Monday, March 05, 2007

ಅಲ್‍ಕಟ್ರಾಸ್

ನೀವು 'ದಿ ರಾಕ್' ಅನ್ನೋ ಸಿನಿಮಾ ನೋಡಿರಬಹುದು. ಸೀನ್ ಕಾನೇರಿ ಮತ್ತು ನಿಕೋಲಸ್ ಕೇಜ್ ಇರುವ ಈ ಸಿನಿಮಾ ಬಂದಿದ್ದು ೧೯೯೬ರಲ್ಲಿ.ಸ್ಯಾನ್ ಪ್ರಾನಿಸ್‍ಸ್ಕೋದ ಹತ್ತಿರವಿರುವ ದ್ವೀಪವೊಂದಕ್ಕೆ ಹೋದ ಪ್ರವಾಸಿಗರನ್ನು ಸೆರೆಯಾಳಾಗಿ ಮಾಡಿಕೊಂಡು, ಆ ದ್ವೀಪದಿಂದ ಸ್ಯಾನ್ ಪ್ರಾನಿಸ್‍ಸ್ಕೋದ ಮೇಲೆ ರಾಸಾಯನಿಕ ದಾಳಿಯ ಯೋಜನೆ ಬಗ್ಗೆ ಇರುವ ಕತೆ.ಇತ್ತೀಚಿಗೆ 'ಅಲ್‍ಕಟ್ರಾಸ್' ಅನ್ನೋ ಆ ದ್ವೀಪವನ್ನೂ, ಅಲ್ಲಿನ ಆ ಕುಖ್ಯಾತ ಸೆರಮನೆಯ ಪ್ರವಾಸ ಮಾಡಿದಾಗ ಮತ್ತೆ ನೆನಪಾಗಿದ್ದು ಆ ಸಿನಿಮಾ.

ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಎರಿಯಾದಿಂದ ಜಿನಿಗುಡುತ್ತಿದ್ದ ಮಳೆ ಮತ್ತು ನಡುಗುವ ಚಳಿಯ ಜೊತೆ ದೋಣಿಯಲ್ಲಿ ಹೊರಟ ನಾವು ಆ ದ್ವೀಪವನ್ನು ೨೦-೨೫ ನಿಮಿಷದಲ್ಲಿ ಮುಟ್ಟಿದ್ದೆವು. ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಮಧ್ಯೆ ಇರುವ ಆ ದ್ವೀಪ, ಅದರಲ್ಲಿ ಕೋಟೆಯಂತ ಕಟ್ಟಡ....ತೀರಾ ಸಾಮಾನ್ಯವಾಗಿ ಕಾಣುತಿತ್ತು, ಅದರ ಇತಿಹಾಸ ತಿಳಿಯುವವರೆಗೆ. ಅಲ್ಲಿ ಹೋಗುತ್ತಿರುವಂತೆ ಗೈಡ್ ಒಬ್ಬ ಪ್ರವಾಸಿಗರನ್ನು ಉದ್ದೇಶಿಸಿ ಮಾತಾಡಿದ.ನಂತರ ಅಲ್ಲಿಂದ ನಾವು 'ಅಲ್‍ಕಟ್ರಾಸ್' ಬಗ್ಗೆ ಡಿಸ್ಕವೇರಿ ಚಾನಲ್‍ರವರ ಕಿರುಚಿತ್ರ ವೀಕ್ಷಿಸಿ, ಆ ಕುಖ್ಯಾತ ಸೆರೆಮನೆಯ ಪ್ರವಾಸಕ್ಕೆ ತೆರಳಿದೆವು.ಮೊದಲು ರಕ್ಷಣಾ ತಾಣವಾಗಿದ್ದು ನಂತರ ಸೆರಮನೆಯಾಗಿ ಮಾರ್ಪಾಟ್ಟು, ಈಗ ರಾಷ್ಟ್ರೀಯ ಸ್ಮಾರಕವಾಗಿದೆ 'ಅಲ್‍ಕಟ್ರಾಸ್'. ಆ ಸೆರಮನೆ ಪ್ರವೇಶಿಸುತ್ತಿದ್ದಂತೆ ಹೆಡ್‍ಪೋನ್ ಜೊತೆ ಮೊಬೈಲ್‍ನಂತ ಸಾಧನವೊಂದು ಪ್ರವಾಸಿಗರಿಗೆ ಕೊಡಲಾಯಿತು. ಆ ಸಾಧನ ನಾವು ಸೆರಮನೆಯಲಿ ಹೋಗುವ ಪ್ರತಿ ಜಾಗದ ಬಗ್ಗೆ ವಿವರಣೆ ನೀಡತೊಡಗಿತು.

೧೯೩೩ರಲ್ಲಿ ಶುರುವಾದ ಸೆರಮನೆ ತಾನಿದ್ದ ಭೌಗೋಳಿಕ ಸ್ಥಾನ, ಅಲ್ಲಿನ ವಿಪರೀತ ಹವಾಮಾನದಿಂದ ಅದು ಒಂದು ಅತ್ಯಂತ ಕಠಿಣ ಸೆರಮನೆಯ ಸ್ಥಾನಗಳಿಸಿತು.ಬೇರೆ ಜೈಲುಗಳಲ್ಲಿ ಹಿಡಿದಿಡಲಾಗದ ಆಗಿನ ಕಾಲದ ಅತ್ಯಂತ ಕುಖ್ಯಾತ ಕ್ರಿಮಿನಲ್‍ಗಳನ್ನು ಅಮೇರಿಕಾ ಸರ್ಕಾರ ಅಲ್ಲಿ ಇಡತೊಡಗಿತು. ಹೊರಗಿನ ಪ್ರಪಂಚದವರಿಗೆ ಅಲ್ಲಿ ಪ್ರವೇಶ ಇಲ್ಲದಿದ್ದರಿಂದ ಮೊದಲೇ ಕುತೂಹಲದ ಬೀಡಾಗಿದ್ದ 'ಅಲ್‍ಕಟ್ರಾಸ್' ಈ ಕುಖ್ಯಾತರ ಆಗಮನದಿಂದ ಇನ್ನೂ ಕುತೂಹಲ ಹೆಚ್ಚಿಸಿತು. ಅದಕ್ಕೂ ಹೆಚ್ಚು ರೋಚಕ ಮೂಡಿಸಿದ್ದು ಅಲ್ಲಿನ ಕೈದಿಗಳ ಜೀವನ ಮತ್ತು ಅವರ ಜೈಲಿಂದ ಪರಾರಿಯಾಗುವ ಪ್ರಯತ್ನಗಳು.ಅದು ಕಾರ್ಯನಿರ್ವಹಿಸಿದ ೨೯ ವರ್ಷ ಅನೇಕ ದಂತಕತೆಗಳಿಗೆ-ಹಾಲಿವುಡ್ ಸಿನಿಮಾಗಳಿಗೆ ಸ್ಪೂರ್ತಿ ಆಯಿತು.

ಇದನೆಲ್ಲಾ ಕೇಳುತ್ತಿದ್ದಂತೆ ನಾವು ಆ ಸೆರಮನೆಯೊಳಗೆ ಒಂದು ನೇರವಾದ ಪ್ಯಾಸೇಜ್‍ಗೆ ಬಂದಿದ್ದೆವು. ಅದರ ಅಕ್ಕಪಕ್ಕ ಸಾಲು ಸಾಲು ಕೈದಿಗಳ ಕೋಣೆಗಳು. ತೀರಾ ಚಿಕ್ಕದಾದ ಕೋಣೆ, ಅದರಲ್ಲಿ ಒಂದು ಹಾಸಿಗೆ, ಒಂದು ಕಮೋಡ್ ಬಿಟ್ಟರೆ ಎನೂ ಇರ್ತಿರಲಿಲ್ಲ. ಪ್ರತಿಕೋಣೆಗೂ ಎರಡು ಸುತ್ತು ಕಬ್ಬಿಣದ ಸರಳುಗಳ ಬಾಗಿಲು.ಆ ಕೋಣೆಗಳನು ನೋಡುತ್ತಾ ಮುಂದೆ ಸಾಗುತ್ತಿದ್ದಂತೆ ಒಂದು ತಿರುವು. ಅಲ್ಲಿ ಇತ್ತು 'ಬ್ಲ್ಯಾಕ್ ಹೋಲ್'. ತೀರಾ ಎಗರಾಡುವ ಕೈದಿಗಳನ್ನು ಇದರಲ್ಲಿ ೨-೩ ದಿವಸ ಹಾಕುತ್ತಿದ್ದರಂತೆ. ಬ್ಲ್ಯಾಕ್ ಹೋಲ್ ಹೆಸರಿಗೆ ತಕ್ಕಂತೆ ಒಂದು ಬೆಳಕಿನ ಕಿರಣವು ಬರದ ಕೋಣೆ..ಅದರಲ್ಲಿ ಮಂಚವಾಗಲಿ, ಕಮೋಡ್ ಆಗಲಿ ಯಾವುದೂ ಇರಲಿಲ್ಲ. ಅದರಲ್ಲಿ ಇದದ್ದು ನೆಲದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ತೂತು. ಅಲ್ಲಿರುವರೆಗೆ ಅತ್ಯಂತ ಕಡಿಮೆ ಊಟ. ಕೈದಿಗಳ ಮನೋಬಲ ಮುರಿಯುವಲ್ಲಿ ಇದು ಸಾಕಷ್ಟು ಯಶಸ್ವಿಯಾಗಿತ್ತಂತೆ.

ಅಲ್ಲೇ ಗೋಡೆಯಲ್ಲಿ ಮೇಲೆ ಇದ್ದವು ಆ ಮಹಾನುಭಾವರ ಚಿತ್ರಗಳು.. ಆ ಸೆರಮನೆಯಲ್ಲಿ ಇದ್ದು ಅತ್ಯಂತ ಕುಖ್ಯಾತರಾದ ಕ್ರಿಮಿನಲ್‍ಗಳು.

ಅಲ್ ಕೆಪೋನಿ- ಆಗಿನ ಮಾಫಿಯ ದೊರೆ.ಬೇರೆ ಯಾವುದೇ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ದಂಧೆ ನಡೆಸುತ್ತಿದ್ದನಂತೆ. ಈ ಸೆರಮನೆಗೆ ಬಂದ ಮೊದಲ ಬ್ಯಾಚ್‍ನಲ್ಲಿದ್ದವನು. ಜೈಲಿನ ಆರಂಭಕ್ಕಿಂತಲೂ ಅವನು ಅಲ್ಲಿ ಬಂದದ್ದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತಂತೆ. ಅಲ್‍ಕಟ್ರಾಸ್‍ಗೆ ಬಂದ ಮೇಲೆ ಅವನನ್ನು ಸಾಮಾನ್ಯ ಕೆಲಸಕ್ಕೆ ಬಾರದ ಕೈದಿಯಾಗಿ ಮಾಡಿದರಂತೆ ! ಜೈಲಿನಲ್ಲಿ ಇದದ್ದು ೬ ವರ್ಷ.

ಜಾರ್ಜ್ ಕೆಲ್ಲಿ-ಇವನು ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ವರ್ಗವಾಗಿ ಬಂದವನು. ಜೈಲಿನಲ್ಲಿ ಇದದ್ದು ೧೭ ವರ್ಷ.

ಅಲ್ವಿನ್ ಕರ್ಪಿಸ್-ಇವನು ಸಹ ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ಬಂದವನು.ಇಲ್ಲಿ ಇದದ್ದು ೨೬ ವರ್ಷ

ರಾಬರ್ಟ್ ಸ್ಟೌರ್ಡ್ - ಅಲ್‍ಕಟ್ರಾಸ್‍ನ ಅತ್ಯಂತ ಕುಖ್ಯಾತ-ಅತೀ ಹೆಚ್ಚು ಮಿಡಿಯಾ ಕವರೇಜ್ ಪಡೆದವನು. ಇಲ್ಲಿಗೆ ಬರುವ ಮುಂಚೆಯಿದ್ದ ಜೈಲಿನಲ್ಲಿ ತನ್ನ ಕೋಣೆಯಲ್ಲಿ ಹಕ್ಕಿಗಳನ್ನು ಇಟ್ಟುಕೊಂಡು ಅವುಗಳನ್ನು ಅಭ್ಯಾಸಮಾಡುತ್ತಿದ್ದನಂತೆ.ಅವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದನಂತೆ. ಅದೇ ಕಾರಣಕ್ಕೆ 'ಬರ್ಡ್ ಮ್ಯಾನ್' ಅನ್ನೋ ಅಡ್ಡಹೆಸರಿನಿಂದ ಎಲ್ಲೆಡೆಗೆ ಪ್ರಸಿದ್ದನಾದವನು.ಆದರೆ ಇಲ್ಲಿಗೆ ಬರಲು ಕಾರಣ ಹಿಂದಿದ್ದ ಜೈಲಿನ ಅಧಿಕಾರಿಯೊಬ್ಬನನ್ನು ಸುಮಾರು ೨೦೦೦ ಕೈದಿಗಳ ಎದುರು ನಿರ್ಧಯವಾಗಿ ಹತ್ಯೆ ಮಾಡಿದ್ದಕ್ಕೆ.ಇದದ್ದು ೧೭ ವರ್ಷ.

ಮಾರ್ಟನ್ ಸೊಬೆಲ್-ಜೈಲಿಗೆ ಬರಲು ಕಾರಣ ಅಮೇರಿಕಾದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಪ್ರಯತ್ನಪಟ್ಟಿದ್ದು ! ಇದದ್ದು ೫ ವರ್ಷ.
ಹೀಗೆ ಇನ್ನೂ ಅನೇಕ ವಿಶಿಷ್ಟ ವ್ಯಕ್ತಿಗಳ ಬೀಡಾಗಿದ್ದ ಈ ಜೈಲಿನಿಂದ ತಪ್ಪಿಸಿಕೊಳ್ಳುವದಕ್ಕೆ ಪ್ರಯತ್ನಪಟ್ಟವರು ಅನೇಕರು. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು ಪ್ರಯತ್ನಗಳು - ೩೬. ಅದರಲ್ಲಿ ಏಳು ಕೈದಿಗಳು ಪ್ರಯತ್ನದಲ್ಲಿದ್ದಾಗ ಶಾಟ್ ಡೆಡ್, ಇಬ್ಬರು ಜೈಲಿನಿಂದ ಹೊರಬಂದರು ಅಲ್ಲಿನ ಸಮುದ್ರದಲ್ಲಿ ಮುಳುಗಿ ಸತ್ತವರು, ಇಬ್ಬರು ಜೈಲು-ದ್ವೀಪದಿಂದ ತಪ್ಪಿಸಿಕೊಂಡರು ಮರಳಿ ಹಿಡಿಯಲ್ಪಟ್ಟವರು, ೫ ಜನ ನಾಪತ್ತೆ ಆದವರು, ಇನ್ನು ಉಳಿದವರು ಪರಾರಿಯಾಗುವಾಗ ಸಿಕ್ಕು ಮರಳಿದವರು. ಆ ೫ ಜನ ನಾಪತ್ತೆಯದವರಲ್ಲಿರುವ ಹೆಸರುಗಳೇ - ಮೌರಿಸ್ ಮತ್ತು ಎಂಜಿಲಿನ್ ಸಹೋದರರು.

ಈ ಇಬ್ಬರು ಸೋದರರು ಇಲ್ಲಿಂದ ಪರಾರಿಯಾದ ಬಗ್ಗೆ ಅನೇಕ ಕತೆಗಳಿವೆ. ಆದರೆ ಅವರು ಉಪಯೋಗಿಸಿದ ವಿಧಾನ, ಅವರು ತಮ್ಮ ಡಮ್ಮಿಗಳನ್ನು ತಮ್ಮ ಕೋಣೆಯಲ್ಲಿ ಮಲಗಿಸಿ ಪರಾರಿಯಾದ ಬಗ್ಗೆ ತೀರಾ ಸಿನಿಮೀಯಾ. ಅವರು ತಪ್ಪಿಸಿಕೊಂಡು ಹೋಗಿಲ್ಲ ಅನ್ನುತ್ತದೆ ಅಧಿಕೃತ ವರದಿ, ಅದರ ಪ್ರಕಾರ ಅವರು ಪರಾರಿ ಪ್ರಯತ್ನದಲ್ಲಿದ್ದಾಗ ಆ ಕೊರೆಯುವ ಸಮುದ್ರದಲೆಲ್ಲೋ ಮುಳುಗಿ ಸತ್ತಿರಬಹುದೆಂದು. ಆದರೆ ಇನ್ನೂ ಅನೇಕರ ಪ್ರಕಾರ ಅಲ್ಲಿಂದ ಅವರು ಯಶಸ್ವಿಯಾಗಿ ಪರಾರಿಯಾದವರು.ಇವರ ಕತೆಯನ್ನು ಆಧಾರಿಸಿ ಬಂದಿದ್ದೆ ಹಾಲಿವುಡ್ ಚಿತ್ರ -'ಎಸ್ಕೇಪ್ ಫ್ರಾಮ್ ಅಲ್‍ಕಟ್ರಾಸ್'.

ಸೆರಮನೆಯ ಕುಖ್ಯಾತರ ಬಗ್ಗೆ ಕೇಳುತ್ತಾ ಕೇಳುತ್ತಾ ಈಗ ನಾವು ಈ ಸೋದರರಿದ್ದ ಸೆಲ್‍ನ ಮುಂದೆ ನಿಂತಿದ್ದೆವು. ಅವರ ಕೋಣೆಯಲ್ಲಿ ಆ ಡಮ್ಮಿಗಳ ಪ್ರತಿಕೃತಿಗಳು ಹಾಗೇ ಇಟ್ಟಿದ್ದರು. ಅಲ್ಲಿದ್ದ ಗ್ರಂಥಾಲಯದಲ್ಲಿ ತಿರುಗಾಡಿ, ಕೈದಿಗಳ ಭೇಟಿಗೆ ಇದ್ದ ಕಿಟಕಿಯಲ್ಲಿ ಕುಳಿತು,ಜೈಲಿನ ಅಧಿಕಾರಿಗಳ ಕಚೇರಿಯನ್ನು ನೋಡಿ, ಕೊನೆಗೆ ಕೈದಿಗಳ ಊಟದ ಮನೆಗೆ ಹೊಕ್ಕೆವು. ಅಲ್ಲಿ ಯಾವುದೇ ಕುರ್ಚಿ-ಟೇಬಲ್-ಪೋರ್ಕ್-ಚಾಕುಗಳನ್ನು ಇಟ್ಟಿರಲಿಲ್ಲವಂತೆ. ದಿನವೂ ಅದೇ ಮೆನು.

ಇಂತಹ ಸೆರಮನೆಯ ನಿರ್ವಹಿಸುವ ವೆಚ್ಚ ದಿನವೊಂದಕ್ಕೆ ಕೈದಿಯೊಬ್ಬನಿಗೆ ಆ ದಿನಗಳಲ್ಲೇ ೧೦೦ ಡಾಲರ್ ಆಗಿತ್ತಂತೆ. ಹೆಚ್ಚುತ್ತಿದ್ದ ಈ ನಿರ್ವಹಿಸುವ ವೆಚ್ಚ ನೋಡಿ ಕೊನೆಗೂ ೨೯ ವರ್ಷದ ನಂತರ ಈ ಸೆರಮನೆಯನ್ನು ಮುಚ್ಚಲಾಯಿತು.ನಂತರ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಾಡಿಸಲಾಯಿತು.

ನಂತರ ಬಂತು ೧೯೬೯..ಸ್ಠಳೀಯ ರೆಡ್ ಇಂಡಿಯನ್ ಮತ್ತು ಇತರ ಬುಡಕಟ್ಟು ಜನರಿಂದ ಬಲವಂತವಾಗಿ ಕಸಿದುಕೊಂಡ ನೆಲವನ್ನು ವಾಪಾಸ್ ಮಾಡುವಂತೆ ಆಗ್ರಹಿಸಿ ಕೆಲವು ವಿದ್ಯಾರ್ಥಿ ಗುಂಪುಗಳು - ಕೆಲವು ಇಂಡಿಯನ್ ಜನ ಅಲ್‍ಕಟ್ರಾಸ್‍ಗೆ ಮುತ್ತಿಗೆ ಹಾಕಿದರು. ಸಂಕೇತವಾಗಿದ್ದ ಈ ಪ್ರತಿಭಟನೆ ನೋಡುನೋಡುತ್ತಿದ್ದಂತೆ ಪೂರ್ಣಪ್ರಮಾಣವಾಗಿ ಈಡೀ ದ್ವೀಪವನ್ನು ಈ ಗುಂಪು ಆಕ್ರಮಿಸಿಕೊಂಡಿತು. ಅವರ ಬೇಡಿಕೆಗಳು - ಆ ದ್ವೀಪದ ಮೇಲೆ ಇಂಡಿಯನ್ ಸಂಸ್ಕೃತಿ ಬಿಂಬಿಸುವ ಒಂದು ಕಲ್ಚರಲ್ ಕೇಂದ್ರ, ಒಂದು ಶೈಕ್ಷಣಿಕ ಕೇಂದ್ರ ಮತ್ತು ಒಂದು ನಿಸರ್ಗ-ಅಧ್ಯಯನ ಕೇಂದ್ರ. ಸ್ಥಾಪಿಸುವುದು. ಸುಮಾರು ಒಂದು ವರ್ಷದವರೆಗೆ ದ್ವೀಪದ ಮೇಲಿದ್ದ ಈ ಇಂಡಿಯನ್ ಹಿಡಿತ ಕೊನೆಗೂ ಕಮಾಂಡೊಗಳ ಕ್ಷಿಪ್ರಕಾರ್ಯಾಚರಣೆಯಲ್ಲಿ ಕೊನೆಗೊಂಡಿತ್ತು.ಆದರೆ ಅದು ಉಂಟುಮಾಡಿದ ಜನಜಾಗೃತಿಗೆ ಶರಣಾಗಿ ಸರಕಾರ ಆಕ್ರಮಿಸಿದ್ದ ಅನೇಕ ಪ್ರದೇಶಗಳನು ಮರಳಿ ಕೊಟ್ಟಿತಂತೆ.

ಇಷ್ಟೆಲ್ಲಾ ಇತಿಹಾಸವಿರುವ ಸೆರಮನೆ-ದ್ವೀಪ ನೋಡಿ ಮರಳುತ್ತಿದ್ದಂತೆ ಗತಕಾಲಕ್ಕೆ ಹೋಗಿಬಂದಂತೆ ಭಾಸವಾಗುತಿತ್ತು.

ಕೈದಿಗಳ ಧ್ವನಿ, ಗಾರ್ಡ್‍ನ ಸೀಟಿಯ ಶಬ್ದ, ಗುಂಡಿನ ಸದ್ದು, ಇಂಡಿಯನ್ ಜನರ ಕೂಗು ಇನ್ನೂ ಅಲ್ಲಿ ಪ್ರತಿಧ್ವನಿಸುತ್ತಿದೆ ಅನಿಸಿತು..

10 comments:

Anveshi said...

ಶಿವ್ ಅವರೆ,
"ಹೊರಗಿನ ಪ್ರಪಂಚದವರಿಗೆ ಅಲ್ಲಿ ಪ್ರವೇಶ ಇಲ್ಲದಿದ್ದರಿಂದ ಮೊದಲೇ ಕುತೂಹಲದ ಬೀಡಾಗಿದ್ದ 'ಅಲ್‍ಕಟ್ರಾಸ್' ಈ ಕುಖ್ಯಾತರ ಆಗಮನದಿಂದ ಇನ್ನೂ ಕುತೂಹಲ ಹೆಚ್ಚಿಸಿತು."

ಅಂತ ಹೇಳಿದ್ರಲ್ಲಾ? "ಕುಖ್ಯಾತರ ಆಗಮನ ಆಯಿತು" ಅಂತ ನೀವು ಹೇಳಿದ್ದೋ ಅಥವಾ ನೀವಲ್ಲಿಗೆ ಕಾಲಿಟ್ಟ ತಕ್ಷಣ ಬೇರೆಯವರು ಹೇಳಿದ್ದೋ???? :)

Shiv said...

ಅಸತ್ಯಿಗಳೇ,
ನಾನು ಹೇಳಿದ್ದು ೧೯೩೩ರ ವಿಷಯ. ಅಲ್‍ಕಟ್ರಾಸ್ ಆರಂಭವಾಗಿನ ಸ್ಥಿತಿ.

ನಾವು ಅಲ್ಲಿ ಕಾಲಿಟ್ಟ ತಕ್ಷಣ ಯಾರು ಆ ರೀತಿ ಹೇಳಲಿಲ್ಲವೆಂದು ಸ್ಪಷ್ಟಪಡಿಸುತ್ತೇವೆ!

Sushrutha Dodderi said...

ಓಹ್! ಸರಿಯಾದ ಅಡ್ರೆಸ್ ಕೊಡಿ. ನಮ್ಮೂರಲ್ಲಿ ಕೆಂಚಪ್ಪ ಅಂತ ಒಬ್ಬ ರೌಡಿ ಇದಾನೆ. ಅವನ್ನ ಅಲ್ಲಿಗೇ ಕಳುಸ್ತೀನಿ :)

Shiv said...

ಸುಶ್ರುತ,

ಅಲ್ಲೇ ಎಲ್ಲೋ ಮಂಗಳೂರು ಜೈಲೋ ಕಾರವಾರ ಜೈಲಿಗೋ ಕಳಿಸೋದ ಬಿಟ್ಟು , ಇಲ್ಲಿ ತನಕ ಕಳಿಸೊ ಯೋಚನೆ ಯಾಕೇ?
ಎರೋಪ್ಲೇನ್ ಹತ್ತಿಸೋದು ಅಂದ್ರೆ ಇದೇನಾ :)

Raghavendra D R said...

Shiv..nimma vivaraNe thumba channagitthu..alliye iddanthaayithu.

ene aadharu nanage obba manyushyanannu bandhisi avanna freedom kitthikoLLuvudhu yaako sari hogodhilla. As a philosopher once said "Society prepares the crime. The criminal is just an instrument who executed it." The society as a whole is at the root of all evil.

bhadra said...

abbA - lEKana OduttiddarE mai jummennuvaMtide. bahaLa suMdara niroopaNe. aMDamaan jail kooDA heegeyE irabahudA?

Shiv said...

ರಘು,
ಧನ್ಯವಾದಗಳು..
ಅಲ್ಲಿ ಇದ್ದಾದೆ ಆಯ್ತು ಅಂತಾ ಅಲ್ಲಿ ಇದ್ದಬಿಡಬೇಡಿ :)

ತವಿಶ್ರೀ,
ಹೌದು ಅಂಡಮಾನ್ ನೆನಪಿಸುತ್ತೆ ಈ ಜೈಲು..
ಆದರೆ ಯಾಕೋ ಅಂಡಮಾನ್ ಹೋಲಿಕೆಗೆ ಮನಸ್ಸು ಬರಲಿಲ್ಲ..ಅಂಡಮಾನ್‍ನಲ್ಲಿ ನಮ್ಮ ಎಷ್ಟು ಸ್ವಾತಂತ್ರಗಾರರು ಜೀವನ-ಪ್ರಾಣ ಕಳೆದುಕೊಂಡರು..

Mahantesh said...

odta idre Papilaan nenapife baMttu..A punmatya iMta
soliter jailniMda 3-4 tappisakoLLalu prayatnisi
konege yashashwi aada...
nimm blog olle america Safari maddida anubhava niddutte...

Anonymous said...

You should also watch the Clint Eastwood starrer "Escape from Alcatraz"...a brilliant portrayel of the actual story.

Shiv said...

ಮಹಾಂತೇಶ್,
ಅಮೇರಿಕಾ ಸಫಾರಿಗೆ ಯಾವಾಗಲೂ ನಿಮಗೆ ಸ್ವಾಗತ !
ಯಾರು ಆ ಪಪಿಲಾನ್?

ಡಿ.ಸ,
ನೀವು ಹೇಳಿದ ಚಿತ್ರ ಮನೋರಂಜತ್ಮಾಕವಂತು ಇದೆ.ಆದರೆ ನೈಜ್ಯ ಘಟನೆಯನ್ನು ಆಧಾರಿಸಿ ಅನ್ನೋಕೇ ಆಗೋಲ್ಲ.ಹಾಲಿವುಡ್‍ಗೆ ಬೇಕಾದ ಮಸಾಲೆ ಎಲ್ಲಾ ಹಾಕಲಾಗಿದೆ.