Monday, December 10, 2007

ಸಾವಿನ ಹೊಸ್ತಿಲಲ್ಲಿ ನಿಂತವನ ಮಾತು...

ನೀವು ಬಹಳ ಅಂದರೆ ಇನ್ನು ೩-೬ ತಿಂಗಳು ಬದುಕಬಹುದೆಂದು ಗೊತ್ತಾದಾಗ, ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಹೇಗಿರುತ್ತೆ. ದೇಹದ ಒಳಗಿದ್ದುಕೊಂಡು ದಿನ ದಿನವು ಜೀವ ತಿನ್ನುತ್ತಿರುವ ಕ್ಯಾನ್ಸರ್ ಎನ್ನುವ ಆ ಹೃದಯಹೀನ ಹಂತಕನಿಗೆ ಶರಣಾಗಿ, ಉಳಿದಿರುವ ಅಲ್ಪ ಸಮಯವನ್ನು ಅದಕ್ಕೆ ಒಪ್ಪಿಸಬೇಕೇ? ಅಥವ ಇರುವ ದಿನಗಳನ್ನೇ ಅರ್ಥಪೂರ್ಣವಾಗಿ ಬದುಕಿ, ಸಾವಿನಲ್ಲೂ ಒಂದು ಸಂದೇಶ ಕಳಿಸುವಂತೆ ಬಾಳುವುದೋ?

ಅವರ ಹೆಸರು ರಾಂಡಿ ಪೌಸ್ಚ್.

ಕಳೆದ ೨-೩ ತಿಂಗಳಿನಿಂದ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. ಆತ ಸುಮಾರು ೪೦೦ ಜನ ವಿದ್ಯಾರ್ಥಿಗಳು-ಪ್ರೊಪೆಸರ್‌ಗಳ ಮುಂದೆ ಕಳೆದ ಸೆಪ್ಟಂಬರ್‌ನಲ್ಲಿ 'ಲಾಸ್ಟ್ ಲೆಕ್ಚರ್' ಅನ್ನುವ ಮನೋಜ್ಞ ಉಪನ್ಯಾಸ ನೀಡಿದ. ಅಂತರ್ಜಾಲದಲ್ಲೂ ಲಭ್ಯವಿದ್ದ ಆ ಉಪನ್ಯಾಸ, ಎಲ್ಲಡೆ ಹರಡತೊಡಗಿತು. ಮೊದಲ ತಿಂಗಳಲಲ್ಲೇ ಅಂತರ್ಜಾಲದಲ್ಲಿ ಸುಮಾರು ಒಂದು ಮಿಲಿಯನ್ ಜನ ನೋಡಿದರು. ನೋಡಿ ತಮಗೆ ಬೇಕಾದವರಿಗೂ ಹೇಳಿದರು. ನೋಡುನೋಡುತ್ತಿದ್ದಂತೆ ರಾಂಡಿ ಪೌಸ್ಚ್ ಎಷ್ಟು ಪ್ರಸಿದ್ಧನಾದನೆಂದರೆ ಅಮೇರಿಕೆಯ ಟಿವಿ ಚಾನಲ್‍ಗಳು ಅವನ ಬಗ್ಗೆ, ಅವನ ಸಂದರ್ಶನಗಳನ್ನು ಪ್ರಸಾರಮಾಡಲಿಕ್ಕೇ ಪೈಪೋಟಿಗಿಳಿದವು.

ಅಂದಾಗೆ ಯಾರು ಈ ರಾಂಡಿ ಪೌಸ್ಚ್? ಅವನ 'ಲಾಸ್ಟ್ ಲೆಕ್ಚರ್' ಯಾಕೇ ಅಷ್ಟು ಜನಮನ ಮುಟ್ಟಿತು?

ರಾಂಡಿ ಪೌಸ್ಚ್ ಪ್ರಸಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನ ವಿಭಾಗದ ಮೇಧಾವಿ ಪ್ರೊಫೆಸರ್. ವರ್ಚುಲ್ ರಿಯಾಲಿಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪತ್ನಿ-ಮೂರು ಚಿಕ್ಕ ಮಕ್ಕಳ ಸಂಸಾರ. ಅದರೆ ಕಳೆದ ವರ್ಷ ರಾಂಡಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು. ಚಿಕಿತ್ಸೆಗಳು ಶುರುವಾದವು. ಕ್ಯಾನ್ಸರ್ ಯಾವುದಕ್ಕೂ ಜಗ್ಗದೇ ಬೆಳಯಿತು. ಅಗಸ್ಟ್ ಹೊತ್ತಿನಲ್ಲಿ ರಾಂಡಿಗೆ ಇನ್ನು ೩-೬ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದರು.

ಅದೇ ಸಮಯದಲ್ಲಿ ರಾಂಡಿ ಕೆಲಸ ಮಾಡುತ್ತಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದೆ ಈ 'ಲಾಸ್ಟ್ ಲೆಕ್ಚರ್'. ರಾಂಡಿ ಸುಮಾರು ಒಂದುವರೆ ಗಂಟೆ ನೀಡಿದ ಉಪನ್ಯಾಸದಲ್ಲಿ ಯಾವುದೇ ದೊಡ್ಡ ತತ್ವಜ್ಞಾನವಿರಲಿಲ್ಲ, ಅದರಲ್ಲಿ ಸಾವಿನೊಂದಿಗಿನ ಹೋರಾಟದ ಬಗ್ಗೆಯೂ ಇರಲಿಲ್ಲ. ಆ ಉಪನ್ಯಾಸದಲ್ಲಿ ಇದದ್ದು ಹಾಸ್ಯಭರಿತ ಶೈಲಿಯಲ್ಲಿ ಅವನ ಬಾಲ್ಯದ ಕನಸುಗಳ ಬಗ್ಗೆ, ನನಸಾದ-ನನಸಾಗದ ಕನಸುಗಳ ಬಗ್ಗೆ. ಆ ಉಪನ್ಯಾಸ ನೀಡಿದ ಒಂದು ತಿಂಗಳಲ್ಲೇ ಅದು ಅಂತರ್ಜಾಲದಲ್ಲಿ ಎಲ್ಲೆಡೇ ಹರಡಿ,ಸುಮಾರು ೬ ಮಿಲಿಯನ್ ಜನ ಅದನ್ನು ನೋಡಿ, ಜಗತ್ತಿನ ಮೂಲೆ ಮೂಲೆಗೂ ತಲುಪಿ, ರಾಂಡಿ ಒಬ್ಬ ಪ್ರವರ್ತಕನ ತರ ಕಾಣತೊಡಗಿದ.

'ಲಾಸ್ಟ್ ಲೆಕ್ಚರ್' ನೋಡಿ ಅನೇಕ ಜನ ತಮ್ಮ ಜೀವನ ಶೈಲಿ ಬದಲಿಸಿಕೊಂಡವರಿದ್ದಾರೆ.

ಟಿವಿ ಚಾನೆಲ್‍ಗಳ ರಾಂಡಿಯ ಸಂದರ್ಶನ ಮುಗಿಬಿದ್ದವು.ಲಾಸ್ಟ್ ಲೆಕ್ಚರ್ ರಾಂಡಿ ತನ್ನ ಮೂರು ಮಕ್ಕಳಿಗೊಸ್ಕರ ನೀಡಿದ್ದಂತೆ, ಅದು ಎಲ್ಲರಿಗೂ ಇಷ್ಟವಾದದ್ದು ರಾಂಡಿಗೆ ಸಂತಸ ಮತ್ತು ಆಶ್ಚರ್ಯ ತಂದಿವೆಯಂತೆ. ಸದ್ಯಕ್ಕೆ ಉಳಿದ ಕೆಲವೇ ತಿಂಗಳುಗಳಲ್ಲಿ ತನ್ನ ಮೂರು ಮಕ್ಕಳು-ಹೆಂಡತಿಯೊಂದಿಗೆ ಅದಷ್ಟು ಸಮಯ ಕಳೆಯುತ್ತಿದ್ದಾನೆ ರಾಂಡ್. ಈ ಮಧ್ಯೆ 'ಲಾಸ್ಟ್ ಲೆಕ್ಚರ್' ಪುಸ್ತಕ ರೂಪದಲ್ಲೂ ಬರಲಿದೆ.

ಅಂದಾಗೆ ರಾಂಡಿಯ ಈಡೇರದ ಕನಸುಗಳ ಪಟ್ಟಿಯಲ್ಲಿ 'ಸ್ಟಾರ್ ಟ್ರೆಕ್'‍ನ ಕಾಪ್ಟನ್ ಆಗಬೇಕು ಎನ್ನುವ ಕನಸು ನನಸಾಗದಿದ್ದರೂ , ಸ್ಟಾರ್ ಟ್ರೆಕ್‍ನ ಮುಂದಿನ ಚಿತ್ರದಲ್ಲಿ ಒಂದು ಗೌರವ ಪಾತ್ರ ರಾಂಡಿಗೆ ಕೊಟ್ಟಿದ್ದಾರಂತೆ. ಹಾಗೇ ಚಿಕ್ಕಂದಿನಲ್ಲಿದ್ದಾಗ ರಾಷ್ಟ್ರೀಯ ಪುಟ್ಬಾಲ್ ತಂಡದಲ್ಲಿ ಸ್ಥಾನಗಳಿಸಬೇಕೆಂಬ ಕನಸು ನನಸಾಗದಿದ್ದರೂ, ಆ ತಂಡವೇ ರಾಂಡಿಯನ್ನು ತಮ್ಮೊಂದಿಗೆ ಅಭ್ಯಾಸಮಾಡಲ್ಲಿಕ್ಕೇ ಕರೆಸಿಕೊಂಡಿವೆ.

ನೀವು ಇದನ್ನು ಹೊತ್ತಿಗೆ ರಾಂಡಿಯ ಕ್ಯಾನ್ಸರ್ ಕಿಮೋ ತೆರಪಿಯಲ್ಲಿ ಹಾಗೂ ಹೀಗೂ ಒಂದೆರಡು ವಾರಗಳಷ್ಟು ಮೃತ್ಯುವನ್ನು ಮುಂದಕ್ಕೆ ಹಾಕುವಲ್ಲಿ ಯಶ್ವಸಿಯಾಗಿದ್ದಾನೆ. ಆದರೆ ಅದು ಕ್ಷಣಿಕ ಜಯವಷ್ಟೇ, ಸಾವಿನ ಒಳ ಬಾಗಿಲಲ್ಲಿ ನಿಂತವನಿಗೆ ಮರಳಿ ಬರಲು ಆಗುವುದು ಅಸಾಧ್ಯ.


ರಾಂಡಿಯ 'ಲಾಸ್ಟ್ ಲೆಕ್ಚರ್' ನೀವು ನೋಡಿರದಿದ್ದರೆ ಇಲ್ಲಿದೆ ಅದರ ಲಿಂಕ್

http://video.google.com/videoplay?docid=-5700431505846055184

ಹಾಗೆಯೇ ರಾಂಡಿಯ ಬ್ಲಾಗ್ ಇಲ್ಲಿದೆ

http://www.cs.cmu.edu/~pausch/


ಆ 'ಲಾಸ್ಟ್ ಲೆಕ್ಚರ್' ನೋಡಿದ ಮೇಲೆ, ಮನಸಿನ ಆಳದಲ್ಲಿ, ನಮ್ಮ ಜೀವನಗಳ ಬಗ್ಗೆ, ಜೀವನ ಶೈಲಿಯ ಬಗ್ಗೆ, ಜೀವನದಲ್ಲಿ ನಾವು ವಿವಿಧ ವಿಷಯಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸದಿದ್ದರೆ ಕೇಳಿ..

7 comments:

ಸುಪ್ತದೀಪ್ತಿ suptadeepti said...

ರಾಂಡಿ ಪಾಸ್ಚ್ ಬಗ್ಗೆ ಒಬ್ಬರು ಹೇಳಿದ್ದರು, ಲಿಂಕ್ ತಗೊಂಡು, ಭಾಷಣ ಕೇಳಿದ್ದೆ.

ಈ ಕ್ಯಾನ್ಸರೆಂಬ ದೈತ್ಯನ ಹಿಡಿತಕ್ಕೆ ಸಿಲುಕಿದ ಒಂದು ಎಳೆ ಜೀವದ ಹೋರಾಟ ಹತ್ತಿರದಿಂದ ಕಂಡಿದ್ದೆ. ಆ ಎಲ್ಲ ನೋವುಗಳ ನಡುವೆಯೂ ಆ ಜೀವದಲ್ಲಿ ಉಕ್ಕುತ್ತಿದ್ದ ಜೀವನೋತ್ಸಾಹಕ್ಕೆ ಹೆಗಲಾಗಿದ್ದೆ. ಸಾವಿನ ಸಮ್ಮುಖದಲ್ಲಿ ಕೆಲವೇ ಕೆಲವು ಉನ್ನತ ಆತ್ಮಗಳಿಗೆ ಮಾತ್ರವೇ ಅಂಥ ಸ್ಥೈರ್ಯ ಬರಬಹುದು ಅನ್ನುವುದು ನನ್ನ ನಂಬಿಕೆ. ರಾಂಡಿ ಅಂಥ ಒಂದು ಉನ್ನತ ಆತ್ಮ.

ಅನೇಕರಿಗೆ ಆದರ್ಶವಾಗಿರುವುದು ಸುಲಭದ ಮಾತಲ್ಲ. ತನ್ನ ಕೊನೆ ಘಳಿಗೆಯವರೆಗೂ ಉಳಿದವರ ಗುರಿಯಾಗಿರುವ ಇಂಥವರ ಗುರಿ ಕೆಲವೇ ಹೆಜ್ಜೆಗಳಲ್ಲಿರುವುದು ವಿಪರ್ಯಾಸವೆ? ಜೀವನದ ಕಟುಸತ್ಯವೆ?

Shiv said...

ಸುಪ್ತದೀಪ್ತಿಯವರೇ,
ಅದು ನಿಜಕ್ಕೂ ವಿಪರ್ಯಾಸವೇ..
ಉಲ್ಕೆ ತರ ಉರಿದು ಹೋಗುವ ಜೀವಗಳು ಇವು..

ಎಲ್ಲಾ ಆ ಜೀವಗಳಿಗೆ ಆ ಕ್ಯಾನ್ಸರ್ ಜೊತೆಗೆ ಹೋರಾಡುವ ಶಕ್ತಿ ಹೆಚ್ಚಲಿ..

veena said...

ಶಿವ್ ನಿಮ್ಮ ಬ್ಲಾಗನ್ನು ಇಷ್ಟು ತಡವಾಗಿ ನೋಡಿ ತಪ್ಪು ಮಾಡಿದೆ ಏನೋ... ಒಳ್ಳೆಯ ಮಾಹಿತಿಯನ್ನು ಒದಗಿಸಿದ್ದೀರಾ. ರಾಂಡಿಯವರು ಎಷ್ಟೋ ಜೀವಗಳಿಗೆ ಮಾದರಿಯಾಗಿದ್ದಾರೆ. ಲಿಂಕ್ ಸೌಲಭ್ಯ ನೀಡಿದ್ದಕ್ಕೆ ಥ್ಯಾಂಕ್ಸ್

ಸುಧನ್ವಾ ದೇರಾಜೆ. said...

ಈ ಸಂಗತಿ ಚೆನ್ನಾಗಿದೆ. ಸಾವಿನ ಸವಾರಿ ಅತ್ಯಂತ ವಿಶಿಷ್ಟ.

Supreeth.K.S said...

ರಾಂಡಿಗೊಂದು ನಮನ.
ಸಾವಿನ ಹತ್ತಿರಕ್ಕೆ ಹೋದ ಮನುಷ್ಯನ, ಸಾವನ್ನು ಹೊಸಿಲ ಹೊರಗೆ ಕಾಯಿಸುತ್ತಾ ಬದುಕುವವರ ಮನಸ್ಥಿಯನ್ನು ಅರಿತರೆ ನಮ್ಮ ಬದುಕಿಗೊಂದು ಅರ್ಥ ಬರುವುದಕ್ಕೆ ಸಾಧ್ಯ. ಸಾವಿನ ಎದುರು ನಿಂತವನಿಗೆ ಜೀವನದಲ್ಲಿ ಅತೀಮುಖ್ಯ ಎಂದು ಎನ್ನಿಸುವುದು ಯಾವುದೋ ಅದೇ ನಮ್ಮ ಬದುಕಿನ ಉದ್ದೇಶ ಹಾಗೂ ಅತಿ ಮುಖ್ಯ ಸಂಗತಿ. ಸಾವಿನ ಭೇಟಿಗಾಗಿ ಕಾಯುತ್ತಾ ಬದುಕುವವರಿಗೆ ಬಹುಶಃ ಬೇರೊಬ್ಬರಿಗೆ ತೋರಿಸುವುದಕ್ಕೋಸ್ಕರ, ಆದರ್ಶವಾಗುವುದಕ್ಕೋಸ್ಕರ ಬದುಕಬೇಕು ಎಂದು ಅನ್ನಿಸುವುದೇ ಇಲ್ಲವೇನೊ, ನಿಜಕ್ಕೂ ಇಂತಹ ಸಂಗತಿಗಳು ನಮ್ಮನ್ನು ಕಲಕಬೇಕು.

ಬಾನಾಡಿ said...

ಸಾವು ನಮ್ಮ ಬೆನ್ನಟ್ಟಿಕೊಂಡು ಬರುತ್ತಿರುವುದೇ ನಮಗೆ ಇರುವ ಬದುಕಿನ ಕ್ಷಣಗಳ ಮಧುರತೆ.
ಒಲವಿನಿಂದ
ಬಾನಾಡಿ

Shiv said...

ವಿ ಮನಸ್ಸಿನ ಮಾತು,
ಪಾತರಗಿತ್ತಿಗೆ ಭೇಟಿ ನೀಡಿದಕ್ಕೆ ವಂದನೆಗಳು.

ಸುಧನ್ವಾ,
ಹೌದು ರಾಂಡಿ ಸಾವಿನಲ್ಲೂ ವಿಶಿಷ್ಟತೆ ತೋರಿಸಿದ್ದಾರೆ

ಸುಪ್ರೀತ್,
ಬಹುಷಃ ನೀವು ಹೇಳಿದ್ದು ಸರಿ ಇರಬೇಕು.ಬದುಕಿನ ಉದ್ದೇಶ ಅರಿಯಲು ಸಾವಿನ ಬಾಗಿಲ ಸಿಗುವವರೆಗೆ ಕಾಯಬೇಕೇ?

ಬಾನಾಡಿ,
ಅದು ಯಾವಾಗಲೂ ಬೆನ್ನಟ್ಟಿ ಬರುತ್ತಿದೆ ಎಂದು ಗೊತ್ತಿದ್ದರೂ..ಯಾಕೇ ಈ ಜಂಜಟಗಳು,ಯಾಕೇ ಈ ಅಹಂ?