲೋಚನೆ ಮಾಡಲಾಗಿತ್ತು.ಹಾಗೆ ವಿಮಾನದ ವೇಗ, ಹಾರುವ ಎತ್ತರ, ಕೋನ, ನಿಲ್ದಾಣಗಳ ಬಗ್ಗೆ ತುಂಬಾ ಮಾಹಿತಿಯುಳ್ಳವರು ಈ ಕೆಲಸಕ್ಕೆ ಕೈಹಾಕಿದ್ದರು.

ಎಫ್.ಬಿ.ಐ ಸುಮಾರು ೨ ಸಾವಿರ ಜನರನ್ನು ತನಿಖೆಗೆ ಒಳಪಡಿಸಿತ್ತು. ಕೂಪರ್‌ಗೆ ನೀಡಿದ ಆ ನೋಟುಗಳ ಕ್ರಮಸಂಖೆಗಳನ್ನು ಎಲ್ಲಾ ಬ್ಯಾಂಕುಗಳಿಗೂ, ಪ್ರಪಂಚದ ಎಲ್ಲಾ ತನಿಖಾ ಸಂಸ್ಥೆಗಳಿಗೆ ನೀಡಲಾಗಿತ್ತು. ಆ ಹಣಗಳು ಎಲ್ಲಿ ಚಲಾವಣೆಗೆ ಬಂದರೂ ಅದನ್ನು ಹಿಂಬಾಲಿಸುವ ಪ್ರಯತ್ನವಾಗಿತ್ತು. ಆದರೆ ಅ ನೋಟುಗಳು ಚಲಾವಣೆಗೆ ಬರಲಿಲ್ಲ.

ಸರಿಸುಮಾರು ಅರ್ಧ ಡಜನ್ ಜನರು ಕೂಪರ್ ಇರಬಹುದೆಂದು ದಟ್ಟ ವದಂತಿಗಳಿದ್ದವು. ಆದರೆ ಅವರು ಯಾರು ಕೂಪರ್‌‍ನ ಗುಣ-ಲಕ್ಷಣಗಳಿಗೆ ಹೋಲಿಕೆಯಾಗಲೇ ಇಲ್ಲ.


ಇದಾಗಿ ಸುಮಾರು ೧೦ ವರ್ಷದ ನಂತರ , ಅದೇ ಪ್ರದೇಶದಲ್ಲಿ ನದಿಯ ದಂಡೆಯಲ್ಲಿ ಆಡುತ್ತಿದ್ದ ಚಿಕ್ಕ ಹುಡುಗನೊಬ್ಬನಿಗೆ, ನೆನೆದು ಹಾಳಾಗಿ ಹೋದ ಮೂರು ೨೦ ಡಾಲರ್ ನೋಟುಗಳ ಕಂತೆಗಳು ಸಿಕ್ಕವು. ಅವುಗಳ ಕ್ರಮಾಂಕವೂ ಕೂಪರ್‌ಗೆ ಕೊಟ್ಟ ನೋಟುಗಳೊಂದಿಗೆ ಹೊಂದಿಕೆಯಾಗುತಿತ್ತು. ಉಳಿದ ಹಣ ಮತ್ತು ಕೂಪರ್ ಬಗ್ಗೆ ಮತ್ತೆ ತನಿಖೆ ಶುರುವಾಯ್ತು. ಯಾವುದೇ ಫಲಿತಾಂಶವೂ ಬರಲಿಲ್ಲ.

ಕೂಪರ್ ಜಿಗಿತ ದಂತಕತೆಯಾಗಿ ಬಿಟ್ಟಿತ್ತು ಮತ್ತು ಕಾಪಿಕ್ಯಾಟ್‍ಗಳನ್ನು ತಯಾರುಮಾಡಿಬಿಟ್ಟಿತ್ತು. ಅದೇ ವರ್ಷದಲ್ಲಿ ಕನಿಷ್ಟ ಮೂರು ಅಂತಹ ವಿಮಾನ ಅಪಹರಣ ಮತ್ತು ಜಿಗಿತದ ವಿಫಲ ಪ್ರಯತ್ನಗಳು ನಡೆದವು. ಆದರೆ ಯಾರು ಕೂಪರ್ ಸಾಧಿಸಿದ್ದನ್ನು ಮೀರಲಾಗಲಿಲ್ಲ.

********************
ಕೂಪರ್ ಹೈಜಾಕ್ ಪ್ರಕರಣದ ವಿಮಾನಯಾನದ ರೂಪುರೇಶೆಯನ್ನು ಸಂಪೂರ್ಣ ಬದಲಾಯಿಸಿತು.

ಬೋಯಿಂಗ್‍ನ ೨೩೭ ವಿಮಾನದ ಬಾಗಿಲುಗಳು ತೆರೆಯದಂತೆ ವಾಲ್‍ವನ್ನು ಆಳವಡಿಸಲಾಯ್ತು. ಅದಕ್ಕೆ ’ಕೂಪರ್ ವೇನ್’ ಎಂದು ಹೆಸರು !

ವಿಮಾನ ಎರುವುದಕ್ಕಿಂತ ಮುಂಚೆ ಪ್ರಯಾಣಿಕರ ತಪಾಸಣೆ ಮತ್ತು ಅವರ ಲಾಗೇಜ್ ತಪಾಸಣೆ ಪ್ರಾರಂಭವಾಯ್ತು. ಅಲ್ಲಿಯವರೆಗೆ ಯಾವುದೇ ಶೋಧನೆಯಿಲ್ಲದೆ ವಿಮಾನದಲ್ಲಿ ಎರುವುದು ಸಾಮಾನ್ಯವಾಗಿತ್ತು.

ಕೂಪರ್ ಬಗ್ಗೆ ಸುಮಾರು ಅರ್ಧ ಡಜನ್ ಪುಸ್ತಕಗಳು , ಸಿನಿಮಾಗಳು ಮತ್ತು ಲೆಕ್ಕವಿಲ್ಲದಷ್ಟು ಟಿವಿ ಕಾರ್ಯಕ್ರಮಗಳು ಬಂದವು.

ಇಂತಹ ರೋಮಾಂಚಕ ಘಟನೆಗೆ ಕಾರಣನಾದ ಕೂಪರ್ ಯಾರು ? ಜಿಗಿದ ಮೇಲೆ ಕೂಪರ್ ಕತೆಯೇನಾಯ್ತು. ಅವನು ಬದುಕಿ ಅಲ್ಲಿಂದ ಪರಾರಿಯಾದನೇ ಅಥವಾ ತನಿಖಾ ಸಂಸ್ಥೆಗಳು ಹೇಳುವ ಹಾಗೇ ಆ ಯತ್ನದಲ್ಲೇ ಸತ್ತು ಹೋದನೇ ? ಸತ್ತರೆ ಅವನ ಹೆಣವಾಗಲಿ, ಅವನ ಬಳಿಯಿದ್ದ ಉಳಿದ ಹಣವಾಗಲಿ ಇಲ್ಲಿಯವರೆಗೆ ಯಾಕೇ ಸಿಗಲಿಲ್ಲ.

ಪ್ರಶ್ನೆಗಳು ಪ್ರಶ್ನೆಗಳೇ ಉಳಿದುಬಿಟ್ಟವು...

ಅಮೇರಿಕದ ವಿಮಾನಗಳ ಹೈಜಾಕ್ ಇತಿಹಾಸದಲ್ಲಿ ಬಿಡಿಸಲಾಗದ ಏಕೈಕ ಪ್ರಕರಣವಾಗಿ ಇನ್ನೂ ಎಫ್.ಬಿ.ಐ ಮುಂದಿದೆ...