Showing posts with label Life. Show all posts
Showing posts with label Life. Show all posts

Monday, December 10, 2007

ಸಾವಿನ ಹೊಸ್ತಿಲಲ್ಲಿ ನಿಂತವನ ಮಾತು...

ನೀವು ಬಹಳ ಅಂದರೆ ಇನ್ನು ೩-೬ ತಿಂಗಳು ಬದುಕಬಹುದೆಂದು ಗೊತ್ತಾದಾಗ, ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಹೇಗಿರುತ್ತೆ. ದೇಹದ ಒಳಗಿದ್ದುಕೊಂಡು ದಿನ ದಿನವು ಜೀವ ತಿನ್ನುತ್ತಿರುವ ಕ್ಯಾನ್ಸರ್ ಎನ್ನುವ ಆ ಹೃದಯಹೀನ ಹಂತಕನಿಗೆ ಶರಣಾಗಿ, ಉಳಿದಿರುವ ಅಲ್ಪ ಸಮಯವನ್ನು ಅದಕ್ಕೆ ಒಪ್ಪಿಸಬೇಕೇ? ಅಥವ ಇರುವ ದಿನಗಳನ್ನೇ ಅರ್ಥಪೂರ್ಣವಾಗಿ ಬದುಕಿ, ಸಾವಿನಲ್ಲೂ ಒಂದು ಸಂದೇಶ ಕಳಿಸುವಂತೆ ಬಾಳುವುದೋ?

ಅವರ ಹೆಸರು ರಾಂಡಿ ಪೌಸ್ಚ್.

ಕಳೆದ ೨-೩ ತಿಂಗಳಿನಿಂದ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. ಆತ ಸುಮಾರು ೪೦೦ ಜನ ವಿದ್ಯಾರ್ಥಿಗಳು-ಪ್ರೊಪೆಸರ್‌ಗಳ ಮುಂದೆ ಕಳೆದ ಸೆಪ್ಟಂಬರ್‌ನಲ್ಲಿ 'ಲಾಸ್ಟ್ ಲೆಕ್ಚರ್' ಅನ್ನುವ ಮನೋಜ್ಞ ಉಪನ್ಯಾಸ ನೀಡಿದ. ಅಂತರ್ಜಾಲದಲ್ಲೂ ಲಭ್ಯವಿದ್ದ ಆ ಉಪನ್ಯಾಸ, ಎಲ್ಲಡೆ ಹರಡತೊಡಗಿತು. ಮೊದಲ ತಿಂಗಳಲಲ್ಲೇ ಅಂತರ್ಜಾಲದಲ್ಲಿ ಸುಮಾರು ಒಂದು ಮಿಲಿಯನ್ ಜನ ನೋಡಿದರು. ನೋಡಿ ತಮಗೆ ಬೇಕಾದವರಿಗೂ ಹೇಳಿದರು. ನೋಡುನೋಡುತ್ತಿದ್ದಂತೆ ರಾಂಡಿ ಪೌಸ್ಚ್ ಎಷ್ಟು ಪ್ರಸಿದ್ಧನಾದನೆಂದರೆ ಅಮೇರಿಕೆಯ ಟಿವಿ ಚಾನಲ್‍ಗಳು ಅವನ ಬಗ್ಗೆ, ಅವನ ಸಂದರ್ಶನಗಳನ್ನು ಪ್ರಸಾರಮಾಡಲಿಕ್ಕೇ ಪೈಪೋಟಿಗಿಳಿದವು.

ಅಂದಾಗೆ ಯಾರು ಈ ರಾಂಡಿ ಪೌಸ್ಚ್? ಅವನ 'ಲಾಸ್ಟ್ ಲೆಕ್ಚರ್' ಯಾಕೇ ಅಷ್ಟು ಜನಮನ ಮುಟ್ಟಿತು?

ರಾಂಡಿ ಪೌಸ್ಚ್ ಪ್ರಸಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನ ವಿಭಾಗದ ಮೇಧಾವಿ ಪ್ರೊಫೆಸರ್. ವರ್ಚುಲ್ ರಿಯಾಲಿಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪತ್ನಿ-ಮೂರು ಚಿಕ್ಕ ಮಕ್ಕಳ ಸಂಸಾರ. ಅದರೆ ಕಳೆದ ವರ್ಷ ರಾಂಡಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು. ಚಿಕಿತ್ಸೆಗಳು ಶುರುವಾದವು. ಕ್ಯಾನ್ಸರ್ ಯಾವುದಕ್ಕೂ ಜಗ್ಗದೇ ಬೆಳಯಿತು. ಅಗಸ್ಟ್ ಹೊತ್ತಿನಲ್ಲಿ ರಾಂಡಿಗೆ ಇನ್ನು ೩-೬ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದರು.

ಅದೇ ಸಮಯದಲ್ಲಿ ರಾಂಡಿ ಕೆಲಸ ಮಾಡುತ್ತಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದೆ ಈ 'ಲಾಸ್ಟ್ ಲೆಕ್ಚರ್'. ರಾಂಡಿ ಸುಮಾರು ಒಂದುವರೆ ಗಂಟೆ ನೀಡಿದ ಉಪನ್ಯಾಸದಲ್ಲಿ ಯಾವುದೇ ದೊಡ್ಡ ತತ್ವಜ್ಞಾನವಿರಲಿಲ್ಲ, ಅದರಲ್ಲಿ ಸಾವಿನೊಂದಿಗಿನ ಹೋರಾಟದ ಬಗ್ಗೆಯೂ ಇರಲಿಲ್ಲ. ಆ ಉಪನ್ಯಾಸದಲ್ಲಿ ಇದದ್ದು ಹಾಸ್ಯಭರಿತ ಶೈಲಿಯಲ್ಲಿ ಅವನ ಬಾಲ್ಯದ ಕನಸುಗಳ ಬಗ್ಗೆ, ನನಸಾದ-ನನಸಾಗದ ಕನಸುಗಳ ಬಗ್ಗೆ. ಆ ಉಪನ್ಯಾಸ ನೀಡಿದ ಒಂದು ತಿಂಗಳಲ್ಲೇ ಅದು ಅಂತರ್ಜಾಲದಲ್ಲಿ ಎಲ್ಲೆಡೇ ಹರಡಿ,ಸುಮಾರು ೬ ಮಿಲಿಯನ್ ಜನ ಅದನ್ನು ನೋಡಿ, ಜಗತ್ತಿನ ಮೂಲೆ ಮೂಲೆಗೂ ತಲುಪಿ, ರಾಂಡಿ ಒಬ್ಬ ಪ್ರವರ್ತಕನ ತರ ಕಾಣತೊಡಗಿದ.

'ಲಾಸ್ಟ್ ಲೆಕ್ಚರ್' ನೋಡಿ ಅನೇಕ ಜನ ತಮ್ಮ ಜೀವನ ಶೈಲಿ ಬದಲಿಸಿಕೊಂಡವರಿದ್ದಾರೆ.

ಟಿವಿ ಚಾನೆಲ್‍ಗಳ ರಾಂಡಿಯ ಸಂದರ್ಶನ ಮುಗಿಬಿದ್ದವು.ಲಾಸ್ಟ್ ಲೆಕ್ಚರ್ ರಾಂಡಿ ತನ್ನ ಮೂರು ಮಕ್ಕಳಿಗೊಸ್ಕರ ನೀಡಿದ್ದಂತೆ, ಅದು ಎಲ್ಲರಿಗೂ ಇಷ್ಟವಾದದ್ದು ರಾಂಡಿಗೆ ಸಂತಸ ಮತ್ತು ಆಶ್ಚರ್ಯ ತಂದಿವೆಯಂತೆ. ಸದ್ಯಕ್ಕೆ ಉಳಿದ ಕೆಲವೇ ತಿಂಗಳುಗಳಲ್ಲಿ ತನ್ನ ಮೂರು ಮಕ್ಕಳು-ಹೆಂಡತಿಯೊಂದಿಗೆ ಅದಷ್ಟು ಸಮಯ ಕಳೆಯುತ್ತಿದ್ದಾನೆ ರಾಂಡ್. ಈ ಮಧ್ಯೆ 'ಲಾಸ್ಟ್ ಲೆಕ್ಚರ್' ಪುಸ್ತಕ ರೂಪದಲ್ಲೂ ಬರಲಿದೆ.

ಅಂದಾಗೆ ರಾಂಡಿಯ ಈಡೇರದ ಕನಸುಗಳ ಪಟ್ಟಿಯಲ್ಲಿ 'ಸ್ಟಾರ್ ಟ್ರೆಕ್'‍ನ ಕಾಪ್ಟನ್ ಆಗಬೇಕು ಎನ್ನುವ ಕನಸು ನನಸಾಗದಿದ್ದರೂ , ಸ್ಟಾರ್ ಟ್ರೆಕ್‍ನ ಮುಂದಿನ ಚಿತ್ರದಲ್ಲಿ ಒಂದು ಗೌರವ ಪಾತ್ರ ರಾಂಡಿಗೆ ಕೊಟ್ಟಿದ್ದಾರಂತೆ. ಹಾಗೇ ಚಿಕ್ಕಂದಿನಲ್ಲಿದ್ದಾಗ ರಾಷ್ಟ್ರೀಯ ಪುಟ್ಬಾಲ್ ತಂಡದಲ್ಲಿ ಸ್ಥಾನಗಳಿಸಬೇಕೆಂಬ ಕನಸು ನನಸಾಗದಿದ್ದರೂ, ಆ ತಂಡವೇ ರಾಂಡಿಯನ್ನು ತಮ್ಮೊಂದಿಗೆ ಅಭ್ಯಾಸಮಾಡಲ್ಲಿಕ್ಕೇ ಕರೆಸಿಕೊಂಡಿವೆ.

ನೀವು ಇದನ್ನು ಹೊತ್ತಿಗೆ ರಾಂಡಿಯ ಕ್ಯಾನ್ಸರ್ ಕಿಮೋ ತೆರಪಿಯಲ್ಲಿ ಹಾಗೂ ಹೀಗೂ ಒಂದೆರಡು ವಾರಗಳಷ್ಟು ಮೃತ್ಯುವನ್ನು ಮುಂದಕ್ಕೆ ಹಾಕುವಲ್ಲಿ ಯಶ್ವಸಿಯಾಗಿದ್ದಾನೆ. ಆದರೆ ಅದು ಕ್ಷಣಿಕ ಜಯವಷ್ಟೇ, ಸಾವಿನ ಒಳ ಬಾಗಿಲಲ್ಲಿ ನಿಂತವನಿಗೆ ಮರಳಿ ಬರಲು ಆಗುವುದು ಅಸಾಧ್ಯ.


ರಾಂಡಿಯ 'ಲಾಸ್ಟ್ ಲೆಕ್ಚರ್' ನೀವು ನೋಡಿರದಿದ್ದರೆ ಇಲ್ಲಿದೆ ಅದರ ಲಿಂಕ್

http://video.google.com/videoplay?docid=-5700431505846055184

ಹಾಗೆಯೇ ರಾಂಡಿಯ ಬ್ಲಾಗ್ ಇಲ್ಲಿದೆ

http://www.cs.cmu.edu/~pausch/


ಆ 'ಲಾಸ್ಟ್ ಲೆಕ್ಚರ್' ನೋಡಿದ ಮೇಲೆ, ಮನಸಿನ ಆಳದಲ್ಲಿ, ನಮ್ಮ ಜೀವನಗಳ ಬಗ್ಗೆ, ಜೀವನ ಶೈಲಿಯ ಬಗ್ಗೆ, ಜೀವನದಲ್ಲಿ ನಾವು ವಿವಿಧ ವಿಷಯಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸದಿದ್ದರೆ ಕೇಳಿ..

Thursday, August 09, 2007

ಜೋಡಿ ಹಕ್ಕಿ ಮಾತಾಡಿವೆ..

ಎಲ್ಲರಿಗೂ ನಮಸ್ಕಾರ !

'ಕಾಣದಂತೆ ಮಾಯವಾದನು ನಮ್ಮ ಶಿವ' ಅಂತಾ ನೀವು ಹಾಡು ಹೇಳೋಕೇ ಮುಂಚೆನೇ ನಿಮ್ಮ ಮುಂದೆ ಬಂದು ನಿಂತಿದೀನಿ !

ನೀವು ಶುಭ ಕೋರಿ ಕಳುಹಿಸಿದ ಮೇಲ್‍ಗಳು, ನೀವು ಪಾತರಗಿತ್ತಿಯಲ್ಲಿ ಬರೆದ ಕಾಮೆಂಟ್‍ಗಳು, ನನ್ನ ಸಂಭ್ರಮದಲ್ಲಿ ಬಂದು ಭಾಗವಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಒಲವಿನ ವಂದನೆಗಳು.ನಿಮ್ಮ ಪ್ರೀತಿಯ ಹಾರೈಕೆಗೆ, ನನ್ನ ಮತ್ತು ನನ್ನಾಕೆಯ ನಮನಗಳು.

ಕಳೆದ ಸಲ ಪಾತರಗಿತ್ತಿಯಲ್ಲಿ ಬರೆದಿದ್ದು ನಿಮ್ಮನ್ನು ನನ್ನ ವಿವಾಹಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ. ಆದಾದ ನಂತರ ಏನೇಲ್ಲಾ ಆಯ್ತು..

ಇಷ್ಟು ದಿವಸ ಕನಸು-ಕವನ-ಕನವರಿಕೆಗಳಲ್ಲಿ ಕಾಡುತಿದ್ದ ನನ್ನ ಹುಡುಗಿ ಕೊನೆಗೂ ನನ್ನ ವರಿಸಿದ್ದು ಅದೇ ಜೂನ್ ೨೪ ರಂದು. ಮದುವೆಯೆಂಬ ಆ ವಿಶಿಷ್ಟ ಅನುಭವ..ಸಂಬಂಧ, ಸಂಭ್ರಮ, ಸಲ್ಲಾಪ, ಸಡಗರಗಳ ಒಂದು ಹೊಸ ಲೋಕವದು.

ಇಷ್ಟು ದಿವಸ ಕೇವಲ ಪೋನು-ಮೇಲ್-ಕವನಗಳಲ್ಲಿ ಹರಿಯುತ್ತಿದ್ದ ಭಾವನಾ ಲಹರಿಗೆ , ಮನದಲ್ಲಿದ್ದವರು ಎದುರಿಗೆ ಬಂದಾಗ ಆದ ಸಂಭ್ರಮ...ಅವಿಸ್ಮರಣೀಯ. ಪ್ರೀತಿಯ ತೊರೆಯಲ್ಲಿ ಬೊಗಸೆಯಲ್ಲಿ ಕುಡಿದ ಅಮೃತವೂ ಅವಿಸ್ಮರಣೀಯ..

ಮದುವೆಯ ಹಿಂದಿನ ದಿವಸ ನನ್ನ ಹುಡುಗಿಯ ಶಿವಮೊಗ್ಗೆಯಲ್ಲಿ ನಡೆದಿತ್ತು ನನ್ನ ಪುಸ್ತಕ್ 'ಸ್ವೀಟ್ ಡ್ರೀಮ್ಸ್ ಅಂದ್ರೇನು !'ಬಿಡುಗಡೆ. ಅದಾಗಿ ಮರುದಿನವೇ ನನ್ನ ಜೀವನದ ಅತೀ ಮಧುರ ಸ್ವೀಟ್ ಡ್ರೀಮ್ ನನ್ನ ಭಾಳಸಂಗಾತಿಯಾಗಿದ್ದು....

ಅಲ್ಲಿ ಸ್ಪಲ್ಪ ಕಾಲ ಇದ್ದು ನಾವು ಮರಳಿದೆವು ದೂರದ ಅಮೇರಿಕೆಗೆ...

ಇಲ್ಲಿ ನಮ್ಮ ಪುಟ್ಟ ಗೂಡಿನಲ್ಲಿ ನಮ್ಮ ಬಾಳಪಯಣ ಸುಂದರವಾಗಿ ಸಾಗುತಿದೆ...

ಮತ್ತೆ ಸಿಗುವೇ..ಅಲ್ಲಿಯವರಿಗೆ ಪ್ರೀತಿಯಿರಲಿ

Tuesday, March 20, 2007

ಸ್ವೀಟ್ ಡ್ರೀಮ್ಸ್ ಅಂದರೇನು?

ನೀನು ನನಗೆ ಕಳಿಸಿದ್ದ ಮೊದಲ ಇ-ಮೇಲ್‍ ನೋಡ್ತಾ ಇದ್ದೆ.

ಅದರಲ್ಲಿ ಇದ್ದ ಆ ಕೊನೆ ಸಾಲು 'ಸ್ವೀಟ್ ಡ್ರೀಮ್ಸ್ ಅಂದ್ರೇನು?' ನೋಡುತ್ತಿದ್ದಂತೆ ನನ್ನ ಮುಖದ ಮೇಲೆ ಒಂದು ನಗೆ ಮೋಡ ಹಾಗೇ ತೇಲಿಹೋಯಿತು. ಅದು ಬೇರೆ 'ಫಾರ್ ಎಕ್ಸೆಂಪಲ್' ಅಂತಾ ಉದಾಹರಣೆ ಕೇಳಿದ್ದೆ. ನೀನು ಸುಮ್ಮನೆ ಕೀಟಲೆ ಮಾಡಿದ್ದ ಅಥವಾ ನಿಜಕ್ಕೂ ಹಂಗದೆರೇನು ಅಂತಾ ಕೇಳ್ತಾ ಇದ್ದೋ?

ಹೌದಲ್ಲವಾ..ಕನಸುಗಳು ಕಣೋದು ಇರಲಿ..ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಗೊತ್ತಿದ್ದಾರೂ ಎನು? ಇಬ್ಬರಲ್ಲಿ ಇದ್ದ ಒಂದೇ ಸಮಾನತೆ ಅಂದ್ರೆ..ಇಬ್ಬರೂ ಅಜ್‍ನಬಿಗಳೇ ! ಆದಾದ ನಂತರ ಎನೆಲ್ಲಾ ಆಯಿತು..

ಎಕ್ ಅಜ್‍ನಬಿ ಹಸೀನಾಸೇ ಹ್ಯೂ ಮುಲಾಕಾತ್ ಹೋಗಯ
ಫಿರ್ ಕ್ಯಾ ಹುವಾ ಏ ನಾ ಪೂಚೋ ಕುಚ್ ಐಸೆ ಬಾತ್ ಹೋಗಯ

ಅಜ್‍ನಬಿಗಳಾಗಿದ್ದ ನಾವು ಅದಾವುದೋ ಕ್ಷಣದಲ್ಲಿ ಒಂದು ಮಧುರ ಸಂಬಂಧದಲ್ಲಿ ಬೆಸೆಯಲ್ಪಟ್ಟಿದ್ದೆವು. ನಮ್ಮ ನಡುವಿದ್ದ ಸಂಬಂಧಕ್ಕೊಂದು ಹೆಸರಿತ್ತು, ಮನೆಯವರ ಆರ್ಶಿವಾದವಿತ್ತು.ಆಗಬೇಕಾಗಿದ್ದು ನನ್ನ-ನಿನ್ನ ಹೃದಯದ ಮಿಲನ..

ದಿನಗಳು ಹೇಗೆ ಹೋದವಲ್ಲವಾ...
ಮುಂಜಾನೆಯ ಚುಮುಚುಮು ಮಂದ ಬೆಳಕಿನಂತೆ ಆರಂಭವಾದ ನಮ್ಮ ನಡುವಿನ ಸಂಬಂಧ, ನೋಡುನೋಡುತ್ತಲೇ ಬೆಳ್ಳನೇ ಬೆಳಕಾಗಿ ಎಲ್ಲೆಡೇ ಹರಡಿ, ಆ ಬೆಳಕಿನಲ್ಲಿ 'ನಾನು-ನೀನು' ಅನ್ನೋದು ದೂರಾಗಿತ್ತು.ಅದು ನನ್ನ ಜೀವನ, ಇದು ನಿನ್ನ ಜೀವನ ಅಂತಿದ್ದ ಎರಡು ಬೇರೆ ಲೋಕಗಳು ಮಾಯವಾಗಿ, ಅಲ್ಲಿ ನಗುತ್ತಾ ನಿಂತಿತ್ತು 'ನಮ್ಮಿಬ್ಬರ' ಜೀವನ. ಬಾಳಿಗೊಂದು ಸಂಬಂಧ, ಆ ಸಂಬಂಧಕ್ಕೊಂದು ಅರ್ಥ ಬರತೊಡಗಿತ್ತು.

ಆ ಸಂಬಂಧ ತಳಹದಿಯ ಮೇಲೆ ನಿಧಾನವಾಗಿ ನಮ್ಮ ಪ್ರೀತಿಯ ಸೌಧ ಬೆಳಿತು ಅಲ್ವಾ..

ಇಬ್ಬರು ಅಜ್‍ನಬಿಗಳ ನಡುವೆ ಅದು ಯಾವಾಗ ಚಿಗುರಿತು ಆ ಪ್ರೀತಿ ? ಅದು ಯಾವಾಗ ವಿಶ್ವಾಸ ಮೂಡಿದ್ದು ಹೃದಯಗಳಲ್ಲಿ? ಕಣ್ಮುಂದೆ ಮೊಳಕೆಯೊಡೆದ ನಮ್ಮ ಮಧುರ ಸಂಬಂಧ ಕೆಲವೇ ದಿನಗಳಲ್ಲಿ ಬ್ಯಾಂಬೂ ಗಳದಂತೆ ಬಹುಬೇಗನೆ ಎತ್ತರಕ್ಕೆ ಬೆಳಯಿತಲ್ಲವಾ..ಆಮೇಲೆ ನಾವಿಬ್ಬರು ಅ ಸಂಬಂಧದ ಚೌಕಟ್ಟಿನಲ್ಲಿ ನಮ್ಮದೇ ಆದ 'ಸುಂದರ ಲೋಕ'ವೊಂದನ್ನು ಸೃಷ್ಟಿಸಿಕೊಂಡೆವಲ್ಲವಾ.

ಅಲ್ಲಿ ಏನೇಲ್ಲಾ ಇದೆ..
ಆಸರೆ, ಭರವಸೆ, ಕನಸು, ನಿರ್‍ಈಕ್ಷೆ, ಪ್ರೀತಿಯ ಸೆಳೆತ, ತುಂಟತನದ ಸೊಗಸು, ವಿರಹದ ವೇದನೆ..ಸಾಂತ್ವನಕ್ಕೆ ಹೆಗಲು, ಬೆಚ್ಚನೆ ಅಪ್ಪುಗೆ, ಮುತ್ತಿನಹಾರ, ಎಲ್ಲಾ ಮರೆತು ವಿಶ್ರಮಿಸುವದಕ್ಕೆ ಎದೆ ಎಂಬ ದಿಂಬು..

ಆದರೆ ಕೆಲವೊಮ್ಮೆ ಈ ಸುಂದರಲೋಕದಲ್ಲಿ ನಮ್ಮ ಸ್ಟುಪಿಡ್‍ತನದಿಂದ ಇನ್ನೊಬ್ಬರ ಮನಕ್ಕೆ ನೋವುಂಟು ಆಗುತ್ತೆ ಅಲ್ವಾ, ಸುಮ್ಮನೆ ಬೇಡದ ವಿಚಾರಗಳು ಬರುತ್ತೆ ಅಲ್ವಾ.ನಮ್ಮಿಬ್ಬರಲ್ಲಿ ಯಾರಿಗೆ ನೋವಾದರೂ ಅದು ಇನ್ನೊಬ್ಬರಿಗೆ ನೋವು ಉಂಟು ಮಾಡೇ ಮಾಡುತ್ತೆ.ಎನೂ ಕೆಲಸಕ್ಕೆ ಬಾರದ ವಿಚಾರಗಳಿಂದ ನಮ್ಮ ಸುಂದರಲೋಕ ಹಾಳು ಮಾಡಿಕೊಳ್ಳದೋ ಬೇಡಾ ಕಣೇ. ನಮ್ಮಬ್ಬಿರಲ್ಲಿ ಇನ್ನೊಬ್ಬರ ಬಗ್ಗೆ ಎಷ್ಟು ಪ್ರೀತಿ-ವಿಶ್ವಾಸ ಇದೆ ಅಂತಾ ನಮಗೆ ಚೆನ್ನಾಗಿ ಗೊತ್ತಿದೆ.ಯಾವುದೋ ಒಂದು ಒರಟು ಮಾತು-ಇನ್ನಾವುದೋ ಒಂದು ಹುಚ್ಚು ವಿಚಾರ ಅ ಸುಂದರ ಸಂಬಂಧದಲ್ಲಿ ಪ್ರಶ್ನೆಗಳನ್ನು-ಸಂಶಯಗಳನ್ನು ಹುಟ್ಟುಹಾಕುವುದು ಬೇಡ.

ಆದರೆ ಒಂದು ವಿಷಯ ಗಮನಿಸಿದಿಯಾ?
ಈ ತರದ ಸ್ಟುಪಿಡ್ ವಿರಸದ ನಂತರ, ನಾವು ಒಬ್ಬರನ್ನೊಬ್ಬರನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಅನಿಸುತ್ತೆ.ನಾವು ಹಿಂದಿಗಿಂತ ಇನ್ನೂ ಹತ್ತಿರಕ್ಕೆ ಬಂದಿದೀವಿ ಅನಿಸುತ್ತೆ.ಇರಲಿ ವಿರಸದ ವಿಷಯ. ನಾವು ಅದನ್ನು ನಮ್ಮ ಮನಗಳಲ್ಲಿ ಬಿಟ್ಟಕೊಳ್ಳೋದೇ ಬೇಡ.

ನಮ್ಮ ಈ ಸುಂದರ ಲೋಕಕ್ಕೆ ತಳಕುಹಾಕೊಂಡಿರೋದೇ ಆ ಸುಂದರ ಸ್ವಪ್ನಗಳು...
ಸುಮ್ಮನೆ ನಿನ್ನ ಕೈ ಹಿಡಕೊಂಡಿರೋದು, ಕೈ ಹಿಡಕೊಂಡು ಹಾಗೇ ತಿರುಗಾಡೋದು..ನಿನ್ನ ಮಡಿಲಲ್ಲಿ ತಲೆಯಿಟ್ಟು ಮಲಗುವುದು, ನೀನು ನನ್ನ ತಲೆಗೂದಲಲ್ಲಿ ಬೆರಳಾಡಿಸುತ್ತಿದಂತೆ ಹಾಗೇ ನಿದ್ದೆಗೆ ಜಾರುವುದು, ನಿನಗೆ ನಿದ್ದೆ ಬರದಿದ್ದರೆ ಎದೆಗೆ ಒರಗಿಸಿಕೊಂಡು ಬಿಸಿ ಅಪ್ಪುಗೆಯಲ್ಲಿ ಮಲಗಿಸಿಕೊಳ್ಳುವುದು,ಬೆಳಗೆದ್ದು ಕಣ್ಣು ಬಿಟ್ಟಾಗ ನಿನ್ನ ಮುದ್ದು ಮುಖ ನೋಡುವುದು, ನಂತರ ಈಡೀ ಹಗಲು ನಿನ್ನ ಬಾಹುಗಳಲ್ಲಿ ಕಳೆಯುವುದು, ಸಂಜೆ ನಿನ್ನ ತುಟಿಗೆ ಹಾಲ್ಜೇನಾಗುವುದು, ರಾತ್ರಿಗೆ ನಿನ್ನ ಒಡಲಲ್ಲಿ ಕರಗಿ ಪ್ರೀತಿಯ ಧಾರೆಯಾಗುವುದು..

ಹೀಗೆ ಅದೊಂದು ಸ್ವಪ್ನಗಳ ಮೂಟೆಯೇ ಇದೆ..

ಎಕ್ ದಿನ್ ಆಪ್ ಹಮ್ ಕೋ ಮಿಲ್‍ಜಾಯೇಗಾ
ದೇಖತೇಯೀ ಫೂಲ್ ಕಿಲ್ ಜಾಯೇಗಾ

ಸ್ವೀಟ್ ಡ್ರೀಮ್ಸ್ ಗಳ ಬಗ್ಗೆ ಈಗ ನೀನು ತುಂಬಾ ಚೆನ್ನಾಗಿ ಅರ್ಥಮಾಡಿಕೊಂಡಿದ್ದೀಯಾ ಅಂತಾ ನನಗೆ ಗೊತ್ತು.

ಈಗ ಹೇಳು ನನ್ನ ಒಲವೇ, ಸ್ವೀಟ್ ಡ್ರೀಮ್ಸ್ ಅಂದರೇನು ಅಂತಾ ..

************************************************
ವಿಕ್ರಾಂತ ಕರ್ನಾಟಕದ ಯುಗಾದಿ ವಿಶೇಷಾಂಕದಲ್ಲಿ ಈ ಲೇಖನ ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ನನ್ನ ಧನ್ಯವಾದಗಳು
************************************************

Thursday, February 22, 2007

ಅದೊಂದು ಸಂಜೆ

ಅದೊಂದು ಸಂಜೆ ಮನಸ್ಸಾನ್ನ ಮತ್ತೆಮತ್ತೆ ಕಾಡುತ್ತೆ..

ಆವತ್ತು ಬೆಳಿಗ್ಗೆಯಿಂದಾಲೇ ಇವತ್ತು ಯಾಕೇ ಬೆಳಗಾಬೇಕಿತ್ತು ಅಂತಾ ಅನಿಸಿತ್ತು. ಯಾಕೆಂದರೆ ನನಗೆ ಆವತ್ತು ಸಂಜೆ ಆಗೋದು ಬೇಕಿರಲಿಲ್ಲ. ಕೊನೆಗೂ ಅದು ಬಂದೇಬಿಡ್ತು.ಆವಾಗ ನಿನ್ನ ಮನದಲ್ಲಿ ಎನು ನಡೆಯುತಿತ್ತೋ ಗೊತ್ತಿಲ್ಲ, ನನ್ನ ಮನಸ್ಸು ಕಡೇ ಪಕ್ಷ ಇನ್ನೊಂದು ದಿವಸ ಸಿಗಬಾರದಿತ್ತೆ ಅನ್ನೋ ಚಟಪಟಿಕೆಯಲ್ಲಿ ಇತ್ತು.

ಟ್ಯಾಕ್ಸಿ ಬಂದು, ಬ್ಯಾಗ್‍ನೆಲ್ಲ ಅದಕ್ಕೆ ಹಾಕಿ ಮನೆಯಿಂದ ಹೊರಡುವಾಗ ನೆನಪಾಗಿದ್ದು ಈ ಸಾಲುಗಳು

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ನಾನು ಅದೇ ತರ 'ಇನ್ನೊಂದು ತಿಂಗಳಿಗೆ' ಅಂತಾ ನಿನಗೆ ಹೇಳುವ ಹಾಗಿದ್ದರೆ ಏಷ್ಟು ಚೆನ್ನಾಗಿ ಇತ್ತು..

ಏರಪೋರ್ಟ್‍ಗೆ ಹೋಗುವಾಗ ನಡುವೆ ನಡುವೆ 'ಶುಭ ಪ್ರಯಾಣ' ಹೇಳೋಕೇ ಬರ್ತಾ ಇದ್ದ ಪೋನ್‍ಕರೆಗಳು, ಸುಮ್ಮನೆ ಯಾಂತ್ರಿಕವಾಗಿ ಪೋನ್ ಮಾಡಿದವರ ಜೊತೆ ಮಾತು.ಸುಮ್ಮನೆ ಕಷ್ಟಪಟ್ಟು ತಂದುಕೊಂಡು ನಗ್ತಾ ಇದ್ದು ನಗೆ.

ನಾನೆಲ್ಲಿ ಇದ್ದೆ? ನಿನ್ನ ಕೈ ಹಿಡಕೊಂಡವನಿಗೆ ಬೇರೆ ಎನೂ ಬೇಕಿರಲಿಲ್ಲ. ನನ್ನ ಕೈಯಲ್ಲಿ ನಿನ್ನ ಕೈ ಇದ್ದಾಗ, ಹಾಗೇ ಅಲ್ಲೇ ಸಮಯ ನಿಂತುಬಿಡಲಿ ಅಂತಾ ಮನಸ್ಸು ಕೂಗ್ತಿತ್ತು. ದಾರಿಯುದ್ದಕ್ಕೂ ಮಾತಿಗಿಂತ ನಮ್ಮಲ್ಲಿ ಮೌನನೇ ಜಾಸ್ತಿ ಇತ್ತಲ್ವ ಅವತ್ತು.

ನಂಗೆ ಎನೂ ಬೇಕಿರಲಿಲ್ಲ..ನಿನ್ನ ಸಾನಿಧ್ಯ ಒಂದೇ ಸಾಕಿತ್ತು. ನಿನ್ನ ಒಂದು ಸ್ಪರ್ಶ ಸಾಕಿತ್ತು.

ಟ್ಯಾಕ್ಸಿ ಹಾಗೇ ಸುಮ್ಮನೆ ಹೋಗ್ತಾನೇ ಇರಲಿ ಅಂತಾ ಎಷ್ಟು ಅನಿಸ್ತಾ ಇತ್ತು. ಎರಪೋರ್ಟ್ ಹತ್ತಿರಕ್ಕೆ ಬಂದಾಗೆ ಅದೊಂದು ಹೇಳಲಾಗದ ಒಂದು ಭಾವನೆ ಆವರಿಸಿಕೊಂಡುಬಿಟ್ಟಿತ್ತು.

ಅವತ್ತು ನಿನ್ನ ಜೊತೆ ಕಳೆಯುವ ಒಂದು ನಿಮಿಷಕ್ಕಾಗಿ, ನಿನ್ನ ಜೊತೆ ಮಾತಾಡೋ ಒಂದು ಮಾತಿಗಾಗಿ, ನಿನ್ನ ನೋಡೋ ಒಂದು ಅವಕಾಶಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ...ನೀರಿಂದ ಹೊರಗೆ ತಗೀತಾರೆ ಅಂತಾ ಗೊತ್ತಾದ ಮೀನಿನ ತರ . ಅವತ್ತು ಬಹುಷಃ ಯಾರಾದರೂ ನನಗೆ 'ನಿನ್ನ ಜೀವನದ ಒಂದು ದಿವಸ ಕೊಟ್ರೆ, ಅವಳ ಜೊತೆ ಕಳೆಯೋಕೆ ಇನ್ನೊಂದು ನಿಮಿಷ ಕೊಡಿಸ್ತೀನಿ' ಅಂತಾ ಹೇಳಿದ್ದರೂ, ನಾನು ಹಿಂದೆ-ಮುಂದೆ ನೋಡದೇ ಒಪ್ಪಕೊಳ್ಳತ್ತಿದ್ದೆ.

'ನಿನ್ನೆವರೆಗೆ ನಾ ಯಾರೋ ನೀ ಯಾರೋ ಅಂತಾ ಇದ್ದೆ..'ಆದರೆ ಅಮೇಲೆ ಎನಾಯಿತು?

ಎರಪೊರ್ಟ್ ಬಂದು ಮನಸ್ಸಿಲ್ಲದ ಮನಸಿಂದ ಇಳಿದಿದ್ದೆ. ಲಗೇಜ್ ಚೆಕ್-ಇನ್ ಮಾಡೋ ಉದ್ದಸಾಲು ನೋಡಿ, ಅಲ್ಲಿನ ಪ್ರಯಾಣಿಕರಲಿ ಬಹುಷಃ ಖುಷಿಯಾಗಿದ್ದು ನನಗೊಬ್ಬನಿಗೆ ಅನಿಸುತ್ತೆ ! ಚೆಕ್-ಇನ್ ಮಾಡೋವರೆಗೆ ಮತ್ತೆ ನಿನ್ನ ಜೊತೆ ಇರಬಹುದೆನ್ನುವ ಸಂತಸ. ಆ ಸಾಲಿನಲ್ಲಿ ನನ್ನ ಬ್ಯಾಗ್‍ಗಳನ್ನು ಇಟ್ಟು ಅಲ್ಲಿಂದ ನೀನು ನಿಂತ ಕಡೆ ನಾ ಎಷ್ಟು ಸಲ ಬಂದು ಹೋದೆನೋ ಗೊತ್ತಿಲ್ಲ. ಛೇ,ಕೊನೆಗೂ ನನ್ನ ಸರದಿ ಬಂದೆ ಬಿಡ್ತು ಅಲ್ಲಿ. ಲಗೇಜ್ ಎಲ್ಲಾ ಹಾಕಿ ನಿನ್ನ ಕಡೆ ಬಂದಾಗ, ಯಾವ ಕ್ಷಣವನ್ನು ನಾ ಬೇಡ ಅಂತಾ ಇದ್ದೇನೋ ಅದು ಎದುರಿಗೆ ನಿಂತಿತ್ತು.

ನಿನ್ನನ್ನು ಅಗಲುವ ಕ್ಷಣ..

ಎನು ಹೇಳಬೇಕು, ಎನು ಮಾಡಬೇಕು ಅಂತಾ ತೋಚದ ಕ್ಷಣ. ಸುಮ್ಮನೆ ನಿನ್ನ ಕೈಯನ್ನು ನನ್ನ ಕೈಯಲ್ಲಿ ತಗೊಂಡಿದ್ದೆ. ನನ್ನ ಪ್ರೀತಿ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಭರವಸೆಯ ನಾಳೆಗಳ ಬಗ್ಗೆ ನೆನೆಯುತ್ತಾ ನಿನ್ನ ಕೈ ಅದುಮಿದ್ದೆ..

ನಿನ್ನ ಮನದಲ್ಲಿ ಎನು ಆಗ್ತಾ ಇತ್ತು ಹುಡುಗಿ?

ಭಾರವಾದ ಹೆಜ್ಜೆ ಇಡ್ತಾ ಇಮಿಗ್ರೇಷನ್ ಚೆಕ್ ಕಡೆ ಹೋಗುವಾಗ ತಿರುಗಿ ಒಮ್ಮೆ ನೋಡಿದ್ದೆ. ನೀನು ಅಳುತ್ತಿದ್ದ ಅಮ್ಮನಿಗೆ ನಿನ್ನ ಪ್ರೀತಿ ಕೈಗಳಿಂದ ಸಮಾಧಾನ ಮಾಡ್ತಾ, ಅಲ್ಲಿಂದ ಅವರ ಜೊತೆ ಹೊರಗೆ ಹೋಗೋದಾ ನೋಡ್ತಾ ನಿಂತಿದ್ದೆ.ನೀನು ಮರೆಯಾಗುವರೆಗೆ ಅಲ್ಲೇ ನಿಂತಿದ್ದೆ...

ನಂಗೆ ಗೊತ್ತಿಲ್ಲಾ..ನನ್ನ ಕಣ್ಣು ತೇವವಾಗಿತ್ತಾ ಅಥವಾ ಮನಸು ಅಳ್ತಾ ಇತ್ತಾ..

ಇಮಿಗ್ರೇಷನ್ ಚೆಕ್ ಮುಗಿಸಿ, ತಪಾಸಣೆಯ ನಂತರ ವಿಮಾನ ಇನ್ನೇನೂ ಹತ್ತಬೇಕು ಅನ್ನುವಾಗ, ಈ ಸಾಲು ನೆನಪಾಗಿದ್ದವು..

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋಯಿತು ಬಂಡಿ ಎಂದು ಹೇಳಿದನು
ಹಿಂದುರಿಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ

ಕೆ.ಎಸ್.ನ ಹೇಳಿದಂತೆ ,ಅಲ್ಲಿ ಯಾರಾದರೂ ಹಣ್ಣಿನವನು ಸಿಗ್ತನಾ ಅಂತಾ ನೋಡಿದ್ದೆ, ನನ್ನದೂ ವಿಮಾನ ಹೊರಟು ಹೋಗಿದೆ ಅಂತಾ ಹೇಳ್ತಾನಾ ಅಂತಾ ಕಾದಿದ್ದೆ. ಆಮೇಲೆ ಮನೆಗೆ ಹೋಗಿ, ಬಾಗಿಲು ಬಡಿದು, ನೀನು ಬಂದು, ಬಾಗಿಲಲ್ಲಿ ನಿಂತ ನನ್ನ ನೋಡಿ, ನಿನ್ನ ಪ್ರೀತಿ ತುಂಬಿದ ಬಟ್ಟಲುಗಣ್ಣಗಳಲ್ಲಿ ಆಶ್ಚರ್ಯ ತುಂಬಿಕೊಂಡು 'ತಿಂಗಳಾಯಿತೇ' ಅಂತಾ ಕೇಳೋದು ನೋಡೋಕೆ ಎಷ್ಟು ಚೆನ್ನಾಗಿರುತ್ತೆ ಅಂತಾ ಕನಸು ಕಾಣ್ತಾ ವಿಮಾನದ ಬಾಗಿಲಲ್ಲಿ ನಿಂತಿದ್ದೆ.

ಗಗನಸಖಿ 'ಗುಡ್ ಇವಿನಿಂಗ್..ಗುಡ್ ಇವಿನಿಂಗ್' ಅಂತಾ ಎರಡು ಸಲ ಎಚ್ಚರಿಸಿದಾಗಲೇ ನೆನಪಾಗಿದ್ದು, ಇನ್ನೆಲ್ಲಿ ಬರಬೇಕು,ಎಲ್ಲಿಂದ ಬರಬೇಕು ಹಣ್ಣಿನವನು ಅಂತಾ.

ವಿಮಾನದ ಕೊನೆಯಲ್ಲಿ ಇದ್ದ ನನ್ನ ಸೀಟ್‍ಗೆ ಹೋಗಿ ಆಸೀನಾಗಿದ್ದೆ. ಚೆಕ್-ಇನ್ ಮಾಡುವ ಸಾಲಿನಲ್ಲಿ ನನ್ನ ಮುಂದೆ ಇದ್ದ ಸಹಪ್ರಯಾಣಿಕ, ಈಗ ನನ್ನ ಪಕ್ಕದ ಸೀಟಿನಲ್ಲಿದ್ದ. ಸಾಲಿನಲ್ಲಿದ್ದಾಗ ಹಾಗೇ ಒಂದು ಚಿಕ್ಕ ಹರಟೆ ಆಗಿತ್ತು. ಈಗ ತನ್ನ ಮೊಬೈಲ್‍ನಲ್ಲಿ ಯಾರಿಗೋ ಕರೆ ಮಾಡ್ತಾ ಇದ್ದ. ವಿಮಾನದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಇನ್ನೂ ವಿಮಾನ ಶುರುವಾಗಿರದರಿಂದ ಮತ್ತು ನಮ್ಮದು ಕೊನೆ ಸೀಟ್ ಆದ್ದರಿಂದ ಗುಪ್ತವಾಗಿ ಕರೆ ನಡೀತಾ ಇತ್ತು. ಅವನೂ ಕರೆ ಮುಗಿಸುತ್ತಿದ್ದಂತೆ ಇದ್ದ ಚಿಕ್ಕ ಪರಿಚಯದಿಂದ ಅವನ ಮೊಬೈಲ್ ತೆಗೊಂಡು ಮಾಡಿದ್ದು ಕರೆ ನಿನಗೆ. ಸುಮ್ಮನೆ ಒಂದೆರಡು ಕ್ಷಣನಾದರೂ ನಿನ್ನ ಧ್ವನಿ ಕೇಳಬೇಕು ಅನ್ನೋ ಕೊನೆ ಆಸೆ..ಗಗನಸಖಿ ಬಂದು 'ಪ್ಲೀಸ್, ಸ್ವಿಚ್ ಆಫ್ ಮೊಬೈಲ್' ಅಂದಾಗ ಮಾಡಲೇಬೇಕಾಗಿತ್ತು..

ನಂತರ ವಿಮಾನ ಅಲ್ಲಿಂದ ಹಾರಿತ್ತು,ನನ್ನ ಕರಕೊಂಡು.ಅದರೆ ನಾನು ಅಲ್ಲಿ ವಿಮಾನದಲ್ಲಿ ಇದ್ದನಾ?? ಭಾರತಕ್ಕೆ ಬರುವಾಗ ಇದ್ದ 'ನಾನು', ಈಗ ಭಾರತದಿಂದ ಹೋಗುವಾಗ 'ನಾನಗಿರಲಿಲ್ಲ'. ನನ್ನದೇ ಹೃದಯದ ಒಂದು ಭಾಗ ಬಿಟ್ಟು ಹೋಗುವಾಗಿನ ವೇದನೆ ಅದು..

ವಿಮಾನ ತೇಲಿತ್ತು ಆ ಕತ್ತಲ ರಾತ್ರಿಯ ಆಕಾಶದಲ್ಲಿ...

ನಾನು ತೇಲಿದ್ದೆ ನಿನ್ನ ನೆನಪಿನ ಆಗಸದಲ್ಲಿ..


*************************************************
ವಿಕ್ರಾಂತ ಕರ್ನಾಟಕದ ಈ ವಾರದ ಸಂಚಿಕೆಯಲಿ ಈ ಭಾವ ಲಹರಿಯನ್ನು ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*************************************************

Wednesday, February 14, 2007

ನಿನ್ನ ಹೆಸರು..

ಚಿಗುರು ಮಾವಿನೆಲೆಯಲಿ
ಕೋಗಿಲೆ ಕುಹುವಿನಲಿ
ವಸಂತ ಋತುವಾಗಿ
ಆಗಮಿಸಿದ ಹೆಸರು..ನಿನ್ನದು

ಪ್ರೇಮ ರಾಗದಲಿ
ಒಲವ ತಾಳದಲಿ
ಹೃದಯದ ಹಾಡಾಗಿ
ಹೊಮ್ಮಿದ ಹೆಸರು..ನಿನ್ನದು

ಸ್ವಾತಿ ಮಳೆಯಲಿ
ಕಪ್ಪೆ ಚಿಪ್ಪಲಿ
ಹೊಳೆವ ಮುತ್ತಾಗಿ
ಸಿಕ್ಕ ಹೆಸರು..ನಿನ್ನದು

ಬಿಸಿಲ ಊರಿನಲಿ
ಮಳೆಯ ಬೀದಿಯಲಿ
ಕಾಮನಬಿಲ್ಲಾಗಿ
ಹಬ್ಬಿದ ಹೆಸರು..ನಿನ್ನದು

ಪ್ರಣಯ ತೋಟದಲಿ
ಬಯಕೆ ಬಳ್ಳಿಯಲಿ
ನಗುವ ಹೂವಾಗಿ
ಅರಳಿದ ಹೆಸರು..ನಿನ್ನದು

ಶಿಲೆಯ ಸೊಬಗಲಿ
ಪ್ರೀತಿ ಕೆತ್ತೆನೆಯಲಿ
ಶಿಲಾಬಾಲಕಿಯಾಗಿ
ಮೂರ್ತಿವೆತ್ತಿದ ಹೆಸರು..ನಿನ್ನದು

ಮನದ ದಿಗಂತದಲಿ
ಹೃದಯ ಕಡಲಂಚಲಿ
ಕೆಂಪು ವರ್ಣ ಚೆಲ್ಲುತಾ
ಮುಡಿ ಬಂದ ಹೆಸರು... ನಿನ್ನದು

ಮಗುವ ನಗುವಿನಲಿ
ರೇಶ್ಮೆಯ ಸ್ಪರ್ಶದಲಿ
ನವಿರು ಭಾವನೆಯ ಕಾರಂಜಿಯಾಗಿ
ಚಿಮ್ಮಿದ ಹೆಸರು..ನಿನ್ನದು

ಪ್ರೀತಿ ಸ್ವರ್ಗದಲಿ
ಅಮೃತ ಸರೋವರದಲಿ
ಕಿನ್ನರಿಯಾಗಿ
ದಾಹ ತೀರಿಸಿದ ಹೆಸರು..ನಿನ್ನದು

ದೇಹದ ಪ್ರತಿ ಉಸಿರಲಿ
ಜೀವದ ಕೊನೆನಾಳೆಯಲಿ
ಬದುಕಿನ ಸೆಲೆಯಾಗಿ
ಉಕ್ಕುವ ಹೆಸರು..ನಿನ್ನದು

ಬಾಳ ಹಾದಿಯಲಿ
ಹೆಜ್ಜೆ ಹೆಜ್ಜೆಯಲಿ
ಜನ್ಮಜನ್ಮದ ಜೊತೆಯಾಗಿ
ನಡೆವ ಆ ಹೆಸರು..ನನ್ನ ಹುಡುಗಿಯ ಹೆಸರು

***********************************************
ಕವನಾರ್ಪಣೆ: ನನ್ನ ಹುಡುಗಿಗೆ

ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು
***********************************************

Sunday, February 04, 2007

ಕಾರ್ಮೋಡ ಚದುರಿದಾಗ..

ಕಾರ್ಮೋಡವೊಂದು
ಸೂರ್ಯನ ಒಂದು ಕ್ಷಣ
ಮಂಕಾಗಿಸಿತ್ತೆ
ಉಕ್ಕಿ ಹರಿಯುತ್ತಿದ್ದ
ಶರಧಿ ಒಂದು ಕ್ಷಣ
ತೀರದಿಂದ ದೂರಹೋಗಿತ್ತೆ

ಆ ರಾತ್ರಿ
ಕಣ್ಣಿಗೆ ನಿದ್ದೆಯಿಲ್ಲ
ಹೊಟ್ಟೆಗೆ ಹಸಿವಿರಲಿಲ್ಲ
ಮನದಲೆಲ್ಲೋ ಆಳವಾಗಿ
ನಾಟಿದ್ದ ತೀಕ್ಷ್ಣವಾದ ವಾಗ್ಬಾಣ

ಒಂದೊಂದು ಕ್ಷಣ
ಒಂದೊಂದು ಯುಗದಂತೆ
ಕೊನೆಗೂ ಕತ್ತಲ ರಾತ್ರಿ ಕಳೆದಿತ್ತು..

ಮುಂಜಾವಿನ ಪ್ರಖರ ಸೂರ್ಯ
ಕವಿದಿದ್ದ ಕಾರ್ಮೋಡವನ್ನು ಓಡಿಸಿದ್ದ
ಶರಧಿ ರಭಸವಾಗಿ ತೀರದೆಡೆ
ಉಕ್ಕಿ ಹರಿಯ ತೊಡಗಿತ್ತು
ಒಲವು ನಾಟಿದ್ದ ಬಾಣವನ್ನು ಕಿತ್ತು
ಅಲ್ಲಿಗೆ ಪ್ರೀತಿಯ ಮದ್ದು ಹಚ್ಚಿತ್ತು

ಶರಧಿಯ ಮತ್ತದೇ
ನಿಷ್ಕಂಳಕ ಪ್ರೀತಿ
ಸೂರ್ಯನ ಮತ್ತದೇ
ಬೆಚ್ಚಗಿನ ಅಪ್ಪುಗೆ
ಅದೇ ಜೇನಿನ ಮಾತು
ಅದೇ ಒಲವಿನ ಹಾಡು

ಎನೂ ಬದಲಾಗಿಲ್ಲ

ಮೊದಲಿಗಿಂತ ಇನ್ನೂ ಹೆಚ್ಚು
ತುಡಿವ ಮನಗಳು
ಮೊದಲಿಗಿಂತ ಇನ್ನೂ ಹೆಚ್ಚು
ಬಯಸುವ ಹೃದಯಗಳು
ಮೊದಲಿಗಿಂತ ಇನ್ನೂ ಹೆಚ್ಚು
ಪ್ರೀತಿಸುವ ಜೀವಗಳು

ಎನೂ ಬದಲಾಗುವುದಿಲ್ಲ

Sunday, January 14, 2007

ಸಂಕ್ರಮಣ

ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಂತೆ
ನನ್ನ ಜೀವನದಲಿ ಬಂದವಳು ನೀನು

ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು

ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು

ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು

ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು

ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು

ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು

ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ

Saturday, January 06, 2007

ನನ್ನಾಕೆ

ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ

ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ

ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ

ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ

ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ

ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ

ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ


*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************

Sunday, December 03, 2006

ನಿರೀಕ್ಷೆ

ನಿನ್ನ ಮೋಹಕ ನಗೆಯಲಿ
ಕಾಣೆಯಾಯಿತು ದಣಿವು
ನಿನ್ನ ಧ್ವನಿಯ ನಾದದಲಿ
ನನ್ನದಲ್ಲವಾಯಿತು ಮನವು

ನಿನ್ನ ನೆನಪುಗಳ ಅಂಗಳದಲ್ಲಿ
ಕಳೆದುಹೋಯಿತು ನನ್ನ ಮನ
ನಿನ್ನ ಪ್ರೀತಿಯ ಸಾಗರದಲ್ಲಿ
ಮುಳುಗಿಹೋಯಿತು ನನ್ನ ಮನ

ಪ್ರತಿ ಕ್ಷಣವೂ ಧ್ಯಾನ ನಿನ್ನದೇ
ಪ್ರತಿ ಬಡಿತದಲ್ಲೂ ಹೆಸರು ನಿನ್ನದೇ
ಪ್ರತಿ ಇರುಳಲ್ಲೂ ಕನಸು ನಿನ್ನದೇ
ಪ್ರತಿ ದಿನವೂ ನನ್ನ ಜೀವ ನಿನ್ನದೇ

ಅನುಭವಿಸುತ್ತಿದ್ದೇನೆ ಒಂದೊಂದು ಕ್ಷಣವು
ಭಾರ ಹೃದಯದಿಂದ ಅಗಲುವಿಕೆಯ ನೋವು
ನನ್ನಿಂದ ಅಷ್ಟು ದೂರ ಇದ್ದರೂ ನೀನು
ಅದು ಹೇಗೆ ಮನವನ್ನು ಕಾಡುತ್ತೀಯಾ ನೀನು?

ಜೀವಿಸುತ್ತಿದೇನೆ ಆ ಕ್ಷಣಕ್ಕಾಗಿ
ಪ್ರೀತಿಯ ಹಕ್ಕಿಗಳೆರಡು ಸ್ವಚ್ಚಂದ ಆಗಸದಲಿ
ಒಟ್ಟಿಗೆ ಹಾರುವ ಆ ಕ್ಷಣಕ್ಕಾಗಿ
ಜೀವಿಸುತ್ತಿದೇನೆ ಆ ದಿನಕ್ಕಾಗಿ
ಕಾದು ಒಣಗಿದ ಭೂಮಿಯನು
ಮೊದಲು ಮಳೆ ಹನಿ ಚುಂಬಿಸುವ ದಿನಕ್ಕಾಗಿ

Monday, November 27, 2006

ನಿನ್ನ ಮುದ್ದು ಕರಡಿಯಿಂದ..

ನನ್ನ ನಲ್ಮೆಯ ಹುಡುಗಿ,

ಏನು ಮಾಡ್ತಾ ಇದೀಯಾ ?

ಬಹುಷಃ ಅಮ್ಮನ ಜೊತೆ ಕೂತು ಮಾತಾಡುತ್ತಿರಬಹುದು.ಇಲ್ಲಾ ಅಂದ್ರೆ ಮನೆಮಂದಿ ಜೊತೆ ಕೂತು ಟಿವಿ ನೋಡ್ತಾ ಇರಬಹುದು.ನನ್ಗೊತ್ತು ಅವರ ಜೊತೆ ಮಾತಾಡುತ್ತಿದ್ದರೂ, ಟಿವಿ ನೋಡುತ್ತಾ ಇದ್ದರೂ ನಾ ನಿನ್ನ ಮನದಲ್ಲಿ ಎಲ್ಲೋ ಇರ್ತೀನಿ.ನಿನ್ನ ಜೊತೆ ಜನ ಇರೋರ್ವಗೆ ನೀನು ಅದು ಹೆಂಗೋ ಸಂಭಾಳಿಸ್ತಿಯಾ ನಿನ್ನ ಕಾಡುವ ಮನವನ್ನ.ಆದರೆ ನೀನು ಏಕಾಂತದಲ್ಲಿದ್ದಾಗ ಏನಾಗುತ್ತೆ? ನಿನ್ನ ಮನದಲ್ಲಿದ್ದ ನಾನು ಹೊರಬರ್ತೀನಾ? ಆಗ ಏನು ಮಾಡ್ತೀಯಾ ನೀನು?

ನನ್ನ ಕತೆ ಕೇಳಬೇಡ್ವೇ.. ಕುಂತ್ರೂ,ನಿಂತ್ರೂ ನಿನ್ನದೆ ಧ್ಯಾನ,ಜೀವಕ್ಕಿಲ್ಲ ಸಮಾಧಾನ..ಎನೋ ನಿನ್ನ ಧ್ವನಿ ಕೇಳಿಕೊಂಡು, ನಿನ್ನ ಪೋಟೋ ನೋಡ್ಕೊಂಡು, ನಾವು ಜೊತೆಗಿದ್ದ ಕ್ಷಣಗಳ ಮೆಲುಕು ಹಾಕ್ತ ದಿನ ತಳ್ತಾ ಇದೀನಿ. ನನ್ನ ಹತ್ತಿರ ಇರೋ ವಿಡಿಯೋದಲ್ಲಿ, ನೀನು ಆ ದೇವಸ್ಥಾನದಲ್ಲಿ ನಗ್ತಾ ಇರೋ ಒಂದು ದೃಶ್ಯ ಇದೆ..ಅದನ್ನ ಇಲ್ಲಿಯವರಿಗೆ ಎಷ್ಟು ಸರ್ತಿ ನೋಡಿದೆನೋ ಗೊತ್ತಿಲ್ಲ.ನಿನ್ನದು ಶುಭ್ರ ಸುಂದರ ನಗು. ಅದನ್ನ ನೋಡ್ತಾ ಇದ್ದಂಗೆ ನಿನ್ನ ನೆನಪು ನನ್ನನ್ನು ಇನ್ನೂ ಬಿಗಿಯಾಗಿ ಆಲಂಗಿಸಿಕೊಂಡುಬಿಡುತ್ತೆ.

ಅಂದಂಗೆ ನಿನ್ನ ರೊಟ್ಟಿ ಕಲಿಕೆ ಎಲ್ಲಿಗೆ ಬಂತು? ಇಷ್ಟು ದಿನ ಅಡುಗೆ ಮನೆಗೆ ಏನೂ ಸಂಬಂಧ ಇಲ್ಲದಂತಿದ್ದವಳು ನೀನು. ಈಗ ನನ್ಗೋಸ್ಕರ ರೊಟ್ಟಿ ಮಾಡೋದಾ ಕಲಿತೀನಿ ಅಂತಾ ಹೊರಟಿದ್ದೀಯಾ ! ಯಾಕೇ ಹೀಗೆ ಅಂತಾ ಕೇಳಿದ್ರೆ, ನನಗೆ ಇಷ್ಟವಾದವರ ಇಷ್ಟ-ಕಷ್ಟ ನನ್ನದು, ಅವರ ಇಷ್ಟ ಪೂರೈಸಲು ಎಷ್ಟು ಕಷ್ಟ ಆದರೂ ಪರವಾಗಿಲ್ಲ ಅಂತೀಯಾ.ನಿನ್ನ ಪ್ರೀತಿಗೆ ನನ್ನ ಬಳಿ ಉತ್ತರವಿಲ್ಲ ಕಣೇ..

ನಮ್ಮ ಮುದ್ದಿನ ಟೆಡ್ಡಿ ಹೇಗಿದೆ. ಅದಕ್ಕಿರುವ ಅದೃಷ್ಟ ನನಗಿಲ್ಲ. ಯಾವಾಗಲೂ ನಿನ್ನ ಜೊತೆನೇ ಇರುತ್ತೆ, ಅದೂ ನಿನ್ನ ರೂಮ್‍ನಲ್ಲಿ. ಇರಲಿ, ಬೇಗ ಆ ಟೆಡ್ಡಿ ಜಾಗಕ್ಕೆ ನಾ ಬರ್ತೀನಿ. ಟೆಡ್ಡಿ ನನ್ನ ತರನೇ ಅಲ್ವಾ..ಎನೂ ತರ್ಲೆ ಮಾಡೋಲ್ಲ..ಅದು ಬೇಕು ಇದು ಬೇಕು ಅಂತಾ ನಿನ್ನ ಪೀಡಿಸಲ್ಲ. ಗೊತ್ತು ,ಇದನ್ನು ಓದ್ತಾ ಇದ್ದಂಗೆ ನೀನು ನಗ್ತೀಯಾ ಅಂತಾ..ಅದರೆ ನಾನು ನಿನ್ನ ಹತ್ತಿರ ಕೇಳೋದಾದರೂ ಏನು.... ನಿನಗೆ ಗೊತ್ತಲ್ವಾ !

ಹಾಂ.. ಇವತ್ತು ಪೋನ್ ಸ್ಯಾಂಪಲ್ ನಂತರ ನಾನು ಪೂರ್ತಿ ಹುಚ್ಚ ಆಗಿಬಿಟ್ಟಿದೀನಿ ಕಣೇ.ತುಂಬಾ ಕಾಡಿಸಬೇಡ್ವೇ..ದಿನಕ್ಕೊಂದು ಡಜನ್ ಸಾಕು..ಜಾಸ್ತಿ ಎನೂ ಕೇಳ್ತಾ ಇಲ್ಲ..ಅಲ್ವಾ.

ಅಂದಾಗೆ ನೆನಪಿದೆಯಾ? ೫ ಡಜನ್ ಪಾರ್ಸಲ್ ಕಳಿಸೋದು ಬಾಕಿ ಇದೆ!

ಐ ಲವ್ ಯು,
ನಿನ್ನ ಮುದ್ದು ಕರಡಿ

Saturday, November 04, 2006

ಸವಿಹೃದಯಕ್ಕೊಂದು ಓಲೆ..

ಪ್ರೀತಿಯ ಹೃದಯವೇ,

ದೂರವಾಣಿಯಲ್ಲಿ ನಿಮ್ಮ ಧ್ವನಿ ಕೇಳಿದಾಗಲೆಲ್ಲಾ ನನ್ನ ಮನಕ್ಕೆ ಎನೋ ಒಂದು ಸಮಾಧಾನ..

ನಾನು ಈಡೀ ದಿನ ಬದುಕೋದೇ ನಿಮ್ಮೊಡೆನೆ ಮಾತಾಡುವ ಆ ನಿಮಿಷಗಳಿಗೆ ಅನಿಸುತ್ತೆ.ಕರೆ ಮಾಡಿದಾಗ ಅಲ್ಲಿ ರಿಂಗ್ ಆಗ್ತಾ ಇದ್ದರು ಕರೆ ಎತ್ತಲಿಲ್ಲ ಅಂದಾಗ ಆಗುವ ಮನಸಿನ ತಳಮಳ ನಿಮಗೆ ಗೊತ್ತಾ?ನಿಮ್ಮ ಧ್ವನಿ ಕಿವಿಗೆ ಹರಿದು ಅಲ್ಲಿಂದ ನನ್ನ ಮನಕ್ಕೆ ಮುಟ್ಟಿದಾಗಲೇ ಅದೆಲ್ಲಾ ತಳಮಳಕ್ಕೆ ಒಂದು ಅಲ್ಪವಿರಾಮ..

ಮಾತಿನ ನಡುವೆ ಅರಳುವ ನಿಮ್ಮ ನಗೆ ಎಂಬ ಮಲ್ಲಿಗೆಯನ್ನು ಹಾಗೇ ಹೆಕ್ಕಿ ತೆಗೆದು ಜೋಪಾನವಾಗಿಡುತ್ತೇನೆ.ಆ ನಗೆ ಮಲ್ಲಿಗೆಯ, ಮುದ್ದು ಹುಡುಗಿಯ ನೆನಪೇ 'ನಾಳೆ' ಎನ್ನುವ ನದಿ ದಾಟಲು ದೋಣಿ..

ಇವತ್ತು ಎನಾಯಿತು ಗೊತ್ತಾ..೨ ತಿಂಗಳ ನಂತರ ನನ್ನ ಕಾರ್ ಹೊರತೆಗೆದಿದ್ದೆ. ಅದರೆ ಮೇಲೆ ಒಂದು ರಾಶಿ ದೂಳು. ಪರೀಕ್ಷೆಗಿಂತ ಮುಂಚೆ ತೆಗೆದು ನೋಡಿರದ ಪುಸ್ತಕಗಳ ಮೇಲೆ ಇರುತ್ತಲ್ವಾ ಅಷ್ಟು ದೂಳು! ಕಾರ್ ಒಂದು ಹಂತಕ್ಕೆ ಶುಭ್ರಗೊಳಿಸಿ, ಕಾರಿನಲ್ಲಿ ಕೂತರೆ, ನನ್ನ ಪಕ್ಕದ ಸೀಟು ನನಗೆ ಒಂದು ಸ್ಮೈಲ್ ಕೊಡಬೇಕಾ ! "ಯಾಕೇ ತುಂಬಾ ಖುಷಿಯಾಗಿದ್ದಿಯಾ" ಅಂತಾ ಕೇಳಿದರೆ ಎನಂತೂ ಗೊತ್ತಾ ಆ ಸೀಟ್?? "ಎನೋ ವಿಷಯ ಕೇಳಿದೆ..ನಮ್ಮ ಕಾರ್‍ನಲ್ಲಿ ನನ್ನ ಸೀಟ್‍ನಲ್ಲಿ ಬೇಗನೇ ನಿಮ್ಮವರು ಬರ್ತಾ ಇದ್ದಾರಂತೆ..ಹೌದಾ?". ಆ ತರಲೆ ಸೀಟ್‍ಗೆ ಒಂದು ಮುದ್ದು ಗುದ್ದು ಕೊಟ್ಟು ನಕ್ಕೆ ನಾನು..

ಅಫೀಸ್‍ನಲ್ಲಿದ್ದಾಗ ಅದು ಯಾವ ಯಾವ ಕ್ಷಣದಲ್ಲಿ ಕಣ್ಣ್ ಮುಂದೆ ಬಂದು ನಿಂತುಬಿಡ್ತೀಯಾ ನೀನು ! ಹೊತ್ತು ಗೊತ್ತು ಒಂದು ಇಲ್ಲಾ ! ಇವತ್ತು ಅದೇವಾದೋ ಮೀಟಿಂಗ್ ಮಧ್ಯೆದಲ್ಲಿ ತಮ್ಮ ಪ್ರವೇಶ ಆಗಬೇಕಾ..ಯಾವುದೋ ನೆನಪು..ಮುಖದಲ್ಲಿ ಮಿಂಚಿ ಮಾಯವಾದ ಒಂದು ಮಂದಹಾಸ.ಪಾಪ, ಅಲ್ಲಿ ಮೀಟಿಂಗ್‍ನಲ್ಲಿದವರಿಗೆ ನಾನು ಯಾಕೇ ಸುಮ್ಮ ಸುಮ್ಮ್ನೆ ನಗ್ತಾ ಇದ್ದೀನಿ ಅಂತಾ ತಲೆಬುಡ ಅರ್ಥ ಆಗಿಲಿಲ್ಲ !ಇನ್ನೂ ಅಫೀಸ್‍ನಲ್ಲಿ ನನ್ನ ಗೆಳಯರದು ಮುಗಿಯದ ಪ್ರಶ್ನೆಗಳು..ಅವರಿಗೆ ನಿನ್ನ ಬಗ್ಗೆ ಹೇಳ್ತಾ ಹೇಳ್ತಾ ಮತ್ತೆ ಕಳೆದುಹೋಗಿಬಿಡ್ತೀನಿ..

ಇನ್ನು ಮನೆಗೆ ಬಂದರೆ ಅಲ್ಲಿ ನಿಮ್ಮ ನೆನಪು ಫುಲ್‍ಟೈಮ್ ಹಾಜರ್. ಲ್ಯಾಪ್‍ಟಾಪ್ ಹೊರ ತೆಗೆದರೆ ಸಾಕು..ಕೈಗಳು ಅಲ್ಲಿಂದ ನಿನ್ನ ಪೋಟೋ ಅಲ್ಬಮ್ ತೆಕೊಂಡು ಕೂತು ಬಿಡುತ್ತೆ. ಬೆರಳು ನಿಮಗೆ ತುಂಬಾ ಇಷ್ಟವಾದ 'ಝರಾ ಝರಾ ಬೇಹಕ್ತಾ ಹೈ' ಹಾಡು ಹಾಕಿಬಿಡುತ್ತೆ. ಅಮೇಲೆ ನಾನು ಸಂಪೂರ್ಣನಾಗಿ ನಿಮ್ಮ ನೆನಪಿನಾಂಗಳದಲ್ಲಿ ಕಾಣೆಯಾಗಿಬಿಡುತ್ತೇನೆ.

ಒಂದೊಂದು ಸಲ ಅನಿಸುತ್ತೆ, ನನ್ನ-ನಿಮ್ಮ ನಡುವೆ ಈ ವೀಸಾ-ಪಾಸ್‍ಪೋರ್ಟ್ ಅನ್ನುವ ಬೇಲಿ ಏಕೇ ಅಂತಾ? ಎನ್ಮಾಡೋದು ಹೇಳಿ..ಲೋಕಾರೂಡಿ ತಪ್ಪಿಸಿಕ್ಕೋ ಆಗೊಲ್ಲ. ಆದರೆ ಪ್ರೀತಿ ಎಂಬ ವೀಸಾ ಸಿಕ್ಕ ಮೇಲೆ ಬೇರೆ ಎಲ್ಲಾ ವೀಸಾ ಸಿಗೋದು ಅಂತಾ ಕಷ್ಟ ಅಗೋಲ್ಲಾ ಅನಿಸುತ್ತೆ..ಅಲ್ವಾ?

ನಾಳೆ ಮತ್ತೆ ಸಿಗ್ತೀನಿ..

ಸವಿಗನಸುಗಳು,
ಪ್ರೀತಿಯೊಂದಿಗೆ,
ನಿಮ್ಮವನು

Sunday, July 30, 2006

ಪ್ರೀತಿಯೆಂದರೆ ಇದೇನಾ ?

ಕಾಲೇಜ್ ದಿನದ ಸ್ನೇಹಿತರನ್ನು ಬಹಳ ವರ್ಷಗಳ ನಂತರ ಭೇಟಿ ಮಾಡೋದರಲ್ಲಿ ಎನೋ ಒಂದು ಸಂಭ್ರಮವಿರುತ್ತೆ.ಕಳೆದ ವಾರ ನನ್ನ ಒಬ್ಬ ಕಾಲೇಜ್ ಮಿತ್ರನನ್ನು ಸುಮಾರು ೫ ವರ್ಷಗಳ ನಂತರ ನೋಡುತ್ತಿದ್ದೆ. ಉಭಯಕೋಶಲೋಪರಿಯ ನಂತರ ನಮ್ಮ ಮಾತುಕತೆಗಳು ಕಾಲೇಜ್ ದಿನಗಳೆಡೆಗೆ ಹೊರಳಿದವು.

ಆ ದಿನಗಳೇ ಹಾಗೇ...

ವಯಸ್ಸು ಸಹ ಅಂತದ್ದೇ.ಎನೋ ಸಾಧಿಸಬೇಕೆಂಬ ಹಂಬಲ, ಕಣ್ಣುಗಳಲ್ಲಿ ನಾಳೆಯ ಕನಸುಗಳು, ಮನದ ಮೂಲೆಯಲೆಲ್ಲೋ ಅನಿಶ್ಚಿತತೆ ಹಾಗೂ ಯಾವಯಾವುದೋ ಅಕರ್ಷಣೆಗಳು.

ಮಿತ್ರನ್ನೊಂದಿಗೆ ಕಾಲೇಜ್ ದಿನಗಳ ಬಗ್ಗೆ ಮಾತಾಡುತ್ತಿರುವಾಗ ನೆನಪಾಗಿದ್ದು ಆ ಹುಡುಗನ ಕತೆ...

ಅವನೊಬ್ಬ ಕನಸುಗಳನ್ನು ತುಂಬಿಕೊಂಡ ಹುಡುಗ. ತುಂಬಾ ಶ್ರಮಜೀವಿ. ತನ್ನ ಇತಿಮಿತಿಗಳನ್ನು ಅರಿತು ನಡೆವ ಹುಡುಗ.ಇಂತಹ ಸ್ಥಿತಪ್ರಜ್ಞ ಹುಡುಗ ಬಹುಷಃ ತಾನಾಯಿತು ತನ್ನ ಓದಾಯಿತು ಅಂತ ಇರುತ್ತದ್ದನೋ ಎನೋ, ಆ ಹುಡುಗಿ ಇಲ್ಲದಿದ್ದರೆ....

ಆ ಹುಡುಗಿ...ಸರಳ ಮತ್ತು ಸೌಜನ್ಯದ ಪ್ರತೀಕ. ಸ್ನೇಹ ಬೆಳಯಲು ತುಂಬಾ ದಿನ ಬೇಕಾಗಲಿಲ್ಲ. ಎಂತಹ ಮಧುರ ಸ್ನೇಹವದು..ಆ ಹುಡುಗಿಗೆ ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿ, ಹೇಗೆ ಚಾಟು ಮಾಡುವುದು ಅಂತ ನಮ್ಮ ಹುಡುಗ ಹೇಳಿಕೊಟ್ಟಿದ್ದ. ಹಾಗೆಯೇ ಹುಡುಗನ ಬಗ್ಗೆ ಎನೋ ಭರವಸೆ-ನಂಬುಗೆ ಆ ಹುಡುಗಿಯಲ್ಲಿ.

ಅದು ಯಾರು ಯಾವ ಮಹೂರ್ತದಲ್ಲಿ ಹೇಳಿದರೋ..'ಒಬ್ಬ ಹುಡುಗ ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರಲು ಸಾಧ್ಯವೇ ಇಲ್ಲ'.

ಅದು ಎನಾಯಿತೋ ಎನೋ ಆ ಹುಡುಗನಿಗೆ ಆ ಹುಡುಗಿಯ ಬಗ್ಗೆ ಸ್ನೇಹಕ್ಕಿಂತ ಮಿರಿದ ಸೆಳೆತ ಶುರುವಾಯಿತು. ಹುಡುಗ ತಾನು ಮಾಡುತ್ತಿರುವದು ಸರಿಯೇ ಅನ್ನೋ ಗೊಂದಲ. 'ಈಗ ಇರೋ ಸ್ನೇಹಕ್ಕೂ ದ್ರೋಹ ಬಗೆತಿದಿಯಾ' ಅಂತ ಒಂದು ಸರ್ತಿ ಮನಸ್ಸು ಹೇಳಿದರೆ, ಇನ್ನೊಂದು ಸಲ ಅದೇ ಮನಸ್ಸು ಹೇಳಿತು 'ಸ್ನೇಹವಿಲ್ಲದೆ ಪ್ರೀತಿ ಇರೋಕೆ ಸಾಧ್ಯ ಇಲ್ಲ, ನಿನ್ನ ಭಾವನೆಗಳು ಸರಿ'.

ಆಂತು ಇಂತು ಧೈರ್ಯ ಮಾಡಿ ಒಂದು ದಿನ ಆ ಹುಡುಗಿಗೆ ನಮ್ಮ ಹುಡುಗ ಸೂಚ್ಯವಾಗಿ ತನ್ನ ಮನದ ಮಾತು ಬಿಚ್ಚಿಟ್ಟಿದ್ದ.ಆದರೆ ಅವನೆಂದುಕೊಂಡಂತೆ ಆಕೇ ಸಿಟ್ಟಿಗೇಳಲಿಲ್ಲ. ಬದಲಾಗಿ ತುಂಬಾ ಸೌಮ್ಯವಾಗಿ ಹುಡುಗನಿಗೆ 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ' ಅಂದಿದ್ದಳು.

ಈ ರೀತಿ ಸಂದರ್ಭದಲ್ಲಿ ನಾನು ನೋಡಿರೋ ಪ್ರಕಾರ ಹುಡುಗರು ಎರಡು ರೀತಿಯಾಗಿ ವರ್ತಿಸುತ್ತಾರೆ. ಒಂದನೇಯ ಪ್ರಕಾರದವರು ಹುಡುಗಿ ಹೇಳಿದ್ದು ಒಪ್ಪಿಕೊಂಡು ಮಿತ್ರರಾಗಿ ಉಳಿದುಬಿಡ್ತಾರೆ. ಎರಡನೇಯವರು ಆವಾಗ ಒಪ್ಪಿಕೊಂಡರೂ ಮನದಲ್ಲಿ ಆ ಭಾವನೆ ಇದ್ದೆ ಇರುತ್ತೆ, ಮುಂದೊಂದು ದಿನ ಆಕೇ ಒಪ್ಪುತ್ತಾಳೆ ಅನ್ನೋ ಆಸೆವುಳ್ಳವರು.

ನಮ್ಮ ಹುಡುಗ ಎರಡನೇಯ ಪ್ರಕಾರದವನು. ಅದು ಆ ಹುಡುಗಿಗೆ ಗೊತ್ತಾದಗ ಈ ಸಲ ಸ್ಪಲ್ಪ ಖಾರವಾಗಿಯೇ ಹುಡುಗನಿಗೆ ಉತ್ತರ ಸಿಕ್ಕಿತ್ತು.ಇಷ್ಟರಲ್ಲಿ ಕಾಲೇಜ್ ಜೀವನ ಮುಗಿದು ನೌಕರಿ ಎಂಬ ಇನ್ನೊಂದು ಅಧ್ಯಾಯ ಶುರುವಾಗಿತ್ತು.ಅದರ ಮೊದಮೊದಲ ಸಂಭ್ರಮ ಆಚರಿಸುವ ಮೊದಲೇ ಆ ಹುಡುಗಿಯಿಂದ ಆ ಸುದ್ದಿ ಬಂದಿತ್ತು ಅಮಂತ್ರಣದೊಂದಿಗೆ...

ಆದಾಗಿ ಎಷ್ಟೋ ವರ್ಷಗಳು ಕಳೆದವೋ..ಈಗಲೂ ಅವರಿಬ್ಬರ ಮಧ್ಯೆ ಒಂದು ಮಾತಿಲ್ಲಿದ, ಮೇಲ್ ಇಲ್ಲದ ಮೌನದ ಬೇಲಿ.

ನನ್ನ ಸ್ನೇಹಿತನ ಭೇಟಿಯ ನಂತರ ಮರಳಿ ಬರುವಾಗ ನೆನಪಾಗಿದ್ದು ಇನ್ನೊಂದು ಪ್ರೀತಿಯ ಕತೆ..

ಇದು ಒಂದಾನೊಂದು ಅಫೀಸ್‍ನಲ್ಲಿ ಅರಳಿದ ಕತೆ. ಆತ ತುಂಬಾ ಸ್ನೇಹಮಯಿ,ಹಾಸ್ಯಪ್ರಜ್ಞೆವುಳ್ಳ ಒಬ್ಬ ಉತ್ಸಾಹಿ ಯುವಕ.ಅದೇ ಅಫೀಸ್‍ನಲ್ಲಿದ್ದಾಳೆ ಆ ಯುವತಿ.ಇಬ್ಬರಿಗೂ ಸಮಾನ ಇಷ್ಟವಾದ ಅನೇಕ ಅಭಿರುಚಿಗಳು.ಬಹು ಬೇಗನೆ ಬೆಳಯಿತು ಗಾಢ ಸ್ನೇಹ. ಅವರಿಬ್ಬರು ಮಾತಾಡದ ವಿಷಯವಿಲ್ಲ,ಪೋನ್-ಮೇಲ್-ಎಸೆಂಎಸ್ ಇಲ್ಲದ ದಿನಗಳಿಲ್ಲ.ದೋಸೆ,ಐಸ್‍ಕ್ರೀಮ್,ಪಾಸ್ತ,ಫಿಡ್ಜಾ..ಒಟ್ಟಿಗೆ ತಿನ್ನದ ಹೋಟೆಲ್‍ಗಳಿಲ್ಲ.

ದಿನಗಳೆದಂತೆ ಆಕೆಗೆ ಸ್ಪಷ್ಟವಾಗತೊಡಗಿತು ಅವರಿಬ್ಬರು ಸ್ನೇಹದ ಎಲ್ಲೆ ಮೀರುತ್ತಿದ್ದಾರೆ.ಆಕೆ ಅವನಿಗೆ ಹೇಳಿದ್ದಳು 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ'. ಅವನಿಗೆ ಆವಾಗ ಅದು ಸರಿ ಅನಿಸಿ ಅದನ್ನು ಒಪ್ಪಿಕೊಂಡರೂ ಮನದ ಮೂಲೆಯಲ್ಲಿ ಆ ಪ್ರೀತಿಯ ಭಾವನೆ ಇದ್ದೆ ಇತ್ತು. ಮೊದಲಿಗಿಂತಲೂ ಗಾಢವಾಗಿತ್ತು ಸ್ನೇಹ.

ಕೊನೆಗೆ ಒಂದು ದಿನ ಅವರ ಸಂಜೆ ಭೇಟಿಯಲ್ಲಿ ಆಕೆ ಅವನಿಗೆ ಆ ಸುದ್ದಿ ಹೇಳಿದ್ದಳು. ಅವನಿಗೆ ಅದು ಅನಿರೀಕ್ಷಿತವಲ್ಲದಿದ್ದರೂ ಮನದಲ್ಲಿ ಒಂದು ನೋವಿನ ಅಲೆ ಬಂದು ಅಪ್ಪಳಿಸಿತ್ತು. ಆಕೆಗೆ ಗೊತ್ತು ಅವನ ಮನದಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ, ಆದರೆ ಅವಳು ಆಸಹಾಯಕಳು?

ಅದೊಂದು ಅಶ್ರುತುಂಬಿದ ವಿದಾಯ...ಆದರೆ ಅವರ ನಡುವಿನ ನಿಷ್ಕಲ್ಮಶ ಸ್ನೇಹ ಮುಂದುವರೆದಿತ್ತು.ಅವಗೊಮ್ಮೆ ಇವಗೊಮ್ಮೆ ಕಳಿಸುವ ಮೇಲ್‍ಗಳು, ಅಪರೂಪದ ಪೋನ್‍ಕಾಲ್‍ಗಳು.ಅದೇ ಸ್ನೇಹ.. ಆದರೆ ಇಬ್ಬರಿಗೂ ಗೊತ್ತು ಎಲ್ಲಿ ಗೆರೆ ಎಳೆಯಬೇಕೆಂದು.

ಈ ಕತೆಗಳ ಬಗ್ಗೆ ಯೋಚಿಸುತ್ತಿರುವಾಗ ನನ್ನ ಸ್ನೇಹಿತೆಯೊಬ್ಬಳ ಕರೆ ಬಂತು.ಅವಳು ಬಹಳ ಗಲಿಬಿಲಿಗೊಂಡಿದ್ದಳು. ೨-೩ ತಿಂಗಳುಗಳಿಂದ ಜೊತೆಗೆ ಕೆಲಸ ಮಾಡುವ ಅವಳ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ವಿಪರೀತ ಆಸಕ್ತಿ ಬೆಳಸಿಕೊಂಡಿದ್ದಾನೆ ಅಂತಾ ತಿಳಿಯಿತು.ನಂತರ ಮಾತುಕತೆಯ ನಂತರ ಸ್ಪಷ್ಟವಾಗಿದ್ದು ಅದರಲ್ಲಿ ಆಕೆ ಆ ರೀತಿ ಭಾವನೆ ಬರೋ ಹಾಗೆ ಮಾಡಿದ್ದು ಎನೂ ಇಲ್ಲ. ಅವಳು ಅವನಿಗೆ ಸ್ಪಷ್ಟವಾಗಿ ನಿರಾಕರಿಸಿ ಹೇಳಿದಳಂತೆ.

ನನ್ನ ಸ್ನೇಹಿತೆಗೆ ಕಿವಿಮಾತು ಹೇಳಿದೆ "Feeling of love is like sea waves, it keeps coming.Watch out !'

ಈ ಎಲ್ಲ ಎಪಿಸೋಡ್‍ಗಳನ್ನು ನೋಡಿದಾಗ ಮೂಡಿದ್ದು ಅನೇಕ ಪ್ರಶ್ನೆಗಳು....
೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಪ್ರಶ್ನೆಗಳು ಕಾಡುತ್ತಿದ್ದಂತೆ ಬಂತು ಒಂದು ಸಂತಸದ ಸುದ್ದಿ. ನನ್ನ ಅತ್ಯಂತ ಅತ್ಮೀಯರಾದ ದಂಪತಿಗಳ ಕುಟುಂಬಕ್ಕೆ ಹೊಸ ಜೀವವೊಂದರ ಸೇರ್ಪಡೆ. ದಂಪತಿಗಳಿಬ್ಬರೂ ನನ್ನ ಕಾಲೇಜ್ ಸಹಪಾಠಿಗಳು ,ನಮ್ಮ ಮುಂದೆಯೇ ಅರಳಿದ ಪ್ರೀತಿಯದು, ಅವರು ಅನುಭವಿಸಿದ ನೋವು-ನಲಿವು ಎಲ್ಲ ತಿಳಿದ ನಾನು ಸಂಭ್ರಮದಿಂದ ಫೋನಾಯಿಸಿದೆ.

ಬಹುಷ: ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಇವರ ಹತ್ತಿರ ಉತ್ತರ ಸಿಕ್ಕರೂ ಸಿಗಬಹುದೇನೋ.ಆ ಕಡೆಯಿಂದ ನನ್ನ ಮಿತ್ರನ ಧ್ವನಿಯಲ್ಲಿ ಧನ್ಯನಾದೆ ಅನ್ನುವ ಭಾವನೆ..ಸಂತಸದ ಹೊನಲು..ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಇದ್ದ ಅವರ ಪ್ರೀತಿಯಲ್ಲಿ ಅರಳಿದ ಹೂವು.

ಬಹುಷಃ ಪ್ರೀತಿಯೆಂದರೆ ಇದೇನಾ?