Thursday, December 30, 2010

ಸಹಾಯ ಹಸ್ತಕ್ಕೆ ನಮನ

ಕೀನ್ಯಾ ದೇಶದ ಹಲವಾರು ಜಲಾವೃತ ಊರುಗಳನ್ನು ತಲುಪುವುದು ದುಸ್ಸಾಹಸ. ಈ ನದಿಗಳಲ್ಲಿ ಯಾವಾಗ ಬೇಕಾದರೂ ಬರಬಹುದಾದ ಕ್ಷಿಪ್ರ ಪ್ರವಾಹ. ಅದರ ಜೊತೆ ಆ ನದಿಗಳು ಮೊಸಳೆಗಳಿಂದ ತುಂಬಿವೆ. ಈ ನದಿಗಳಿಗೆ ಸೇತುವೆಗಳಿಲ್ಲ. ಇಂತಹ ಪ್ರದೇಶಗಳಿಗೆ ಸ್ವಯಂಸೇವಕರಾಗಿ ಬಂದ ಅಮೇರಿಕನ್ ದಂಪತಿಗಳೊಬ್ಬರು ಅಂತಹ ನದಿಯೊಂದರಲ್ಲಿ ಕೊಚ್ಚಿಕೊಂಡು ಹೋಗುತ್ತಾರೆ. ಅದಾಗಿ ಸುಮಾರು ೧೩ ವರ್ಷದ ನಂತರ ಆ ದಂಪತಿಗಳ ಮಗ ಅದೇ ಊರಿಗೆ ಮರಳಿ ಬರುತ್ತಾನೆ. ತನ್ನಂತೆ ಇತರರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳಬಾರದೆಂದು, ತನ್ನ ತಂದೆ-ತಾಯಿಯನ್ನು ನುಂಗಿದ ನದಿಗೆ ಅಡ್ಡಲಾಗಿ ಸೇತುವೆ ಕಟ್ಟುತ್ತಾನೆ.

ನಂತರ ಅದೇ ದೇಶದಲ್ಲೇ ಉಳಿದು ಅದೇ ತರ ಬೇರೆ ಜಲಾವೃತ ಊರುಗಳಿಗೆ ಸೇತುವೆ ಕಟ್ಟಲು ತೊಡಗುತ್ತಾನೆ. ಸ್ಥಳೀಯರ ಸಹಕಾರದಿಂದ ಇಲ್ಲಿಯವರಿಗೆ ಸುಮಾರು ೪೫ ಸೇತುವೆಗಳು ಕಟ್ಟಿದ್ದಾನೆ.ಈ ಊರುಗಳಿಗೆಲ್ಲಾ ಹೊರಜಗತ್ತಿನ ಸಂಪರ್ಕಕ್ಕೆ ಎಕೈಕ ಕೊಂಡಿಯಾಗಿವೆ ಈ ಸೇತುವೆಗಳು. ವಾಣಿಜ್ಯ, ಉದ್ಯೋಗ, ಶಿಕ್ಷಣದ ಕ್ಷೇತ್ರಗಳಲ್ಲಿ ಸ್ಪಲ್ಪ ಪ್ರಗತಿಗೆ ಈ ಸೇತುವೆಗಳು ಪಾಲುದಾರರಾಗಿವೆ.

ಆತನ ಹೆಸರು ಡೇವಿಡ್ ಕಕುಕೊ.

***************

ಡ್ಯಾನ್ ವಾಲ್‍ರತ್ ಮನೆಗಳನ್ನು ಕಟ್ಟಿಕೊಡುವ ವೃತ್ತಿಯಲ್ಲಿರುವವನು. ತನ್ನ ಸ್ನೇಹಿತನೊಬ್ಬನ ಮನೆ ನವೀಕರಣಕ್ಕೆ ಹೋದಾಗ, ಸ್ನೇಹಿತನ ಮಗ ಇರಾಕ್ ಯುದ್ಧದಲ್ಲಿ ಗಾಯಾಳುವಾಗಿ ಮರಳಿದ ದೃಶ್ಯ ನೋಡುತ್ತಾನೆ. ಈಡೀ ಕುಟುಂಬಕ್ಕೆ ಆಸರೆಯಾಗಿದ್ದ ಮಗ ಈಗ ಸಂಪೂರ್ಣ ಜರ್ಜಿತನಾಗಿ ಮರಳಿ ಬಂದದ್ದು ನೋಡಿ ಮನ ಮರುಗುತ್ತದೆ. ಆತನ ಕುಟುಂಬ ಇರುವ ಮನೆಯನ್ನು ಆವನಿಗೆ ಅನುಕೂಲವಾಗುವಂತೆ ಮಾರ್ಪಾಡಿಸಲು ಡ್ಯಾನ್‍ನನ್ನು ಕರೆದಿರುತ್ತಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ - ಅಂಗಗಳನ್ನು ಕಳೆದುಕೊಂಡು ಈಡೀ ಜೀವನ ಬದುಕುವ ಸೈನಿಕರಿಗೆ ಅವರ ಕುಟುಂಬದವರಿಗೆ ಏನಾದರೂ ಸಹಾಯ ಮಾಡಬೇಕೆಂದು ಅಲ್ಲೇ ನಿರ್ಧಾರ ಮಾಡುತ್ತಾನೆ. ಆ ಮನೆಯನ್ನು ಸಂಪೂರ್ಣವಾಗಿ ಮಾರ್ಪಾಡಿಸುತ್ತಾನೆ, ಏನೂ ದುಡ್ಡು ತೆಗೆದುಕೊಳ್ಳದೇ..

ನಂತರ ಯುದ್ಧದಿಂದ ಮರಳಿ ಬರುವ ಸೈನಿಕರಿಗೆ ಉಚಿತವಾಗಿ ಮನೆಗಳನ್ನು ಕಟ್ಟಿಸಿ ಕೊಡತೊಡಗುತ್ತಾನೆ. ಯುದ್ಧದಿಂದ ಮರಳಿ ಗಾಯಾಳುಗಳಾಗಿ, ಅಂಗವಿಹನರಾಗಿ ತಮ್ಮ ಜೀವನ ಸಾಗಿಸಿಲಿಕ್ಕೆ ಹೋರಾಡುವ ಈ ಯೋಧರಿಗೆ, ಸ್ವಂತ ಮನೆ ಒದಗಿಸಿ ಅವರ ಪರಿಶ್ರಮ ಕಡಿಮೆ ಮಾಡುತ್ತಿದ್ದಾನೆ.

*****************

ಕೀನ್ಯಾ ಮತ್ತು ಅಫ್ರಿಕಾದ ಇತರೆ ಹಲವು ದೇಶಗಳ ಮನೆಗಳಲ್ಲಿ, ಅಡುಗೆ ಮಾಡಲು ಮತ್ತು ರಾತ್ರಿ ದೀಪಕ್ಕೆ ಸೀಮೆ ಎಣ್ಣೆಯೊಂದೇ ಆಧಾರ. ಶಾಲಾಮಕ್ಕಳಿಗೆ ಓದಲು ಸೀಮೆ ಎಣ್ಣೆ ಬುಡ್ಡಿ. ರಾತ್ರಿ ಸೀಮೆ ಎಣ್ಣೆ ಉರಿಸಿದರೆ ಮರುದಿನಕ್ಕೆ ಏನೂ ಇಲ್ಲ. ಮತ್ತೆ ಸೀಮೆ ಎಣ್ಣೆ ಕೊಳ್ಳಬೇಕೆಂದರೆ , ಅಂದಿನ ಅನ್ನಕ್ಕೆ ಬೇಕಾದ ದುಡ್ಡು ಕೊಡಬೇಕು. ಅದಕ್ಕೆ ಬಹುತೇಕ ಮನೆಗಳಲ್ಲಿ ರಾತ್ರಿ ಸೀಮೆ ಎಣ್ಣೆ ಉಪಯೋಗ ಸೀಮಿತ. ಮಕ್ಕಳು ಓದು ಕುಂಟಿತ.

ಇದಲ್ಲೆವನ್ನೂ ನೋಡಿದ ಇವಾನ್ಸ್ ವಡಂಗೊ ಇದಕ್ಕೆ ಪರಿಹಾರ ಕಂಡುಕೊಳ್ಳಲು ಹಿಡಿದ ದಾರಿ ವಿಶಿಷ್ಟ. ತನ್ನ ಅನ್ವೇಷಣೆಯಿಂದ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಸೌರ್ಯಶಕ್ತಿ ಚಲಿತ ದೀಪಗಳನ್ನು ಕಂಡುಹಿಡಿದಿದ್ದಾನೆ. ೨೩ ವರ್ಷದ ಇವಾನ್ಸ್ ವಡಂಗೊ ಇಲ್ಲಿಯವರಿಗೆ ೧೦೦೦೦ ಸೌರ್ಯ ದೀಪಗಳನ್ನು ತಯಾರಿಸಿ ಉಚಿತವಾಗಿ ಹಂಚಿದ್ದಾನೆ.

ಇದರಿಂದ ಮಕ್ಕಳ ಓದು, ಸೀಮೆ ಎಣ್ಣೆಗಾಗಿ ಪಡುವ ಕಷ್ಟ ಸ್ಪಲ್ಪ ತಪ್ಪಿಸಬಹುದೆಂಬ ಇವಾನ್ಸ್‍ಗೆ ವಿಶ್ವಾಸವಿದೆ.

*********************

ವರ್ಷಕ್ಕೆ ಸುಮಾರು ೧೦ ರಿಂದ ೧೫ ಸಾವಿರ ಹೆಣ್ಣುಮಕ್ಕಳನ್ನು ನೇಪಾಳದ ಗಡಿಯಿಂದ ಭಾರತಕ್ಕೆ ವೇಶ್ಯಾಟನೆಗೆ ಸಾಗಿಸಲಾಗುತ್ತದಂತೆ. ಒಮ್ಮೆ ಈ ಸುಳಿಯೊಳಗೆ ಬಿದ್ದವರು, ಅಲ್ಲಿನ ನಿತ್ಯ ಹಿಂಸೆ, ವೇದನೆ, ರೋಗಗಳಿಂದ ಮರಳಿ ಬರುವುದು ಅಸಾಧ್ಯ. ಅಲ್ಲಿಂದ ಮರಳಿ ಬಂದರೂ, ಸಮಾಜದಲ್ಲಿ ಅವರು ಹೊರಗಿನವರು.

ಇಂತಹ ವೇದನೆಯಲ್ಲಿ ಬೇಯುತ್ತಿರುವ ಹೆಣ್ಣುಮಕ್ಕಳಿಗೆ ಆಸರೆಯಾಗಿ ಕಾಪಾಡುತ್ತಿರುವ ೬೧ ವರ್ಷದ ಮಹಿಳೆ ಅನುರಾಧ ಕೊಯಿರಾಲ.

ಇಲ್ಲಿಯವರೆಗೆ ಸುಮಾರು ಅಂತಹ ೪೦೦ ಹೆಣ್ಣುಮಕ್ಕಳನ್ನು ಕಾಪಾಡಿ ತಮ್ಮ ’ಮೇಟಿ ನೇಪಾಳ’ ದಲ್ಲಿ ಆಶ್ರಯ ನೀಡಿದ್ದಾರೆ. ಆಶ್ರಯದ ಜೊತೆ ಅವರಿಗೆ ಬೇಕಾದ ಶಿಕ್ಷಣ, ತರಬೇತಿ ಎಲ್ಲಕ್ಕಿಂತ ಹೆಚ್ಚಾಗಿ ಸಾಂತ್ವನ ನೀಡಿದ್ದಾರೆ. ಇವರಲ್ಲಿ ಏಡ್ಸ್‍ನಿಂದ ಬಳಲುತ್ತಿರುವ ಅನೇಕರಿಗೆ ಚಿಕಿತ್ಸೆ ಮತ್ತು ಅವರ ಕೊನೆಯ ದಿನಗಳ ಮನೆಯಾಗಿದ್ದಾರೆ.

ಇದು ಅಲ್ಲದೇ ನೇಪಾಳದ ಹಳ್ಳಿಗಳಲ್ಲಿ ಉದ್ಯೋಗದ ಅಮೀಷ ತೋರಿಸಿ ಸಾಗಿಸುವುದರ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾರೆ.

*********************

ಮಾನವತೆ ಸಕಾರ ಎತ್ತಿದಂತೆ ಇರುವ ಈ ಮಹನೀಯರು, ತಮ್ಮ ವೈಯುಕ್ತಿಕ ಬದುಕನ್ನು ಮೀರಿ, ತಮ್ಮ ಸುತ್ತಲಿನ ಜನರಿಗೆ ಒಳಿತು ಮಾಡುವ ಕಾಯಕದಲ್ಲಿ ತೊಡಗಿದವರು. ಇವರಿಗೆಲ್ಲಾ ಬೇಕಾಗಿದ್ದರೆ ತಮ್ಮ ಜೀವನ ತಾವು ನೋಡಿಕೊಂಡು ತಮ್ಮ ಪಾಡಿಗೆ ತಾವು ಇರಬಹುದಿತ್ತು. ಆದರೆ ಅವರು ಆರಿಸಿಕೊಂಡ ದಾರಿ ಬೇರೆಯಾಗಿತ್ತು. ಚಿಕ್ಕ ಚಿಕ್ಕ ಹೆಜ್ಜೆಗಳಿಂದ ಶುರುಮಾಡಿದ ಅವರ ಸೇವೆ ಹೆಮ್ಮರವಾಗಿ ಬೆಳೆದು ನಿಂತಿವೆ.

ಮಹಾತ್ಮ ಗಾಂಧೀಜಿ ಹೇಳಿದಂತೆ ’Be the change you want to see’.

ಹೊಸ ವರುಷದಲ್ಲಿ ಎಲ್ಲರಿಗೂ ಶುಭವಾಗಲಿ.

ಹಾಗೇ ಅಸಹಾಯಕರಿಗೆ-ನೊಂದವರಿಗೆ ಸಾಂತನ್ವದ ಮಾತುಗಳು ಮತ್ತು ಸಹಾಯ ಹಸ್ತ ಚಾಚುವ ಮನಸ್ಸು ನಮ್ಮದಾಗಲಿ..

14 comments:

ರಾಜೇಶ್ ನಾಯ್ಕ said...

ಶಿವ್,
ಮಾಹಿತಿಯೊಂದಿಗೆ ಹೊಸವರ್ಷದ ಶುಭಾಶಯ!
ನಿಮಗೂ ಹೊಸವರ್ಷದ ಶುಭಾಶಯಗಳು.

Dr.D.T.Krishna Murthy. said...

ಸುಂದರ ಲೇಖನ.ಅಭಿನಂದನೆಗಳು ಹಾಗೂ ಹೊಸ ವರ್ಷದ ಶುಭಾಶಯಗಳು.

ಶರಶ್ಚಂದ್ರ ಕಲ್ಮನೆ said...

ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ಹೊಸ ವರುಷ ನಮ್ಮಲ್ಲಿ ಒಳ್ಳೆಯ ಬದಲಾವಣೆ ತರಲಿ ಎಂದು ಹಾರೈಸುವೆ. ತಮಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

Pataragitti (ಪಾತರಗಿತ್ತಿ) said...

ರಾಜೇಶ್,
ಭೇಟಿ ನೀಡಿ ಪ್ರತಿಕ್ರಿಯಸಿದ್ದಕ್ಕೆ ವಂದನೆಗಳು !

Pataragitti (ಪಾತರಗಿತ್ತಿ) said...

ಕೃಷ್ಣಮೂರ್ತಿ ಸರ್,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್ !

Pataragitti (ಪಾತರಗಿತ್ತಿ) said...

ಶರತ್,

ನಿಮ್ಮ ಮಾತಿನಂತೆ ಸ್ಪಲ್ಪ ಬದಲಾವಣೆ ಕಂಡರೂ ಸಾಕು..
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು.

sunaath said...

ಶಿವ,
ವರ್ಷದ ಕೊನೆಯಲ್ಲಿ, ಮಾನವೀಯತೆಯನ್ನು ನೆನಪಿಸುವ ನಿಮ್ಮ ಆಪ್ಯಾಯಮಾನ ಲೇಖನ ಓದಿದೆ. ಧನ್ಯವಾದಗಳು.
ಹೊಸ ವರ್ಷದ ಶುಭಾಶಯಗಳು.

Pataragitti (ಪಾತರಗಿತ್ತಿ) said...

ಸುನಾಥ್ ಕಾಕಾ,
ಮಾನವೀಯತೆಗೆ ಜಾಗವಿರಲಿ ಎಂಬುದು ನಮ್ಮ-ನಿಮ್ಮ ಸಹಮತ.

ಧನ್ಯವಾದಗಳು..

balasubramanya said...

ಅಚ್ಚರಿಯ ಮಾಹಿತಿಗಳು , ಸುಂದರ ಬರವಣಿಗೆ, ಗೊತ್ತಿಲ್ಲದ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.ಹೊಸ ವರ್ಷದ ಶುಭಾಶಯಗಳು.

ಜಲನಯನ said...

ಶಿವ
ಕೆನ್ಯಾ ಮತ್ತು ಆಫ್ರಿಕಾದ ಪರಿಚಯ ಚನ್ನಾಗಿತ್ತು ..ಹೊಸ ವರ್ಷದ ಹಾರ್ದಿಕ ಶುಭಾಶಯಗಳು

Pataragitti (ಪಾತರಗಿತ್ತಿ) said...

ಬಾಲು ಅವರೇ,
ನಿಮ್ಮ ಮೆಚ್ಚುಗೆಗೆ ವಂದನೆಗಳು.
ಹೊಸ ವರ್ಷದ ಶುಭಾಶಯಗಳು!

Pataragitti (ಪಾತರಗಿತ್ತಿ) said...

ಆಜಾದ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು !
ಹೊಸ ವರ್ಷದ ಶುಭಾಶಯಗಳು.

ತೇಜಸ್ವಿನಿ ಹೆಗಡೆ said...

ತುಂಬಾ ಉತ್ತಮ ಲೇಖನ, ಅತ್ಯುತ್ತಮ ಸಂದೇಶವನ್ನು ನೀಡಿದ್ದಕ್ಕೆ ತುಂಬಾ ಧನ್ಯವಾದಗಳು. ವಿಶ್ವಮಾನವ ಪರಿಕಲ್ಪನೆ ಅಂದರೆ ಇದೇ! ಇಂತಹ ಜನರ ಸಂಗಮಾಡಿದರೂ ದೇವರು ನಮ್ಮೊಂದಿಗೇ ಬರುತ್ತಾನೆ. ಓರ್ವರಿಗೆ ನಾವು ಮಾಡಿದ ಸಹಾಯ ಅದೆಷ್ಟೋ ಜನರಿಗೆ ಬದುಕು ನೀಡಬಹುದು.

ಹೊಸ ವರುಷದ ಹಾರ್ದಿಕ ಶುಭ ಹಾರೈಕೆಗಳು.

Anonymous said...

www.tulasivana.com