Tuesday, October 13, 2009

ಪಶ್ಚಿಮ ತೀರದ ನಗರಿ ಕೋನಾ...

ಹಿಲೋದಲ್ಲಿ ಅವತ್ತು ನಮ್ಮ ಕೊನೆ ದಿವಸ.

ಹಿಲೋ ಬಿಡುವುದಕ್ಕಿಂತ ಮುಂಚೆ ಹತ್ತಿರದಲ್ಲೇ ಇದ್ದ ಚಿಕ್ಕ ಕಸೂತಿ ಅಂಗಡಿಗೆ ದಾಳಿ ಇಟ್ಟಳು ನನ್ನಾಕೆ. ಅಲ್ಲೊಂದಿಷ್ಟು ಸುಂದರ ಕುಸುರಿ ಕೆಲಸದ ಸರಗಳು, ತೆಂಗಿನ ಗರಿಗಳಿಂದ ಮಾಡಿದ ಪರ್ಸ್ ಕಾರ್ ಸೇರಿದವು.

ಹಿಲೋದಿಂದ ಕೋನಾದ ಕಡೆ ನಮ್ಮ ಪಯಣ ಶುರುವಾಯ್ತು. ನಾವು ಬರುವಾಗ ಹವಾಯಿ ಪೂರ್ವ ತೀರಕ್ಕೆ ಅಂಟಿಕೊಂಡಿರುವ ರಸ್ತೆಯಲ್ಲಿ ಬಂದಿದ್ದೆವು. ಈಗ ಭಿನ್ನತೆಯಿರಲೆಂದು ಹವಾಯಿ ಮಧ್ಯ ಭಾಗದಲ್ಲಿ ಹರಿದು ಹೋಗುವ ಸ್ಯಾಡಲ್ ರಸ್ತೆಗೆ ಇಳಿದೆವು. ಸುಮಾರು ೯೦ ಮೈಲಿಯ ರಸ್ತೆಯಾದರೂ, ಮೊದಲ ೪೦ ಮೈಲಿಯಂತೂ ವಿಪರೀತ ತಿರುವುಗಳು. ನಂತರ ದಾರಿಯಲ್ಲಿ ಸಿಕ್ಕಿದ್ದು ಒಂದು ಬೆಟ್ಟದ ಮೇಲಿದ್ದ ವೀಕ್ಷಣಾಲಯ. ನಂತರ ಅಮೇರಿಕೆ ಸೇನೆಯ ಯಾವುದೋ ಒಂದು ನಿರ್ಬಂಧಿತ ಪ್ರದೇಶ.ಅದಾದ ಮೇಲೆ ಒಮ್ಮೆಗೆ ರಸ್ತೆ ಬೆಟ್ಟ ಎರುತ್ತಾ ಸಾಗುತ್ತದೆ. ಅಮೇಲೆ ಹಸಿರು ಹುಲ್ಲುಗಾವಲು ಪ್ರದೇಶ. ಹೀಗೆ ಸುಮಾರು ೩ ಗಂಟೆಗಳ ನಂತರ ಕೋನ ನಗರಕ್ಕೆ ತಲುಪಿದೆವು.

ಕೋನಾ...

ಬಿಗ್ ಐಲೆಂಡ್‍ನ ಪಶ್ಚಿಮ ತೀರದ ನಗರ. ಕಿಲಹೂ ಕೋನ ಆ ನಗರದ ಪೂರ್ಣ ಹೆಸರು. ಕಮಹಮಯ ತನ್ನ ಸಾಮ್ರಾಜ್ಯದ ರಾಜಧಾನಿಯಾಗಿ ಬೆಳಸಿದ ನಗರ. ಮುಂದೆ ಆ ರಾಜಧಾನಿ ಹೊನಲುಲಿಗೆ ಸ್ಥಳಾಂತರವಾದ ನಂತರ, ಕೋನಾ ಹವಾಯಿಯ ರಾಜ ಮನೆತನದ ವಿಶ್ರಾಂತಿ ನಗರವಾಗಿತ್ತು. ಈಗ ಇದು ಬಿಗ್ ಐಲೆಂಡ್‍ನ ಪ್ರಮುಖ ಪ್ರವಾಸಿ ಸ್ಥಳ.

ಅಲೀ ಡ್ರೈವ್, ಸಮುದ್ರ ತೀರದುದ್ದಕ್ಕೂ ಹಬ್ಬಿರುವ ರಸ್ತೆ. ಕೋನಕ್ಕೆ ಆಗಮಿಸುವ ಪ್ರವಾಸಿಗರು ಮೊದಲು ಇಳಿಯುವುದು ಈ ಅಲೀ ಡ್ರೈವ್‍ಗೆ. ಕೋನದ ಬಹುತೇಕ ಪ್ರಮುಖ ಹೋಟೆಲ್‍ಗಳು ಇರುವುದು ಈ ರಸ್ತೆಯಲ್ಲೇ. ಹಾಗೆಯೇ ಎಲ್ಲಾ ನಮೂನೆಯ ಶಾಪಿಂಗ್‍ಗೆ ಬೇಕಾದ ಅಂಗಡಿಗಳು ಇವೆ.

ಹತ್ತಿರದಲ್ಲೇ ಇದ್ದ ಪಾರ್ಕಿಂಗ್‍ನಲ್ಲಿ ಕಾರ್ ನಿಲ್ಲಿಸಿ, ಅಲೀ ಡ್ರೈವ್‍ಗೆ ಇಳಿದೆವು. ಆ ಮಧ್ಯಾಹ್ನದ ಬಿಸಲಿನಲ್ಲೂ ಆ ತೀರದೂದ್ದಕ್ಕೂ ಓಡುತ್ತಿದ್ದವರು ಕಂಡರು.ಅವರೆಲ್ಲಾ ಹವಾಯಿ ಪ್ರಸಿದ್ಧ ’ಐರೆನ್‍ಮ್ಯಾನ್ ಟ್ರೈಥಾಲಾನ್’ಗೆ ತಯಾರಾಗುತ್ತಿದ್ದ ಸ್ಪರ್ಧಾಳುಗಳು. ಐರೆನ್‍ಮ್ಯಾನ್ ಟ್ರೈಥಾಲಾನ್, ಪ್ರಪಂಚದ ಅತ್ಯಂತ ಕಠಿಣ ಟ್ರೈಥಾಲಾನ್. ಸುಮಾರು ಎರಡುವರೆ ಮೈಲಿ ಸಮುದ್ರದಲ್ಲಿ ಈಜು, ೧೧೨ ಮೈಲು ಸೈಕಲ್ ಸವಾರಿ ಕೊನೆಗೆ ೨೬ ಮೈಲಿ ಮೆರಥಾನ್ ಓಟ. ಎಂತಹ ಅಥ್ಲೀಟ್‍ಗೂ ಕಠಿಣ ಸವಾಲೇ. ಇದರಲ್ಲಿ ವಿಶ್ವದ ಯಾವುದೇ ದೇಶದವರು ಭಾಗವಹಿಸಬಹುದು.

ಅಲೀ ಡ್ರೈವ್‌ನ ಪ್ರಮುಖ ಆಕರ್ಷಣೆ - ಅಲ್ಲಿನ ವಿವಿಧ ಅಂಗಡಿಗಳು. ಟೀ ಶರ್ಟ್, ಟೋಪಿಯಿಂದ ವಿವಿಧ ಅಭರಣಗಳವರೆಗೆ ಎಲ್ಲಾ ನಮೂನೆಗಳು ಇಲ್ಲಿವೆ. ಸುಮ್ಮನೆ ಆ ಅಂಗಡಿಗಳ ಮುಂದೆ ಅಲೆಯುವುದು ಒಂದು ಒಳ್ಳೆಯ ಚಟುವಟಿಕೆಯೇ ! ನಾವು ಅಲ್ಲಿದ್ದ ಒಂದು ಹವಾಯಿಯನ್ ಆಭರಣಗಳ ಅಂಗಡಿಗೆ ಹೊಕ್ಕು, ಒಂದು ಹವಾಯಿಯನ್ ಕಲ್ಲುಗಳ ಆಭರಣ ಇಷ್ಟವಾಗಿ, ಅಲ್ಲಿಂದ ಆ ಅಭರಣ ನನ್ನಾಕೆ ಕೊರಳು ಸೇರಿತ್ತು !

ಅಲೀ ಡ್ರೈವ್‍ನಲ್ಲಿ ಇರುವ ಇನ್ನೊಂದು ಅಕರ್ಷಣೆ - ಹುಲಿಹೀ ಅರಮನೆ. ಹವಾಯಿ ರಾಜಮನೆತನದ ರಜೆಕಾಲದ ಅರಮನೆ ಈಗ ಮೂಸಿಯಂ. ಸುಮಾರು ೧೦೦-೧೫೦ ವರ್ಷ ಹಳೆಯ ಈ ಕಟ್ಟಡ, ಅಷ್ಟೇನೂ ದೊಡ್ಡದಿಲ್ಲ, ಅಂತಹ ಕರಕುಶಲತೆಯಾಗಲಿ, ಕುಸುರಿಕಲೆಯಾಗಲಿ ಯಾವುದೂ ಕಂಡುಬರಲಿಲ್ಲ.

ಅಲ್ಲಿಂದ ನಾವು ಒಂದು ಸುಂದರ ಬೀಚ್‍ನೆಡೆಗೆ ಹೊರಟೆವು. ಕೋನದಿಂದ ಸುಮಾರು ೫೦ ನಿಮಿಷದ ದೂರದಲ್ಲಿ ಇರುವ ಬೀಚ್ ಇದು. ಬೇರೆಲ್ಲಾ ಬೀಚ್‍ಗಳಂತೆ ಇಲ್ಲಿ ಜನಸಾಂದ್ರತೆ ಕಡಿಮೆ. ತುಂಬಾ ಕಡಿಮೆ ಜನಕ್ಕೆ ಗೊತ್ತಿರುವ ಸ್ಥಳ. ಇಲ್ಲಿಗೆ ಕೆಲವು ಸಾರಿ ಬಂದಿದ್ದ ನನ್ನ ಸ್ನೇಹಿತರೊಬ್ಬರು ಹೇಳದಿದ್ದರೆ ನಮಗೂ ಈ ಸುಂದರ ಬೀಚ್‍ ಬಗ್ಗೆ ತಿಳಿಯುತ್ತಿರಲಿಲ್ಲ.

ತಿಳಿನೀಲಿ ಬಣ್ಣದ ಸಾಗರ ಮತ್ತು ಸುಂದರ-ಚಿಕ್ಕ ಮರಳಿನ ತೀರ ಅದ್ಭುತವಾಗಿತ್ತು. ಸಮುದ್ರದ ನೀರು ಪಾರದರ್ಶಕವಾಗಿ ತಳದ ಕಲ್ಲುಗಳು ಕಾಣುತ್ತಿದ್ದವು. ಆ ಮರಳು-ನೀರಿನ್ನೂದ್ದಕ್ಕೂ ಬರಿಗಾಲಿನಲ್ಲಿ ಸ್ವಲ್ಪ ಹೊತ್ತು ನಮ್ಮ ಸುತ್ತಾಟ ನಡೆಯಿತು. ನಂತರ ಅಲ್ಲೇ ಮರಳಲ್ಲಿ ಸ್ವಲ್ಪ ಹೊತ್ತು ಬಿದ್ದುಕೊಂಡಿದ್ದೆ. ಆಗಲೇ ನನ್ನಾಕೆ ನೀರಲ್ಲಿ ಇಳಿದು ಆಗಲೇ ಆಟವಾಡುತ್ತಿದ್ದಳು.

ಸಂಜೆ ಕೆಂಪಾಗುವರೆಗೆ ಅಲ್ಲೇ ನೀರನಲ್ಲಿ ಆಟವಾಡಿ, ಬೀಚ್‍ನಲ್ಲಿ ಮತ್ತೆ ತಿರುಗಾಡುವಷ್ಟರಲ್ಲಿ ಆಗಲೇ ಆರು ಗಂಟೆಯ ಸಮಯ. ನಮ್ಮ ವಾಪಸ್ ಯಾತ್ರೆ ಇನ್ನೊಂದು ಎರಡು ಗಂಟೆಯಲ್ಲಿ ಶುರುವಾಗಲ್ಲಿತ್ತು. ಆ ಬೀಚ್‍ಗೆ ವಿದಾಯ ಹೇಳಿ ನಮ್ಮ ಪಯಣ ಕೋನಾ ವಿಮಾನ ನಿಲ್ದಾಣದೆಡೆಗೆ ಹೊರಟಿತು. ದಾರಿಯುದ್ದಕ್ಕೂ ಕೆಂಪಾದ ಸೂರ್ಯ ಆ ನೀಲ ಸಾಗರದಲ್ಲಿ ಕರಗಿ ಹೋಗುವದನ್ನು ನೋಡುತ್ತಾ ನಡೆದವು.

ಕೋನಾ ವಿಮಾನ ನಿಲ್ದಾಣಕ್ಕೆ ಬಂದು, ನಮ್ಮ ಹವಾಯಿ ಯಾತ್ರೆಯ ಪ್ರಮುಖ ಭಾಗವಾದ ಕಾರನ್ನು ಮರಳಿ ಕೊಟ್ಟೆವು. ಅಲ್ಲಿಂದ ಸೆಕ್ಯುರಿಟಿ ತಪಾಸಣೆ ಮುಗಿಸಿಕೊಂಡು ವಿಮಾನ ಹೊಕ್ಕೆವು. ಜಾತ್ರೆಗೆ ಹೋಗಿ ಮರಳಿ ಬರುವಾಗ ಇರುವ ಬಸ್ಸಿನಂತೆ ಇತ್ತು ಸನ್ನಿವೇಶ ! ಎಲ್ಲರ ಮೈಮೇಲೂ ಹವಾಯಿಯ ಶರ್ಟ್‍ಗಳು, ಕೆಲವರು ಹವಾಯಿ ಹಾರಗಳನ್ನು ಧರಿಸಿ ಬಂದಿದ್ದರು. ಎಲ್ಲರ ಹತ್ತಿರವೂ ಹವಾಯಿಯಲ್ಲಿ ತೆಗೆದುಕೊಂಡ ಅನೇಕ ವಸ್ತುಗಳು. ಹಬ್ಬದಂತಹ ವಾತಾವರಣ !

ಕೋನಾದ ಬಿಟ್ಟು ವಿಮಾನ ಆಕಾಶಕ್ಕೆ ಹಾರಿದಾಗ ಆಗಲೇ ರಾತ್ರಿ ೧೦ರ ಸಮಯ.

ಸುಂದರ ಬೀಚ್‍ಗಳು, ಕಿತ್ತಲೆ ಬಣ್ಣದ ಲಾವಾ, ಹಸಿರು ಕಾನನ, ಜಲಪಾತಗಳು, ಜ್ವಾಲಾಮುಖಿ...ಮನಸ್ಸು ಖುಷಿಯಾಗಿ ಮೆಲುಕು ಹಾಕುತಿತ್ತು.

ಬೆಳಗಿನ ತಿರುಗಾಟದಿಂದ ಸುಸ್ತಿನಿಂದ ಕೆಲವು ಕ್ಷಣಗಳಲ್ಲಿ ನಿದ್ದೆಗೆ ಹಾರಿದ್ದೆವು...

ಮತ್ತೆ ಹವಾಯಿ ಕಾಡುತ್ತಿತ್ತು..

Wednesday, September 09, 2009

ಅಪ್ರತಿಮ ಯೋಧನೊಬ್ಬನ ಕಥೆ...

ಹವಾಯಿಯಲ್ಲಿ ಇಳಿದಾಗಿನಿಂದ ಇಲ್ಲಿಯವರೆಗೆ ಎಲ್ಲಿ ಆಲೆದಾಡಿದರೂ ಒಂದು ಹೆಸರು ಪದೇ ಪದೇ ಕಾಣಿಸುತಿತ್ತು.

ಕಮಹಮಯ...

ಅನೇಕ ನಗರಗಳ ಮುಖ್ಯ ರಸ್ತೆಗಳು, ಅಲ್ಲಿನ ವಿಶ್ವವಿದ್ಯಾಲಯ..ಎಲ್ಲೆಲ್ಲೂ ಕಮಹಮಯ ಹೆಸರು.

ಹವಾಯಿ ದ್ವೀಪಗಳ ಭೌಗೋಳಿಕ ಮತ್ತು ನೈಸರ್ಗಿಕ ಸೌಂದರ್ಯ್ಯದಷ್ಟೇ ವಿಭಿನ್ನವಾಗಿರುವುದು ಅದರ ಇತಿಹಾಸ.

ನಮ್ಮ ಕಾರ್ ಅಂತಹ ಒಂದು ಐತಿಹಾಸಿಕ ತಾಣದೆಡೆಗೆ ಹೊರಟಿತ್ತು. ಪುಕೋಹಲ ಹಿಹೂ ಎಂಬುದು ಹವಾಯಿ ಅತ್ಯಂತ ಪುರಾತನ ದೇವಾಲಯ ಮತ್ತು ಪ್ರಾಚೀನ ಸ್ಥಳ. ಹಿಲೋದಿಂದ ಸುಮಾರು ೨ ಗಂಟೆಗಳ ಪಯಣ..

ಪಾಲಿನೇಷಿಯನ್ ಜನ ಈ ದ್ವೀಪಗಳಿಗೆ ಬಂದು, ತಮ್ಮ ವಾಸಸ್ಥಳ ಮಾಡಿಕೊಳ್ಳುವುದರಿಂದ ಶುರುವಾಗುತ್ತದೆ ಹವಾಯಿ ಇತಿಹಾಸ. ನಂತರದ ಪ್ರಮುಖ ಘಟ್ಟ- ಬ್ರಿಟಿಷ್ ನಾವಿಕ ಕ್ಯಾಪ್ಟನ್ ಕುಕ್‍ ಈ ದ್ವೀಪಗಳನ್ನು ಅನ್ವೇಷಿಸುವುದು. ನಡುವೆ ಹವಾಯಿ ಸಾಮ್ರಾಜ್ಯ ಸ್ಥಾಪನೆ. ಕ್ರೈಸ್ತ ಮಿಷಿನರಿಗಳ ಆಗಮನ, ಫ್ರೆಂಚ್‍ರೊಂದಿಗೆ ಯುದ್ಧ, ಆಂತರಿಕ ಯುದ್ಧಗಳು, ಆಮೇರಿಕೆದೊಂದಿಗೆ ಒಪ್ಪಂದ, ಕೊನೆಗೆ ಅಮೇರಿಕೆಯ ೫೦ನೇ ರಾಜ್ಯವಾಗಿ ಸೇರ್ಪಡೆ, ಎರಡನೇಯ ವಿಶ್ವಯುದ್ಧದಲ್ಲಿ ಜಪಾನಿಯರಿಂದ ಹವಾಯಿ ಪರ್ಲ್ ಹಾರ್ಬರ್ ಮೇಲೆ ದಾಳಿ- ಪರಿಣಾಮ ಯುದ್ಧಕ್ಕೆ ಅಮೇರಿಕದ ಪ್ರವೇಶ......

ಹೀಗೆ ತೆರೆದುಕೊಳ್ಳುತ್ತಾ ಹೋಗುತ್ತದೆ ಹವಾಯಿ ಇತಿಹಾಸ ರಕ್ತಸಿಕ್ತವಾಗಿ ...

ಇಂತಹ ಹವಾಯಿಯ ಇತಿಹಾಸದಲ್ಲಿ ಪ್ರಮುಖ ಘಟ್ಟವೇ...ಹವಾಯಿ ಸಾಮ್ರಾಜ್ಯ ಸ್ಥಾಪನೆ.

ಅದು ೧೭೦೦ ಸಮಯ, ಹವಾಯಿ ದ್ವೀಪಗಳನ್ನು ಅಲ್ಲಿನ ಅಸಂಖ್ಯಾತ ಬುಡಕಟ್ಟಿನ ನಾಯಕರು ಆಳುತ್ತಿದ್ದರು. ದ್ವೀಪಗಳ ನಡುವೆ ಯುದ್ಧ ಸರ್ವೇಸಾಮಾನ್ಯವಾಗಿತ್ತು. ಹವಾಯಿ ಕತೆಗಳ ಪ್ರಕಾರ ಮಹಾನ್ ಯೋಧನೊಬ್ಬ ಈ ಎಲ್ಲಾ ದ್ವೀಪಗಳನ್ನು ಒಗ್ಗೂಡಿಸಿ, ಅದರ ರಾಜ್ಯಭಾರ ಮಾಡುತ್ತಾನೆಂದು, ಆ ಯೋಧ ಹುಟ್ಟಿದ ದಿನದಂದು ಧೂಮಕೇತುವೊಂದು ಕಾಣಿಸುವುದೆಂದು ಪ್ರತೀತಿ.

ಆಂತಹ ಧೂಮಕೇತುವೊಂದು ಕಾಣಿಸಿಕೊಂಡ ದಿನದಂದು ಹುಟ್ಟಿದವನೇ ಕಮಹಮಯ.(೧೭೫೦ ರ ಸಮಯದಲ್ಲಿ ಹವಾಯಿಯಲ್ಲಿ ಹ್ಯಾಲಿ ಧೂಮಕೇತು ಕಾಣಿಸಿಕೊಂಡ ಉಲ್ಲೇಖಗಳಿವೆ). ಆಗ ಆಳ್ವಿಕೆ ನಡೆಸುತ್ತಿದ್ದ ಆಳಪ ಎನ್ನುವ ರಾಜ, ಈ ಮಗು ಬೆಳೆದರೆ ತನ್ನ ಅಧಿಕಾರಕ್ಕೆ ಕೊನೆಗಾಲವೆಂದು, ಈ ಮಗುವನ್ನು ಕೊಲ್ಲಲು ಆದೇಶಿಸುತ್ತಾನೆ. ಇದನ್ನು ಮೊದಲೇ ಅರಿತಿದ್ದ ಕಮಹಮಯಯ ಪೋಷಕರು, ಆ ಮಗುವನ್ನು ಹುಟ್ಟಿದ ಕೂಡಲೇ ಇನ್ನೊಬ್ಬ ಪಂಗಡದ ನಾಯಕನಿಗೆ ಗುಪ್ತವಾಗಿ ವರ್ಗಾಯಿಸಿರುತ್ತಾರೆ. ಆ ಮಗು ಅಲ್ಲಿ ಗುಪ್ತವಾಗಿ ಬೆಳೆಯುತ್ತದೆ. ಸುಮಾರು ಐದು ವರ್ಷದ ನಂತರ, ಆ ರಾಜನಿಗೆ ತಾನು ಮಾಡಿದ್ದು ತಪ್ಪೆಂದು ಅನಿಸಿ, ಆ ಮಗುವನ್ನು ಹುಡುಕಿಸಿ ಮರಳಿ ಕರೆತಂದು ಶಿಕ್ಷಣ ಕೊಡಿಸುತ್ತಾನೆ. ಅಲ್ಲಿ ಕಮಹಮಯನ ಯುದ್ಧ ಮತ್ತು ರಾಜತಾಂತ್ರಿಕತೆಯ ಶಿಕ್ಷಣ ನಡೆಯುತ್ತದೆ.

ಆಳಪ ರಾಜ ತೀರಿಕೊಂಡಾಗ, ಅವನ ಸ್ಥಾನ ತುಂಬಲು ಆಳಪನ ಮಗ ಮತ್ತು ಆಳಪನ ಸಂಬಂಧಿಯೊಬ್ಬನ ನಡುವೆ ಸಂಘರ್ಷ ಉಂಟಾಗುತ್ತದೆ. ಆಗ ಕಮಹಮಯ ಆಳಪನ ಸಂಬಂಧಿಗೆ ಬೆಂಬಲ ನೀಡಿ, ಆತನ ಮಂತ್ರಿಮಂಡಲದಲ್ಲಿ ಸ್ಥಾನ ಪಡೆಯುತ್ತಾನೆ. ಮುಂದೆ ಈ ರಾಜನೂ ಸತ್ತಾಗ ಕಮಹಮಯ ತಾನೇ ರಾಜನಾಗುತ್ತಾನೆ. ಬ್ರಿಟಿಷ್ ಮತ್ತು ಅಮೇರಿಕದ ವ್ಯಾಪಾರಿಗಳ ಜೊತೆ ಸಂಧಾನ ಮಾಡಿಕೊಂಡು, ಅವರಿಂದ ಹೊಸ ಆಯುಧಗಳನ್ನು ಪಡೆಯುತ್ತಾನೆ. ಹೊಸ ಆಯುಧಗಳು, ಯುದ್ಧತಂತ್ರಗಳಿಂದ ಮುಂದಿನ ಹಲವು ವರ್ಷಗಳಲ್ಲಿ ಹವಾಯಿ ದ್ವೀಪದ ಎಲ್ಲಾ ನಾಯಕರನ್ನು ಮಣಿಸುತ್ತಾನೆ. ಮುಂದೆ ಹವಾಯಿಯನ್ನು ಒಂದು ಅಖಂಡ ಪ್ರಾಂತ್ಯವನ್ನಾಗಿ ರೂಪಿಸುತ್ತಾನೆ. ಹವಾಯಿನ್ ಜನರ ನೆಲ-ಕಲೆ-ಭಾಷೆ ಅಭಿವೃದ್ಧಿಗಾಗಿ ಅನೇಕ ಶಾಸನಗಳನ್ನು ಹೊರತರುತ್ತಾನೆ...ಹೀಗೆ ಹವಾಯಿಯ ಸುಪ್ರಸಿದ್ಧ ವ್ಯಕ್ತಿತ್ವವಾಗುತ್ತಾನೆ.

ಎರಡು ಗಂಟೆಗಳ ಪಯಣದ ನಂತರ ನಾವೀಗ ಪುಕೋಹಲ ಹಿಹೂ ತಲುಪಿದ್ದೆವು. ಅದೊಂದು ಕೆಂಪು ಕಲ್ಲುಗಳನ್ನು ಜೋಡಿಸಿ ಕಟ್ಟಿದ ಬೃಹತ್ ಕಟ್ಟಡ. ದೇವಾಲಯ ಅಂದೊಂಡನೆ ನಮ್ಮಲ್ಲಿನ ಕಲ್ಲಿನಲ್ಲಿ ಅರಳಿದ ದೇವಾಲಯಗಳು ಕಣ್ಮುಂದೆ ಬಂದವು. ಆದರೆ ಈ ದೇವಾಲಯದಲ್ಲಿ ಅಷ್ಟೊಂದು ಕರಕುಶಲತೆಯಾಗಲಿ ಅಥವಾ ಕುಸುರಿಕಲೆಯಾಗಲಿ ಇರಲೇ ಇಲ್ಲ. ಅದೊಂದು ಕಲ್ಲುಗಳನ್ನು ಒಟ್ಟಾಗಿ ಜೋಡಿಸಿಟ್ಟ ಕಟ್ಟಡವಾಗಿತ್ತು.

ಆ ಯುದ್ಧಗಾಲದಲ್ಲಿ ಎಲ್ಲವನ್ನೂ ಗೆಲ್ಲುತ್ತಾ ಬಂದ ಕಮಹಮಯ, ಒಬ್ಬ ನಾಯಕನೊಡನೆ ೮ ಸಾರಿ ಯುದ್ಧ ಮಾಡಿದರೂ ಯಾವುದೇ ಪಲಿತಾಂಶ ಬಂದೇ ಇರುವುದಿಲ್ಲ. ಆಗ ಒಬ್ಬ ಅರ್ಚಕನೊಬ್ಬ ಕಮಹಮಯನಿಗೆ, ಯುದ್ಧ ದೇವತೆಯ ಆರಾಧಿಸಲು ಒಂದು ದೇವಾಲಯ ಕಟ್ಟಲು ಸೂಚಿಸುತ್ತಾನೆ. ಆಗ ಕಟ್ಟಿದ್ದೇ ಪುಕೋಹಲ ಹಿಹೂ. ಇದರ ಕಟ್ಟಡ ಮುಗಿದಾಗ ಕಮಹಮಯ , ಆ ಪ್ರತಿಸ್ಪರ್ದಿ ನಾಯಕನಿಗೆ ಶಾಂತಿ ಮಾತುಕತೆಗೆ ಇಲ್ಲಿಗೆ ಆಹ್ವಾನಿಸುತ್ತಾನೆ. ಅಲ್ಲೆನೋ ಆಗುತ್ತೆಂದು ಗೊತ್ತಿದ್ದು, ಆ ನಾಯಕ ಬಂದಾಗ, ಅವನನ್ನು ಕಮಹಮಯಿಯ ಯೋಧರು ಹತ್ತೆಗೈಯುತ್ತಾರೆ.ಜಾನ್ ಯಂಗ್ ಎಂಬ ಬ್ರಿಟಿಷ್ ನಾವಿಕ ಕಮಹಮಯಿಯ ಯುದ್ಧ ಸಲಹೆಗಾರ. ಜಾನ್‍ನ ಮನೆ ಮತ್ತು ಅವನ ರಾಂಚ್ ಪುಕೋಹಲ ಹಿಹೂ ಹತ್ತಿರದಲ್ಲೆ ಇದೆ.

ಅಲ್ಲಿಂದ ಹಿಲೋಗೆ ಮರಳಿದಾಗ ಮಧ್ಯಾಹ್ನದ ಸಮಯ. ವಿಪರೀತ ಬಿಸಿಲು. ಹಿಲೋದಲ್ಲಿ ಕಮಹಮಯನ ೧೪ ಅಡಿ ಎತ್ತರದ ಬೃಹತ್ ಪ್ರತಿಮೆಯೊಂದಿದೆ. ಅದನ್ನು ನೋಡಿಕೊಂಡು,ನಮ್ಮ ಹೋಟೆಲ್ ಹತ್ತಿರವಿದ್ದ ಕೊಕೋನೆಟ್ ದ್ವೀಪಕ್ಕೆ ತೆರಳಿ, ಅಲ್ಲಿ ಸಮುದ್ರದ ದಡದಲ್ಲಿ ಕುಳಿತೆವು. ಬಿಸಿಲಿನ ದಗೆಯಿಂದ ದಡಕ್ಕಿಂತ ನೀರಿನಲ್ಲೇ ಹೆಚ್ಚು ಜನವಿದ್ದರು. ಅದ್ಯಾವುದೋ ಎತ್ತರದ ಕಟ್ಟೆಯಿಂದ ಹುಡುಗರು ಸಮುದ್ರಕ್ಕೆ ಧುಮುಕುತ್ತಿದ್ದರು. ಈ ಕಡೆ ಅನೇಕ ಕುಟುಂಬಗಳು ತಿಂಡಿ-ತಿನಿಸು ಮೆಲ್ಲುತ್ತಾ ಇದ್ದವು. ಅದ್ಯಾವುದೋ ಹವಾಯಿಯನ್ ಕುಟುಂಬವೊಂದು ನಮ್ಮನ್ನು ಕರೆದು ಮಾತಾಡಿಸಿ, ಭಾರತದ ಬಗ್ಗೆ ಒಂದು ರಾಶಿ ಕುತೂಹಲ ತೋರಿಸಿಕೊಂಡರು.

ಆ ತೀರ ಬಹುತೇಕ ಕಡೆ ಕಲ್ಲುಬಂಡೆಗಳಿಂದ ಆವೃತವಾಗಿತ್ತು. ಅದ್ಯಾವುದೋ ಕಲ್ಲು ಬಂಡೆಯ ಮೇಲೆ ನನ್ನಾಕೆ ಬ್ಯಾಗ್ ಒಂದರಲ್ಲಿ ತನ್ನ ಟವೆಲ್ ಇಟ್ಟುಕೊಂಡು ಕುಳಿತ್ತಿದ್ದಳು. ಆಗ ಅದೆಲ್ಲಂದಲೋ ಬಂದ ಒಂದು ದೊಡ್ಡ ಅಲೆ ಆ ಟವಲ್ ಬ್ಯಾಗ್ ನೀರಿಗೆ ಎಳೆದುಕೊಂಡು ಹೋಗಬೇಕೇ. ಸರಿ, ಅಂತಹ ಆಳವಾಗಿರಲಿಲ್ಲವೆಂದು ಎಣಿಸಿ, ಆ ಬ್ಯಾಗ್‍ನ ತರಲು ಇಳಿದೆ ನೀರಿಗೆ. ಅಲೆಯ ಹೊಡೆತಕ್ಕೆ ಆ ಬ್ಯಾಗ್ ತೇಲುತ್ತಾ ತೇಲುತ್ತಾ ಎಲ್ಲೆಲ್ಲೋ ಹೋಗತೊಡಗಿತ್ತು. ಕೊನೆಗೂ ಅದನ್ನು ಹಿಡಿದುಕೊಂಡು ನೀರಿನಿಂದ ಹೊರಬಂದಾಗ, ಪೂರ್ತಿ ಒದ್ದೆ ಒದ್ದೆ. ಆವಾಗ ನೋಡಿಕೊಂಡಿದ್ದು, ಕಾಲಿನಿಂದ ಜಿನುಗಿತ್ತಿದ್ದ ರಕ್ತ. ಆಗಿದ್ದೆನೆಂದರೆ, ಆ ಬ್ಯಾಗ್ ಹಿಡಿಯಲು ಹೋದಾಗ ತಳದಲ್ಲಿದ್ದ ಚೂಪಾದ ಕಲ್ಲುಗಳು ಪಾದವನ್ನು ಕೊಯ್ದಿದ್ದವು. ಅಂತಹ ದೊಡ್ಡ ಗಾಯವೇನೂ ಆಗಿಲ್ಲದಿದ್ದರೂ, ಹವಾಯಿ ನೆನಪಿಗೆಂದು ಕಾಲಿನಲ್ಲಿ ಗುರುತುಗಳು ಮೂಡಿದ್ದವು ! ಇನ್ನೂ ಬ್ಯಾಗ್‍ಗೋಸ್ಕರ ನಾನು ಮಾಡಿದ ಸಾಹಸ ನೋಡಿ ನನ್ನಾಕೆಯಿಂದ ಪೂರ್ತಿ ಅಂಕ ಸಿಕ್ಕವು!

(ಕೊನೆಯ ಭಾಗದಲ್ಲಿ: ಕೋನದ ವೀಕ್ಷಣೆ ಮತ್ತು ವೈಕೋಲವೆಂಬ ಮೋಹಕ ಬೀಚ್)

Thursday, August 20, 2009

ಜ್ವಾಲಾಮುಖಿಯ ಮುಂದೆ ನಿಂತು...

ಸಾವಿರಾರು ಮಿಲಿಯನ್ ವರ್ಷಗಳ ಹಿಂದೆ ಸಮುದ್ರದಲ್ಲಿನ ಜ್ವಾಲಾಮುಖಿಯ ನಿರಂತರ ಆಟದಿಂದ ಉಂಟಾಗಿದ್ದೇ ಈ ಹವಾಯಿ ದ್ವೀಪ ಸಮೂಹ. ಇಂತಹ ದ್ವೀಪ ಸಮೂಹವನ್ನು ಸೃಷ್ಟಿ ಮಾಡಿದ ಜ್ವಾಲಾಮುಖಿಯ ಈಗಲೂ ತನ್ನ ಇರುವಿಕೆಯನ್ನು ತೋರಿಸುತ್ತಿದೆ.

ಸನಿಹದಿಂದ ಆ ಆಗಾಧ ಶಕ್ತಿಯ ಜ್ವಾಲಾಮುಖಿಯನ್ನು ನೋಡಲು ಅತ್ಯಂತ ಪ್ರಶಸ್ತ ಸ್ಥಳ- ಹವಾಯಿ ವಾಲ್‍ಕೆನೊ ನ್ಯಾಷನಲ್ ಪಾರ್ಕ್.

ಹವಾಯಿ ದ್ವೀಪಗಳಲ್ಲೇ ಅಗ್ರಗಣ್ಯ ಪ್ರೇಕ್ಷಣೀಯ ತಾಣ.

ತಿಳಿದ ಮಟ್ಟಿಗೆ ಜಗತ್ತಿನ ಬೇರೆ ಎಲ್ಲೂ ಜ್ವಾಲಾಮುಖಿಯನ್ನು ಮುಖಾಮುಖಿ ನೋಡಲು ಸಾಧ್ಯವಿಲ್ಲವೇನೊ?

ಹಿಲೋ ನಗರದಿಂದ ಸುಮಾರು ೫೦ ನಿಮಿಷದ ಕಾರ್ ಪ್ರಯಾಣದ ನಂತರ ಆ ವಾಲ್‍ಕೆನೊ ನ್ಯಾಷನಲ್ ಪಾರ್ಕ್‍ನ ಬಾಗಿಲಲ್ಲಿ ಇದ್ದೆವು. ಮೌನಲೂ ಶಿಖರದಿಂದ ಸಮುದ್ರದವರೆಗೆ ಹಬ್ಬಿರುವ ೩೩೦೦೦೦ ಎಕರೆಯ ಬೃಹತ್ ಪ್ರದೇಶ. ಎರಡು ಸಕ್ರಿಯ ಜ್ವಾಲಾಮುಖಿಗಳು, ಲೆಕ್ಕವಿಲ್ಲದಷ್ಟು ಜ್ವಾಲಾಮುಖಿ ಕಣಿವೆಗಳು, ಆಕರ್ಷಕ ಲಾವಾ ಟ್ಯೂಬ್, ೧೮ ಮೈಲಿಗಳ ವಿಭಿನ್ನ ಡ್ರೈವ್...ಏನುಂಟು ಏನಿಲ್ಲ !

ನಾವು ಮೊದಲು ಹೊಕ್ಕಿದ್ದು ’ಕಿಲಯಿಯ ವಿಸಿಟರ್ ಸೆಂಟರ್’ . ಇಲ್ಲಿದ್ದ ರೇಂಜರ್ ಅಫೀಸರ್‌ಗಳು, ಎಲ್ಲೆಲ್ಲಿ ಪ್ರವಾಸಿಗರು ಹೋಗಲು ಕ್ಷೇಮ, ಎಲ್ಲೆಲ್ಲಿ ಹೋಗಬಾರದು ಎನ್ನುವುದರ ಬಗ್ಗೆ ಹೇಳುತ್ತಿದ್ದರು. ಹಾಗೇ ಪ್ರದೇಶದಲ್ಲಿನ ಗಾಳಿಯ ಸಧ್ಯದ ಸಲ್ಫರ್ ಡೈ ಆಕ್ಸಡ್ ಪ್ರಮಾಣದ ಬಗ್ಗೆಯೂ ತಿಳಿಸಿ, ಅಲ್ಲಿನ ಆಕರ್ಷಣೆಗಳ ವಿವರಣೆ ನೀಡಿದರು. ಹವಾಯಿ ಜ್ವಾಲಾಮುಖಿಯ ಕುರಿತಾದ ಸಾಕ್ಷ್ಯಚಿತ್ರ ನೋಡಿದ ಮೇಲಂತೂ ಜ್ವಾಲಾಮುಖಿ ನೋಡುವ ತುಡಿತ ಹೆಚ್ಚಾಯಿತು.

ಜ್ವಾಲಾಮುಖಿ ಪಾರ್ಕ್‍ನ ಹೃದಯ ಭಾಗದಲ್ಲಿ ಹಬ್ಬಿರುವುದೇ ಕ್ರೇಟರ್ ರೋಡ್. ಈ ರಸ್ತೆಯಲ್ಲಿ ಮೊದಲಿಗೆ ಸಿಗುವುದು - ಸ್ಟೀಮ್ ವೆಂಟ್ಸ್. ನೆಲದಲ್ಲಿನ ಬಿಲದಿಂದ ಹೊರಹೊಮ್ಮಿತ್ತಿದ್ದ ಬಿಸಿ ಹವಾ. ಎಲ್ಲಿ ನೋಡಿದರೂ, ಇಂತಹ ಅನೇಕ ಬಿಸಿ ಹವೆ ಬಿಲಗಳು. ಮಳೆಯಿಂದ ನೆಲದೊಳಗೆ ನೀರು, ನೆಲದೊಳಗಿನ ಕಲ್ಲುಬಂಡೆಗಳು, ತಳದಲ್ಲೆಲ್ಲೋ ಇರುವ ಲಾವಾದ ಬಿಸಿಯಾಗಿ, ಈ ನೀರು ಬಿದ್ದೊಡನೆ ಅವಿಯಾಗಿ ಹೊರಹೊಮ್ಮುತ್ತದೆ.

ಅಲ್ಲೇ ಸ್ಪಲ್ಪ ದೂರದಲ್ಲಿ ನಡೆದುಹೋದರೆ ಸಲ್ಫರ್ ಬ್ಯಾಂಕ್. ಜ್ವಾಲಾಮುಖಿಯಿಂದ ಹೊಮ್ಮಿದ ಅನಿಲಗಳಲ್ಲಿ ಇರುವ ಸಲ್ಫರ್, ಕಲ್ಲು ಬಂಡೆಗಳ ಮೇಲೆ ಕುಳಿತು ಆಗಿರುವುದೇ ಈ ಸಲ್ಪರ್ ಬ್ಯಾಂಕ್. ಹಳದಿ ಬಣ್ಣದ ಬಂಡೆಗಳು, ಯಾವುದೋ ಕಾಲೇಜ್ ‍ಲ್ಯಾಬ್‍ನಲ್ಲಿರುವಂತೆ ಸಲ್ಫರ್‌ನ ಘಾಟು ವಾಸನೆ.

ಕ್ರೇಟರ್ ರಿಮ್ ರಸ್ತೆಯಲ್ಲಿ ಮುಂದೆ ಡ್ರೈವ್ ಮಾಡುತ್ತಿದ್ದಂತೆ ಎದುರಿಗೆ ಥಾಮಸ್ ಜಾಗರ್ ಮ್ಯೂಸಿಯಂ. ಹವಾಯಿ ಜ್ವಾಲಾಮುಖಿಯ ಬಗ್ಗೆ ಅಧ್ಯಯನ ಮಾಡಲು ವೀಕ್ಷಣಾಲಯ ಪ್ರಾರಂಭಿಸಿದ ವಿಜ್ಞಾನಿ ಥಾಮಸ್ ಜಾಪರ್‌ನ ಹೆಸರಿನ ಈ ಮ್ಯೂಸಿಯಂ‍ನಲ್ಲಿ ಜ್ವಾಲಾಮುಖಿ ವಿಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು ಮತ್ತು ಮಾಹಿತಿ ಕೇಂದ್ರವಿದೆ.

ಮ್ಯೂಸಿಯಂ ಪಕ್ಕದಲ್ಲೆ ಇರುವುದೇ ’ಹಲಿಮಮಾವು ಕಂದಕ’. ಸುಮಾರು ೩೦೦೦ ಆಡಿಗಳಷ್ಟು ಅಗಲ ಮತ್ತು ಸುಮಾರು ೩೦೦ ಅಡಿ ಆಳದ ಕಂದಕ. ಹವಾಯಿಯನ್ ಜನರಿಗೆ ಜ್ವಾಲಾಮುಖಿ ದೇವತೆ ’ಪೆಲೇ’ ವಾಸಿಸುವ ಸ್ಥಳ. ೨೦-೮೦ ವರ್ಷಗಳ ಕೆಳಗೆ ಈ ಕಂದಕದಲ್ಲಿ ಕುದಿಯುವ ಲಾವ ಇತ್ತಂತೆ, ಈಗ ಅಲ್ಲಿ ಲಾವಾ ಕಂಡುಬರದಿದ್ದರೂ ಯಾವಾಗಲೂ ಹೊಗೆ ಉಗುಳುತ್ತಿರುತ್ತದೆ. ಇಡೀ ಕ್ರೇಟರ್ ರಿಮ್ ರೋಡ್ ಈ ಕಂದಕದ ಸುತ್ತ ಗಿರಕಿ ಹೊಡೆಯುತ್ತದೆ.


ಈಗ ಕ್ರೇಟರ್ ರಸ್ತೆಯ ಡ್ರೈವ್ ಮುಗಿಸಿ, ನಾವು ’ಚೈನ್ ಆಫ್ ಕ್ರೇಟರ್ಸ್’ ರಸ್ತೆಗೆ ಬಂದಿದ್ದೆವು. ಅದು ’ಲಾವಾ ಟ್ಯೂಬ್’. ಸ್ಥಳಿಯ ಪತ್ರಕರ್ತ ಲೋರಿನ್ ಥರ್ಸ್ಟನ್ ಇದನ್ನು ಪತ್ತೆ ಹಚ್ಚಿದ್ದರಿಂದ ಇದಕ್ಕೆ ಥರ್ಸ್ಟನ್ ಲಾವಾ ಟ್ಯೂಬ್ ಎಂಬ ಹೆಸರು. ದಟ್ಟ ಕಾನನದ ನಡುವೆ ಹುದುಗಿರುವ ಇದು ಲಾವಾ ಹರಿದಾಗ ಆಗಿದ್ದಂತೆ. ಹರಿಯುತ್ತಿದ್ದ ಲಾವಾದ ಹೊರ ಪದರ ಗಟ್ಟಿಯಾಗಿ ಆಗಿರುವ ಈ ಗುಹೆಯಲ್ಲಿ ನಡೆಯುವುದು ವಿಭಿನ್ನ ಅನುಭವ. ಮುಂದೆ ಇನ್ನೊಂದು ಗುಹೆಯಿತ್ತಿದ್ದರೂ, ಅಲ್ಲಿ ತುಂಬಾ ಗಾಢ ಕತ್ತಲು, ಟಾರ್ಚ್ ಇಲ್ಲದೆ ಒಳಗೆ ಹೋಗಲ್ಲಿಕ್ಕೆ ಆಗುವುದಿಲ್ಲ.ನಮ್ಮ ಬಳಿ ಟಾರ್ಚ್ ಇಲ್ಲದ ಕಾರಣ ನಾವು ಆ ಸಾಹಸಕ್ಕೆ ಹೊರಡಲಿಲ್ಲ.


ಅಲ್ಲಿಂದ ಮುಂದೆ ಡ್ರೈವ್ ಮಾಡುತ್ತಿದ್ದಂತೆ ದಾರಿಯ ಅಕ್ಕಪಕ್ಕ ಎಲ್ಲೆಲ್ಲೂ ಕಪ್ಪು ಲಾವಾ ಬಂಡೆ. ಸುಮಾರು ೮ ಮೈಲಿಯ ವಿನೂತನ ದೃಶ್ಯಾವಳಿ. ದಾರಿ ಒಮ್ಮೆಗೆ ಕೊನೆಗೊಳ್ಳುತ್ತದೆ, ಯಾಕೆಂದರೆ ಅಲ್ಲಿಂದ ಮುಂದೆ ರಸ್ತೆ ಇಲ್ಲವೇ ಇಲ್ಲ. ಇದ್ದ ರಸ್ತೆಯ ಮೇಲೆ ಲಾವಾ ಹರಿದು ಗಟ್ಟಿ ಬಂಡೆಯಾಗಿ ಈಗ ಆ ರಸ್ತೆ ಲಾವಾ ಬಂಡೆಗಳ ಅಡಿ ಕಳೆದುಹೋಗಿದೆ. ಅಲ್ಲಿಂದ ಇಳಿದು ನಾವು ಬಂಡೆಗಳನ್ನೇರಿ ಹಾಗೇ ಮುಂದುವರಿದೆವು. ಹೀಗೆ ಸುಮಾರು ೧೫-೨೦ ನಿಮಿಷ ಬಂಡೆಗಳಲ್ಲಿ ಸುಳಿದಾಡಿ ಅಲ್ಲಿ ಮೊದಲಿದ್ದ ರಸ್ತೆಯ ತುಣುಕುಗಳನ್ನು ನೋಡುತ್ತಾ ಮತ್ತೆ ರಸ್ತೆಗೆ ಮರಳಿದೆವು.


ಇಷ್ಟೆಲ್ಲಾ ತಿರುಗಾಡುವಷ್ಟರಲ್ಲಿ ಆಗಲೇ ಸಂಜೆ ಆರುವರೆ ಸಮಯ. ಅದರೆ ನಾವು ನೋಡಬೇಕೆಂದಿದ್ದ ಪ್ರಮುಖವಾದದ್ದನ್ನು ಇನ್ನೂ ನೋಡೇ ಇರಲಿಲ್ಲ. ಹೌದು, ಇನ್ನೂ ಹರಿಯುವ ಲಾವಾದ ದರ್ಶನ ಆಗಿರಲಿಲ್ಲ.ಹರಿಯುವ ಲಾವಾ ನೋಡಲು ಪ್ರಶಸ್ತ ಸ್ಥಳವೆಂದರೆ ಕಾಲಪನ . ಆದರೆ ಅ ಸ್ಥಳವಿದ್ದದ್ದು ಅಲ್ಲಿಂದ ೪೫ ಮೈಲಿ ದೂರದಲ್ಲಿ ಮತ್ತು ಇನ್ನೊಂದು ವಿಷಯವೆಂದರೆ ಆ ಸ್ಥಳಕ್ಕೆ ೮ ಗಂಟೆಯ ಒಳಗೆ ಬರುವ ವಾಹನಗಳಿಗಷ್ಟೇ ಮಾತ್ರ ಪ್ರವೇಶ. ಆಗಿದ್ದಾಗಲಿ ಎಂದು ಅಲ್ಲಿಗೆ ಹೊರಟೆ ಬಿಟ್ಟೆವು. ಹವಾಯಿ ಇನ್ನೊಂದು ವಿಶೇಷವೆಂದರೆ ಇಲ್ಲಿನ ೨ ಲೇನ್ ದಾರಿಗಳು. ಅಮೇರಿಕದ ಬೇರೆಡೆ ಇರುವಂತೆ ಇದನ್ನು ಫ್ರೀವೇ ಅನ್ನಲಾಗುವುದಿಲ್ಲ. ಇಲ್ಲಿ ತುಂಬಾ ನಿಧಾನ ಸಾಗುವ ಟ್ರಾಫಿಕ್. ಕಿಲಯಿಯ ಹೆಸರಿನ ಆ ಜ್ವಾಲಾಮುಖಿ, ೧೯೮೪ರಿಂದಲೂ ನಿರಂತರವಾಗಿ ಸಿಡಿಯುತ್ತಿರುವ ಎಕೈಕ ಸಕ್ರಿಯ ಜ್ವಾಲಾಮುಖಿ. ನಾವು ಇನ್ನೇನೂ ಆ ಜ್ವಾಲಾಮುಖಿ, ಆ ಲಾವಾ ದೃಶ್ಯ ತಪ್ಪಿಸಿಕೊಳ್ಳುತ್ತೇವೆ ಎಂದುಕೊಳ್ಳುತ್ತಲೇ ಆ ಸ್ಥಳ ಮುಟ್ಟಿದಾಗ ಎಂಟಾಗಲಿಕ್ಕೆ ಇದದ್ದು ೪ ನಿಮಿಷ !

ಆಗಲೇ ದಟ್ಟ ಕತ್ತಲು ಕವಿದಿತ್ತು. ಈ ದಟ್ಟ ಕತ್ತಲೆಯಲ್ಲಿ ಹೇಗೆ ಲಾವಾ ಹುಡುಕುವುದು ಎಂದುಕೊಳ್ಳುತ್ತಿದ್ದರೆ, ಅಲ್ಲಿದ್ದ ಎಲ್ಲರ ಕೈಯಲ್ಲಿ ಟಾರ್ಚ್‍ಗಳು. ಓಹ್, ಟಾರ್ಚ್ ಇಲ್ಲದೇ ಹೇಗೆ ಹೋಗುವುದು ಎನ್ನುವಾಗ ಸಿಕ್ಕ ಆ ವ್ಯಕ್ತಿ. ಒಂದು ಕೃತಕ ಕಣ್ಣು, ನೋಡಲು ಸ್ಪಲ್ಪ ಭಯವುಂಟು ಮಾಡುವಂತಿದ್ದ ಆತ. ಅಲ್ಲಿಗೆ ಬಂದ ಕಾರ್‌ಗಳನ್ನು ಇರುವ ಜಾಗದಲ್ಲಿ ಪಾರ್ಕ್ ಮಾಡಿಸಲು ನೆರವಾಗುತ್ತಿದ್ದ. ನಾವು ಇಲ್ಲಿಯವರೆಗೆ ಬಂದು ಟಾರ್ಚ್ ಇಲ್ಲದಿರುವ ಒಂದೇ ಕಾರಣಕ್ಕೆ ಏನೂ ನೋಡದೇ ಹೋಗಬೇಕಾಯಿತಲ್ಲ ಎಂದುಕೊಳ್ಳುತ್ತಿದ್ದೆವು. ಬಹುಷಃ ನಮ್ಮ ಸಂಕಟ ಅರ್ಥವಾಯಿತೇನೋ ಎಂಬಂತೆ ನಮ್ಮನ್ನು ಕರೆದುಕೊಂಡು ಹೋಗಿ, ತನ್ನ ವಾಹನದಲ್ಲಿದ್ದ ಎರಡು ಟಾರ್ಚ್‍ನ್ನು ನೀಡಿದ. ನಮಗೆ ನಂಬಲಿಕ್ಕೆ ಆಗಲಿಲ್ಲ.

ಟಾರ್ಚ್ ಬೆಳಕಿನಲ್ಲಿ ನಡೆಯುತ್ತಿದ್ದಂತೆ ಕಣ್ಣುಂದೆ ನೂರಾರು ಮಿಣಕು ದೀಪಗಳು. ಆ ಮಿಣಕು ದೀಪಗಳು ಚಲಿಸುತ್ತಿದ್ದವು. ಆಗ ಗೊತ್ತಾಗಿದ್ದು, ಅವೆರಲ್ಲ ನಮ್ಮಂತೆ ಟಾರ್ಚ್ ಹಿಡಿದು ನಡೆಯುತ್ತಿದ್ದ ಜನವೆಂದು ! ಆ ಕಗ್ಗತ್ತಲೆಯಲ್ಲಿ ಆ ಲಾವಾ ಬಂಡೆಗಳ ಮೇಲೇ ಹುಷಾರಾಗಿ ಕಾಲಿಡುತ್ತಾ ಹೋಗುತ್ತಿದ್ದೆವು. ಆ ಲಾವಾ ಬಂಡೆಗಳ ಮೇಲೆ ದಾರಿಗಾಗಿ ಬಣ್ಣದಿಂದ ಗುರುತುಗಳಿದ್ದವು. ಎಲ್ಲರೂ ಆ ಗುರುತುಗಳನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದೆವು. ಹೀಗೆ ಕತ್ತಲಲ್ಲಿ, ಈ ಮಿಣುಕು ಬೆಳಕಿನಲ್ಲಿ, ಜೊತೆಯಲ್ಲಿ ನನ್ನ ಹುಡುಗಿ..ಹೀಗೆ ಸಾಗಲಿ ಈ ದಾರಿ ಇನ್ನೂ ದೂರ ಅನಿಸುತ್ತಿದ್ದಾಗ, ಅಲ್ಲೆಲ್ಲೋ ಆಕಾಶಕ್ಕೆ ಕೇಸರಿ ಬಣ್ಣ ಬಳಿದಂತೆ ಗೋಚರಿಸಿತು. ಬಿಳಿ ಹೊಗೆ ಸ್ಪಷ್ಟವಾಗಿ ಕಾಣತೊಡಗಿತು. ಆ ಗುರುತುಗಳು ಈಗ ನಮ್ಮನ್ನು ಸಮುದ್ರದ ಅಂಚಿನ ಲಾವಾ ಕಲ್ಲುಗಳ ಮಧ್ಯೆ ತಂದು ನಿಲ್ಲಿಸಿತ್ತು. ಪಕ್ಕಕ್ಕೆ ತಿರುಗೆ ನೋಡಿದರೆ ಒಂದು ಕ್ಷಣ ಎಲ್ಲರೂ ಸ್ತಬ್ಧ ! ಕುದಿಯುವ ಲಾವಾ ಕಣ್ಣ್ಮುಂದೆ !


ಕಿತ್ತಳೆ ಬಣ್ಣದ ಲಾವಾ ಬಂಡೆಗಳ ಮಧ್ಯದಿಂದ ಹರಿದು ಸಮುದ್ರಕ್ಕೆ ಸೇರುತಿತ್ತು. ಲಾವಾ ಚಿಕ್ಕ ಜಲಪಾತದಂತೆ ಬೀಳುತ್ತಿದ್ದರೆ, ಅಲ್ಲಿ ಸಮುದ್ರ ನೀರಿನಲ್ಲಿ ಚಿಕ್ಕ ಚಿಕ್ಕ ಕಲರವ. ಸಣ್ಣ ಸಣ್ಣ ಸ್ಫೋಟಗಳು. ಆಕಾಶದೆತ್ತರಕ್ಕೆ ಚಿಮ್ಮುತ್ತಿದ್ದ ಬಿಳಿ ಹೊಗೆ. ಅಲ್ಲಿ ಬಂದಿದ್ದ ಎಲ್ಲರಿಗೂ ಮಾತು ಮರತೇ ಹೋದಂಗಿತ್ತು. ನಿಸರ್ಗದ ದೈತ್ಯ ಶಕ್ತಿಯೆದುರು ನಾವೆಷ್ಟು ಚಿಕ್ಕವರೆಂಬ ನಿಜ ಮತ್ತೊಮ್ಮೆ ಮನದಟ್ಟಾಗಿತ್ತು. ಹರಿಯುತ್ತಿದ್ದ ಲಾವಾ ಸುಮ್ಮನೆ ನೋಡುತ್ತಾ ಹಾಗೇ ಕುಳಿತು ಬಿಟ್ಟೆವು.

ಎಷ್ಟೋ ಹೊತ್ತಿನ ನಂತರ ಮತ್ತೆ ಟಾರ್ಚ್ ಬೆಳಕಿನಲ್ಲಿ ಬಂಡೆಗಳ ಮಧ್ಯೆ ದಾರಿ ಹುಡುಕುತ್ತಾ ಮರಳಿದೆವು . ಆ ನಮ್ಮ ಆಗಂತುಕ ಗೆಳಯನಿಗೆ ಧನ್ಯವಾದ ಆರ್ಪಿಸಿ ಮರಳಿ ಹಿಲೋ ಕಡೆ ಹೊರಟೆವು.

ಲಾವಾ ದೃಶ್ಯ ಎಷ್ಟು ಗಾಢವಾಗಿತ್ತೆಂದರೆ ಹಿಲೋ ಬರುವವರೆಗೆ ಬೇರೆನೂ ಮಾತೇ ಇರಲಿಲ್ಲ...

(ಮುಂದಿನ ಭಾಗದಲ್ಲಿ: ಹವಾಯಿ ಐತಿಹಾಸಿಕ ಸ್ಥಳ ಮತ್ತು ಅಪ್ರತಿಮ ಯೋಧನೊಬ್ಬನ ಕತೆ)

Friday, July 17, 2009

ಬಿಗ್ ಐಲ್ಯಾಂಡ್ ಆಕಾಶಯಾನ

ಹಿಲೋ ವಿಮಾನ ನಿಲ್ದಾಣದಿಂದ ನಮ್ಮ ಹೆಲಿಕಾಪ್ಟರ್ ಪ್ರವಾಸ ಶುರುವಾಗಲಿತ್ತು.

ಹೋಟೆಲ್‍ನಿಂದ ವಿಮಾನ ನಿಲ್ದಾಣದ ಕಡೆ ಜಿಪಿಎಸ್ ತೋರಿಸಿದ ಮಾರ್ಗದಲ್ಲಿ ಚಲಿಸುತ್ತಿದ್ದ ನಾವು ಯಾಕೋ ದಾರಿ ಸರಿಯಿಲ್ಲವೆನಿಸ ತೊಡಗಿತ್ತು. ನಾವು ಊಹಿಸಿದಂತೆ, ಅದು ವಿಮಾನ ನಿಲ್ದಾಣ ತೋರಿಸಿದೆ ಯಾರದೋ ಮನೆಯನ್ನು ತೋರಿಸಿತ್ತು ! ಮತ್ತೆ ಅಲ್ಲಿಂದ ವಿಮಾನ ನಿಲ್ದಾಣದ ಕಡೆ ಕಾರ್ ತಿರುಗಿಸಿ, ಅಲ್ಲಿ ಮುಟ್ಟಿದಾಗ ನಮ್ಮ ಹೆಲಿಕಾಪ್ಟರ್ ಪ್ರವಾಸಕ್ಕೆ ಸಿದ್ಧತೆಗಳು ನಡೆದಿದ್ದವು.

ಹೆಲಿಕ್ಟಾಪರ್ ಪ್ರವಾಸಕ್ಕೆ ಬೇಕಾದ ಪೂರ್ವಭಾವಿ ನಿರ್ದೇಶನಗಳನ್ನು ಪಡೆದು, ’ಬ್ಲೂ ಹವಾಯಿಯನ್’ ಹೆಲಿಕಾಪ್ಟರ್ ಎರಿದೆವು. ಹವಾಯಿ ದ್ವೀಪಗಳ ವಾಯು ವೀಕ್ಷಣೆ ಜನಪ್ರಿಯ. ಅದರಲ್ಲೂ ’ಬ್ಲೂ ಹವಾಯಿಯನ್’ ಸಂಸ್ಥೆ ಸುಪ್ರಸಿದ್ಧ. ನಮ್ಮದು ೬ ಆಸನಗಳ ನೀಲಿ ಬಣ್ಣದ ಆಕರ್ಷಕ ’ಎ-ಸ್ಟಾರ್’ಹೆಲಿಕಾಪ್ಟರ್. ನನ್ನ ಮತ್ತು ನನ್ನಾಕೆಯ ಆಸನಗಳು ಪೈಲೆಟ್ ಪಕ್ಕದ್ದು.

ಹೆಲಿಕಾಪ್ಟರ್ ಮೆಲ್ಲಗೆ ಓಡುತ್ತಾ ಕ್ರಮೇಣ ವೇಗ ಹೆಚ್ಚಿಸಿಕೊಂಡು, ನೆಲ ಬಿಟ್ಟು ಗಾಳಿಗೆ ಹಾರಿದಾಗ ’ವಾವ್’ ಎಂಬ ಉದ್ಗಾರ. ಕೆಲವೇ ನಿಮಿಷದಲ್ಲಿ ಹಾರುತ್ತಾ ನಾವು ಸಮುದ್ರದ ಮೇಲಿದ್ದೆವು. ಕೆಳಗೆ ನಮ್ಮ ಹೋಟೆಲ್ ಸಮುದ್ರ ದಂಡೆಯ ಮೇಲೆ ಚಿಕ್ಕ ರಟ್ಟಿನ ಮನೆಯಂತೆ ಕಾಣುತಿತ್ತು. ಹಾಗೇ ಚಿಕ್ಕ ಕೋಕೋನೆಟ್ ದ್ವೀಪ ಇನ್ನೂ ಚಿಕ್ಕದಾಗಿ ಮತ್ತು ಸುಂದರವಾಗಿ ಕಾಣುತಿತ್ತು. ಹಿಲೋ ನಗರದ ಅಂಚಿನಲ್ಲಿ ಹಾರುತ್ತಾ ಈಗ ದಟ್ಟ ಮಳೆಕಾಡಿನ ಕಡೆಗೆ ಹಾರಿತ್ತು. ನಮ್ಮ ಪೈಲೆಟ್ ವಿಲ್‍ನ ನಿರಂತರ ವೀಕ್ಷಕ ವಿವರಣೆ ಮುಂದುವರೆದಿತ್ತು.


ಹಸಿರು ಮಳೆಕಾಡಿನ ಮೇಲೆ ತೇಲುವಾಗ, ಚಿಕ್ಕ-ದೊಡ್ಡ ಜಲಪಾತಗಳು ಎದುರಾದವು. ಎಷ್ಟೋ ಜಲಪಾತಗಳು ದಟ್ಟ ಕಾಡಿನ ನಡುವೆ ಇದ್ದು ಕೇವಲ ಹಾರುವಾಗ ಕಾಣಬಹುದೆಂದು ನಮ್ಮ ಪೈಲೆಟ್ ಹೇಳುತ್ತಿದ್ದ. ಸುಂದರ ಜಲಪಾತಗಳು - ಹಸಿರು ಕಾನನದ ನಂತರ ಮುಂದೇನು ಎನ್ನುವಾಗ, ಯಾವುದೋ ಮುಸುಕು ಕವಿದ ಪ್ರದೇಶದೊಳಗೆ ನಮ್ಮ ಹೆಲಿಕಾಪ್ಟರ್ ಹಾರಿತ್ತು.

ಕೆಳಗಡೆ ಕಪ್ಪನೆ ಕಲ್ಲಿನಿಂದ ನೆಲವೆಲ್ಲ ಅವರಿಸಿದಂತಿತ್ತು , ಕೆಲವಡೆ ನೆಲದಿಂದ ಹೊಗೆ ಬರುತಿತ್ತು. ಆಗ ಗೊತ್ತಾಗಿದ್ದು ನಾವು ಜ್ವಾಲಾಮುಖಿ ಪ್ರದೇಶದಲ್ಲಿದ್ದೇವೆಂದು. ಆ ಕಪ್ಪನೆ ಕಲ್ಲು, ಜ್ವಾಲಾಮುಖಿಯಿಂದ ಹರಿದು ಬಂದ ಲಾವಾರಸ ತಣ್ಣಗಾಗಿ ಆದ ಲಾವಾ ರಾಕ್. ನೆಲದೊಳಗೆ ಹರಿಯುತ್ತಿರುವ ಲಾವಾದ ಬಿಸಿಯಿಂದ ಉಂಟಾಗಿದ್ದು, ನೆಲದಿಂದ ಅಲ್ಲಲ್ಲಿ ಬರುತ್ತಿದ್ದ ಹೊಗೆ.

ನೋಡಿದ ಕಡೆಯಲೆಲ್ಲಾ ಕಪ್ಪನೆ ಲಾವಾ ಶಿಲೆ. ಆಗ ಕಂಡಿದ್ದು ಆ ಶಿಲೆಯ ನಡುವೆ ಕಿತ್ತಲೆ ಬಣ್ಣದ ಒಂದು ಜಗಜಗಿಸುವ ರಂಧ್ರ. ಹತ್ತಿರ ಹಾರುತ್ತಿದ್ದಂತೆ ಅದರಲ್ಲೇನೊ ಕುದಿಯುತ್ತಿರುವಂತೆ ಕಾಣಿಸತೊಡಗಿತ್ತು. ಅದು ಲಾವಾ ರಸ. ಆ ಒಂದು ಚಿಕ್ಕ ರಂಧ್ರದಿಂದ ಆ ಲಾವಾ ರಸ ಕುದಿಯುವುದು ಕಾಣುತಿತ್ತು. ಆ ಲಾವಾ ರಂಧ್ರದಿಂದಾಚೆ ಹಾರಿ ಈಗ ಹೆಲಿಕಾಪ್ಟರ್ ಅರ್ಧ ಅರೆಬರೆ ಕಾಡಿನಂತಿದ್ದ ಪ್ರದೇಶದ ಮೇಲೆ ಹಾರುತ್ತಿತ್ತು.

ಅದು ಜ್ವಾಲಾಮುಖಿಯಿಂದ ಹೊಮ್ಮಿದ ಲಾವಾ, ಅದರಿಂದು ಬರುವ ಸಲ್ಫರ್ ಡೈಆಕ್ಸೈಡ್‍ದಿಂದ ಸಾಯುತ್ತಿದ್ದ ಮರಗಳು. ಈ ಎಲ್ಲದರ ಮಧ್ಯೆ ಇತ್ತು ಆ ಒಂಟಿ ಮನೆ. ಜ್ವಾಲಾಮುಖಿ ಬರುವ ಮುಂಚೆ ಇದ್ದ ಮನೆಗಳೆಲ್ಲಾ ಹಾಳಾಗಿ ಹೋಗಿದ್ದರೂ, ಈ ಒಂದು ಮನೆ ಮಾತ್ರ ಏನೂ ಆಗದೇ ಉಳಿದಿತ್ತು. ಅಲ್ಲಿದ್ದ ಜನರೆಲ್ಲಾ ಆ ಜ್ವಾಲಾಮುಖಿ ಪ್ರದೇಶ ಬಿಟ್ಟು ಬೇರೆಡೆಗೆ ಹೋದರೂ ಆ ಮನೆಯವನೊಬ್ಬ ಅಲ್ಲೇ ಉಳಿದುಬಿಟ್ಟಿದ್ದ.

ಆತನ ಹೆಸರು ಜಾಕ್ ಥಾಂಪ್‍ಸನ್. ಆತನಿಗೆ ಈಗ ೭೦ರ ಹರೆಯ. ಈಗಲೂ ಆತ ಅದೇ ಜ್ಚಾಲಾಮುಖಿ ಪ್ರದೇಶದ ಒಂಟಿ ಮನೆಯಲ್ಲಿ ಇದ್ದಾನೆ. ಆಗಾಗ ಗಣ್ಯ ಅತಿಥಿಗಳು ಆತನ ಒಂಟಿಮನೆಗೆ ಬಂದು ಕಾಲ ಕಳೆಯುತ್ತಾರಂತೆ.


ಈಗ ದೂರದಲ್ಲಿ ರಭಸವಾಗಿ ಬರುತ್ತಿದ ಬೆಳ್ಳನೆ ಹೊಗೆ ಕಾಣುತಿತ್ತು. ಹಾರುತ್ತಿದ್ದಂತೆ ಎದುರಿಗೆ ಸಮುದ್ರ ತೀರ. ಈ ಹೊಗೆ ಆ ತೀರದಿಂದ ಬರುತ್ತಿದ್ದು, ಹತ್ತಿರ ಹೋದಾಗ ಕಂಡಿದ್ದು ಅಲ್ಲಿ ಸಮುದ್ರಕ್ಕೆ ಹರಿಯುತ್ತಿದ್ದ ಲಾವಾ ರಸ. ಬೆಂಕಿಯಂತಹ ಲಾವಾ ಆ ತಣ್ಣನೆ ಸಮುದ್ರದ ನೀರಿಗೆ ಹರಿಯುತ್ತಿದ್ದಂತೆ, ಒಟ್ಟಿಗೆ ನೂರಾರು ಚಿಕ್ಕ ಚಿಕ್ಕ ಸ್ಫೋಟಗಳು. ಧೋ ಎಂದು ಆಕಾಶಕ್ಕೆ ಎಳುತ್ತಿದ್ದ ಹೊಗೆ. ಲಾವಾ ತಣ್ಣಗಾಗಿ ಕಪ್ಪನೆ ಚಿಕ್ಕ ಚಿಕ್ಕ ಕಣಗಳಾಗಿ ತೀರಕ್ಕೆ ಅಪ್ಪಳಿಸಿ ಅಲ್ಲಿ ಕಪ್ಪನೆ ಮರಳಿನ ತೀರ.

ಆ ಲಾವಾ-ಸಮುದ್ರದ ನಿರಂತರ ಕಲಹ ನೋಡುತ್ತಾ ಕೆಲವು ಕ್ಷಣ ಅದರ ಸುತ್ತು ಹಾಕಿ, ಮತ್ತೆ ಹೆಲಿಕಾಪ್ಟರ್ ಮರಳಿ ಹೆಲಿಪ್ಯಾಡ್‍ಗೆ ಹಾರತೊಡಗಿತು.

ಹೆಲಿಕಾಪ್ಟರ್ ನೆಲಕ್ಕೆ ಇಳಿದು, ಸೊಂಟಕ್ಕೆ ಬಿಗಿದಿದ್ದ ಪ್ಯಾರಾಚೂಟ್ ಪ್ಯಾಕ್ ಬಿಚ್ಚಿಕೊಟ್ಟು ಹೊರಬಿದ್ದಾಗ, ಕಣ್ಣು ತುಂಬಾ ಇನ್ನೂ ಲಾವಾ-ಸಮುದ್ರದ ರಮಣೀಯ ದೃಶ್ಯ ತೇಲುತಿತ್ತು.

ವಾಯುವೀಕ್ಷಣೆಯ ನಂತರ ನಮ್ಮ ಮುಂದಿನ ಪಯಣ, ಸುಂದರ ಜಲಪಾತಗಳ ತಾಣ ’ಅಕಕ ರಾಷ್ಟ್ರೀಯ ಉದ್ಯಾನವನ’.

ನಿತ್ಯ ಹರಿದ್ವರ್ಣ ಅರಣ್ಯದ ಮಧ್ಯೆ ಸುಮಾರು ೧-೧.೫ ಮೈಲಿ ದೂರದಲ್ಲಿ ನಡೆದಾಗ ಕಾಣುತ್ತೆ ಬಿಗ್ ಐಲೆಂಡ್‍ನ ಆ ಎರಡು ಸುಂದರ ಜಲಪಾತಗಳು.

ಸುಮಾರು ೧೦೦ ಅಡಿಗಳ ಕಹೂನ ಜಲಪಾತ, ಅದರ ಸನಿಹದಲ್ಲಿದೆ ಆಕಕ ಜಲಪಾತ ೪೪೨ ಅಡಿಗಳ ಮೋಹಕ ಜಲಪಾತ. ಅಲ್ಲಲ್ಲಿ ಚಿಕ್ಕ ತೊರೆಗಳು, ವಿನೂತನ ಹೂವುಗಳಿಂದ ಆ ಜಾಗ ವಿಭಿನ್ನ ಮತ್ತು ಸುಂದರವಾಗಿತ್ತು.

ಜಲಪಾತಗಳ ನೋಟ ಸವಿದು ಮರಳಿ ಬರುವಾಗ ರಸ್ತೆ ಪಕ್ಕವಿದ್ದ ಕಬ್ಬಿನ ಗದ್ದೆ ನನ್ನಾಕೆಯ ಕಣ್ಣಿಗೆ ಬಿತ್ತು. ಆಲ್ಲೇ ಕಾರ್ ನಿಲ್ಲಿಸಿದಾಗ , ಕಬ್ಬಿನ ಗದ್ದೆ ಕಡೆ ಓಡಿ, ಕಬ್ಬು ಮುರಿದು ಕೊಂಡು ಬಂದಿದ್ದಳು. ಕಬ್ಬು ಅಗಿಯುತ್ತಾ ಮತ್ತೆ ಸಮುದ್ರ ಪಕ್ಕದ ರಸ್ತೆಯಲ್ಲಿ ಡ್ರೈವ್ ಮಾಡುತ್ತಾ ಹೊರಟೆವು.

ಮತ್ತೊಮ್ಮೆ ಕಾರ್ ನಿಲ್ಲಿಸಿದ್ದು ಹವಾಯಿ ಕುಸುರಿಕಲೆಗಳ ಒಂದು ಚಿಕ್ಕ ಅಂಗಡಿ ಮುಂದೆ. ಅಲ್ಲಿನ ವೃದ್ಧ ದಂಪತಿಗಳು ತಮ್ಮ ಕೈಕೆಲಸದಿಂದ ಮಾಡಿದ ಚಿಕ್ಕ ಚಿಕ್ಕ ಕುಸುರಿ ಕೆಲಸಗಳು ಮನ ಸೆಳೆಯುತ್ತಿದ್ದವು. ಅಲ್ಲೊಂದಿಷ್ಟು ಖರೀದಿ ಮುಗಿಸಿ ಹಿಲೋ ಕಡೆ ಹೊರಟಾಗ ಮುಸ್ಸಂಜೆ.

ಹಿಲೋ ನಗರ ಸಂಜೆಗೆ ಕೆಂಪಾಗುತಿತ್ತು.

(ಮುಂದಿನ ಭಾಗದಲ್ಲಿ ಜ್ವಾಲಾಮುಖಿಯ ಮಧ್ಯೆ ಆಲೆದಾಟ)

Monday, June 15, 2009

ಹವಾಯಿಗೆ ಹಾರಿ...

ಆಮೇರಿಕನ್ ಎರ್‌ಲೈನ್ ವಿಮಾನ ಕೋನ ಮುಟ್ಟಿದಾಗ ರಾತ್ರಿಯ ೮ ಗಂಟೆ. ಕ್ಯಾಲಿಪೋರ್ನಿಯಾದಲ್ಲಿ ಆಗಲೇ ೧೧ ಗಂಟೆ.

ಕೋನ ನಿಲ್ದಾಣ ನಮ್ಮ ಯಾವುದೇ ಚಿಕ್ಕ ಬಸ್-ರೈಲು ನಿಲ್ದಾಣದಂತಿತ್ತು. ಬಸ್ ಇಳಿದು ಹೋಗುವಂತೆ ನಿಲ್ದಾಣದಿಂದ ಹೊರಗೆ ಬರಲು ೨ ನಿಮಿಷವಾಯ್ತು ಅಷ್ಟೇ. ನಿಲ್ದಾಣ ಚಿಕ್ಕದಿದ್ದರೂ ವಿಭಿನ್ನ-ಸುಂದರವಾಗಿತ್ತು.

ರೆಂಟಲ್ ಕಾರ್‌ ಕಂಪೆನಿಯ ಬಸ್ ಆವಾಗಲೇ ನಮಗೆ ಅಲ್ಲಿ ಕಾಯ್ತಿತ್ತು. ರೆಂಟಲ್ ಕಾರ್ ತಗೊಂಡು ಮತ್ತೆ ರಸ್ತೆಗೆ ಇಳಿದಾಗ ಆಗಲೇ ೯ ಗಂಟೆ. ನಮ್ಮ ಪಯಾಣ ಹೊರಟ್ಟಿತ್ತು ಹಿಲೋ ಕಡೆ.

ಹವಾಯಿ..

ಫೆಸಿಪಿಕ್ ಸಾಗರದಲ್ಲಿನ ದ್ವೀಪ ಸಮೂಹ.

ಸುಂದರ ಸಮುದ್ರ ತೀರಗಳು, ವರ್ಣರಂಜಿತ ಉಡುಗೆ-ತೊಡುಗೆಗಳು, ವಿಶಿಷ್ಟ ಭಾಷೆ-ಸಂಗೀತ-ಆಚಾರಗಳು, ಹಸಿರು ಕಾನನಗಳು, ಬೆಂಕಿ ಕಾರುವ ಜ್ವಾಲಮುಖಿಗಳು, ಮೋಹಕ ಜಲಪಾತಗಳು, ಐತಿಹಾಸಿಕ ಹಿನ್ನಲೆ. ಹೀಗೆ ಎಲ್ಲಾ ತರದ ವಿಭಿನ್ನ ಎಳೆಗಳು ಒಂದೆಡೆ ಸಿಗುವ ಮನಮೋಹಕ ದ್ವೀಪಗಳು.

ಚಲಿಸುತ್ತಿದ್ದ ನಮ್ಮ ಕಾರ್ ಹೆಡಲೈಟ್ ಬೆಳಕು ಬಿಟ್ಟರೆ ಬೇರೆ ಯಾವುದೇ ಬೆಳಕಿಲ್ಲದೇ ಆ ಹೆದ್ದಾರಿ ಮೊದಮೊದಲು ಸ್ಪಲ್ಪ ಅಂಜಿಸಿತ್ತು. ೨೦-೨೫ ನಿಮಿಷದವರೆಗೆ ಯಾವುದೇ ವಾಹನವು ಕಾಣದೇ, ನಾವು ಸರಿಯಿದ ದಾರಿಯಲ್ಲಿ ಸಾಗುತ್ತಿದ್ದವೆಯೇ ಎಂಬ ಸಂಶಯ. ನಮ್ಮ ಜಿಪಿಎಸ್ ಮಾತ್ರ ಸರಿಯಾದ ದಾರಿ ಎನ್ನುತಿತ್ತು. ಸ್ಪಲ್ಪ ಸಮಯದ ನಂತರ, ನಮಗೆ ಜೊತೆಯಾಗಿ ಇನ್ನು ಕೆಲವು ಕಾರುಗಳು ಸೇರಿದವು.

ಹವಾಯಿ ದ್ವೀಪ ಸಮೂಹದಲ್ಲಿ ಕ್ವಾಹಿ, ಓಹಹೋ, ಮೊಲಕಯಿ,ಲನೈಯಿ, ಮಾಯಿ,ಬಿಗ್ ಐಲೆಂಡ್ ಎಂಬ ೬ ದ್ವೀಪಗಳಿವೆ. ಒಂದೊಂದು ದ್ವೀಪದಲ್ಲೂ ಒಂದು ವಿಶಿಷ್ಟತೆ. ಹವಾಯಿಯ ಯಾವ ದ್ವೀಪಕ್ಕೆ ಹೋಗಬೇಕೆನ್ನುವ ಪ್ರವಾಸಿಗರಿಗೆ ಯಕ್ಷಪ್ರಶ್ನೆ ಎದುರಾಗುವುದು ಅವಾಗಲೇ. ಒಂದಕ್ಕಿಂತ ಒಂದು ಸುಂದರ ದ್ವೀಪಗಳು.

ನಾವು ಆರಿಸಿಕೊಂಡಿದ್ದು ಬಿಗ್ ಐಲೆಂಡ್. ಈ ದ್ವೀಪದ ಅಸಲಿ ಹೆಸರು ಹವಾಯಿ. ಆದರೆ ಈಡೀ ದ್ವೀಪ ಸಮೂಹಕ್ಕೂ ಹವಾಯಿ ಎಂದು ಕರೆಯುವುದರಿಂದ , ಗೊಂದಲ ತಪ್ಪಿಸಲು ಈ ದ್ವೀಪಕ್ಕೆ ’ಬಿಗ್ ಐಲೆಂಡ್’ ಎಂಬ ಹೆಸರು. ಹೆಸರಿಗೆ ತಕ್ಕಂತೆ ಈಡೀ ಹವಾಯಿ ದ್ವೀಪ ಸಮೂಹದಲ್ಲೇ ದೊಡ್ಡ ದ್ವೀಪವಿದು. ಬಿಗ್ ಐಲೆಂಡ್‍ನಲ್ಲಿ, ನಮಗೆ ಸಕ್ರಿಯ ಜ್ವಾಲಮುಖಿ ಹತ್ತಿರದಿಂದ ನೋಡಬಹುದೆಂಬ ಸಂಗತಿಯೆ ವಿಸ್ಮಯವುಂಟು ಮಾಡಿತ್ತು. ಅದರ ಜೊತೆ ಕೆಲವು ಸುಂದರ ಸಮುದ್ರ ಬೀಚಿಗಳು ಮತ್ತು ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿದು, ನಾವು ಬಿಗ್ ಐಲೆಂಡ್‍ನಲ್ಲಿ ಇಳಿದಿದ್ದೆವು.

ಕೋನ ಈ ದ್ವೀಪದ ಪಶ್ಚಿಮ ತೀರದ ನಗರ, ಹಿಲೋ ಪೂರ್ವ ತೀರದ ನಗರ. ನಮ್ಮ ಪಯಣ ಹೊರಟಿತ್ತು ಹಿಲೋ ಕಡೆಗೆ.

ಸುಮಾರು ೧೦೦ ಮೈಲಿಯ ಈ ಪಯಾಣ ಸಾಗಿತ್ತು ಆ ಎರಡು ಲೇನ್ ಹೆದ್ದಾರಿಯಲ್ಲಿ. ಅಂದರೆ ಒಂದರ ಹಿಂದೊಂದು ಸಾಲಿನಲ್ಲಿ ಹೋಗುವ ವಾಹನಗಳು. ಹಕಲಾವು, ಹೋನಮು, ಪೆಪೆಕಿವೊ ಪಟ್ಟಣ ಬಳಸಿ ಸುಮಾರು ಎರಡುವರೆ ಗಂಟೆಗಳ ನಂತರ ಹಿಲೋ ತಲುಪಿದ್ದೆವು.

ಹಿಲೋದ ಬ್ಯಾನಿಯನ್ ಡ್ರೈವ್‍ನಲ್ಲಿನ ’ಕ್ಯಾಸಲ್ ಹಿಲೋ ಹವಾಯಿಯನ್’ ಹೋಟಲ್ ಹೊಕ್ಕು, ಅಲ್ಲಿಂದ ಪರದೆ ಸರಿಸಿದಾಗ ಬಾಲ್ಕನಿಯಿಂದ ಫೆಸಿಪಿಕ್ ಸಾಗರ ದೊಡ್ಡ ಕಪ್ಪು ಹಾವು ಮಲಗಿದಂತೆ ಭಾಸವಾಗುತಿತ್ತು.

ಜ್ವಾಲಮುಖಿ ಮತ್ತು ಸಮುದ್ರದ ಬಗ್ಗೆ ಮಾತಾಡುತ್ತ ಯಾವಾಗ ನಿದ್ದೆಗೆ ಜಾರಿದೆವು ಅರಿಯಲಿಲ್ಲ..

(ಮುಂದಿನ ಭಾಗದಲ್ಲಿ ಹೆಲಿಕಾಪ್ಟರ್‌ನಲ್ಲಿ ದ್ವೀಪದ ವೀಕ್ಷಣೆ ಮತ್ತು ಜಲಪಾತಗಳು)

Sunday, May 10, 2009

ಶರಧಿ

ನೋಟಕ್ಕೆ ಮೀರಿದ ಆಗಾಧತೆ
ವ್ಯಾಪ್ತಿಗೆ ನಿಲುಕದ ಆಳ
ಸುಂದರ ಶಾಂತ ಆ ಶರಧಿ

ಆ ಶರಧಿಯೇ ಆದವರು ನೀವು

ನೋಡಲು ಅದೆಷ್ಟು ಶಾಂತ
ಆದರೆ ತಳದಲಿ ಅಡಗಿಸಿಕೊಂಡಿದ್ದೀರೋ
ಅದೆಷ್ಟು ಕಂಬನಿ ನೋವುಗಳ

ಆ ಬಿರುಗಾಳಿ ಮಳೆಯ ನಡುವೆಯೂ
ಶರದಿಯಲಿ ಮೂಡಿ ಬರುವವಂತೆ
ಅನ್ಯರ್ಘ ಮುತ್ತು-ಹವಳಗಳು
ಮೂಡಿಬಂದಿವೆ ನಿಮ್ಮಿಂದ ಎರಡು ರತ್ನಗಳು

ಶರಧಿಗೆ ಈಗ ಸುಕಾಲ
ಮಬ್ಬು ಹರಿದು ಸೊಗಸು ಮೂಡುವ ಕಾಲ
ಕವಿದ ಮೋಡಗಳಿಂದಾಚೆ ಬೆಳ್ಳಿ ಬೆಳಕು
ತೀರದಲಿ ಬಂಡೆಗಳ ನಡುವೆ ಅರಳಿದ ಶಿಲ್ಪ

ಆ ಶರಧಿಯ ಪ್ರೀತಿಯ ತೀರದಲಿ
ನೆಲೆ ನಿಂತವರು ನಾವು
ಕೋರುವೆವು ನಿಮಗೆ
ಜನ್ಮದ ದಿನದ ಶುಭಾಶಯಗಳ
ಬೇಡುವೆವು ಪ್ರೀತಿ ಹಾರೈಕೆಗಳ

(ಎಲ್ಲ ಅಮ್ಮಂದಿರಿಗೆ ಶುಭಾಶಯಗಳು)

Sunday, February 22, 2009

ಡೆಲ್ಲಿ-6 ಎಂಬ Metaphor

ಜ್ವಲಂತ ಸಮಸ್ಯೆಗಳನ್ನು ಸಿನಿಮಾಗಳು ನೋಡುವ ಬಗೆ ಎರಡು.

೧. ಸಮಸ್ಯೆಗಳನ್ನು ಹಸಿಹಸಿಯಾಗಿ ಪ್ರದರ್ಶಿಸಿ ಮಾರಾಟದ ಸರಕಾಗಿಸುವುದು
೨. ಸಮಸ್ಯೆಗಳನ್ನು ಅತಿರಂಜಿತವಾಗಿಸದೆ,ಸುಪ್ತ-ಸೂಕ್ಷ್ಮವಾಗಿರಿಸಿ, ಅದಕ್ಕೊಂದು ಪರಿಹಾರ ತೋರಿಸುವುದು

ಸ್ಲಂ ಡಾಗ್‍ನಂತವು ಮೊದಲನೆಯ ಗುಂಪಿನಲ್ಲಿ ಸೇರುವಂತಹ ಚಿತ್ರಗಳು.

ಎರಡನೆಯ ಗುಂಪಿನಲ್ಲಿ ಸೇರುವ ಚಿತ್ರ ’ರಂಗ್ ದೇ ಬಸಂತಿ’.

ನಿರ್ದೇಶಕ ರಾಕೇಶ್ ಓಂಪ್ರಕಾಶ್ ’ರಂಗ್ ದೇ’ಯಲ್ಲಿ ಭ್ರಷ್ಟಾಚಾರ, ದೇಶದ ’ಚಲ್ತಾ ಹೈ’ ಮನಸ್ಥಿತಿ, ಅದಕ್ಕೆ ಸೂಚಿಸಿದ ’ಡೈರೆಕ್ಟ್ ಆಕ್ಷ್ಯನ್’(Direct Action) ದೊಡ್ಡ ಸಂಚಲನವುಂಟು ಮಾಡಿದ್ದವು. ಅದು ಶುರು ಮಾಡಿದ ಚರ್ಚೆ-ಜಾಗೃತಿ ಇನ್ನೂ ಎಲ್ಲರ ನೆನಪಿನಲ್ಲಿದೆ.

’ರಂಗ್ ದೇ ಬಸಂತಿ’ ತರದ ಬಡಿದೆಬ್ಬಿಸುವ ಸಿನಿಮಾದ ನಂತರ ಮುಂದೇನು ಅನ್ನುವ ಪ್ರಶ್ನೆಗೆ ಉತ್ತರ ದೊರಕಿದಂತಿದೆ.
ರಾಕೇಶ್ ಹೊಸ ಸಿನಿಮಾ ’ಡೆಲ್ಲಿ-೬’, ಮೇಲೆ ಹೇಳಿದ ಎರಡನೆಯ ಗುಂಪಿಗೆ ಮತ್ತೊಂದು ಸೇರ್ಪಡೆ.

ರಂಗ್ ದೇಯಲ್ಲಿ ಭ್ರಷ್ಟಾಚಾರದ ಬಗ್ಗೆ ಹೇಳಿದ್ದ ರಾಕೇಶ್, ’ಡೆಲ್ಲಿ’ಯಲ್ಲಿ ಹಲವಾರು ಸಮಸ್ಯೆಗಳನ್ನು ಒಟ್ಟಿಗೆ ತಡವಿಕೊಂಡಿದ್ದಾರೆ. ಕೋಮುವಾದ, ಮಂದಿರ-ಮಸೀದಿಯ ಬಗ್ಗೆ ಪ್ರಮುಖವಾಗಿ ಹೇಳುತ್ತಾ, ಅಸ್ಪಶತೆ ಬಗ್ಗೆ ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ. ಅದಕ್ಕೆ ಅನಿವಾಸಿ ಭಾರತೀಯರ ತೊಳಲಾಟ, ಅಶಕ್ತ ಮಹಿಳೆಯರ ಅಸಹಾಯಕತೆ, ಸ್ವಲ್ಪ ಭಗ್ನ ಪ್ರೇಮದ ಸ್ಪರ್ಶ ನೀಡಿದ್ದಾರೆ.

ರಂಗ್ ದೇ ತರನೇ ಇದರಲ್ಲೂ ಭಾರತವನ್ನು ಹೊರಗಿನವರ ಕಣ್ಣಿನಿಂದ ತೋರಿಸುವ ಶೈಲಿಯಿದೆ. ಆದರೆ ಡೆಲ್ಲಿಯ ತಾಕತ್ತಿರುವುದು ಅದರಲ್ಲಿ ಉಪಯೋಗಿಸಿದ ’ಮೆಟಾಫೆರ್’ಗಳಲ್ಲಿ ಮತ್ತು ಸೃಷ್ಟಿ ಮಾಡಿರುವ ಪಾತ್ರಗಳಲ್ಲಿ.

ತನಗೆ ಸಂಬಂಧಿಸಿದ ಆದರೂ ತಾನು ಹುಟ್ಟಿ-ಬೆಳಯದಿರುವ ದೇಶದಲ್ಲಿನ ರೋಷನ್ ಪಾತ್ರ ಕತೆಯ ಬಿಂದು. ಹಿಂದು-ಮುಸ್ಲಿಮ್-ಭಾರತೀಯ-ಅಮೇರಿಕನ್ ಹೀಗೆ ವಿಭಿನ್ನ ಎಳೆಗಳಲ್ಲಿ ತೊಳಲಾಡುವ ಪಾತ್ರ.

ಭಗ್ನ ಪ್ರೇಮಿ ಅಲಿ ಅಂಕಲ್, ಜಿಲೇಬಿ ಅಂಗಡಿಯ ಮಮ್ಡು, ಅಕ್ಕ-ಪಕ್ಕ ಮನೆಯ ಸಹೋದರರು, ವಿಧವೆ ತಂಗಿ, ಬಾಯಿ ಬಿಟ್ಟರೆ ಕಪಾಳಕ್ಕೆ ಬಾರಿಸುವ ಪೋಲಿಸ್ ಆಫೀಸರ್, ಕಸ ಹೆಕ್ಕುವ ಅಸೃಶ್ಯ ಹೆಂಗಸು, ಶನಿ ಬಾಬಾ, ಭಾರತದಲ್ಲಿ ಕಡೆಯ ದಿನಗಳನ್ನು ಕಳೆಯಬಯಸುವ ಅಜ್ಜಿ..ಹೀಗೆ ಅನೇಕ ವಿಶಿಷ್ಟ ಪಾತ್ರಗಳು, ಕತೆಯ ಓಟಕ್ಕೆ ಎಲ್ಲೂ ತಡೆ ತರುವುದಿಲ್ಲ.

ಈಡೀ ಚಿತ್ರದಲ್ಲಿ ಹಾಸುಹೊಕ್ಕಾಗಿರುವುದು ’ಮೆಟಾಫರ್’(Metaphor).

ಸಾಂಪ್ರದಾಯಿಕ ಹಿನ್ನಲೆಯ, ಹೊಸ ಕನಸುಗಳನ್ನು ಕಾಣುವ ’ಬಿಟ್ಟು’ ಎನ್ನುವ ಹುಡುಗಿಯ ಪಾತ್ರ. ಇದು ಒಂಥರ ಇಡೀ ಭಾರತದ ಪ್ರತಿನಿಧಿ.

ಹಾಗೆಯೇ ಎಲ್ಲರ ಮುಂದೆ ಕನ್ನಡಿ ಹಿಡಿದು ತಿರುಗುವ ಹುಚ್ಚ, ಎಲ್ಲಿಂದಲೋ ಬಂದು ಎಲ್ಲರ ಸ್ವಾಸ್ಥ್ಯ ಕೆಡಿಸುವ ಶನಿ ಬಾಬಾ, ಪಾಳು ಬಿದ್ದ ಮನೆ, ಮಸಕಲಿ ಅನ್ನುವ ಆ ರೆಕ್ಕೆ ಕಟ್ಟಿದ ಪಾರಿವಾಳ, ಸಂದರ್ಭಕ್ಕೆ ತಕ್ಕುದಾಗಿ ಉಪಯೋಗಿಸಿರುವ ರಾಮಲೀಲಾ ಸನ್ನಿವೇಶಗಳು.

ಎಲ್ಲಕ್ಕೂ ಕಳಶವಿಟ್ಟಂತೆ, ’ಕಾಲಾ ಬಂದರ್’ !

ಅದರೆ ತುಂಬಾ ಕಾಡುವ ಪಾತ್ರ ’ಗೋಬರ್’. ಪೆದ್ದನಾಗಿ-ಮುಗ್ಢವಾಗಿ ಮೂಡಿ ಬಂದಿರುವ ಈ ಪಾತ್ರದ ಬಗ್ಗೆ ಮತ್ತೆ ನಗಬೇಕೆನಿಸುವಾಗ, ಕೊನೆಗೆ ನಿಜವಾದ ಗೋಬರ್ ಯಾರು ಎನ್ನುವ ಪ್ರಶ್ನೆ ದುತ್ತನೆ ಎದುರಾಗುತ್ತೆ.

ಡೆಲ್ಲಿಯಲ್ಲಿ ಅನೇಕ ಕಡೆ ಪ್ರಭಾವಿ ದೃಶ್ಯಗಳಿವೆ..
ರಾಮಲೀಲಾದಲ್ಲಿ ಮುಸ್ಲಿಮ್ ಮಮ್ಡು, ರಾಮಲೀಲಾ ಮಂಡಳಿಯ ಬ್ಯಾಡ್ಜ್ ಧರಿಸಿ ಸಂಭ್ರಮದಿಂದ ಭಾಗವಹಿಸುವ ದೃಶ್ಯ ಬಂದು ಹೋಗುತ್ತೆ. ಮುಂದೆ ಅದೇ ಮಮ್ಡುವಿನ ಅಂಗಡಿಯಿಂದ ಹನುಮಾನ್ ಪೋಟೋವನ್ನು ಕಿತ್ತುಕೊಂಡು ಹೋಗುವ ಗಲಭೆಕೋರರು, ನಂತರ ಹತ್ತುವ ಮತಾಂಧತೆ, ಅದರ ಕಿಚ್ಚಿನ ಉರಿಯಲ್ಲಿ ನರಳುವ ಮಮ್ಡುವನ್ನು ನಿಯಂತ್ರಿಸಲು ರೋಷನ್ ಪಡುವ ಶ್ರಮ. ಒಂದು ಸರಳ ಮನಸ್ಸು ಮತಾಂಧತೆಗೆ ಹೊರಳುವುದನ್ನು ತೋರಿಸಿದ ಪರಿ ಅದ್ಭುತ!

ಹಾಗೇ ನ್ಯೂಯಾರ್ಕ್-ಡೆಲ್ಲಿಗಳೆರಡನ್ನೂ ಒಂದೆಡೆ ಒಟ್ಟಿಗೆ ಕಾಣುವ ಕನಸು. ನ್ಯೂಯಾರ್ಕ್ ಬೀದಿಗಳಲ್ಲಿ ಭಾರತದ ದಿನ ನಿತ್ಯದ ಜನ ಜೀವನದ ಕಲ್ಪನೆ ಸೊಗಸಾಗಿದೆ.

ಅಭಿನಯದ ದೃಷ್ಟಿಯಿಂದ ಎಲ್ಲಾ ಪಾತ್ರಗಳಲ್ಲಿ ಸಮತೂಕದ ಅಭಿನಯವಿದೆ. ಮಾತಿಗಿಂತ ಹಾವಭಾವಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನಿಸುತ್ತೆ. ರೆಹಮಾನ್ ಹಿನ್ನಲೆ ಸಂಗೀತ ಕತೆಯ ಇನ್ನೊಂದು ಪಾತ್ರವೇ ಆಗಿದೆ.

ರಂಗ್ ದೇ ತರನೇ ಇಲ್ಲೂ ರಾಕೇಶ್, ಭಾರತದ ಜ್ವಲಂತ ಸಮಸ್ಯೆಗಳ ಎಳೆಯೊಂದಿಗೆ ಚಿತ್ರ ಮಾಡಿದ್ದಾರೆ. ಆದರೆ ರಂಗ್ ದೇ ತರ ಇಲ್ಲಿ ಯಾವುದನ್ನೂ ನೇರವಾಗಿ ಹೇಳುವುದಿಲ್ಲ. ಇಲ್ಲಿ ಎಲ್ಲಾ ಮೆಟಾಪರ್‌ಗೆ ಬಿಡಲಾಗಿದೆ. ಹಾಗೆಯೇ ಹಿಂದಿನ ತರ ಸಮಸ್ಯೆಗಳಿಗೆ ಉತ್ತರವನ್ನು ಗನ್‍ನಿಂದ ಕೊಟ್ಟಿಲ್ಲ, ಬದಲಾಗಿ ಸಮಸ್ಯೆಗಳಿಗೆ ಉತ್ತರ ನಮ್ಮಲ್ಲೇ ಅಡಗಿದೆ ಎನ್ನುವ ಆಶಾವಾದವಿದೆ.

’ರಂಗ್ ದೇ ಬಸಂತಿ’ ಯೊಂದಿಗೆ ಹೋಲಿಸುವುದನ್ನು ಬಿಟ್ಟು, ಡೆಲ್ಲಿಯನ್ನು ನೋಡಿದರೆ ಅದು ವಿಭಿನ್ನವೆನಿಸಬಹುದು. ಆದರೆ ಆ ತರದ ’ಕಲ್ಟ್’ (Cult) ಸಿನಿಮಾಗಳ ನಂತರ ಅದರ ನಿರ್ದೇಶಕರಿಗೆ, ಹಿಂದಿನ ಚಿತ್ರದ ಭಾರ ಹೇಗೆ ಯಾವಾಗಲೂ ಅವರ ಮೇಲಿರುತ್ತೆ ಕೇಳಿ ನೋಡಿ. ಇವೆಲ್ಲದರ ಮಧ್ಯೆ ’ಡೆಲ್ಲಿ’ ಒಂದು ಉತ್ತಮ ಪ್ರಯತ್ನ.

Sunday, February 08, 2009

ಜಯ್ ಹೋ...

ಆಸ್ಕರ್‌ನವರು ಇದಕ್ಕೆ ಒಂದು ಪ್ರಶಸ್ತಿ ಕೊಟ್ಟು, ಡ್ಯಾನಿ ಬಾಯಿಲ್ ಪ್ರಶಸ್ತಿ ಸ್ವೀಕರಿಸಿ ’ಈ ಪ್ರಶಸ್ತಿ ಜಮಾಲ್‍ನಂತಹ ಎಲ್ಲಾ ಮುಂಬೈ ಸ್ಲಂ ಹುಡುಗರಿಗೆ’ ಅಂತಾ ಹೇಳಿ, ಆಮೇಲೆ ಅದರ ಬಗ್ಗೆ ಮತ್ತೆ ಚರ್ಚೆಯಾಗಿ, ಸಾಕಪ್ಪ ಇದರ ಬಗ್ಗೆ ಓದಿದ್ದು ಅನ್ನುವರೆಗೆ ಬಹುಷಃ ಇದು ನಡೀತಾ ಇರುತ್ತೆ.

ಇಲ್ಲಿ ನಮ್ಮ ಗೆಳೆಯರ ಬಾಯಿಯಲ್ಲಿ ಮೊದಲು ಕೇಳಿದಾಗ , ಮತ್ತೆ ಇದು ಯಾವುದೋ ’ರಿಯಲ್’ ಭಾರತವನ್ನು ತೋರಿಸುವ ಮತ್ತೊಂದು ಚಿತ್ರವಿರಬಹುದೇ ಅನಿಸಿತು. ಅಷ್ಟರಲ್ಲಿ ಶುರುವಾಯ್ತು ನೋಡಿ ಇಲ್ಲಿ ಪ್ರಶಸ್ತಿಗಳ ಸುಗ್ಗಿ, ಮೊದಲಿಗೆ ಹಾಲಿವುಡ್ ವಿಮರ್ಶಕರು ನೀಡುವ ಪ್ರಶಸ್ತಿಗಳಲ್ಲಿ ಮಿಂಚುವಿಕೆ, ನಂತರ ಆಕ್ಟರ್ ಗಿಲ್ಡ್ ನಲ್ಲಿ ಮುಂದುವರಿಯಿತು ಹಬ್ಬ. ಅಷ್ಟರಲ್ಲಿ ಎಲ್ಲಡೆ ಅದರ ಮಾತು.

ಅದೊಂದು ದಿವಸ ಕೆಲಸದಿಂದ ಬಂದಾಗ ನನ್ನಾಕೆ ಗರಮ್ ಆಗಿದ್ದಳು . ಆಗಿದ್ದೇನೆಂದರೆ ಅಲ್ಲಿ ಇವಳ ಜೊತೆ ಕೆಲಸ ಮಾಡುವ ಪ್ರೆಡ್ ಅನ್ನೋ ಅಮೇರಿಕನ್‍ನೊಬ್ಬ ’ಸ್ಲಂ ಡಾಗ್ ಅದ್ಬುತ ಸಿನಿಮಾ, ನಿಜವಾದ ಭಾರತ ಏನು ಅಂತಾ ಅದರಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಜನ ಇನ್ನೂ ಪಾಪ ಹಾಗೇ ಇದ್ದಾರೆ’, ಭಾರತ ಅಂದರೆ ಒಂದು ಸ್ಲಂ ಅನ್ನುವ ಹಾಗೇ ಹೇಳಿದ್ದ.

ಒಬ್ಬ ಪ್ರೆಡ್ ಗೆ ಆದಂತೆ ಈ ’ರಿಯಲ್’ ಭಾರತದ ದರ್ಶನ ಪ್ರಪಂಚದ ಬೇರೆಡೆ ಇನ್ನೂ ಅದೆಷ್ಟು ಜನರಿಗೆ ಆಗಿರಬಹುದು. ಅದೆಷ್ಟು ಜನ ಈ ’ಸ್ಲಂ ಡಾಗ್’ ಅನ್ನೋ ಮಹಾನ್ ಬೋಧಿ ವೃಕ್ಷದ ಕೆಳಗೆ ಕುಳಿತು , ೨ ತಾಸಿನ ನಂತರ ಬುದ್ಧನ ತರ ಫೋಸ್ ನೀಡುತ್ತಾ ’ಭಾರತ ಅಂದರೆ ಇಷ್ಟೇ ರೀ, ಅವರು ಐಟಿ-ಬಿಟಿ-ಚಂದ್ರ ಅಂತಾ ನಮ್ಮ ಕಣ್ಣಿಗೆ ಚಮಕ್ ತೋರಿಸ್ತಾ ಇದ್ದರು, ನೋಡಿದರೆ ಅವರು ಎಲ್ಲಿ ಶುರುಮಾಡಿದ್ದರೋ ಇನ್ನು ಅಲ್ಲೇ ಇದಾರೆ’ ಅಂತ ಮಾತಾಡಿಕೊಂಡರೇನೊ.

ಬೇರೆಯವರು ಬೇಡ, ನಮ್ಮದೇ ಬಾಲಿವುಡ್‍ನ ಪ್ರೀತಿ ಜಿಂಟಾ, ’ನಮ್ಮ ಮುಂಬೈನಲ್ಲಿ ಇಷ್ಟು ಕೊಳಚೆ-ಸ್ಲಂ ಇದೆ ಅಂತಾ ಈ ಸಿನಿಮಾ ನೋಡಿದ ಮೇಲೆ ನನಗೆ ತಿಳಿಯಿತು’ ಅಂದರೆ..

ಈ ಚಿತ್ರದ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯಗಳೇನು ಇರಲಿಲ್ಲ. ನಿಜ ಹೇಳಬೇಕೆಂದರೆ ಚಿತ್ರ ವೀಕ್ಷಿಸುವಾಗ ಪಕ್ಕಾ ಮನೋರಂಜನಾತ್ಮಕ ಅನಿಸಿತ್ತು. ಚಿತ್ರದ ನಿರೂಪಣೆ ಮತ್ತೆ ಛಾಯಾಗ್ರಹಣ ಹಿಡಿದಿಟ್ಟಿದ್ದು ನಿಜ. ಆಶಾದಾಯಕವಾದ ಅಂತ್ಯವಾದ್ದರಿಂದ ಒಂದು ತರಹ ಫೀಲ್ ಗುಡ್.

ಅದು ನೋಡಿ ಸ್ಪಲ್ಪ ದಿವಸಕ್ಕೆ ಇಲ್ಲಿ ಓಬಾಮನ ಅಧಿಕಾರ ಸ್ವೀಕಾರ ನಡೆದಿದ್ದು ಆಯ್ತು. ನಿಜಕ್ಕೂ ಪ್ರತಿಭೆಯುಳ್ಳ ’ಅಂಡರ್ ಡಾಗ್’ನನ್ನು ಜನ ಹೇಗೆ ಕೈ ಹಿಡಿದು ಮೇಲೆ ಎತ್ತುತ್ತಾರೆಂದು ಅನಿಸಿತು. ಹಾಗೆ ಕೆಳವರ್ಗದ, ತುಳಿತಕ್ಕೆ ಒಳಗಾದವರಿಂದ ಒಬ್ಬ ಮೇಲೆ ಬಂದರೆ ಆ ಕತೆಯನ್ನು ಜನ-ಮಾಧ್ಯಮ ಹೇಗೆ ಇಷ್ಟಪಡುತ್ತಾರೆಂದು ಗೊತ್ತಾಗಿದ್ದು ಆವಾಗಲೇ. ಬಹುಷಃ ಅದೇ ಕಾರಣಕ್ಕೇ ಜಮಾಲ್‍ನ ಕತೆ ನಮಗೂ ಇಷ್ಟವಾಗಿರಬಹುದು ಅನಿಸಿತ್ತು.

ಆದರೆ ಇನ್ನೂ ಸೂಕ್ಷ್ಮವಾಗಿ ನೋಡಿದಾಗ, ಕತೆಯಲ್ಲಿ ಎಷ್ಟೊಂದು ಕಂದಕಗಳಿದ್ದವು.

’ಅಂಡರ್ ಡಾಗ್’ ವಿಷಯದಲ್ಲಿ ಭಾರತೀಯರು ತೋರಿಸುವ ಮೆಚ್ಚುಗೆ-ಕುತೂಹಲ ಗೊತ್ತಿದ್ದದ್ದೆ. ಅಲ್ಲಿ ಒಬ್ಬ ’ಗೋವಿಂದ್ ಜಸ್ವಾಲ್’ ಐಎ‍ಎಸ್ ಪರೀಕ್ಷೆಯಲ್ಲಿ ರಾಂಕ್ ಬಂದಾಗ, ಆತ ಬಡ ಕಾರ್ಮಿಕನ ಮಗನೆಂದು-ಎಷ್ಟು ಶ್ರಮಪಟ್ಟಿದ್ದನೆಂದು , ಮಾಧ್ಯಮದವರು ಅದರ ಬಗ್ಗೆ ಪ್ರಶಂಸಿ ಬರೆದಿದ್ದು ನೆನಪಿರಬಹುದು. ಅದೇ ರೀತಿ ಅದನ್ನು ಕೇಳಿದ-ಓದಿದ ನಾವೆಲ್ಲಾ ಮೆಚ್ಚುಗೆ ಸೂಚಿಸಿದ್ದೆವು. ತುಂಬಾ ಕಷ್ಟ ಪಟ್ಟು ಮೇಲೆ ಬಂದವರ ಬಗ್ಗೆ ನಮ್ಮ ಮೆಚ್ಚುಗೆ ಇದ್ದೇ ಇರುತಿತ್ತು.
ಹೀಗಿರುವಾಗ ಜಮಾಲ್‍ನನ್ನು ’ಚಾಯ್‍ವಾಲ’ ಅಂತಾ ಗೇಮ್ ಶೋ ದಲ್ಲಿ ಹಾಸ್ಯ ಮಾಡಿದ್ದು, ಅವನನ್ನು ಪೋಲಿಸ್‍ಗೆ ಒಪ್ಪಿಸಿದ್ದು...ಭಾರತದಲ್ಲಿ ಎಲ್ಲಿ ಮಾಡ್ತಾರೆ?

ಹಾಗೇ ಇನ್ನೊಂದೆಡೆ ಇರುವ ’ರಿಯಲ್ ಅಮೇರಿಕನ್’ ಸನ್ನಿವೇಶ. ಇದು ನನಗೆ ತುಂಬಾ ನಗು ತರಿಸಿದ ವಿಷಯ. ಈ ಚಿತ್ರವಿರೋದು ಭಾರತದ ಬಗ್ಗೆ, ಚಿತ್ರ ಮಾಡುತ್ತಾ ಇರೋದು ಒಬ್ಬ ಬ್ರಿಟಿಷ್, ಅದರ ಅಲ್ಲಿ ನೂರು ಡಾಲರ್ ಕೊಡಿಸಿ ’ರಿಯಲ್ ಅಮೇರಿಕ’ ತೋರಿಸುವ ಅವಶ್ಯಕತೆ ಎಲ್ಲಿತ್ತು? ಬಹುಷಃ ಅಸ್ಕರ್ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿನ ಅಮೇರಿಕನ್‌ರನ್ನು ಪಟಾಯಿಸಲಿಕ್ಕೆ ಇರಬಹುದೇ ಈ ಡೈಲಾಗು !

ಮತ್ತೊಂದು ಅತೀ ಅನಿಸುವಷ್ಟು ಇದ್ದ ಆ ಅಮಿತಾಭ್ ಆಟೋಗ್ರಾಫ್ ಸನ್ನಿವೇಶ. ನಿಜ, ಅಲ್ಲಿ ಹಾಗೇ ಇರಬಹುದು. ಆದರೆ ಅದನ್ನು ವೈಭವೀಕರಿಸಿ ಅಷ್ಟು ತೋರಿಸುವ ಅವಶ್ಯಕತೆ ಇತ್ತೇ?

ಅವಶ್ಯಕತೆ ಇತ್ತು..ಇಲ್ಲದಿದ್ದರೆ ನಮ್ಮ-ನಿಮ್ಮಂತಹವರು ಇದರ ಬಗ್ಗೆ ಮಾತಾಡುತ್ತಿದ್ದವೆ? ಗೊತ್ತಿಲ್ಲದ ಹಾಗೆ ಪುಗಸಟ್ಟೆ ಪಬ್ಲಿಸಿಟಿ ನೀಡುತ್ತಿದ್ದವೆ? ಆಸ್ಕರ್ ಅನ್ನೋ ಆ ಮಹಾನ್ ಶಂಖದಿಂದ ಬರುವ ತೀರ್ಥದ ಹತ್ತಿರ ಇದಕ್ಕೆ ಹೋಗಲಿಕ್ಕೆ ಆಗುತಿತ್ತೆ?

ಇದೇನೂ ಸಾಮಾಜಿಕ ಕಾಳಜಿ ಇಟ್ಟುಕೊಂಡು ಮಾಡಿದ ಚಿತ್ರವಲ್ಲ.’ಪಥೇರ್ ಪಂಚಲಿ’ಯ ಹಾಗೆ ಬಡತನದ ಬಗ್ಗೆ ಮರುಗುವಂತೆ ಮಾಡುವುದಿಲ್ಲ, ಹಾಗೇ ಸ್ಲಂ‍ನ ಕ್ರೂರತೆ-ಆಪರಾಧದ ತೆರೆದಿಡುವ ’ಸಿಟಿ ಆಫ್ ಗಾಡ್’ ಕೂಡ ಅಲ್ಲ. ಇದು ಕೇವಲ ಮನೋರಂಜನಾತ್ಮಕ ಚಿತ್ರ !

ಆದರೆ ಜಿಗುಪ್ಸೆ ತರಿಸಿದ್ದು ಪಾಶ್ಚಾತ್ಯರ ನಿಲುವುಗಳು. ಯಾವುದೋ ಒಂದು ೨ ಗಂಟೆ ಸಿನಿಮಾ ನೋಡಿ, ಭಾರತವನ್ನು ಆಳೆಯುವುದು. ಏನೇ ಮಾಡಿದರೂ ಇವರಿನ್ನು ಅಲ್ಲಿಂದ ಮುಂದೆ ಬೆಳೆದೇ ಇಲ್ಲಾ ಅನ್ನುವ ಅದೇ ಗತಕಾಲದ ಗತ್ತಿನ ನಡವಳಿಕೆ.

ಹಾಗಂತ ಭಾರತದಲ್ಲಿ ಅಲ್ಲಿ ತೋರಿಸಿದ್ದು ಯಾವುದು ಇಲ್ಲವೇ ಇಲ್ಲಾ ಅಂತಲ್ಲ. ಅದೇ ರೀತಿ ಕರಣ್ ಜೋಹರ್-ಸೂರಜ್ ಭಾರತ್ಯಾಜ ಚಿತ್ರಗಳಲ್ಲಿದ್ದಂತೆ ಜನ ಚಮಕ್ ಶೆರ್ವಾನಿ-ಗಾಗ್ರ-ಚೋಲಿಗಳಲ್ಲಿ ಯಾವಾಗಲೂ ಮಿಂಚುತ್ತಾ ಇರುತ್ತಾರೆಂಬುದು ಸುಳ್ಳು.

ಭಾರತ ಇವೆರಡು ಅಲ್ಲಾ. ಅದು ಇವುಗಳ ಮಧ್ಯೆದಲ್ಲೆಲೋ ಇದೆ.

ನೂರು ಕೋಟಿ ಜನಸಂಖ್ಯೆಯಿಟ್ಟುಕೊಂಡೂ, ಭಾಷೆ-ಜಾತಿ-ಪ್ರಾಂತ್ಯ ಅಂತೆಲ್ಲಾ ಭಿನ್ನಾಭಿಪ್ರಾಯಗಳಿದ್ದೂ, ನಾವು ಮುನ್ನಡೆಯುತ್ತಿದ್ದೇವೆ. ಹೌದು, ಈಗಲೂ ನಮ್ಮಲ್ಲಿ ಸ್ಮಂ ಗಳಿವೆ, ಜನ ಮೂಲಭೂತ ಸೌಕರ್ಯಗಳಿಗೆ ಪರದಾಡುತ್ತಿದ್ದಾರೆ. ಆದರೂ ನಾವು ಕನಸು ಕಾಣುವುದು ನಿಲ್ಲಿಸಿಲ್ಲ. ಅದು ನಿಜವಾದ ಭಾರತ.

ಹೊಸ ಗಾದೆ: ಸಿನಿಮಾಗೆ ಆಸ್ಕರ್ ಬೇಕು ಅಂತಾ ಕೇಳಿದರೆ, ಅದರಲ್ಲಿ ಭಾರತದ ಸ್ಲಂ ಇದೆಯಾ ಅಂದರಂತೆ !

ಜಯ್ ಹೋ !

Friday, December 12, 2008

ನಮಗೂ ಒಂದು ಮೊಸದ್ ಬೇಕೇ ?

ಅದಾಗಿ ೧೫ ದಿವಸ ಆಗ್ತಾ ಬಂತು..

ಅಲ್ಲಿ ಮುಂಬೈ ನಗರಿ ಕರಾಳ ಹಸ್ತಗಳಲ್ಲಿ ಸಿಲುಕಿ ಹಿಂಸೆ ಅನುಭವಿಸುತ್ತಿತ್ತು.ಆ ದೃಶ್ಯಗಳನ್ನು ನೋಡುತ್ತಿದ್ದಂತೆ, ಆಕ್ರೋಶ ಕುದಿಯತೊಡಗಿತ್ತು.

ಪಾಕಿ ವಿದೇಶಾಂಗ ಮಂತ್ರಿ ಅಲ್ಲಿ ಪಾಕಿಸ್ತಾನದಲ್ಲಿ ಕುಳಿತು, ಮುಂಬೈ ಘಟನೆಗೂ ಪಾಕಿಸ್ತಾನಕ್ಕೂ ಏನೂ ಸಂಬಂಧವಿಲ್ಲ ಎಂದು ಕತೆ ಹೇಳುತ್ತಿದ್ದ. ಸಿಎನ್‍ಎನ್‍ನಲ್ಲಿ ಅದನ್ನು ನೋಡುತ್ತಿದ್ದ ನನ್ನಾಕೆಗೆ ಬಂತು ನೋಡಿ ಸಿಟ್ಟು, 'ಈ ಪಾಕಿಸ್ತಾನದವರದು ಬರೀ ಇದೇ ಆಯ್ತು, ಮಾಡೋದೆಲ್ಲಾ ಮಾಡಿ ಈಗ ಏನೂ ಗೊತ್ತಿಲ್ಲಾ ಅಂತಾರೆ. ಏಕೆ ನಂಬಬೇಕು ಅವರು ಹೇಳೋದು' ಅಂತಾ ಎನ್‍ಡಿಟಿವಿ ಪ್ರಣಬ್‍ರಾಯ್ ತರನೇ ಕೇಳಿದಳು.

ಹೌದಲ್ವಾ ಅನಿಸ್ತು..

ಸಿಕ್ಕಬಿದ್ದ ಆ ಆತಂಕವಾದಿ ಕರಾಚಿಯವನಂತೆ, ಅಲ್ಲೇ ಪಾಕಿಸ್ತಾನದಲ್ಲಿ ಅವರಿಗೆ ತರಬೇತಿ ಕೊಟ್ಟು ಕಳಿಸಿದರಂತೆ ಅಂತಾ ಪತ್ರಿಕೆಗಳು ಪುಟಗಟ್ಟಲೆ ಬರೀತಾ ಇದ್ದರೆ, ಅಲ್ಲಿ ಪಾಕಿ ಅಧ್ಯಕ್ಷ 'ನಾವು ಅಷ್ಟೇ, ನಿಮ್ಮ ತರನೇ ಆತಂಕವಾದಿಗಳಿಂದ ನರಳುತ್ತಾ ಇದೀವಿ' ಅಂತಾ ಟಿವಿಯಲ್ಲಿ ಹೇಳಿದಾಗ, ಮೊದಲೇ ಕೆಟ್ಟ ತಲೆ ಇನ್ನೂ ಕೆಟ್ಟಾಗಿತ್ತು. ಟಿವಿ ನೋಡ್ತಾ ಇದ್ದ ನನ್ನಾಕೆ ಮುಖ ನೋಡಿದೆ, ಟಿವಿಯಲ್ಲಿದ್ದ ಆ ಅಧ್ಯಕ್ಷನನ್ನು ಗುರಾಯಿಸುತ್ತಿದ್ದಳು.

ಸ್ಪಲ್ಪ ದಿನದಲ್ಲೇ ಮತ್ತೆ ಶುರುವಾಯಿತು ನೋಡಿ ಗೂಬೆ ಕೂರಿಸುವ ಕೆಲಸ. ನೌಕದಳದವರು ಗುಪ್ತಚರ ಇಲಾಖೆ ಮೇಲೆ, ಅವರು ಇವರ ಮೇಲೆ..ನಡದೇ ನಡೀತು. ಎನ್‍ಎಸಿಜಿ ಕಮೊಂಡೋಗಳು ಬರೋಕೇ ಯಾಕೇ ಅಷ್ಟು ವಿಳಂಬವಾಯ್ತು ಅಂತಾ ಇನ್ನೊಂದು ಸುದ್ದಿ. ಇವುಗಳಿಗೆಲ್ಲಾ ಕಳಸವಿಟ್ಟಂತೆ ಮುಂಬೈ ಬೆಂಕಿಯಲ್ಲಿ ರಾಜಕೀಯ ಪಕ್ಷಗಳು ಬಿಸಿ ಕಾಯಿಸಿಕೊಳ್ಳೋಕೆ ಪ್ರಯತ್ನ ಮಾಡಿದ್ದು ಆಯ್ತು.

ಹಿಂದಿನ ವಿದ್ವಂಸಕಾರಿ ಘಟನೆಗಳಂತೆ , ಈ ಸಲನೂ ಏನೂ ಪಾಠ ಕಲಿದೇ, ಯಾರಿಗೂ ಪಾಠನೂ ಕಲಿಸದೇ, ಸ್ಪಲ್ಪ ದಿವಸ ಉದ್ವೇಗದಿಂದ ಮಾತಾಡಿ, ಮತ್ತೆ ಎಲ್ಲಾ ಮರೆತುಹೋಗ್ತಾ ಇದೀವಿ ಅನಿಸೋಕೆ ಶುರುವಾಯ್ತು.

ನನ್ನ ಅರ್ಧಾಂಗಿ ಕೇಳಿದಳು 'ಯಾಕೇ ಸೆಪ್ಟಂಬರ್ ೧೧ರ ದಾಳಿಯ ನಂತರ ಅಮೇರಿಕೆಯಲ್ಲಿ ಮತ್ತೆ ದಾಳಿ ಆಗಲಿಲ್ಲ? ನಮ್ಮಲ್ಲಿ ಯಾಕೇ ತಿಂಗಳಿಗೊಂದು ಆಗ್ತಾ ಇದೆ'.

ಪ್ರಶ್ನೆ ಪ್ರಶ್ನೆಯಾಗೇ ಉಳಿದು ಹೋಯ್ತು..

ಇವೆಲ್ಲದರ ಮಧ್ಯೆ ನಿಜಕ್ಕೂ ಮಿಂಚಂತೆ ಬೆಳಗಿದ್ದು, ನಮ್ಮ ಪೋಲಿಸ್, ನಮ್ಮ ಕಮೊಂಡೋಗಳ ನಿಸ್ವಾರ್ಥ ತ್ಯಾಗ, ವೀರ ಹೋರಾಟ. ಒಂದೊಂದು ವೀರೋಚಿತ ಕತೆಯು ನಮ್ಮ ಸೇನೆಯ ಬಗ್ಗೆ, ನಮ್ಮ ಪೋಲಿಸ್ ಬಗ್ಗೆ ಇನ್ನೂ ಹೆಚ್ಚು ಆಭಿಮಾನದ ಕಿಚ್ಚು ಹೊತ್ತಿಸಿತು.

ಇದೇ ಪೋಲಿಸ್‍ನವರ ಬಗ್ಗೆ ಅಲ್ವಾ, ನಮ್ಮ ಸಿನಿಮಾಗಳಲ್ಲಿ ಲಂಚಕೋರರು-ಕೆಲಸಕ್ಕೆ ಬಾರದವರು ಅಂತಾ ತೋರಿಸಿದ್ದು, ನಾವು ಹೌದು-ಹೌದು ಅಂದಿದ್ದು.ಅದೇ ಖಾಕಿ ಪೋಲಿಸ್‍ನಲ್ಲಿ ಕೆಲ ದಿಟ್ಟಿಗರು, ಅಲ್ಲಿ ಸಿಎಸ್‍ಟಿ ನಿಲ್ದಾಣದಲ್ಲಿ ಕೈಯಲ್ಲಿ ಹಳೇ ರೈಫಲ್/ಬಂದೂಕು ಹಿಡಕೊಂಡು, ಆ ಎಕೆ೪೭-ಗ್ರೆನೇಡ್ ವಿರುದ್ಧ ಹೋರಾಡುತ್ತಿದ್ದರು. ಮತ್ತೊಂದು ಕಡೆ ಅಲ್ಲಿ ತಾಜ್ ಹೋಟೆಲ್‍ನಲ್ಲಿ, ಒಬ್ಬ ಪೋಲಿಸ್ ಆಧಿಕಾರಿ ೬ ಪೇದೆಗಳೊಂದಿಗೆ ಅಲ್ಲಿದ್ದ ಉಗ್ರರೊಂದಿಗೆ, ಕಮಾಂಡೋಗಳು ಬರೋವರೆಗೆ ಹೋರಾಟ ಮಾಡ್ತಾನೇ ಇದ್ದರು..

ಇದೆಲ್ಲದರ ಮಧ್ಯೆ , ಯಾಕೋ ಇಸ್ರೇಲಿ ಗುಪ್ತಚರ ಸಂಸ್ಥೆ 'ಮೊಸದ್' ನೆನಪಾಯ್ತು.

೧೯೭೨ರ ಮ್ಯುನಿಚ್ ಒಲಂಪಿಕ್‍ನಲ್ಲಿ ೧೧ ಇಸ್ರೇಲಿ ಒಲಂಪಿಯನ್‍ರನ್ನು ಉಗ್ರರು ನುಗ್ಗಿ ಹತ್ಯೆ ಮಾಡಿದ್ದರು. ಇಸ್ರೇಲ್ ಸರ್ಕಾರ ತನ್ನ ಗುಪ್ತಚರ ಸಂಸ್ಥೆಗೆ ಒಂದಂಶದ ಆದೇಶ ನೀಡಿತು - 'ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಬೇಕು'. ಮೊಸದ್ ಮುಂದಿನ ಹಲವು ವರ್ಷಗಳ ಕಾಲ ಆ ಹಿಂಸೆಗೆ ಕಾರಣರಾದವರನ್ನು ಜಾಲಾಡಿತು, ವಿವಿಧ ತಂತ್ರಗಳಿಂದ ಅವರನ್ನು ಮುಗಿಸಿತು.

ನಮ್ಮಲ್ಲಿ ಆ ತರದ ಒಂದು ಧೃಡ ನಿರ್ಧಾರ ತೆಗೆದುಕೊಳ್ಳುವವರು, ಈ ತರ ನಮ್ಮ ತಂಟೆಗೆ ಬಂದಾಗ, ಅದಕ್ಕೆ ಮರು ಉತ್ತರ ಕೊಡುವವರು ಬೇಕಲ್ವಾ ..

Sunday, August 03, 2008

ಒಂದು ವೈಪರ್‍ನ ಕತೆ..

ಆ ವ್ಯಕ್ತಿಯ ಹೆಸರು ರಾಬರ್ಟ್ ಬಾಬ್ ಕಿಯಾರ್ನ್.

ಕೆಲವೊಮ್ಮೆ ಯಾವಾಗಲೋ ತಲೆಯಲ್ಲಿ ಮಿಂಚಿನಂತೆ ಸುಳಿದುಹೋಗುವ ಯೋಚನೆಗಳು ಹೇಗೆ ಜೀವನವನ್ನು ಬದಲಾಯಿಸಬಹುದು ಎನ್ನುವುದಕ್ಕೆ ರಾಬರ್ಟ್ ಜೀವನವೇ ಸಾಕ್ಷಿ.

ನೀವು ಕಾರ್ ಡ್ರೈವ್ ಮಾಡುವಾಗ ಅಥವಾ ಬಸ್ ಅಥವಾ ಆಟೋದಲ್ಲಿ ಹೋಗುವಾಗ, ಮಳೆ ಶುರುವಾದಾಗ, ವಾಹನದ ವಿಂಡ್‍ಶೀಲ್ಡ್‌‍ನ ಮೇಲಿನ ನೀರನ್ನು ಒರೆಸಿ ಚಾಲಕರಿಗೆ ರಸ್ತೆ ಕಾಣುವಂತೆ ಮಾಡುವ ಚಿಕ್ಕ ಕೋಲಿನಂತಹದದ್ದನ್ನು ನೋಡಿರಬಹುದು. ಮೊದಲೆಲ್ಲ ಕಾರ್‍ಗಳಲ್ಲಿ ಇದ್ದ ವೈಪರ್‌ಗಳು ಸ್ವಯಂಚಾಲಿತವಾಗಿರಲಿಲ್ಲ.

ಈ ರಾಬರ್ಟ್‍ನ ಜೀವನ ಈ ವೈಪರ್ ಸುತ್ತ ತಿರುಗಿದ್ದೆ ಒಂದು ಕಥನ.

ಅದು ಐವತ್ತರ ದಶಕ. ಆವಾಗೆಲ್ಲ ಮಳೆ ಬರುವಾಗ ಕಾರಿನ ಗಾಜಿನ ಮೇಲೆನ ನೀರು ಒರೆಸಲು ಚಾಲಕರು ಆ ವೈಪರ್‌ನ್ನು ನೀರು ಹೋಗುವವರೆಗೆ ತಾವೇ ತಿರುಗಿಸಬೇಕಿತ್ತು.

ಆ ದಿನಗಳಲ್ಲಿ ಈ ರಾಬರ್ಟ್‍ನ ಮದುವೆ ನಡೆಯಿತು. ಮದುವೆ ದಿನದ ಪಾರ್ಟಿಯಲ್ಲಿ, ಆಕಸ್ಮಿಕವಾಗಿ ಚಿಮ್ಮಿದ ಶಾಂಪೇನ್‍ನ ಮುಚ್ಚಳ ರಾಬರ್ಟ್‍ನ ಎಡಗಣ್ಣಿಗೆ ಹೊಡೆಯಿತು.ಕಣ್ಣಿಗೆ ಏನಾದರೂ ಬಡಿದಾಗ, ಕಣ್ಣು ರೆಪ್ಪೆ ಪಟಪಟ ಅಂತಾ ಮುಚ್ಚಿ ತೆಗೆಯುವುದು ಮಾಡುತ್ತಿರುತ್ತೆ ಅಲ್ವಾ. ರಾಬರ್ಟ್‍ಗೆ ಹೊಳೆದಿದ್ದು ,ಕಣ್ಣು ರೆಪ್ಪೆ ಹೇಗೆ ನಿಯಿಮಿತವಾಗಿ ಹೊಡೆದುಕೊಳ್ಳುತ್ತೋ, ಹಾಗೇ ಈ ವೈಪರ್ ನಿಯಮಿತವಾಗಿ ತಿರುಗುವಂತೆ ಮಾಡಿದರೆ ಹೇಗೆ?

ಆದಾಗಿ ಬಹು ವರ್ಷದ ಶ್ರಮದ ನಂತರ ಕೊನೆಗೂ ರಾಬರ್ಟ್ ಹೊಸ ವೈಪರ್ ಸಿದ್ದಮಾಡುತ್ತಾನೆ. ಕಾರ್ ತಯಾರಿಸುವ ಬೃಹತ್ ಕಂಪನಿಗಳೆಲ್ಲಾ ಇನ್ನೂ ಈ ಸಂಶೋದನೆಯಲ್ಲಿ ತೊಡಗಿರುವಾಗ, ರಾಬರ್ಟನ ಕೈಯಲ್ಲಿ ಆ ಹೊಸ ವೈಪರ್. ಇದರಲ್ಲಿ ಚಾಲಕರು ವೈಪರ್ ಬಟನ್ ತಿರುಗಿಸಿದರಾಯ್ತು, ನಿಯಮಿತ ವೇಗದಲ್ಲಿ ವೈಪರ್ ಕಡ್ಡಿ ತಿರುಗಿ ನೀರನ್ನು ಒರೆಸುತ್ತಿರುತ್ತೆ.

ಡಾಕ್ಟರೇಟ್ ಮಾಡಿ ಯುನಿವರ್ಸಿಟಿಯೊಂದರಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದ ರಾಬರ್ಟ್,ಈ ವೈಪರ್ ಸಂಶಧನೆಯ ಪೇಟೆಂಟ್‍ಗೆ ಅರ್ಜಿ ಸಲ್ಲಿಸುತ್ತಾನೆ. ನಂತರ ತನ್ನ ಸಂಶೋಧನೆಯನ್ನು ತೋರಿಸಲು, ತನ್ನ ಫೋರ್ಡ್ ಕಾರಿಗೆ ವೈಪರ್‌ನ್ನು ಅಳವಡಿಸಿಕೊಂಡು, ಫೋರ್ಡ್ ಕಂಪೆನಿಯ ಮುಖ್ಯಾಲಯಕ್ಕೆ ಬರುತ್ತಾನೆ. ಆಗಿನ್ನು ಫೋರ್ಡ್‍ ಇಂಜಿನೀಯರ್‌ಗಳು-ಅವರ ರಿಸರ್ಚ್ ಲ್ಯಾಬ್‍ಗಳು ಇಂತಹ ಒಂದು ವೈಪರ್‌ಗೋಸ್ಕರ ತಿಣುಕುತ್ತಿರುತ್ತವೆ. ರಾಬರ್ಟ್‌‍ನ ಸಂಶೋಧನೆ ನೋಡಲು ಅಲ್ಲಿನ ಇಂಜಿನೀಯರ್‌ಗಳು ಮುಗಿಬೀಳುತ್ತಾರೆ.

ರಾಬರ್ಟ್‌ನ ತನ್ನ ಸಂ‍ಶೋಧನೆ ಫೋರ್ಡ್‌ನ ವರಿಗೆ ಬೇಕಾಗಿದೆ ಎನ್ನುವ ನಂಬುಗೆ. ಫೋರ್ಡ್ ಕಾರುಗಳಿಗೆ ವೈಪರ್ ತಯಾರಿಸಿಕೊಡುವ ಕಾಂಟ್ರಕ್ಟ್ ತನಗೆ ಸಿಗಲಿದೆಂಬ ವಿಶ್ವಾಸವಿರುತ್ತದೆ. ಆದರೆ ಅದಕ್ಕೆ ವಿರುದ್ದವಾಗಿ ಫೋರ್ಡ್, ರಾಬರ್ಟ್‌ನ ಕರೆಗಳನ್ನು ನಿರಾಕರಿಸತೊಡಗುತ್ತದೆ.

ಇದಾಗಿ ಕೆಲವು ವರ್ಷಗಳಿಗೆ ರಾಬರ್ಟ್‌ನ ಪೇಟೆಂಟ್ ಅಂಗೀಕೃತವಾಗುತ್ತದೆ. ಸರಿಸುಮಾರು ಅದೇ ಸಮಯದಲ್ಲಿ ಫೋರ್ಡ್ ಮಾರುಕಟ್ಟೆಗೆ ತನ್ನ ಹೊಸ ಕಾರು ಬಿಡುಗಡೆ ಮಾಡುತ್ತದೆ. ಕಾರಿನ ವಿಶೇಷ - ಹೊಸ ನಮೂನೆಯ ವೈಪರ್ !!

ಆದಾಗಿ ಎಷ್ಟೋ ವರ್ಷಗಳ ನಂತರ ರಾಬರ್ಟ್‌‌ಗೆ ಈ ವಿಷಯ ತಿಳಿದಾಗ, ೧೯೭೮ರಲ್ಲಿ ರಾಬರ್ಟ್, ಫೋರ್ಡ್‌ನ ಮೇಲೆ ತನ್ನ ಪೇಟೆಂಟ್ ಕದ್ದ ಕೇಸ್ ಹಾಕುತ್ತಾನೆ.ಹಾಗೆಯೇ ತನ್ನ ವೈಪರ್ ಪೇಟೆಂಟ್ ಉಪಯೋಗಿಸಿದ ಇತರ ೨೮ ಕಾರು ತಯಾರಿಕ ಕಂಪೆನಿಗಳ ಮೇಲೂ ಕೇಸ್ ಹಾಕುತ್ತಾನೆ.

ಮುಂದಿನ ಸುಮಾರು ೧೦-೧೨ ವರ್ಷ, ಫೋರ್ಡ್ ಕೇಸನಲ್ಲೇ ತನ್ನ ಜೀವನವನ್ನು ಕಳೆಯುತ್ತಾನೆ. ಕೊನೆಗೂ ೧೯೯೦ರಲ್ಲಿ ರಾಬರ್ಟ್ ಕೇಸ್ ಗೆದ್ದಾಗ, ಪೋರ್ಡ್ ರಾಬರ್ಟ್‌‌ಗೆ ೧೦ ಮಿಲಿಯನ್ ಡಾಲರ್ ಕೊಡುತ್ತೆ. ಫೋರ್ಡ್ ಕೇಸಿನ ವಿಜಯದ ನಂತರ ರಾಬರ್ಟ್, ಕ್ರೈಸಲರ್‍ ಎನ್ನುವ ಇನ್ನೊಂದು ಕಾರು ಕಂಪೆನಿಯ ವಿರುದ್ದ ಕೇಸು ನಡೆಸುತ್ತಾನೆ. ಅದರಲ್ಲೂ ಸಹ ೨೦ ಮಿಲಿಯನ್ ಡಾಲರ್ ಸಿಗುತ್ತೆ. ಈ ಕೇಸುಗಳ ಮಧ್ಯೆದಲ್ಲಿ ಉಳಿದ ಕಂಪೆನಿಗಳ ಮೇಲಿನ ಕೇಸುಗಳನ್ನು ಸಂಭಾಳಿಸಲಿಕ್ಕೆ ಆಗದೆ ಆ ಕೇಸುಗಳು ವಜಾವಾಗುತ್ತವೆ.

ಈ ಕಡೆ ಈ ಕೇಸುಗಳ ಓಡಾಟದಿಂದ ರಾಬರ್ಟ್‌ನ ವೈಯುಕ್ತಿಕ ಜೀವನ ಹದೆಗೆಡುತ್ತದೆ. ಅವನ ಪತ್ನಿ ವಿಚ್ಚೇದನ ತೆಗೆದುಕೊಳ್ಳುತ್ತಾಳೆ. ರಾಬರ್ಟ್ ಕೇಸುಗಳನ್ನು ಗೆದ್ದರೂ, ಬಂದ ದುಡ್ಡಲ್ಲಿ ಹತ್ತು ಪರ್ಸೆಂಟ್ ತನ್ನ ವಿಚ್ಚೇದನಕ್ಕೆ ಕೊಡಬೇಕಾಗುತ್ತದೆ. ಇನ್ನೂ ಹೆಚ್ಚು ಹಣ ತನ್ನ ಕೇಸುಗಳನ್ನು ನೋಡಿಕೊಂಡ ಲಾಯರ್‌ಗಳ ಪಾಲಾಗುತ್ತದೆ.

ಕೊನೆಗಾಲದಲ್ಲಿ ಇದೆಲ್ಲವುಗಳಿಂದ ದೂರ ಸರಿದು ಯಾವುದೋ ನದಿದಂಡೆ ಮೇಲೆ ಮನೆಮಾಡಿಕೊಂಡು ರಾಬರ್ಟ್ ದಿನಕಳೆಯುತ್ತಾನೆ. ಆದರೆ ಆಗಾಗ ತನ್ನ ಮಕ್ಕಳಿಗೆ ಮತ್ತು ಲಾಯರ್‌ಗಳಿಗೆ ತನ್ನ ಪೇಟೆಂಟ್‍ಗಳ ಬಗ್ಗೆ ಮಾತಾಡಲು ಪೋನ್ ಮಾಡುತ್ತಿರುತ್ತಾನೆ. ಇಂತಹ ರಾಬರ್ಟ್ ೨೦೦೫ರಲ್ಲಿ ಕೊನೆಯುಸಿರೆಳೆಯುತ್ತಾನೆ.

ಫೋರ್ಡ್ ಮತ್ತು ಇತರೆ ಶಕ್ತಿಶಾಲಿ ಕಾರ್ಪೋರೆಟ್‍ಗಳ ವಿರುದ್ಧ ಸಮರ ಸಾರಿ, ಅದರಲ್ಲಿ ಗೆದ್ದ ಈ ಸಂಶೋಧಕ, ತನ್ನ ಜೀವನದಲ್ಲಿ ಆ ಗೆಲುವಿಗಾಗಿ ಸಂದ ಬೆಲೆ ಮಾತ್ರ ಆಪಾರ. ತನ್ನ ಸಂಶೋಧನೆ ಜಗತ್ತಿನ ಪ್ರತಿ ಕಾರಿನಲ್ಲೂ ಇದ್ದರೂ, ಇದು ತನ್ನದೇ ಸಂಶೋಧನೆ ಎನ್ನುವ ಸತ್ಯ ಜಗತ್ತಿಗೆ ಹೇಳಲು ತನ್ನ ಜೀವವನ್ನು ತೇಯ್ದವನ ದುರಂತ ಕತೆ..

ಯಾವಾಗಲೋ ಎಲ್ಲೋ ಓದಿದ್ದ ಈ ವೈಪರ್ ಕತೆ ಮತ್ತೆ ನೆನಪಾಗಿದ್ದು, ಮೊನ್ನೆ ಹೊಸ ಸಿನಿಮಾವೊಂದರ ಟ್ರೈಲರ್ ನೋಡಿದಾಗ. ರಾಬರ್ಟ್ ಕಿಯಾರ್ನ್‍ನ ಈ ನಿಜ ಜೀವನದ ಕತೆಯನ್ನು ಆಧಾರಿಸಿ ಆಕ್ಟೋಬರ್‌ನಲ್ಲಿ ಬರುತ್ತಿರುವ ಚಿತ್ರದ ಹೆಸರು ' ಪ್ಲಾಶ್ ಆಫ್ ಜೀನಿಯಸ್'.

ಆ ಚಿತ್ರದ ಟ್ಯಾಗ್ ಲೈನ್ ಬಹುಷಃ ರಾಬರ್ಟ್‌ನ ಹೋರಾಟ ಜೀವನದ ಒಟ್ಟು ಸಾರ
"Corporations have time, money and power on their side. All Bob Kearns had on his side was the truth".

Monday, April 07, 2008

ಪ್ರಿಯ ಸಖಿಗೆ...

ಮನಸು ಮಾತುಗಳಲ್ಲಿ
ಮುದ ಮೂಡಿಸಿ ಪ್ರೀತಿ
ಸೋಸಿ ಪ್ರಣಯದೋಟದಲ್ಲಿ
ಕೈಹಿಡಿದು ವಿಹರಿಸಿದ
ರತಿಯಂತಾಕೆಯೇ

ಕಳೆದಿದ್ದು ನನ್ನೊಂದಿಗೆ
ತಿಂಗಳುಗಳು ಹತ್ತು
ಸವಿದಿದ್ದು ಬೇವು-ಬೆಲ್ಲವೆರಡೂ
ಹೆಚ್ಚಾಗಿದ್ದು ಬೇವೇ-ಬೆಲ್ಲವೇ?

ಜಗಳ ಹಟಗಳಲ್ಲಿ
ಮಾತು ಮರೆತು ಮೌನ ಬಿರಿದು
ದಿಂಬು ಎಸೆದು ಕೋಪಗೊಂಡು
ಶಾಂತಳಾಗಿ ಮಾತಿಲ್ಲದೆ
ಬಂದು ಅಪ್ಪಿದಾಕೆಯೇ

ನೆನ್ನೆಗಳು ಮಾತು ಮಧುರ
ಅದರಲ್ಲಿ ಬೇವಿನ ಒಗರು
ಇರುವುದು ಸಹಜ
ಆದರೆ ಒಗರಿನ ಜೊತೆ
ಬೆಲ್ಲವ ಮರೆವುದೇ?

ಕತ್ತಲೆ ಕೋಣೆಯಲ್ಲಿ ನನ್ನೆಡೆಗೆ
ಭಯಾನಕ ಆಕೃತಿಗಳು
ಬಾಗಿಲು ಒದ್ದು ಒಳಬಂದಾಗ
ಭಯದಿಂದ ಸಣ್ಣಗೆ ಕಿರುಚಿಕೊಂಡ
ನನ್ನ ಅಪ್ಪಿ ತಲೆ ನೇವರಿಸಿದ ಅಮ್ಮನಂತಾಕೆಯೇ

ಆಟ ತುಂಟಾಟಗಳಲ್ಲಿ
ಕಾಡಿಸಿ ಪೀಡಿಸಿ
ಪ್ರೀತಿಸಿ ಪ್ರೀತಿ ಹಂಚಿಕೊಂಡು
ನವವರ್ಷವ ಕಳೆಯೋಣವೇ
ಪ್ರಿಯಸಖಿಯೇ?

ಬರಲಿರುವ ದಿನಗಳಲ್ಲಿ
ನನ್ನ ಹಾರೈಕೆ ಇಷ್ಟೇ
ಇರಲಿ ನಮ್ಮ ಬಾಳಿನಲ್ಲಿ
ಬೆಲ್ಲದ ಸವಿ ಯಶದ ಸವಿ
ಮರೆಯುವುದ ಬೇಡ ಬೇವಿನ ಕಹಿ

Thursday, February 21, 2008

ನಾಳೆಗಳ ಭರವಸೆಯಲ್ಲಿ...

ಗಾಢ ಅಂಧಕಾರದಲ್ಲಿನ
ಮುದುಡಿದ ಕೆಂದಾವರೆಗೆ
ಸೂರ್ಯೋದಯವಾಗದಿದ್ದರೆ ಎನ್ನುವ ಆತಂಕ

ಚಂದ್ರನಿಲ್ಲದ ಬಾನು
ಅಮಾವಾಸ್ಯೆ ನಿರಂತರ
ಎನ್ನುವ ಹೆದರಿಕೆ

ಬೀಜ ಬಿತ್ತಿದ ರೈತನಿಗೆ
ಮಳೆ ಹೊತ್ತು ತರುವ ಕರಿಮೋಡ
ಬಾರದಿದ್ದರೆ ಎನ್ನುವ ಆತಂಕ

ಯಾಕೇ ಗೆಳತಿ ಈ ಹತಾಶೆ

ರಾತ್ರಿಯ ಕತ್ತಲ ಸೀಳಿ
ಸೂರ್ಯ ಬಂದೇ ಬರುತ್ತಾನೆ
ಆಗ ಕೆಂದಾವರೆ ಅರಳಲಿದೆ

ಅಮಾವಾಸ್ಯೆಯ ನಂತರ
ಚಂದ್ರ ಮೂಡುತ್ತಾನೆ
ಬೆಳದಿಂಗಳು ಎಲ್ಲೆಡೆ ಚೆಲ್ಲಲಿದೆ

ಬರಗಾಲದ ನಂತರ
ಒಂದು ವರ್ಷಧಾರೆ ಅಗುತ್ತದೆ
ರೈತನಿಗೆ ಮತ್ತೆ ಹುಮ್ಮಸ್ಸು ಬರಲಿದೆ

ಕನಸುಗಳ ಹೊಲಕ್ಕೂ
ಅವಕಾಶದ ಮಳೆ ಬರಲಿದೆ
ಆಸೆಗಳೆಲ್ಲಾ ಚಿಗುರಿ ಫಸಲಾಗಲಿದೆ

ಅಲ್ಲಿಯವರೆಗೆ ಇರಲಿ ಗೆಳತಿ
ಆ ಗಳಿಗೆಗೋಸ್ಕರ ಛಲದಿಂದ ಕಾಯುವ
ಸೋಲಿನ ನೆರಳಿನಿಂದ ದೂರವಿರುವ ಮನ

Tuesday, January 29, 2008

ಮಾಯನಗರಿಯ ಸೆರಗಿನಲ್ಲಿ...

ಕಣ್ಣು ಕೊರೈಸುವ ಬಣ್ಣದ ಲೈಟ್‍ಗಳು
ಜಗಮಗಿಸುವ ಹೋಟೆಲ್‍-ಕ್ಯಾಸಿನೋಗಳು
ಇಜೀಪ್ಟಿಯನ್, ರೋಮನ್,ಫ್ರೆಂಚ್
ಒಂದೊಂದು ಕಟ್ಟಡವು ಒಂದೊಂದು ವಾಸ್ತುಶೈಲಿ

ಆ ಮಾಯನಗರಿಯ ಮುಖ್ಯರಸ್ತೆಯಲ್ಲಿ
ಓಡಾಡುವುದೇ ಒಂದು ಸೊಬಗು
ಎಲ್ಲಿಂದೆಲ್ಲಿಂದಲೋ ಬಂದ ಪ್ರವಾಸಿಗರು
ವಿಸ್ಮಯ ತುಂಬಿದ ಕಣ್ಣುಗಳು

ಅಲ್ಲೆಲ್ಲೋ ಆಕಾಶದೆತ್ತರಕ್ಕೆ ಚಿಮ್ಮಿ
ಮೋಹಕ ನೃತ್ಯ ಮಾಡುತ್ತಿರುವ ಸಂಗೀತ ಕಾರಂಜಿ
ಅದರ ಎದುರಿಗೆ ಪ್ಯಾರಿಸ್‍ನ ಒಂದು ತುಂಡು
ಇಲ್ಲಿ ತೇಲಿಬಂದಿದೆಯೇ ಎಂಬಂತಿರುವ ಚಿಕ್ಕ ಐಫಿಲ್

ಹೋಟೆಲ್‍ಗಳ ಕ್ಯಾಸಿನೋದಲ್ಲಿನ
ಜೂಜು ಯಂತ್ರಗಳ ಸದ್ದು
ಅದಕ್ಕೆ ಹಿಮ್ಮೇಳವಾಗಿ ಕಾಂಚಣದ
ಜಣಜಣದ ಸದ್ದು

ಕ್ಯಾಸಿನೋದ ಟೇಬಲ್‍ಗಳ ಮುಂದೆ
ದುಡ್ಡು ಪಣಕ್ಕಿಟ್ಟು ಕುಳಿತ ಪಂಟರ್‍ಗಳು
ಅವರಿಗೆಲ್ಲಾ ಮದ್ಯ ನೀಡುತ್ತಾ ಎಳಲಾಗದಂತೆ ಮಾಡುವ
ಆ ತುಂಡು ಲಂಗದ ಕ್ಯಾಸಿನೋದ ಹುಡುಗಿಯರು

ಜೂಜು ಗೆದ್ದವರ ಸಂಭ್ರಮದ ಕೇಕೆ
ಸೋತವರ ಹತಾಶೆ
ಇಬ್ಬರದು ಇನ್ನೊಮ್ಮೆ ಅದೃಷ್ಟ ಹುಡುಕುವ
ಹಣ ಗೆಲ್ಲುವ ಆಸೆ

ಇತ್ತ ನಡುಬೀದಿಯಲ್ಲಿ ಕಾಮವನ್ನು
ಸರಕಿನಂತೆ ಮಾರುತ್ತಿರುವ ಜನ
ಡಾಲರ್‍ ಯಾರನ್ನು ಯಾಕೇ ಯಾವ ಯಾವ
ದಂಧೆಗೆ ಇಳಿಸುತ್ತೋ ಯಾರಬಲ್ಲರು

ರಸ್ತೆಯಲ್ಲಿ ಚೆಲ್ಲಿದ ಬೆತ್ತಲೆ
ಕಾರ್ಡ್‍ಗಳನ್ನು ನೋಡುತ್ತಲ್ಲೇ
ಬೇರೆಡೆ ಮುಖ ತಿರುಗಿಸಿ ನಡೆವ ಸಭ್ಯರು
ಕುತೂಹಲದಿಂದ ಅದನ್ನೇ ನೋಡುವ ಪಡ್ಡೆಗಳು

ಮಧ್ಯ ರಾತ್ರಿ ಆಗಿ ಕತ್ತಲೆಗೆ ವಯಸ್ಸಾದರೂ
ಇನ್ನೂ ಜಗಮಗಿಸುತ್ತಿರುವ ಬೀದಿಗಳು
ಜಣಜಣಿಸುತ್ತಿರುವ ಕ್ಯಾಸಿನೋಗಳು
ಹರಿಯುತ್ತಲೇ ಇರುವ ಮಧ್ಯ ದ್ರವಗಳು

ಸ್ಪಲ್ಪ ಹೊತ್ತಿನಲ್ಲಿ ಸೂರ್ಯ ಎದ್ದಾಗ
ಮದವೇರಿದ ಬೀದಿಗಳಿಗೆ ನಿದ್ದೆಯ ಮಂಪು
ಮಗ್ಗಲು ಬದಲಾಯಿಸಿ ಮಲಗುತ್ತದೆ
ಲಾಸ್ ವೇಗಾಸ್ ಎನ್ನುವ ಆ ಮಾಯನಗರಿ !

Monday, December 10, 2007

ಸಾವಿನ ಹೊಸ್ತಿಲಲ್ಲಿ ನಿಂತವನ ಮಾತು...

ನೀವು ಬಹಳ ಅಂದರೆ ಇನ್ನು ೩-೬ ತಿಂಗಳು ಬದುಕಬಹುದೆಂದು ಗೊತ್ತಾದಾಗ, ನಿಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಹೇಗಿರುತ್ತೆ. ದೇಹದ ಒಳಗಿದ್ದುಕೊಂಡು ದಿನ ದಿನವು ಜೀವ ತಿನ್ನುತ್ತಿರುವ ಕ್ಯಾನ್ಸರ್ ಎನ್ನುವ ಆ ಹೃದಯಹೀನ ಹಂತಕನಿಗೆ ಶರಣಾಗಿ, ಉಳಿದಿರುವ ಅಲ್ಪ ಸಮಯವನ್ನು ಅದಕ್ಕೆ ಒಪ್ಪಿಸಬೇಕೇ? ಅಥವ ಇರುವ ದಿನಗಳನ್ನೇ ಅರ್ಥಪೂರ್ಣವಾಗಿ ಬದುಕಿ, ಸಾವಿನಲ್ಲೂ ಒಂದು ಸಂದೇಶ ಕಳಿಸುವಂತೆ ಬಾಳುವುದೋ?

ಅವರ ಹೆಸರು ರಾಂಡಿ ಪೌಸ್ಚ್.

ಕಳೆದ ೨-೩ ತಿಂಗಳಿನಿಂದ ಅಂತರ್ಜಾಲದಲ್ಲಿ ಸಂಚಲನ ಉಂಟುಮಾಡಿರುವ ಹೆಸರು. ಆತ ಸುಮಾರು ೪೦೦ ಜನ ವಿದ್ಯಾರ್ಥಿಗಳು-ಪ್ರೊಪೆಸರ್‌ಗಳ ಮುಂದೆ ಕಳೆದ ಸೆಪ್ಟಂಬರ್‌ನಲ್ಲಿ 'ಲಾಸ್ಟ್ ಲೆಕ್ಚರ್' ಅನ್ನುವ ಮನೋಜ್ಞ ಉಪನ್ಯಾಸ ನೀಡಿದ. ಅಂತರ್ಜಾಲದಲ್ಲೂ ಲಭ್ಯವಿದ್ದ ಆ ಉಪನ್ಯಾಸ, ಎಲ್ಲಡೆ ಹರಡತೊಡಗಿತು. ಮೊದಲ ತಿಂಗಳಲಲ್ಲೇ ಅಂತರ್ಜಾಲದಲ್ಲಿ ಸುಮಾರು ಒಂದು ಮಿಲಿಯನ್ ಜನ ನೋಡಿದರು. ನೋಡಿ ತಮಗೆ ಬೇಕಾದವರಿಗೂ ಹೇಳಿದರು. ನೋಡುನೋಡುತ್ತಿದ್ದಂತೆ ರಾಂಡಿ ಪೌಸ್ಚ್ ಎಷ್ಟು ಪ್ರಸಿದ್ಧನಾದನೆಂದರೆ ಅಮೇರಿಕೆಯ ಟಿವಿ ಚಾನಲ್‍ಗಳು ಅವನ ಬಗ್ಗೆ, ಅವನ ಸಂದರ್ಶನಗಳನ್ನು ಪ್ರಸಾರಮಾಡಲಿಕ್ಕೇ ಪೈಪೋಟಿಗಿಳಿದವು.

ಅಂದಾಗೆ ಯಾರು ಈ ರಾಂಡಿ ಪೌಸ್ಚ್? ಅವನ 'ಲಾಸ್ಟ್ ಲೆಕ್ಚರ್' ಯಾಕೇ ಅಷ್ಟು ಜನಮನ ಮುಟ್ಟಿತು?

ರಾಂಡಿ ಪೌಸ್ಚ್ ಪ್ರಸಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಗಣಕವಿಜ್ಞಾನ ವಿಭಾಗದ ಮೇಧಾವಿ ಪ್ರೊಫೆಸರ್. ವರ್ಚುಲ್ ರಿಯಾಲಿಟಿ ಕ್ಷೇತ್ರದಲ್ಲಿ ದೊಡ್ಡ ಹೆಸರು. ಪತ್ನಿ-ಮೂರು ಚಿಕ್ಕ ಮಕ್ಕಳ ಸಂಸಾರ. ಅದರೆ ಕಳೆದ ವರ್ಷ ರಾಂಡಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು. ಚಿಕಿತ್ಸೆಗಳು ಶುರುವಾದವು. ಕ್ಯಾನ್ಸರ್ ಯಾವುದಕ್ಕೂ ಜಗ್ಗದೇ ಬೆಳಯಿತು. ಅಗಸ್ಟ್ ಹೊತ್ತಿನಲ್ಲಿ ರಾಂಡಿಗೆ ಇನ್ನು ೩-೬ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದರು.

ಅದೇ ಸಮಯದಲ್ಲಿ ರಾಂಡಿ ಕೆಲಸ ಮಾಡುತ್ತಿದ್ದ ಕರ್ನಿಗಿ ಮೆಲನ್ ವಿಶ್ವವಿದ್ಯಾಲಯದಲ್ಲಿ ಏರ್ಪಾಡಾಗಿದ್ದೆ ಈ 'ಲಾಸ್ಟ್ ಲೆಕ್ಚರ್'. ರಾಂಡಿ ಸುಮಾರು ಒಂದುವರೆ ಗಂಟೆ ನೀಡಿದ ಉಪನ್ಯಾಸದಲ್ಲಿ ಯಾವುದೇ ದೊಡ್ಡ ತತ್ವಜ್ಞಾನವಿರಲಿಲ್ಲ, ಅದರಲ್ಲಿ ಸಾವಿನೊಂದಿಗಿನ ಹೋರಾಟದ ಬಗ್ಗೆಯೂ ಇರಲಿಲ್ಲ. ಆ ಉಪನ್ಯಾಸದಲ್ಲಿ ಇದದ್ದು ಹಾಸ್ಯಭರಿತ ಶೈಲಿಯಲ್ಲಿ ಅವನ ಬಾಲ್ಯದ ಕನಸುಗಳ ಬಗ್ಗೆ, ನನಸಾದ-ನನಸಾಗದ ಕನಸುಗಳ ಬಗ್ಗೆ. ಆ ಉಪನ್ಯಾಸ ನೀಡಿದ ಒಂದು ತಿಂಗಳಲ್ಲೇ ಅದು ಅಂತರ್ಜಾಲದಲ್ಲಿ ಎಲ್ಲೆಡೇ ಹರಡಿ,ಸುಮಾರು ೬ ಮಿಲಿಯನ್ ಜನ ಅದನ್ನು ನೋಡಿ, ಜಗತ್ತಿನ ಮೂಲೆ ಮೂಲೆಗೂ ತಲುಪಿ, ರಾಂಡಿ ಒಬ್ಬ ಪ್ರವರ್ತಕನ ತರ ಕಾಣತೊಡಗಿದ.

'ಲಾಸ್ಟ್ ಲೆಕ್ಚರ್' ನೋಡಿ ಅನೇಕ ಜನ ತಮ್ಮ ಜೀವನ ಶೈಲಿ ಬದಲಿಸಿಕೊಂಡವರಿದ್ದಾರೆ.

ಟಿವಿ ಚಾನೆಲ್‍ಗಳ ರಾಂಡಿಯ ಸಂದರ್ಶನ ಮುಗಿಬಿದ್ದವು.ಲಾಸ್ಟ್ ಲೆಕ್ಚರ್ ರಾಂಡಿ ತನ್ನ ಮೂರು ಮಕ್ಕಳಿಗೊಸ್ಕರ ನೀಡಿದ್ದಂತೆ, ಅದು ಎಲ್ಲರಿಗೂ ಇಷ್ಟವಾದದ್ದು ರಾಂಡಿಗೆ ಸಂತಸ ಮತ್ತು ಆಶ್ಚರ್ಯ ತಂದಿವೆಯಂತೆ. ಸದ್ಯಕ್ಕೆ ಉಳಿದ ಕೆಲವೇ ತಿಂಗಳುಗಳಲ್ಲಿ ತನ್ನ ಮೂರು ಮಕ್ಕಳು-ಹೆಂಡತಿಯೊಂದಿಗೆ ಅದಷ್ಟು ಸಮಯ ಕಳೆಯುತ್ತಿದ್ದಾನೆ ರಾಂಡ್. ಈ ಮಧ್ಯೆ 'ಲಾಸ್ಟ್ ಲೆಕ್ಚರ್' ಪುಸ್ತಕ ರೂಪದಲ್ಲೂ ಬರಲಿದೆ.

ಅಂದಾಗೆ ರಾಂಡಿಯ ಈಡೇರದ ಕನಸುಗಳ ಪಟ್ಟಿಯಲ್ಲಿ 'ಸ್ಟಾರ್ ಟ್ರೆಕ್'‍ನ ಕಾಪ್ಟನ್ ಆಗಬೇಕು ಎನ್ನುವ ಕನಸು ನನಸಾಗದಿದ್ದರೂ , ಸ್ಟಾರ್ ಟ್ರೆಕ್‍ನ ಮುಂದಿನ ಚಿತ್ರದಲ್ಲಿ ಒಂದು ಗೌರವ ಪಾತ್ರ ರಾಂಡಿಗೆ ಕೊಟ್ಟಿದ್ದಾರಂತೆ. ಹಾಗೇ ಚಿಕ್ಕಂದಿನಲ್ಲಿದ್ದಾಗ ರಾಷ್ಟ್ರೀಯ ಪುಟ್ಬಾಲ್ ತಂಡದಲ್ಲಿ ಸ್ಥಾನಗಳಿಸಬೇಕೆಂಬ ಕನಸು ನನಸಾಗದಿದ್ದರೂ, ಆ ತಂಡವೇ ರಾಂಡಿಯನ್ನು ತಮ್ಮೊಂದಿಗೆ ಅಭ್ಯಾಸಮಾಡಲ್ಲಿಕ್ಕೇ ಕರೆಸಿಕೊಂಡಿವೆ.

ನೀವು ಇದನ್ನು ಹೊತ್ತಿಗೆ ರಾಂಡಿಯ ಕ್ಯಾನ್ಸರ್ ಕಿಮೋ ತೆರಪಿಯಲ್ಲಿ ಹಾಗೂ ಹೀಗೂ ಒಂದೆರಡು ವಾರಗಳಷ್ಟು ಮೃತ್ಯುವನ್ನು ಮುಂದಕ್ಕೆ ಹಾಕುವಲ್ಲಿ ಯಶ್ವಸಿಯಾಗಿದ್ದಾನೆ. ಆದರೆ ಅದು ಕ್ಷಣಿಕ ಜಯವಷ್ಟೇ, ಸಾವಿನ ಒಳ ಬಾಗಿಲಲ್ಲಿ ನಿಂತವನಿಗೆ ಮರಳಿ ಬರಲು ಆಗುವುದು ಅಸಾಧ್ಯ.


ರಾಂಡಿಯ 'ಲಾಸ್ಟ್ ಲೆಕ್ಚರ್' ನೀವು ನೋಡಿರದಿದ್ದರೆ ಇಲ್ಲಿದೆ ಅದರ ಲಿಂಕ್

http://video.google.com/videoplay?docid=-5700431505846055184

ಹಾಗೆಯೇ ರಾಂಡಿಯ ಬ್ಲಾಗ್ ಇಲ್ಲಿದೆ

http://www.cs.cmu.edu/~pausch/


ಆ 'ಲಾಸ್ಟ್ ಲೆಕ್ಚರ್' ನೋಡಿದ ಮೇಲೆ, ಮನಸಿನ ಆಳದಲ್ಲಿ, ನಮ್ಮ ಜೀವನಗಳ ಬಗ್ಗೆ, ಜೀವನ ಶೈಲಿಯ ಬಗ್ಗೆ, ಜೀವನದಲ್ಲಿ ನಾವು ವಿವಿಧ ವಿಷಯಗಳಿಗೆ ಕೊಟ್ಟಿರುವ ಪ್ರಾಮುಖ್ಯತೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸದಿದ್ದರೆ ಕೇಳಿ..

Tuesday, November 13, 2007

ಮೊದಲ ದೀಪಾವಳಿ !!

ಮೊದಲ ದೀಪಾವಳಿಯಂತೆ
ಅತ್ತೆ ಮನೆಯಲ್ಲಿ ಹಬ್ಬವಂತೆ
ಒಂದೂ ಅರಿಯೆ ನಾ !

ಎಣ್ಣೆ ಮಜ್ಜನವಂತೆ
ನಂತರ ಶಾವಿಗೆ ಊಟವಂತೆ
ಒಂದೂ ಅರಿಯೆ ನಾ!

ಮರುದಿನ ಲಕ್ಷ್ಮಿಪೂಜೆಯಂತೆ
ಅಡುಗೆಮನೆಯಲ್ಲಿ ಹೋಳಿಗೆ ಜೋರಂತೆ
ಒಂದೂ ಅರಿಯೆ ನಾ!

ನಾದಿನಿಗೆ ಪಟಾಕಿ ಕೇಳುತ್ತಿದ್ದಳಂತೆ
ನಾನು ಕೊಡಿಸುತ್ತಿದ್ದೆನಂತೆ
ಒಂದೂ ಅರಿಯೆ ನಾ !

ಮನೆತುಂಬಾ ನನ್ನಾಕೆಯ ಓಡಾಟವಂತೆ
ಮನೆಮಂದಿಗೆಲ್ಲಾ ಸಂಭ್ರಮವಂತೆ
ಒಂದೂ ಅರಿಯೆ ನಾ !

ಮದುವೆಯಾಗಿ ತಿಂಗಳಿಗೆ
ಪರದೇಶಕ್ಕೆ ಹಾರಿದೆನಂತೆ
ಅದು ಹೇಗೆ ಅತ್ತೆ ಮನೆಯ
ಮೊದಲ ದೀಪಾವಳಿ ತಿಳಿಯುವದಂತೆ !?

Thursday, August 09, 2007

ಜೋಡಿ ಹಕ್ಕಿ ಮಾತಾಡಿವೆ..

ಎಲ್ಲರಿಗೂ ನಮಸ್ಕಾರ !

'ಕಾಣದಂತೆ ಮಾಯವಾದನು ನಮ್ಮ ಶಿವ' ಅಂತಾ ನೀವು ಹಾಡು ಹೇಳೋಕೇ ಮುಂಚೆನೇ ನಿಮ್ಮ ಮುಂದೆ ಬಂದು ನಿಂತಿದೀನಿ !

ನೀವು ಶುಭ ಕೋರಿ ಕಳುಹಿಸಿದ ಮೇಲ್‍ಗಳು, ನೀವು ಪಾತರಗಿತ್ತಿಯಲ್ಲಿ ಬರೆದ ಕಾಮೆಂಟ್‍ಗಳು, ನನ್ನ ಸಂಭ್ರಮದಲ್ಲಿ ಬಂದು ಭಾಗವಹಿಸಿದ್ದಕ್ಕೆ ನಿಮ್ಮೆಲ್ಲರಿಗೂ ನನ್ನ ಒಲವಿನ ವಂದನೆಗಳು.ನಿಮ್ಮ ಪ್ರೀತಿಯ ಹಾರೈಕೆಗೆ, ನನ್ನ ಮತ್ತು ನನ್ನಾಕೆಯ ನಮನಗಳು.

ಕಳೆದ ಸಲ ಪಾತರಗಿತ್ತಿಯಲ್ಲಿ ಬರೆದಿದ್ದು ನಿಮ್ಮನ್ನು ನನ್ನ ವಿವಾಹಕ್ಕೆ ಆಹ್ವಾನಿಸುವ ಸಂದರ್ಭದಲ್ಲಿ. ಆದಾದ ನಂತರ ಏನೇಲ್ಲಾ ಆಯ್ತು..

ಇಷ್ಟು ದಿವಸ ಕನಸು-ಕವನ-ಕನವರಿಕೆಗಳಲ್ಲಿ ಕಾಡುತಿದ್ದ ನನ್ನ ಹುಡುಗಿ ಕೊನೆಗೂ ನನ್ನ ವರಿಸಿದ್ದು ಅದೇ ಜೂನ್ ೨೪ ರಂದು. ಮದುವೆಯೆಂಬ ಆ ವಿಶಿಷ್ಟ ಅನುಭವ..ಸಂಬಂಧ, ಸಂಭ್ರಮ, ಸಲ್ಲಾಪ, ಸಡಗರಗಳ ಒಂದು ಹೊಸ ಲೋಕವದು.

ಇಷ್ಟು ದಿವಸ ಕೇವಲ ಪೋನು-ಮೇಲ್-ಕವನಗಳಲ್ಲಿ ಹರಿಯುತ್ತಿದ್ದ ಭಾವನಾ ಲಹರಿಗೆ , ಮನದಲ್ಲಿದ್ದವರು ಎದುರಿಗೆ ಬಂದಾಗ ಆದ ಸಂಭ್ರಮ...ಅವಿಸ್ಮರಣೀಯ. ಪ್ರೀತಿಯ ತೊರೆಯಲ್ಲಿ ಬೊಗಸೆಯಲ್ಲಿ ಕುಡಿದ ಅಮೃತವೂ ಅವಿಸ್ಮರಣೀಯ..

ಮದುವೆಯ ಹಿಂದಿನ ದಿವಸ ನನ್ನ ಹುಡುಗಿಯ ಶಿವಮೊಗ್ಗೆಯಲ್ಲಿ ನಡೆದಿತ್ತು ನನ್ನ ಪುಸ್ತಕ್ 'ಸ್ವೀಟ್ ಡ್ರೀಮ್ಸ್ ಅಂದ್ರೇನು !'ಬಿಡುಗಡೆ. ಅದಾಗಿ ಮರುದಿನವೇ ನನ್ನ ಜೀವನದ ಅತೀ ಮಧುರ ಸ್ವೀಟ್ ಡ್ರೀಮ್ ನನ್ನ ಭಾಳಸಂಗಾತಿಯಾಗಿದ್ದು....

ಅಲ್ಲಿ ಸ್ಪಲ್ಪ ಕಾಲ ಇದ್ದು ನಾವು ಮರಳಿದೆವು ದೂರದ ಅಮೇರಿಕೆಗೆ...

ಇಲ್ಲಿ ನಮ್ಮ ಪುಟ್ಟ ಗೂಡಿನಲ್ಲಿ ನಮ್ಮ ಬಾಳಪಯಣ ಸುಂದರವಾಗಿ ಸಾಗುತಿದೆ...

ಮತ್ತೆ ಸಿಗುವೇ..ಅಲ್ಲಿಯವರಿಗೆ ಪ್ರೀತಿಯಿರಲಿ

Wednesday, June 20, 2007

ಆತ್ಮೀಯ ಆಹ್ವಾನ

ತುಂಗೆಯ ತೀರದಿಂದ ತಂದು ಮಲ್ಲಿಗೆ ಸಸಿಯೊಂದ
ಮನದ ಅಂಗಳದಿ ಹಚ್ಚಿ ಪ್ರೀತಿಯ ಸಿಂಚನ ಮಾಡಲು
ಅರಳಿದೆ ಮೊಗ್ಗು ನನ್ನ ಎದೆಯಂಗಳದಿ
ಪ್ರೀತಿಯ ಪರಿಮಳ ಬೀರಲಿದೆ ನನ್ನ ಮನೆಯಂಗಳದಿ

ಹೀಗೆ ನನ್ನ ಎದೆಯ ತುಂಬಾ ಮೋಹಕ ಸುವಾಸನೆ ಸೂಸುತ್ತಿರುವ ಆ ನನ್ನ ಮಧುರ ಮಲ್ಲಿಗೆಯ ಹೆಸರು ಶಿಲ್ಪಶ್ರೀ.

ಜೀವನದ ಎಲ್ಲಾ ವಸಂತ-ಗ್ರೀಷ್ಮ ಖುತುಗಳನ್ನು ಹಂಚಿಕೊಳ್ಳಲ್ಲಿರುವ ನನ್ನ ಪ್ರೀತಿಯ ಹುಡುಗಿಯನ್ನು ಬಾಳಸಂಗಾತಿಯಾಗಿ ಸ್ಪೀಕರಿಸುವ ಶುಭ ಮೂಹೂರ್ತಕ್ಕೆ ನಿಮಗೆ ಆತ್ಮೀಯ ಆಹ್ವಾನ

ಮುಹೂರ್ತ: ಭಾನುವಾರ ೨೪ ಜೂನ್ ೨೦೦೭, ಬೆಳಿಗ್ಗೆ ೧೦:೩೦ - ೧೧:೩೦
ಸ್ಥಳ: ವೀರಶೈವ ಕಲ್ಯಾಣ ಮಂದಿರ, ಶಿವಮೊಗ್ಗ

ಆರತಕ್ಷತೆ:ಶುಕ್ರವಾರ ೨೯ ಜೂನ್ ೨೦೦೭, ಸಂಜೆ ೭:೦೦ - ೧೦:೦೦
ಸ್ಥಳ:ನ್ಯೂ ಆತಿಥ್ಯ ರೆಸ್ಟೋರೆಂಟ್,ಗಾಂಧೀ ಬಜಾರ್,ಬೆಂಗಳೂರು

ಅಂದಾಗೆ ಇದರ ಜೊತೆ ಇನ್ನೊಂದು ಸಂಭ್ರಮದ ಸುದ್ದಿ ನಿಮ್ಮೊಡನೆ ಹಂಚಿಕೊಳ್ಳಲ್ಲಿಕ್ಕೆ ಇದೆ.
ಮದುವೆಯ ಹಿಂದಿನ ದಿವಸ ಅಂದರೆ ಜೂನ್ ೨೩ಕ್ಕೆ ಶಿವಮೊಗ್ಗದಲ್ಲಿ ನನ್ನ ಚೊಚ್ಚಲ ಪುಸ್ತಕ ’ಸ್ವೀಟ್ ಡ್ರೀಮ್ಸ್ ಅಂದರೇನು!’ ಬಿಡುಗಡೆ ಆಗಲಿದೆ.

ನನ್ನ ಈ ಎಲ್ಲಾ ಸಂತಸದ ಕ್ಷಣಗಳನ್ನು ಹಂಚಿಕೊಳ್ಳಲ್ಲಿಕ್ಕೆ ನಿಮಗೆ ಮತ್ತೊಮ್ಮೆ ಆಹ್ವಾನ..

ಪ್ರೀತಿಯಿರಲಿ
ಶಿವಶಂಕರ

Monday, May 28, 2007

ಮನೆ-ಮನಗಳು ಕಾದಿವೆ..

ಆ ಕಟ್ಟಡಗಳ ಮುಂದೆ ನನ್ನ ಕಾರ್ ಪಾರ್ಕ್ ಮಾಡಿ, ಒಳಗೆ ಹೋಗಿ ಅಲ್ಲಿನ ರೆಸಿಡೆಂಟ್ ಮ್ಯಾನೇಜರ್ ಭೇಟಿಯಾಗುತ್ತೇನೆ. ಅವರು ದೇಶಾವರಿ ನಕ್ಕು, ಬಂದ ಕಾರಣ ಕೇಳುತ್ತಾರೆ. ನಾನು ನಿಮ್ಮ ಆಪಾರ್ಟ್‍ಮೆಂಟ್‍ನಲ್ಲಿ ಮನೆ ಖಾಲಿಯಿದೆ ಅಂತಾ ಕೇಳಿದೆ ಅಂತಾ ಪ್ರಸ್ತಾವ ಮಾಡುತ್ತೇನೆ. ಅಲ್ಲಿಂದ ನಿರೀಕ್ಷಿಸಿದಂತೆ ಬರುತ್ತೆ ಪ್ರಶ್ನೆ ' ಎಷ್ಟು ಜನ ಇರ್ತೀರಾ'. ನಾನು ಹೇಳ್ತಾನೆ 'ನಾನು ನನ್ನ ಪತ್ನಿ'. ಹಾಗೇ ಹೇಳುವಾಗ ನನ್ನ ಕಣ್ಣುಗಳಲ್ಲಿ ನಿನ್ನದೇ ಬಿಂಬ.

ಯಾಕೋ ಈ ಮನೆ ಅಷ್ಟು ಇಷ್ಟವಾಗಲಿಲ್ಲ. ಮತ್ತೆ ಮರುದಿನ ಇನ್ನೊಂದು ಮನೆಗೆ ಭೇಟಿ. ಮತ್ತೆ ಪ್ರಶ್ನಾವಳಿ ಶುರು. ಅಪಾರ್ಟ್‍ಮೆಂಟ್ ಮ್ಯಾನೇಜರ್ ಕೇಳ್ತಾರೆ ' ಎಷ್ಟು ಜನ ಇರ್ತಿರಾ', ನಾನು ಹೇಳ್ತಾನೆ 'ನಾನು ನನ್ನ ಹೆಂಡತಿ'. ಮುಂದಿನ ಪ್ರಶ್ನೆ ನುಗ್ಗಿ ಬರುತ್ತೆ 'ಮಕ್ಕಳು ಇದರಾ'. ನನಗೆ ನಗು ತಡೆಯಲು ಆಗುವುದಿಲ್ಲ. ನಸುನಕ್ಕ ಇಲ್ಲಾ ಅನ್ನುತ್ತೇನೆ. ಅವರಿಗೆ ಹೇಳ್ತೇನೆ "ಇಲ್ಲಾ ಇನ್ನೂ ಮದುವೆಯಾಗಿಲ್ಲ, 'ಮದುವೆ'ಯಾಗಿ ಶೀಘ್ರದಲ್ಲಿ ಹೆಂಡತಿ ಕರೆ ತರುತ್ತೇನೆ" .

ಆ ಮ್ಯಾನೇಜರ್‍ ಪ್ರಶ್ನಾವಳಿ ಮುಂದುವರಿಯುತ್ತೆ ' ನಿಮ್ಮ ಹೆಂಡತಿ ಬರಲಿಲ್ಲವಾ ನಿಮ್ಮ ಜೊತೆ ಮನೆ ನೋಡಲು?'. ನೀನು 'ಹೆಂಡತಿ'ಯಾಗಿದ್ದು ಎಕೋ ಖುಷಿಯೆನಿಸುತ್ತೆ. ಆ ಮ್ಯಾನೇಜರ್‌ಗೆ ನಮ್ಮ ನಾನೊಂದು ತೀರ, ನೀನೊಂದು ತೀರದ ವಿರಹದ ಕತೆ ಹೇಳಬೇಕು ಅನಿಸುತ್ತೆ. ಸುಂಕದವರ ಮುಂದೆ ಸುಖದುಃಖ ಹೇಳೋದೇ ! ಸುಮ್ಮನೆ 'ಇಲ್ಲಾ' ಅನ್ನುತ್ತೇನೆ. ಮುಂದಿನ ಪ್ರಶ್ನೆ 'ನಿಮ್ಮ ಮನೆಯಲ್ಲಿ ಪೆಟ್ ಇದೇಯಾ?' ನಾನು ಮನಸ್ಸಲ್ಲೇ ಅಂದುಕೊಳ್ಳುತ್ತೇನೆ 'ನನ್ನಾಕೆಗೆ ನಾನೇ ಪೆಟ್, ನನಗೆ ಅವಳೇ ಪೆಟ್, ಹೀಗಿರುವಾಗ ಬೇರೆ ಪೆಟ್ ಯಾಕೇ'.

ಹಲವಾರು ಈ ತರದ ಸಂದರ್ಶನಗಳ ಬಳಿಕ ಒಂದು ಮನೆ ಇಷ್ಟವಾಗುತ್ತೆ. ಇಲ್ಲಿ ಅದೇನೋ 'ಕ್ರೆಡಿಟ್ ಚೆಕ್' ಅಂತಾ ಮಾಡ್ತಾರೆ. ಒಂಥರ ಆ ವ್ಯಕ್ತಿಯ ಜಾತಕ ಜಾಲಾಡಿದಂತೆ ಆ ಕ್ರೆಡಿಟ್ ಚೆಕ್. ಆ ವ್ಯಕ್ತಿಯ ಅರ್ಥಿಕ ವಹಿವಾಟುಗಳು-ವ್ಯಕ್ತಿಯ ಹಿನ್ನಲೆ ಎಲ್ಲಾ ಪರಿಶೀಲಿಸಲಾಗುತ್ತೆ. ಮರುದಿನ ಮ್ಯಾನೇಜರ್ ಕರೆ ಮಾಡಿ ' ಅಭಿನಂದನೆಗಳು , ನಿಮ್ಮ ಕ್ರೆಡಿಟ್ ಚೆಕ್ ಪಾಸಾಯಿತು' ಎನ್ನುತ್ತಾರೆ. ಅವರಿಂದ ಮನೆಯ ಬಾಡಿಗೆ, ವಿವರಗಳನ್ನು, ಅವರ ಆಪಾರ್ಟ್‍ಮೆಂಟ್‍ಗಳ ಕಟ್ಟಳೆಗಳನ್ನು ಕೇಳಿಸಿಕೊಂಡು ಆ ಮನೆಯ ಕಾಗದ ಪತ್ರಕ್ಕೆ ಸಹಿ ಹಾಕುತ್ತೇನೆ.

ಒಂದು ಬಿಡುವಿನ ದಿವಸ ಅಲ್ಲಿಗೆ ವರ್ಗಾವಾಗುತ್ತೇನೆ. ಬ್ರಹ್ಮಚಾರಿ ಜೀವನದ ದೊಡ್ಡ ಪ್ಲಸ್ ಪಾಯಿಂಟ್ ಅಂದರೆ ಹೆಚ್ಚಿಗೆ ಲಗೇಜ್ ಇರೋಲ್ಲಾ.

ಮನೆಯಲ್ಲಿ ಹೊಸ ಪೇಂಟ್‍ನ ವಾಸನೆ. ಯಾಕೋ ನನಗೆ ಅದು ಇಷ್ಟವಾಗುತ್ತೆ.

ಅದು ಎಲ್ಲಿತ್ತೋ ನಿನ್ನ ನೆನಪು ಬಂದು ಹಿಂದಿನಿಂದ ಅಪ್ಪಿಕೊಂಡುಬಿಡುತ್ತೆ. ನಿನ್ನ ನೆನಪನ್ನು ಕೂಸುಮರಿ ಮಾಡಿಕೊಂಡು ಆ ಮನೆಯಲ್ಲೆಲ್ಲಾ ಒಂದು ಸುತ್ತು ಹಾಕುತ್ತೇನೆ. ಆ ನಿನ್ನ ನೆನಪಿಗೆ ಹೇಳುತ್ತೇನೆ 'ಇದು ನನ್ನ ಹುಡುಗಿ ಇಲ್ಲಿಗೆ ಬಂದಾಗ ನಾವಿಬ್ಬರು ಇರೋ ನಮ್ಮ ಮನೆ'. ಆವಾಗ ಆ ನೆನಪು ಕೇಳುತ್ತೆ 'ಮತ್ತೆ ನಾನು ಎಲ್ಲಿ ಇರೋದು?'. ನಾನು ಅದಕ್ಕೆ ಹೇಳ್ತಾನೆ ' ನೀನು ನಮ್ಮ ಜೊತೆಯಲ್ಲಿ ಇರಬಹುದು. ಆದರೆ ನನ್ನ ಹುಡುಗಿಯೇ ಇಲ್ಲಿಗೆ ಬಂದ ಮೇಲೆ ನೀನು ಹೇಗೆ ಬರ್ತಿಯಾ?'

ಆ ನೆನಪಿಗೆ ಅರ್ಥವಾಗುತ್ತೆ.

ಅಲ್ಲಿಂದ ಅಡುಗೆಮನೆಗೆ ಹೊಕ್ಕರೆ ನಿನ್ನ ನೆನಪು ಬಂದು ಹಿಂದೆ ನಿಂತು ' ಎನು ಅಡುಗೆ ಇವತ್ತು' ಅಂತಾ ಕೇಳುತ್ತೆ. ನಿನ್ನ ನೆನಪಿನ ಜೊತೆ ಊಟಕ್ಕೆ ಕೂತು, ನನ್ನ ಅಡುಗೆ ರುಚಿ ತೋರಿಸುತ್ತೇನೆ.

ಆಮೇಲೆ ಬೆಡ್ ರೂಮ್ ಹೊಕ್ಕುತ್ತಿದ್ದಂತೆ ನೆನಪಿಗೆ ಎನೋ ಹೊಳೆದು ನನ್ನ ಕಡೆ ಒಮ್ಮೆ, ನನ್ನ ಲ್ಯಾಪ್ ಟಾಪ್‍ನಲ್ಲಿರುವ ನಿನ್ನ ಪೋಟೋದ ಕಡೆ ಒಮ್ಮೆ ನೋಡಿ ಮಂದಹಾಸ ಬೀರುತ್ತೆ. ನಾನು ಆ ತರಲೆ ನೆನಪಿಗೆ 'ಆಯ್ತು ತಾವು ಬಂದು ತುಂಬಾ ಹೊತ್ತಾಯ್ತು' ಅನ್ನುತ್ತೇನೆ. ಅದರು ನೆನಪು ಬಿಡದೆ 'ಇದು ನಿಮ್ಮ ಬೆಡ್ ರೂಮ್ ಅಲ್ವಾ' ಅನ್ನುತ್ತೆ. ನಾನು ನಸುನಗುತ್ತಾ 'ಹೌದು ಹೌದು, ತಾವು ಹೊರಡಿ ಅನ್ನುತ್ತೇನೆ'.

ಆ ತರಲೆಯನ್ನೇನೋ ಕಳಿಸಿ ಆಯ್ತು. ಆದರೆ ಮನಸ್ಸಿಗೆ ಎನಾಯ್ತು ಈಗ. ಮತ್ತೆ ಶುರುವಾಯ್ತು ನೋಡು ನಿನ್ನ ನೆನಪಿನ ಮೆರವಣಿಗೆ.

ನಿದ್ದೆ ಬರದೇ ಸುಮ್ಮನೆ ಹೊರಳಾಡ್ತಾ ಇದೀನಿ.

ಮನೆ ತುಂಬಾ ಖಾಲಿ ಖಾಲಿ ಅನಿಸ್ತಾ ಇದೆ ಕಣೇ. ನನ್ನ ಮನವೂ ಸಹ..

ಬೇಗ ಬಂದು ನನ್ನ ಮನೆ-ಮನವನ್ನು ತುಂಬು..

Monday, May 14, 2007

ಒಮ್ಮೆ ನೋಡಿದರೆ ಇನ್ನೊಮ್ಮೆ !

"ನಟ ಸಾರ್ವಭೌಮ, ಗಾನ ಗಂಧರ್ವ ಡಾಕ್ಟರ್ ರಾಜ್ ಕುಮಾರ್ ಅಭಿನಯಿಸಿರುವ ,ಇಂಪಾದ ಹಾಡುಗಳಿಂದ,ಮಧುರವಾದ ಸಂಗೀತದಿಂದಲೂ,ಭಯಂಕರ ಹೋರಾಟಗಳಿಂದಲೂ ಒಡಗೂಡಿರುವ ಸಂಪೂರ್ಣ ಪ್ರಮಾಣಿತ ಸಿನಿಮಾಸ್ಕೋಪ್ ಕನ್ನಡ ಚಲನಚಿತ್ರ- ಅದೇ ಕಣ್ಣು...ಅದೇ ಕಣ್ಣು.

ದಿನಾ ಮೂರು ಆಟಗಳು. ಇಂದೇ ಬಂದು ನೋಡಿರಿ ನಿಮ್ಮ ನೆಚ್ಚಿನ ಜಯಶ್ರೀ ಚಿತ್ರಮಂದಿರದಲ್ಲಿ. ಮರೆತು ನಿರಾಶರಾಗಿದೀರಿ,ಚಿತ್ರಕಲಾ ರಸಿಕರೇ.ಒಮ್ಮೆ ನೋಡಿದರೆ ಇನ್ನೊಮ್ಮೆ, ಇನ್ನೊಮ್ಮೆ ನೋಡಿದರೆ ಮೊಗದೊಮ್ಮೆ ನೋಡಲೇಬೇಕು ಎನಿಸುವ ಚಿತ್ರ..ಅದೇ ಕಣ್ಣು"

ಈಗಂತ ಆ ಆಟೋ ಊರಿನ ಬೀದಿಗಳಲ್ಲಿ ಸುತ್ತಾಡುತ್ತ ಸಿನಿಮಾ ಬಂದ ಸುದ್ದಿ ಜಾಹೀರುಗೊಳಿಸುತ್ತಿದ್ದರೆ, ಒಂದು ಕ್ಷಣ ಕೆಲಸ ನಿಲ್ಲಿಸಿ ಎಲ್ಲರೂ ಆ ಆಟೋ ಕಡೆಗೆ ನೋಡುವವರೆ. ಆಟೋದ ಹಿಂದುಗಡೆ ಆ ಸಿನಿಮಾದ ಪೋಸ್ಟರ್. ಆಟೋದಲ್ಲಿ ಕುಳಿತು ಸಿನಿಮಾದ ಬಗ್ಗೆ, ಅದರ ಬಗ್ಗೆ ಒಂದೆರಡು ಸಾಲಲ್ಲೇ ಹೇಳುವ ಅದೇ ಪರಿಚಿತ ಧ್ವನಿ.

ಆ ಊರಲ್ಲಿ ಯಾವ ಸಿನಿಮಾ ಬಂದರೂ, ಅದರ ವರ್ಣನೆ ಎಲ್ಲರ ಕಿವಿಯಲ್ಲಿ ಬೀಳ್ತಾ ಇದದ್ದು, ಮೇಲಿನ ಸಾಲುಗಳಲ್ಲೇ, ಅದೇ ಧ್ವನಿಯಲ್ಲಿ. ಸಿನಿಮಾದ ಹೆಸರು ಬದಲಾಗುತಿತ್ತು, ನಟ-ನಟಿಯರ ಹೆಸರು, ಸಿನಿಮಾ ಮಂದಿರದ ಹೆಸರು ಬದಲಾಯಿಸಿ ಮತ್ತೆ ಅದೇ ಗೊತ್ತಿರುವ ಸಾಲುಗಳು..'ಒಮ್ಮೆ ನೋಡಿದರೆ ಇನ್ನೊಮ್ಮೆ..'

ಅದಕ್ಕೂ ಮೊದಲ ಸಿನಿಮಾ ಪ್ರಚಾರಕ್ಕೆ ಆಟೋದ ಬದಲು ಎತ್ತಿನ ಗಾಡಿ ಬಳಸುತ್ತಿದ್ದರು ಅನ್ನೊ ನೆನಪು.ಆ ಎತ್ತಿನ ಗಾಡಿಗೆ ಸಿನಿಮಾದ ಎರಡು ಬೃಹತ್ ಪೋಸ್ಟರ್‍ಗಳನು ಹಚ್ಚಿ ಅದರಲ್ಲಿ ಮೈಕ್ ಹಿಡಿದು ಅದೇ ಧ್ವನಿ, ಅದೇ ಸಾಲುಗಳು.

ಹೀಗೆ ಪ್ರಚಾರ ಕೇಳಿ ಸಿನಿಮಾ ನೋಡಲು ಹೋದರೆ ಕೆಲವೊಮ್ಮೆ ವಿಪರೀತ ಜನಜಂಗುಳಿ. ಟಿಕೇಟ್ ಕೊಡುವ ಕೌಂಟರ್‌ಗೆ ಉದ್ದದ ಸಾಲು. ಕೌಂಟರ್ ಎಕ್ಕೆಡೆಗಳಲಿ ತಂತಿಯ ಜಾಲರಿ. ಅದು ಯಾಕೇ ಬೇಕಿತ್ತು ಅನ್ನೋದು ನನಗೆ ತಿಳಿದೇ ಇರಲಿಲ್ಲ, ಅದೊಂದು ಟಿಕೇಟ್ ಕೊಳ್ಳುವಾಗಿನ ಪ್ರಸಂಗ ನೋಡುವವರೆಗೆ.

ನಾನು ಆವಾಗ ಸಿನಿಮಾ ನೋಡುತ್ತಿದ್ದೆ ಕಡಿಮೆ. ಅದ್ಯಾವುದೋ ತುಂಬಾ ಚೆನ್ನಾಗಿದೆ ಅಂತಾ ಗೆಳೆಯರು ಹೇಳಿದ ಮೇಲೆ ಆ ಸಿನಿಮಾ ನೋಡಲು ಹೊರಟರೆ ಅಲ್ಲಿ ಜನ ಜಾತ್ರೆ. ಬಂದದ್ದಾಗಿದೆ ಸಾಲಿನಲ್ಲಿ ನಿಂತು ನೋಡೋಣವೆಂದು ನಿಂತ ಕೆಲವು ಕ್ಷಣದಲ್ಲೇ ಟಿಕೇಟ್ ಕೊಡಲು ಶುರು. ಮೊದಮೊದಲು ಸರಾಗವಾಗೇ ಸಾಗಿದ್ದ ಸಾಲಿನಲ್ಲಿ ತರಲೆ ಶುರುವಾಗಿದ್ದು ಮುಂದಿದ್ದ ಯಾರೋ ಒಬ್ಬ ಸಾಲಿನಲ್ಲಿ ಹಿಂದಿದ್ದ ತನ್ನ ಸ್ನೇಹಿತನನ್ನು ತನ್ನೆಡೆಗೆ ಕರೆದಾಗ. ನನಗೋ ಆಶ್ಚರ್ಯ, ಈ ಜಾಲರಿ ಅಡಿಯಲ್ಲಿ ನಿಂತಿದ್ದೆವೆ, ಅದೂ ಒಬ್ಬರೇ ನಿಲ್ಲುವಷ್ಟು ಸ್ಥಳವಿರುವ ಸಾಲಿನಲ್ಲಿ. ಇವನು ಮುಂದೆ ಹೇಗೆ ಹೋದಾನು ಅಂತಾ. ನನ್ನ ಊಹೆಗೂ ಮೀರಿ, ಆ ವ್ಯಕ್ತಿ ಆ ತಂತಿ ಜಾಲರಿಗೆ ನೇತು ಬಿದ್ದು ಅಲ್ಲಲ್ಲಿ ಗೋಡೆಗೆ ಕಾಲಿಟ್ಟು,ಜಾಲರಿಗೆ ಒದಗಿಸಿದ್ದ ಕಂಬಗಳ ಹಿಡಿದು ನಮ್ಮ ತಲೆಯ ಮೇಲೆ ಸಾಗಿ ಹೋಗಿದ್ದ. ಸ್ಪೈಡರ್ ಮ್ಯಾನ್‍ನಂತೆ ! ಕುಂಭಮೇಳದಲ್ಲಿ ಕಳೆದುಹೋಗಿದ್ದ ಸ್ಪೈಡರ್ ಮ್ಯಾನ್‍ನ ತಮ್ಮನಿರಬೇಕು!

ಅಂದಾಗೆ ಕಳೆದ ವಾರ ಇಲ್ಲಿ ಕನ್ನಡ ಸಿನಿಮಾ ನೋಡೋಕೇ ಹೋದಾಗ ಇದೆಲ್ಲಾ ನೆನಪಾಯ್ತು.

ಮುಂಗಾರು ಮಳೆ ಅನ್ನೋ ಆ ಸೂಪರ್ ಹಿಟ್ ಚಿತ್ರವನ್ನು ಅಮೇರಿಕೆಗೆ ಕರೆ ತಂದಿದ್ದರು. ಅಫೀಸ್‍ನಲ್ಲಿ ಕುಳಿತುಕೊಂಡೇ ಪೋನ್‍ ಮೂಲಕ ಟಿಕೇಟ್ ಕಾಯ್ದಿರಿಸಿ, ನಂತರ ಅವತ್ತೊಂದಿನ ಭಾನುವಾರ ಬಹುತೇಕ ತುಂಬಿದ್ದ ನಾಸ್ ಚಿತ್ರಮಂದಿರದಲ್ಲಿ ಅಷ್ಟೊಂದು ಕನ್ನಡಿಗರೊಂದಿಗೆ ಕುಳಿತು ಚಿತ್ರ ನೋಡಿದ್ದು ಖುಷಿಯೆನಿಸಿತು.

ಚಿತ್ರ ನೋಡಿ ಮುಗಿಸಿ ವಾಪಸ್ ಆಗಬೇಕಾದರೆ ಬೇಡಬೇಡವೆಂದರೂ ನಮ್ಮ ಆ ಊರ ಸಿನಿಮಾ ಸಂಬಂಧಿ ಈ ಕತೆಗಳು ತಲೆಯಲ್ಲಿ ರೀಲ್‍ನಂತೆ ಬರ್ತಾ ಇದ್ದವು.

ಟಿಕೇಟ್ ತಗೋಬೇಕಾದರೆ ನಮ್ಮ ಆ ಊರಲ್ಲಿ ಇನ್ನೊಂದು ಸಾಮಾನ್ಯ ದೃಶ್ಯವೆಂದರೆ ಸಾಲಿನಲ್ಲಿ ನಡೆಯುತ್ತಿದ್ದ ಜಟಾಪಟಿಗಳು. ಯಾರೋ ಸಾಲಿನಲ್ಲಿ ಮಧ್ಯ ಸೇರಕೊಂಡರು ಅಂತಾ ಜಗಳ ಶುರುವಾಗ್ತಿತ್ತು. ಹೌಸ್‍ಫುಲ್ ಸಿನಿಮಾಕ್ಕೆ ಟಿಕೇಟ್ ಕೊಡುವವನ ಗತ್ತು ನೋಡೇ ಆನಂದಿಸಬೇಕು !

ಇನ್ನು ಮಂಗಳವಾರ ಬಂತೆಂದರೆ ಅದು ಬೇರೇನೇ ಕತೆ. ಅವತ್ತು ಊರಲ್ಲಿ ಸಂತೆ. ಅಕ್ಕಪಕ್ಕದ ಹಳ್ಳಿಗಳಿಂದ ಜನ ತರಕಾರಿ-ಕಾಳು-ಬೆಣ್ಣೆ ಇತ್ಯಾದಿಗಳನ್ನು ಸಂತೆಗೆ ತಂದು ಮಾರಿ, ಹಳ್ಳಿಗೆ ಮರಳುವುದಕ್ಕಿಂತ ಮುಂಚೆ ಒಂದು ಸಿನಿಮಾ ನೋಡಿಕೊಂಡು ಹೋಗುವುದು ಪರಿಪಾಠ. ಅವತ್ತು ಎಂತದೇ ಸಿನಿಮಾ ಇರಲಿ ಎಲ್ಲಾ ಹೌಸ್‍ಫುಲ್.

ಇನ್ನು ಟಾಕೀಸ್ ಒಳಗಡೆ ಕತೆಗಳು ಅಷ್ಟೇ ರೋಚಕವಾಗಿರುತ್ತಿದ್ದವು. ಸೀಟ್ ನಂಬರ್ ಇರ್ತಾ ಇಲ್ಲದ ಕಾರಣ ಯಾರು ಎಲ್ಲಿ ಬೇಕಾದರೂ ಕುಳಿತುಕೊಳ್ಳಬಹುದಿತ್ತು. ಕೆಲವರು, ಯಾರು ಬರದೆ ಇದ್ದರೂ, ಸುಮ್ಮನೆ ಒಂದೆರಡು ಸೀಟ್ ಹಿಡಿದುಕೊಂಡು ಸೀಟ್ ಖಾಲಿ ಇದೆಯಾ ಅಂತಾ ಬಂದವರಿಗೆ 'ಇಲ್ಲಿ ಬರ್ತಾರೀ' ಅನ್ನೋದು ಸಾಮಾನ್ಯವಾಗಿತ್ತು. ಹಾಗೇ ಕೆಲವೊಮ್ಮೆ ಇಂಟರ್‌ವೆಲ್ ಮುಂಚೆ ಖಾಲಿ ಇರ್ತಾ ಇದ್ದ ಬಾಲ್ಕನಿ, ಇಂಟರ್‌ವೆಲ್ ನಂತರ ಫುಲ್ ! ನೋಡಿದರೆ ಇಂಟರ್‌ವೆಲ್ ಮುಂಚೆ ಮುಂದಿನ ಸೀಟ್‍ಗಳ ಪಡ್ಡೆಗಳೆಲ್ಲಾ ಅಲ್ಲಿಗೆ ವರ್ಗಾವಾಗಿಬಿಟ್ಟಿರಿತ್ತಿದ್ದವು. ಮೊದಲೇ ಹೇಳಿದ ಹಾಗೆ, ಸೀಟ್ ನಂಬರ್ ಇರ್ತಾ ಇಲ್ಲಾ, ಕೆಲವೊಮ್ಮೆ ಬಾಲ್ಕನಿನೂ ಖಾಲಿ ಹೊಡಿತಾ ಇರ್ತಿತ್ತು.

ಮುಂದಿನಸಾಲು ಸೀಟ್ ಅಂದಕೂಡಲೇ ಅಲ್ಲಿನ ಟೆಂಟ್ ಸಿನಿಮಾಗಳ ನೆನಪಾಯ್ತು. ಅವುಗಳಲ್ಲಿ 'ಗಾಂಧಿ ಸೀಟ್' ಅಂತಾ ಇರ್ತಿತ್ತು. ಪರದೆಯ ಮುಂದಿನ ಮೊದಲ ಕೆಲವು ಸಾಲುಗಳೇ ಈ ಗಾಂಧಿ ಸೀಟ್‍ಗಳು. ಅವಕ್ಕೆ ಯಾಕೇ ಗಾಂಧೀ ಸೀಟ್ ಅಂತಿದ್ದರೂ ಸರಿ ಗೊತ್ತಿಲ್ಲಾ. ಬಹುಷಃ ದುಡ್ಡು ಕಡಿಮೆಯಿದ್ದದಕ್ಕೆ ಇರಬಹುದು. ಆದರೆ ಸಿನಿಮಾ ಪೂರ್ತಿ ಅಸ್ವಾದಿಸುತ್ತಿದ್ದವರು ಈ ಗಾಂಧಿ ಸೀಟ್ ಪ್ರೇಕ್ಷಕರು. ಸಿನಿಮಾದಲ್ಲಿ ವಿಷಿಲ್ ಹಾಕೋದು, ಚಪ್ಪಾಳೆಗಳು, ಕೇಕೇ ಹಾಕೋದು..ಹೆಚ್ಚಿನ ಭಾಗವಹಿಸುವಿಕೆ ಇಲ್ಲಿಂದಲೇ. ಅದರ ಜೊತೆಗೆ ಕೆಲವೊಮ್ಮೆ ಪರದೆಯ ಮೇಲೆ ನಾಲ್ಕಾಣೆ-ಎಂಟಾಣೆ ನಾಣ್ಯಗಳನ್ನು ಎಸೆಯುತ್ತಿದ್ದವರು ಉಂಟು !

ಆ ಊರಿನ ಒಂದೊಂದು ಸಿನಿಮಾ ಮಂದಿರಗಳು ಒಂದೊಂದು ಬ್ರಾಂಡ್ ಆಗಿಬಿಟ್ಟಿದ್ದವು. ಜಯಶ್ರೀ ಹೊಸ ಕನ್ನಡ ಚಲನಚಿತ್ರಗಳಿಗೆ, ಶ್ರೀಕಾಂತ್ ಹೊಸ ಇಂಗ್ಲೀಷ್-ಹಿಂದಿ ಚಿತ್ರಗಳಿಗೆ, ಶೋಭಾ ಹಳೆ ಕನ್ನಡ-ಹಿಂದಿ ಚಿತ್ರಗಳಿಗೆ, ಚಿತ್ರಾ ಹೊಸ ಹಿಂದಿ-ಇಂಗ್ಲೀಷ್ ಚಿತ್ರ ವಿತ್ ಟೆಂಟ್ ಅನುಭವಕ್ಕೆ ಮತ್ತು ಕೃಷ್ಣಾ 'ದೇವರ' ಚಿತ್ರಗಳಿಗೆ ! ಅದರಲ್ಲೂ ಚಿತ್ರಾ ಮತ್ತು ಕೃಷ್ಣಾ ಚಿತ್ರಮಂದಿರಗಳು ಅಲ್ಲಿನ ಹೊಳೆ ಹತ್ತಿರವಿದ್ದು, ಸೇತುವೆ ದಾಟಿ ಚಿತ್ರಾಕ್ಕೆ ಹೋಗಬೇಕಿತ್ತು. ಯಾರಾದರೂ ಗೆಳಯರು ಅಲ್ಲಿ ಕೃಷ್ಣಾ ಚಿತ್ರಮಂದಿರದ ಸುತ್ತಮುತ್ತ ಕಂಡರೆ ಮುಗಿಯಿತು ಮಾರನೇ ದಿನ ಶಾಲೆಯಲ್ಲಿ ಹುಡುಗರೆಲ್ಲಾ ಹಾಗೇ ಕಂಡವನೆಡೆಗೆ 'ಯಾವುದು ಸಿನಿಮಾ?' ಅಂತಾ ಕಣ್ಣು ಮಿಟುಕಿಸಿ ಕೇಳಿದ್ದೇ ಕೇಳಿದ್ದು !

ಅಂದಾಗೆ ನೀವು ಸ್ಪೈಡರ್ ಮ್ಯಾನ್-೩ ನೋಡಿದೀರಾ? ಕಳೆದ ವಾರದಲ್ಲಿ ಐ-ಮ್ಯಾಕ್ಸ್ ಥಿಯೇಟರ್‌ನ ಬೃಹತ್ ಪರದೆ ಮೇಲೆ ನನ್ನ ಸ್ನೇಹಿತರೊಂದಿಗೆ ನೋಡೋಕೇ ಹೋಗಿದ್ದೆ. ಆನ್-ಲೈನ್‍ನಲ್ಲಿ ಸೀಟ್ ಬುಕ್ ಮಾಡಿ, ಅದರ ಜೊತೆ ನಮಗೆ ಬೇಕಾದ ಕೊನೆ ಸಾಲಿನಲ್ಲಿ ಸೀಟ್‍ಗಳನ್ನು ಬುಕ್ ಮಾಡಿದ್ದೆವು.ಐ-ಮ್ಯಾಕ್ಸ್‍ದಲ್ಲಿ ಆ ಸಿನಿಮಾ ನೋಡೋದು ಸೂಪರ್ ಆಗಿತ್ತು!

Saturday, April 28, 2007

ಸಡಗರ

ಬಳೆಗಳಿಗೆ ಸಡಗರ
ಅವಳ ಕೈ ಹಿಡಿದಿರುವನೆಂದು
ಓಲೆಗಳಿಗೆ ಸಡಗರ
ಅವಳ ಕಿವಿ ಕಚ್ಚುವೆನೆಂದು
ಕುಂಕುಮಕ್ಕೆ ಸಡಗರ
ಅವಳ ಹಣೆ ಮುತ್ತಿಡುವೆನೆಂದು
ಮಲ್ಲಿಗೆಗೆ ಸಡಗರ
ಅವಳ ಮುಡಿಯಲಿ ಬೆರಳಾಡಿಸುವೆನೆಂದು
ಕನ್ನಡಿಗೆ ಸಡಗರ
ಅವಳ ಸೌಂದರ್ಯ ನೋಡುವೆನೆಂದು

ಸರಕ್ಕೆ ಸಡಗರ
ಎದೆ ಹತ್ತಿರ ಇರುವೆನೆಂದು
ವೇಣಿಗೆ ಸಡಗರ
ಅವಳ ಬೆನ್ನು ಸವರುವೆನೆಂದು
ಸೀರೆಗೆ ಸಡಗರ
ಅವಳ ನಡು ಬಳಸುವೆನೆಂದು
ದಿಂಬಿಗೆ ಸಡಗರ
ಅವಳ ಕೆನ್ನೆ ತಟ್ಟುವೆನೆಂದು
ಹೊದಿಕೆಗೆ ಸಡಗರ
ಅವಳ ಆಲಂಗಿಸಿ ಮಲಗುವೆನೆಂದು

ಕಾಲುಗಳಿಗೆ ಸಡಗರ
ಅವಳ ಗೆಜ್ಜೆನಾದ ಮಾಡುವೆನೆಂದು
ಕಂಠಕ್ಕೆ ಸಡಗರ
ಅವಳ ಮುದ್ದುಮಾತು ನುಡಿವೆನೆಂದು
ರೆಪ್ಪೆಗಳಿಗೆ ಸಡಗರ
ಅವಳ ಕಣ್ಣೋಟ ಬಚ್ಚಿಟ್ಟುಕೊಳ್ಳುವೆನೆಂದು
ತುಟಿಗಳಿಗೆ ಸಡಗರ
ಅವಳ ಜೇನು ತನ್ನಲ್ಲಿ ಇಹುದೆಂದು
ಹೃದಯಕ್ಕೆ ಸಡಗರ
ಅವಳ ಎದೆಬಡಿತ ತನ್ನಿಂದೆಂದು

ಅವಕ್ಕೆ ಗೊತ್ತಿಲ್ಲವೇ ನಾ
ಅವಕ್ಕಿಂತ ಹೆಚ್ಚು ಸಡಗರ ಪಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವು ಸಡಗರ ಪಡುವ ಎಲ್ಲವನ್ನು ಮಾಡುವವನೆಂದು
ಅವಕ್ಕೆ ಗೊತ್ತಿಲ್ಲವೇ ನಾ
ಅವಳ ಒಲವಿನ ನಲ್ಲನೆಂದು