Thursday, September 30, 2010

ಜೋನ್ಸ್ ಟೌನ್

ಬಹುಷಃ ಮನುಷ್ಯನ ಮನಸ್ಸಿನಷ್ಟು ನಿಗೂಢವಾದದ್ದು ಇನ್ನೊಂದು ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ.

ಚಂದ್ರಯಾನ, ಎವೆರಷ್ಟ್ ಆರೋಹಣದಂತಹ ಊಹೆಗೆ ಮೀರಿದ ಅಸಾಧ್ಯತೆಗಳನ್ನು ಸಾಧಿಸಿದ ಮನಸ್ಸುಗಳು ಹಲವು.

ಆದರೆ ತರ್ಕಕ್ಕೆ ನಿಲುಕದ ಮನಸ್ಸುಗಳು ಕೆಲವು.ಅಂತಹ ವಿಚಿತ್ರ ಮನಸ್ಸುಗಳ ಒಂದು ಘೋರ ಕತೆ ಇತಿಹಾಸದ ಪುಟಗಳಿಂದ.

ಅಂದು ನವೆಂಬರ್ ೧೮, ೧೯೭೮. ೯೧೩ ಜನ ಅಮೇರಿಕನ್‍ರು ಗಯಾನದ ಕಾಡಿನಲ್ಲಿ ’ಸಾಮೂಹಿಕ ಆತ್ಮಹತ್ಯೆ’ ಮಾಡಿಕೊಂಡಿದ್ದಾರೆಂಬ ಭೀಕರ ಸುದ್ಧಿ ಎಲ್ಲೆಡೆ ತಲ್ಲಣವುಂಟು ಮಾಡಿತ್ತು. ಸತ್ತ ಅವರೆಲ್ಲರೂ ’ಪೀಪಲ್ಸ್ ಟೆಂಪಲ್’ ಹೆಸರಿನ ವಿಲಕ್ಷಣ ಗುಂಪೊಂದಕ್ಕೆ ಸೇರಿದವರಾಗಿದ್ದರು.

’ಜಿಮ್ ಜೇಮ್ಸ್’ ಹೆಸರಿನ ಆ ವ್ಯಕ್ತಿ ವರ್ಣಭೇದದ ದಿನಗಳಲ್ಲಿ, ೧೯೬೩ರಲ್ಲಿ ಎಲ್ಲಾ ವರ್ಣದವರನ್ನು ಸೇರಿಸಿ ಯಾವಾಗ ’ಪೀಪಲ್ಸ್ ಟೆಂಪಲ್’ ಹೆಸರಿನ ಚರ್ಚ್ ಶುರುಮಾಡಿದನೋ, ಅಲ್ಲಿಂದ ಈ ಕತೆ ತೆರೆದುಕೊಳ್ಳುತ್ತದೆ. ಜಿಮ್ ಜೇಮ್ಸ್ ಸಮಾಜದಲ್ಲಿ ತುಳಿತಕ್ಕೆ ಒಳಗಾದವರನ್ನು, ಜೀವನದಲ್ಲಿ ತುಂಬಾ ಹತಾಶೆಗೊಳಗಾದವರನ್ನು ತನ್ನ ಚರ್ಚ್‍ಗೆ ಸೆಳೆದುಕೊಳ್ಳುತ್ತಾನೆ. ಇದರ ಜೊತೆಗೆ ಸ್ಪರ್ಶ-ಪ್ರಾರ್ಥನೆಯಿಂದ ಕ್ಯಾನ್ಸರ್ ಗುಣ ಪಡಿಸುವುದು-ಅಂಧರಿಗೆ ಕಣ್ಣು ಬರುವಂತೆ ಮಾಡುವ ವಿದ್ಯೆ ತನಗಿದೆಯೆಂದು ಅಲ್ಲಿಂದೊಷ್ಟು ಹಣ ಮಾಡುತ್ತಾನೆ. ಹಣ ಬರತೊಡಗಿದನೆ ಸ್ಥಳೀಯ ರಾಜಕಾರಣಿಗಳ ಸಾಂಗತ್ಯ ಬೆಳಿಸಿಕೊಂಡು, ಎಲ್ಲರಿಗೂ ಬೇಕಾದವನಾಗುತ್ತಾನೆ. ನೋಡುನೋಡುತ್ತಲೇ ಅವನ ಚರ್ಚ್ ಇಂಡೀಯಾನಪೋಲಿಸ್‍ನಲ್ಲಿ ಬೆಳಯತೊಡಗುತ್ತದೆ. ಅದರ ಜೊತೆಗೆ ಅವನ ಹುಚ್ಚಾಟಗಳು ಬೆಳೆಯತೊಡಗುತ್ತವೆ.

ಪೀಪಲ್ಸ್ ಟೆಂಪಲ್‍ಗೆ ಸೇರಬಯಸುವವ ಸದಸ್ಯರಿಗೆ ತಮ್ಮ ನಿಷ್ಠೆ ಪ್ರದರ್ಶಿಸಲು ಕಠಿಣವಾದ ಪರೀಕ್ಷೆಗಳಿರುತ್ತವೆ.ಹೊಸದಾಗಿ ಸೇರಿದವರು ಚರ್ಚ್‍ಗೆ ಬೇಕಾದರೆ ವಂತಿಗೆ ನೀಡಬಹುದಾಗಿರುತ್ತದೆ.ಹೊಸ ಸದಸ್ಯರು ಕಾಲ ಕಳೆದಂತೆ ಚರ್ಚ್‍ಗೆ ಕೊಡುವ ವಂತಿಗೆಯೂ ಹೆಚ್ಚಾಗುತ್ತ ಹೋಗುತ್ತದೆ.ಕೊನೆಯ ಹಂತದಲ್ಲಿ ಅನೇಕ ಸದಸ್ಯರು ತಮ್ಮ ಆಸ್ತಿ-ಹಣ ಎಲ್ಲವನ್ನೂ ಜಿಮ್‍ಗೆ ನೀಡಿ ಅವನ ಇಚ್ಚೆಯಂತೆ ನಡೆಯುತೊಡಗುತ್ತಾರೆ.ಜಿಮ್ ಅವರಿಗೆಲ್ಲಾ ಚಿಂತೆಗಳಿಲ್ಲದ-ಕಷ್ಟನಷ್ಟಗಳಿಲ್ಲದ ಸಮಾಜವಾದದ ಕನಸೊಂದನ್ನು ಕಟ್ಟಿಬಿಟ್ಟಿರುತ್ತಾನೆ. ಸದಸ್ಯರು ತಮ್ಮ ವೈಯುಕ್ತಿಕ ದುರ್ಬಲತೆಗಳನ್ನು ಅವನೊಂದಿಗೆ ಹಂಚಿಕೊಂಡು ಇರುತ್ತಾರೆ. ಹೀಗೆ ಅರ್ಥಿಕವಾಗಿ-ಮಾನಸಿಕವಾಗಿ ಜಿಮ್ ಮೇಲೆ ಅವಲಂಬಿತವಾದ ಒಂದು ದೊಡ್ಡ ಪಡೆಯೇ ತಯಾರಾಗುತ್ತದೆ.

ಯಾವಾಗ ಪೀಪಲ್ಸ್ ಟೆಂಪಲ್‍ನ ವಿಲಕ್ಷಣತೆಯ ಬಗ್ಗೆ ಇಂಡೀಯಾನಪೊಲಿಸ್‍ನಲ್ಲಿ ಸುದ್ಧಿಮಾಧ್ಯಮಗಳು ಮಾತಾಡತೊಡಗುತ್ತವೋ,ಜಿಮ್ ಅಲ್ಲಿಂದ ಕ್ಯಾಲಿಪೋರ್ನಿಯಾಕ್ಕೆ ತನ್ನ ಶಿಷ್ಯರೊಂದಿಗೆ ವರ್ಗವಾಗುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ತನ್ನದೇ ಒಂದು ಚಿಕ್ಕ ಪ್ರದೇಶದಲ್ಲಿ ಚಟುವಟಿಗೆಗಳು ಮುಂದುವರೆಯುತ್ತವೆ. ಸ್ಯಾನ್‍ಪ್ರಾನ್ಸಿಸ್ಕೊದ ಮೇಯರ್ ಚುನಾವಣೆಯಲ್ಲಿ ಸಾಕಷ್ಟು ಹಣ ಸಹಾಯ ಮಾಡಿ ಅಲ್ಲಿನವರಿಗೆ ಪ್ರಿಯವಾಗುತ್ತಾನೆ. ಅಷ್ಟೇ ಅಲ್ಲದೇ ಆಗೀನ ಅಮೇರಿಕ ಅಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಜಿಮ್ಮಿ ಕಾರ್ಟರ್‌ಗೆ ತನ್ನ ಬೆಂಬಲ ಘೋಷಿಸಿ, ಅದಕೋಸ್ಕರ ದೇಣಿಗೆ ಸಂಗ್ರಹದಲ್ಲೂ ನೆರವಾಗುತ್ತಾನೆ.

ಇದೆಲ್ಲದರ ಮಧ್ಯೆ ಪೀಪಲ್ಸ್ ಟೆಂಪಲ್‍ನಿಂದ ಹೊರಗೆ ಬಂದವರು ಮೆಲ್ಲಗೆ ಹೊರಜಗತ್ತಿಗೆ ಅದರ ವಿರುದ್ಧ ಮಾತಾಡತೊಡಗುತ್ತಾರೆ. ಗುಂಪಿನಿಂದ ಹೊರಬಂದವರು ಕೆಲವರು ನಿಗೂಢವಾಗಿ ಸತ್ತಾಗ ಎಲ್ಲೆಡೆ ’ಪೀಪಲ್ಸ್ ಟೆಂಪಲ್’ ಕೈವಾಡ ಕೇಳಿಬರತೊಡಗುತ್ತದೆ. ಹಾಗೇ ಸದಸ್ಯರ ಕುಟುಂಬದವರು ತಮಗೆ ತಮ್ಮ ಮಗ/ಮಗಳು/ಗಂಡ/ಹೆಂಡತಿ ಜಿಮ್‍ನಿಂದ ಬಿಡಿಸಿಕೊಡಬೇಕೆಂದು ಕೋರ್ಟ್‍ಗಳ ಮೊರೆ ಹೋಗುತ್ತಾರೆ. ಇಡೀ ಮಾಧ್ಯಮವೇ ಯಾವಾಗ ಜಿಮ್-ಪೀಪಲ್ಸ್ ಬಗ್ಗೆ ಕೂಗತೊಡಗುತ್ತದೋ, ಜಿಮ್‍ನ ಹೊಸ ಯೋಜನೆ ಶುರುವಾಗುತ್ತದೆ.

ದಕ್ಷಿಣ ಅಮೇರಿಕಾ ಖಂಡದ ಗಯಾನ ಹೆಸರಿನ ದೇಶದ ಸರ್ಕಾರದೊಡನೆ ಹೇಗೋ ಒಪ್ಪಂದ ಕುದುರಿಸಿ, ಅಲ್ಲಿ ಸುಮಾರು ೧೭೦ ಎಕರೆ ಕಾಡನ್ನು ಜಿಮ್ ಕೊಂಡುಕೊಳ್ಳುತ್ತಾನೆ. ಸ್ಯಾನ್‍ಪ್ರಾನ್ಸಿಸ್ಕೊದ ಸಹವಾಸ ಸಾಕು ಮಾಡಿ, ಜಿಮ್ ತನ್ನ ಶಿಷ್ಯಕೋಟಿಯೊಡನೆ ಗಯಾನಕ್ಕೆ ಹೊರಡುತ್ತಾನೆ. ಹೊಸ ದೇಶದಲ್ಲಿ, ಕಗ್ಗಾಡಿನಲ್ಲಿ ತಮ್ಮದೇ ಲೋಕ ಕಟ್ಟಿಕೊಳ್ಳುವ ಕನಸು ತೋರಿಸುತ್ತಾನೆ. ಅವರೆಲ್ಲರು ಕೈಕಾರ್ಯ ಮಾಡಿ ಆ ಕಾಡಿನ ಮಧ್ಯೆ ಚಿಕ್ಕ ಪಟ್ಟಣವನ್ನು ಕಟ್ಟುತ್ತಾರೆ. ಅದಕ್ಕೆ ’ಜೋನ್ಸ್ ಟೌನ್’ ಎಂಬ ಹೆಸರನ್ನೂ ಇಡುತ್ತಾರೆ.

ಸುದ್ಧಿ ಮಾಧ್ಯಮ-ಸರಕಾರದ ಕಣ್ಣಿಂದ ದೂರವಾದ ನಂತರ ಜಿಮ್ ತನ್ನ ಪಟ್ಟಣದಲ್ಲಿ ಸಮಾಜವಾದ ಜೀವನದ ಪ್ರಯೋಗಗಳನ್ನು ಶುರುಮಾಡುತ್ತಾನೆ. ಎಲ್ಲರೂ ದುಡಿದು ತಿನ್ನುವುದು, ಸಮಾಜದ ಒಳಿತಿಗಾಗಿ ಎಲ್ಲರೂ ಶ್ರಮಿಸುವುದು ಎಲ್ಲವೂ ಮೊದಮೊದಲು ಚೆನ್ನಾಗೇ ನಡೆಯುತ್ತದೆ. ಕೆಲ ಸಮಯದ ನಂತರ ಸದಸ್ಯರ ಕುಟುಂಬಗಳು ಅಮೇರಿಕೆಯಲ್ಲಿ ಮತ್ತೆ ಪೀಪಲ್ಸ್ ಬಗ್ಗೆ ಅಕ್ಷೇಪಗಳನ್ನು ಎತ್ತತೊಡಗುತ್ತಾರೆ. ಕೆಲ ಸದಸ್ಯರನ್ನು ಅವರ ಇಚ್ಚೆಗೆ ವಿರುದ್ಧವಾಗಿ ಗಯಾನಕ್ಕೆ ಕರೆದೊಯ್ಯಲಾಗಿದೆಯೆಂಬ ಅರೋಪವು ನಡೆಯುತ್ತದೆ.

ಈ ಕಡೆ ಜಿಮ್‍ನಿಂದ ತನ್ನ ಹಿಂಬಾಲಕರಿಗೆ ಮತ್ತೆ ಅಮೇರಿಕೆಗೆ ಮರಳಿ ಅಲ್ಲಿ ತಮಗೆ ಆಗದವರ ಜೊತೆ ಬಾಳುವುದಕ್ಕಿಂತ ತಾವಿರುವ ಸ್ಥಳದಲ್ಲಿ ಕಷ್ಟಪಟ್ಟು ಬದುಕುವುದೇ ಲೇಸು ಎನ್ನುವ ನಿತ್ಯ ಪ್ರವಚನ ನಡದೇ ಇರುತ್ತದೆ. ಜಿಮ್‍ನನ್ನು ದೇವರೆಂದೇ ಭಾವಿಸುವ ಆ ಶಿಷ್ಯಪಡೆ, ಅಕ್ಷರಶ: ಜಿಮ್ ಹೇಳಿದ್ದನ್ನೇ ಕೇಳುತ್ತದೆ. ಕಡೆಕಡೆಗೆ ಸಂದರ್ಭ ಬಂದರೆ ತಾವೆಲ್ಲರೂ ಒಟ್ಟಿಗೆ ಮರಣಿಸಲು ತಯಾರಿರಬೇಕೆಂದು ಜಿಮ್‍ ಬ್ರೆನ್‍ವಾಶ್ ನಡೆಸಿರುತ್ತಾನೆ.

ಇತ್ತ ಕುಟುಂಬದವರ-ಸುದ್ಧಿಮಾಧ್ಯಮದವರ ಅಕ್ಷೇಪಗಳು ಹೆಚ್ಚಾದಾಗ,ಅಮೇರಿಕದ ಸಂಸತ್ ಸದಸ್ಯ ’ಲಿಯೋ ರಯಾನ್’, ಪ್ರತ್ಯಕ್ಷವಾಗಿ ನೋಡಲು ಗಯಾನಕ್ಕೆ ಬರುತ್ತಾನೆ. ರಯಾನ್ ಭೇಟಿಯ ಸಮಯದಲ್ಲಿ, ಜಿಮ್‍ನ ಗುಂಪಿನಿಂದ ಹಲವಾರು ಪೀಪಲ್ಸ್ ಬಿಟ್ಟು ಮರಳಿ ಅಮೇರಿಕೆಗೆ ಬರುವ ಆಶಯ ವ್ಯಕ್ತಪಡಿಸುತ್ತಾರೆ. ರಯಾನ್ ಅವೆರಲ್ಲರನ್ನೂ ಕರೆದುಕೊಂಡು ವಿಮಾನ ಹತ್ತುತ್ತಿದ್ದಂತೆ ಜಿಮ್ ಕಡೆಯ ಬಂದೂಕಧಾರಿಗಳು ರಯಾನ್ ಸಮೇತವಾಗಿ ೫-೬ ಜನರನ್ನು ಕೊಲ್ಲುತ್ತಾರೆ.

ನಂತರ ನಡೆಯುವುದೇ ವಿವೇಚನೆಗೆ ನಿಲುಕದ ಘಟನೆ..

ರಯನ್ ಮತ್ತು ಅಮೇರಿಕದ ತಂಡವನ್ನು ತಾವು ಕೊಂದ ನಂತರ,ಜಿಮ್ ತನ್ನ ಎಲ್ಲಾ ಅನುಮಾಯಿಗಳಿಗೆ ಸಭೆಗೆ ಕರೆದು ಹೇಳುತ್ತಾನೆ.ಅಮೇರಿಕ ಸರಕಾರ ತಮ್ಮೆಲ್ಲರನ್ನೂ ಹುಡುಕಿ ಕೊಲ್ಲಿಸುತ್ತೆಂದು,ಅದಕ್ಕಿಂತ ಉತ್ತಮ ಮಾರ್ಗವೆಂದರೆ ಜೀವ ತೊರೆದು ಕ್ರಾಂತಿ ಮಾಡುವುದೆಂದು ಘೋಷಿಸುತ್ತಾನೆ. ಅದಾಗಿ ಕೆಲ ಸಮಯದಲ್ಲಿ ಸೈನಾಯಿಡ್ ಮಿಶ್ರಿತ ಪಾನೀಯವನ್ನು ಸಭೆಯಲ್ಲಿದ್ದವರೆಲ್ಲಾ ಒಟ್ಟಾಗಿ ಕುಡಿಯುತ್ತಾರೆ. ಕೆಲವು ನಿಮಿಷಗಳಲ್ಲೇ ಅಲ್ಲಿದ್ದ ೯೧೪ ಜನ ಜೀವ ಚೆಲ್ಲುತ್ತಾರೆ. ಅವರಲ್ಲಿ ೨೭೬ ಮಕ್ಕಳು...

ಆ ಸಾಮೂಹಿಕ ಆತ್ಮಹತ್ಯೆ ನಡೆದು ಸುಮಾರು ೩೦ ವರ್ಷಗಳೇ ಕಳೆದಿದೆ. ಅಷ್ಟೊಂದು ಜನ ಅದು ಹೇಗೆ ಇಂತಹ ಕಾರ್ಯಕ್ಕೆ ಶರಣಾದರು ಎಂಬ ಪ್ರಶ್ನೆ ಈಗಲೂ ಇದೆ. ಅಷ್ಟೊಂದು ಜನರ ಮನವನ್ನು ಸೂತ್ರದಾರನಂತೆ ಜಿಮ್ ಹೇಗೆ ನಿಯಂತ್ರಿಸಿದ್ದು ಎಂಬುದು ಯಕ್ಷಪ್ರಶ್ನೆ.

ಸಮಾಜ ಜೀವಿಗಳಾದ ಮಾನವರು ,ತಮಗಿಂತ ದೊಡ್ಡದಾದ ಒಂದು ಶಕ್ತಿ-ಪಂಗಡ-ವ್ಯಕ್ತಿಯ ಮೂಲಕ ತಮ್ಮ ಗುರುತನ್ನು ಕಂಡುಕೊಳ್ಳುವ ಪ್ರಯತ್ನ ನಿರಂತರ. ಈ ತರದ ಆಶಯಗಳನ್ನು, ಜನರ ದುರ್ಬಲತೆಗಳನ್ನು ಉಪಯೋಗಿಸಿಕೊಳ್ಳುವ ಚಾಣಾಕ್ಷರು ಯಾವಾಗಲೂ ಇದ್ದೇ ಇರುತ್ತಾರೆ.

ಮನಸ್ಸಿಗಿಂತ ದೊಡ್ಡ ಮಿತ್ರ-ಶತ್ರು ಇನ್ನ್ಯಾವುದಿದೆ ?

Sunday, September 05, 2010

ಗುರವೇ ನಮಃ

ಗಾಂಧೀ ಸರ್ಕಲ್ ದಾಟಿ ಸ್ವಲ್ಪ ಮುಂದೆ ಹೋಗಿ ಅಂಡರ್‌ಬ್ರೀಡ್ಜ್ ಕೆಳಗೆ ಹಾದು, ಏರಿನಲ್ಲಿ ಸೈಕಲ್‍ ತುಳಿದರೆ ಸಿಗುವುದು ಶಾಲೆ. ಈ ಏರಿನಲ್ಲೇ ಆ ಲೂನ ಎದುಸಿರು ಬಿಡುತ್ತ ಹೋಗಲಿಕ್ಕೆ ಹರಸಾಹಸ ಪಡುತ್ತಿದ್ದರೆ, ಲೂನ ಪಕ್ಕದಲ್ಲಿಯೇ ಶರವೇಗದಲ್ಲಿ ಸೈಕಲ್ ತುಳಿಯುತ್ತಾ ’ಗಣಪ’ ಎಂದು ಕರೆದು ಮಾಯವಾಗುತ್ತಿದ್ದ ಹುಡುಗರು.ಲೂನ ಶಾಲೆ ಮುಂದೆ ನಿಂತು, ಅಷ್ಟರಲ್ಲಿ ಪ್ರಾರ್ಥನೆ ಶುರುವಾಗಿ, ನಂತರ ತರಗತಿಗೆ ಡೊಳ್ಳು ಹೊಟ್ಟೆ ’ಗಣಪ’ ಬಂದಾಗ ಹುಡುಗರಲ್ಲಿ ಮುಂದೇನಾಗುತ್ತೆ ಎಂಬುದು ಖಾತ್ರಿಯಾಗಿರುತಿತ್ತು. ’ಯಾವನೋ ಆವನು ಗಣಪ ಅಂತದ್ದು ಓಡಿ ಬಂದವನು, ನೀವಾಗಿ ಬರ್ತಿರೋ ಇಲ್ಲಾ ನಾನೇ ಎಬ್ಬಿಸಬೇಕಾ ’. ಮಾಮೂಲಿಯಾಗಿ ಇದೇ ಕೆಲಸ ಮಾಡ್ತಿದ್ದ ಗುಂಪಿನಿಂದ ಒಂದಿಬ್ಬಿರು ಹುಡುಗರು ತರಗತಿಯಿಂದ ಹೊರಕ್ಕೆ.

ಅದೇಗೆ ಹಾಗೆ ಏನೋ, ಹೈಸ್ಕೂಲ್ ಶಾಲೆಯ ಎಲ್ಲಾ ಸರ್‌ಗಳಿಗೂ ಒಂದು ಸಂಕ್ಷಿಪ್ತ ಹೆಸರಿತ್ತು. ಸಿ.ಜಿ.ಕೆ, ಕೆ.ಜಿ.ಕೆ, ಅರ್.ಎನ್.ಅರ್, ಎಲ್.ಎಸ್.ಪಿ, ಅರ್.ಅರ್,ವಿ.ಎಸ್.ಎಚ್,ಜಿ.ಎನ್.ಜಿ, ಎಮ್.ಜೆ.ಜ... ತುಂಬಾ ದಿವಸದವರೆಗೆ ಅವರ ಪೂರ್ತಿ ಹೆಸರೇನು ಅಂತ ಗೊತ್ತೇ ಇರಲಿಲ್ಲ. ಇನ್ನು ಕೆಲವರದು ಈಗಲೂ ಗೊತ್ತಿಲ್ಲ.

***************

ಆಗಿನ್ನು ಶಾಲೆ ಸೇರಿದ ಸಮಯವಿರಬೇಕು. ಶಾಲೆ ವಾತಾವರಣ ಹೊಸದು. ನಗುಮುಖದಿಂದ ಯಾವಾಗಲೂ ಅಮ್ಮನ ತರ ಮಾತಾಡಿಸುತ್ತಿದ್ದ ಉಮ ಟೀಚರ್. ಶಾಲೆಯಿಂದ ಮಕ್ಕಳನ್ನು ಕರೆದೊಯ್ಯಲು ಬರುತ್ತಿದ್ದ ಅಪ್ಪ-ಅಮ್ಮಂದಿರು ಬರುವುದು ತಡವಾದರೆ, ಅವರು ಬರುವ ತನಕ ಜೊತೆಗೆ ಇದ್ದು ಸಮಾಧಾನಿಸುತ್ತಿದ್ದ ಪರಿ, ಇನ್ನೂ ನೆನಪಿಂದ ಮಾಸಿಲ್ಲ.

****************

ಇಂಜಿನಿಯರಿಂಗ್ ಓದುವಾಗ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿದ್ದ ನಮಗೆಲ್ಲಾ ಒಬ್ಬರು ಪ್ರೊಫೆಸರ್‍ ಬಗ್ಗೆ ಸ್ಪಲ್ಪ ಹೆದರಿಕೆ. ಗಡ್ಡಧಾರಿ ಆ ಪ್ರೊಫೆಸರ್ ಕೈಯಲ್ಲಿ ಸಿಕ್ಕುಬಿದ್ದು ಬೈಸಿಕೊಂಡ ಕತೆಗಳು ವಿಪುಲವಾಗಿದ್ದವು. ಕ್ಲಾಸಿ‍ನಲ್ಲಿ ಮಾಡಿದ ಕಿತಾಪತಿ-ತರಲೆಗಳ ಜೊತೆ, ತರಗತಿಯ ಹೊರಗೆ-ಲ್ಯಾಬಿನಲ್ಲಿ-ಕಾಲೇಜ್ ಕಾರಿಡಾರಿನಲ್ಲಿ ನಡೆದ ಮಂಗಾಟಗಳಿಗೂ ಇವರಿಂದ ಮಂಗಳಾರತಿ ಕಾದಿರುತಿತ್ತು. ಇಂತಹ ಪ್ರೊಫೆಸರ್ ನಮ್ಮ ಪ್ರೊಜಕ್ಟ್ ಗೈಡ್ ಆಗಿದ್ದು ನಮ್ಮ ಯಾವ ಜನ್ಮದ ಪುಣ್ಯವೋ ಅಂದುಕೊಂಡು ಹಲುಬಿದ್ದೆವು.

ಬರುಬರುತ್ತಾ ಅವರು ಹೇಳಿದ್ದು ನಮ್ಮ ಒಳ್ಳೆಯದಕ್ಕೆನ್ನುವ ಸತ್ಯ ಅರಿವಾಗತೊಡಗಿತ್ತು.ನಮ್ಮ ಕಾಲೇಜಿನ ಕೊನೆಯ ದಿನಗಳಲ್ಲಿ ಅವರು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು, ತುಂಬಾ ಬಳಲಿಬಿಟ್ಟಿದ್ದರು. ಅವರನ್ನು ಮಾತಾಡಿಸಲು ಮನೆಗೆ ಹೋದಾಗ, ಹಾಸಿಗೆ ಪಕ್ಕ ಕುಳ್ಳಿರಿಸಿಕೊಂಡು ಒಂದೆರಡು ಹಿತವಾಗಿ ಮಾತಾಡಿದ್ದರು.ನಮಗೆ ಅವರ ಬಗ್ಗೆ ಇದ್ದ ಕಲ್ಪನೆಗಳಿಗೆ ಅಂದು ಅವರ ಮಾತುಗಳಿಗೂ ಯಾಕೋ ಹೊಂದಿಕೆ ಆಗುತ್ತಿರಲಿಲ್ಲ. ಅವರು ಬೇಕೆಂದಲೇ ಕಾಲೇಜ್‍ನಲ್ಲಿ ಆ ತರ ಇದ್ದಿರಬಹುದೇ ಅನಿಸಿತ್ತು.

****************

ಮಿಡ್ಲ್ ಸ್ಕೂಲ್‍ನಲ್ಲಿ ವಿಜ್ಞಾನ-ಗಣಿತ ಭೋದಿಸುತ್ತಿದ್ದ ಪಾಟೀಲ್ ಮೇಷ್ಟ್ರು, ತರಗತಿಯಲ್ಲಿ ರಾಗದಂತೆ ಮಾತಾಡುತ್ತಿದ್ದರು. ಅವರ ತರಗತಿಯಲ್ಲಿ ಅಶಿಸ್ತನ್ನು ಎಂದೂ ಸಹಿಸುತ್ತಿರಲಿಲ್ಲ, ಸಿಕ್ಕಬಿದ್ದವರಿಗೆ ಕಠಿಣ ಶಿಕ್ಷೆ ಇರುತಿತ್ತು. ಅವರ ರಾಗದಂತಿದ್ದ ಮಾತುಗಳ ಬಗ್ಗೆ ನಮ್ಮನಮ್ಮಲ್ಲಿ ಗುಪ್ತವಾಗಿ ಮಾತಾಡಿಕೊಂಡು ನಗುವುದು ನಡೆಯುತಿತ್ತು.

ಅದ್ಯಾವುದೋ ಒಂದು ದಿವಸ , ಶಾಲೆಯ ಬಿಡುವಿನ ಸಮಯ ’ಗೇಮ್ಸ್ ರೂಮ್’ನಲ್ಲಿ ಗೆಳಯರೊಂದಿಗೆ ಚೆಸ್ ಆಡುತ್ತಿದ್ದೆ. ಅದು ಇದು ಮಾತಾಡುತ್ತಾ ನಡೆಯುತ್ತಿದ್ದ ಆಟದ ಭರದಲ್ಲಿ ನಾನು ಆ ಮೇಷ್ಟ್ರ ತರ ಮಾತಾಡತೊಡಗಿದ್ದೆ. ಅವರನ್ನೇ ಅನುಕರಿಸಿ ಸುಮಾರು ಒಂದು ಹತ್ತು ನಿಮಿಷ ಮಾತಾಡಿರಬಹುದು. ಇದರ ಮಧ್ಯೆದಲ್ಲಿ ಆ ರೂಮ್‍ನಲ್ಲಿದ್ದವರು ಅದ್ಯಾಕೋ ಒಮ್ಮೆಲೇ ಮಾತಾಡದೇ ಸುಮ್ಮನಾಗಿದ್ದರು. ನಾನು ಅದನ್ನು ಗಮನಿಸದೆ, ಮೇಷ್ಟ್ರನ್ನೇ ಅನುಕರಿಸುತ್ತಾ ಮಾತಾಡುತ್ತ ಹಿಂದೆ ತಿರುಗಿದೆ. ಆ ಮೇಷ್ಟ್ರು ನನ್ನ ಬೆನ್ನ ಹಿಂದೆ ನಿಂತು ನಮ್ಮ ಚೆಸ್ ಆಟವನ್ನೂ-ಅವರ ಅನುಕರಣೆಯನ್ನು ನೋಡಿದ್ದರು. ನಾನು ಒಮ್ಮೆಗೆ ಸಣ್ಣಗೆ ನಡುಗಿದ್ದೆ. ಅವರು ಎನೂ ಹೇಳದೇ ಸುಮ್ಮನೆ ನಗುತ್ತಾ ಅಲ್ಲಿಂದ ಹೊರನಡೆದರೂ, ನನಗೆ ಮರುದಿನ ಗ್ರಹಚಾರ ಕಾದಿದೆ ಎಂಬ ಹೆದರಿಕೆ ಶುರುವಾಗಿತ್ತು. ಆ ತರ ಏನು ಆಗದೇ ನನಗೆ ಸಂತೋಷ-ಆಚ್ಚರಿಗಳಾಗಿದ್ದವು.

********************

ಕೆಲಸಕ್ಕೆ ಸೇರಿ ನಾನು ಬೆಂಗಳೂರಿಗೆ ಬಂದ ಕೆಲ ವರ್ಷದಲ್ಲಿ, ಅಪ್ಪ-ಅಮ್ಮನಿಗೆ ನಾವಿದ್ದ ಊರಿನ ಪೇಟೆಯಲ್ಲಿ ಸಿಕ್ಕದ್ದರಂತೆ ನಮ್ಮ ಟೀಚರ್. ನಮ್ಮ ಮಿಡ್ಲ್ ಸ್ಕೂಲ್‍ನ ಹೆಡ್ ಮಾಸ್ಟರ್ ಆಗಿದ್ದವರು. ನಾನು ಶಾಲೆ ಮುಗಿಸಿ ಸುಮಾರು ೮-೧೦ ವರ್ಷದ ನಂತರ ಸಿಕ್ಕ ಮೇಲೂ ಸಹ ನನ್ನ ಹೆಸರನ್ನು ನೆನಪಿಟ್ಟುಕೊಂಡು, ನನ್ನ ಬಗ್ಗೆ ಸವಿವರವಾಗಿ ಕೇಳಿದರಂತೆ.

ಆ ನಮ್ಮ ಕಮಲ ಮಿಸ್, ನನ್ನ ಆತ್ಮವಿಶ್ವಾಸ ಹೆಚ್ಚು ಮಾಡಿದವರು, ಹೊಸತನದ ಹವ್ಯಾಸಗಳನ್ನು ಪರಿಚಯಿಸಿದವರು, ಏನೋ ವಿಶ್ವಾಸ-ಪ್ರೀತಿ.

********************

ಇನ್ನೊಬ್ಬರಿದ್ದರು ಹೈಸ್ಕೂಲ್‍ನಲ್ಲಿ ಟಿ.ಆರ್.ಜಿ. ದಿನವೂ ಇನ್ನೊಂದು ಊರಿನಿಂದ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ಅವರ ತರಗತಿಯನ್ನು ಯಾರು ತಪ್ಪಿಸಿಕೊಳ್ಳುತ್ತಿರಲಿಲ್ಲ, ಅವರ ವಿರುದ್ಧ ಮಾತಾಡಿದ್ದು ಕಂಡೇ ಇರಲಿಲ್ಲ. ಅವರ ವೃತ್ತಿಪರತೆ, ಭೋಧನಾ ಶೈಲಿ, ಅವರ ವ್ಯಕ್ತಿತ್ವ..ನಮಗೆಲ್ಲಾ ಅವರು ಸಂಪೂರ್ಣ ಜಂಟಲ್‍ಮನ್. ತುಂಬಾ ಸಲ, ನಾನೇದರೂ ಮೇಷ್ಟ್ರು ಆದರೆ ಇವರ ತರ ಆಗಬೇಕೆಂದುಕೊಂಡದ್ದು ಇದೆ.

********************

ಕ್ಲಾಸಿನಲ್ಲಿ ತಿಂಗಳು ಕೊಡುವ ಮಾರ್ಕ್ಸ್ ಕಾರ್ಡ್‍ಗಳನ್ನು ತುಂಬಲು ನಮ್ಮ ಕ್ಲಾಸ್ ಟೀಚರ್‌ಗೆ ಸಹಾಯ ಮಾಡುತ್ತಿದ್ದೆ. ಅದು ಶಾಲೆ ಮುಗಿದ ಮೇಲೆ ಸಂಜೆ ಅವರ ಮನೆಯಲ್ಲಿ ನಡೆಯುತಿತ್ತು. ನನಗೆ ಅದಕ್ಕಿಂತ ಇಷ್ಟವಾಗುತ್ತಿದ್ದು ಅವರ ಮನೆಯಲ್ಲಿ ಕೊಡುತ್ತಿದ್ದ ಧಾರವಾಡ ಫೇಡೆ-ಖಾರಾ ! ಅದರ ಜೊತೆ ನಮ್ಮ ಗಡ್ ಸರ್ ಮಾತಾಡುತ್ತಿದ್ದ ವಿಷಯಗಳು. ಸಂಸ್ಕೃತ ಪಂಡಿತರೂ ಆಗಿದ್ದ ಅವರ ಮಾತುಗಳು ಕಾಳಿದಾಸನಿಂದ ಹಿಡಿದು ಮಣಿರತ್ನಂ ಸಿನಿಮಾಗಳ ಬಗ್ಗೆ ನಡೆಯುತಿತ್ತು.

*********************

ಶಿಕ್ಷಕರು ಎಂದೊಡನೆ. ಸಿನಿಮಾ ರೀಲಿನಂತೆ ಹೀಗೆ ಸಾಲು ಸಾಲಾಗಿ ನನ್ನ ತಲೆಯಲ್ಲಿ ಓಡಿದ ನೆನಪಿನ ದೃಶ್ಯಾವಳಿಗಳು ಇವು.ಈ ತರ ಇನ್ನೂ ಅನೇಕ ಶಿಕ್ಷಕರ ನೆಚ್ಚಿನ ನೆನಪುಗಳಿವೆ. ಮೇಲೆ ಹೇಳಿದ ಸನ್ನಿವೇಶಗಳು ಕೇವಲ ಕೆಲವು ಉದಾಹರಣೆಗಳಷ್ಟೇ. ಇದೊಂದು ಶಿಕ್ಷಕರ ದಿನಾಚರಣೆಯ ನೆವದಲ್ಲಿ ನಮಗೆಲ್ಲಾ ದಾರಿದೀಪದವರ ಬಗ್ಗೆ ನೆನೆವ ಅವಕಾಶ.

ಶಾಲೆಯಿಂದ ಹಿಡಿದು ಉನ್ನತ ವ್ಯಾಸಂಗದವರೆಗೆ ಹೆಜ್ಜೆಹೆಜ್ಜೆಗೂ ಜೊತೆಗಿದ್ದು, ಶಿಕ್ಷಣ ಎಂಬ ಅದ್ಭುತ ಶಕ್ತಿಯನ್ನು ಧಾರೆ ಎರೆದವರು ನಮ್ಮ ಶಿಕ್ಷಕರು. ನಮ್ಮನ್ನು ರೂಪಿಸಿ, ನಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ನಮ್ಮನ್ನು ವಿಶ್ವದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಕೆಲಸ ಮಾಡಿದವರು.

ನಮ್ಮ ಪ್ರೀತಿ, ಮೆಚ್ಚುಗೆ, ತಮಾಷೆ, ವಿಶ್ವಾಸ ಎಲ್ಲದರಲ್ಲೂ ಭಾಗಿಯಾದವರು.

ಅಮ್ಮನಂತ ಪ್ರೀತಿ, ಅಪ್ಪನಂತ ಶಿಸ್ತು, ಗೆಳಯನಂತ ವಿಶ್ವಾಸ ತೋರಿದ ನಮ್ಮ ಶಿಕ್ಷಕರಿಗೆಲ್ಲಾ ಹೃದಯಪೂರ್ವಕ ವಂದನೆಗಳು.