Tuesday, October 31, 2006

ಸಿಟಿ ಆಫ್ ಜಾಯ್ !

ತುಂಬಿದ ಅಣೆಕಟ್ಟಿನ ಬಾಗಿಲುಗಳನ್ನು ತೆರೆದಂತೆ ಇತ್ತು...

ನನ್ನ ಮೇಲೆ ಮಮತೆ,ಪ್ರೀತಿ,ಅಕ್ಕರೆಯ ಸುರಿಮಳೆ ಅಗ್ತಾ ಇತ್ತು. ಒಂದು ವರ್ಷದ ನಂತರ ನನ್ನನ್ನು ನೋಡ್ತಾ ಇದ್ದ ಅಪ್ಪ-ಅಮ್ಮನ ಕಣ್ಣುಗಳು ತೇವವಾಗಿದ್ದವು.ಮನೆಗೆ ಬಂದು ಅಮ್ಮನ ಕೈ ಊಟ ಮಾಡ್ತಾ ಇದ್ದರೆ ಸ್ವರ್ಗ.ನಂತರ ಮನೆಮಂದಿಯ ಜೊತೆ ಅಮೇರಿಕಾದ ಕತೆಗಳನ್ನು ಬಿಚ್ಚಿಕೊಂಡು ಕೂತು ಹರಟೆ. ಅಮ್ಮ ನನ್ನ ಕೈಯಲ್ಲಿ ಕಾಗದದ ತುಂಡೊಂದನ್ನು ಇಟ್ಟರು.ನೋಡಿದರೆ ಅದರಲ್ಲಿ ಅಮ್ಮ ನನ್ನ ಬಗ್ಗೆ ಬರೆದ ಒಂದು ಕವನ!! ಅಪ್ಪ-ಅಮ್ಮನಿಗೆ ತಂದ ಉಡುಗೊರೆಗಳನ್ನು ಅವರಿಗೆ ನೀಡಿ,ಅವರು ಪಟ್ಟ ಸಂತೋಷ ನೋಡಿ ಮನಸಿಗೆ ಖುಷಿ.

ನಂತರ ಮಿತ್ರರಿಗೆ ಪೋನಾಯಿಸಿ ನನ್ನ ಭಾರತಾಗಮನದ ಸುದ್ದಿ ನೀಡಿದ್ದಾಯಿತು.ಇಲ್ಲಿನ ಒಬ್ಬ ಮಿತ್ರರಿಗೂ ನಾನು ಬರುವುದು ಗೊತ್ತಿರಲಿಲ್ಲವಾದರಿಂದ ಅವರಿಗೆಲ್ಲ ಅದೊಂದು ಅಚ್ಚರಿಯ ಸುದ್ದಿ.ಅಲ್ಲಿಂದ ತಂದ ಚಾಕೆಲೋಟ್‍ಗಳನ್ನು ಬಂಧು-ಮಿತ್ರರಿಗೆ ಕೊಟ್ಟದಾಯಿತು. ಕೆಲವು ಮಿತ್ರರನ್ನು-ಬಂಧುಗಳ ಜೊತೆ ಬೇಟಿ-ಮಾತು-ಹರಟೆ.ಭೇಟಿ ಮಾಡಲಾಗದವರೊಂದಿಗೆ ಪೋನು.

ಕಳೆದ ಒಂದು ವರ್ಷದಲ್ಲಿ ನನಗೆ ಬ್ಲಾಗ್‍ಗಳ ಮೂಲಕ,ಒರ್ಕೊಟ್ ಮೂಲಕ ಸಿಕ್ಕವರು ಅನೇಕ ಮಿತ್ರರು. ಅಂತಹ ಹಲವು ಮಿತ್ರರನ್ನು ಮಾತಾಡಿಸಿದೆ..ತವಿಶ್ರೀ, ಮಹಾಂತೇಶ್,ಜಯಂತ್.ಅವರೆಲ್ಲರನ್ನು ಮೊದಲ ಸಲ ಮಾತಾಡಿಸುತ್ತಿದ್ದೆ.

ಅದರ ಮಧ್ಯೆ ವೀಸಾ ನವೀಕರಣಕ್ಕೆ ಚಿನೈ ಭೇಟಿ ಕೊಟ್ಟಿದು ಆಯಿತು. ಚಿನೈನಲ್ಲಿ ಒರ್ಕೊಟ್ ಗೆಳತಿ ಕರುಣಾ ಭೇಟಿ ಮಾಡುವ ಅಂದುಕೊಂಡೆ.ಒಂದು ಸಣ್ಣ ಸಮಸ್ಯೆಯಂದರೆ ಕರುಣಾಳನ್ನಾಗಲಿ,ಕರುಣಾಳ ಪೋಟೋವನ್ನಾಗಲಿ ಇಲ್ಲಿಯವರಿಗೆ ನೋಡಿರಲಿಲ್ಲ. ಅದರೆ ನನ್ನನ್ನು ನೋಡಿದ ತಕ್ಷಣ 'ಶಿವ್!' ಅನ್ನೋ ಉದ್ಗಾರ ಕೇಳಿದಾಗ ಅಲ್ಲಿ ನಿಂತಿದ್ದಳು ಕರುಣಾ.ಒರ್ಕೊಟ್‍ನಲ್ಲಿ ಪೋಟೋ ಹಾಕಿರೊದರಿಂದ ಒಂದೊಂದು ಸಲ ಅಗೋ ಪ್ರಯೋಜನ ಇದು! ಸರಿಯಾದ ಬಸ್ ಹತ್ತಿದ ಮೇಲೂ ಬಸ್ಸಿನಲ್ಲಿದವರಿಗೆ 'ಎಲ್ಲಿಗೆ ಹೋಗುತ್ತೆ ಬಸ್' ಅಂತಾ ಕೇಳಿದಂತೆ 'ನೀವು ಕರುಣಾ??' ಅಂತಾ ಕೇಳಿ ಕನ್‍ಫರ್ಮ್ ಮಾಡಿಕೊಂಡೆ ! ಅಸತ್ಯಿಗಳ ದೂರವಾಣಿ ಸಂಖ್ಯೆ ಇರಲಿಲ್ಲವಲ್ಲ..ಇಲ್ಲವಾದರೆ ಬೊಗಳೆ ಪಂಡಿತರನ್ನು ಸಾಕ್ಷತ್ ದರ್ಶನ ಮಾಡಬಹುದಿತ್ತು.

ಎರಡು ವಾರ ಮನೆ-ಮಂದಿಯ ಜೊತೆ, ಗೆಳಯರೊಂದಿಗೆ, ತಿರುಗಾಟದಲ್ಲಿ ಹೇಗೆ ಹೋದವೋ ತಿಳಿಯಲಿಲ್ಲ. ಮತ್ತೊಂದು ಹೊಸ ಊರು ಕೈ ಬೀಸಿ ಕರೆಯುತಿತ್ತು.

ಕೊಲ್ಕತ್ತಾ...

ಅಲ್ಲಿನ ನೇತಾಜಿ ವಿಮಾನ ನಿಲ್ದಾಣದಲ್ಲಿದಿಂದ ಟ್ಯಾಕ್ಸಿಯಲ್ಲಿ ಕಂಪನಿ ಗೆಸ್ಟ್‍ಹೌಸ್‍ ಕಡೆ ಹೊರಟಾಗ ದಾರಿಯುದ್ದಕ್ಕೂ ಕಂಡವು ಆ ಸೈಕಲ್ ರಿಕ್ಷಾಗಳು.ಆ ರಿಕ್ಷಾಗಳನ್ನು ನೋಡುತ್ತಿದ್ದಂತೆ ನೆನಪಾದದ್ದು 'ಸಿಟಿ ಆಫ್ ಜಾಯ್' ಅನ್ನೋ ಆ ಪುಸ್ತಕ. ಕಲ್ಕತ್ತಾದ ಬಗ್ಗೆ, ಕಲ್ಕತ್ತಾದ ರಿಕ್ಷಾ ಎಳೆಯುವರ ಬಗ್ಗೆ ಅಷ್ಟೊಂದು ಮನ ಮುಟ್ಟುವಂತೆ ಬರೆದ ಪುಸ್ತಕ ಬಹುಷಃ ಇನ್ನೊಂದು ಇರಲಿಕ್ಕಿಲ್ಲ.

ಕಲ್ಕತ್ತಾ ಅಂದ ಕೂಡಲೆ ನನಗೆ ಯಾವಾಗಲೂ ನೆನಪಿಗೆ ಬರ್ತಾ ಇದದ್ದು ಈ 'ಸಿಟಿ ಆಫ್ ಜಾಯ್' ಅನ್ನೊ ಪುಸ್ತಕ, ರಸಗುಲ್ಲಾ,ಅಲ್ಲಿ ೨-೩ ದಶಕಗಳಿಂದ ಒಂದೂ ಬ್ರೇಕ್ ಇಲ್ಲದೆ ಆಳ್ತಾ ಇರೋ ಕಮ್ಯುನಿಷ್ಟರು.

ಅಲ್ಲಿ ದಿನ ಕಳೆದಂತೆ ಅನಿಸತೊಡಗಿದ್ದು ಕಲ್ಕತ್ತಾ ತಾನು 'ಐಟಿ' ಉದ್ಯಮದಲ್ಲಿ ಹಿಂದೆ ಬಿದ್ದಿಲ್ಲ ಅಂತಾ ಮನದಟ್ಟು ಮಾಡಲು ಪ್ರಯತ್ನಿಸುತ್ತಿದೆ.ಅಲ್ಲಿನ ಸಾಲ್ಟ್‍ಲೇಕ್ ಅನ್ನೋ ಎರಿಯಾದಲ್ಲಿ ನೀವು ಹೋದರೆ ಗೊತ್ತಾಗುತ್ತೆ..ಎಲ್ಲ 'ಐಟಿ' ಕಂಪನಿಗಳನ್ನು ಕರೆ ತರೋದರಲ್ಲಿ ಯಶಸ್ವಿಯಾಗಿದ್ದಾರೆ.ಕಮುನಿಷ್ಟರು ಮತ್ತು ಬಂಡವಾಳಶಾಹಿ ಕಂಪನಿಗಳು ??!!!

ಐಟಿ,ಸೈಕಲ್ ರಿಕ್ಷಾ,ಕಮುನಿಷ್ಟರು..ಇವೆಲ್ಲದರ ನಡುವೆ ಕಲ್ಕತ್ತಾದ ಅತ್ಯಂತ ಪ್ರಶಾಂತ ಸ್ಥಳಗಳ ಬಗ್ಗೆ ಹೇಳಲೇ ಇಲ್ಲ...ಕಾಳೀಘಟ್ ಮತ್ತು ದಕ್ಷಿಣೇಶ್ವರ.

ಕಾಳಿಘಟ್‍ಗೆ ಹೋದಾಗ ಸಂಜೆಯಾಗಿತ್ತು.ಮೊದಲು ಅಲ್ಲಿ ರಾಮಕೃಷ್ಣ ಪರಮಹಂಸರು ವಾಸವಾಗಿದ್ದ ಆಲಯಕ್ಕೆ ಭೇಟಿ ಕೊಟ್ಟೆವು.ಆ ಚಿಕ್ಕ ಕೋಣೆಯಲ್ಲಿ ಕೂತು ಬಹಳ ಜನ ಕೂತು ಧ್ಯಾನ ಮಾಡುತ್ತಿದ್ದರು.ಅಲ್ಲಿ ಕೂತು ಪರಮಹಂಸರಿಗೆ ವಂದಿಸಿ ಪಕ್ಕದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿದೆವು.ಪರಮಹಂಸರು ಇದೇ ದೇವಾಲಯದಲ್ಲಿ ಕಾಳೀ ದೇವಿಯ ಸಾಕ್ಷಾತ್ಕಾರ ಮಾಡಿಕೊಂಡಿದ್ದರಂತೆ.ಅಂದು ನವರಾತ್ರಿಯ ಮೊದಲ ದಿನವೂ ಆದ್ದರಿಂದ ದೇವಾಲಯದಲ್ಲಿ ತುಂಬಾ ಜನ.ಕಾಳೀ ದರ್ಶನ ಪಡೆದು ಹೊರಬಂದರೆ, ದೇವಾಲಯದ ಮುಂದಿರುವ ಪ್ರಾಂಗಣದಲ್ಲಿ ನಡೆಯುತ್ತಿತ್ತು ಭಜನೆ.ಕಾಳೀ ದೇವಾಲಯದ ಪಕ್ಕದಲ್ಲಿ ಇರುವ ದ್ವದಶ ಜೋರ್ತ್ಯಿಲಿಂಗಗಳನ್ನು ದರ್ಶಿಸಿ ಪಕ್ಕದಲ್ಲೆ ಹರಿಯುತ್ತಿದ್ದ ಗಂಗಾ ನದಿಯನ್ನು ಸ್ಪರ್ಶಿಸಿದೆವು. ಅಂದಾಗೆ ಕಲ್ಕತ್ತಾ ಅನ್ನೋ ಹೆಸರು ಈ 'ಕಾಳೀಘಟ್' ಎಂಬ ಹೆಸರಿನಿಂದ ಬಂದಿದೆಯಂತೆ.

ಅಲ್ಲಿಂದ ಹೊರಟು ದಕ್ಷಿಣೇಶ್ವರಕ್ಕೆ ಹೊರಟೆವು.ಬೇಲೂರು ಅನ್ನೋ ಈ ಸ್ಥಳದಲ್ಲಿ ರಾಮಕೃಷ್ಣ ಆಶ್ರಮ ಶುರುವಾಯಿತು. ಅಲ್ಲಿದೆ ಅತ್ಯಂತ ಸುಂದರವಾದ ಒಂದು ಪ್ರಾರ್ಥನಾ ಮಂದಿರ.ಅಷ್ಟು ಪ್ರಶಾಂತವಾದ ಆಲಯದಲ್ಲಿ ಕೂತು ಸುಶ್ರ್ಯಾವ ಹಿನ್ನಲೆ ಸಂಗೀತದೊಂದಿಗೆ ಭಜನೆಯಲ್ಲಿ ಪಾಲ್ಗೊಳೊಂಡ ಮೇಲೆ ಮನ ಶಾಂತವಾಗದಿದ್ದರೆ ಕೇಳಿ.ಅಲ್ಲಿನ ಪರಮಹಂಸರ ವಿಗ್ರಹವನ್ನು ಸ್ವಯಂ ವಿವೇಕಾನಂದರೇ ಪರಿಕಲ್ಪಿಸಿದರಂತೆ.

ದೇವಾಲಯ-ಆಶ್ರಮ ದರ್ಶನದ ನಂತರ ಸ್ಪಲ್ಪ 'ಮೆಟೀರಿಯಲಿಸ್ಟಿಕ್' ವಸ್ತುಗಳನ್ನು ನೋಡಲು-ಸವಿಯಲು 'ಸಿಟಿ ಸೆಂಟರ್' ಅಂತಹ ಶಾಪಿಂಗ್ ಮಳಿಗೆಗೆ ಹೊಕ್ಕು ಸ್ಪಲ್ಪ ಹೊತ್ತು ತಿರುಗಾಡಬಹುದು.ಇಲ್ಲದಿದ್ದರೆ ಪಾರ್ಕ್ ಸ್ಟ್ರೀಟ್‍ನ ತಳಕು-ಬೆಳಕಿನ ರಸ್ತೆಯಲ್ಲಿ,ಅಲ್ಲಿನ ಅರೆಗತ್ತಲೆಯ ಪಬ್ಬ್‍ಗಳಲ್ಲಿ ಕಳೆಯಬಹುದು.

ಕಲ್ಕತ್ತಾದ ಇನ್ನೊಂದು ಪ್ರೇಕ್ಷಣೀಯ ಸ್ಥಳ..ವಿಕ್ಟೋರಿಯಾ ಮೆಮೋರಿಯಲ್..ಬ್ರಿಟಿಷ್ ರಾಣಿ ವಿಕ್ಟೋರಿಯಾಳ ಕಾಲದಲ್ಲಿ ಕಟ್ಟಿದ ಭವ್ಯ ಕಟ್ಟಡ. ಅದರ ಸುತ್ತ ಇರುವ ಉದ್ಯಾನ ಪ್ರೇಮಿಗಳಿಗೆ ಬಲು ಪ್ರಿಯ.ಅಂತ ಜನನಿಬಿಡ ಸ್ಠಳದಲ್ಲೂ ಕೂಡ ಪ್ರೇಮಿಗಳು ನಿಸಂಕೋಚವಾಗಿ ತಮ್ಮ ಕೆಲಸ ಮುಂದುವರಿಸುತಿರುತ್ತಾರೆ.

ಪ್ರೇಮಿಗಳಿಂದ ಕಿಕ್ಕಿರಿದು ಕೂಡಿರುವ ಇನ್ನೊಂದು ಸ್ಥಳ- ಸೆಂಟ್ರಲ್ ಪಾರ್ಕ್ ! ಬಹುಷ: ಕಲ್ಕತ್ತಾದಲ್ಲಿ ಬಹು ಹೆಚ್ಚು ಜನಕ್ಕೆ ಗೊತ್ತಿರುವ ಜಾಗ ಎಂದರೆ ಇದೇ ಇರಬೇಕು.ಇಲ್ಲಿ ಪ್ರೇಮಿಗಳಿಗೆ(?) ಯಾವುದೇ ಅಡೆತಡೆ ಇದ್ದಾಗೆ ಕಾಣೋಲ್ಲ.೧೦ ರೂಪಾಯಿ ಕೊಟ್ಟು ಸೆಂಟ್ರಲ್ ಪಾರ್ಕ್ ಪ್ರವೇಶಿಸಿದರೆ ಅವರನ್ನು ಹೇಳೋರು ಕೇಳೋರು ಯಾರು ಇರೋಲ್ಲ.ಸಹಜವಾಗಿ ಇಲ್ಲಿ ಪ್ರೇಮಕ್ಕಿಂತ ಜಾಸ್ತಿ ದೇಹಗಳ ಪ್ರೀತಿ ! ಉಪ್ಪಿ ಭಾಷೆಯಲ್ಲಿ ಹೇಳೋದಾದರೆ 'ಇಂಗ್ಲೀಷ್ ಲವ್' ಮಾಡೋರೆ ಹೆಚ್ಚು ಇಲ್ಲಿಗೆ ಬರೋರು.

ಕಲ್ಕತ್ತಾದಲ್ಲಿದ್ದಾಗ ಕಂಡ ಇನ್ನೊಂದು ಮಹೋನ್ನತ ಅನುಭವ - ದುರ್ಗಾ ಪೂಜೆ. ಅದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಬರಿತೀನಿ.

ಇನ್ನು ಅಲ್ಲಿನ ಜನ ಊಟದ ವಿಷಯಕ್ಕೆ ಬಂದರೆ ಕೇಳೋದು ಮೂರೇ - ಆಲೂ, ಮಾಂಚ್,ಮಿಶ್ಟಿ. ಅಡುಗೆಯಲ್ಲಿ ಒಂದಾದರೂ ಆಲೂ ಖ್ಯಾದ ಇಲ್ಲದಿದ್ದರೆ ಕೇಳಿ, ಹಾಗೇ ಮೀನು ಬೇಕೇ ಬೇಕು. ಇದರ ಜೊತೆಗೆ ಸಿಹಿ ತಿನಿಸು ತಿನ್ನೋಕೆ ಯಾವಾಗಲೂ ರೆಡಿ..ಅದಕ್ಕೆ ಅಲ್ಲಿ ಜನ ರಸಗುಲ್ಲಾ ತರ ಗುಂಡು ಗುಂಡಾಗಿ ಇರೋದೇ??

ಸೈಕಲ್ ರಿಕ್ಷಾ, ಐಟಿ, ಕಮ್ಯುನಿಷ್ಟ್‍ರು, ಪರಮಹಂಸರು,ಐತಿಹಾಸಿಕ ಸ್ಥಳಗಳು, ರಸಗುಲ್ಲಾ, ದುರ್ಗಾ ಪೂಜೆ, ಪುಟ್‍ಬಾಲ್ ಹುಚ್ಚು...ಕಲ್ಕತ್ತಾದಲ್ಲಿ ಏನಿಲ್ಲ ಎನೀದೆ?