Monday, March 05, 2007

ಅಲ್‍ಕಟ್ರಾಸ್

ನೀವು 'ದಿ ರಾಕ್' ಅನ್ನೋ ಸಿನಿಮಾ ನೋಡಿರಬಹುದು. ಸೀನ್ ಕಾನೇರಿ ಮತ್ತು ನಿಕೋಲಸ್ ಕೇಜ್ ಇರುವ ಈ ಸಿನಿಮಾ ಬಂದಿದ್ದು ೧೯೯೬ರಲ್ಲಿ.ಸ್ಯಾನ್ ಪ್ರಾನಿಸ್‍ಸ್ಕೋದ ಹತ್ತಿರವಿರುವ ದ್ವೀಪವೊಂದಕ್ಕೆ ಹೋದ ಪ್ರವಾಸಿಗರನ್ನು ಸೆರೆಯಾಳಾಗಿ ಮಾಡಿಕೊಂಡು, ಆ ದ್ವೀಪದಿಂದ ಸ್ಯಾನ್ ಪ್ರಾನಿಸ್‍ಸ್ಕೋದ ಮೇಲೆ ರಾಸಾಯನಿಕ ದಾಳಿಯ ಯೋಜನೆ ಬಗ್ಗೆ ಇರುವ ಕತೆ.ಇತ್ತೀಚಿಗೆ 'ಅಲ್‍ಕಟ್ರಾಸ್' ಅನ್ನೋ ಆ ದ್ವೀಪವನ್ನೂ, ಅಲ್ಲಿನ ಆ ಕುಖ್ಯಾತ ಸೆರಮನೆಯ ಪ್ರವಾಸ ಮಾಡಿದಾಗ ಮತ್ತೆ ನೆನಪಾಗಿದ್ದು ಆ ಸಿನಿಮಾ.

ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಎರಿಯಾದಿಂದ ಜಿನಿಗುಡುತ್ತಿದ್ದ ಮಳೆ ಮತ್ತು ನಡುಗುವ ಚಳಿಯ ಜೊತೆ ದೋಣಿಯಲ್ಲಿ ಹೊರಟ ನಾವು ಆ ದ್ವೀಪವನ್ನು ೨೦-೨೫ ನಿಮಿಷದಲ್ಲಿ ಮುಟ್ಟಿದ್ದೆವು. ಸ್ಯಾನ್ ಪ್ರಾನಿಸ್‍ಸ್ಕೋದ ಬೇ ಮಧ್ಯೆ ಇರುವ ಆ ದ್ವೀಪ, ಅದರಲ್ಲಿ ಕೋಟೆಯಂತ ಕಟ್ಟಡ....ತೀರಾ ಸಾಮಾನ್ಯವಾಗಿ ಕಾಣುತಿತ್ತು, ಅದರ ಇತಿಹಾಸ ತಿಳಿಯುವವರೆಗೆ. ಅಲ್ಲಿ ಹೋಗುತ್ತಿರುವಂತೆ ಗೈಡ್ ಒಬ್ಬ ಪ್ರವಾಸಿಗರನ್ನು ಉದ್ದೇಶಿಸಿ ಮಾತಾಡಿದ.ನಂತರ ಅಲ್ಲಿಂದ ನಾವು 'ಅಲ್‍ಕಟ್ರಾಸ್' ಬಗ್ಗೆ ಡಿಸ್ಕವೇರಿ ಚಾನಲ್‍ರವರ ಕಿರುಚಿತ್ರ ವೀಕ್ಷಿಸಿ, ಆ ಕುಖ್ಯಾತ ಸೆರೆಮನೆಯ ಪ್ರವಾಸಕ್ಕೆ ತೆರಳಿದೆವು.ಮೊದಲು ರಕ್ಷಣಾ ತಾಣವಾಗಿದ್ದು ನಂತರ ಸೆರಮನೆಯಾಗಿ ಮಾರ್ಪಾಟ್ಟು, ಈಗ ರಾಷ್ಟ್ರೀಯ ಸ್ಮಾರಕವಾಗಿದೆ 'ಅಲ್‍ಕಟ್ರಾಸ್'. ಆ ಸೆರಮನೆ ಪ್ರವೇಶಿಸುತ್ತಿದ್ದಂತೆ ಹೆಡ್‍ಪೋನ್ ಜೊತೆ ಮೊಬೈಲ್‍ನಂತ ಸಾಧನವೊಂದು ಪ್ರವಾಸಿಗರಿಗೆ ಕೊಡಲಾಯಿತು. ಆ ಸಾಧನ ನಾವು ಸೆರಮನೆಯಲಿ ಹೋಗುವ ಪ್ರತಿ ಜಾಗದ ಬಗ್ಗೆ ವಿವರಣೆ ನೀಡತೊಡಗಿತು.

೧೯೩೩ರಲ್ಲಿ ಶುರುವಾದ ಸೆರಮನೆ ತಾನಿದ್ದ ಭೌಗೋಳಿಕ ಸ್ಥಾನ, ಅಲ್ಲಿನ ವಿಪರೀತ ಹವಾಮಾನದಿಂದ ಅದು ಒಂದು ಅತ್ಯಂತ ಕಠಿಣ ಸೆರಮನೆಯ ಸ್ಥಾನಗಳಿಸಿತು.ಬೇರೆ ಜೈಲುಗಳಲ್ಲಿ ಹಿಡಿದಿಡಲಾಗದ ಆಗಿನ ಕಾಲದ ಅತ್ಯಂತ ಕುಖ್ಯಾತ ಕ್ರಿಮಿನಲ್‍ಗಳನ್ನು ಅಮೇರಿಕಾ ಸರ್ಕಾರ ಅಲ್ಲಿ ಇಡತೊಡಗಿತು. ಹೊರಗಿನ ಪ್ರಪಂಚದವರಿಗೆ ಅಲ್ಲಿ ಪ್ರವೇಶ ಇಲ್ಲದಿದ್ದರಿಂದ ಮೊದಲೇ ಕುತೂಹಲದ ಬೀಡಾಗಿದ್ದ 'ಅಲ್‍ಕಟ್ರಾಸ್' ಈ ಕುಖ್ಯಾತರ ಆಗಮನದಿಂದ ಇನ್ನೂ ಕುತೂಹಲ ಹೆಚ್ಚಿಸಿತು. ಅದಕ್ಕೂ ಹೆಚ್ಚು ರೋಚಕ ಮೂಡಿಸಿದ್ದು ಅಲ್ಲಿನ ಕೈದಿಗಳ ಜೀವನ ಮತ್ತು ಅವರ ಜೈಲಿಂದ ಪರಾರಿಯಾಗುವ ಪ್ರಯತ್ನಗಳು.ಅದು ಕಾರ್ಯನಿರ್ವಹಿಸಿದ ೨೯ ವರ್ಷ ಅನೇಕ ದಂತಕತೆಗಳಿಗೆ-ಹಾಲಿವುಡ್ ಸಿನಿಮಾಗಳಿಗೆ ಸ್ಪೂರ್ತಿ ಆಯಿತು.

ಇದನೆಲ್ಲಾ ಕೇಳುತ್ತಿದ್ದಂತೆ ನಾವು ಆ ಸೆರಮನೆಯೊಳಗೆ ಒಂದು ನೇರವಾದ ಪ್ಯಾಸೇಜ್‍ಗೆ ಬಂದಿದ್ದೆವು. ಅದರ ಅಕ್ಕಪಕ್ಕ ಸಾಲು ಸಾಲು ಕೈದಿಗಳ ಕೋಣೆಗಳು. ತೀರಾ ಚಿಕ್ಕದಾದ ಕೋಣೆ, ಅದರಲ್ಲಿ ಒಂದು ಹಾಸಿಗೆ, ಒಂದು ಕಮೋಡ್ ಬಿಟ್ಟರೆ ಎನೂ ಇರ್ತಿರಲಿಲ್ಲ. ಪ್ರತಿಕೋಣೆಗೂ ಎರಡು ಸುತ್ತು ಕಬ್ಬಿಣದ ಸರಳುಗಳ ಬಾಗಿಲು.ಆ ಕೋಣೆಗಳನು ನೋಡುತ್ತಾ ಮುಂದೆ ಸಾಗುತ್ತಿದ್ದಂತೆ ಒಂದು ತಿರುವು. ಅಲ್ಲಿ ಇತ್ತು 'ಬ್ಲ್ಯಾಕ್ ಹೋಲ್'. ತೀರಾ ಎಗರಾಡುವ ಕೈದಿಗಳನ್ನು ಇದರಲ್ಲಿ ೨-೩ ದಿವಸ ಹಾಕುತ್ತಿದ್ದರಂತೆ. ಬ್ಲ್ಯಾಕ್ ಹೋಲ್ ಹೆಸರಿಗೆ ತಕ್ಕಂತೆ ಒಂದು ಬೆಳಕಿನ ಕಿರಣವು ಬರದ ಕೋಣೆ..ಅದರಲ್ಲಿ ಮಂಚವಾಗಲಿ, ಕಮೋಡ್ ಆಗಲಿ ಯಾವುದೂ ಇರಲಿಲ್ಲ. ಅದರಲ್ಲಿ ಇದದ್ದು ನೆಲದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ತೂತು. ಅಲ್ಲಿರುವರೆಗೆ ಅತ್ಯಂತ ಕಡಿಮೆ ಊಟ. ಕೈದಿಗಳ ಮನೋಬಲ ಮುರಿಯುವಲ್ಲಿ ಇದು ಸಾಕಷ್ಟು ಯಶಸ್ವಿಯಾಗಿತ್ತಂತೆ.

ಅಲ್ಲೇ ಗೋಡೆಯಲ್ಲಿ ಮೇಲೆ ಇದ್ದವು ಆ ಮಹಾನುಭಾವರ ಚಿತ್ರಗಳು.. ಆ ಸೆರಮನೆಯಲ್ಲಿ ಇದ್ದು ಅತ್ಯಂತ ಕುಖ್ಯಾತರಾದ ಕ್ರಿಮಿನಲ್‍ಗಳು.

ಅಲ್ ಕೆಪೋನಿ- ಆಗಿನ ಮಾಫಿಯ ದೊರೆ.ಬೇರೆ ಯಾವುದೇ ಜೈಲಿನಲ್ಲಿದ್ದರೂ ಅಲ್ಲಿಂದಲೇ ತನ್ನ ದಂಧೆ ನಡೆಸುತ್ತಿದ್ದನಂತೆ. ಈ ಸೆರಮನೆಗೆ ಬಂದ ಮೊದಲ ಬ್ಯಾಚ್‍ನಲ್ಲಿದ್ದವನು. ಜೈಲಿನ ಆರಂಭಕ್ಕಿಂತಲೂ ಅವನು ಅಲ್ಲಿ ಬಂದದ್ದು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿತ್ತಂತೆ. ಅಲ್‍ಕಟ್ರಾಸ್‍ಗೆ ಬಂದ ಮೇಲೆ ಅವನನ್ನು ಸಾಮಾನ್ಯ ಕೆಲಸಕ್ಕೆ ಬಾರದ ಕೈದಿಯಾಗಿ ಮಾಡಿದರಂತೆ ! ಜೈಲಿನಲ್ಲಿ ಇದದ್ದು ೬ ವರ್ಷ.

ಜಾರ್ಜ್ ಕೆಲ್ಲಿ-ಇವನು ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ವರ್ಗವಾಗಿ ಬಂದವನು. ಜೈಲಿನಲ್ಲಿ ಇದದ್ದು ೧೭ ವರ್ಷ.

ಅಲ್ವಿನ್ ಕರ್ಪಿಸ್-ಇವನು ಸಹ ದರೋಡೆ, ಅಪಹರಣ ಹಾಗು ಇನ್ನೂ ಅನೇಕ ಕೇಸ್‍ಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿ ಬೇರೆ ಜೈಲುಗಳಿಂದ ಇಲ್ಲಿಗೆ ಬಂದವನು.ಇಲ್ಲಿ ಇದದ್ದು ೨೬ ವರ್ಷ

ರಾಬರ್ಟ್ ಸ್ಟೌರ್ಡ್ - ಅಲ್‍ಕಟ್ರಾಸ್‍ನ ಅತ್ಯಂತ ಕುಖ್ಯಾತ-ಅತೀ ಹೆಚ್ಚು ಮಿಡಿಯಾ ಕವರೇಜ್ ಪಡೆದವನು. ಇಲ್ಲಿಗೆ ಬರುವ ಮುಂಚೆಯಿದ್ದ ಜೈಲಿನಲ್ಲಿ ತನ್ನ ಕೋಣೆಯಲ್ಲಿ ಹಕ್ಕಿಗಳನ್ನು ಇಟ್ಟುಕೊಂಡು ಅವುಗಳನ್ನು ಅಭ್ಯಾಸಮಾಡುತ್ತಿದ್ದನಂತೆ.ಅವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದನಂತೆ. ಅದೇ ಕಾರಣಕ್ಕೆ 'ಬರ್ಡ್ ಮ್ಯಾನ್' ಅನ್ನೋ ಅಡ್ಡಹೆಸರಿನಿಂದ ಎಲ್ಲೆಡೆಗೆ ಪ್ರಸಿದ್ದನಾದವನು.ಆದರೆ ಇಲ್ಲಿಗೆ ಬರಲು ಕಾರಣ ಹಿಂದಿದ್ದ ಜೈಲಿನ ಅಧಿಕಾರಿಯೊಬ್ಬನನ್ನು ಸುಮಾರು ೨೦೦೦ ಕೈದಿಗಳ ಎದುರು ನಿರ್ಧಯವಾಗಿ ಹತ್ಯೆ ಮಾಡಿದ್ದಕ್ಕೆ.ಇದದ್ದು ೧೭ ವರ್ಷ.

ಮಾರ್ಟನ್ ಸೊಬೆಲ್-ಜೈಲಿಗೆ ಬರಲು ಕಾರಣ ಅಮೇರಿಕಾದಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಪ್ರಯತ್ನಪಟ್ಟಿದ್ದು ! ಇದದ್ದು ೫ ವರ್ಷ.
ಹೀಗೆ ಇನ್ನೂ ಅನೇಕ ವಿಶಿಷ್ಟ ವ್ಯಕ್ತಿಗಳ ಬೀಡಾಗಿದ್ದ ಈ ಜೈಲಿನಿಂದ ತಪ್ಪಿಸಿಕೊಳ್ಳುವದಕ್ಕೆ ಪ್ರಯತ್ನಪಟ್ಟವರು ಅನೇಕರು. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಒಟ್ಟು ಪ್ರಯತ್ನಗಳು - ೩೬. ಅದರಲ್ಲಿ ಏಳು ಕೈದಿಗಳು ಪ್ರಯತ್ನದಲ್ಲಿದ್ದಾಗ ಶಾಟ್ ಡೆಡ್, ಇಬ್ಬರು ಜೈಲಿನಿಂದ ಹೊರಬಂದರು ಅಲ್ಲಿನ ಸಮುದ್ರದಲ್ಲಿ ಮುಳುಗಿ ಸತ್ತವರು, ಇಬ್ಬರು ಜೈಲು-ದ್ವೀಪದಿಂದ ತಪ್ಪಿಸಿಕೊಂಡರು ಮರಳಿ ಹಿಡಿಯಲ್ಪಟ್ಟವರು, ೫ ಜನ ನಾಪತ್ತೆ ಆದವರು, ಇನ್ನು ಉಳಿದವರು ಪರಾರಿಯಾಗುವಾಗ ಸಿಕ್ಕು ಮರಳಿದವರು. ಆ ೫ ಜನ ನಾಪತ್ತೆಯದವರಲ್ಲಿರುವ ಹೆಸರುಗಳೇ - ಮೌರಿಸ್ ಮತ್ತು ಎಂಜಿಲಿನ್ ಸಹೋದರರು.

ಈ ಇಬ್ಬರು ಸೋದರರು ಇಲ್ಲಿಂದ ಪರಾರಿಯಾದ ಬಗ್ಗೆ ಅನೇಕ ಕತೆಗಳಿವೆ. ಆದರೆ ಅವರು ಉಪಯೋಗಿಸಿದ ವಿಧಾನ, ಅವರು ತಮ್ಮ ಡಮ್ಮಿಗಳನ್ನು ತಮ್ಮ ಕೋಣೆಯಲ್ಲಿ ಮಲಗಿಸಿ ಪರಾರಿಯಾದ ಬಗ್ಗೆ ತೀರಾ ಸಿನಿಮೀಯಾ. ಅವರು ತಪ್ಪಿಸಿಕೊಂಡು ಹೋಗಿಲ್ಲ ಅನ್ನುತ್ತದೆ ಅಧಿಕೃತ ವರದಿ, ಅದರ ಪ್ರಕಾರ ಅವರು ಪರಾರಿ ಪ್ರಯತ್ನದಲ್ಲಿದ್ದಾಗ ಆ ಕೊರೆಯುವ ಸಮುದ್ರದಲೆಲ್ಲೋ ಮುಳುಗಿ ಸತ್ತಿರಬಹುದೆಂದು. ಆದರೆ ಇನ್ನೂ ಅನೇಕರ ಪ್ರಕಾರ ಅಲ್ಲಿಂದ ಅವರು ಯಶಸ್ವಿಯಾಗಿ ಪರಾರಿಯಾದವರು.ಇವರ ಕತೆಯನ್ನು ಆಧಾರಿಸಿ ಬಂದಿದ್ದೆ ಹಾಲಿವುಡ್ ಚಿತ್ರ -'ಎಸ್ಕೇಪ್ ಫ್ರಾಮ್ ಅಲ್‍ಕಟ್ರಾಸ್'.

ಸೆರಮನೆಯ ಕುಖ್ಯಾತರ ಬಗ್ಗೆ ಕೇಳುತ್ತಾ ಕೇಳುತ್ತಾ ಈಗ ನಾವು ಈ ಸೋದರರಿದ್ದ ಸೆಲ್‍ನ ಮುಂದೆ ನಿಂತಿದ್ದೆವು. ಅವರ ಕೋಣೆಯಲ್ಲಿ ಆ ಡಮ್ಮಿಗಳ ಪ್ರತಿಕೃತಿಗಳು ಹಾಗೇ ಇಟ್ಟಿದ್ದರು. ಅಲ್ಲಿದ್ದ ಗ್ರಂಥಾಲಯದಲ್ಲಿ ತಿರುಗಾಡಿ, ಕೈದಿಗಳ ಭೇಟಿಗೆ ಇದ್ದ ಕಿಟಕಿಯಲ್ಲಿ ಕುಳಿತು,ಜೈಲಿನ ಅಧಿಕಾರಿಗಳ ಕಚೇರಿಯನ್ನು ನೋಡಿ, ಕೊನೆಗೆ ಕೈದಿಗಳ ಊಟದ ಮನೆಗೆ ಹೊಕ್ಕೆವು. ಅಲ್ಲಿ ಯಾವುದೇ ಕುರ್ಚಿ-ಟೇಬಲ್-ಪೋರ್ಕ್-ಚಾಕುಗಳನ್ನು ಇಟ್ಟಿರಲಿಲ್ಲವಂತೆ. ದಿನವೂ ಅದೇ ಮೆನು.

ಇಂತಹ ಸೆರಮನೆಯ ನಿರ್ವಹಿಸುವ ವೆಚ್ಚ ದಿನವೊಂದಕ್ಕೆ ಕೈದಿಯೊಬ್ಬನಿಗೆ ಆ ದಿನಗಳಲ್ಲೇ ೧೦೦ ಡಾಲರ್ ಆಗಿತ್ತಂತೆ. ಹೆಚ್ಚುತ್ತಿದ್ದ ಈ ನಿರ್ವಹಿಸುವ ವೆಚ್ಚ ನೋಡಿ ಕೊನೆಗೂ ೨೯ ವರ್ಷದ ನಂತರ ಈ ಸೆರಮನೆಯನ್ನು ಮುಚ್ಚಲಾಯಿತು.ನಂತರ ಇದನ್ನು ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಾಡಿಸಲಾಯಿತು.

ನಂತರ ಬಂತು ೧೯೬೯..ಸ್ಠಳೀಯ ರೆಡ್ ಇಂಡಿಯನ್ ಮತ್ತು ಇತರ ಬುಡಕಟ್ಟು ಜನರಿಂದ ಬಲವಂತವಾಗಿ ಕಸಿದುಕೊಂಡ ನೆಲವನ್ನು ವಾಪಾಸ್ ಮಾಡುವಂತೆ ಆಗ್ರಹಿಸಿ ಕೆಲವು ವಿದ್ಯಾರ್ಥಿ ಗುಂಪುಗಳು - ಕೆಲವು ಇಂಡಿಯನ್ ಜನ ಅಲ್‍ಕಟ್ರಾಸ್‍ಗೆ ಮುತ್ತಿಗೆ ಹಾಕಿದರು. ಸಂಕೇತವಾಗಿದ್ದ ಈ ಪ್ರತಿಭಟನೆ ನೋಡುನೋಡುತ್ತಿದ್ದಂತೆ ಪೂರ್ಣಪ್ರಮಾಣವಾಗಿ ಈಡೀ ದ್ವೀಪವನ್ನು ಈ ಗುಂಪು ಆಕ್ರಮಿಸಿಕೊಂಡಿತು. ಅವರ ಬೇಡಿಕೆಗಳು - ಆ ದ್ವೀಪದ ಮೇಲೆ ಇಂಡಿಯನ್ ಸಂಸ್ಕೃತಿ ಬಿಂಬಿಸುವ ಒಂದು ಕಲ್ಚರಲ್ ಕೇಂದ್ರ, ಒಂದು ಶೈಕ್ಷಣಿಕ ಕೇಂದ್ರ ಮತ್ತು ಒಂದು ನಿಸರ್ಗ-ಅಧ್ಯಯನ ಕೇಂದ್ರ. ಸ್ಥಾಪಿಸುವುದು. ಸುಮಾರು ಒಂದು ವರ್ಷದವರೆಗೆ ದ್ವೀಪದ ಮೇಲಿದ್ದ ಈ ಇಂಡಿಯನ್ ಹಿಡಿತ ಕೊನೆಗೂ ಕಮಾಂಡೊಗಳ ಕ್ಷಿಪ್ರಕಾರ್ಯಾಚರಣೆಯಲ್ಲಿ ಕೊನೆಗೊಂಡಿತ್ತು.ಆದರೆ ಅದು ಉಂಟುಮಾಡಿದ ಜನಜಾಗೃತಿಗೆ ಶರಣಾಗಿ ಸರಕಾರ ಆಕ್ರಮಿಸಿದ್ದ ಅನೇಕ ಪ್ರದೇಶಗಳನು ಮರಳಿ ಕೊಟ್ಟಿತಂತೆ.

ಇಷ್ಟೆಲ್ಲಾ ಇತಿಹಾಸವಿರುವ ಸೆರಮನೆ-ದ್ವೀಪ ನೋಡಿ ಮರಳುತ್ತಿದ್ದಂತೆ ಗತಕಾಲಕ್ಕೆ ಹೋಗಿಬಂದಂತೆ ಭಾಸವಾಗುತಿತ್ತು.

ಕೈದಿಗಳ ಧ್ವನಿ, ಗಾರ್ಡ್‍ನ ಸೀಟಿಯ ಶಬ್ದ, ಗುಂಡಿನ ಸದ್ದು, ಇಂಡಿಯನ್ ಜನರ ಕೂಗು ಇನ್ನೂ ಅಲ್ಲಿ ಪ್ರತಿಧ್ವನಿಸುತ್ತಿದೆ ಅನಿಸಿತು..

Thursday, February 22, 2007

ಅದೊಂದು ಸಂಜೆ

ಅದೊಂದು ಸಂಜೆ ಮನಸ್ಸಾನ್ನ ಮತ್ತೆಮತ್ತೆ ಕಾಡುತ್ತೆ..

ಆವತ್ತು ಬೆಳಿಗ್ಗೆಯಿಂದಾಲೇ ಇವತ್ತು ಯಾಕೇ ಬೆಳಗಾಬೇಕಿತ್ತು ಅಂತಾ ಅನಿಸಿತ್ತು. ಯಾಕೆಂದರೆ ನನಗೆ ಆವತ್ತು ಸಂಜೆ ಆಗೋದು ಬೇಕಿರಲಿಲ್ಲ. ಕೊನೆಗೂ ಅದು ಬಂದೇಬಿಡ್ತು.ಆವಾಗ ನಿನ್ನ ಮನದಲ್ಲಿ ಎನು ನಡೆಯುತಿತ್ತೋ ಗೊತ್ತಿಲ್ಲ, ನನ್ನ ಮನಸ್ಸು ಕಡೇ ಪಕ್ಷ ಇನ್ನೊಂದು ದಿವಸ ಸಿಗಬಾರದಿತ್ತೆ ಅನ್ನೋ ಚಟಪಟಿಕೆಯಲ್ಲಿ ಇತ್ತು.

ಟ್ಯಾಕ್ಸಿ ಬಂದು, ಬ್ಯಾಗ್‍ನೆಲ್ಲ ಅದಕ್ಕೆ ಹಾಕಿ ಮನೆಯಿಂದ ಹೊರಡುವಾಗ ನೆನಪಾಗಿದ್ದು ಈ ಸಾಲುಗಳು

ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂತಳು ನನ್ನ ಕೈ ಹಿಡಿದ ಹುಡುಗಿ
ಇನ್ನೆಂದು ಬರುವಿರೆಂದೆನ್ನ ಕೇಳಿದಳು
ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು

ನಾನು ಅದೇ ತರ 'ಇನ್ನೊಂದು ತಿಂಗಳಿಗೆ' ಅಂತಾ ನಿನಗೆ ಹೇಳುವ ಹಾಗಿದ್ದರೆ ಏಷ್ಟು ಚೆನ್ನಾಗಿ ಇತ್ತು..

ಏರಪೋರ್ಟ್‍ಗೆ ಹೋಗುವಾಗ ನಡುವೆ ನಡುವೆ 'ಶುಭ ಪ್ರಯಾಣ' ಹೇಳೋಕೇ ಬರ್ತಾ ಇದ್ದ ಪೋನ್‍ಕರೆಗಳು, ಸುಮ್ಮನೆ ಯಾಂತ್ರಿಕವಾಗಿ ಪೋನ್ ಮಾಡಿದವರ ಜೊತೆ ಮಾತು.ಸುಮ್ಮನೆ ಕಷ್ಟಪಟ್ಟು ತಂದುಕೊಂಡು ನಗ್ತಾ ಇದ್ದು ನಗೆ.

ನಾನೆಲ್ಲಿ ಇದ್ದೆ? ನಿನ್ನ ಕೈ ಹಿಡಕೊಂಡವನಿಗೆ ಬೇರೆ ಎನೂ ಬೇಕಿರಲಿಲ್ಲ. ನನ್ನ ಕೈಯಲ್ಲಿ ನಿನ್ನ ಕೈ ಇದ್ದಾಗ, ಹಾಗೇ ಅಲ್ಲೇ ಸಮಯ ನಿಂತುಬಿಡಲಿ ಅಂತಾ ಮನಸ್ಸು ಕೂಗ್ತಿತ್ತು. ದಾರಿಯುದ್ದಕ್ಕೂ ಮಾತಿಗಿಂತ ನಮ್ಮಲ್ಲಿ ಮೌನನೇ ಜಾಸ್ತಿ ಇತ್ತಲ್ವ ಅವತ್ತು.

ನಂಗೆ ಎನೂ ಬೇಕಿರಲಿಲ್ಲ..ನಿನ್ನ ಸಾನಿಧ್ಯ ಒಂದೇ ಸಾಕಿತ್ತು. ನಿನ್ನ ಒಂದು ಸ್ಪರ್ಶ ಸಾಕಿತ್ತು.

ಟ್ಯಾಕ್ಸಿ ಹಾಗೇ ಸುಮ್ಮನೆ ಹೋಗ್ತಾನೇ ಇರಲಿ ಅಂತಾ ಎಷ್ಟು ಅನಿಸ್ತಾ ಇತ್ತು. ಎರಪೋರ್ಟ್ ಹತ್ತಿರಕ್ಕೆ ಬಂದಾಗೆ ಅದೊಂದು ಹೇಳಲಾಗದ ಒಂದು ಭಾವನೆ ಆವರಿಸಿಕೊಂಡುಬಿಟ್ಟಿತ್ತು.

ಅವತ್ತು ನಿನ್ನ ಜೊತೆ ಕಳೆಯುವ ಒಂದು ನಿಮಿಷಕ್ಕಾಗಿ, ನಿನ್ನ ಜೊತೆ ಮಾತಾಡೋ ಒಂದು ಮಾತಿಗಾಗಿ, ನಿನ್ನ ನೋಡೋ ಒಂದು ಅವಕಾಶಕ್ಕಾಗಿ ನಾನು ಎಷ್ಟು ಪರಿತಪಿಸಿದ್ದೆ...ನೀರಿಂದ ಹೊರಗೆ ತಗೀತಾರೆ ಅಂತಾ ಗೊತ್ತಾದ ಮೀನಿನ ತರ . ಅವತ್ತು ಬಹುಷಃ ಯಾರಾದರೂ ನನಗೆ 'ನಿನ್ನ ಜೀವನದ ಒಂದು ದಿವಸ ಕೊಟ್ರೆ, ಅವಳ ಜೊತೆ ಕಳೆಯೋಕೆ ಇನ್ನೊಂದು ನಿಮಿಷ ಕೊಡಿಸ್ತೀನಿ' ಅಂತಾ ಹೇಳಿದ್ದರೂ, ನಾನು ಹಿಂದೆ-ಮುಂದೆ ನೋಡದೇ ಒಪ್ಪಕೊಳ್ಳತ್ತಿದ್ದೆ.

'ನಿನ್ನೆವರೆಗೆ ನಾ ಯಾರೋ ನೀ ಯಾರೋ ಅಂತಾ ಇದ್ದೆ..'ಆದರೆ ಅಮೇಲೆ ಎನಾಯಿತು?

ಎರಪೊರ್ಟ್ ಬಂದು ಮನಸ್ಸಿಲ್ಲದ ಮನಸಿಂದ ಇಳಿದಿದ್ದೆ. ಲಗೇಜ್ ಚೆಕ್-ಇನ್ ಮಾಡೋ ಉದ್ದಸಾಲು ನೋಡಿ, ಅಲ್ಲಿನ ಪ್ರಯಾಣಿಕರಲಿ ಬಹುಷಃ ಖುಷಿಯಾಗಿದ್ದು ನನಗೊಬ್ಬನಿಗೆ ಅನಿಸುತ್ತೆ ! ಚೆಕ್-ಇನ್ ಮಾಡೋವರೆಗೆ ಮತ್ತೆ ನಿನ್ನ ಜೊತೆ ಇರಬಹುದೆನ್ನುವ ಸಂತಸ. ಆ ಸಾಲಿನಲ್ಲಿ ನನ್ನ ಬ್ಯಾಗ್‍ಗಳನ್ನು ಇಟ್ಟು ಅಲ್ಲಿಂದ ನೀನು ನಿಂತ ಕಡೆ ನಾ ಎಷ್ಟು ಸಲ ಬಂದು ಹೋದೆನೋ ಗೊತ್ತಿಲ್ಲ. ಛೇ,ಕೊನೆಗೂ ನನ್ನ ಸರದಿ ಬಂದೆ ಬಿಡ್ತು ಅಲ್ಲಿ. ಲಗೇಜ್ ಎಲ್ಲಾ ಹಾಕಿ ನಿನ್ನ ಕಡೆ ಬಂದಾಗ, ಯಾವ ಕ್ಷಣವನ್ನು ನಾ ಬೇಡ ಅಂತಾ ಇದ್ದೇನೋ ಅದು ಎದುರಿಗೆ ನಿಂತಿತ್ತು.

ನಿನ್ನನ್ನು ಅಗಲುವ ಕ್ಷಣ..

ಎನು ಹೇಳಬೇಕು, ಎನು ಮಾಡಬೇಕು ಅಂತಾ ತೋಚದ ಕ್ಷಣ. ಸುಮ್ಮನೆ ನಿನ್ನ ಕೈಯನ್ನು ನನ್ನ ಕೈಯಲ್ಲಿ ತಗೊಂಡಿದ್ದೆ. ನನ್ನ ಪ್ರೀತಿ ಹುಡುಗಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ. ಭರವಸೆಯ ನಾಳೆಗಳ ಬಗ್ಗೆ ನೆನೆಯುತ್ತಾ ನಿನ್ನ ಕೈ ಅದುಮಿದ್ದೆ..

ನಿನ್ನ ಮನದಲ್ಲಿ ಎನು ಆಗ್ತಾ ಇತ್ತು ಹುಡುಗಿ?

ಭಾರವಾದ ಹೆಜ್ಜೆ ಇಡ್ತಾ ಇಮಿಗ್ರೇಷನ್ ಚೆಕ್ ಕಡೆ ಹೋಗುವಾಗ ತಿರುಗಿ ಒಮ್ಮೆ ನೋಡಿದ್ದೆ. ನೀನು ಅಳುತ್ತಿದ್ದ ಅಮ್ಮನಿಗೆ ನಿನ್ನ ಪ್ರೀತಿ ಕೈಗಳಿಂದ ಸಮಾಧಾನ ಮಾಡ್ತಾ, ಅಲ್ಲಿಂದ ಅವರ ಜೊತೆ ಹೊರಗೆ ಹೋಗೋದಾ ನೋಡ್ತಾ ನಿಂತಿದ್ದೆ.ನೀನು ಮರೆಯಾಗುವರೆಗೆ ಅಲ್ಲೇ ನಿಂತಿದ್ದೆ...

ನಂಗೆ ಗೊತ್ತಿಲ್ಲಾ..ನನ್ನ ಕಣ್ಣು ತೇವವಾಗಿತ್ತಾ ಅಥವಾ ಮನಸು ಅಳ್ತಾ ಇತ್ತಾ..

ಇಮಿಗ್ರೇಷನ್ ಚೆಕ್ ಮುಗಿಸಿ, ತಪಾಸಣೆಯ ನಂತರ ವಿಮಾನ ಇನ್ನೇನೂ ಹತ್ತಬೇಕು ಅನ್ನುವಾಗ, ಈ ಸಾಲು ನೆನಪಾಗಿದ್ದವು..

ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ
ದಾರಿಯಲಿ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋಯಿತು ಬಂಡಿ ಎಂದು ಹೇಳಿದನು
ಹಿಂದುರಿಗಿ ಬಂದೆನ್ನ ಒಂದೆ ಮಾತಿನಲಿ
ತಿಂಗಳಾಯಿತೇ ಎಂದಳೆನ್ನ ಹೊಸ ಹುಡುಗಿ

ಕೆ.ಎಸ್.ನ ಹೇಳಿದಂತೆ ,ಅಲ್ಲಿ ಯಾರಾದರೂ ಹಣ್ಣಿನವನು ಸಿಗ್ತನಾ ಅಂತಾ ನೋಡಿದ್ದೆ, ನನ್ನದೂ ವಿಮಾನ ಹೊರಟು ಹೋಗಿದೆ ಅಂತಾ ಹೇಳ್ತಾನಾ ಅಂತಾ ಕಾದಿದ್ದೆ. ಆಮೇಲೆ ಮನೆಗೆ ಹೋಗಿ, ಬಾಗಿಲು ಬಡಿದು, ನೀನು ಬಂದು, ಬಾಗಿಲಲ್ಲಿ ನಿಂತ ನನ್ನ ನೋಡಿ, ನಿನ್ನ ಪ್ರೀತಿ ತುಂಬಿದ ಬಟ್ಟಲುಗಣ್ಣಗಳಲ್ಲಿ ಆಶ್ಚರ್ಯ ತುಂಬಿಕೊಂಡು 'ತಿಂಗಳಾಯಿತೇ' ಅಂತಾ ಕೇಳೋದು ನೋಡೋಕೆ ಎಷ್ಟು ಚೆನ್ನಾಗಿರುತ್ತೆ ಅಂತಾ ಕನಸು ಕಾಣ್ತಾ ವಿಮಾನದ ಬಾಗಿಲಲ್ಲಿ ನಿಂತಿದ್ದೆ.

ಗಗನಸಖಿ 'ಗುಡ್ ಇವಿನಿಂಗ್..ಗುಡ್ ಇವಿನಿಂಗ್' ಅಂತಾ ಎರಡು ಸಲ ಎಚ್ಚರಿಸಿದಾಗಲೇ ನೆನಪಾಗಿದ್ದು, ಇನ್ನೆಲ್ಲಿ ಬರಬೇಕು,ಎಲ್ಲಿಂದ ಬರಬೇಕು ಹಣ್ಣಿನವನು ಅಂತಾ.

ವಿಮಾನದ ಕೊನೆಯಲ್ಲಿ ಇದ್ದ ನನ್ನ ಸೀಟ್‍ಗೆ ಹೋಗಿ ಆಸೀನಾಗಿದ್ದೆ. ಚೆಕ್-ಇನ್ ಮಾಡುವ ಸಾಲಿನಲ್ಲಿ ನನ್ನ ಮುಂದೆ ಇದ್ದ ಸಹಪ್ರಯಾಣಿಕ, ಈಗ ನನ್ನ ಪಕ್ಕದ ಸೀಟಿನಲ್ಲಿದ್ದ. ಸಾಲಿನಲ್ಲಿದ್ದಾಗ ಹಾಗೇ ಒಂದು ಚಿಕ್ಕ ಹರಟೆ ಆಗಿತ್ತು. ಈಗ ತನ್ನ ಮೊಬೈಲ್‍ನಲ್ಲಿ ಯಾರಿಗೋ ಕರೆ ಮಾಡ್ತಾ ಇದ್ದ. ವಿಮಾನದಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಇನ್ನೂ ವಿಮಾನ ಶುರುವಾಗಿರದರಿಂದ ಮತ್ತು ನಮ್ಮದು ಕೊನೆ ಸೀಟ್ ಆದ್ದರಿಂದ ಗುಪ್ತವಾಗಿ ಕರೆ ನಡೀತಾ ಇತ್ತು. ಅವನೂ ಕರೆ ಮುಗಿಸುತ್ತಿದ್ದಂತೆ ಇದ್ದ ಚಿಕ್ಕ ಪರಿಚಯದಿಂದ ಅವನ ಮೊಬೈಲ್ ತೆಗೊಂಡು ಮಾಡಿದ್ದು ಕರೆ ನಿನಗೆ. ಸುಮ್ಮನೆ ಒಂದೆರಡು ಕ್ಷಣನಾದರೂ ನಿನ್ನ ಧ್ವನಿ ಕೇಳಬೇಕು ಅನ್ನೋ ಕೊನೆ ಆಸೆ..ಗಗನಸಖಿ ಬಂದು 'ಪ್ಲೀಸ್, ಸ್ವಿಚ್ ಆಫ್ ಮೊಬೈಲ್' ಅಂದಾಗ ಮಾಡಲೇಬೇಕಾಗಿತ್ತು..

ನಂತರ ವಿಮಾನ ಅಲ್ಲಿಂದ ಹಾರಿತ್ತು,ನನ್ನ ಕರಕೊಂಡು.ಅದರೆ ನಾನು ಅಲ್ಲಿ ವಿಮಾನದಲ್ಲಿ ಇದ್ದನಾ?? ಭಾರತಕ್ಕೆ ಬರುವಾಗ ಇದ್ದ 'ನಾನು', ಈಗ ಭಾರತದಿಂದ ಹೋಗುವಾಗ 'ನಾನಗಿರಲಿಲ್ಲ'. ನನ್ನದೇ ಹೃದಯದ ಒಂದು ಭಾಗ ಬಿಟ್ಟು ಹೋಗುವಾಗಿನ ವೇದನೆ ಅದು..

ವಿಮಾನ ತೇಲಿತ್ತು ಆ ಕತ್ತಲ ರಾತ್ರಿಯ ಆಕಾಶದಲ್ಲಿ...

ನಾನು ತೇಲಿದ್ದೆ ನಿನ್ನ ನೆನಪಿನ ಆಗಸದಲ್ಲಿ..


*************************************************
ವಿಕ್ರಾಂತ ಕರ್ನಾಟಕದ ಈ ವಾರದ ಸಂಚಿಕೆಯಲಿ ಈ ಭಾವ ಲಹರಿಯನ್ನು ಪ್ರಕಟಿಸಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*************************************************

Wednesday, February 14, 2007

ನಿನ್ನ ಹೆಸರು..

ಚಿಗುರು ಮಾವಿನೆಲೆಯಲಿ
ಕೋಗಿಲೆ ಕುಹುವಿನಲಿ
ವಸಂತ ಋತುವಾಗಿ
ಆಗಮಿಸಿದ ಹೆಸರು..ನಿನ್ನದು

ಪ್ರೇಮ ರಾಗದಲಿ
ಒಲವ ತಾಳದಲಿ
ಹೃದಯದ ಹಾಡಾಗಿ
ಹೊಮ್ಮಿದ ಹೆಸರು..ನಿನ್ನದು

ಸ್ವಾತಿ ಮಳೆಯಲಿ
ಕಪ್ಪೆ ಚಿಪ್ಪಲಿ
ಹೊಳೆವ ಮುತ್ತಾಗಿ
ಸಿಕ್ಕ ಹೆಸರು..ನಿನ್ನದು

ಬಿಸಿಲ ಊರಿನಲಿ
ಮಳೆಯ ಬೀದಿಯಲಿ
ಕಾಮನಬಿಲ್ಲಾಗಿ
ಹಬ್ಬಿದ ಹೆಸರು..ನಿನ್ನದು

ಪ್ರಣಯ ತೋಟದಲಿ
ಬಯಕೆ ಬಳ್ಳಿಯಲಿ
ನಗುವ ಹೂವಾಗಿ
ಅರಳಿದ ಹೆಸರು..ನಿನ್ನದು

ಶಿಲೆಯ ಸೊಬಗಲಿ
ಪ್ರೀತಿ ಕೆತ್ತೆನೆಯಲಿ
ಶಿಲಾಬಾಲಕಿಯಾಗಿ
ಮೂರ್ತಿವೆತ್ತಿದ ಹೆಸರು..ನಿನ್ನದು

ಮನದ ದಿಗಂತದಲಿ
ಹೃದಯ ಕಡಲಂಚಲಿ
ಕೆಂಪು ವರ್ಣ ಚೆಲ್ಲುತಾ
ಮುಡಿ ಬಂದ ಹೆಸರು... ನಿನ್ನದು

ಮಗುವ ನಗುವಿನಲಿ
ರೇಶ್ಮೆಯ ಸ್ಪರ್ಶದಲಿ
ನವಿರು ಭಾವನೆಯ ಕಾರಂಜಿಯಾಗಿ
ಚಿಮ್ಮಿದ ಹೆಸರು..ನಿನ್ನದು

ಪ್ರೀತಿ ಸ್ವರ್ಗದಲಿ
ಅಮೃತ ಸರೋವರದಲಿ
ಕಿನ್ನರಿಯಾಗಿ
ದಾಹ ತೀರಿಸಿದ ಹೆಸರು..ನಿನ್ನದು

ದೇಹದ ಪ್ರತಿ ಉಸಿರಲಿ
ಜೀವದ ಕೊನೆನಾಳೆಯಲಿ
ಬದುಕಿನ ಸೆಲೆಯಾಗಿ
ಉಕ್ಕುವ ಹೆಸರು..ನಿನ್ನದು

ಬಾಳ ಹಾದಿಯಲಿ
ಹೆಜ್ಜೆ ಹೆಜ್ಜೆಯಲಿ
ಜನ್ಮಜನ್ಮದ ಜೊತೆಯಾಗಿ
ನಡೆವ ಆ ಹೆಸರು..ನನ್ನ ಹುಡುಗಿಯ ಹೆಸರು

***********************************************
ಕವನಾರ್ಪಣೆ: ನನ್ನ ಹುಡುಗಿಗೆ

ನಿಮಗೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು
***********************************************

Sunday, February 04, 2007

ಕಾರ್ಮೋಡ ಚದುರಿದಾಗ..

ಕಾರ್ಮೋಡವೊಂದು
ಸೂರ್ಯನ ಒಂದು ಕ್ಷಣ
ಮಂಕಾಗಿಸಿತ್ತೆ
ಉಕ್ಕಿ ಹರಿಯುತ್ತಿದ್ದ
ಶರಧಿ ಒಂದು ಕ್ಷಣ
ತೀರದಿಂದ ದೂರಹೋಗಿತ್ತೆ

ಆ ರಾತ್ರಿ
ಕಣ್ಣಿಗೆ ನಿದ್ದೆಯಿಲ್ಲ
ಹೊಟ್ಟೆಗೆ ಹಸಿವಿರಲಿಲ್ಲ
ಮನದಲೆಲ್ಲೋ ಆಳವಾಗಿ
ನಾಟಿದ್ದ ತೀಕ್ಷ್ಣವಾದ ವಾಗ್ಬಾಣ

ಒಂದೊಂದು ಕ್ಷಣ
ಒಂದೊಂದು ಯುಗದಂತೆ
ಕೊನೆಗೂ ಕತ್ತಲ ರಾತ್ರಿ ಕಳೆದಿತ್ತು..

ಮುಂಜಾವಿನ ಪ್ರಖರ ಸೂರ್ಯ
ಕವಿದಿದ್ದ ಕಾರ್ಮೋಡವನ್ನು ಓಡಿಸಿದ್ದ
ಶರಧಿ ರಭಸವಾಗಿ ತೀರದೆಡೆ
ಉಕ್ಕಿ ಹರಿಯ ತೊಡಗಿತ್ತು
ಒಲವು ನಾಟಿದ್ದ ಬಾಣವನ್ನು ಕಿತ್ತು
ಅಲ್ಲಿಗೆ ಪ್ರೀತಿಯ ಮದ್ದು ಹಚ್ಚಿತ್ತು

ಶರಧಿಯ ಮತ್ತದೇ
ನಿಷ್ಕಂಳಕ ಪ್ರೀತಿ
ಸೂರ್ಯನ ಮತ್ತದೇ
ಬೆಚ್ಚಗಿನ ಅಪ್ಪುಗೆ
ಅದೇ ಜೇನಿನ ಮಾತು
ಅದೇ ಒಲವಿನ ಹಾಡು

ಎನೂ ಬದಲಾಗಿಲ್ಲ

ಮೊದಲಿಗಿಂತ ಇನ್ನೂ ಹೆಚ್ಚು
ತುಡಿವ ಮನಗಳು
ಮೊದಲಿಗಿಂತ ಇನ್ನೂ ಹೆಚ್ಚು
ಬಯಸುವ ಹೃದಯಗಳು
ಮೊದಲಿಗಿಂತ ಇನ್ನೂ ಹೆಚ್ಚು
ಪ್ರೀತಿಸುವ ಜೀವಗಳು

ಎನೂ ಬದಲಾಗುವುದಿಲ್ಲ

Thursday, January 18, 2007

ಮಿಸ್ಟಿರೀ ಪಾಯಿಂಟ್

ಅವತ್ತು ನಾವು ಹೊರಟ ಜಾಗಕ್ಕೆ ಇದ್ದ ಹೆಸರಲ್ಲೇ ಒಂದು ಕೌತಕವಿತ್ತು... 'ಮಿಸ್ಟಿರೀ ಸ್ಪಾಟ್' !

ಕುಪರ್ಟಿನೋದಿಂದ ೨ ಗಂಟೆ ಡ್ರೈವ್ ನಂತರ ನಾವು ಒಂದು ಕಾಡಿನಂತ ಜಾಗ ಹೊಕ್ಕಾಗ ನಾವು ನಿಜಕ್ಕೂ 'ಮಿಸ್ಟಿರೀ ಸ್ಪಾಟ್' ಕಡೆ ಹೊರಟಿದ್ದಿವಾ ಅಥವಾ ಅದು ಎಲ್ಲಿದೆ ಅಂತಾ ಹುಡುಕೋದೇ ಒಂದು 'ಮಿಸ್ಟರೀ' ಆಗೋತ್ತೋ ಅಂತಾ ಅನಿಸಿಕೆ ನಮ್ಮಲ್ಲಿ. ರಸ್ತೆ ಫಲಕಗಳನ್ನು ಪಾಲಿಸಿಕೊಂಡು ಕೊನೆಗೂ ಆ ಕಾಡಿನ ಮಧ್ಯೆ ಒಂದು ಅತೀ ಚಿಕ್ಕ ಗುಡ್ಡದ ಹತ್ತಿರ ಬಂದು ನಿಂತೆವು. ಎದುರಲ್ಲೇ 'ಮಿಸ್ಟಿರೀ ಸ್ಪಾಟ್‍ಗೆ ಪ್ರವೇಶ ದ್ವಾರ' ಅಂತಾ ದೊಡ್ಡ ಫಲಕ.

೫ $ ಕೊಟ್ಟು ಪ್ರವೇಶ ಚೀಟಿ ಪಡೆದು, ಒಂದು ಹತ್ತು ನಿಮಿಷ ಕಾಯ್ದೆವು. ೨೦ ಜನರ ಗುಂಪು ಮಾಡಿ ಒಳೆಗೆ ಬಿಡ್ತಾ ಇದ್ದರು. ಒಬ್ಬ 'ಮಿಸ್ಟಿರೀ ಸ್ಪಾಟ್'ನ ಗೈಡ್ ಬಂದು ನಮ್ಮನ್ನು ಒಳೆಗೆ ಕರೆದುಕೊಂಡು ಹೋದ. ಮೊದಲು ಅವನು ಕರೆದುಕೊಂಡು ಹೋಗಿ ನಮ್ಮನೆಲ್ಲಾ ಒಂದು ಸ್ಥಳದ ಸುತ್ತ ನಿಲ್ಲಿಸಿದ. ಅಲ್ಲಿ ನಡುವಲ್ಲಿ ಇದ್ದವು ಎರಡು ಚಿಕ್ಕ ಸಿಮೆಂಟ್‍ನ ಕಟ್ಟೆ.ಗುಂಪಿನಿಂದ ೫ ಅಡಿ ಮತ್ತು ಐದುವರೆ ಅಡಿ ಎತ್ತರದ ಇಬ್ಬರನ್ನು ಕರೆದ ಗೈಡ್ ಅವುಗಳ ಮೇಲೆ ಎದುರುಬದುರಾಗಿ ನಿಲ್ಲಲು ಹೇಳಿದ. ಅಂತಾ ವಿಶೇಷವೇನು ಕಾಣಲಿಲ್ಲ.ಈಗ ಅವರಿಬ್ಬರಿಗೆ ಪರಸ್ಪರ ಜಾಗ ಬದಲಾಯಸಿಕೊಳ್ಳಲು ಹೇಳಿದ. ಈಗ ಕಾದಿತ್ತು ಆಶ್ಚರ್ಯ, ೫ ಅಡಿಯ ವ್ಯಕ್ತಿಯ ಎತ್ತರ ಐದುವರೆ ಅಡಿಯ ವ್ಯಕ್ತಿಯಷ್ಟೇ ಅನಿಸ್ತಾ ಇತ್ತು !

ಅದರ ಬಗ್ಗೆ ಯೋಚನೆ ಮಾಡ್ತ ಇದ್ದಾಗೆ ಮುಂದಿನ ಜಾಗಕ್ಕೆ ಹೋದೆವು.ಅದೊಂದು ಇಳಿಜಾರು. ನೀವು ಇಳಿಜಾರಿನಲ್ಲಿ ನಿಂತಾಗ ನಿಮ್ಮ ಕಾಲು, ಆ ಇಳಿಜಾರಿಗೆ ಯಾವ ಕೋನದಲ್ಲಿ ಇದೆ ನೋಡಿ. ೯೦ ಡಿಗ್ರಿ ಕೋನದ ಅಸುಪಾಸು ಇರುತ್ತೆ. ಆದರೆ ಇಲ್ಲಿ ನಮ್ಮ ಕಾಲು ಹಾಗೀರದೆ ಸುಮಾರು ೧೨೦ ಡಿಗ್ರಿ ಕೋನದಲ್ಲಿತ್ತೇ? ನಮಗೆ ಇನ್ನೂ ಆಶ್ಚರ್ಯ.ಅದು ಮುಗಿಯುವ ಮೊದಲು ಗೈಡ್ ಕರೆದುಕೊಂಡು ಹೋಗಿದ್ದು 'ಫನ್ ಹೌಸ್'ಗೆ.

ಮರದಿಂದ ಮಾಡಿದ ಆ ಮನೆ ನೆಲಕ್ಕೆ ೩೦ ಡಿಗ್ರಿ ಕೋನಕ್ಕೆ ಬಾಗಿ ವಿಚಿತ್ರವಾಗಿ ಕಾಣುತಿತ್ತು. ಗೈಡ್ ಈಗ ಒಂದು ಸಮದಟ್ಟವಾದ ಮರದ ಹಲಗೆಯ ಮೇಲೆ ಒಂದು ಚೆಂಡನ್ನು ಇಟ್ಟ. ಸಮದಟ್ಟವಾದ್ದರಿಂದ ಚೆಂಡು ಅಲ್ಲೇ ನಿಲ್ಲುತ್ತೆ ಅಂದುಕೊಳ್ಳುವಷ್ಟರಲ್ಲಿ ಅದು ಆಗಲೇ ಆ ಮನೆ ಕಡೆ ಉರುಳೋಕೆ ಶುರುವಾಗಿತ್ತು.ಈಗ ಆ ಮನೆ ಒಳೆಗೆ ಹೊಕ್ಕಾಗ ಯಾವುದೋ ಒಂದು ಕಾಣದ ಕೈ ದೂಕುವಂತ ಅನುಭವ. ನಾವೆಲ್ಲರೂ ನೆಲಕ್ಕೆ ೪೫ ಡಿಗ್ರಿಯಲ್ಲಿ ಇದ್ದೀವಿ ಅನಿಸ್ತಿತ್ತು. ಅದೇ ಕೋಣೆಯಲ್ಲಿದ್ದ ಟೇಬಲ್ ಮೇಲೆ ಹತ್ತಿದ ಗೈಡ್ ಮೆಟ್ರಿಕ್ಸ್ ಸಿನಿಮಾ ಶೈಲಿಯಲ್ಲಿ ಅಲ್ಲಿಂದ ಗಾಳಿಯಲ್ಲಿ ನೆಲಕ್ಕೆ ಸುಮಾರು ೩೦ ಡಿಗ್ರಿ ಕೋನದಲ್ಲಿ ನಿಲ್ಲುವುದೇ ! ನಾವು ನೋಡೇಬಿಡೋಣ ಅಂದುಕೊಂಡು ಆ ಟೇಬೆಲ್ ಮೇಲಿಂದ ನಿಂತು ಮುಂದೆ ಬಾಗಿದೆವು. ಅರೇ ! ನಾವು ಸಹ ಗೈಡ್‍ನಂತೆ ಗಾಳಿಯಲ್ಲಿ ನಿಂತಂತೆ ಭಾಸವಾಗ್ತಿತ್ತು.ಗುರುತ್ವಾಕರ್ಷಣೆಯ ನಿಯಮಗಳೆಲ್ಲಾ ಇಲ್ಲಿ ಮರೆತು ಹೋದಂತೆ ಕಾಣುತಿತ್ತು.

ಆ ಮನೆ ಒಳಗಿದ್ದ ಬಾಗಿಲಲ್ಲಿ ಜೋತು ಬಿದ್ದಾಗ ನಮ್ಮ ದೇಹ ಮತ್ತೆ ಯಾವ ಕಡೆಗೋ ಎಳೆದಂತೆ ಅನಿಸಿತು. ಬಾಗಿಲಿಂದ ಅಥವಾ ಎತ್ತರದ ಬಾರ್‌ನಿಂದ ಜೋತು ಬಿದ್ದಾಗ ನಮ್ಮ ದೇಹ ಆ ಬಾಗಿಲಿಗೆ ಅಥವಾ ಬಾರ್‌ಗೆ ಸಮಾನಂತರವಾಗಿರುತ್ತೆ.ಆದರೆ ಇಲ್ಲಿ ಬಾಗಿಲಿಗೆ ದೇಹ ಮತ್ತೆ ೪೫ ಡಿಗ್ರಿ ಕೋನದಲ್ಲಿರುವುದೇ.

ಎನೋ ವಿಚಿತ್ರವಾಗಿತ್ತು ಆ ಮರದ ಮನೆ !

ಅಲ್ಲಿಂದ ಹೊರಬಂದಾಗ ಗೈಡ್ ವಿವಿಧ ಎತ್ತರದ ೪-೫ ಜನರನ್ನು ಒಂದು ಕಟ್ಟೆ ಮೇಲೆ ಎತ್ತರಕ್ಕೆ ಅನುಗುಣವಾಗಿ ನಿಲ್ಲಲು ಹೇಳಿದ. ಎಲ್ಲಾ ಸರಿಯಾಗಿ ಇತ್ತು. ನಂತರ ಆ ಗುಂಪಿನಲ್ಲಿ ಅತೀ ಉದ್ದದ ಮತ್ತು ಅತೀ ಚಿಕ್ಕ ವ್ಯಕ್ತಿಗಳನ್ನು ಜಾಗ ಅದಲುಬದಲಿಸುವಂತೆ ಹೇಳಿದ. ಮತ್ತೆ ಆಶ್ಚರ್ಯ ಕಾದಿತ್ತು. ಅವರಿಬ್ಬರೂ ಒಂದೇ ಎತ್ತರದಲ್ಲಿರುವಂತೆ ಅನಿಸುತಿತ್ತು !

ಗೈಡ್ ಈಗ ಆ ಮನೆಯ ಸುತ್ತ ಇರೋ ಮರಗಳ ಬಗ್ಗೆ ಹೇಳ್ತಾ ಇದ್ದ. ಅಲ್ಲಿದ್ದ ಎಲ್ಲಾ ಮರಗಳು ವಿಚಿತ್ರವಾದ ಕೋನದಲ್ಲಿ ಬಾಗಿದಂತೆ ಅನಿಸ್ತಾ ಇದ್ದವು ಅಥವಾ ಗೈಡ್ ಹಾಗೇ ಹೇಳಿದ ಮೇಲೆ ಹಾಗೇ ಅನಿಸಿತೋ ತಿಳಿಯಲಿಲ್ಲ. ಅವನು ಹೇಳಿದ ಹಾಗೇ ಅಲ್ಲಿ ಒಂದು ಪಕ್ಷಿಗಳು ಇರಲಿಲ್ಲ.

ಅಲ್ಲಿಂದ ಹೊರಬಂದಾಗ ತಲೆಯಲಿ ನೂರೆಂಟು ಪ್ರಶ್ನೆ.

ಗೈಡ್ ಹೇಳಿದ ಹಾಗೇ ಇದು 'ವಿಜ್ಞಾನ ಉತ್ತರಿಸಿಲಾಗದ ಕೌತಕವೇ?' ಅಥವಾ ಇದೆಲ್ಲಾ 'ಆಪ್ಟಿಕಲ್ ಇಲ್ಯೂಷನ್' ಪ್ರಭಾವವೇ? ಅಥವಾ ಎಲ್ಲೋ ಓದಿದ ಹಾಗೇ ಅಲ್ಲಿರಬಹುದಾದ ವಿಪರೀತ ಖನಿಜದ ಪ್ರಭಾವವೇ ಅದು ? ಅಲ್ಲಿ ನಿಜವಾಗಿಯೂ ಗುರುತ್ವಾಕರ್ಷಣ ಶಕ್ತಿ ಬೇರೆ ಕಡೆ ಇದ್ದಾಗೆ ಇಲ್ಲವೇ? ಅಥವಾ ಇನ್ನೂ ಕೆಲವು ಜನ ಹೇಳುವಂತೆ ಅದು ಅನ್ಯಗ್ರಹಿಗಳು ಭೂಮಿಯಲ್ಲಿ 'ಹಾರುವ ತಟ್ಟೆ' ಬಚ್ಚಿಟ್ಟ ಸ್ಥಳವೇ?

ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯುತ್ತೆ...

ಮಿಸ್ಟಿರೀ ಪಾಯಿಂಟ್‍ನಿಂದ ನಾವು ಹೊರಟಿದ್ದು '೧೭ ಮೈಲಿಗಳ ಡ್ರೈವ್'ಗೆ . ಈ ಜಾಗ ಹೆಸರೇ ಹೇಳುವಂತೆ ೧೭ ಮೈಲಿಗಳ ಸುಂದರ ಕಡಲು ತೀರದ ಉದ್ದಕ್ಕೂ ಸಾಗುವ ರಸ್ತೆ. ಇದರಲ್ಲಿ ಸುಮಾರು ೨೦ ಪಾಯಿಂಟ್‍ಗಳು ಸಿಗುತ್ತೆ. ಅಲ್ಲಿಂದ ಫೆಸಿಪಿಕ್ ಎಷ್ಟು ಅದ್ಬುತವಾಗಿ ಕಾಣುತಿತ್ತು.ಫೆಸಿಪಿಕ್ ಗ್ರೂವ್‍ನಿಂದ ಶುರುವಾಗೋ ಇದು ಸ್ಪಾನಿಷ್ ಬೇ, ಪೆಬೆಲ್ ಬೀಚ್, ಬರ್ಡ್ಸ್ ಎನ್‍ಕ್ಲೋವ್, ಲೋನ್ಲಿ ಸೈಪ್ರ್‍ಅಸ್ ಟ್ರೀ..ಹೀಗೆ ಕೆಲವು ವಿಶಿಷ್ಟವಾದ ಪ್ರೇಕ್ಷಣೀಯ ಪಾಯಿಂಟ್‍ಗಳ ಮೂಲಕ ಹೋಗುತ್ತೆ.

೧೭ ಮೈಲ್ ಡ್ರೈವ್ ನಂತರ ನಾವು ಮರಳಿ ಕುಪರ್ಟಿನೋಗೆ ಹೊರಟಾಗ ಆಗಲೇ ಸಂಜೆ ಆಗುತಿತ್ತು.

ಅಂದು ಬೆಳಿಗ್ಗೆ ನೋಡಿದ 'ಮಿಸ್ಟಿರೀ ಪಾಯಿಂಟ್' ಬಗ್ಗೆ ಯೋಚಿಸುತ್ತಿದ್ದೆ, ಆಗ ಅನಿಸಿದ್ದು ಇವೆಲ್ಲಕ್ಕಿಂತ ಮಿಗಿಲಾದ ಒಂದು 'ಮಿಸ್ಟಿರೀ ಪಾಯಿಂಟ್' ಒಂದು ಇದೆ ಅಂತಾ. ಅದು ಬೇರೆ ಎಲ್ಲೂ ಇಲ್ಲ, ನಮ್ಮಲ್ಲೇ ಇರೋದು ಅದು. ಅದೇ ನಮ್ಮ ಮನಸ್ಸು ! ಸಂತಸ, ದುಃಖ, ಆಸೆ, ನಿರಾಸೆ, ಮೋಹ, ದಾಹ, ಸಿಟ್ಟು, ಕೋಪ, ಕರುಣೆ, ವಾತ್ಸಲ್ಯ..ಹೀಗೆ ಹತ್ತು ಹನ್ನೊಂದು ಭಾವನೆಗಳು ಹುಟ್ಟೋದು ಒಂದೇ ಜಾಗದಲ್ಲಿ, ಅದು ಮನಸೆಂಬ ಈ ಮಿಸ್ಟಿರೀ ಪಾಯಿಂಟ್‍ನಲ್ಲಿ.

ಈ ಮನಸಿಗಿಂತ ಬೇರೆ 'ಮಿಸ್ಟಿರೀ ಪಾಯಿಂಟ್' ಉಂಟೇ ?

Sunday, January 14, 2007

ಸಂಕ್ರಮಣ

ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಂತೆ
ನನ್ನ ಜೀವನದಲಿ ಬಂದವಳು ನೀನು

ಸುಗ್ಗಿಕಾಲ ರೈತನಿಗೆ ಹುಲುಸು ಬೆಳೆ ತಂದಂತೆ
ನನ್ನ ಬಾಳಿನಲ್ಲಿ ತುಂಬು ಪ್ರೀತಿ ತಂದವಳು ನೀನು

ಕಬ್ಬಿನ ಜಲ್ಲೆಗಳ ಸಿಹಿ ಮರೆಸುವಂತೆ
ನನಗೆ ಜೇನು ಉಣಿಸಿದವಳು ನೀನು

ಮನೆಗಳಲಿ ಎಳ್ಳು-ಬೆಲ್ಲವಾ ಬೀರಿದಂತೆ
ನನ್ನ ಮನದಲಿ ಅಮೃತ ಬೀರಿದವಳು ನೀನು

ಲಲನೆಯರು ಲಂಗ-ದಾವಣಿಯುಟ್ಟು ಸಂಭ್ರಮಿಸುವಂತೆ
ನನ್ನ ಹೃದಯಕೆ ಸಂಭ್ರಮ ಉಡಿಸಿ ನಲಿಸಿದವಳು ನೀನು

ರಂಗುರಂಗಿನ ಗಾಳಿಪಟಗಳು ಆಗಸದಲಿ ಚಿತ್ತಾರ ಮೂಡಿಸುವಂತೆ
ನನ್ನ ಕನಸುಗಳಲಿ ಸುಂದರ ಚಿತ್ತಾರ ಮೂಡಿಸಿದವಳು ನೀನು

ಬಣ್ಣದ ಸಕ್ಕರೆ ಗೊಂಬೆಗಳು ಸವಿಯಂತೆ
ನನ್ನ ಸಕ್ಕರೆ ಗೊಂಬೆಯೇ ಆದವಳು ನೀನು

ಜಗಕೆ
ಮಕರ ಸಂಕ್ರಮಣ
ನಮಗೆ
ಪ್ರೇಮ ಸಂಕ್ರಮಣ

Saturday, January 06, 2007

ನನ್ನಾಕೆ

ನನ್ನಾಕೆ ನಡೆದರೆ
ಮೆಲ್ಲ ಬೀಸುವ ತಂಗಾಳಿ ಸುಳಿದಂತೆ
ನನ್ನಾಕೆ ಬಂದು ನಿಂತರೆ
ಸೊಬಗ ರಾಶಿಯೊಂದು ಮೂರ್ತಿವೆತಂತೆ

ನನ್ನಾಕೆ ನುಡಿದರೆ
ವೀಣೆಯೊಂದು ಉಲಿದಂತೆ
ನನ್ನಾಕೆ ನೋಟ ಬೀರಿದರೆ
ಸಾಲು ದೀಪ ಹೃದಯದಿ ಬೆಳಗಿದಂತೆ

ನನ್ನಾಕೆ ನಕ್ಕರೆ
ದುಂಡು ಮಲ್ಲಿಗೆ ಮಗ್ಗು ಅರಳಿದಂತೆ
ನನ್ನಾಕೆ ನಾಚಿದರೆ
ಸಂಜೆ ಸೂರ್ಯ ಕೆಂಪಾದಂತೆ

ನನ್ನಾಕೆ ಬೇಸರವಾದರೆ
ಆಕಾಶದ ನಕ್ಷತ್ರಗಳ ಬೆಳಕು ಮುಗಿದು ಮಂಕಾದಂತೆ
ನನ್ನಾಕೆ ಒಲಿದರೆ
ನೂರು ಚಂದ್ರರ ಬೆಳದಿಂಗಳ ರಾತ್ರಿಯಂತೆ

ನನ್ನಾಕೆ ಸ್ಪರ್ಶಿಸಿದರೆ
ರೋಮಾಂಚನದಿ ಮನ ಉಯ್ಯಾಲೆಯಂತೆ
ನನ್ನಾಕೆ ಬಾಹು ಬಂಧಿಸಿದರೆ
ಬಿಸಿಲ ಪಯಣಿಗ ಮರದ ತಂಪು ನೆರಳು ಸೇರಿದಂತೆ

ನನ್ನಾಕೆ ನೆನೆದರೆ
ಮುಂಗಾರ ಮಳೆಗೆ ಕಾದು ನಿಂತ ಭುವಿಯಂತೆ
ನನ್ನಾಕೆ ಬಯಸಿದರೆ
ಸಪ್ತಸಾಗರಗದ ಆಲೆಗಳು ಒಮ್ಮೆಗೆ ಉಕ್ಕಿ ಹರಿದಂತೆ

ನನ್ನಾಕೆ..
ನನ್ನ ಮೈ-ಮನಗಳ ಒಡತಿ ಆಕೆ
ನನ್ನಾಕೆ..
ನನ್ನ ಕನಸು-ನನಸುಗಳ ಶಿಲ್ಪಿ ಆಕೆ


*********************************************
ವಿಕ್ರಾಂತ ಕರ್ನಾಟಕದಲ್ಲಿ ಈ ಕವನ ಪ್ರಕಟಮಾಡಿದ್ದಕ್ಕೆ ವಿಕ್ರಾಂತದ ಬಳಗಕ್ಕೆ ವಂದನೆಗಳು
*********************************************

Saturday, December 30, 2006

ಗೋಲ್ಡನ್ ಗೇಟ್

ಆ ಚಳಿಯಲ್ಲಿ ಸುಮ್ಮನೆ ಬೆಚ್ಚಗೆ ಮನೆಯಲ್ಲಿ ಸುಮ್ಮನೆ ಕೂತು ನಮ್ಮವರು ಜೊತೆ ಪೋನ್‍ನಲ್ಲಿ ಮಾತಾಡ್ತ ಇದ್ದಬಿಡಬೇಕು ಅನಿಸ್ತಾ ಇತ್ತು.ಮೊದಲೆಲ್ಲ ಪ್ರವಾಸ ಅಂದರೆ ತುದಿಗಾಲಲ್ಲಿ ನಿಲ್ಲತಾ ಇದ್ದೆ.ಗೊತ್ತಿಲ್ಲ ಈಗ ಎನಾಯಿತು ಅಂತಾ ಬೇರೆ ಯಾವುದರಲ್ಲೂ ಆಸಕ್ತಿನೇ ಇರಲ್ಲ. ಅಂತೂ ಸ್ನೇಹಿತೆರೆಲ್ಲ ಉಗಿದ ಮೇಲೆ ಪ್ರವಾಸಕ್ಕೆ ತಯಾರಿಗಿದ್ದು.

ನನ್ನ ನಳಪಾಕದ ರುಚಿ ನೋಡಿ, ಸುಪ್ರೀತ, ಪ್ರಕಾಶ್,ಹರ್ಷನ ಜೊತೆ ಮನೆಯಿಂದ ಬಿಟ್ಟಾಗ ಅವಾಗಲೇ ಮಧ್ಯರಾತ್ರಿ ಆಗ್ತಾ ಬಂದಿತ್ತು. ಇನ್ನೊಂದು ೬-೭ ಗಂಟೆ ಡ್ರೈವ್ ‍ನಂತರ ಕುಪರ್‍‍ಟಿನೋ ಅನ್ನೋ ಆ ಊರು ಮುಟ್ಟಿದಾಗ ಬೆಳಗಿನ ಜಾವ.ಕುಪರ್‍‍ಟಿನೋದಲ್ಲಿ ಬೆಳಗಿನ ತಿಂಡಿಗೆ ಸ್ನೇಹಿತೆರಾದ ದೀಪ್ತಿ ಮತ್ತು ಪೊನ್ನಮ್ಮ ಮನೆಗೆ ದಾಳಿ ಇಟ್ಟೆವು. ಆಗಲೇ ಡೆನ್‍ವರ್‍ನಿಂದ ಅರ್ಚನಾ ಬಂದು ಅಲ್ಲಿ ನಮ್ಮ ಸ್ವಾಗತ ಕಮೀಟಿಯಲ್ಲಿ ಇದ್ದರು. ತುಪ್ಪದಲ್ಲಿ ಮಾಡಿದ ಶ್ಯಾವಿಗೆಭಾತ್ ತಿಂದ ಮೇಲೆ ದೀಪ್ತಿ ಅಡುಗೆ ಬಗ್ಗೆ ಇದ್ದ ಸಂಶಯ ಸ್ಪಲ್ಪ ಮಾಯವಾಯ್ತು!

ಅಲ್ಲಿಂದ ಸ್ಯಾನ್‍ ಪ್ರಾನ್ಸಿಸ್ಕೋ ಕಡೆ ಹೊರಟೆವು.ಸ್ಯಾನ್‍ ಪ್ರಾನ್ಸಿಸ್ಕೋ ಅಂದಾ ಕೂಡಲೇ ನೆನಪಿಗೆ ಬರೋದು - ಸಿಲಿಕಾನ್ ವ್ಯಾಲಿ ಮತ್ತು ಗೋಲ್ಡನ್ ಗೇಟ್ ಸೇತುವೆ. ನಾವು ದಿನದ ೨೪ ಗಂಟೆನೂ ಮಾಡೋ ಕೆಲಸಕ್ಕೆ ಸಂಬಂಧ ಪಟ್ಟದನ್ನು ರಜದಿನದಲ್ಲೂ ನೋಡುವ ಅಪೇಕ್ಷೆ ಇಲ್ಲದ ಕಾರಣ ಸಿಲಿಕಾನ್ ವ್ಯಾಲಿ ಕಡೆ ಹೋಗಲಿಲ್ಲ ! ವಿಪರೀತ ವಾಹನದಟ್ಟಣೆ ನಡುವೆ ಕೊನೆಗೂ ಸೇತುವೆ ಮುಟ್ಟಿದೆವು.

ಗೋಲ್ಡನ್ ಗೇಟ್ ಸೇತುವೆ..
ಸುಮಾರು ೧.೭ ಮೈಲಿ ಉದ್ದದ ಈ ಸೇತುವೆ ಸ್ಯಾನ್‍ ಪ್ರಾನ್ಸಿಸ್ಕೋ ಕೊಲ್ಲಿಯ ಮೇಲೆ ಕಟ್ಟಲ್ಪಟ್ಟಿದೆ. ೧೯೩೭ರಲ್ಲಿ ಇದನ್ನು ಕಟ್ಟಿದಾಗ ಅದು ಜಗತ್ತಿನಲ್ಲಿ ಅತೀ ಉದ್ದದ ತೂಗು ಸೇತುವೆ ಅನ್ನೋ ಖ್ಯಾತಿಗೆ ಪಾತ್ರವಾಗಿತ್ತು.ಕಟ್ಟಲ್ಲಿಕ್ಕೆ ಸುಮಾರು ೪ ವರ್ಷವಾದವಂತೆ. ಕೆಂಪು-ಮಿಶ್ರಿತ-ಕಿತ್ತಲೆ ಬಣ್ಣದ ಈ ದೈತ ಸೇತುವೆ ಮೇಲೆ ಹಾಗೇ ತಿರುಗಾಡಿದೆವು. ಪೋಟೋ ಸೆಷನ್‍ಗಳಿಗೆ ಹೇಳಿ ಮಾಡಿಸಿದ ಜಾಗ ಇದು.

ಸುಸ್ತಾಗೋವರೆಗೆ ಸೇತುವೆ ಮೇಲೆ ಆಡ್ಡಾಡಿ ನಂತರ ಸೇತುವೆ ವಿಶಿಷ್ಟವಾಗಿ ಕಾಣುವ ಇನ್ನೊಂದು ಜಾಗಕ್ಕೆ ತೆರಳಿದೆವು.ಅಲ್ಲಿಂದ ಈಡೀ ಗೋಲ್ಡನ್ ಗೇಟ್ ತುಂಬಾ ಸುಂದರವಾಗಿ ಕಾಣುತಿತ್ತು. ಬಹುತೇಕ ಪ್ರವಾಸಿಗರು ಈ ತಾಣದಿಂದ ಸೇತುವೆ ನೋಡಬಹುದೆಂದು ತಿಳಿದಿರಲ್ಲ, ನೀವು ಗೋಲ್ಡನ್ ಗೇಟ್ ನೋಡೋಕೆ ಹೋದರೆ ಹತ್ತಿರವೇ ಇರೋ ಈ ಚಿಕ್ಕ ಬೆಟ್ಟ ಹತ್ತೋಕೆ ಮರೀಬೇಡಿ.

೧೯೩೦ರ ಕಾಲದಲ್ಲಿ ಅಮೇರಿಕೆಯಲ್ಲಿ ವಿಪರೀತ ಅರ್ಥಿಕ ದುರ್ಬರತೆ. ಎಲ್ಲಿ ನೋಡಿದರೂ ನಿರುದ್ಯೋಗ-ಹಿಂಸೆಯ ಕಾಲವದು. ಆ ಸಮಯದಲ್ಲಿ ಜೋಸೆಫ್ ಸ್ಟ್ರೌಸ್ ಎಂಬ ಒಬ್ಬ ಇಂಜಿನೀಯರ್ ಗೋಲ್ಡನ್ ಗೇಟ್ ಸೇತುವೆ ಕಟ್ಟುವ ಪ್ರಸ್ತಾಪ ಮಾಡಿದಾಗ , ಅದನ್ನು ಕೇಳಿ ಅವನನ್ನು ಹೀಯಾಳಿಸದವರು ಅದೆಷ್ಟೋ ಜನ, ತಿನ್ನಲ್ಲಿಕ್ಕೆ ಎನೂ ಇಲ್ಲ, ಇನ್ನು ಸೇತುವೆಗೆ ಹಣ ಎಲ್ಲಿಂದ ಬರುತ್ತೆ ಅಂತಾ ಅಂದವರು ಎಷ್ಟೋ ಜನ.ಆದರೆ ಸ್ಟ್ರೌಸ್ ಸರ್ಕಾರಕ್ಕೆ ಸೇತುವೆ ಕಟ್ಟುವದರಿಂದ ಆಗುವ ಉಪಯೋಗಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ. ಸೇತುವೆ ಕಟ್ಟಡದಿಂದ ಬಹು ಉದ್ಯೋಗಗಳ ಸೃಷ್ಟಿಯಾಗುವದರ ಬಗ್ಗೆ, ಸೇತುವೆಯಿಂದ ಉಳಿಯಬಹುದಾದ ಪ್ರಯಾಣದ ಖರ್ಚಿನ ಬಗ್ಗೆ, ಅದು ಉಂಟು ಮಾಡುವ ಮಾರುಕಟ್ಟೆಗಳ ಬಗ್ಗೆ ಹೇಳಿ, ಕೊನೆಗೂ ಸರ್ಕಾರದ ಒಪ್ಪಿಗೆ ಪಡೆದ.ಸೇತುವೆಯ ಕಟ್ಟುವಿಕೆ ಅಷ್ಟು ಸುಲಭವಾಗಿರಲಿಲ್ಲ. ಕಟ್ಟುವಿಕೆಯ ವೇಳೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ತಲೆದೂರಿದವು. ಅನೇಕ ಅವಘಡಗಳು ಘಟಿಸಿದವು.ಇಷ್ಟೆಲ್ಲದರ ನಡುವೆಯೂ ೪ ವರ್ಷದ ನಂತರ ಸೇತುವೆ ಸಿದ್ದವಾಯಿತು.

ಗೋಲ್ಡನ್ ಗೇಟ್ ಸೇತುವೆಗೆ ಸಂಬಂಧ ಪಟ್ಟಂತೆ ಅನೇಕ ವಿಶಿಷ್ಟತೆಗಳಿವೆ.

'ಹಾಫ್ ವೇ ಟು ಹೆಲ್' ಅನ್ನೋದು ೧೯ ಜನರ ಒಂದು ವಿಶಿಷ್ಟ ಗುಂಪು. ಈ ೧೯ ಜನ ಸೇತುವೆ ಕಟ್ಟುವಾಗ ಮೇಲಿಂದ ಬಿದ್ದವರು. ಸೇತುವೆ ಕಟ್ಟುವಾಗ ಉಪಯೋಗಿಸಿದ್ದ ಸೇಫ್ಟಿ ಬಲೆಯಲ್ಲಿ ಬಿದ್ದು ಪ್ರಾಣ ಉಳಿಸಿಕೊಂಡವರು.

ಈಗ ಸೇತುವೆಯ ಉಸ್ತುವರಿಗೆಂದೇ ೧೭ ಜನ ಕಮ್ಮಾರರು ಹಾಗು ೩೮ ಪೇಂಟರ್‌ಗಳು ಇದ್ದಾರಂತೆ. ಅವರು ವರ್ಷವಿಡೀ ಸೇತುವೆಯ ನಟ್-ಬೋಲ್ಟ್-ಬಣ್ಣದ ಕಾಳಜಿ ವಹಿಸುತಾರಂತೆ.

ಹಾಗೇ ಈ ಸೇತುವೆ ಅತ್ಮಹತ್ಯೆ ಮಾಡಿಕೊಳ್ಳೋರ ಫೆವರೆಟ್ ಜಾಗ ಕೂಡ ಹೌದು. ಸೇತುವೆ ಮೇಲಿಂದ ನೆಗೆದು ಪ್ರಾಣ ಬಿಟ್ಟವರೂ ಅದು ಎಷ್ಟು ಸಹಸ್ರನೋ.ಇದು ಎಷ್ಟು ದೊಡ್ಡ ಸಮಸ್ಯೆಯಾಗಿದೆ ಅಂದರೆ, ಸೇತುವೆಯ ಇಕ್ಕೆಲಗಳಲ್ಲೂ ಎತ್ತರದ ಜಾಲರಿ ಕಟ್ಟುವ ವಿಚಾರ ನಡೆದಿದೆಯಂತೆ, ರಾತ್ರಿ ವೇಳೆ ಸೇತುವೆ ಮೇಲೆ ಸಂಚಾರಿಗಳನು ನಿಷೇದಿಸೋದು ಇನ್ನೊಂದು ವಿಚಾರವಂತೆ. ಆದರೆ ಇವೆಲ್ಲಕ್ಕಿಂತ ವಿಶಿಷ್ಟವಾದ ಯೋಚನೆಯೆಂದರೆ 'ಜಂಪ್ ಫಾರ್ ಲೈಫ್'. ಇದರ ಮೂಲ ಉದ್ದೇಶ ಸೇತುವೆಯನ್ನು ಅತ್ಮಹತ್ಯೆ ಮಾಡಿಕೊಳ್ಳೋಕೆ ಸೂಕ್ತತಾಣ ಅನ್ನೋ ಅಕರ್ಷಣೆ ಕಡಿಮೆ ಮಾಡೋದು.ಇದರ ಪ್ರಕಾರ ಸೇತುವೆಯಿಂದ 'ಬಂಜೀ ಜಂಪ್' ಮಾಡೋಕೆ ಅವಕಾಶ ಕೊಟ್ಟು,ಆ ಮೂಲಕ ಸಂಗ್ರಹಿಸುವ ಧನವನ್ನು ಅತ್ಮಹತ್ಯೆ ನಿರೋಧಿ ಕೆಲಸಗಳಿಗೆ ಉಪಯೋಗಿಸುವದು. ಈ ಮೂಲಕ ಅದು ಸೇತುವೆಯ ಬಗೆಗಿನ ಅತ್ಮಹತ್ಯೆ-ಪ್ರಚೋದನಕಾರಿ ಇಮೇಜ್ ಕಡಿಮೆ ಮಾಡುತ್ತಂತೆ.

ಇಷ್ಟೆಲ್ಲಾ ವಿಶಿಷ್ಟವಾದ ಸೇತುವೆಯ ಮೇಲೆ ತಿರುಗಾಡಿ, ಪೋಟೋ ಕ್ಲಿಕ್ಕಿಸಿ ಅಲ್ಲಿಂದ ಮರುಳುವಾಗ ಸಂಜೆಯ ಸಮಯ.ಅಲ್ಲೇ ಹತ್ತಿರದಲ್ಲೇ ೭-೮ ತಿಂಗಳು ಇದ್ದರೂ ಸೇತುವೆ ನೋಡದೇ ಹೆಂಗೆ ಇದ್ದಳು ದೀಪ್ತೀ ಅಂತಾ? ನನ್ನ ಜೊತೆ ಬಂದಿದ್ದ ಹರ್ಷ, ಪ್ರಕಾಶ, ಅರ್ಚನಾ, ಸುಪ್ರೀತ ಸೇತುವೆಯ ಮೇಲಿಂದ ನೆಗೆಯುವ ಯಾವುದೇ ವಿಚಾರ ಮಾಡದೇ ಒಳ್ಳೆ ಹುಡುಗ-ಹುಡುಗಿಯರ ತರ ವಾಪಾಸ್ ಬಂದರು ! ಬಹುಷ ಅದು ಅಂತಾ ಸ್ಥಳ ಅಂತಾ ಅವರಿಗೆ ಗೊತ್ತಿರದೇ ಇದ್ದದು ಒಳ್ಳೇದೇ ಅಯ್ತು !

ಅಲ್ಲಿಂದ ಹೊರಟು ನಾವು ಸ್ಯಾನ್‍ ಪ್ರಾನ್ಸಿಸ್ಕೋದ ಇನ್ನೊಂದು ಅಕರ್ಷಣೆ - 'ಕ್ರೂಕೆಡ್ ಸ್ಟ್ರೀಟ್' ಕಡೆ ಹೊರಟೆವು. ಅಂಕು-ಡೊಂಕಿನ ಬೀದಿ ಅನ್ನೋ ಹೆಸರಿನ ಈ ಸ್ಥಳ ಮುಟ್ಟಲ್ಲಿಕ್ಕೆ ಲಾಂಬಾರ್ಡ್ ಅನ್ನೋ ಸುಮಾರು ೩೦ ಡಿಗ್ರೀ ಇನ್‍ಕ್ಲೀನಿಷನ್‍ನಲ್ಲಿ ಇರೋ ರಸ್ತೆಯಲ್ಲಿ ಸಾಗಿದೆವು. 'ಕ್ರೂಕೆಡ್ ಸ್ಟ್ರೀಟ್' ಸುಮಾರು ಕಾಲು ಮೈಲಿ ಇರುವ ಜಿಗ್-ಜಾಗ್ ರಸ್ತೆ. ಅಲ್ಲಿ ಡ್ರೈವ್ ಮಾಡಿದ ನಂತರ 'ಪಿಯರ್ ೩೯' ಅನ್ನೋ ಜಾಗಕ್ಕೆ ಹೊರಟೆವು.

ಪಿಯರ್ ೩೯ ರ ಇನ್ನೊಂದು ಹೆಸರು 'ಫಿಷರ್‌ಮೆನ್ಸ್ ವಾರ್ಪ್'. ಸಮುದ್ರದ ದಡಕ್ಕೆ ಅಂಟಿಕೊಂಡಿರೋ ಇದರಲ್ಲಿ ಅನೇಕ ಅಂಗಡಿ ಮಳಿಗೆಗಳಿವೆ. ಪ್ರವಾಸಿಗರಿಗೆ ಬೇಕಾಗೋ ಸ್ಯಾನ್‍ ಪ್ರಾನ್ಸಿಸ್ಕೋದ ಸ್ಮರಣ-ಫಲಕಗಳು, ಟೀಶರ್ಟ್, ಚಾಕಲೋಟ್‍ಗಳು, ಅನೇಕ ರೆಸ್ಟೋರೆಂಟ್‍ಗಳು ಇಲ್ಲಿವೆ. ಅಲ್ಲಿ ನನ್ನ ಗೆಳಯರು ಸ್ಪಲ್ಪ ಶ್ಯಾಪಿಂಗ್ ಮಾಡಿ, ನಂತರ ಅಲ್ಲಿ ಅಡ್ಡಾಡಿ ಮರಳಿ ಕುಪರ್‍ಟಿನೋ ಕಡೆ ಹೊರಟಾಗ ರಾತ್ರಿ.

ಕುಪರ್‍ಟಿನೋದಲ್ಲಿ ಎಷ್ಟೊಂದು ಭಾರತೀಯ ಹೋಟೆಲ್‍ಗಳಿವೆ ! ಅದು ಯಾವುದೋ 'ಪ್ಯಾಸೇಜ್ ಟು ಇಂಡಿಯಾ' ಅನ್ನೋ ಹೋಟೆಲ್ ಹೊಕ್ಕು ಅಲ್ಲಿ ನಮ್ಮ ಇನಿಂಗ್ಸ್ ಆರಂಬಿಸಿದೆವು. ತುಂಬಾ ಹಸಿವಾದ್ದರಿಂದ ಬಿರುಸಿನ ಬ್ಯಾಟಿಂಗ್ ನಡೆಯಿತು. ಅಲ್ಲಿಂದ ಹೋಟೆಲ್‍ಗೆ ಮರಳಿದಾಗ ಮಧ್ಯರಾತ್ರಿ.

ಮರುದಿನದ ನಮ್ಮ ಕಾರ್ಯಕ್ರಮ 'ಮಿಸ್ಟಿರೀ ಪಾಯಿಂಟ್'ಗೆ ಭೇಟಿ..

Wednesday, December 20, 2006

ಪ್ರೀತಿಯ ಶರಧಿಯೇ..

ನನ್ನ ಹೃದಯದ ಒಡತಿಯೇ,

ನೀನು ನನಗೆ ಗೊತ್ತಿಲ್ಲದಂಗೆ ಕದ್ದೊಯ್ದ ನನ್ನ ಹೃದಯ ಹೇಗಿದೆ?

ಅದು ಯಾವಾಗ, ಎಲ್ಲಿ, ಹೇಗೆ ಅದನ್ನ ನೀ ದೋಚಿದೆ ಇನ್ನೂ ಗೊತ್ತಾಗಲಿಲ್ಲ. ನಿನ್ನ ಸುಖ ಬಂಧನದಲ್ಲಿ ಅದಕ್ಕೆ ಬಹುಷಃ ನಾನು ಮರೆತುಹೋಗಿದೀನಿ ಅನಿಸುತ್ತೆ.ಪಾಪ, ಅದರ ತಪ್ಪಿಲ್ಲ ಬಿಡು, ನೀನು ಇರೋದೇ ಹಾಗೆ, ಜೊತೆಗಿದ್ದರೆ ಈಡೀ ಜಗತನ್ನೇ ಮರೆಸಿಬಿಡೋ ಹಾಗೇ ಪ್ರೀತಿ ಮಾಡಿಸ್ತಿಯಾ..

ಮೊನ್ನೆ ನಿನ್ನ ನೆನಪು ನನ್ನ ಸಿಕ್ಕಪಟ್ಟೆ ಕಾಡ್ತಿತ್ತು. ಅದು ಯಾವಾಗ ಕಾಡೋದಿಲ್ಲ ಹೇಳು. ಆದರೆ ಅವತ್ತು ಯಾಕೋ ಬಹಳ ಬಹಳ ನೆನಪಾಗ್ತ ಇದ್ದೆ ಹುಡುಗಿ..

ಒಲವಿನ ಪ್ರಿಯಲತೆ
ಅವಳದೇ ಚಿಂತೆ
ಅವಳ ಮಾತೇ ಮಧುರ ಗೀತೆ
ಅವಳೇಯೆನ್ನ ದೇವತೆ

ಇಲ್ಲಿ ನನ್ನ ಮೆಚ್ಚಿನ ಒಂದು ಜಾಗವಿದೆ - ಪಾಲೋಸ್ ವರ್ಡೀಸ್ ಅಂತಾ. ಫೆಸಿಪಿಕ್ ಸಾಗರದ ಪಕ್ಕದಲ್ಲಿದೆ ಹರಡಿದೆ ಈ ಗುಡ್ಡ, ಸಾಗರದ ಪಕ್ಕಕ್ಕೆ ಈ ಗುಡ್ಡದಲ್ಲಿ ಓಡುತ್ತೆ ರಸ್ತೆ. ಪ್ರಶಾಂತ ಮಹಾಸಾಗರದ ಸೊಬಗು ಸವಿಯುತ್ತ ಈ ರಸ್ತೆಯಲ್ಲಿ ಡ್ರೈವ್ ಮಾಡಿಕೊಂಡು ಹೋಗಿ, ಅಲ್ಲಿ ಸಮುದ್ರ ತಟದಲ್ಲಿ ಕೂತು ಸೂರ್ಯಾಸ್ತ ನೋಡಿಬರೋದು ನನ್ನ ಮೆಚ್ಚಿನ ಕೆಲಸ.

ಅವತ್ತು ನಿನ್ನ ನೆನಪನ್ನು ಜೊತೆಗೆ ಕರಕೊಂಡು ಸಾಗರದ ಹತ್ತಿರ ಡ್ರೈವ್‍ಗೆ ಹೋಗಿದ್ದೆ. ಸಂಜೆ ಸಮಯವಾಗ್ತಾ ಇತ್ತು. ಹಕ್ಕಿಗಳೆಲ್ಲಾ ಮನೆ ಕಡೆ ವಾಪಾಸ್ ಹೋಗ್ತಾ ಇದ್ದವು. ಆ ಹಕ್ಕಿಗಳ ಹಾಗೆ ನನಗೂ ರೆಕ್ಕೆ ಇದ್ದರೆ ಎಷ್ಟು ಚೆನ್ನಾ ಅನಿಸ್ತು. ದಿನ ಹಾರಿಕೊಂಡು ಬಂದು ನಿನ್ನ ಬಾಹುಗಳ ಗೂಡು ಸೇರುತಿದ್ದೆ.ದಿನ ನಿನ್ನ ಪ್ರೀತಿಯ ಗುಟುಕು ತಿನ್ತಾ ಇದ್ದೆ...

ಫೆಸಿಪಿಕ್ ಸಾಗರದ ಮೇಲೆ ಒಂದು ಜೋಡಿ ಹಕ್ಕಿ ಎಲ್ಲಾ ಮರೆತು ತಮ್ಮ ಪ್ರಪಂಚದಲ್ಲಿ ತಾವು ಹಾರಿಕೊಂಡು ಆರಾಮಾಗಿ ವಿಹರಿಸುತ್ತಿದ್ದವು.

ಅದು ಯಾಕೋ ಗೊತ್ತಿಲ್ಲ ನನಗೆ ಫೆಸಿಪಿಕ್ ಸಾಗರ ತುಂಬಾ ಶಾಂತ ಅನಿಸುತ್ತೆ.ಅದಕ್ಕೆ ಅದನ್ನ ಪ್ರಶಾಂತ ಮಹಾಸಾಗರ ಅಂತಾ ಕರಿತಾರೋ ಎನೋ. ಅದನ್ನು ನೋಡ್ತಾ ಇದ್ದಂಗೆ ಮತ್ತೆ ನಿನ್ನ ನೆನಪು ಶುರುವಾಯಿತು. ನಿನ್ನ ಪ್ರೀತಿನೂ ಹಂಗೆ ಅಲ್ವಾ...ಏನೂ ಸದ್ದು ಮಾಡದೇ ಇದ್ದರೂ, ಅದರ ಆಳ ಆ ಸಾಗರಕ್ಕಿಂತ ಕಡಿಮೆ ಏನಿಲ್ಲ. ಆ ನಿನ್ನ ಮನಸ್ಸೆಂಬ ಸಾಗರದ ಆಳಕ್ಕೆ ಇಳಿಯುತ್ತಿದ್ದಂತೆ, ಅಲ್ಲಿ ನನಗೋಸ್ಕರ ಇರುವ ಪ್ರೀತಿ ನೋಡಿ ನಾನು ಸೋತು, ಈಜೋದನ್ನು ಬಿಟ್ಟು , ಅಲ್ಲೇ ಮುಳುಗಿ , ನಿನ್ನ ಮನದಲ್ಲಿ ಉಳಿದು ಹೋಗಿದೀನಿ..

ಅವತ್ತು ಸೂರ್ಯಾಸ್ತ ತುಂಬಾ ಸುಂದರ ಅನಿಸ್ತು.ಸೂರ್ಯ ಪೂರ್ತಿ ಸಾಗರದ ಆಳಕ್ಕೆ ಸೇರೋವರೆಗೆ ನೋಡಿ ಅಲ್ಲಿಂದ ಹೊರಟೆ.ಸೂರ್ಯಸ್ತ ನೋಡೋಕೆ ಬಂದಿತ್ತು ಯಾವುದೋ ಒಂದು ಜೋಡಿ. ಸೂರ್ಯಾಸ್ತದ ಆ ಸುಂದರ ಸಂಜೆಯಲ್ಲಿ ಆ ಜೋಡಿ ಇನ್ನೂ ಸುಂದರವಾದ ಕೆಲಸದಲ್ಲಿ ತೊಡಗಿದ್ದರು! ಬಹಳ ಬಹಳ ನಿನ್ನ ಮಿಸ್ ಮಾಡಕೊಂಡೆ ಹುಡುಗಿ..

ಡ್ರೈವ್ ಮಾಡಿಕೊಂಡು ವಾಪಾಸ್ ಬರಬೇಕಾದರೆ, ನಿನ್ನ ಜೊತೆಗಿದ್ದ ಆ ೩ ದಿನ ಇಷ್ಟು ನೆನಪಿಗೆ ಬಂತು ಗೊತ್ತಾ. ನಾವಿಬ್ಬರು ಒಟ್ಟಿಗೆ ಮೊದಲ ಸರ್ತಿ ಪಾನಿಪುರಿ ತಿಂದದ್ದು ನೆನಪಾಯಿತು. ಹಂಗೆ ಆ ತಂಪು ಸಂಜೆಯಲ್ಲಿ ನಿನ್ನ ಜೊತೆ ಕೆಲವೊಮ್ಮೆ ಮಾತಿಲ್ಲದೇ, ಕೆಲವೊಮ್ಮೆ ಮಾತು ಹೊರಡದೇ, ಕೆಲವೊಮ್ಮೆ ಸುಮ್ಮನೆ ನಿನ್ನ ನೋಡಕೊಂಡು , ಕೆಲವೊಮ್ಮೆ ನೀನು ಮಾತಾಡೋದಾ ಕೇಳಿಕೊಂಡಿದ್ದು, ಹಂಗೆ ಆಟೋದಲ್ಲಿ ವಾಪಾಸ್ ಹೋಗುವಾಗ ನಿನ್ನ ಮನ ಎಲ್ಲೋ ಕಳೆದುಹೋಗಿದ್ದು..ಎಲ್ಲಾ ನೆನಪಾಯ್ತು.

ಡ್ರೈವ್ ಮಾಡ್ತಾ ಇದ್ದೋನು ಇಂಡಿಯನ್ ಶ್ಯಾಪ್ ಬರ್ತಾ ಇದ್ದಾಗೆ ನಿಲ್ಲಿಸಿದೆ. ನೀನು ತುಂಬಾ ಇಷ್ಟ ಪಡೋ ಪಾನಿಪುರಿ ನೋಡಿದ್ದೇ ಅಲ್ಲಿ ಹೊಕ್ಕೆ. ಪಾನಿಪುರಿ ತಿನ್ನಬೇಕು ಅನ್ನೋದಿಕ್ಕಿಂತ ನಿನ್ನ ನೆನಪಾಗಿ ಸುಮ್ಮನೇ ಪಾನಿಪುರಿ ತಗೊಂಡೆ.ಪಾನಿಪುರಿ ಮೊದಲು ತಿನ್ನಬೇಕಾದರೆ ಸುಮ್ಮನೆ ಪಾನಿಪುರಿ ಬಿಟ್ಟರೆ ಎನೂ ತಲೆಯಲಿ ಬರ್ತಾ ಇದ್ದಿಲ್ಲ.ಈಗ ಹೆಂಗೆ ಆಗಿದೆಯೆಂದರೆ ಒಂದೊಂದು ಪಾನಿಪುರಿ ತಿನ್ನಬೇಕಾದರೂ ನಿನ್ನ ನೆನಪು ಬಂದು ಬಾಯಿ ತೆರೆಯುತ್ತೆ.

ಅಲ್ಲಿಂದ ಮನೆಗೆ ಬಂದ ಮೇಲೆ ಯಾಕೋ ಗೊತ್ತಿಲ್ಲ, ಎನೂ ಮಾಡೋಕೆ ಮನಸು ಬರ್ತಾ ಇಲ್ಲ. ಸುಮ್ಮನೆ ಹಾಸಿಗೆ ಮೇಲೆ ಬಿದ್ದಿದೀನಿ, ನಿನ್ನ ನೆನಪೆಂಬ ಹೊದ್ದಿಕೆ ಹೊದ್ದುಕೊಂಡು. ಅದು ಯಾವಾಗ ಕನಸಿಗೆ ಜಾರ್ತಿನೋ ಗೊತ್ತಿಲ್ಲ...

ಸರಿ, ಅಲ್ಲೇ ಕನಸಲಿ ಸಿಗ್ತೀನಿ..ಉಳಿದದ್ದು ಅಲ್ಲೇ ಹೇಳ್ತೀನಿ..

ನಿನ್ನ ಪ್ರೀತಿಯಲ್ಲಿ ಕಳೆದುಹೋದ,
ನಿನ್ನವನು

Sunday, December 03, 2006

ನಿರೀಕ್ಷೆ

ನಿನ್ನ ಮೋಹಕ ನಗೆಯಲಿ
ಕಾಣೆಯಾಯಿತು ದಣಿವು
ನಿನ್ನ ಧ್ವನಿಯ ನಾದದಲಿ
ನನ್ನದಲ್ಲವಾಯಿತು ಮನವು

ನಿನ್ನ ನೆನಪುಗಳ ಅಂಗಳದಲ್ಲಿ
ಕಳೆದುಹೋಯಿತು ನನ್ನ ಮನ
ನಿನ್ನ ಪ್ರೀತಿಯ ಸಾಗರದಲ್ಲಿ
ಮುಳುಗಿಹೋಯಿತು ನನ್ನ ಮನ

ಪ್ರತಿ ಕ್ಷಣವೂ ಧ್ಯಾನ ನಿನ್ನದೇ
ಪ್ರತಿ ಬಡಿತದಲ್ಲೂ ಹೆಸರು ನಿನ್ನದೇ
ಪ್ರತಿ ಇರುಳಲ್ಲೂ ಕನಸು ನಿನ್ನದೇ
ಪ್ರತಿ ದಿನವೂ ನನ್ನ ಜೀವ ನಿನ್ನದೇ

ಅನುಭವಿಸುತ್ತಿದ್ದೇನೆ ಒಂದೊಂದು ಕ್ಷಣವು
ಭಾರ ಹೃದಯದಿಂದ ಅಗಲುವಿಕೆಯ ನೋವು
ನನ್ನಿಂದ ಅಷ್ಟು ದೂರ ಇದ್ದರೂ ನೀನು
ಅದು ಹೇಗೆ ಮನವನ್ನು ಕಾಡುತ್ತೀಯಾ ನೀನು?

ಜೀವಿಸುತ್ತಿದೇನೆ ಆ ಕ್ಷಣಕ್ಕಾಗಿ
ಪ್ರೀತಿಯ ಹಕ್ಕಿಗಳೆರಡು ಸ್ವಚ್ಚಂದ ಆಗಸದಲಿ
ಒಟ್ಟಿಗೆ ಹಾರುವ ಆ ಕ್ಷಣಕ್ಕಾಗಿ
ಜೀವಿಸುತ್ತಿದೇನೆ ಆ ದಿನಕ್ಕಾಗಿ
ಕಾದು ಒಣಗಿದ ಭೂಮಿಯನು
ಮೊದಲು ಮಳೆ ಹನಿ ಚುಂಬಿಸುವ ದಿನಕ್ಕಾಗಿ

Monday, November 27, 2006

ನಿನ್ನ ಮುದ್ದು ಕರಡಿಯಿಂದ..

ನನ್ನ ನಲ್ಮೆಯ ಹುಡುಗಿ,

ಏನು ಮಾಡ್ತಾ ಇದೀಯಾ ?

ಬಹುಷಃ ಅಮ್ಮನ ಜೊತೆ ಕೂತು ಮಾತಾಡುತ್ತಿರಬಹುದು.ಇಲ್ಲಾ ಅಂದ್ರೆ ಮನೆಮಂದಿ ಜೊತೆ ಕೂತು ಟಿವಿ ನೋಡ್ತಾ ಇರಬಹುದು.ನನ್ಗೊತ್ತು ಅವರ ಜೊತೆ ಮಾತಾಡುತ್ತಿದ್ದರೂ, ಟಿವಿ ನೋಡುತ್ತಾ ಇದ್ದರೂ ನಾ ನಿನ್ನ ಮನದಲ್ಲಿ ಎಲ್ಲೋ ಇರ್ತೀನಿ.ನಿನ್ನ ಜೊತೆ ಜನ ಇರೋರ್ವಗೆ ನೀನು ಅದು ಹೆಂಗೋ ಸಂಭಾಳಿಸ್ತಿಯಾ ನಿನ್ನ ಕಾಡುವ ಮನವನ್ನ.ಆದರೆ ನೀನು ಏಕಾಂತದಲ್ಲಿದ್ದಾಗ ಏನಾಗುತ್ತೆ? ನಿನ್ನ ಮನದಲ್ಲಿದ್ದ ನಾನು ಹೊರಬರ್ತೀನಾ? ಆಗ ಏನು ಮಾಡ್ತೀಯಾ ನೀನು?

ನನ್ನ ಕತೆ ಕೇಳಬೇಡ್ವೇ.. ಕುಂತ್ರೂ,ನಿಂತ್ರೂ ನಿನ್ನದೆ ಧ್ಯಾನ,ಜೀವಕ್ಕಿಲ್ಲ ಸಮಾಧಾನ..ಎನೋ ನಿನ್ನ ಧ್ವನಿ ಕೇಳಿಕೊಂಡು, ನಿನ್ನ ಪೋಟೋ ನೋಡ್ಕೊಂಡು, ನಾವು ಜೊತೆಗಿದ್ದ ಕ್ಷಣಗಳ ಮೆಲುಕು ಹಾಕ್ತ ದಿನ ತಳ್ತಾ ಇದೀನಿ. ನನ್ನ ಹತ್ತಿರ ಇರೋ ವಿಡಿಯೋದಲ್ಲಿ, ನೀನು ಆ ದೇವಸ್ಥಾನದಲ್ಲಿ ನಗ್ತಾ ಇರೋ ಒಂದು ದೃಶ್ಯ ಇದೆ..ಅದನ್ನ ಇಲ್ಲಿಯವರಿಗೆ ಎಷ್ಟು ಸರ್ತಿ ನೋಡಿದೆನೋ ಗೊತ್ತಿಲ್ಲ.ನಿನ್ನದು ಶುಭ್ರ ಸುಂದರ ನಗು. ಅದನ್ನ ನೋಡ್ತಾ ಇದ್ದಂಗೆ ನಿನ್ನ ನೆನಪು ನನ್ನನ್ನು ಇನ್ನೂ ಬಿಗಿಯಾಗಿ ಆಲಂಗಿಸಿಕೊಂಡುಬಿಡುತ್ತೆ.

ಅಂದಂಗೆ ನಿನ್ನ ರೊಟ್ಟಿ ಕಲಿಕೆ ಎಲ್ಲಿಗೆ ಬಂತು? ಇಷ್ಟು ದಿನ ಅಡುಗೆ ಮನೆಗೆ ಏನೂ ಸಂಬಂಧ ಇಲ್ಲದಂತಿದ್ದವಳು ನೀನು. ಈಗ ನನ್ಗೋಸ್ಕರ ರೊಟ್ಟಿ ಮಾಡೋದಾ ಕಲಿತೀನಿ ಅಂತಾ ಹೊರಟಿದ್ದೀಯಾ ! ಯಾಕೇ ಹೀಗೆ ಅಂತಾ ಕೇಳಿದ್ರೆ, ನನಗೆ ಇಷ್ಟವಾದವರ ಇಷ್ಟ-ಕಷ್ಟ ನನ್ನದು, ಅವರ ಇಷ್ಟ ಪೂರೈಸಲು ಎಷ್ಟು ಕಷ್ಟ ಆದರೂ ಪರವಾಗಿಲ್ಲ ಅಂತೀಯಾ.ನಿನ್ನ ಪ್ರೀತಿಗೆ ನನ್ನ ಬಳಿ ಉತ್ತರವಿಲ್ಲ ಕಣೇ..

ನಮ್ಮ ಮುದ್ದಿನ ಟೆಡ್ಡಿ ಹೇಗಿದೆ. ಅದಕ್ಕಿರುವ ಅದೃಷ್ಟ ನನಗಿಲ್ಲ. ಯಾವಾಗಲೂ ನಿನ್ನ ಜೊತೆನೇ ಇರುತ್ತೆ, ಅದೂ ನಿನ್ನ ರೂಮ್‍ನಲ್ಲಿ. ಇರಲಿ, ಬೇಗ ಆ ಟೆಡ್ಡಿ ಜಾಗಕ್ಕೆ ನಾ ಬರ್ತೀನಿ. ಟೆಡ್ಡಿ ನನ್ನ ತರನೇ ಅಲ್ವಾ..ಎನೂ ತರ್ಲೆ ಮಾಡೋಲ್ಲ..ಅದು ಬೇಕು ಇದು ಬೇಕು ಅಂತಾ ನಿನ್ನ ಪೀಡಿಸಲ್ಲ. ಗೊತ್ತು ,ಇದನ್ನು ಓದ್ತಾ ಇದ್ದಂಗೆ ನೀನು ನಗ್ತೀಯಾ ಅಂತಾ..ಅದರೆ ನಾನು ನಿನ್ನ ಹತ್ತಿರ ಕೇಳೋದಾದರೂ ಏನು.... ನಿನಗೆ ಗೊತ್ತಲ್ವಾ !

ಹಾಂ.. ಇವತ್ತು ಪೋನ್ ಸ್ಯಾಂಪಲ್ ನಂತರ ನಾನು ಪೂರ್ತಿ ಹುಚ್ಚ ಆಗಿಬಿಟ್ಟಿದೀನಿ ಕಣೇ.ತುಂಬಾ ಕಾಡಿಸಬೇಡ್ವೇ..ದಿನಕ್ಕೊಂದು ಡಜನ್ ಸಾಕು..ಜಾಸ್ತಿ ಎನೂ ಕೇಳ್ತಾ ಇಲ್ಲ..ಅಲ್ವಾ.

ಅಂದಾಗೆ ನೆನಪಿದೆಯಾ? ೫ ಡಜನ್ ಪಾರ್ಸಲ್ ಕಳಿಸೋದು ಬಾಕಿ ಇದೆ!

ಐ ಲವ್ ಯು,
ನಿನ್ನ ಮುದ್ದು ಕರಡಿ

Thursday, November 16, 2006

ಕಳಿಂಗ ರಾಜ್ಯದಲ್ಲಿ..

ಕೊಲ್ಕತ್ತಾದ ಹೌರಾ ನಿಲ್ದಾಣದಿಂದ ಹೊರಟ 'ಜನ್ಮ ಶತಾಬ್ದಿ ಎಕ್ಸ್‍ಪ್ರೆಸ್' ಮೆಲ್ಲಗೆ ಸುರಿಯುತಿದ್ದ ಮಳೆಯಲ್ಲಿ ಓಡುತಿತ್ತು. ಮಳೆ ಬೀಳುವಾಗ ಪ್ರಯಾಣ ಮಾಡುವುದರಲ್ಲಿ ಒಂದು ಹಿತ ಅನುಭವವಿರುತ್ತೆ.ಅಕ್ಕ-ಪಕ್ಕ ಹಸಿರಿನಿಂದ ಕಂಗೊಳಿಸುವ ಗದ್ದೆಗಳು,ಆವಾಗ ತಾನೇ ಮಳೆಯಲ್ಲಿ ಸ್ನಾನ ಮಾಡಿ ನಿಂತಂತಿದ್ದ ಗಿಡಮರಗಳು,ಆ ಮಣ್ಣಿನ ವಾಸನೆ..

ಮಳೆ ಹೀಗೆ ಮುಂದುವರಿದರೆ ನಮ್ಮ ಪ್ರವಾಸದ ಕತೆ ಹೇಗೆ ಅನ್ನುವ ಅಲೋಚನೆ ಬಂದು ಹಾಗೆ ಮಾಯವಾಯಿತು.ನಾವು ಹೊರಟಿದ್ದೆವು ಓರಿಸ್ಸಾ ರಾಜ್ಯಕ್ಕೆ..ಪುರಿ, ಕೊನಾರ್ಕ್ ಮತ್ತು ಭುವನೇಶ್ವರ್ ಭೇಟಿಗೆ..

ಕೊಲ್ಕತ್ತಾದಿಂದ ೭ ಗಂಟೆ ಪ್ರಯಾಣದ ನಂತರ ಭುವನೇಶ್ವರ್ ತಲುಪಿದಾಗ, ನಿಲ್ದಾಣದಲ್ಲಿ ನಮ್ಮ ಗೆಳಯ ಶಿಬಾಸಿಸ್ ಮೊಹಂತಿ ಕಾದಿದ್ದ. ಯೋಜನೆಯ ಪ್ರಕಾರ ಭುವನೇಶರದಿಂದ ಕಾರಿನಲ್ಲಿ ಪುರಿಗೆ ಹೊರಟೆವು. ಭುವನೇಶರದಿಂದ ಪುರಿ ಸುಮಾರು ೨ ಗಂಟೆ ಪ್ರಯಾಣ. ಆದರೆ ಆ ರಸ್ತೆ ಇಷ್ಟು ಚೆನ್ನಾಗಿತ್ತು ಅಂದರೆ ಪ್ರಯಾಣ ಮಾಡಿದ್ದೇ ತಿಳಿಯಲಿಲ್ಲ. ತುಂಬಾ ಇಷ್ಟವಾಗಿದ್ದು ರಸ್ತೆ ಎರಡೂ ಬದಿ ಉದ್ದಕ್ಕೂ ಇದ್ದ ಸಾಲು ಮರಗಳು. ಅವನ್ನು ಯಾರು ನೆಟ್ಟಿದ್ದರೋ ಗೊತ್ತಿಲ್ಲ, ಆದರೆ ಮರದ ತಂಪು ಗಾಳಿಯಲ್ಲಿ ಪ್ರಯಾಣ ಬಹು ಸೊಗಸಾಗಿತ್ತು.

ಪುರಿ ಮುಟ್ಟಿದಾಗ ರಾತ್ರಿ ೧೦ ಗಂಟೆ. ಅಲ್ಲೇ ಪುರಿ ಕಡಲ ತೀರದಲ್ಲಿದ್ದ ಹೋಟೆಲ್ ಒಂದರಲ್ಲಿ ಊಟ ಮುಗಿಸಿ, ಹತ್ತಿರದಲ್ಲಿದ ಲಾಡ್ಜ್ ಒಂದರಲ್ಲಿ ಲಗೇಜ್ ಒಗೆದು ಪುರಿ ಬೀಚ್‍ಗೆ ಹೊರಟೆವು. ರಾತ್ರಿಯ ಆ ನೀರವತೆಯಲ್ಲಿ ಸಮುದ್ರ ಇನ್ನೂ ರುದ್ರರಮಣೀಯವಾಗಿ ತೋರುತಿತ್ತು. ಸಮುದ್ರದ ಅಂಚಿನಲ್ಲಿ ಆ ಕತ್ತಲಲ್ಲಿ ನಕ್ಷತ್ರ ನೋಡುತ್ತ ನಡೆದೆ. ಅಲ್ಲೇ ಬೀಚ್‍ನ ಮರಳಲ್ಲಿ ಮಲಗಿದ್ದರು ಎಷ್ಟೊಂದು ಜನ.ಅವರಲ್ಲಿ ಎಷ್ಟು ಜನ ಪ್ರವಾಸಿಗರೋ, ಸೂರು ಇಲ್ಲದ್ದ ಎಷ್ಟೋ ಜನಕ್ಕೆ ಅದು ನಿತ್ಯ ಹಾಸಿಗೆಯೋ ಎನೋ..

ಬೆಳಗೆದ್ದು ಮತ್ತೆ ಸಮುದ್ರದ ದಡಕ್ಕೆ ಹೋದಾಗ, ರಾತ್ರಿ ಇದ್ದ ನೀರವ ಸಮುದ್ರದ ಜಾಗದಲ್ಲಿ ಈಗ ಇತ್ತು ಜನರಿಂದ ಗೀಜುಗೂಡುತಿದ್ದ ಸಮುದ್ರ. ಅಲ್ಲಿ ಸ್ಪಲ್ಪ ಹೊತ್ತು ತಿರುಗಿ ಪುರಿಯ ಸುಪ್ರಸಿದ್ದ ಜಗನಾಥ ದೇವಾಲಯಕ್ಕೆ ಹೊರಟೆವು. ಸುಮಾರು ೧೧ನೇ ಶತಮಾನದಲ್ಲಿ ಕಟ್ಟಿದ ವಿಶಾಲ ದೇವಾಲಯಲ್ಲಿ ಜಗನಾಥ(ಶ್ರೀಕೃಷ್ಣ), ಬಲಭದ್ರ(ಬಲರಾಮ) ಮತ್ತು ಸುಭದ್ರಾ ಆರಾಧಿಸಿಲ್ಪಡುತ್ತಾರೆ. ನವರಾತ್ರಿ ಸಮಯವಾದ್ದರಿಂದ ದೇವಾಲಯದಲ್ಲಿ ಬಹುಸಂಖ್ಯೆಯಲ್ಲಿ ಭಕ್ತಾದಿಗಳು ನೆರೆದಿದ್ದರು.ದೇವಾಲಯದ ಆವರಣದಲ್ಲಿದ್ದ ಇನ್ನೂ ಸುಮಾರು ಹತ್ತು ದೇವಾಲಯಗಳಿಗೆ ಹೊಕ್ಕು , ಮುಖ್ಯ ದೇವಾಲಯದಲ್ಲಿ ಹೊಕ್ಕೆವು. ದರ್ಶನ ಮಾಡಿ ಹೊರಬರುತ್ತಿದ್ದಂತೆ ತಿಳಿಯಿತು, ಅಂದು ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿದೆಯೆಂದು.

೨೫ ರೂಪಾಯಿ ಟಿಕೇಟ್ ಪಡೆದು, ಗರ್ಭಗುಡಿ ಹೊಕ್ಕೆವು.ಸುಭದ್ರೆಯ ಅಕ್ಕಪಕ್ಕ ನಿಂತ ಜಗನಾಥ - ಬಲಭದ್ರರು.ಆದರೆ ಆ ವಿಗ್ರಹಗಳಾವು ಸಂಪೂರ್ಣ ಆಕಾರದಲ್ಲಿ ಇರಲಿಲ್ಲ.ಜಗನಾಥನ ಸುತ್ತ ಕತ್ತಲಲ್ಲಿ ಒಂದು ಪ್ರದಕ್ಷಿಣೆ ಹಾಕಿ ಬರುತ್ತಿದ್ದಂತೆ ಅಲ್ಲಿನ ಅರ್ಚಕರು ದುಡ್ಡು ಕೀಳುವ ಕೆಲಸ ಶುರುಮಾಡಿಕೊಂಡರು. ನನ್ನ ಜೊತೆ ಇದ್ದ ಸ್ನೇಹಿತನಿಗೆ ಯಾವುದೋ ಒಂದು ಮಂತ್ರ ಹೇಳಿಸಿ, ನಂತರ ೫೦೧ ರೂಪಾಯಿ ಕೊಡುವಂತೆ ಒತ್ತಾಯಿಸತೊಡಗಿದರು ! ಅಲ್ಲಿಂದ ತಪ್ಪಿಸಿಕೊಂಡು ಬರುತ್ತಿದ್ದಂತೆ ಇನ್ನೊಬ್ಬ ಅರ್ಚಕ ಆರತಿ ತಟ್ಟೆ ಹಿಡಕೊಂಡು ದಾರಿಗಡ್ಡವಾಗಿ ನಿಂತಿದ್ದರು. ಅರ್ಚಕರ ಈ ಕಾಯಕವೊಂದು ಯಾಕೋ ಅಷ್ಟು ಸರಿ ಅನಿಸಲಿಲ್ಲ.ಜನ ದೇವಾಲಯಕ್ಕೆ ಬರೋದೇ ತಮ್ಮ ಕಷ್ಟ-ಸುಖ ಅರಿಸಿ, ಅಂತ ಜನರ ಹತ್ತಿರ ದುಡ್ಡು ಕೀಳೋದು ಎಷ್ಟು ಸರಿ? ಅವರು ಮನಪೂರ್ತಿ ಕೊಟ್ಟರೆ ಅದು ಒಂದತರ. ಬಹುಷಃ ಆ ಆರ್ಚಕರಿಗೆ ಸಿಗುವ ವರಮಾನ ಕಡಿಮೆ ಇರಬಹುದೇ? ಅದಕ್ಕೆ ಈ ತರ ಜನರಿಂದ ಹಣ ನಿರೀಕ್ಷಿಸುತ್ತಾರ?

ಅಂದಾಗೆ ವಿಗ್ರಹಗಳು ಅಪೂರ್ಣ ಯಾಕೇ ಅಂತಾ ಕೇಳಿದಾಗ, ತಿಳಿದು ಬಂದ ಕತೆಯೇನೆಂದರೆ. ಇಂದ್ರದುಮ್ಯ ಅನ್ನೋ ಕೃಷ್ಣ-ಭಕ್ತ ರಾಜನಿಗೆ ಶ್ರೀಕೃಷ್ಣ ದರ್ಶನವಿತ್ತು, ಸಮುದ್ರದಲ್ಲಿ ಕೊಚ್ಚಿಕೊಂಡು ಬಂದಿರುವ ಮರದ ದಿಣ್ಣೆಯಲ್ಲಿ ತನ್ನ ವಿಗ್ರಹ ಮಾಡಿಸಬೇಕೆಂದು ಆದೇಶಿಸಿದನಂತೆ. ಅದೇ ಸಮಯಕ್ಕೆ ಅಲ್ಲಿಗೆ ಬಂದ ಒಬ್ಬ ವೃದ್ಧ ಬ್ರಾಹ್ಮಣ ತಾನು ಆ ವಿಗ್ರಹ ಕಟೆಯುತ್ತೆನೆಂದು, ಆದರೆ ಅದು ಮುಗಿಯುವವರೆಗೆ ಯಾರು ತನ್ನ ಕೋಣೆಯಲ್ಲಿ ಬರಬಾರದೆಂದು ಹೇಳಿದನಂತೆ.ಬಹುದಿನ ಕೆಲಸದ ನಂತರ ಕೋಣೆಯಿಂದ ಶಬ್ದ ಬರುವುದು ನಿಂತಿತಂತೆ, ಕಾತರದಿಂದ ಕಾದಿದ್ದ ರಾಜ ಮುಗಿದಿರಬೇಕೆಂದು ಕೋಣೆ ಹೊಕ್ಕನಂತೆ, ಆಗ ಅಲ್ಲಿದ್ದ ಬ್ರಾಹ್ಮಣ ಮಾಯವಾದನಂತೆ.ನೋಡಿದರೆ ಅರ್ಧಮುಗಿದ ಪೂರ್ತಿ ಕೈ-ಕಾಲುಗಳು ಇಲ್ಲದ ವಿಗ್ರಹಗಳು. ತನ್ನ ಆತುರದಿಂದ ಆದ ಅವಘಡಕ್ಕೆ ರಾಜ ರೋದಿಸಲು ಅಲ್ಲಿಗೆ ಬಂದ ನಾರದರು, ಶ್ರೀಕೃಷ್ಣನ ಈ ಸ್ವರೂಪವು ಪೂಜೆಗೆ ಅರ್ಹವೆಂದರಂತೆ.ಅಂದಾಗೆ ಆ ಬ್ರಾಹ್ಮಣ ಶಿಲ್ಪಿ ವಿಶ್ವಕರ್ಮನಂತೆ..

ದೇವಾಲಯದಿಂದ ಹೊರಬಂದು ಅಲ್ಲಿನ ವಿಶಾಲ ರಥಬೀದಿಯಲ್ಲಿ ಸಾಗಿದೆವು. ಇಲ್ಲಿನ ಜಗನಾಥ ರಥೋತ್ಸವ ಬಹು ಸುಪ್ರಸಿದ್ಧ. ಈ ಜಗನಾಥ ರಥೋತ್ಸವದಿಂದ ಒಂದು ಹೊಸ ಪದ ಇಂಗ್ಲೀಷ್ ಭಾಷೆಗೆ ಬಂದಿದೆ ಅಂತಾ ಗೊತ್ತಾ! 'Juggernaut' ಅನ್ನೋ ಪದವಿದೆ, ಅದಕ್ಕೆ ಕೊಟ್ಟಿರುವ ಅರ್ಥ- 'ತಡೆಯಲು ಅಸಾಧ್ಯವಾದದ್ದು'.ಇದರ ಮೂಲ ಶೋಧಿಸಿದಾಗ ಆ ಪದ ಬಂದಿರುವುದು 'ಜಗನಾಥ' ಪದದಿಂದ.ಆಗಿದ್ದೇನೆಂದರೆ ಬ್ರಿಟೀಷ್‍ರಿದ್ದ ಕಾಲದಲ್ಲಿ ನಡೆದ ಕೆಲವು ಜಗನಾಥ ರಥೋತ್ಸವಗಳಲ್ಲಿ ಕೆಲವು ಅಪಘಾತಗಳು ನಡೆದವು. ನೂಕುನುಗ್ಗಲಲ್ಲಿ ಕೆಲವು ಭಕ್ತಾದಿಗಳು ರಥದ ಗಾಲಿಗೆ ಸಿಕ್ಕಿ ಸತ್ತರು.ಇದನ್ನು ನೋಡಿದ ಬ್ರಿಟೀಷ್‍ರು 'ಜಗನಾಥ' ಪದವನ್ನು 'ತಡೆಯಲು ಅಸಾಧ್ಯವಾದ','ನುಚ್ಚುನೂರು ಮಾಡುವ ಶಕ್ತಿ' ಅನ್ನೋ ಅರ್ಥಬರುವಂತೆ ಪ್ರಯೋಗಿಸಲು ಆರಂಭಿಸಿದರು.ಅದು ಕ್ರಮೇಣ 'juggernaut' ಆಯಿತು !!

ರಥಬೀದಿಯಲ್ಲಿದ್ದ ಸ್ವಾದಿಷ್ಟ 'ರಾಬ್ಡಿ ಶರಬತ್ತು' ಸೇವಿಸಿ, ನಮ್ಮ ಪ್ರಯಾಣ ಕೊನಾರ್ಕ್‍ಗೆ ಸಾಗಿತು.ರಾಬ್ಡಿ ಶರಬತ್ತಿನ ಬಗ್ಗೆ ಒಂದೆರ್‍ಅಡು ಮಾತು..ಹಾಲಿನ ಕೆನೆಭರಿತ ಕೋವಾದಿಂದ ಮಾಡಿದ ಪಾನೀಯವದು,ಒಂದು ದೊಡ್ಡ ಗ್ಲಾಸ್‍ನಲ್ಲಿ ಕೋವಾಪಾನೀಯ ಸುರಿದು ಅದರ ಮೇಲೆ ಕೋವಾದ ಪುಡೀ ಉದುರಿಸುತ್ತಾರೆ. ಅಮೋಘ ರುಚಿ!

ಪುರಿಯಿಂದ ಕೊನಾರ್ಕ್‍ಗೆ ಸುಮಾರು ಒಂದೊವರೆ ಗಂಟೆ ಪ್ರಯಾಣ. ರಸ್ತೆ ಬಹಳ ಚೆನ್ನಾಗಿತ್ತು, ಆದರೆ ರಸ್ತೆಯಲ್ಲಿ ಕನಿಷ್ಟ ೨-೩ ಕಡೆ ರಸ್ತೆ ಸುಂಕ ಕಟ್ಟಬೇಕಾಯಿತು. ಈ ರೀತಿ ನಿಲ್ಲಿಸಿ ನಿಲ್ಲಿಸಿ ಸುಂಕ ಕೇಳೋದಿಕ್ಕಿಂತ ಒಂದೇ ಕಡೆ ತೆಗೆಳೋಕೇ ಆಗಲ್ವಾ?

ಕೊನಾರ್ಕ್ ಮುಟ್ಟಿದಾಗ ಮಧ್ಯಾಹ್ನದ ಹೊತ್ತು, ಅಲ್ಲಿನ ಸೂರ್ಯ ದೇವಸ್ಥಾನಕ್ಕೆ ೨೫ ರೂಪಾಯಿ ಕೊಟ್ಟು ಪ್ರವೇಶಚೀಟಿ ಪಡೆದು ಹೊಕ್ಕೆವು. ಪ್ರಾಂಗಣ ಪ್ರವೇಶಿಸಿದಾಗ ಅಲ್ಲಿ ಕಂಡದ್ದು ೨ ಸಿಂಹಾಕೃತಿಗಳು.ಅವುಗಳ ಮಧ್ಯೆ ಕಲ್ಲಿನ ಮೆಟ್ಟಿಲುಗಳು. ಅವನ್ನು ಏರಿ ಮೇಲೆ ಬಂದರೆ ಕಂಬಗಳಿಂದ ಸುತ್ತುವರಿದ ನೃತ್ಯಮಂಟಪದಲ್ಲಿ ಬಂದಂತೆ ಅನಿಸ್ತಿತ್ತು. ಅಲ್ಲಿಂದ ಇಳಿದು ಮುಂದುವರಿದರೆ ವಿಶಾಲವಾದ ದೇವಾಲಯ.ಒಂದು ಕಡೆ ಕುಸಿದಿದ್ದರೂ, ಇನ್ನೊಂದೆಡೆ ಕಬ್ಬಿಣ ಕಂಬಿಗಳಿಂದ ನಿಂತಿದ್ದರೂ ತುಂಬಾ ಸುಂದರವಾಗಿ ಕಾಣುತ್ತಿದ್ದ ಸೂರ್ಯ ದೇವಾಲಯ.

ಸೂರ್ಯ ದೇವಾಲಯ ಒಂದು ವಿಶಾಲ ಕಲ್ಲಿನ ರಥದಂತೆ, ಅದರ ಇಕ್ಕೆಡೆಗಳಲ್ಲಿ ೨೪ ಚಕ್ರಗಳು. ಕೊನಾರ್ಕ್ ಅಥವಾ ಸೂರ್ಯ ದೇವಾಲಯ ಅಂದ ಕೂಡಲೇ ಕಣ್ಣಿಗೆ ಬರೋದು ಇದೇ ಚಕ್ರಗಳು. ಕಲ್ಲಿನಲ್ಲಿ ಅಂತಹ ಅದ್ಭುತ ಕೆತ್ತೆನೆ ಸಾಧ್ಯವೇ ಅನ್ನುವ ಸಂಶಯ ಬರುವಂತೆ ಇದ್ದ ಚಕ್ರಗಳು. ಪ್ರತಿ ಚಕ್ರದ ಮೇಲೂ ಸುಂದರ ಕೆತ್ತೆನೆಗಳು. ಅಂದಾಗೆ ಆ ೨೪ ಚಕ್ರಗಳು ದಿನದ ೨೪ ಗಂಟೆಗಳ ಪ್ರತೀಕ. ಚಕ್ರದ ಜೊತೆಗೆ ಮನಸೆಳೆಯುವ ಇನ್ನೊಂದು ಅಂಶ- ದೇವಾಲಯದ ಗೋಡೆಯ ಮೇಲೆ ಇದ್ದ ಸುಂದರ ಮೋಹಕ ಕೆತ್ತೆನೆಗಳು. ಈಡೀ ಕಾಮಸೂತ್ರವನ್ನು ಕಲ್ಲಿನಲ್ಲಿ ಕಟೆದು ನಿಲ್ಲಿಸಿದಂತೆ ಇತ್ತು. ಒಂದು ಪ್ರಶ್ನೆ ಮನದಲ್ಲಿ ಮೂಡಿದ್ದು..ದೇವಾಲಯಗಳಲ್ಲಿ ಕಾಮಸೂತ್ರ ಹೇಗೆ ಬಂತು? ಅಥವಾ ಆಗಿನ ಜನ ಇದ್ದ ಸಮಾಜ ಅಷ್ಟು ಮುಕ್ತವಾಗಿತ್ತೇ? ಅಥವಾ ಜನಕ್ಕೆ ಶಿಕ್ಷಣ ಕೊಡುವ ವಿಧಾನವೇ ಅದು??

ವಿಶಾಲವಾದ ಆ ಸೂರ್ಯ ದೇವಾಲಯ ಬಹಳಷ್ಟು ಕಡೆ ಕುಸಿದು ಬಿದ್ದಿತ್ತು. ಗರ್ಭಗುಡಿ ಯಾವಾಗಲೋ ಬಿದ್ದುಹೋಗಿದೆಯಂತೆ.ಇದ್ದ ಕಟ್ಟಡವನ್ನು ಉಕ್ಕಿನ ಸರಳಿನಿಂದ ನಿಲ್ಲಿಸಿದ್ದರು.

ದೇವಾಲಯವನ್ನು ಸುತ್ತಿದ ನಂತರ ಹತ್ತಿರದಲ್ಲೇ ಇದ್ದ ಪ್ರವಾಸೋದ್ಯಮದ ಹೋಟೆಲ್‍ನಲ್ಲಿ ಊಟ ಮುಗಿಸಿದೆವು. ನಮ್ಮ ಪ್ರವಾಸೋದ್ಯಮದವರಿಗೆ ಯಾವಾಗ ಬುದ್ದಿ ಬರುತ್ತೋ ಆ ಸೂರ್ಯನಿಗೆ ಗೊತ್ತು. ಒಂದು ಊಟ ಹಾಕಲು ಅವರು ಕಾಯಿಸಿದ್ದು ಸುಮಾರು ೩೦ ನಿಮಿಷ. ನಾನು ದೇವಾಲಯದ ಎದುರಿನ ಬೀದಿಯಲ್ಲಿ ಒಂದು ಚಿಕ್ಕ ಕಲ್ಲಿನ ಚಕ್ರ ಖರೀದಿಸಿದೆ. ಕೊನಾರ್ಕ್ ದೇವಾಲಯದ ಚಕ್ರದ ಚಿಕ್ಕ ಮಾದರಿ. ಜೊತೆಗೆ ಇದ್ದ ಶಿಬಾಸಿಸ್ ಓಡಿಯಾ ಆದ್ದರಿಂದ ನಮ್ಮ ಖರೀದಿ ಕಡಿಮೆ ಬೆಲೆಯಲ್ಲಿ ಆಯ್ತು. ಇಲ್ಲ ಅಂದರೆ ೪೦೦ ರೂಪಾಯಿ ಚಕ್ರ ಕೊನೆಗೆ ೧೨೦ ರೂಪಾಯಿ ಹೇಗೆ ಸಿಕ್ತಾ ಇತ್ತು! ಅದರ ನಂತರ ನಮ್ಮ ಸವಾರಿ ಕೊನಾರ್ಕ್‍ನ ಸಮುದ್ರದ ತಡದ ಕಡೆ ಹೊರಟಿತು. ಕೊನಾರ್ಕ್ ತೀರ ಪುರಿಗೆ ಹೋಲಿಸಿದರೆ ಶುಭ್ರವಾಗಿತ್ತು ಮತ್ತು ಕಡಿಮೆ ಜನಸಂದಣಿಯಿಂದ ಕೂಡಿತ್ತು.

ಅಲ್ಲಿಂದ ಹೊರಟ ನಾವು ಭುವನೇಶ್ವರದ ಕಡೆ ಹೊರಟೆವು. ಮತ್ತೆ ಅದೇ ರಸ್ತೆ ಸುಂಕ ತೆತ್ತು, ನಮ್ಮ ಪ್ರಯಾಣ ಸಾಗಿತು. ಭುವನೇಶ್ವರಕ್ಕೆ ಬಲು ಹತ್ತಿರದಲ್ಲಿದೆ ದವಳಗಿರಿ. ಬೌದ್ದ ಸೂಪ್ತ ಅಲ್ಲಿನ ಆಕರ್ಷಣೆ. ಬುದ್ದನ ಸುಂದರ ವಿಗ್ರಹವಿದೆ. ಅದು ಆಶೋಕನ ಕಾಳಿಂಗ ಪ್ರದೇಶವಂತೆ. ಅಲ್ಲಿಂದ ನೋಡಿದರೆ ದಾಗ ಅನ್ನೋ ನದಿ ಕಾಣುತ್ತೆ. ಅದರ ದಡದಲ್ಲಿ ಕಳಿಂಗ ಯುದ್ದ ನಡೆದು, ಅಶೋಕ ಶಸ್ತ್ರತ್ಯಾಗ ಮಾಡಿದ್ದಂತೆ. ದವಳಗಿರಿಯ ನಂತರ ಭುವನೇಶ್ವರಕ್ಕೆ ಮರಳಿ ಅಲ್ಲಿನ ಸುಪ್ರಸಿದ್ದ ಲಿಂಗರಾಜ ದೇವಸ್ಥಾನಕ್ಕೆ ಭೇಟಿ ನೀಡಿದೆವು. ಆ ದೇವಾಲಯದ ಆಲಯದಲ್ಲಿ ಏಷ್ಟೊಂದು ದೇವಾಲಯಗಳಿದ್ದವು. ಇಲ್ಲೂ ಸಹ ಪುರಿಯ ಅರ್ಚಕರಂತೆ ಜನರಿಂದ ಹಣ ಕೀಳುವ ಯತ್ನ ನಡೆಯುತಿತ್ತು.

ಚಂದೋಗ ಅನ್ನೋದು ಓರಿಸ್ಸಾದ ಕಸೂತಿ ಕಲೆ. ಕೈಯಲ್ಲಿ ಹೆಣೆದ ಸುಂದರವಾದ ಆಕಾಶಬುಟ್ಟಿಯೊಂದನ್ನು ಅಂತಹ ಕರಕುಶಲ ಅಂಗಡಿಯಲಿ ಕೊಂಡೆ.ಮುಂದೆ ಹೋಗಿದ್ದು ನಾವು ಕಂದಗಿರಿ ಅನ್ನೋ ಗುಡ್ಡಕ್ಕೆ. ಅಲ್ಲಿಂದ ಇಡೀ ಭುವನೇಶ್ವರದ ವಿಹಂಗಮ ನೋಟ. ಸಂಜೆಯ ಆ ಇಳಿಹೊತ್ತಿನಲ್ಲಿ ಅಲ್ಲಿ ಕೂತು ಹರಟಿ, ಶಿಬಾಸಿಸ್‍ನ ಮನೆ ತಲುಪಿದಾಗ ರಾತ್ರಿ ಹೊತ್ತು. ಅವನ ಮನೆಯಲ್ಲಿ ಊಟ ಮಾಡಿ, ಪುರಿ ಎಕ್ಸ್‍ಪ್ರೆಸ್ ಏರಿದೆವು.

ಜಗನಾಥ, ರಾಬ್ಡಿ ಶರಬತ್ತು, ಕಲ್ಲಿನ ಚಕ್ರ, ಆ ಮೋಹಕ ಕೆತ್ತೆನೆಗಳು, ಬುದ್ದ...ಹೀಗೆ ಒಂದಾರೊಂದರಂತೆ ದೃಶ್ಯಗಳು ಕಣ್ಮುಂದೆ ಬಂದು ಹೋದವು..ಅದು ಗೊತ್ತಿಲ್ಲ ಯಾವಾಗ ನಿದ್ರಾದೇವಿ ಕರೆದೊಯ್ಯೊದೊಳೋ..

ಹೌರಾ ನಿಲ್ದಾಣ ತಲುಪಿ ಎಚ್ಚರವಾಗಿ,ಹೊರಬರುತ್ತಿದಂತೆ ಆ ಗಿಜಿಗಿಜಿ ರಸ್ತೆಗಳು, ಅದೇ ಹಳದಿ ಟ್ಯಾಕ್ಸಿಗಳು, 'ಕೀ ಕಾಬೋರ್ ದಾದಾ' ಅನ್ನಕೊಂಡು ಓಡಾಡುವ ಬೆಂಗಾಲಿ ಬಾಬುಗಳು...ಅಲ್ಲೇ ಎದುರಿಗೆ ಇತ್ತು ಆ ಮುಂಜಾವಿನಲ್ಲಿ , ವಿಶಾಲವಾಗಿ ಹರಡಿಕೊಂಡು ಮಲಗಿದಂತೆ ಇದ್ದ ಹೌರಾ ಸೇತುವೆ...

Saturday, November 04, 2006

ಸವಿಹೃದಯಕ್ಕೊಂದು ಓಲೆ..

ಪ್ರೀತಿಯ ಹೃದಯವೇ,

ದೂರವಾಣಿಯಲ್ಲಿ ನಿಮ್ಮ ಧ್ವನಿ ಕೇಳಿದಾಗಲೆಲ್ಲಾ ನನ್ನ ಮನಕ್ಕೆ ಎನೋ ಒಂದು ಸಮಾಧಾನ..

ನಾನು ಈಡೀ ದಿನ ಬದುಕೋದೇ ನಿಮ್ಮೊಡೆನೆ ಮಾತಾಡುವ ಆ ನಿಮಿಷಗಳಿಗೆ ಅನಿಸುತ್ತೆ.ಕರೆ ಮಾಡಿದಾಗ ಅಲ್ಲಿ ರಿಂಗ್ ಆಗ್ತಾ ಇದ್ದರು ಕರೆ ಎತ್ತಲಿಲ್ಲ ಅಂದಾಗ ಆಗುವ ಮನಸಿನ ತಳಮಳ ನಿಮಗೆ ಗೊತ್ತಾ?ನಿಮ್ಮ ಧ್ವನಿ ಕಿವಿಗೆ ಹರಿದು ಅಲ್ಲಿಂದ ನನ್ನ ಮನಕ್ಕೆ ಮುಟ್ಟಿದಾಗಲೇ ಅದೆಲ್ಲಾ ತಳಮಳಕ್ಕೆ ಒಂದು ಅಲ್ಪವಿರಾಮ..

ಮಾತಿನ ನಡುವೆ ಅರಳುವ ನಿಮ್ಮ ನಗೆ ಎಂಬ ಮಲ್ಲಿಗೆಯನ್ನು ಹಾಗೇ ಹೆಕ್ಕಿ ತೆಗೆದು ಜೋಪಾನವಾಗಿಡುತ್ತೇನೆ.ಆ ನಗೆ ಮಲ್ಲಿಗೆಯ, ಮುದ್ದು ಹುಡುಗಿಯ ನೆನಪೇ 'ನಾಳೆ' ಎನ್ನುವ ನದಿ ದಾಟಲು ದೋಣಿ..

ಇವತ್ತು ಎನಾಯಿತು ಗೊತ್ತಾ..೨ ತಿಂಗಳ ನಂತರ ನನ್ನ ಕಾರ್ ಹೊರತೆಗೆದಿದ್ದೆ. ಅದರೆ ಮೇಲೆ ಒಂದು ರಾಶಿ ದೂಳು. ಪರೀಕ್ಷೆಗಿಂತ ಮುಂಚೆ ತೆಗೆದು ನೋಡಿರದ ಪುಸ್ತಕಗಳ ಮೇಲೆ ಇರುತ್ತಲ್ವಾ ಅಷ್ಟು ದೂಳು! ಕಾರ್ ಒಂದು ಹಂತಕ್ಕೆ ಶುಭ್ರಗೊಳಿಸಿ, ಕಾರಿನಲ್ಲಿ ಕೂತರೆ, ನನ್ನ ಪಕ್ಕದ ಸೀಟು ನನಗೆ ಒಂದು ಸ್ಮೈಲ್ ಕೊಡಬೇಕಾ ! "ಯಾಕೇ ತುಂಬಾ ಖುಷಿಯಾಗಿದ್ದಿಯಾ" ಅಂತಾ ಕೇಳಿದರೆ ಎನಂತೂ ಗೊತ್ತಾ ಆ ಸೀಟ್?? "ಎನೋ ವಿಷಯ ಕೇಳಿದೆ..ನಮ್ಮ ಕಾರ್‍ನಲ್ಲಿ ನನ್ನ ಸೀಟ್‍ನಲ್ಲಿ ಬೇಗನೇ ನಿಮ್ಮವರು ಬರ್ತಾ ಇದ್ದಾರಂತೆ..ಹೌದಾ?". ಆ ತರಲೆ ಸೀಟ್‍ಗೆ ಒಂದು ಮುದ್ದು ಗುದ್ದು ಕೊಟ್ಟು ನಕ್ಕೆ ನಾನು..

ಅಫೀಸ್‍ನಲ್ಲಿದ್ದಾಗ ಅದು ಯಾವ ಯಾವ ಕ್ಷಣದಲ್ಲಿ ಕಣ್ಣ್ ಮುಂದೆ ಬಂದು ನಿಂತುಬಿಡ್ತೀಯಾ ನೀನು ! ಹೊತ್ತು ಗೊತ್ತು ಒಂದು ಇಲ್ಲಾ ! ಇವತ್ತು ಅದೇವಾದೋ ಮೀಟಿಂಗ್ ಮಧ್ಯೆದಲ್ಲಿ ತಮ್ಮ ಪ್ರವೇಶ ಆಗಬೇಕಾ..ಯಾವುದೋ ನೆನಪು..ಮುಖದಲ್ಲಿ ಮಿಂಚಿ ಮಾಯವಾದ ಒಂದು ಮಂದಹಾಸ.ಪಾಪ, ಅಲ್ಲಿ ಮೀಟಿಂಗ್‍ನಲ್ಲಿದವರಿಗೆ ನಾನು ಯಾಕೇ ಸುಮ್ಮ ಸುಮ್ಮ್ನೆ ನಗ್ತಾ ಇದ್ದೀನಿ ಅಂತಾ ತಲೆಬುಡ ಅರ್ಥ ಆಗಿಲಿಲ್ಲ !ಇನ್ನೂ ಅಫೀಸ್‍ನಲ್ಲಿ ನನ್ನ ಗೆಳಯರದು ಮುಗಿಯದ ಪ್ರಶ್ನೆಗಳು..ಅವರಿಗೆ ನಿನ್ನ ಬಗ್ಗೆ ಹೇಳ್ತಾ ಹೇಳ್ತಾ ಮತ್ತೆ ಕಳೆದುಹೋಗಿಬಿಡ್ತೀನಿ..

ಇನ್ನು ಮನೆಗೆ ಬಂದರೆ ಅಲ್ಲಿ ನಿಮ್ಮ ನೆನಪು ಫುಲ್‍ಟೈಮ್ ಹಾಜರ್. ಲ್ಯಾಪ್‍ಟಾಪ್ ಹೊರ ತೆಗೆದರೆ ಸಾಕು..ಕೈಗಳು ಅಲ್ಲಿಂದ ನಿನ್ನ ಪೋಟೋ ಅಲ್ಬಮ್ ತೆಕೊಂಡು ಕೂತು ಬಿಡುತ್ತೆ. ಬೆರಳು ನಿಮಗೆ ತುಂಬಾ ಇಷ್ಟವಾದ 'ಝರಾ ಝರಾ ಬೇಹಕ್ತಾ ಹೈ' ಹಾಡು ಹಾಕಿಬಿಡುತ್ತೆ. ಅಮೇಲೆ ನಾನು ಸಂಪೂರ್ಣನಾಗಿ ನಿಮ್ಮ ನೆನಪಿನಾಂಗಳದಲ್ಲಿ ಕಾಣೆಯಾಗಿಬಿಡುತ್ತೇನೆ.

ಒಂದೊಂದು ಸಲ ಅನಿಸುತ್ತೆ, ನನ್ನ-ನಿಮ್ಮ ನಡುವೆ ಈ ವೀಸಾ-ಪಾಸ್‍ಪೋರ್ಟ್ ಅನ್ನುವ ಬೇಲಿ ಏಕೇ ಅಂತಾ? ಎನ್ಮಾಡೋದು ಹೇಳಿ..ಲೋಕಾರೂಡಿ ತಪ್ಪಿಸಿಕ್ಕೋ ಆಗೊಲ್ಲ. ಆದರೆ ಪ್ರೀತಿ ಎಂಬ ವೀಸಾ ಸಿಕ್ಕ ಮೇಲೆ ಬೇರೆ ಎಲ್ಲಾ ವೀಸಾ ಸಿಗೋದು ಅಂತಾ ಕಷ್ಟ ಅಗೋಲ್ಲಾ ಅನಿಸುತ್ತೆ..ಅಲ್ವಾ?

ನಾಳೆ ಮತ್ತೆ ಸಿಗ್ತೀನಿ..

ಸವಿಗನಸುಗಳು,
ಪ್ರೀತಿಯೊಂದಿಗೆ,
ನಿಮ್ಮವನು

Tuesday, October 31, 2006

ಸಿಟಿ ಆಫ್ ಜಾಯ್ !

ತುಂಬಿದ ಅಣೆಕಟ್ಟಿನ ಬಾಗಿಲುಗಳನ್ನು ತೆರೆದಂತೆ ಇತ್ತು...

ನನ್ನ ಮೇಲೆ ಮಮತೆ,ಪ್ರೀತಿ,ಅಕ್ಕರೆಯ ಸುರಿಮಳೆ ಅಗ್ತಾ ಇತ್ತು. ಒಂದು ವರ್ಷದ ನಂತರ ನನ್ನನ್ನು ನೋಡ್ತಾ ಇದ್ದ ಅಪ್ಪ-ಅಮ್ಮನ ಕಣ್ಣುಗಳು ತೇವವಾಗಿದ್ದವು.ಮನೆಗೆ ಬಂದು ಅಮ್ಮನ ಕೈ ಊಟ ಮಾಡ್ತಾ ಇದ್ದರೆ ಸ್ವರ್ಗ.ನಂತರ ಮನೆಮಂದಿಯ ಜೊತೆ ಅಮೇರಿಕಾದ ಕತೆಗಳನ್ನು ಬಿಚ್ಚಿಕೊಂಡು ಕೂತು ಹರಟೆ. ಅಮ್ಮ ನನ್ನ ಕೈಯಲ್ಲಿ ಕಾಗದದ ತುಂಡೊಂದನ್ನು ಇಟ್ಟರು.ನೋಡಿದರೆ ಅದರಲ್ಲಿ ಅಮ್ಮ ನನ್ನ ಬಗ್ಗೆ ಬರೆದ ಒಂದು ಕವನ!! ಅಪ್ಪ-ಅಮ್ಮನಿಗೆ ತಂದ ಉಡುಗೊರೆಗಳನ್ನು ಅವರಿಗೆ ನೀಡಿ,ಅವರು ಪಟ್ಟ ಸಂತೋಷ ನೋಡಿ ಮನಸಿಗೆ ಖುಷಿ.

ನಂತರ ಮಿತ್ರರಿಗೆ ಪೋನಾಯಿಸಿ ನನ್ನ ಭಾರತಾಗಮನದ ಸುದ್ದಿ ನೀಡಿದ್ದಾಯಿತು.ಇಲ್ಲಿನ ಒಬ್ಬ ಮಿತ್ರರಿಗೂ ನಾನು ಬರುವುದು ಗೊತ್ತಿರಲಿಲ್ಲವಾದರಿಂದ ಅವರಿಗೆಲ್ಲ ಅದೊಂದು ಅಚ್ಚರಿಯ ಸುದ್ದಿ.ಅಲ್ಲಿಂದ ತಂದ ಚಾಕೆಲೋಟ್‍ಗಳನ್ನು ಬಂಧು-ಮಿತ್ರರಿಗೆ ಕೊಟ್ಟದಾಯಿತು. ಕೆಲವು ಮಿತ್ರರನ್ನು-ಬಂಧುಗಳ ಜೊತೆ ಬೇಟಿ-ಮಾತು-ಹರಟೆ.ಭೇಟಿ ಮಾಡಲಾಗದವರೊಂದಿಗೆ ಪೋನು.

ಕಳೆದ ಒಂದು ವರ್ಷದಲ್ಲಿ ನನಗೆ ಬ್ಲಾಗ್‍ಗಳ ಮೂಲಕ,ಒರ್ಕೊಟ್ ಮೂಲಕ ಸಿಕ್ಕವರು ಅನೇಕ ಮಿತ್ರರು. ಅಂತಹ ಹಲವು ಮಿತ್ರರನ್ನು ಮಾತಾಡಿಸಿದೆ..ತವಿಶ್ರೀ, ಮಹಾಂತೇಶ್,ಜಯಂತ್.ಅವರೆಲ್ಲರನ್ನು ಮೊದಲ ಸಲ ಮಾತಾಡಿಸುತ್ತಿದ್ದೆ.

ಅದರ ಮಧ್ಯೆ ವೀಸಾ ನವೀಕರಣಕ್ಕೆ ಚಿನೈ ಭೇಟಿ ಕೊಟ್ಟಿದು ಆಯಿತು. ಚಿನೈನಲ್ಲಿ ಒರ್ಕೊಟ್ ಗೆಳತಿ ಕರುಣಾ ಭೇಟಿ ಮಾಡುವ ಅಂದುಕೊಂಡೆ.ಒಂದು ಸಣ್ಣ ಸಮಸ್ಯೆಯಂದರೆ ಕರುಣಾಳನ್ನಾಗಲಿ,ಕರುಣಾಳ ಪೋಟೋವನ್ನಾಗಲಿ ಇಲ್ಲಿಯವರಿಗೆ ನೋಡಿರಲಿಲ್ಲ. ಅದರೆ ನನ್ನನ್ನು ನೋಡಿದ ತಕ್ಷಣ 'ಶಿವ್!' ಅನ್ನೋ ಉದ್ಗಾರ ಕೇಳಿದಾಗ ಅಲ್ಲಿ ನಿಂತಿದ್ದಳು ಕರುಣಾ.ಒರ್ಕೊಟ್‍ನಲ್ಲಿ ಪೋಟೋ ಹಾಕಿರೊದರಿಂದ ಒಂದೊಂದು ಸಲ ಅಗೋ ಪ್ರಯೋಜನ ಇದು! ಸರಿಯಾದ ಬಸ್ ಹತ್ತಿದ ಮೇಲೂ ಬಸ್ಸಿನಲ್ಲಿದವರಿಗೆ 'ಎಲ್ಲಿಗೆ ಹೋಗುತ್ತೆ ಬಸ್' ಅಂತಾ ಕೇಳಿದಂತೆ 'ನೀವು ಕರುಣಾ??' ಅಂತಾ ಕೇಳಿ ಕನ್‍ಫರ್ಮ್ ಮಾಡಿಕೊಂಡೆ ! ಅಸತ್ಯಿಗಳ ದೂರವಾಣಿ ಸಂಖ್ಯೆ ಇರಲಿಲ್ಲವಲ್ಲ..ಇಲ್ಲವಾದರೆ ಬೊಗಳೆ ಪಂಡಿತರನ್ನು ಸಾಕ್ಷತ್ ದರ್ಶನ ಮಾಡಬಹುದಿತ್ತು.

ಎರಡು ವಾರ ಮನೆ-ಮಂದಿಯ ಜೊತೆ, ಗೆಳಯರೊಂದಿಗೆ, ತಿರುಗಾಟದಲ್ಲಿ ಹೇಗೆ ಹೋದವೋ ತಿಳಿಯಲಿಲ್ಲ. ಮತ್ತೊಂದು ಹೊಸ ಊರು ಕೈ ಬೀಸಿ ಕರೆಯುತಿತ್ತು.

ಕೊಲ್ಕತ್ತಾ...

ಅಲ್ಲಿನ ನೇತಾಜಿ ವಿಮಾನ ನಿಲ್ದಾಣದಲ್ಲಿದಿಂದ ಟ್ಯಾಕ್ಸಿಯಲ್ಲಿ ಕಂಪನಿ ಗೆಸ್ಟ್‍ಹೌಸ್‍ ಕಡೆ ಹೊರಟಾಗ ದಾರಿಯುದ್ದಕ್ಕೂ ಕಂಡವು ಆ ಸೈಕಲ್ ರಿಕ್ಷಾಗಳು.ಆ ರಿಕ್ಷಾಗಳನ್ನು ನೋಡುತ್ತಿದ್ದಂತೆ ನೆನಪಾದದ್ದು 'ಸಿಟಿ ಆಫ್ ಜಾಯ್' ಅನ್ನೋ ಆ ಪುಸ್ತಕ. ಕಲ್ಕತ್ತಾದ ಬಗ್ಗೆ, ಕಲ್ಕತ್ತಾದ ರಿಕ್ಷಾ ಎಳೆಯುವರ ಬಗ್ಗೆ ಅಷ್ಟೊಂದು ಮನ ಮುಟ್ಟುವಂತೆ ಬರೆದ ಪುಸ್ತಕ ಬಹುಷಃ ಇನ್ನೊಂದು ಇರಲಿಕ್ಕಿಲ್ಲ.

ಕಲ್ಕತ್ತಾ ಅಂದ ಕೂಡಲೆ ನನಗೆ ಯಾವಾಗಲೂ ನೆನಪಿಗೆ ಬರ್ತಾ ಇದದ್ದು ಈ 'ಸಿಟಿ ಆಫ್ ಜಾಯ್' ಅನ್ನೊ ಪುಸ್ತಕ, ರಸಗುಲ್ಲಾ,ಅಲ್ಲಿ ೨-೩ ದಶಕಗಳಿಂದ ಒಂದೂ ಬ್ರೇಕ್ ಇಲ್ಲದೆ ಆಳ್ತಾ ಇರೋ ಕಮ್ಯುನಿಷ್ಟರು.

ಅಲ್ಲಿ ದಿನ ಕಳೆದಂತೆ ಅನಿಸತೊಡಗಿದ್ದು ಕಲ್ಕತ್ತಾ ತಾನು 'ಐಟಿ' ಉದ್ಯಮದಲ್ಲಿ ಹಿಂದೆ ಬಿದ್ದಿಲ್ಲ ಅಂತಾ ಮನದಟ್ಟು ಮಾಡಲು ಪ್ರಯತ್ನಿಸುತ್ತಿದೆ.ಅಲ್ಲಿನ ಸಾಲ್ಟ್‍ಲೇಕ್ ಅನ್ನೋ ಎರಿಯಾದಲ್ಲಿ ನೀವು ಹೋದರೆ ಗೊತ್ತಾಗುತ್ತೆ..ಎಲ್ಲ 'ಐಟಿ' ಕಂಪನಿಗಳನ್ನು ಕರೆ ತರೋದರಲ್ಲಿ ಯಶಸ್ವಿಯಾಗಿದ್ದಾರೆ.ಕಮುನಿಷ್ಟರು ಮತ್ತು ಬಂಡವಾಳಶಾಹಿ ಕಂಪನಿಗಳು ??!!!

ಐಟಿ,ಸೈಕಲ್ ರಿಕ್ಷಾ,ಕಮುನಿಷ್ಟರು..ಇವೆಲ್ಲದರ ನಡುವೆ ಕಲ್ಕತ್ತಾದ ಅತ್ಯಂತ ಪ್ರಶಾಂತ ಸ್ಥಳಗಳ ಬಗ್ಗೆ ಹೇಳಲೇ ಇಲ್ಲ...ಕಾಳೀಘಟ್ ಮತ್ತು ದಕ್ಷಿಣೇಶ್ವರ.

ಕಾಳಿಘಟ್‍ಗೆ ಹೋದಾಗ ಸಂಜೆಯಾಗಿತ್ತು.ಮೊದಲು ಅಲ್ಲಿ ರಾಮಕೃಷ್ಣ ಪರಮಹಂಸರು ವಾಸವಾಗಿದ್ದ ಆಲಯಕ್ಕೆ ಭೇಟಿ ಕೊಟ್ಟೆವು.ಆ ಚಿಕ್ಕ ಕೋಣೆಯಲ್ಲಿ ಕೂತು ಬಹಳ ಜನ ಕೂತು ಧ್ಯಾನ ಮಾಡುತ್ತಿದ್ದರು.ಅಲ್ಲಿ ಕೂತು ಪರಮಹಂಸರಿಗೆ ವಂದಿಸಿ ಪಕ್ಕದಲ್ಲಿರುವ ಕಾಳೀ ಮಂದಿರಕ್ಕೆ ತೆರಳಿದೆವು.ಪರಮಹಂಸರು ಇದೇ ದೇವಾಲಯದಲ್ಲಿ ಕಾಳೀ ದೇವಿಯ ಸಾಕ್ಷಾತ್ಕಾರ ಮಾಡಿಕೊಂಡಿದ್ದರಂತೆ.ಅಂದು ನವರಾತ್ರಿಯ ಮೊದಲ ದಿನವೂ ಆದ್ದರಿಂದ ದೇವಾಲಯದಲ್ಲಿ ತುಂಬಾ ಜನ.ಕಾಳೀ ದರ್ಶನ ಪಡೆದು ಹೊರಬಂದರೆ, ದೇವಾಲಯದ ಮುಂದಿರುವ ಪ್ರಾಂಗಣದಲ್ಲಿ ನಡೆಯುತ್ತಿತ್ತು ಭಜನೆ.ಕಾಳೀ ದೇವಾಲಯದ ಪಕ್ಕದಲ್ಲಿ ಇರುವ ದ್ವದಶ ಜೋರ್ತ್ಯಿಲಿಂಗಗಳನ್ನು ದರ್ಶಿಸಿ ಪಕ್ಕದಲ್ಲೆ ಹರಿಯುತ್ತಿದ್ದ ಗಂಗಾ ನದಿಯನ್ನು ಸ್ಪರ್ಶಿಸಿದೆವು. ಅಂದಾಗೆ ಕಲ್ಕತ್ತಾ ಅನ್ನೋ ಹೆಸರು ಈ 'ಕಾಳೀಘಟ್' ಎಂಬ ಹೆಸರಿನಿಂದ ಬಂದಿದೆಯಂತೆ.

ಅಲ್ಲಿಂದ ಹೊರಟು ದಕ್ಷಿಣೇಶ್ವರಕ್ಕೆ ಹೊರಟೆವು.ಬೇಲೂರು ಅನ್ನೋ ಈ ಸ್ಥಳದಲ್ಲಿ ರಾಮಕೃಷ್ಣ ಆಶ್ರಮ ಶುರುವಾಯಿತು. ಅಲ್ಲಿದೆ ಅತ್ಯಂತ ಸುಂದರವಾದ ಒಂದು ಪ್ರಾರ್ಥನಾ ಮಂದಿರ.ಅಷ್ಟು ಪ್ರಶಾಂತವಾದ ಆಲಯದಲ್ಲಿ ಕೂತು ಸುಶ್ರ್ಯಾವ ಹಿನ್ನಲೆ ಸಂಗೀತದೊಂದಿಗೆ ಭಜನೆಯಲ್ಲಿ ಪಾಲ್ಗೊಳೊಂಡ ಮೇಲೆ ಮನ ಶಾಂತವಾಗದಿದ್ದರೆ ಕೇಳಿ.ಅಲ್ಲಿನ ಪರಮಹಂಸರ ವಿಗ್ರಹವನ್ನು ಸ್ವಯಂ ವಿವೇಕಾನಂದರೇ ಪರಿಕಲ್ಪಿಸಿದರಂತೆ.

ದೇವಾಲಯ-ಆಶ್ರಮ ದರ್ಶನದ ನಂತರ ಸ್ಪಲ್ಪ 'ಮೆಟೀರಿಯಲಿಸ್ಟಿಕ್' ವಸ್ತುಗಳನ್ನು ನೋಡಲು-ಸವಿಯಲು 'ಸಿಟಿ ಸೆಂಟರ್' ಅಂತಹ ಶಾಪಿಂಗ್ ಮಳಿಗೆಗೆ ಹೊಕ್ಕು ಸ್ಪಲ್ಪ ಹೊತ್ತು ತಿರುಗಾಡಬಹುದು.ಇಲ್ಲದಿದ್ದರೆ ಪಾರ್ಕ್ ಸ್ಟ್ರೀಟ್‍ನ ತಳಕು-ಬೆಳಕಿನ ರಸ್ತೆಯಲ್ಲಿ,ಅಲ್ಲಿನ ಅರೆಗತ್ತಲೆಯ ಪಬ್ಬ್‍ಗಳಲ್ಲಿ ಕಳೆಯಬಹುದು.

ಕಲ್ಕತ್ತಾದ ಇನ್ನೊಂದು ಪ್ರೇಕ್ಷಣೀಯ ಸ್ಥಳ..ವಿಕ್ಟೋರಿಯಾ ಮೆಮೋರಿಯಲ್..ಬ್ರಿಟಿಷ್ ರಾಣಿ ವಿಕ್ಟೋರಿಯಾಳ ಕಾಲದಲ್ಲಿ ಕಟ್ಟಿದ ಭವ್ಯ ಕಟ್ಟಡ. ಅದರ ಸುತ್ತ ಇರುವ ಉದ್ಯಾನ ಪ್ರೇಮಿಗಳಿಗೆ ಬಲು ಪ್ರಿಯ.ಅಂತ ಜನನಿಬಿಡ ಸ್ಠಳದಲ್ಲೂ ಕೂಡ ಪ್ರೇಮಿಗಳು ನಿಸಂಕೋಚವಾಗಿ ತಮ್ಮ ಕೆಲಸ ಮುಂದುವರಿಸುತಿರುತ್ತಾರೆ.

ಪ್ರೇಮಿಗಳಿಂದ ಕಿಕ್ಕಿರಿದು ಕೂಡಿರುವ ಇನ್ನೊಂದು ಸ್ಥಳ- ಸೆಂಟ್ರಲ್ ಪಾರ್ಕ್ ! ಬಹುಷ: ಕಲ್ಕತ್ತಾದಲ್ಲಿ ಬಹು ಹೆಚ್ಚು ಜನಕ್ಕೆ ಗೊತ್ತಿರುವ ಜಾಗ ಎಂದರೆ ಇದೇ ಇರಬೇಕು.ಇಲ್ಲಿ ಪ್ರೇಮಿಗಳಿಗೆ(?) ಯಾವುದೇ ಅಡೆತಡೆ ಇದ್ದಾಗೆ ಕಾಣೋಲ್ಲ.೧೦ ರೂಪಾಯಿ ಕೊಟ್ಟು ಸೆಂಟ್ರಲ್ ಪಾರ್ಕ್ ಪ್ರವೇಶಿಸಿದರೆ ಅವರನ್ನು ಹೇಳೋರು ಕೇಳೋರು ಯಾರು ಇರೋಲ್ಲ.ಸಹಜವಾಗಿ ಇಲ್ಲಿ ಪ್ರೇಮಕ್ಕಿಂತ ಜಾಸ್ತಿ ದೇಹಗಳ ಪ್ರೀತಿ ! ಉಪ್ಪಿ ಭಾಷೆಯಲ್ಲಿ ಹೇಳೋದಾದರೆ 'ಇಂಗ್ಲೀಷ್ ಲವ್' ಮಾಡೋರೆ ಹೆಚ್ಚು ಇಲ್ಲಿಗೆ ಬರೋರು.

ಕಲ್ಕತ್ತಾದಲ್ಲಿದ್ದಾಗ ಕಂಡ ಇನ್ನೊಂದು ಮಹೋನ್ನತ ಅನುಭವ - ದುರ್ಗಾ ಪೂಜೆ. ಅದರ ಬಗ್ಗೆ ಸವಿಸ್ತಾರವಾಗಿ ಮತ್ತೊಮ್ಮೆ ಬರಿತೀನಿ.

ಇನ್ನು ಅಲ್ಲಿನ ಜನ ಊಟದ ವಿಷಯಕ್ಕೆ ಬಂದರೆ ಕೇಳೋದು ಮೂರೇ - ಆಲೂ, ಮಾಂಚ್,ಮಿಶ್ಟಿ. ಅಡುಗೆಯಲ್ಲಿ ಒಂದಾದರೂ ಆಲೂ ಖ್ಯಾದ ಇಲ್ಲದಿದ್ದರೆ ಕೇಳಿ, ಹಾಗೇ ಮೀನು ಬೇಕೇ ಬೇಕು. ಇದರ ಜೊತೆಗೆ ಸಿಹಿ ತಿನಿಸು ತಿನ್ನೋಕೆ ಯಾವಾಗಲೂ ರೆಡಿ..ಅದಕ್ಕೆ ಅಲ್ಲಿ ಜನ ರಸಗುಲ್ಲಾ ತರ ಗುಂಡು ಗುಂಡಾಗಿ ಇರೋದೇ??

ಸೈಕಲ್ ರಿಕ್ಷಾ, ಐಟಿ, ಕಮ್ಯುನಿಷ್ಟ್‍ರು, ಪರಮಹಂಸರು,ಐತಿಹಾಸಿಕ ಸ್ಥಳಗಳು, ರಸಗುಲ್ಲಾ, ದುರ್ಗಾ ಪೂಜೆ, ಪುಟ್‍ಬಾಲ್ ಹುಚ್ಚು...ಕಲ್ಕತ್ತಾದಲ್ಲಿ ಏನಿಲ್ಲ ಎನೀದೆ?

Sunday, August 27, 2006

ಗಣಪ ಬಂದ..


ಆನೆ ಮುಖ,ಡೊಳ್ಳು ಹೊಟ್ಟೆ,ಇಲಿಯಂತ ವಾಹನ,ವಿದ್ಯಾ-ಬುದ್ದಿಗೆ ಅಧಿಪತಿ,ಅದರ ಮೇಲೆ ಎಲ್ಲಕ್ಕಿಂತ ಮೊದಲು ಪೂಜೆಗೊಳ್ಳುವವ..

ಹೀಗೆ ಗಣಪನ ಬಗ್ಗೆ ನಮ್ಮ ಕಲ್ವನೆ ಒಂದು ವಿಭಿನ್ನತೆ, ಎನೋ ಕುತೂಹಲ,ಭಯ-ಭಕ್ತಿಯಿಂದ ಕೂಡಿದೆ.ಹಾಗೆಯೇ ನಮ್ಮ ಗಣಪ ಅತ್ಯಂತ designed ದೇವರು.ಗಣಪ ಎಂದರೆ ಕಲಾವಿದರಿಗೆ ಹಬ್ಬ.ಕಲಾವಿದರ ಕಲ್ಪನೆಯ ಪ್ರಕಾರ ಅವನು ಧರಿಸಿರೋ ರೂಪಗಳು-ತೊಟ್ಟ ವೇಷಗಳು ಅನೇಕ. ಇಂತಹ ಎಲ್ಲರಿಗೂ ಪ್ರಿಯನಾದ ಗಣಪನ ಹಬ್ಬ ಕೂಡ ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಆಚರಿಸಲ್ಪಡುತ್ತಿದ್ದೆ.

ನಾವು ಹರಿಹರದಲ್ಲಿ ಇರೋವರೆಗೆ ಅಲ್ಲಿನ ಗಣಪನ ಹಬ್ಬದ್ದು ಒಂದು ವಿಶಿಷ್ಟತೆ ಇತ್ತು.ಅಲ್ಲಿ ನಾವು ಇದದ್ದು ಒಂದು ವಟಾರದ ತರದ ಮನೆ.ಅಕ್ಕಪಕ್ಕದ ಮನೆಯವರೆಲ್ಲ ಸಂಬಂಧಿಗಳೇ..ಚಿಕ್ಕಪ್ಪ-ದೊಡ್ಡಪ್ಪಗಳ ಕುಟುಂಬಗಳು.ಅದೇನು ಆಗುತಿತ್ತೋ ಆ ವಟಾರದಲ್ಲಿ ಯಾವಾಗಲೂ ಸೋದರ ಕುಟುಂಬಗಳ ನಡುವೆ ನಿಲ್ಲದ ಜಗಳಗಳು.ಆದರೆ ಗಣಪನ ಹಬ್ಬ ಬರುತ್ತಿದಂತೆ ಒಂದು ಕದನವಿರಾಮ! ಎಲ್ಲರೂ ಸೇರುತ್ತಿದದ್ದು ಒಟ್ಟಿಗೆ ಆಚರಿಸುತ್ತಿದದ್ದು ಗಣಪತಿ ಹಬ್ಬವೊಂದೇ.

ಹಬ್ಬಕ್ಕೆ ವಾರ ಇದ್ದಂತೆ ನಮ್ಮ ವಟಾರದಲ್ಲಿದ್ದ 'ನಡುಮನೆ' ಅಂತಾ ಕರೆಯುತ್ತಿದ್ದ ಒಂದು ದೊಡ್ಡ ಮನೆಯಲ್ಲಿ ನೆಲಕ್ಕೆ ಸೆಗಣಿ ಬಳಿದು ಸಾರಿಸಿ,ಗೋಡೆಗೆ ಸುಣ್ಣ-ಬಣ್ಣಗಳ ಅಲಂಕಾರ.ಹಬ್ಬಕ್ಕೆ ೧-೨ ದಿವಸ ಇದ್ದಂತೆ ಪೇಟೆಯಿಂದ ಬಣ್ಣದ ಪೇಪರ್ ತಂದು ಅದನ್ನು ವಿವಿಧ ಆಕೃತಿಯ ಸರಪಳಿಯಲ್ಲಿ ಕತ್ತರಿಸುತ್ತಿದ್ದೆವು. ಆ ಬಣ್ಣದ ಕಟ್ಟಿಂಗ್ಸ್ ಅಂಟಿಸಲು ವಿಶೇಷ ತರದ ಅಂಟು ಮನೆಯಲ್ಲಿ ತಯಾರಯಾಗುತಿತ್ತು.ಅ ಬಣ್ಣದ ಕಟ್ಟಿಂಗ್ಸ್ ನ್ನು ಆ ನಡುಮನೆಯ ಜಂತಿಗೆ ರಾತಿಯಿಡೀ ಅಂಟಿಸುತ್ತಿದ್ದೆವು.

ಬಣ್ಣದ ಕಟ್ಟಿಂಗ್ ಅಂಟಿಸಿದ ಮೇಲೆ ಮುಂದಿನ ಕಾರ್ಯ ನಡುಮನೆಯ ಗೋಡೆ ಮೇಲೆ ಒಂದು ಇಂಚು ಬಿಡದೆ ವಿವಿಧ ಕ್ಯಾಲೆಂಡರ್-ಚಿತ್ರಪಟಗಳನ್ನು ಬಡಿಯೋದು.ಅದರಲ್ಲಿ ಬಹುತೇಕ ಕ್ಯಾಲೆಂಡರ್‍ಗಳು ಗಣಪತಿ-ದೇವಾನುದೇವತೆಗಳದು.ಆ ಕ್ಯಾಲೆಂಡರ್ ಎಷ್ಟು ವರ್ಷದ ಕಲೆಕ್ಷೆನ್ನೋ ನಾ ಕಾಣೇ.

ಗಣಪನನ್ನು ಕೂಡಿಸಲು ಗೋಡೆಯಲ್ಲಿ ಒಂದು ದೊಡ್ಡ ಕಿಟಕಿಯಂತ ಗೂಡು.ಅದಕ್ಕೆ 'ಗಣಪನ ಗೂಡು' ಅಂತಾ ಹೆಸರು.ಆ ಗಣಪನ ಗೂಡಿಗೆ ವಿಶೇಷ ಅಲಂಕಾರ.ಗಣಪ ಕೂಡುವ ಪೀಠದ ಹಿಂದೆ ಒಂದು ಬ್ಯಾಟರಿ-ಚಾಲಿತ ಬಣ್ಣದ ಚಿಕ್ಕ ಫ್ಯಾನ್.ಅದು ಸರಿಯಾಗಿ ಗಣಪನ ಕಿರೀಟದ ಹಿಂದೆ ಇದ್ದು ಗಣಪನಿಗೆ ಸ್ಪೆಷಲ್ ಎಪೆಕ್ಟ್! ಇನ್ನು ಗಣಪನ ಗೂಡಿನ ಮುಂದೆ ಮರದ ಹಲಗೆಯನ್ನು ಹಂತ ಹಂತವಾಗಿ ಜೋಡಿಸಿ ಒಂದು ಮೆಟ್ಟಿಲಿನಾಕೃತಿ. ಒಂದು ಮೆಟ್ಟಿಲ ಮೇಲೆ ನಮ್ಮ ಚಿಕ್ಕಪ್ಪ ಮಣ್ಣಿನಿಂದ ಮಾಡಿದ ವಿವಿಧ ಆಕೃತಿಗಳು- ಬೆಣ್ಣೆ ತಿನ್ನುತ್ತಿರುವ ಬಾಲಕೃಷ್ಣ, ಹಾವನ್ನು ಬೇಟ ಆಡುತ್ತಿರುವ ಹದ್ದು,ಹೆಡೆ ಬಿಚ್ಚಿದ ನಾಗರ ಹಾವು ...ಎಲ್ಲವೂ ಲೈಪ್ ಸೈಜ್ ಆಕೃತಿಗಳು.

ಕೊನೆಯ ಸುತ್ತಿನ ಆಲಂಕಾರದಲ್ಲಿ ನಡುಮನೆಯಲ್ಲಿ ವಿವಿಧ ಹೂವಿನ ಗಿಡದ ಕುಂಡಗಳನ್ನು ಇಟ್ಟು, ಕಲರ್ ಬಲ್ಬ್ ಗಳನ್ನು ಹಾಕಿದರೆ ಆಲಂಕಾರ ಒಂದು ಹಂತಕ್ಕೆ ಬಂದಂತೆ!

ಇಷ್ಟೆಲ್ಲ ನಡುಮನೆಯಲ್ಲಿ ಆಗುತ್ತಿದ್ದಂತೆ ಇನ್ನು ಆ ಕಡೆ ಆಡುಗೆ ಮನೆಯಲ್ಲಿ ಗಣಪನ ಮುಂದೆ ಇಡಲು ವಿವಿಧ ತಿಂಡಿಗಳ ತಯಾರಿ.ಚಕ್ಕಲಿ,ಕೋಡುಬಳೆ,ಕರ್ಚಿಕಾಯಿ,ಕಡುಬು,ಶಂಕರಪೊಳ್ಯ..ಒಂದೇ ಎರಡೇ ತಿನಿಸುಗಳು !

ಹಬ್ಬದ ದಿನ ಬೇಗ ಎದ್ದು ತಯಾರಾಗಿ ಗಣಪತಿ ತರಲು 'ಗಣಪತಿ ಮಾಡೋರ' ಮನೆ ಕಡೆ ಪಯಣ.ಅಲ್ಲಿಂದ ಗಣಪನ ಹಿಡಕೊಂಡು ನಮ್ಮ ತಂದೆ ಬರುತ್ತಿದ್ದರೆ , ಅವರ ಮುಂದೆ ಸೋದರ ಸಂಬಂಧಿಗಳಾದ ನನ್ನ ಓರಗೆಯ ಹುಡುಗರದು ಒಂದು ಚಿಕ್ಕ ಸೈನ್ಯ. ದಾರಿಯುದ್ದಕ್ಕೂ 'ವಿಘ್ನೇಶ್ವರ್ ಮಹಾರಾಜ್ ಕೀ ಜೈ' ಅಂತಾ ಕೂಗೋದು. ನಡುನಡುವೆ 'ಬಂದನಪ್ಪ ಬಂದನಪ್ಪ' ಅಂತಾ ಒಬ್ಬರು ಕೂಗಿದರೆ ಉಳಿದವರೆಲ್ಲ ಕೋರಸ್‍ನಲ್ಲಿ 'ಗಣೇಶ ಬಂದ' ಅಂತಾ ಕೂಗೋದು .ಇನ್ನೊಂದು ಪಾಪುಲರ್ ಕೂಗು 'ಗಣಪ ಬಂದ..ಕಾಯಿಕಡುಬು ತಿಂದ' !!

ಗಣೇಶನನ್ನು 'ಗೂಡಿ'ನಲ್ಲಿ ಕುಳ್ಳಿರಿಸಿ, ಎಲ್ಲ ಕುಟುಂಬದವರ ಸಮ್ಮುಖದಲ್ಲಿ ನನ್ನ ತಂದೆಯಿಂದ ಮೊದಲು ಪೂಜೆ-ಮಂಗಳಾರತಿ.ಪೂಜೆ ಕೊನೆಯಲ್ಲಿ ನನ್ನಪ್ಪ 'ಜಯಂನವ ಪಾರ್ವತಿ ಪತಿಹರ' ಅನ್ನುತ್ತಿದ್ದಂತೆ ನಾವೆಲ್ಲ ದ್ವನಿ ಕೂಡಿಸಿ ''ಜಯಂನವ ಪಾರ್ವತಿ ಪತಿಹರ ಮಹಾದೇವ್' ಅಂದು ಕೈಲ್ಲಿದ್ದ ಅಕ್ಷತೆಯನ್ನು ಗಣಪನ ಮೇಲೆ ಹಾಕುತ್ತಿದ್ದೆವು.

ಆಮೇಲೆ ಅಲ್ಲಿ ಪ್ರಸಾದ ವಿನಯೋಗ.ಗಣಪನ ಮುಂದೆ ಕೂತು ಸ್ಪಲ್ಪ ಹೊತ್ತು ಎಲ್ಲರ ಹರಟೆ. ನಂತರ ಅವರವರ ಮನೆಗೆ ಊಟಕ್ಕೆ ತೆರಳುವುದು. ಕೆಲವೊಮ್ಮೆ ಪ್ರೀತಿ ಜಾಸ್ತಿಯಾಗಿ ಒಬ್ಬರನ್ನು ಇನ್ನೊಬ್ಬರ ಮನೆಗೆ ಊಟಕ್ಕೆ ಕರೆದೊಯ್ಯುವುದು ನಡೆಯುತಿತ್ತು !! ಈ ಭಾಂದವ್ಯ ಬೇರೆ ದಿನ ಎಲ್ಲಿ ಮಾಯವಾಗುತಿತ್ತೋ ಅಂದು ಅನಿಸದಿರಲಿಲ್ಲ..

ಈ ನಡುವೆ ಕೆಲವು ವರ್ಷಗಳ ಕಾಲ ನನ್ನ ಸೋದರ ಸಂಬಂಧಿಯೊಬ್ಬ ನಮ್ಮ ವಟಾರದಲ್ಲಿ ತಾನೇ ಗಣಪನ ವಿಗ್ರಹವನ್ನು ಮಾಡತೊಡಗಿದ.ಅವನಿಗೆ ಸಹಾಯ ಮಾಡೋಕೆ ಕುಂಚ ಹಿಡಿದು ಗಣಪನ ವಿಗ್ರಹಕ್ಕೆ ನಾನು ಬಣ್ಣ ಹಚ್ಚಿದ್ದು ಉಂಟು.ಕೆಲವೊಮ್ಮೆ ವಿಭಿನ್ನ ಆರ್ಡರ್‍ಗಳು ಬರುತ್ತಿದ್ದವು.ಒಮ್ಮೆ ಒಬ್ಬರು ಎರಡು ಹಸ್ತಗಳ ಮಧ್ಯೆ ಇರುವ ಗಣಪನಿಗೆ ಆರ್ಡರ್ ಮಾಡಿದ್ದರು.

ಆದರೆ ಪ್ಲಾಸ್ಟರ್ ಆಫ್ ಪ್ಯಾರಿಸ್‍ನ ಕಡಿಮೆ ಬೆಲೆಯ ಮಾಸ್ ಗಣಪಗಳು ಬಂದ ಮೇಲೆ ಈ ರೀತಿ ಮಣ್ಣಿನ ಗಣಪಗಳಿಗೆ ಬೇಡಿಕೆ ಇಳಯತೊಡಗಿತು.

ಇನ್ನು ಹಬ್ಬದ ಸಂಜೆ ಊರಿನ ಸಾರ್ವಜನಿಕ ಗಣಪನ ನೋಡೋಕೆ ಹೋಗೋದು. ಹರಿಹರದ ಸಾರ್ವಜನಿಕ ಗಣಪ ಅಲ್ಲಿನ 'ಗಾಂಧೀ ಮೈದಾನ'ದಲ್ಲಿ ಕೂಡಿಸುತ್ತಿದ್ದರು. ಮೈದಾನದಲ್ಲಿ ಗಣಪನ ನೋಡಿಕೊಂಡು ಅಲ್ಲಿ ಎರ್ಪಡಿಸಿದ ರಸಮಂಜರಿ-ನಾಟಕ ನೋಡಿಕೊಂಡು ಮನೆಗೆ ತೆರಳಿ ಹೋಳಿಗೆ-ತುಪ್ಪ ಊಟ !!

ಗಣಪ ಇದ್ದ ೩ ಅಥವಾ ೫ ದಿವಸಗಳವರೆಗೆ ನಡುಮನೆಯಲ್ಲಿ ಗಣಪನಿಗೆ ವಿಶೇಷ ಪೂಜೆ. ಪ್ರತಿದಿನ ಸಂಜೆ ವಿವಿಧೆಡೆ ಇರೋ ಗಣಪನ ನೋಡೋಕೆ ಹೋಗೋದು.ಈ ಗಣಪನ ಮಂಡಳಿಗಳಲ್ಲಿ ತೀವ್ರ ಸ್ಪರ್ಧೆ.ಯಾರು ವಿಭಿನ್ನ ಅಲಂಕಾರ ಮಾಡುತ್ತಾರೆ,ಯಾರದೂ ಎಷ್ಟು ಎತ್ತರದ ಗಣಪ ಇತ್ಯಾದಿ..

ಕಾಲ ಕಳೆದಂತೆ ಈ ಮಂಡಳಿಗಳ ಗಣಪನಲ್ಲಿ ತಂತ್ರಜ್ಞಾನದ ಪ್ರವೇಶವಾಯಿತು.ಗಣಪ ಕೇವಲ ಒಂದು ವಿಗ್ರಹವಾಗಿ ಉಳಿಯಲಿಲ್ಲ.ಗಣಪ ಮುಖ್ಯಪಾತ್ರದಲ್ಲಿರುವ ಪುರಾಣ ಪ್ರಸಂಗಗಳು ಜೀವ ಪಡೆಯಲಾರಂಭಿಸಿದವು.ಉದಾಹರಣೆಗೆ ರಾವಣ ಕೈಲಾಸದಿಂದ ಅತ್ಮಲಿಂಗ ತಂದು ದನಗಾಹಿ ವೇಶದಲ್ಲಿರುವ ಗಣಪನಿಗೆ ಕೊಡೋದು,ಅದನ್ನು ಗಣಪ ನೆಲದ ಮೇಲೆ ಇಡೋದು,ರಾವಣ ಅದನ್ನು ಎತ್ತೋಕೋ ಯತ್ನಿಸುವುದು.ಕಡೆಗೆ ಗಣೇಶ ಸ್ತುತಿ.ಈ ಪ್ರಸಂಗದಲ್ಲಿ ಎಲ್ಲವೂ ಚಲಿಸುವ ವಿಗ್ರಹಗಳು, ಜೊತೆಗೆ sound-lights effect ಕೂಡಿ ಅದು ಒಂದು ಮಯಾಲೋಕ ಸೃಷ್ಟಿಸುತಿತ್ತು. ಕೆಲವೊಮ್ಮೆ ಬೇರೆ ದೇವರುಗಳ ಪಾತ್ರವನ್ನು ಗಣಪನಿಗೆ ಕೊಟ್ಟ ಪ್ರಸಂಗಗಳು ಊಂಟು.ಉದಾಹರಣೆಗೆ ಕಾಳಿಂಗ ಮರ್ದನದ ಪ್ರಸಂಗದಲ್ಲಿ ಕೃಷ್ಣನನ್ನು substitue ಮಾಡಿ ಗಣಪನನ್ನು ಕಾಳಿಂಗ ಮರ್ದನಕ್ಕೆ ಕಳುಹಿಸಿದ್ದು ಉಂಟು !!

ಬರುಬರುತ್ತಾ ಈ ಪ್ರಸಂಗಗಳು 'ಶೋ'ಗಳಾಗತೊಡಗಿದವು.ಮಂಡಳಿಗಳು ವಿಶೇಷ ಆಹ್ವಾನಿತರಿಗೆ,ದಾನಿಗಳಿಗೆ ಮುಂದಿನ ಸಾಲಿನಲ್ಲಿ ಕುಳ್ಳಿರಿಸಿ, ಉಳಿದೆಲ್ಲರನ್ನೂ ನಿಲ್ಲಿಸಿ ಶೋ ನಡೆಸುವ 'ಅ-ಸಮಾನತೆ' ಸಂಪ್ರದಾಯವೂ ಶುರುವಾಯಿತು.

ಮಂಡಳಿಗಳ ಇನ್ನೊಂದ ವಿಶೇಷವೆಂದರೆ ಗಣಪನಿಗೂ ಪ್ರಸ್ತುತ ವಿಷಯಗಳಿಗೂ ಲಿಂಕ್ ಮಾಡುತ್ತಿದ್ದ ರೀತಿ.ಕಾರ್ಗಿಲ್ ಯುದ್ದದ ವರ್ಷದಲ್ಲಿ ಗಣಪ ಸೈನಿಕನ ವೇಷ ತೊಟ್ಟು ದೇಶದ ಗಡಿಯಲ್ಲಿ ನಿಂತ ಅವತಾರದಲ್ಲಿದ್ದರೆ, ವಿಶ್ವಕಪ್ ಸಮಯದಲ್ಲಿ ಗಣಪ ಭಾರತದ ಟೀ ಶರ್ಟ್ ತೊಟ್ಟು ಬ್ಯಾಟ್ ಹಿಡಿದು ನಿಂತದ್ದು ಉಂಟು.ಕೆಲವೊಮ್ಮೆ ಮಂಡಳಿಯವರು ವಿಪರೀತ ಬುದ್ದಿ ಖರ್ಚು ಮಾಡಿದ ಪ್ರಸಂಗಗಳು ಉಂಟು.ಒಮ್ಮೆ ಗಣಪನನ್ನು ವೀರಪ್ಪನ್ ತರ ವೇಷದಲ್ಲಿ ಒಂದು ಮಂಡಳಿಯವರು ಅವತರಿಸಿದ್ದರು !

೩-೫ ದಿವಸದ ನಂತರ ಇನ್ನು ಗಣಪನ ವಿರ್ಸಜಿಸುವ ಕಾರ್ಯಕ್ರಮ ದುಃಖದಿಂದ ಕೂಡಿದ ಸಮಯ.ಗಣಪನಿಗೆ ಇಷ್ಟವಾದ ಕಡುಬು ಮಾಡಿ ಅದನ್ನು ಪಾರ್ಸಲ್ ಕಟ್ಟಿ ಮನೆಯಿಂದ ಹೊರಟರೆ, ಮತ್ತದೆ ನಮ್ಮ ಸೈನ್ಯದ ಮೆರವಣಿಗೆ.'ಮೋರ್‍ಗಯಾ ರೇ ಮೋರ್‍ಗಯಾ' ಅಂತಾ ಒಬ್ಬ ಕೂಗಿದರೆ ಉಳಿದವರೆಲ್ಲ 'ಗಣೇಶ ಮೋರ್‍ಗಯಾ' ಅಂತಾ ಕೋರಸ್ ನೀಡುತ್ತಿದ್ದೆವು.ತುಂಗಾಭದ್ರ ನದಿ ಮುಟ್ಟಿ ಅಲ್ಲಿ ಇನ್ನೊಂದು ಸುತ್ತಿನ ಪೂಜೆ ಮಾಡಿ ಭಾರದ ಮನದಿಂದ ಗಣಪನ ನೀರಿನಲ್ಲಿ ಮೂರು ಸಲ ಮುಳುಗಿಸಿ ಕೈ ಬಿಟ್ಟಾಗ ಎನೋ ಖಾಲಿಯಾದ ಭಾವನೆ..

ಈ ಮಧ್ಯೆ ಮಂಡಳಿಗಳ ಗಣಪನ ವಿಸರ್ಜನೆಗೆ ಹೊರಡುತಿದ್ದ ಗುಂಪು ಆಮೆವೇಗದಲ್ಲಿ ಸಾಗುತ್ತ ದಾರಿಯುದ್ದಕ್ಕೂ ಕೂಗು ಹಾಕುವುದೇನೋ, ಮೆರವಣಿಗೆಯಲ್ಲಿ ಆರ್ಕೆಸ್ಟ್ರಾದವರ ಗಣಪನಿಗೆ ಸ್ಪಲ್ಪವೂ ಸಂಬಂಧವೇ ಇಲ್ಲದ ಹಾಡಿಗೆ ಹೈಕಳು ಕುಣಿದು ಕುಪ್ಪಳಿಸಿವುದೇನೋ. ಅತ್ಯಂತ ಉತ್ಸಾಹಭರಿತ ವಾತಾವರಣ. ಮೆರವಣಿಗೆಯಲ್ಲಿ ನಿಜಕ್ಕೂ ಜೋಶ್ ಉಂಟು ಮಾಡುತ್ತಿದದ್ದು 'ಡೊಳ್ಳು ಕುಣಿತ'.ಅದು ಮಾಡುವ ರುದ್ರನಾದಕ್ಕೆ ಉತ್ಸಾಹ ಬರದಿದ್ದರೆ ಹೇಳಿ.ಆದರೆ ಮೆರವಣಿಗೆಯಲ್ಲಿ ಕೆಲವೊಬ್ಬರು ಹೊಟ್ಟೆಗೆ 'ದ್ರವ'ಗಳನ್ನು ಇಳಿಸಿಕೊಂಡು ಬಂದು ಮಾಡುತ್ತಿದ್ದ ವರಸೆಗಳು ಮೆರವಣಿಗೆಯ ಸಡಗರಕ್ಕೆ ನೀಡುತ್ತಿದ್ದವು ಇನ್ನೊಂದು ಮಜಲು.

ಒಂದು ವರ್ಷ ವಿಸರ್ಜನೆ ವೇಳೆಯಲ್ಲಿ ನಡೆದ ಕೋಮು ಗಲಭೆಯ ನಂತರ ಮೆರವಣಿಗೆ ಸಂಜೆ ಬೇಗನೆ ಶುರು ಮಾಡತೊಡಗಿದರು.ಇಲ್ಲದಿದ್ದರೆ ಮೆರವಣಿಗೆಗಳೂ ಶುರುವಾಗುತಿದ್ದೆ ೮-೯ ಗಂಟೆಗೆ, ತುಂಗಾಭದ್ರ ಮುಟ್ಟೋವಷ್ಟರಲ್ಲಿ ರಾತ್ರಿ ೧೨-೧ ಗಂಟೆಯಾಗುತಿತ್ತು.

ವಿಸರ್ಜನೆಯ ನಂತರ ಮನೆಗೆ ಬಂದು ನೋಡಿದರೆ ಅದೇ ನಡುಮನೆ,ಅದೇ ಅಲಂಕಾರ,ಎಲ್ಲಾ ಇದೇ..ಆದರೆ ಇರಬೇಕಾದದ್ದು ಇಲ್ಲ. ಬಹುಷಃ ಇದಕ್ಕೆ ಹೇಳುತ್ತಾರೆ 'ಆತ್ಮವಿಲ್ಲದ ದೇಹ'.ಮುಂದಿನ ವರ್ಷ ಮತ್ತೆ ಗಣಪ ಬರ್ತಾನೆ ಅನ್ನೋ ಸಮಾಧಾನ..

ಆದರೆ ನಮ್ಮ ಅಜ್ಜ ಗತರಾದ ನಂತರ ಆ ಸಾಮೂಹಿಕ ಗಣಪನ ಆಚರಣೆಯೂ ನಿಂತಿತು.ಆದಾದ ಮೇಲೆ ಒಂದೇ ವಟಾರದಲ್ಲಿ ಮನೆಗೊಂದರಂತೆ ಗಣಪಗಳು.ಸ್ಪಲ್ಪ ವರ್ಷಗಳ ನಂತರ ನಮ್ಮ ಹರಿಹರದ ಋಣ ಮುಗಿದ ಮೇಲೆ ಅಲ್ಲಿನ ಗಣಪನ ಪೂಜೆಗೂ ವಿದಾಯ.

ಮತ್ತೊಂದು ಊರು..ಮತ್ತೊಂದು ದೇಶ....

ನಮ್ಮ ಗಣಪ ಮಾತ್ರ ಅವನೇ..ಅದೇ ವಕ್ರತುಂಡ,ಅದೇ ಮಹಾಕಾಯ..
ಅದಕ್ಕೆ ಅಲ್ವೇ ಗಣಪ ಸಮಯಾತೀತ !

Saturday, August 12, 2006

ಪೋಟೋ ಪ್ಲ್ಯಾಶ್ ಬ್ಯಾಕ್


ಹೀಗೆ ಸುಮ್ಮನೆ ಹಳೇ ಪೋಟೋಗಳನ್ನು ಆನ್ ಲೈನ್ ಅಲ್ಬಮ್‍ನಲ್ಲಿ ನೋಡ್ತಾ ಇದ್ದೆ. ಮಿತ್ರರೊಂದಿಗೆ ಹೋದ ಪಿಕನಿಕ್-ಪ್ರವಾಸ ಪೋಟೋಗಳು, ಟ್ರೆಕಿಂಗ್ ಪೋಟೋಗಳು. ಸುನಾಮಿ ಸಂತ್ರಸ್ತ ಪ್ರದೇಶದಲ್ಲಿ ಕಳೆದ ಆ ದಿನಗಳ ಪೋಟೋಗಳು, ಆಫೀಸ್ ಪೋಟೋಗಳು,ಸ್ನೇಹಿತರ ಮದುವೆ ಪೋಟೋ..

ಈ ಪೋಟೋ-ಕ್ಯಾಮರಗಳಲ್ಲಿದ್ದರೆ ಬಹುಷಃ ನಮ್ಮ ನೆನಪುಗಳನ್ನು ಮತ್ತೆ ಮತ್ತೆ ಹೆಕ್ಕಿ ತೆಗೆದು ಆ ನೆನಪುಗಳಲ್ಲಿ ಕಳೆದುಹೋಗೋದು ಕಷ್ಟವಾಗತಿತ್ತೋ ಎನೋ..

ಹಂಗೆ ಯೋಚನೆ ಮಾಡ್ತಾ ಇದ್ದಾಗ ನೆನಪಾದದ್ದು ಶಾಲೆಯ ಆ ಪೋಟೋ ಸೆಷನ್‍ಗಳು.ನಮ್ಮ ಶಾಲೆಯಲ್ಲಿ ಪ್ರತಿ ವರ್ಷ ತರಗತಿಯ ಗ್ರೂಪ್ ಪೋಟೋ ತೆಗೆತಿದ್ದರು.ಆಮೇಲೆ ಪೋಟೋ ಬೇಕಾದವರೆಲ್ಲ ಟೀಚರ್‍ಗೆ ಹೆಸರು ಕೊಡ್ತಾ ಇದ್ದಿವಿ.ಒಂದು ವಾರ ನಂತರ ಕವರ್‍ನಲ್ಲಿ ಒಂದೊಂದು ಪೋಟೋ ಸಿಗ್ತಾ ಇತ್ತು.ಆವಾಗ ಆ ಪೋಟೋಗಳು ಅಂತ ವಿಶೇಷ ಅನಿಸಿರಲಿಲ್ಲ.ಈಗ ಆ ಫೋಟೋಗಳಲ್ಲಿ ಸ್ನೇಹಿತರನ್ನು ಗುರ್ತಿಸಿ ಅವರ ಅವಾಗೀನ ಅವತಾರವನ್ನು ಈಗೀನ ಅವತಾರಕ್ಕೆ ಹೋಲಿಸಿ ನೋಡುವದರಲ್ಲಿ ಮಜಾ ಇರುತ್ತೆ!

ಮನೆಯಲ್ಲಿ ನಾನು ೬ ತಿಂಗಳು ಆಗಿದ್ದಾಗ ತೆಗೆದ ಕಪ್ಪು-ಬಿಳುಪು ಪೋಟೋ ಒಂದು ಇದೆ.ಅದರಲ್ಲಿ ಅಳುತ್ತಿರುವ ನನ್ನ ನೋಡಿದಾಗ ಈಗ ಮಂದಹಾಸ ಮೂಡದಿದ್ದರೆ ಕೇಳಿ! ಹಾಗೆ ಅಪ್ಪ-ಅಮ್ಮ ಮದುವೆಯ ನಂತರ ಸ್ಟುಡಿಯೋದಲ್ಲಿ ತೆಗೆಸಿಕೊಂಡ ಪೋಟೋ. ಆ ಪೋಟೋಗಳಿಗೆ ಹಾಕಿದ ಆ ಕಪ್ಪು ಫ್ರೇಮ್.

ನಮ್ಮ ಊರು ಕಡೆ ಅದಕ್ಕೆ 'ಪೋಟೋಕ್ಕೆ ಕಟ್ಟು ಹಾಕಿಸೋದು' ಅಂತಿದ್ದರು.ಅದಕ್ಕೆ ಅಂತಾ ಒಂದು ಅಂಗಡಿ ಇತ್ತು.ಅಲ್ಲಿ ಪೋಟೋ ಕೊಟ್ಟರೆ ,ಒಂದು ತೆಳು ಹಲಗೆ ಮೇಲೆ ಅದನ್ನು ಇಟ್ಟು, ಅದಕ್ಕೆ ಹೊಂದುವಷ್ಟು ಗಾಜು ಕೊರೆದು ಅದನ್ನು ಪೋಟೋ ಮೇಲೆ ಇಟ್ಟು ಅದಕ್ಕೆ ನಾಲ್ಕು ಕಡೆ ಫ್ರೇಮ್ ಹಾಕಿ ಕೊಡ್ತಾ ಇದ್ದರು.ಅದನ್ನು ತಂದು ಮನೆ ಗೋಡೆ ಮೇಲೆ ತೂಗಿ ಹಾಕೋದರಲ್ಲಿ ಒಂದು ಸಂಭ್ರಮ!

ಕ್ರಮೇಣ ಪೋಟೋಗೆ ಕಟ್ಟು ಹಾಕಿಸೋದು ಕಡಿಮೆಯಾಗ್ತ ಬಂತು.ಅದರ ಜಾಗದಲ್ಲಿ ಬಂತು ಅಲ್ಬಮ್‍ಗಳು.ಅದು ಒಂದು ತರ ಮಜದ ಕೆಲಸ, ಸ್ಟುಡಿಯೋದಿಂದ ಪೋಟೋ ಪ್ರಿಂಟ್ ಹಾಕಿಸಿಕೊಂಡು ಬಂದು ಒಂದೊಂದೇ ಪೋಟೋ ಮೊದಲ ಸಲ ನೋಡಿ ಅದನ್ನು ಅಲ್ಬಮ್‍ಗೆ ಹಾಕೋದರಲ್ಲಿ ಎನೋ ಖುಷಿಯಾಗ್ತಿತ್ತು.

ಕ್ಯಾಮರ ಬಗ್ಗೆ ಆವಾಗಿಂದ ಒಂದು ಪ್ರೀತಿಭರಿತ ಕುತೂಹಲವಿದ್ದೆ ಇತ್ತು.ಮೊದಲ ಸಲ ನನ್ನ ಕೈಗೆ ಕ್ಯಾಮರ ಸಿಕ್ಕಿದು ನಾನು ಇಂಜಿನಿಯರಿಂಗ್ ಸೇರಿದ ಮೇಲೆನೇ. ೬ನೇಯ ಸೆಮಿಸ್ಟರ್ ಇದ್ದಾಗ ಈಡೀ ಕ್ಲಾಸ್ ೧೯ ದಿನಗಳ ಒಂದು ಮಹಾ ಪ್ರವಾಸ ಹೋಗಿದ್ದೆವು .ಅವಾಗ ಅಣ್ಣನಿಂದ ಕ್ಯಾಮರ ಪಡೆದು ತೆಗೆದುಕೊಂಡು ಹೋಗಿದ್ದೆ.ಆ ಪ್ರವಾಸದ್ದು ಒಂದು ದೊಡ್ಡ ಕತೆಗಳ ಕಂತೆಯಾದರೆ ಆ ಸಮಯದಲ್ಲಿ ತೆಗೆದ ಪೋಟೋಗಳದ್ದು ಇನ್ನೊಂದು ಕತೆ.

ಪ್ರವಾಸದ ಸಮಯದಲ್ಲಿ ಆದ ಒಂದು ಪೋಟೋ ಕತೆ...ನನ್ನ ಸ್ನೇಹಿತೆಯೊಬ್ಬಳು ಕ್ಯಾಮರದಲ್ಲಿ ಕ್ಲಿಕ್‍ಸಿದ ಪೋಟೋ ರೋಲನ್ನು ನನ್ನ ಬಳಿ ಜೋಪಾನವಾಗಿ ಇಟ್ಟುಕೊಳ್ಳಲು ಕೊಟ್ಟಿದ್ದಳು.ಪ್ರವಾಸವೆಲ್ಲ ಮುಗಿಸಿ ಬಂದು ಪೋಟೋ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ನಮಗೆ ಅಘಾತ.ಸ್ನೇಹಿತೆ ನನ್ನ ಬಳಿ ಕೊಟ್ಟಿದ್ದ ಪೋಟೋ ರೋಲ್ ಡೆವಲಪ್ ಮಾಡಿದಾಗ ಪೂರ್ತಿ ಬ್ಲ್ಯಾಂಕ್ ಆಗಿಬಂದಿತ್ತು.ನನ್ನ ರೋಲ್ ಡೆವಲಪ್‍ಗೆ ಕೊಟ್ಟಾಗ ಕಾದಿತ್ತು ಇನ್ನೊಂದು ಅಘಾತ.ಒಂದು ರೋಲ್‍ನಲ್ಲಿ ಒಂದರ ಮೇಲೆ ಒಂದರಂತೆ ಎರಡೆರಡು ಪೋಟೋಗಳು ಇದ್ದವು! ಆಗಿದ್ದೆನೆಂದರೆ ನನ್ನ ಖಾಲಿ ರೋಲ್ ಮತ್ತು ಸ್ನೇಹಿತೆಯ ರೋಲ್ ಅದಲು ಬದಲಾಗಿ, ನನ್ನ ಕ್ಯಾಮರಕ್ಕೆ ಖಾಲಿ ರೋಲ್ ಬದಲು ಸ್ನೇಹಿತೆಯ ರೋಲ್ ಹಾಕಿ ಕ್ಲಿಕ್‍ಸಿದ್ದೆ!!

ಕೆಲಸಕ್ಕೆ ಸೇರಿ ಸ್ಪಲ್ಪ ದಿನದಲ್ಲೇ ನನ್ನದೇ ಒಂದು ಸ್ವಂತ ಕ್ಯಾಮರ ಖರೀದಿಸಿದ್ದೆ. ಆ ಕ್ಯಾಮರ ನನ್ನ ಅನೇಕ ನೆನಪುಗಳಿಗೆ ಜೊತೆ ನೀಡಿತು.ನನ್ನ ಎಲ್ಲ ಪ್ರವಾಸ,ಪಿಕ್‍ನಿಕ್,ಟ್ರೇಕಿಂಗ್‍ಗಳ ಅವಿಭಾಜ್ಯ ಅಂಗವಾಯಿತು.ಹಾಗೆಯೇ ಸುನಾಮಿಯ ಪ್ರಳಯದ ನಂತರದ ಘೋರ ಘಟನೆಗಳನ್ನು ನೋಡಿದ್ದು ಈ ಕ್ಯಾಮರ ಕಣ್ಣುಗಳಿಂದ.

ಕೆಲ ವರ್ಷಗಳ ನಂತರ ವೀಸಾ ಸಂದರ್ಶನಕ್ಕೆ ಹೋಗುವ ಸಮಯ ಬಂತು.ಆ ವೇಳೆಯಲ್ಲಿ ನಡೆದದ್ದು ಈ ಪೋಟೋ ತೆಗೆಸುವ ಪ್ರಸಂಗ.ನನ್ನ ಎಲ್ಲ ವೀಸಾ ಪೇಪರ್ ತೆಗೊಂಡು ಹೋಗಿ ನಮ್ಮ ಕಛೇರಿಯ ವೀಸಾ ಸೆಲ್‍ನವರಿಗೆ ಕೊಟ್ಟರೆ, ಅವರು ಪೋಟೋ ಸಂಪೂರ್ಣ ಬಿಳಿ ಬ್ಯಾಕ್‍ಗ್ರೌಂಡ್ ಇರಬೇಕು,ಆದರೆ ಇದರಲ್ಲಿ ಅಷ್ಟು ಬಿಳಿ ಕಾಣಿಸುತ್ತಿಲ್ಲ, ಇನ್ನೊಮ್ಮ ತೆಗೆಸಿಕೊಳ್ಳಿ ಅಂದಾಗ ಪೂರ್ತಿ ತಲೆಕೆಟ್ಟು ಹೋಗಿತ್ತು.ನಂತರ ನಮ್ಮ ವೀಸಾ ಸೆಲ್‍ನವರು ಹೇಳಿದರು 'ಇಲ್ಲೇ ಸರಿ ಮಾಡಿಕೊಂಡು ಹೋಗುವುದು ಒಳ್ಳೆದು, ಇಲ್ಲಾ ಅಂದರೆ ಅಲ್ಲಿ ವೀಸಾ ಸಂದರ್ಶನದಲ್ಲಿ ಹೆಂಗಿದ್ದರೂ ಅದನ್ನು ನೋಡಿ ತಿರಸ್ಕರಿಸಬಹುದು'.ಇದು ಒಳ್ಳೆ ಸರ್ಪ್ ಎಕ್ಸಲ್ ಬಿಳುಪಿನ ಕತೆ ಆಯಿತಲ್ಲ ಅಂತಾ ಗೊಣಿಗಿಕೊಂಡು ಮತ್ತೊಮ್ಮೆ ಹಾಲಿನಂತ ಬಿಳುಪಿನ ಬ್ಯಾಕ್‍ಗ್ರೌಂಡ್ ಪೋಟೋ ತೆಗೆಸಿಕೊಂಡಾಯಿತು.

ಅಲ್ಲಿಂದ ಇಲ್ಲಿಗೆ ನೆಗೆದ ಮೇಲೆ ನಾನು ಮಾಡಿದ ಮೊದಲ ಕೆಲಸ ಡಿಜಿಟಲ್ ಕ್ಯಾಮರ ಕೊಂಡಿದ್ದು. ಡಿಜಿಟಲ್ ಕ್ಯಾಮರದಲ್ಲಿ ಖುಷಿಯಾಗುವ ವಿಚಾರವೆಂದರೆ ತೆಗೆದ ಪೋಟೋ ಅಲ್ಲೇ ನೋಡಬಹುದು, ಬೇಡದಿದ್ದರೆ ಇನ್ನೊಮ್ಮೆ ಕ್ಲಿಕ್‍ಸಿಬಹುದು.ಪೋಟೋ ರೋಲ್ ಹಾಕುವ ಆಗಿಲ್ಲ, ಕ್ಲಿಕ್‍ಸಿದ ಅ ಪೋಟೋ ಹೇಗೆ ಬಂದಿರಬಹುದು ಅಂತಾ ಕಾಯುವ ಆಗಿಲ್ಲ.ಎಲ್ಲ ಅಲ್ಲೇ ಗೊತ್ತಾಗಿ ಬಿಡುತ್ತೆ. ಈಗ ಎನಿದ್ದರೂ ಪೋಟೋ ಕ್ಲಿಕ್‍ಸಿ, ಅದನ್ನು ಕ್ಯಾಮರದಿಂದ ಕಂಪ್ಯೂಟರ್‍ಗೆ ವರ್ಗಾಯಿಸಿದರೆ ಆಯಿತು.ಅಲ್ಲಿಂದ ಬೇಕಾದವರಿಗೆ ಇ-ಮೇಲ್‍ನಲ್ಲಿ ಪೋಟೋ ಕಳಿಸಬಹುದು.ಇಲ್ಲ ಅಂದರೆ ಎಲ್ಲ ಪೋಟೋ ಆನ್‍ಲೈನ್ ಅಲ್ಬಮ್‍ಗೆ ಹಾಕಿ, ಆ ಆಲ್ಬಮ್ ಲಿಂಕ್ ಕಳುಹಿಸಿದರಾಯಿತು.

ಫಿಲ್ಮ್ ರೋಲ್ ಕ್ಯಾಮರದಿಂದ ಡಿಜಿಟಲ್ ಕ್ಯಾಮರಕ್ಕೆ,ಅಲ್ಬಮ್‍ನಿಂದ ಆನ್‍ಲೈನ್ ಅಲ್ಬಮ್‍ಗೆ ಬಂದಾಯಿತು.ಮುಂದಿನ ಅವಿಷ್ಕಾರಗಳು ಪೋಟೋ-ಕ್ಯಾಮರವನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾವೋ ನೋಡಬೇಕು.

ಇಷ್ಟೆಲ್ಲ ಆದರೂ ಆ ಕಪ್ಪು-ಬಿಳುಪು ಪೋಟೋಗಳು,ಆ ಕಟ್ಟು ಹಾಕಿದ ಪೋಟೋಗಳನ್ನು ನೋಡುತ್ತಿದ್ದರೆ ನಾಸ್ಟಾಲಿಜಿಯಾ ಆಗದಿದ್ದರೆ ಹೇಳಿ..

Sunday, July 30, 2006

ಪ್ರೀತಿಯೆಂದರೆ ಇದೇನಾ ?

ಕಾಲೇಜ್ ದಿನದ ಸ್ನೇಹಿತರನ್ನು ಬಹಳ ವರ್ಷಗಳ ನಂತರ ಭೇಟಿ ಮಾಡೋದರಲ್ಲಿ ಎನೋ ಒಂದು ಸಂಭ್ರಮವಿರುತ್ತೆ.ಕಳೆದ ವಾರ ನನ್ನ ಒಬ್ಬ ಕಾಲೇಜ್ ಮಿತ್ರನನ್ನು ಸುಮಾರು ೫ ವರ್ಷಗಳ ನಂತರ ನೋಡುತ್ತಿದ್ದೆ. ಉಭಯಕೋಶಲೋಪರಿಯ ನಂತರ ನಮ್ಮ ಮಾತುಕತೆಗಳು ಕಾಲೇಜ್ ದಿನಗಳೆಡೆಗೆ ಹೊರಳಿದವು.

ಆ ದಿನಗಳೇ ಹಾಗೇ...

ವಯಸ್ಸು ಸಹ ಅಂತದ್ದೇ.ಎನೋ ಸಾಧಿಸಬೇಕೆಂಬ ಹಂಬಲ, ಕಣ್ಣುಗಳಲ್ಲಿ ನಾಳೆಯ ಕನಸುಗಳು, ಮನದ ಮೂಲೆಯಲೆಲ್ಲೋ ಅನಿಶ್ಚಿತತೆ ಹಾಗೂ ಯಾವಯಾವುದೋ ಅಕರ್ಷಣೆಗಳು.

ಮಿತ್ರನ್ನೊಂದಿಗೆ ಕಾಲೇಜ್ ದಿನಗಳ ಬಗ್ಗೆ ಮಾತಾಡುತ್ತಿರುವಾಗ ನೆನಪಾಗಿದ್ದು ಆ ಹುಡುಗನ ಕತೆ...

ಅವನೊಬ್ಬ ಕನಸುಗಳನ್ನು ತುಂಬಿಕೊಂಡ ಹುಡುಗ. ತುಂಬಾ ಶ್ರಮಜೀವಿ. ತನ್ನ ಇತಿಮಿತಿಗಳನ್ನು ಅರಿತು ನಡೆವ ಹುಡುಗ.ಇಂತಹ ಸ್ಥಿತಪ್ರಜ್ಞ ಹುಡುಗ ಬಹುಷಃ ತಾನಾಯಿತು ತನ್ನ ಓದಾಯಿತು ಅಂತ ಇರುತ್ತದ್ದನೋ ಎನೋ, ಆ ಹುಡುಗಿ ಇಲ್ಲದಿದ್ದರೆ....

ಆ ಹುಡುಗಿ...ಸರಳ ಮತ್ತು ಸೌಜನ್ಯದ ಪ್ರತೀಕ. ಸ್ನೇಹ ಬೆಳಯಲು ತುಂಬಾ ದಿನ ಬೇಕಾಗಲಿಲ್ಲ. ಎಂತಹ ಮಧುರ ಸ್ನೇಹವದು..ಆ ಹುಡುಗಿಗೆ ಯಾಹೂನಲ್ಲಿ ಐಡಿ ಕ್ರಿಯೇಟ್ ಮಾಡಿ, ಹೇಗೆ ಚಾಟು ಮಾಡುವುದು ಅಂತ ನಮ್ಮ ಹುಡುಗ ಹೇಳಿಕೊಟ್ಟಿದ್ದ. ಹಾಗೆಯೇ ಹುಡುಗನ ಬಗ್ಗೆ ಎನೋ ಭರವಸೆ-ನಂಬುಗೆ ಆ ಹುಡುಗಿಯಲ್ಲಿ.

ಅದು ಯಾರು ಯಾವ ಮಹೂರ್ತದಲ್ಲಿ ಹೇಳಿದರೋ..'ಒಬ್ಬ ಹುಡುಗ ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರಲು ಸಾಧ್ಯವೇ ಇಲ್ಲ'.

ಅದು ಎನಾಯಿತೋ ಎನೋ ಆ ಹುಡುಗನಿಗೆ ಆ ಹುಡುಗಿಯ ಬಗ್ಗೆ ಸ್ನೇಹಕ್ಕಿಂತ ಮಿರಿದ ಸೆಳೆತ ಶುರುವಾಯಿತು. ಹುಡುಗ ತಾನು ಮಾಡುತ್ತಿರುವದು ಸರಿಯೇ ಅನ್ನೋ ಗೊಂದಲ. 'ಈಗ ಇರೋ ಸ್ನೇಹಕ್ಕೂ ದ್ರೋಹ ಬಗೆತಿದಿಯಾ' ಅಂತ ಒಂದು ಸರ್ತಿ ಮನಸ್ಸು ಹೇಳಿದರೆ, ಇನ್ನೊಂದು ಸಲ ಅದೇ ಮನಸ್ಸು ಹೇಳಿತು 'ಸ್ನೇಹವಿಲ್ಲದೆ ಪ್ರೀತಿ ಇರೋಕೆ ಸಾಧ್ಯ ಇಲ್ಲ, ನಿನ್ನ ಭಾವನೆಗಳು ಸರಿ'.

ಆಂತು ಇಂತು ಧೈರ್ಯ ಮಾಡಿ ಒಂದು ದಿನ ಆ ಹುಡುಗಿಗೆ ನಮ್ಮ ಹುಡುಗ ಸೂಚ್ಯವಾಗಿ ತನ್ನ ಮನದ ಮಾತು ಬಿಚ್ಚಿಟ್ಟಿದ್ದ.ಆದರೆ ಅವನೆಂದುಕೊಂಡಂತೆ ಆಕೇ ಸಿಟ್ಟಿಗೇಳಲಿಲ್ಲ. ಬದಲಾಗಿ ತುಂಬಾ ಸೌಮ್ಯವಾಗಿ ಹುಡುಗನಿಗೆ 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ' ಅಂದಿದ್ದಳು.

ಈ ರೀತಿ ಸಂದರ್ಭದಲ್ಲಿ ನಾನು ನೋಡಿರೋ ಪ್ರಕಾರ ಹುಡುಗರು ಎರಡು ರೀತಿಯಾಗಿ ವರ್ತಿಸುತ್ತಾರೆ. ಒಂದನೇಯ ಪ್ರಕಾರದವರು ಹುಡುಗಿ ಹೇಳಿದ್ದು ಒಪ್ಪಿಕೊಂಡು ಮಿತ್ರರಾಗಿ ಉಳಿದುಬಿಡ್ತಾರೆ. ಎರಡನೇಯವರು ಆವಾಗ ಒಪ್ಪಿಕೊಂಡರೂ ಮನದಲ್ಲಿ ಆ ಭಾವನೆ ಇದ್ದೆ ಇರುತ್ತೆ, ಮುಂದೊಂದು ದಿನ ಆಕೇ ಒಪ್ಪುತ್ತಾಳೆ ಅನ್ನೋ ಆಸೆವುಳ್ಳವರು.

ನಮ್ಮ ಹುಡುಗ ಎರಡನೇಯ ಪ್ರಕಾರದವನು. ಅದು ಆ ಹುಡುಗಿಗೆ ಗೊತ್ತಾದಗ ಈ ಸಲ ಸ್ಪಲ್ಪ ಖಾರವಾಗಿಯೇ ಹುಡುಗನಿಗೆ ಉತ್ತರ ಸಿಕ್ಕಿತ್ತು.ಇಷ್ಟರಲ್ಲಿ ಕಾಲೇಜ್ ಜೀವನ ಮುಗಿದು ನೌಕರಿ ಎಂಬ ಇನ್ನೊಂದು ಅಧ್ಯಾಯ ಶುರುವಾಗಿತ್ತು.ಅದರ ಮೊದಮೊದಲ ಸಂಭ್ರಮ ಆಚರಿಸುವ ಮೊದಲೇ ಆ ಹುಡುಗಿಯಿಂದ ಆ ಸುದ್ದಿ ಬಂದಿತ್ತು ಅಮಂತ್ರಣದೊಂದಿಗೆ...

ಆದಾಗಿ ಎಷ್ಟೋ ವರ್ಷಗಳು ಕಳೆದವೋ..ಈಗಲೂ ಅವರಿಬ್ಬರ ಮಧ್ಯೆ ಒಂದು ಮಾತಿಲ್ಲಿದ, ಮೇಲ್ ಇಲ್ಲದ ಮೌನದ ಬೇಲಿ.

ನನ್ನ ಸ್ನೇಹಿತನ ಭೇಟಿಯ ನಂತರ ಮರಳಿ ಬರುವಾಗ ನೆನಪಾಗಿದ್ದು ಇನ್ನೊಂದು ಪ್ರೀತಿಯ ಕತೆ..

ಇದು ಒಂದಾನೊಂದು ಅಫೀಸ್‍ನಲ್ಲಿ ಅರಳಿದ ಕತೆ. ಆತ ತುಂಬಾ ಸ್ನೇಹಮಯಿ,ಹಾಸ್ಯಪ್ರಜ್ಞೆವುಳ್ಳ ಒಬ್ಬ ಉತ್ಸಾಹಿ ಯುವಕ.ಅದೇ ಅಫೀಸ್‍ನಲ್ಲಿದ್ದಾಳೆ ಆ ಯುವತಿ.ಇಬ್ಬರಿಗೂ ಸಮಾನ ಇಷ್ಟವಾದ ಅನೇಕ ಅಭಿರುಚಿಗಳು.ಬಹು ಬೇಗನೆ ಬೆಳಯಿತು ಗಾಢ ಸ್ನೇಹ. ಅವರಿಬ್ಬರು ಮಾತಾಡದ ವಿಷಯವಿಲ್ಲ,ಪೋನ್-ಮೇಲ್-ಎಸೆಂಎಸ್ ಇಲ್ಲದ ದಿನಗಳಿಲ್ಲ.ದೋಸೆ,ಐಸ್‍ಕ್ರೀಮ್,ಪಾಸ್ತ,ಫಿಡ್ಜಾ..ಒಟ್ಟಿಗೆ ತಿನ್ನದ ಹೋಟೆಲ್‍ಗಳಿಲ್ಲ.

ದಿನಗಳೆದಂತೆ ಆಕೆಗೆ ಸ್ಪಷ್ಟವಾಗತೊಡಗಿತು ಅವರಿಬ್ಬರು ಸ್ನೇಹದ ಎಲ್ಲೆ ಮೀರುತ್ತಿದ್ದಾರೆ.ಆಕೆ ಅವನಿಗೆ ಹೇಳಿದ್ದಳು 'ಇದು ಆಗದ ಹೋಗದ ಮಾತು.ನಾವಿಬ್ಬರು ಒಳ್ಳೆ ಸ್ನೇಹಿತರು.ಹಾಗೇ ಇದ್ದಬಿಡೋಣ'. ಅವನಿಗೆ ಆವಾಗ ಅದು ಸರಿ ಅನಿಸಿ ಅದನ್ನು ಒಪ್ಪಿಕೊಂಡರೂ ಮನದ ಮೂಲೆಯಲ್ಲಿ ಆ ಪ್ರೀತಿಯ ಭಾವನೆ ಇದ್ದೆ ಇತ್ತು. ಮೊದಲಿಗಿಂತಲೂ ಗಾಢವಾಗಿತ್ತು ಸ್ನೇಹ.

ಕೊನೆಗೆ ಒಂದು ದಿನ ಅವರ ಸಂಜೆ ಭೇಟಿಯಲ್ಲಿ ಆಕೆ ಅವನಿಗೆ ಆ ಸುದ್ದಿ ಹೇಳಿದ್ದಳು. ಅವನಿಗೆ ಅದು ಅನಿರೀಕ್ಷಿತವಲ್ಲದಿದ್ದರೂ ಮನದಲ್ಲಿ ಒಂದು ನೋವಿನ ಅಲೆ ಬಂದು ಅಪ್ಪಳಿಸಿತ್ತು. ಆಕೆಗೆ ಗೊತ್ತು ಅವನ ಮನದಲ್ಲಿ ನಡೆಯುತ್ತಿರುವ ಗದ್ದಲದ ಬಗ್ಗೆ, ಆದರೆ ಅವಳು ಆಸಹಾಯಕಳು?

ಅದೊಂದು ಅಶ್ರುತುಂಬಿದ ವಿದಾಯ...ಆದರೆ ಅವರ ನಡುವಿನ ನಿಷ್ಕಲ್ಮಶ ಸ್ನೇಹ ಮುಂದುವರೆದಿತ್ತು.ಅವಗೊಮ್ಮೆ ಇವಗೊಮ್ಮೆ ಕಳಿಸುವ ಮೇಲ್‍ಗಳು, ಅಪರೂಪದ ಪೋನ್‍ಕಾಲ್‍ಗಳು.ಅದೇ ಸ್ನೇಹ.. ಆದರೆ ಇಬ್ಬರಿಗೂ ಗೊತ್ತು ಎಲ್ಲಿ ಗೆರೆ ಎಳೆಯಬೇಕೆಂದು.

ಈ ಕತೆಗಳ ಬಗ್ಗೆ ಯೋಚಿಸುತ್ತಿರುವಾಗ ನನ್ನ ಸ್ನೇಹಿತೆಯೊಬ್ಬಳ ಕರೆ ಬಂತು.ಅವಳು ಬಹಳ ಗಲಿಬಿಲಿಗೊಂಡಿದ್ದಳು. ೨-೩ ತಿಂಗಳುಗಳಿಂದ ಜೊತೆಗೆ ಕೆಲಸ ಮಾಡುವ ಅವಳ ಸಹೋದ್ಯೋಗಿಯೊಬ್ಬ ಅವಳ ಬಗ್ಗೆ ವಿಪರೀತ ಆಸಕ್ತಿ ಬೆಳಸಿಕೊಂಡಿದ್ದಾನೆ ಅಂತಾ ತಿಳಿಯಿತು.ನಂತರ ಮಾತುಕತೆಯ ನಂತರ ಸ್ಪಷ್ಟವಾಗಿದ್ದು ಅದರಲ್ಲಿ ಆಕೆ ಆ ರೀತಿ ಭಾವನೆ ಬರೋ ಹಾಗೆ ಮಾಡಿದ್ದು ಎನೂ ಇಲ್ಲ. ಅವಳು ಅವನಿಗೆ ಸ್ಪಷ್ಟವಾಗಿ ನಿರಾಕರಿಸಿ ಹೇಳಿದಳಂತೆ.

ನನ್ನ ಸ್ನೇಹಿತೆಗೆ ಕಿವಿಮಾತು ಹೇಳಿದೆ "Feeling of love is like sea waves, it keeps coming.Watch out !'

ಈ ಎಲ್ಲ ಎಪಿಸೋಡ್‍ಗಳನ್ನು ನೋಡಿದಾಗ ಮೂಡಿದ್ದು ಅನೇಕ ಪ್ರಶ್ನೆಗಳು....
೧. ಪ್ರೀತಿ ಅಥವಾ ಆ ಹೆಸರಿನ ಭಾವನೆಗಳು ಹೇಗೆ-ಯಾಕೆ ಮೊಳೆಯುತ್ತೆ?
೨. ಅಸಾಧ್ಯ ಅಂತಾ ಗೊತ್ತಿದ್ದರೂ ಕೊನೆಯ ಕ್ಷಣದವರೆಗೆ ಪ್ರೀತಿ ಮರಳಿ ಬರುತ್ತೆ ಅಂತಾ ಯಾಕೇ ಅಸೆ ಇರುತ್ತೆ?
೩. ಒಬ್ಬ ಹುಡುಗ-ಒಬ್ಬ ಹುಡುಗಿ ಒಳ್ಳೆ ಸ್ನೇಹಿತರಾಗೇ ಇರೋಕೆ ಸಾಧ್ಯನೇ ಇಲ್ವಾ?

ಪ್ರಶ್ನೆಗಳು ಕಾಡುತ್ತಿದ್ದಂತೆ ಬಂತು ಒಂದು ಸಂತಸದ ಸುದ್ದಿ. ನನ್ನ ಅತ್ಯಂತ ಅತ್ಮೀಯರಾದ ದಂಪತಿಗಳ ಕುಟುಂಬಕ್ಕೆ ಹೊಸ ಜೀವವೊಂದರ ಸೇರ್ಪಡೆ. ದಂಪತಿಗಳಿಬ್ಬರೂ ನನ್ನ ಕಾಲೇಜ್ ಸಹಪಾಠಿಗಳು ,ನಮ್ಮ ಮುಂದೆಯೇ ಅರಳಿದ ಪ್ರೀತಿಯದು, ಅವರು ಅನುಭವಿಸಿದ ನೋವು-ನಲಿವು ಎಲ್ಲ ತಿಳಿದ ನಾನು ಸಂಭ್ರಮದಿಂದ ಫೋನಾಯಿಸಿದೆ.

ಬಹುಷ: ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ಇವರ ಹತ್ತಿರ ಉತ್ತರ ಸಿಕ್ಕರೂ ಸಿಗಬಹುದೇನೋ.ಆ ಕಡೆಯಿಂದ ನನ್ನ ಮಿತ್ರನ ಧ್ವನಿಯಲ್ಲಿ ಧನ್ಯನಾದೆ ಅನ್ನುವ ಭಾವನೆ..ಸಂತಸದ ಹೊನಲು..ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಇದ್ದ ಅವರ ಪ್ರೀತಿಯಲ್ಲಿ ಅರಳಿದ ಹೂವು.

ಬಹುಷಃ ಪ್ರೀತಿಯೆಂದರೆ ಇದೇನಾ?

Saturday, July 22, 2006

ನ್ಯೂಯಾರ್ಕ್ ನಗರ ಪ್ರದಕ್ಷಿಣೆ

ನ್ಯೂಯಾರ್ಕ್ ನಗರಕ್ಕೆ ಪ್ರವೇಶಿಸುತ್ತಿರುವಂತೆ ಅಲ್ಲಿನ ಹೆಜ್ಜೆಗೊಂದರಂತಿರುವ ಟ್ರಾಫಿಕ್ ಸಿಗ್ನಲ್‍ಗಳು ಸ್ವಾಗತ ಕೋರಿದವು.ಅವುಗಳ ಜೊತೆ ಮನಸೋ ಇಚ್ಛೆ ವಾಹನ ಚಾಲಿಸುವ ಜನ.

ನಾನಿರುವ ಟೋರೆನ್ಸ್ ಅಲ್ಲಿ, ಸುಪ್ಪಿಯ ಫಿನಿಕ್ಸ್ ಅಲ್ಲಿ, ಅರ್ಚನಾಳ ಡೆನವರ್ನ್ ಅಲ್ಲಿ, ದೀಪ್ತೀಯ ಕೊಪರ್ಟಿನೋಗಳಲ್ಲಿ textbook ಡ್ರೈವಿಂಗ್.ವಾಹನ ಸಂಚಾರ ಬಹು ಮಟ್ಟಿಗೆ ಶಿಸ್ತುಬದ್ದ. ಬಹುತೇಕ ಎಲ್ಲರೂ ಚಾಚುತಪ್ಪದೆ ಟ್ರಾಫಿಕ್ ರೂಲ್ಸ್ ಪಾಲಿಸುತ್ತಾರೆ. ಅಂತಹ textbook ಡ್ರೈವಿಂಗ್ ಒಗ್ಗಿದ ನಮಗೆ ಈ ನ್ಯೂಯಾರ್ಕ್ ಟ್ರಾಫಿಕ್ ಮೊದಮೊದಲಿಗೆ ಇರಸುಮುರಿಸು ಮಾಡಿದ್ದು ನಿಜ.

ಕೊನೆಗೂ ನಾವು ಬುಕ್ ಮಾಡಿದ ಆ ಹೋಟೆಲ್ ಮುಟ್ಟಿದಾಗಲೇ ತಿಳಿದಿದ್ದು ನಾವು ಬೇಸ್ತುಬಿದ್ದಿವಿಯಂತ.ನೆಟ್‍ನಲ್ಲಿ ಆ ಹೋಟೆಲ್‍ನ ಮೋಹಕ ವೆಬ್‍ಸೈಟ್‍ಗೆ ಮರುಳಾಗಿ ಆ ಹೋಟೆಲ್‍ನ economical ಬೆಲೆಯನ್ನು ನೋಡಿ ಖುಷಿಯಾಗಿ ಬುಕ್ ಮಾಡಿದ್ದೆವು.ಆದರೆ ಆ ಹೋಟೆಲ್ ಎಷ್ಟು ಭಯಂಕರವಾಗಿತ್ತೆಂದರೆ ಅಲ್ಲಿ ನಿಲ್ಲಲು ಸಹ ನಮಗೆ ಮನಸಾಗಲಿಲ್ಲ.ಬುಕಿಂಗ್ ರದ್ದು ಮಾಡುವಂತೆ ಎಷ್ಟು ಕೋರಿದರೂ ಅದು ಆಗಲಿಲ್ಲ.ಹೋಟೆಲ್‍ನವರ ಜೂತೆ ಒಂದು ಸುತ್ತು ಹಾಗೂ ಹೋಟೆಲ್ ಬುಕ್ ಮಾಡಿದ ಎಜೆನ್ಸಿ ಅವರ ಜೊತೆ ಪೋನ್‍ನಲ್ಲಿ ವ್ಯರ್ಥ ಜಗಳ ಮಾಡಿದ್ದಾಯಿತು.

ಸರಿ..ಎಕ್ ಅಜನಬಿ ಶಹರ್‍ದಲ್ಲಿ ಹಮ್ ದಿವಾನೆ ಹೋಟೆಲ್ ಹುಡುಕಹೊರಟೆವು. ಇದ್ದಬದ್ದ ನಂಬರ್‍ಗೆ ಫೋನ್ ಮಾಡಿದ ಕೊನೆಗೂ ಒಂದು ಒಳ್ಳೆ ಹೋಟೆಲ್ ಸಿಕ್ಕಿತು.ಚಕಚಕ ತಯಾರಾಗಿ ನಮ್ಮ ನ್ಯೂಯಾರ್ಕ್ ನಗರ ದರ್ಶನಕ್ಕೆಅಣಿಯಾದೆವು.ಇನ್ನೊಂದು ಕಾರ್ಯಕ್ರಮಕ್ಕೆ ಹೊರಟ ಪೊನ್ನಮ್ಮಗೆ ದಾರಿ ಮಧ್ಯೆದಲ್ಲಿ ವಿದಾಯ ಹೇಳಿದೆವು.

ಕಾರ್‍ನಲ್ಲಿ ನ್ಯೂಯಾರ್ಕ್ ತಿರುಗುವ ಯೋಚನೆ ಸರಿ ಹೋಗಲಿಲ್ಲ. ಕಾರಣ..ಕಾರ್ ಪಾರ್ಕಿಂಗ್..
ನ್ಯೂಯಾರ್ಕ ಯಾವುದೇ ಮೂಲೆಗೋದರೂ ಪಾರ್ಕಿಂಗ್ ಬಹು ದೊಡ್ಡ ಸಮಸ್ಯೆ. ಒಂದು ಗಂಟೆ ಪಾರ್ಕಿಂಗ್‍ಗೆ ೧೫-೨೦ ಡಾಲರ್ ಕಕ್ಕಬೇಕು.ಆ ಪಾರ್ಕಿಂಗ್ ಸಿಕ್ಕರೂ ಅದು ಯಾವುದೋ ಒಂದು ದಿಕ್ಕು, ನಾವು ಹೋಗಬೇಕಿರುವ ಸ್ಠಳ ಇನ್ನೊಂದು ದಿಕ್ಕು.ಕಾರ್‍ ಅನ್ನು ವಾಪಾಸ್ ಮಾಡಿ ನ್ಯೂಯಾರ್ಕ್ ಪ್ರಸಿದ್ದ ಹಳದಿ ಟ್ಯಾಕ್ಸಿ ಸವಾರಿ ಶುರುಮಾಡಿಕೊಂಡವಿ. ನ್ಯೂಯಾರ್ಕ್ ಯಾವ ಮೂಲೆಯಲ್ಲಿ ನೋಡಿದರೂ ಈ ಹಳದಿ ಟ್ಯಾಕ್ಸಿಗಳು ಇದ್ದೆ ಇರುತ್ತೆ.ಇನ್ನೊಂದು ವಿಶೇಷವೆಂದರೆ ಬಹುತೇಕ ಟ್ಯಾಕ್ಸಿ ಚಾಲಕರು ದೇಸಿಗಳು.ನಾವು ನ್ಯೂಯಾರ್ಕ್ ಅಲ್ಲಿ ಪ್ರಯಾಣಿಸಿದ ಟ್ಯಾಕ್ಸಿಗಳೆಲ್ಲ ಸರದಾರ್‍ಜಿ ಚಾಲಕರೇ ಇದ್ದದ್ದು.

ಮೊದಲು ಭೇಟಿ..Ground Zero

ಒಮ್ಮೆ ಘನ-ಗಾಂಭಿರ್ಯಾದಿಂದ ತಲೆಯೆತ್ತಿ ನಿಂತಿದ್ದ WTCಯ ಜೋಡಿ ಗಗನಚುಂಬಿ ಕಟ್ಟಡದ ಸ್ಥಳದಲ್ಲಿ ಈಗ ಅಸಹನೀಯ ಶೂನ್ಯತೆ. ಆ ಸ್ಥಳದ ಸುತ್ತಲಿನ ಜಾಲರಿಯಲ್ಲಿ ಆ ಕರಾಳ ಸೆಪ್ಟಂಬರ್ ೧೧ ರ ನಡೆದ ಘಟನೆ ಬಿಂಬಿಸುವ ಫಲಕಗಳು, ಅಂದು ಮೃತರಾದವರ ಎಲ್ಲರ ಹೆಸರಿರುವ ಫಲಕಗಳು.ಹಾಗೆಯೇ ಗ್ರೌಂಡ್ ಜೀರೋ ದರ್ಶಿಸಿದ ಮೇಲೆ ಜನತೆ ತಮ್ಮ ಮನಸಿನ ನೋವು-ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಗೋಡೆಬರಹಗಳು.

ಆಲ್ಲಿ ನಿಂತ ನನಗೆ ೦೯/೧೧ ರ ವಿಮಾನಗಳು ಕಟ್ಟಡಕ್ಕೆ ಅಪ್ಪಳಿಸುವ ಆ ವಿದ್ವಂಸಕಾರಿ ದೃಶಗಳು ಪದೆಪದೇ ತಲೆಯಲ್ಲಿ ಸುತ್ತುತ್ತ ಇತ್ತು. ಒಟ್ಟು ಮೃತರಾದವರು ಸುಮಾರು ೨೭೫೦ ಜನ. ಎಷ್ಟೊಂದು ಜೀವಗಳು ಕಮರಿಹೋದವು, ಎಷ್ಟೊಂದು ಕನಸುಗಳು ಛಿದ್ರವಾದವು..

ಆ ನಿಷ್ಪಾಪಿ ಜೀವಗಳು ಮಾಡಿದ ತಪ್ಪಾದರೂ ಏನು? ಆ ಕಟುಕರಿಗೆ ದಿಕ್ಕಾರವಿರಲಿ..

ಭಗ್ನಾವಶೇಷಗಳ ಮಧ್ಯೆ ಅದೇ ಸ್ಥಳದಲ್ಲಿ Freedom Tower ಎಂಬ ಹೊಸ ಕಟ್ಟಡ ತಲೆಯೆತ್ತುತಿದೆ. ಇದು WTC ಕಟ್ಟಡಕ್ಕಿಂತ ಎತ್ತರವಿರುತ್ತೆಂತೆ, ಅದರೆ ಅದು ಕೇವಲ ಸ್ಮಾರಕವಾಗಿರುತ್ತೆ...ಗ್ರೌಂಡ್ ಜೀರೋದಲ್ಲಿ ಮಡಿದ ಎಲ್ಲರಿಗೂ ನಮನ ಸಲ್ಲಿಸಿ ಮುನ್ನಡೆದೆವು.

ಮುಂದಿನ ಜಾಗ Empire State Building ಎನ್ನುವ ಇನ್ನೊಂದು ಗಗನಚುಂಬಿ ಕಟ್ಟಡ.

WTC ಹೋದ ನಂತರ ನ್ಯೂಯಾರ್ಕನ ಅತ್ಯಂತ ಎತ್ತರದ ಕಟ್ಟಡ.ನಾವು ಹೋದಾಗ ವಿಪರೀತ ಜನಸಂದಣಿ.೧ ಗಂಟೆ ಸರದಿಯಲ್ಲಿ ಕಾಯ್ದ ನಂತರ ಕಟ್ಟಡದ ಮೇಲ್ಛಾವಣಿ ಮುಟ್ಟಿದೆವು.ನಿಜಕ್ಕೂ ಅಲ್ಲಿಂದ ನ್ಯೂಯಾರ್ಕ್ ರಮಣೀಯವಾಗಿ ಕಾಣುತಿತ್ತು. ರಾತ್ರಿಯ ಆ ಮಿನುಗುವ ವಿದ್ಯುತ್ ದೀಪಗಳಲ್ಲಿ ವಿವಿಧ ಕಟ್ಟಡಗಳು,ರಸ್ತೆಗಳು ಹಾಗು ಸೇತುವೆಗಳು ಸುಂದರವಾಗಿ ಕಾಣಿಸುತ್ತಿದ್ದವು.ನಾವು ತೆಗೆದುಕೊಂಡ 'ಟೋನಿ ಆಡಿಯೋ' ಅಲ್ಲಿಂದ ಕಾಣುತ್ತಿದ್ದ ಎಲ್ಲ ಕಟ್ಟಡಗಳು-ಸೇತುವೆಗಳ ಬಗ್ಗೆ ಚೆನ್ನಾಗಿ ವಿವರಣೆ ನೀಡುತಿತ್ತು. ಎಂಪೈರ್ ಸ್ಟೇಟ್ ಕಟ್ಟಡದಿಂದ ಹೊರಬಂದಾಗ ರಾತ್ರಿ ೧೦ ಗಂಟೆ. ಅಲ್ಲಿಂದ ಇನ್ನೊಂದು ಟ್ಯಾಕ್ಸಿ ಹಿಡಿದು ನಮ್ಮ ಮುಂದಿನ ಜಾಗ Times Sqaure ಗೆ ಹೊರಟೆವು.

ಟೈಂ ಸ್ಕ್ವೇರ್‍ನಲ್ಲಿ ಟ್ಯಾಕ್ಸಿಯಿಂದ ಇಳಿಯುತ್ತಿಂದತೆ ಯಾವುದೋ ಮಯಾಲೋಕದಲ್ಲಿ ಇಳಿದಿವೇನೋ ಅನ್ನಿಸಿತು. ಎಲ್ಲಿ ನೋಡಿದರೂ ಜಗಮಗಿಸುವ ಕಟ್ಟಡಗಳು, ಕಣ್ಣು ಕೋರೈಸುವ ಬಣ್ಣಬಣ್ಣದ ಜಾಹೀರಾತು ಫಲಕಗಳು ಮತ್ತು ವರ್ಣಮಯ ಜನಸಾಗರ ! ಆರಾಮವಾಗಿ ತಿರುಗಾಡುತ್ತ, window shopping ಮಾಡುತ್ತ, Starbucks-Cola ಹೀರುತ್ತ ತೇಲುವ ಜನ, ರಸ್ತೆ ಬದಿಯಲ್ಲಿ portrait-painting ಮಾಡಿ ಮಾರುವ ಕಲಾವಿದರು.ನಮ್ಮ ಬೆಂಗಳೂರಿನ ಎಂಜಿ-ಬ್ರಿಗೇಡ್‍ನ ಹಿರಿಯಣ್ಣನಂತೆ ಇತ್ತು ಆ ಟೈಂ ಸ್ಕ್ವೇರ್‍.

ಸಾಕಷ್ಟು ತಿರುಗಾಡಿದ ನಂತರ ಅಲ್ಲಿಯ ಇದ್ದ ಇಟಾಲಿಯನ್ ರೆಸ್ಟೋರೆಂಟ್‍ನಲ್ಲಿ ಗಾರ್ಲಿಕ್ ಬ್ರೆಡ್-ಪಾಸ್ತ ಸವಿದೆವು. ಊಟದ ನಂತರ ಇನ್ನೊಂದು ಸುತ್ತು ಟೈಂ ಸ್ಕ್ವೇರ್‍ ಪ್ರದಕ್ಷಿಣೆ.ಹೋಟೆಲ್‍ಗೆ ಮರಳಬೇಕುನ್ನುವಾಗ ನಾವು ಹೋಟೆಲ್ ವಿಳಾಸ ಮರೆಯುವದೇ..ದೀಪ್ತೀ ಹೋಟೆಲ್ ನಂಬರ್‍ಗೆ ಕರೆ ಮಾಡಿ ಅದು 146 street,7th Avenueದಲ್ಲಿ ಇದೆಯೆಂದು ಹೇಳಿದಳು.ನಾವೆಲ್ಲ ಟ್ಯಾಕ್ಸಿ ಹಿಡಿದು ಆ ವಿಳಾಸಕ್ಕೆ ಹೊರಟೆವು.ಆ ವಿಳಾಸ ಮುಟ್ಟಿದರೆ ಅಲ್ಲಿ ನಮ್ಮ ಹೋಟೆಲ್ ಇಲ್ವೇ !! ಮತ್ತೆ ಕರೆ ಮಾಡಿದಾಗ ತಿಳಿದಿದ್ದು ಆ ಹೋಟೆಲ್ ಇರುವುದು 46 street,7th Avenue. ನಾವು ಟೈಂ ಸ್ಕ್ವೇರ್‍‍ನಿಂದ ಟ್ಯಾಕ್ಸಿ ಹಿಡಿದದ್ದು 47 street ನಿಂದ !! ಅಂದರೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದರು ಎನ್ನುವಂತೆ ಮುಂದಿನ ಬೀದಿಯಲ್ಲಿದ್ದ ಹೋಟೆಲ್ ಮುಟ್ಟಲು ಎಲ್ಲ ಕಡೆ ಸುತ್ತಾಡಿ ಮರಳಿ ಬಂದಾಯಿತು !! ಹೋಟೆಲ್ ಮುಟ್ಟಿದ ನಂತರ ಕಿಡಕಿಯಿಂದ ಟೈಂ ಸ್ಕ್ವೇರ್‍‍ ನೋಡಿ ಒಬ್ಬರಿಗೊಬ್ಬರು ಗೇಲಿಮಾಡಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕೆವು !

ಮರುದಿನದ ಕಾರ್ಯಕ್ರಮದಲ್ಲಿ ಮೊದಲು ಸೆಂಟ್ರಲ್ ಪಾರ್ಕ್ ಭೇಟಿ.

ನಮ್ಮ ಹೋಟೆಲ್‍ನಿಂದ ನಡೆದುಕೊಂಡು ಹೋಗುವಷ್ಟು ಹತ್ತಿರದಲ್ಲಿತ್ತು ಸೆಂಟ್ರಲ್ ಪಾರ್ಕ್ . ಕಾಂಕ್ರೀಟ್ ಜಂಗಲ್‍ನಂತಿರುವ ನ್ಯೂಯಾರ್ಕನ ಮಧ್ಯೆದಲ್ಲಿದೆ ಈ ವಿಶಾಲ ಪಾರ್ಕ್.ಒಂದು ತರ ಆ ನಗರದ ಶ್ವಾಸಕೋಶವಿದ್ದ ಹಾಗೆ. ಆ ಪಾರ್ಕ್‍ ಹೊಕ್ಕು ತಿರುವಂತೆ ನಮಗೆ ಸಿಕ್ಕವರು ಜಾಗ್ ಮಾಡುವವರು, ಸೈಕ್ಲಿಂಗ್ ಮಾಡುವವರು, ಸ್ಕೇಟ್ ಮಾಡುವವರು..ಒಂದು ರೀತಿಯ active ವಾತಾವರಣ.

ಅಲ್ಲಿನ ಬೆಂಚ್‍ಗಳಲ್ಲಿ ಕುಳಿತು ಅಲ್ಲಿದ್ದ ಒಬ್ಬ ದೇಸಿ ಅಂಗಡಿಯವನಿಂದ ಐಸ್‍ಕ್ರೀಂ ಕೊಂಡು, ತಿಂದು ಅನಂದಿಸಿದೆವು.ಅಲ್ಲಿ ಸುತ್ತಾಡಿದ ಮೇಲೆ ಮರಳಿ ಟೈಂ ಸ್ಕ್ವೇರ್‍‍ ಗೆ .ಅಲ್ಲಿನ ಫೀಡ್ಜಾ ಅಂಗಡಿಯಲ್ಲಿ ಎಲ್ಲ ತರದ ವೆಜಿ ಫೀಡ್ಜಾದ ರುಚಿ ನೋಡಿದೆವು. ಮದ್ಯಾಹ್ನದ ವಿಮಾನ ಹಿಡಿಯಬೇಕಿದ್ದ ದೀಪ್ತಿಗೆ ವಿದಾಯ ಹೇಳಿ ನಾವು ಮತ್ತೆ ಸೆಂಟ್ರಲ್ ಪಾರ್ಕ್ ಹೊಕ್ಕೆವು.

ಸೆಂಟ್ರಲ್ ಪಾರ್ಕ್ ನಲ್ಲಿ ಸೈಕ್ಲಿಂಗ್ ಮಾಡುವ ಐಡಿಯಾ ಬಂದದ್ದು ಅರ್ಚನಾಗೆ. ೨ ಗಂಟೆಗೆ ೨೦ ಡಾಲರ್ ಕೊಟ್ಟು ಪಾರ್ಕ್ ಹೊರಗಿದ್ದ ಸೈಕಲ್‍ಗಳನ್ನು ತಗೊಂಡು ನಮ್ಮ ಸೆಂಟ್ರಲ್ ಪಾರ್ಕ್ ಯಾತ್ರೆ ಶುರುವಾಯಿತು.ನನಗೋ ಸೈಕ್ಲಿಂಗ್ ಮಾಡಿ ತುಂಬಾ ದಿವಸಗಳಾಗಿತ್ತು.ಮೊದಮೊದಲಿಗೆ ಸ್ಪಲ್ಪ ಕಷ್ಟಪಟ್ಟ ನಂತರ ಸಲಿಸಾಗಿ ಮುನ್ನಡೆಯಿತು ಸೈಕಲ್. ೨ ಗಂಟೆ ಪಾರ್ಕ್ನಲ್ಲಿ ಸೈಕಲ್ ಮಾಡಿ ದಣಿದ ನಂತರ ಆಯಾಸವಾಗಿತ್ತು, ಆದರೆ ಮನ ಉಲ್ಲಾಸಿತವಾಗಿತ್ತು. ಮತ್ತೊಮ್ಮೆ ಟೈಂ ಸ್ಕ್ವೇರ್‍‍ ಹೊಕ್ಕು ಅಲ್ಲಿದ starbucksನಲ್ಲಿ ಪಾನೀಯ ಹೀರಿ,ಹೋಟೆಲ್‍ಗೆ ತೆರಳಿ,ಅಲ್ಲಿಂದ ಮರಳಿ JFK-LGAಗೆ ನಮ್ಮ ವಿಮಾನ ಹಿಡಿಯ ಹೊರಟೆವು.

ಹೀಗೆ ಮುಕ್ತಾಯವಾಯಿತು ನಮ್ಮ eventful ನ್ಯೂಯಾರ್ಕ್ ಪ್ರವಾಸ !

ನಾವು ಅಂದುಕೊಂಡಂತೆ, ನಾವು ಯೋಜನೆ ಮಾಡಿದಂತೆ ಸುಗಮವಾಗಿ ಸಾಗಲಿಲ್ಲ ಈ ಪ್ರವಾಸ.ಆದರೆ ಸ್ನೇಹಿತರ ಜೊತೆ ಕಳೆದ ಆ ಸವಿಕ್ಷಣಗಳ ಮುಂದೆ ಇವೆಲ್ಲ ಸಣ್ಣ ತೊಡಕುಗಳು ಯಾವ ಲೆಕ್ಕ !!

Friday, July 14, 2006

ನಯಾಗರದ ಜಲಸಿರಿ

ಭಾಫೆಲೋದ ಆ ಹೋಟೆಲ್ ನಲ್ಲಿ ದಿಂಬಿಗೆ ತಲೆ ಇಟ್ಟದೊಂದೆ ನೆನಪು. ಕಾಯ್ದು ಕುಳಿತಿದ್ದ ನಿದ್ರೆ ಅನ್ನುವ ಕಿನ್ನರಿ ತಡಮಾಡದೆ ನಮ್ಮನ್ನು ಅವಾರಿಸಿಕೊಂಡದ್ದಾಯಿತು. ಬೆಳಿಗ್ಗೆ ಆದಷ್ಟು ಬೇಗ ಎದ್ದು ನಯಾಗರಕ್ಕೆ ಹೊರಡುವ ಯೋಚನೆ ಯೋಚನೆಯಾಗಿಯೇ ಉಳಿಯಿತು.ನಾವೆಲ್ಲ ಎದ್ದು ಸಿದ್ದವಾದಾಗ ಬೆಳಿಗ್ಗೆ ೧೧ ಗಂಟೆ.

ನಿದ್ದೆಗೊಮ್ಮೆ ನಿತ್ಯಮರಣ ಎದ್ದ ಸಲ ನವೀನ ಜನನ...

ಒಂದು ಒಳ್ಳೆಯ ನಿದ್ದೆ ದಣಿದ ದೇಹವನ್ನು ಹೇಗೆ ಉಲ್ಲಾಸಿತಗೊಳಿಸುತ್ತೆ! ಆ ಒಂದು ಸುನಿದ್ದೆಯ ನಂತರ ನಮ್ಮ ಗೆಳೆಯರಲ್ಲಿ ಹೊಸ ಉತ್ಸಾಹ ಪುಟಿಯುತಿತ್ತು.ಭಾಫೆಲೋದಿಂದ ೫೦ ಮೈಲಿ ದೂರದಲ್ಲಿನ ನಯಾಗರದೆಡೆಗೆ ಶುರುವಾಯಿತು ನಮ್ಮ ಪಯಣ .ನಯಾಗರ ನಗರ ಮುಟ್ಟಿದಾಗ ೧ ಗಂಟೆ.ಕಾರ್ ಪಾರ್ಕಿಂಗ್ ಹುಡುಕೋದರಲ್ಲಿ ಇನ್ನೊಂದು ಅರ್ಧಗಂಟೆ.ಕೊನೆಗೆ ಯಾವುದೋ ಪೇಡ್ ಪಾರ್ಕಿಂಗ್ ಅಲ್ಲಿ ಕಾರ್ ನಿಲ್ಲಿಸಿ, ನಯಾಗರ ಇನ್‍ಪರ್ಮೇಷನ್ ಸೆಂಟರ್‍ಗೆ ಲಗ್ಗೆ ಹಾಕಿದೆವು.

ನಯಾಗರ ಸೊಬಗು ಸವಿಯಲು ಅಲ್ಲಿರುವ ಕೆಲವು ಜಲಪ್ರವಾಸಗಳನ್ನು ಮಾಡಬೇಕೆಂದು ನಮ್ಮ ಗೂಗಲ್ ಜ್ಞಾನ ಹೇಳುತಿತ್ತು.ಸೆಂಟರ್‍ನಲ್ಲಿ ನೀಡಿದ ಮಾಹಿತಿಯು ಅದನ್ನು ಪುಷ್ಟೀಕರಿಸುತಿತ್ತು.ಅಲ್ಲಿದ್ದ 'ಸಂಪೂರ್ಣ ನಯಾಗರ ದರ್ಶನ' ಪ್ರವಾಸಕ್ಕೆ ಟಿಕೇಟ್ ಕೊಂಡೆವು.ಅದರೆ ನಮ್ಮ ಪ್ರವಾಸ ಸಂಜೆ ೪:೩೦ಗೆ ಶುರುವಾಗಲಿತ್ತು.ಅಂದರೆ ಇನ್ನೂ ೨ ಗಂಟೆಗಳ ಸಮಯವಿತ್ತು.ನಮ್ಮ ಮೊದಲಿನ ಯೋಜನೆ ಪ್ರಕಾರ ನಾವು ನಯಾಗರದಿಂದ ೪-೫ ಗಂಟೆಗೆ ಮರಳಿ ಹೊರಡಬೇಕಿತ್ತು.ಈಗ ನೋಡಿದರೆ ನಮ್ಮ ಪ್ರವಾಸ ಆರಂಭವಾಗುವುದೇ ೪:೩೦ ಗೆ ! ಪ್ರವಾಸ ಅಂದರೆ ಇದೇ ಅಲ್ವಾ..ಎನೋ ಯೋಜನೆ ಹಾಕಿಕೊಂಡು ಹೋಗೋದು,ಅಲ್ಲಿ ಎನೋ ಆಗುತ್ತೆ, ನಂತರ ಯೋಜನೆಗಿಂತ ಭಿನ್ನವಾಗಿ ಇನ್ನೇನೋ ಆಗುತ್ತೆ.ಕೊನೆಗೆ ಹಂಗೆ ಆಗಿದ್ದೆ ಒಳ್ಳೆದಾಯಿತು ಅನಿಸುತ್ತೆ!

ತಾಳ ಹಾಕುತ್ತಿದ್ದ ಹೊಟ್ಟೆಯನ್ನು ತಣಿಸಲು ಹತ್ತಿರದಲ್ಲೇ ಇದ್ದ 'ಪಂಜಾಬಿ ಢಾಭಾ'ಕ್ಕೆ ನುಗ್ಗಿದೆವು. ಅಂದಾಗೆ ಭಾರತದ ಯಾವುದೋ ಪಟ್ಟಣದಲ್ಲಿದ್ದೆವೆನೋ ಅನ್ನುವ ಭಾವನೆ ಬರುವಷ್ಟು ದೇಸಿಗಳಿದ್ದರು ನಯಾಗರದಲ್ಲಿ .ಅದು ಯಾವುದೇ ಕೋನದಿಂದ ಢಾಭಾದ ತರ ಇದ್ದಿಲ್ಲವಾದರೂ ದೇಸಿ ಊಟ ಸವಿಯುವ ಉದ್ದೇಶದಿಂದ ಹೊಕ್ಕಿದ್ದಾಯಿತು.ಸರದಾರಜೀಯ ಹೋಟೆಲ್‍ನಲ್ಲಿ ಬುಫೆ ಊಟ ಮತ್ತು ಹರಟೆ ನಡೆಯಿತು.

ನಯಾಗರ ಪ್ರವಾಸ ಆರಂಭ ಮಾಡುವ ಮುನ್ನ ನಯಾಗರದ ಬಗ್ಗೆ ಸ್ಪಲ್ಪ ಮಾಹಿತಿ.ನಯಾಗರ ಇರುವುದು ಆಮೇರಿಕಾ ಮತ್ತು ಕೆನಡಾ ದೇಶಗಳ ಗಡಿಯಲ್ಲಿ. ಹತ್ತಿರದಲ್ಲೆ ಕಾಣುತಿತ್ತು ಗಡಿ ಚೆಕ್‍ಪೋಸ್ಟ್ .ನಯಾಗರವೆಂದರೆ ಕೇವಲ ಒಂದು ಜಲಪಾತವಲ್ಲ.ಅಲ್ಲಿರೋದು ೩ ಜಲಪಾತಗಳು - ಆಮೇರಿಕನ್ ಜಲಪಾತ,ಬ್ರೈಡಲ್ ವೇಲ್ ಜಲಪಾತ ಮತ್ತು ಕೆನಡಿಯನ್ ಜಲಪಾತ.

ನಮ್ಮ ನಯಾಗರ ದರ್ಶನದ ಮೊದಲನೆಯ ಭಾಗದಲ್ಲಿ 'Maid of the Mist' ಅನ್ನುವ ಪ್ರವಾಸಕ್ಕೆ ಕರೆದೊಯ್ಯದರು. ಹೋಗುತ್ತಿದ್ದಂತೆ ಎಲ್ಲ ಪ್ರವಾಸಿಗರಿಗೆ ನೀಲಿ ಬಣ್ಣದ ಜಾಕೇಟ್‍ಗಳನ್ನು ನೀಡಲಾಯಿತು.ಆ ಪ್ಲಾಸ್ಟಿಕ್ ಜಾಕೇಟ್‍ನಲ್ಲಿ ನಾವೆಲ್ಲ ಯಾವುದೋ ಗ್ರಹದಿಂದ ಇಳಿದವರ ತರ ಕಾಣುತ್ತಿದ್ದೆವು! ಅಂದಾಗೆ 'ಮೇಡ್ ಆಫ್ ದಿ ಮಿಸ್ಟ್' ಅನ್ನೋದು ನಯಾಗರ ಜಲಪಾತಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ದೋಣಿಯ ಹೆಸರು. ದೋಣಿ ಜಲಪಾತದೆಡೆಗೆ ಸಾಗುತ್ತಿದ್ದಂತೆ ಜಾಕೇಟ್‍ನ ಮಹಿಮೆ ಅರಿವಾಗತೊಡಗಿತು.

ಮೊದಲು ಸಿಕ್ಕಿದ್ದು ಅಮೇರಿಕನ್ ಜಲಪಾತ.

೧೦೬೦ ಅಡಿ ಅಗಲ ಮತ್ತು ೧೮೦ ಅಡಿ ಎತ್ತರದ ಆಗಾಧ ಜಲಪಾತ.ವೇಗವಾಗಿ ಬೀಸುತ್ತಿದ್ದ ಗಾಳಿ ಜಲಪಾತದ ನೀರ ಹನಿಗಳನ್ನು ತಂದು ನಮ್ಮ ಮೇಲೆ ಸಿಂಚನ ಮಾಡುತಿತ್ತು.ಜಾಕೇಟ್ ಇಲ್ಲದಿದ್ದರೆ ಎಲ್ಲರೂ ತೊಯ್ದು ತುಪ್ಪೆಯಾಗುತ್ತಿದ್ದೆವೋ ಎನೋ..

ಅಷ್ಟೊಂದು ನೀರು ಅಷ್ಟೊಂದು ಎತ್ತರದಿಂದ ದುಮ್ಮಿಕ್ಕಿತ್ತಿರುವದನ್ನು ನೋಡುವುದೇ ಚಂದ. ಆ ನೀರಿನ ಬಿಂದುಗಳು ಸೂರ್ಯ ಕಿರಣಗಳ ಜೊತೆ ಚೆಲ್ಲಾಟವಾಡಿ, ಜಲಪಾತದ ಮೇಲ್ಗಡೆ ಕಾಮನಬಿಲ್ಲು ಮೂಡಿತ್ತು.ಅತ್ಯಂತ ಸೊಬಗಿನ ದೃಶಾವಳಿಗಳಲ್ಲಿ ಒಂದು. ಅಮೇರಿಕನ್ ಜಲಪಾತದ ದೃಶ್ಯವೈಭವವನ್ನು ಇನ್ನೂ ಮೆಲುಕು ಹಾಕುತ್ತಿದ್ದಂತೆ ಹತ್ತಿರದಲ್ಲೆ ಭೋರ್ಗೆರವ ನೀರಿನ ಸದ್ದು.

ನಮ್ಮ ದೋಣಿ ಸ್ಪಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ಕಂಡಿತು 'ಹಾರ್ಸ್ ಶ್ಯೂ'.

ಕುದುರೆಲಾಳ ಅಥವಾ 'U' ಆಕಾರದ ಆ ಕೆನಡಿಯನ್ ಜಲಪಾತ.ದೋಣಿ ಆ 'ಹಾರ್ಸ್ ಶ್ಯೂ' ಒಳಗೆ ತೇಲುತ್ತಿದ್ದಂತೆ ಕಂಡದ್ದು.......ಎಡಕ್ಕ..ಬಲಕ್ಕೆ..ಎದುರಿನಲ್ಲಿ... ಹುಚ್ಚೆದ್ದು ದುಮುಕುತಿರುವ ಜಲರಾಶಿ.ನಾ ಕಂಡ ಇನ್ನೊಂದು ಮರೆಯಲಾಗದಂತ ದೃಶ್ಯ.

೨೬೦೦ ಅಡಿ ಅಗಲದ,೧೭೩ ಅಡಿ ಎತ್ತರದ ಆ ಜಲಪಾತ ಮುಂದೆ ನಿಂತಾಗ ಎನೋ ಅವ್ಯಕ್ತ ಸಂತಸ.ದೋಣಿಯ ಧ್ವನಿವರ್ದಕದಲ್ಲಿ 'Ladies & Gentlemen, This is Niagara' ಅನ್ನೋ ಘೋಷಣೆ ಮಾಡುತ್ತಿದ್ದಂತೆ ದೋಣಿಯಲ್ಲಿ ಕರತಾಡನ ಮತ್ತು ಆನಂದದ ಕೇಕೆ.

ಆ ಕೆನಡಿಯನ್ ಜಲಪಾತದಿಂದ ದೋಣಿ ನಮ್ಮನ್ನು ಮರಳಿ ಕರೆತರುವಾಗ ತಿರುತಿರುಗಿ ಅದನ್ನು ನೋಡಿದ್ದಾಯಿತು.ನಿಸರ್ಗದ ಮೋಹಕ ಮತ್ತು ಅಷ್ಟೆ ದೈತ ಶಕ್ತಿಯ ಮುಂದೆ ಮಾನವ ಎಷ್ಟು ಕುಬ್ಜ ಎನಿಸಿತು. ದಡಕ್ಕೆ ಬಂದು ಅಮೇರಿಕನ್ ಜಲಪಾತವನ್ನು ಇನ್ನೊಂದು ಹತ್ತಿರದ view point ನಿಂದ ನೋಡಿದೆವು.

ಅಲ್ಲಿಂದ ನಮ್ಮನ್ನು ಕರೆದುಕೊಂಡು ಹೊರಟಿತು ನಮ್ಮ ನಯಾಗರ ಪ್ರವಾಸ ಬಸ್ಸು.ನಮ್ಮ ನಯಾಗರ ದರ್ಶನದ ಎರಡನೇಯ ಚರಣದಲ್ಲಿ 'Cave of the Winds' ಅನ್ನುವ ಇನ್ನೊಂದು ಪ್ರವಾಸ ಕಾದಿತ್ತು. ಇಲ್ಲಿ ನಮೆಗೆಲ್ಲ ಹಳದಿ ಜಾಕೇಟ್ ಜೊತೆಗೆ ಸ್ಲಿಪರ್‍ಗಳನ್ನು ನೀಡಿದರು.ತುಂಬಾ ಉದ್ದದ ಸರದಿ.ಸಾಲಿನಲ್ಲಿ ನಿಂತೆ 'ಫ್ರೆಂಚ್ ಫ್ರೈ'-ಸೇಬುರಸ ಸ್ವಾಹ ಮಾಡಿದೆವು. ನಮ್ಮ ಸರದಿ ಬಂದಾಗ ಮುಸ್ಸಂಜೆಯಾಗಿತ್ತು.ನಾನು ಮೊದಲೇ ಹೇಳಿದಾಗೆ ಇಲ್ಲಿರುವ ೩ ಜಲಪಾತಗಳು.ಅವುಗಳ ಪೈಕಿ ಚಿಕ್ಕದು 'Bridal Veil' ಜಲಪಾತ.ಈ ಚರಣದಲ್ಲಿ ನಾವು ಈ ಒಂದು ಜಲಪಾತದ ಬುಡ ತಲುಪಲಿದ್ದೆವು.

ಸ್ಪಲ್ಪ ದೂರ ಸಾಗಿದಂತೆ ಕಂಡಿತು ರಭಸವಾಗಿ ಬೀಳುತ್ತಿದ್ದ ಆ ಜಲಪಾತ.ಕನ್ನಡದಲ್ಲಿ 'ವಧುವಿನ ಸೆರಗು' ಎಂಬ ಸುಂದರ ಹೆಸರಿನ ಆ ಜಲಪಾತ. ಅಲ್ಲಿರುವ ಮರದ ಅಟ್ಟಣಿಗೆಗಳನ್ನು ಏರಿ ಮುಂದೆ ಹೋದರೆ ಸೀದಾ ಜಲಪಾತದ ಕೆಳಗೆ. ಧೋ ಅಂತಾ ಸುರಿಯುತ್ತಿದ್ದ ಜಲಪಾತದ ಕೆಳಗೆ ನಿಂತಾಗ ಅ ಜಲಶಕ್ತಿಯ ಅರಿವಾಯಿತು.ಎಷ್ಟೊಂದು ಬಲವಿದೆ ಅದರಲ್ಲಿ.ನೀರು ಕಂಡರೆ ಎಂತವರಿಗೂ ಆಡಬೇಕೆನಿಸುತ್ತೆಲ್ವಾ.ನಮ್ಮ ತಲೆಯ ಮೇಲಿದ್ದ ಆ ಪ್ಲಾಸ್ಟಿಕ್ ಟೊಪ್ಪಿಗೆಯಂತದನ್ನು ಕಳಚಿ ಜಲಪಾತದ ಕೆಳಗೆ ಹೋಗಿ ನಿಂತೆವು.ಪ್ಲಾಸ್ಟಿಕ್ ಜಾಕೀಟ್-ಸ್ಲಿಪರ್ ಪೂರ್ತಿ ಉಪಯೋಗವಾಯಿತು.ಅದ್ಬುತ ಅನುಭವ!

ಅಲ್ಲಿಂದ ಪಕ್ಕದಲ್ಲಿದ್ದ ಅಮೇರಿಕನ್ ಜಲಪಾತ ಇನ್ನೊಂದು ಕೋನದಿಂದ ಮೋಹಕವಾಗಿ ಕಾಣುತಿತ್ತು.ಹಾಗೆಯೇ ಕೆನಡಾ ಮತ್ತು ಅಮೇರಿಕೆಯ ಮಧ್ಯವಿರುವ 'ರೈನ್ ಬೋ' ಸೇತುವೆಯ ನೋಟ ಸೊಗಸಾಗಿತ್ತು.ಸೂರ್ಯ ದಿನದ ತನ್ನ ಕೊನೆಯ ಕ್ಷಣಗಳನ್ನು ನಯಾಗರದ ಜೊತೆ ಕಳೆಯುತ್ತಿರುವಂತೆ ಭಾಸವಾಗುತಿತ್ತು.'ಕೇವ್ ಆಫ್ ದಿ ವಿಂಡ್ಸ್' ನಿಂದ ಹೊರಬರುತ್ತಿದ್ದಂತೆ ಕೆನಡಾ ಗಡಿಯಿಂದ ವಿದ್ಯುತ್ ಬೆಳಕು ನಯಾಗರದ ಮೇಲೆ ಬೀಳತೊಡಗಿತು.ಎಲ್ಲೆಡೆ ಪೂರ್ತಿ ಕತ್ತಲೆ ಕವಿದಿತ್ತು.

ನಮ್ಮ ನಯಾಗರ ಪ್ರವಾಸದ ಗೈಡ್ ಹ್ಯಾರಿ ನಮಗೆ ಇನ್ನು ಸ್ವಲ್ಪ ಹೊತ್ತಿನಲ್ಲಿ ಸಿಡಿಮದ್ದಿನ ಶೋ ಶುರುವಾಗುವದೆಂದು, ಅದನ್ನು ಎಲ್ಲಿಂದ ನೋಡಿದರೆ ಚೆನ್ನಾ ಎಂಬ ಮಾಹಿತಿ ನೀಡಿದನು.ಈಗ ನಾವುಗಳು ಅಮೇರಿಕನ್ ಜಲಪಾತ ಮತ್ತು ಬ್ರೈಡಲ್ ವೇಲ್ ಜಲಪಾತಗಳ ಮಧ್ಯೆವಿರುವ 'ಗೋಟ್ ದ್ಪೀಪ' ದಲ್ಲಿ ನಿಂತೆವು.

ರಾತ್ರಿಯಲ್ಲಿ ನಯಾಗರದ್ದು ವಿಭಿನ್ನ ಸೌಂದರ್ಯ.ಕೆಂಪು,ನೀಲಿ,ಹಸಿರು ಬಣ್ಣಗಳ ಬೆಳಕಿನಲ್ಲಿ ಅದು ಇನ್ನೂ ಸುಂದರವಾಗಿ ಕಾಣುತಿತ್ತು. ನದಿಯ ಆ ದಡದಲ್ಲಿ, ಅದೇ ಕೆನಡಾದಲ್ಲಿ ಎತ್ತರವಾದ ಕಟ್ಟಡಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಲ್ಲಿ ಜಗಮಗಿಸುತ್ತಿದ್ದವು.ಸರಿಯಾಗಿ ೧೦ ಗಂಟೆಯಾಗುತ್ತಿದ್ದಂತೆ ಕೆನಡಾ ಗಡಿಯಿಂದ ಶುರುವಾಯಿತು ಸಿಡಿಮದ್ದಿನ ಶೋ.ಬಣ್ಣದ ಬಣ್ಣದ ಪಟಾಕಿಗಳು ಆಕಾಶದಲ್ಲಿ ಸಿಡಿದು ಅಲ್ಲಿ ಚಿತ್ತಾರಗಳನ್ನು ರಚಿಸುತ್ತಿದ್ದವು.ಪಕ್ಕಕ್ಕೆ ದುಮುಕುತ್ತಿರುವ ನಯಾಗರ, ಆಕಾಶದಲ್ಲಿ ಬಾಣ-ಬಿರುಸುಗಳ ಸಿಡಿತ.ಯಾವುದೋ ಸ್ವಪ್ನ ಲೋಕದಲ್ಲಿ ವಿಹಾರಿಸುತ್ತಿದೆವೆಯೇ ಅನ್ನೋ ಭಾವನೆ..

ಮಳೆಯ ಕಾರಣ ಸಿಡಿಮದ್ದು ಶೋ ೫ ನಿಮಿಷ ಬೇಗ ನಿಂತರೂ ಮನ ಹರ್ಷಿತವಾಗಿತ್ತು.ಮರಳಿ ಬಸ್ಸು ನಮ್ಮನ್ನು ನಯಾಗರ ಸೆಂಟರ್ ಹತ್ತಿರ ಬಿಟ್ಟಾಗ ರಾತ್ರಿ ೧೧ ಗಂಟೆ.ಅಲ್ಲಿದ್ದ ಇನ್ನೊಂದು ಭಾರತೀಯ ಹೋಟೆಲ್‍ಗೆ ರಾತ್ರಿ ಭೋಜನಕ್ಕೆ ತೆರಳಿದೆವು. ಹೋಟೆಲ್‍ನಲ್ಲಿ ಒಬ್ಬ ದೇಸಿ ಮತ್ತು ಹೋಟೆಲ್ ‍ಮಾಲೀಕನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆಯುತಿತ್ತು. ನಾವು ಊಟ ಮಾಡಿ ಹೊರಡುತ್ತಿದ್ದಂತೆ ಅಲ್ಲಿಯವರಿಗೆ ವಾಗ್ದಾಳಿಯಲ್ಲಿ ತೊಡಗಿದ್ದ ಅವರಿಬ್ಬರು ರಾಜಿಯಾಗಿ ಹೋಟೆಲ್ ಮಾಲೀಕ ಆ ದೇಸಿಯನ್ನು 'ಭೂರಾ ಮತ್ ಸಮ್ಜನಾ ಭೇಟ' ಅಂದದ್ದನ್ನು ನೋಡಿ ನಮಗೆ ಮುಸಿಮುಸಿ ನಗು..

ಸ್ಪಲ್ಪ ಒದ್ದೆಯಾಗಿದ್ದ ಬಟ್ಟೆಗಳನ್ನು ಬದಲಿಸಿ, ಕಾರಿಗೆ ಊಟ ಮಾಡಿಸಿ(ಪೆಟ್ರೋಲ್ ಕುಡಿಸಿ) ನಯಾಗರ ಬಿಟ್ಟಾಗ ರಾತ್ರಿ ೧ ಗಂಟೆ. ನಮ್ಮ ಪ್ರಯಾಣ ಮರಳಿ ನ್ಯೂಯಾರ್ಕ್ ಗೆ.ದೂರ ೪೫೦ ಮೈಲಿ.ಓಪನಿಂಗ್ ಬ್ಯಾಟ್ಸ್ ‍ಮೆನ್ ಆಗಿ ನಾನು ಡ್ರೈವರ್ ಸ್ಥಾನದಲ್ಲಿ ಅಸೀನನಾದೆನು.ಮತ್ತೆ ಶುರುವಾಯಿತು ಫ್ರೀ ವೇ ಸವಾರಿ.

ಬೆಳಗಿನ ಹೊತ್ತಿನ ಡ್ರೈವ್ ರಾತ್ರಿಯ ಡ್ರೈವ್‍ಗಿಂತ ವಿಭಿನ್ನವಾಗಿತ್ತು. ಹಿಂದಿನ ಸೀಟಿನಲ್ಲಿದ್ದ ಅರ್ಚನಾ ಮತ್ತು ಪೊನ್ನಮ್ಮ ಆಯಾಸದಿಂದ ನಿದ್ರೆಗೆ ಜಾರಿದ್ದರು. ದೀಪ್ತೀ ಐ-ಪೋಡ್ ನಲ್ಲಿ request show ಮುಂದುವರಿಸುತ್ತಿದ್ದಳು. ನಮ್ಮ ಮುಂದಿನ ಬ್ಯಾಟ್ಸ್ ಮೆನ್ ಸುಪ್ರೀತನಿಗೆ ವಿಶ್ರಾಂತಿ ಕೊಡುವ ಉದ್ದೇಶದಿಂದ ಅವನಿಗೆ ಮಲಗಿಕೊಳ್ಳಲು ಹೇಳಿದೆವು.ಹಾಡು-ಮಾತುಗಳ ಮಧ್ಯೆ ದಾರಿ ಹೋಗಿದ್ದೆ ತಿಳಯಲಿಲ್ಲ.ನಾನು ಸುಪ್ರೀತ್‍ನ ಕೈಗೆ ಸ್ಟೇರಿಂಗ್ ಕೊಟ್ಟಾಗ ಬೆಳಗಿನ ೪:೩೦.ಹಾಗೆಯೇ ನಿದ್ದೆಗೆ ಜಾರಿದೆ.

ಎರಡು ಗಂಟೆಗಳ ನಂತರ ಎಚ್ಚರವಾದಗ ನ್ಯೂಯಾರ್ಕ್‍‍ಗೆ ಸಮೀಪದಲ್ಲಿದ್ದೆವು..

ಮುಂದಿನ ಭಾಗದಲ್ಲಿ...ನ್ಯೂಯಾರ್ಕ್ ನಗರ ವೀಕ್ಷಣೆ

Friday, July 07, 2006

ಸ್ವಾತಂತ್ರ್ಯ ದೇವತೆಯ ಮಡಿಲಲ್ಲಿ..

ಬರೆದು ಅದು ಯಾವ ಕಾಲ ಆಯಿತೋ ಎನೋ..

ನಾನು ಎಲ್ಲೋ ಕಾಣೆಯಾಗಿದೀನಿ ಅಂತಾ ತಿಳಕೊಂಡು ಕಂಪ್ಲೆಂಟ್ ಕೊಡೋಕೆ ಹೊರಟಿದ್ದರು ನನ್ನ ಬ್ಲಾಗ್ ಮಿತ್ರರು. ಅವರೆಲ್ಲ ಸೇರಿಕೊಂಡು 'ಕಾಣೆಯಾದವರು' ಪಟ್ಟಿಗೆ ನನ್ನ ಸೇರಿಸಿವುದಕ್ಕಿಂತ ಮುಂಚೆ ನಾನು ಬರೆಯೋದು ಒಳ್ಳೆಯದು!

ಎನಪ್ಪಾ ಆಯಿತು ಅಂದ್ರೆ..ಅಮೇರಿಕಾದ್ದು ಸ್ವಾತಂತ್ರ ದಿನಾಚರಣೆ ರಜೆಯ ಜೊತೆ ಇನ್ನೊಂದು ರಜೆ ಜಡಿದು , ನ್ಯೂಯಾರ್ಕ್ ಮತ್ತು ನಯಾಗರಕ್ಕೆ ಒಂದ್ನಾಲ್ಕು ದಿವಸ ಪ್ರವಾಸಕ್ಕೆ ಹೋಗಿದ್ದೆ. ಅದಕ್ಕೆ ಇಲ್ಲಿಂದ ಮಾಯಾ ಅಗಿದ್ದೆ. ಈಗ ಆ ನ್ಯೂಯಾರ್ಕ್ ಪ್ರವಾಸಗಥೆ ಜೊತೆ ನಿಮ್ಮ ಮುಂದೆ...

ಪ್ರವಾಸ ಹೋಗಿದೋಕ್ಕಿಂತ ಮುಂಚೆ ನನ್ನ ಜೊತೆ ಬಂದು ನನ್ನ ಸಹಿಸಿಕೊಂಡವರ ಬಗ್ಗೆ ಒಂದೆರಡು ಮಾತು ! ಫಿನಿಕ್ಸ್ ನಿಂದ ಸುಪ್ರೀತ್, ಡೆನವರ್ ನಿಂದ ಅರ್ಚನ, ಕುಪರ್ಟಿನೋ ದಿಂದ ದೀಪ್ತೀ ನನ್ನ ಸಹಪ್ರವಾಸಿಗರು. ಎಲ್ಲರೂ ಕನ್ನಡಿಗರು, ಬೆಂಗಳೂರಿನಲ್ಲಿದ್ದಾಗ ೨-೩ ವರ್ಷ ನಾವೆಲ್ಲಾ ಒಟ್ಟಿಗೆ ಕೆಲಸ ಮಾಡಿದವರು. ಇವರ ಜೊತೆ ಇನ್ನೊಬ್ಬ ಗೆಳತಿ ಪೊನ್ನಮ್ಮ.ಹಳೇ ಮಿತ್ರರು ಹೊಸ ಜಾಗದಲ್ಲಿ.

ಅವರವರ ಸ್ಥಳಗಳಿಂದ ವಿಮಾನವೇರಿ ನ್ಯೂಯಾರ್ಕ್ ಮುಟ್ಟಿದ್ದಾಯಿತು.ನಾನು ಮತ್ತು ಸುಪ್ರೀತ, ನ್ಯೂಯಾರ್ಕ್ ನಲ್ಲಿ ಕಾರ್ ಒಂದನ್ನು ಬಾಡಿಗೆಗೆ ತಗೆದುಕೊಂಡದ್ದೆ ಒಂದು ಸಾಹಸಗಥೆ !ಅದು ದೀರ್ಘ ವಾರಾಂತ್ಯವಾದ್ದರಿಂದ ಒಂದೇ ಒಂದು ಕಾರ್ ಸಹ ಇದ್ದಿಲ್ಲ. ಆ ಜಾನ್ ಕೆನಡಿ ಎರ್‍ಪೋರ್ಟ್ ನಲ್ಲಿ ಗಣಗಣ ತಿರುಗಿದ್ದು ಪ್ರಯೋಜನವಾಗಲಿಲ್ಲ.ಕೊನೆಗೆ ನನ್ನ ಲ್ಯಾಪ್‍ಟಾಪ್ ತೆಗೆದು ಗೂಗಲ್‍ನಲ್ಲಿ ಹತ್ತಿರದ ಕಾರ್ ರೆಂಟಲ್ ಹುಡುಕಿದಾಗ ಬೆಳಗಿನ ಜಾವ ! ಅಲ್ಲಿಗೆ ಹೋಗಿ ಕಾರ್ ತೆಗೆದುಕೊಳ್ಳುವಷ್ಟರಲ್ಲಿ ಹರೋಹರ. ಇನ್ನೊಂದು ಕಡೆ ಹೋಟೆಲ್ ಗೆ ತೆರಳಿದ ನಮ್ಮ ಉಳಿದ ಮಿತ್ರರದ್ದು ಇನ್ನೊಂದು ತಾಪತ್ರಯ. ಆ ಹೋಟೆಲ್ ಬೇಗ ಮರೆಯಬೇಕೇನ್ನುವಂತಿತ್ತು.

ಕೊನೆಗೂ ಬ್ಯಾಟರಿ ಪಾರ್ಕ್ ಎನ್ನುವ ಸ್ಥಳದಲ್ಲಿ ನಾವೆಲ್ಲ ಭೇಟಿಯಾದದ್ದು ಆಯಿತು. ಬ್ಯಾಟರಿ ಪಾರ್ಕ್ ನಿಂದ ದೋಣಿಯಲ್ಲಿ ನಮ್ಮ ಪ್ರಯಾಣ. ಎರ್‍ಪೋರ್ಟ್‍ ನಲ್ಲಿ ಇರುವಂತೆ ತೀವ್ರ ಶೋಧನೆ ನಂತರ ದೋಣಿ ಹತ್ತಲು ಅವಕಾಶ. ತೀರ ಬಿಟ್ಟು ದೋಣಿ ಮುಂದೆ ಹೋಗುತ್ತಿದ್ದಂತೆ ದೊರದಲ್ಲೆಲ್ಲೋ ಆಕೃತಿಯೊಂದು ಗೋಚರಿಸತೊಡಗಿತು. ಹತ್ತಿರ ಹೋಗುತ್ತಿದ್ದಂತೆ ಆ ಪ್ರತಿಮೆ ಸ್ಪಷ್ಟವಾಗಿ ಗೋಚರಿಸತೊಡಗಿತು. ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಆಕಾಶಕ್ಕೆ ಚಾಚಿದ ಕೈಯಲ್ಲಿ ದೀವಿಗೆ,ವಿಶಿಷ್ಟವಾದ ಮುಖ,ತಲೆಯ ಮೇಲೆ ಎಲೆಗಳ ಕಿರೀಟ.ಆದುವೇ 'ಸ್ವಾತಂತ್ರ ದೇವತೆಯ ಪ್ರತಿಮೆ' ಅಥವಾ 'Statue of Liberty'.

ಆಮೇರಿಕಾದ್ದು ಅಂತಾ ಒಂದು icon ಇದ್ದರೆ, ಅದುವೇ ಲಿಬರ್ಟಿ ಪ್ರತಿಮೆ. ಲಿಬರ್ಟಿ ಪ್ರತಿಮೆ ಇರುವ ದ್ವೀಪ ಮುಟ್ಟಿ, ಪ್ರತಿಮೆಯನ್ನು ಪ್ರವೇಶಿಸುವ ಮುನ್ನ ಇನ್ನೊಂದು ಸುತ್ತಿನ ಸಮಗ್ರ ಶೋಧನೆ ಆಯಿತು. ಸ್ವಾತಂತ್ರ್ಯದ ಸಂಕೇತವಾದ ಈ ಪ್ರತಿಮೆಗೆ ಇಷ್ಟು ಭದ್ರತೆಯೇ , ಇಷ್ಟೊಂದು ಅಸ್ವಾತಂತ್ರ್ಯವೇ ಅನ್ನುವ ಪ್ರಶ್ನೆ ಮನದಲ್ಲಿ ಹೊಕ್ಕಿದೇನೋ ನಿಜ.

ಪ್ರತಿಮೆಯನ್ನೇರಿ ಅದರ ಸುತ್ತ ಸುಳಿದು, ಅಲ್ಲಿನ ಪ್ರತಿಮೆಯ ಬಗ್ಗೆ ಇರುವ ವಸ್ತು ಸಂಗ್ರಹಾಲಯದಲ್ಲಿ ಓಡಾಡಿ, ಅದರ ಬಗ್ಗೆ ಇನ್ನಷ್ಟು ತಿಳಿದುಕೊಂಡಾಗ ಆ ಲಿಬರ್ಟಿ ಪ್ರತಿಮೆಯ ಬಗ್ಗೆ ಪ್ರೀತಿ ಹೆಚ್ಚಾಗತೊಡಗಿತು.ಪ್ರಾನ್ಸ್ ಆಮೇರಿಕಾಕ್ಕೆ ಕೊಟ್ಟ ಹುಟ್ಟು ಹಬ್ಬದ ಉಡುಗೊರೆ ಅದು. ದೇಶ ದೇಶಗಳು ಕಚ್ಚಾಡುವಾಗಿನ ಈಗೀನ ದಿನಗಳಲ್ಲಿ ಒಂದು ದೇಶ ಇನ್ನೊಂದು ಹೊಸ ದೇಶಕ್ಕೆ ಇಂತಹ ಭವ್ಯ ಕಾಣಿಕೆ ಕೊಟ್ಟಿದ್ದು..
ಪ್ರತಿಮೆಯನ್ನು ಇರೋ ಎಲ್ಲ ಕೋನಗಳಿಂದ ಕ್ಯಾಮರದಲ್ಲಿ ಸೆರೆಹಿಡಿದ ಮೇಲೂ ಇನ್ನೂ ಎನೋ ಉಳಿದಿದೆ ಅನ್ನುವಂತಿತ್ತು. ಅಲ್ಲಿ ಮನಪೂರ್ತಿ ತಿರುಗಿ ವಾಪಾಸ್ ದೋಣಿ ಹತ್ತಿ ಲಿಬರ್ಟಿ ಪ್ರತಿಮೆಗೆ ನಮಸ್ಕರಿಸಿ ಮರಳಿ ಬಂದಾಯಿತು.

ಯೋಜನೆ ಪ್ರಕಾರ ನಮ್ಮ ಮುಂದಿನ ಸ್ಥಳ ನ್ಯೂಯಾರ್ಕ್ ನಿಂದ ೪೫೦ ಮೈಲಿ ದೂರದ ಊರು ಭಾಫೆಲೋ. ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋದರೆ ೮-೯ ಗಂಟೆ ಪ್ರಯಾಣ.ಸರಿ, ಶುರುವಾಯಿತು ನಮ್ಮ ಡ್ರೈವಿಂಗ್. ಸುಪ್ರೀತ ನೂಯಾರ್ಕ್ ಬಿಡೋ ತನಕ ಓಡಿಸಿದ, ನಂತರ ನನ್ನ ಸರದಿ.

ಇಲ್ಲಿನ ಫ್ರೀ ವೇ ಗಳ ಬಗ್ಗೆ ಒಂದು ಮಾತು. ಇವು ಎಷ್ಟೊಂದು ಯೋಜಿತವಾಗಿ ರಚಿಸಲ್ಪಟ್ಟಿವೆ. ಒಂದೊಂದು ಫ್ರೀ ವೇ ನಲ್ಲೂ ೩ ಲೇನ್‍ಗಳು. ಎಲ್ಲಾ ಎಕ್ಸಿಟ್ ಗಳೂ ಬಲಬದಿಯಲ್ಲಿಯೇ ಇರುತ್ತವೆ.

ಮೊದಮೊದಲು ೬೦-೭೦ ಮೈಲಿ ವೇಗದಲ್ಲಿ ಓಡಿಸಿದ್ದಾಯಿತು. ನಂತರ ಅಲ್ಲಿ ಸಿಕ್ಕವು ನೋಡಿ ೪-೫ ಕಾರ್ ‍ಗಳು. ನಂತರ ಶುರುವಾಯಿತು ಅವರ ಜೊತೆ ಒಂದು ವೇಗದ ಹಬ್ಬ.ಕೊನೆ ಕೊನೆಗೆ ನಾನು ೯೦-೯೫ ಮೈಲಿ ಮುಟ್ಟಿದಾಯಿತು. ವೇಗ ಯಾವಾಗಲೂ ಆಪಾಯಕಾರಿ ಎಂದು ತಿಳಿದೇ ಅವಾಗವಾಗ ವೇಗ ತಗ್ಗಿಸಿ ೭೦-೮೦ ಮೈಲಿಯಲ್ಲಿ ಓಡಿಸಿದ್ದಾಯಿತು ! ಒಂದು ನಾಲ್ಕು ಗಂಟೆಗಳ ನನ್ನ ಡ್ರೈವಿಂಗ್ ಬಳಿಕ ಸುಪ್ರೀತನ ಸರದಿ. ಸುಪ್ರೀತ ಇನ್ನೊಬ್ಬ ವೇಗದ ದೊರೆ !

ಈ ಮಧ್ಯೆ ಕಾರಿನಲ್ಲಿದ್ದ ನಮ್ಮ ಗೆಳತಿಯರು ಐ-ಪೋಡ್ ನಲ್ಲಿ request show ನಡೆಸುತ್ತಿದ್ದರು. ಆದೇಕೋ ದೀಪ್ತೀ ಮತ್ತು ಅರ್ಚನಾಗೆ ಅಮೃತಧಾರೆಯ 'ನೀ ಅಮೃತಧಾರೆ ಕೋಟಿ ಜನ್ಮ ಜತೆಗಾರ' ಬಹಳ ಇಷ್ಟವಾದಂತಿತ್ತು. ಬಹುತೇಕ ಕನ್ನಡ ಹಾಡುಗಳ ಮಧ್ಯೆ ಆಗಾಗ ಎಲ್ಲಾ ಭಾಷೆಯ ಹಾಡುಗಳು ಬಂದು ಹೋದವು.

ಕೊನೆಗೆ ಭಾಫೆಲೋ ಮುಟ್ಟಿದಾಗ ರಾತ್ರಿ ೧:೩೦. ಭಾಫೆಲೋ ಬೀದಿಯಲ್ಲಿ ಶನಿವಾರ ರಾತ್ರಿಯ ಪಾರ್ಟಿಗಳು ಜೋರಾಗಿ ನಡೆಯುತ್ತಿದ್ದವು. ಮನಸೇನೋ ಹೋಗೋಣ ಅಂತಿದ್ದರು, ದೇಹ ವಿಶ್ರಾಂತಿ ಬೇಡುತಿತ್ತು. ಕೊನೆಗೂ ದೇಹಕ್ಕೆ ಜಯವಾಗಿ ಹಾಸಿಗೆಗೆ ಬಿದ್ದದ್ದು ಒಂದೇ ನೆನಪು !

ಅಂದಾಗೆ ನಾವು ಭಾಫೆಲೋಗೆ ಯಾಕೆ ಹೋದೆವು ಅನ್ನುವ ಕುತೂಹಲವೇ ? ಅದು ನಯಾಗರ ಅನ್ನುವ ಆ ಮಹೋನ್ನತ ಜಲಪಾತಕ್ಕೆ ಹತ್ತಿರವಿರುವ ಊರು. ನಯಾಗರ ನೋಡಲು ಹೋದವರು ಈ ಊರಲ್ಲಿ ಉಳಿದುಕೊಳ್ಳೋದು.

ಮುಂದಿನ ಭಾಗದಲ್ಲಿ ......ನಯಾಗರದ ಜಲಸಿರಿ